ಶನಿವಾರ, ಏಪ್ರಿಲ್ 28, 2012

ಲಿಂಬೂ ಪೆಪ್ಪರ್ ಮೆಂಟ್


ಲಿಂಬೂ ಹುಳಿ ಪೆಪ್ಪರಮೆಂಟ್ ಮತ್ತು ಗಾಡ್ಲಿ

ಇದೆಲ್ಲಾ ಶುರುವಾಗಿದ್ದು ಕನ್ನಡ ಪ್ರಭದ ರಾಘವೇಂದ್ರ ಭಟ್ಟನಿಂದ. ಅವತ್ತೊಂದು ದಿನ ಫೇಸ್ ಬುಕ್ ನೋಡ್ತಾ ಇದ್ದಾಗ ಒಂದು ಫೋಟೋ ಹಾಕಿದ್ದ. `ನೆನಪಿದೆಯಾ ಲಿಂಬೂ ಹುಳಿ ಪೆಪ್ಪರ್ ಮೆಂಟ್’ ಅಂತ.
ಯಾಕೋ ಏನೋ, ನೋಡ್ತಾ ಇದ್ದ ಹಾಗೆ ಬಾಯಿಂದ ನೀರು ಬರೋಕೆ ಶುರುವಾಯ್ತು. ತಕ್ಷಣ ವಾಪಾಸ್ ಬರೆದೆ: `ಎಲ್ಲಿಂದ ಸಿಕ್ತು ಮಾರಾಯ ನಿಂಗೆ ಈ ಫೋಟೋ? ಎಲ್ಲಿ ಸಿಕ್ತದೆ ಇದು? ತುಂಬಾ ದಿನ ಆಯ್ತು ತಿಂದು. ಸಿಕ್ಕಿದ್ರೆ ನಂಗೂ ಬೇಕು,’ ಅಂತ.
ಮಾರನೇ ದಿನ ಸಿಕ್ದಾಗ ಹೇಳ್ದ: `ಸರ್, ಕುಮಟಾದಲ್ಲಿ ಸಿಗುತ್ತೆ. ಮುಂದಿನ ಸಲ ಊರಿಗೆ ಹೋದಾಗ ತಂದು ಕೊಡ್ತೀನಿ,’ ಅಂತ. ಸರಿ, ಅಂತ ಹೇಳಿ, ಅದನ್ನ ಅಲ್ಲಿಗೇ ಮರೆತು ಬಿಟ್ಟಿದ್ದೆ.
ಒಂದೆರೆಡು ವಾರಗಳಾಗಿರಬಹುದು, ಒಂದಿನ ಸಾಯಂಕಾಲ ಅಂಬಿಕ ಹೇಳಿದ್ಲು: `ರೀ, ಬೆಳಗ್ಗೆ ಜಾಗಿಂಗಿಂದ ಬರ್ತಾ ಬ್ರೆಡ್ ಮತ್ತೆ ಮೊಟ್ಟೆ ತಗೊಂಡು ಬನ್ರಿ. ಪುಟ್ಟು ಬೆಳಗ್ಗೆ ಬೇಗ ಸಮ್ಮರ್ ಕ್ಯಾಂಪ್ ಗೆ ಹೊರಡಬೇಕು,’ ಅಂತ.
`ಮತ್ತದೇ ಬ್ರೆಡ್’ ಅಂತ ಬೈಕೊಂಡೆ, ಇನ್ನೇನೂ ದಾರಿ ಇರ್ಲಿಲ್ಲ. ಬೆಳಗ್ಗೆ ಜಾಗಿಂಗ್ ಮುಗಿಸಿ ಬರುವಾಗ, ಮನೆಯ ಹತ್ತಿರ ಸೂಪರ್ ಮಾರ್ಕೆಟ್ ಗೆ ನುಗ್ಗಿದೆ. ಅದು ಯಾರೋ ಕಾಸರಗೋಡು ಕಡೆಯ ಬ್ಯಾರಿಯದು ಅಂತ ಮೊದಲಿಂದಲೂ ಗೊತ್ತಾಗಿತ್ತು. ಅರ್ಧ ರಾಗವಾದ ಕನ್ನಡ ಮತ್ತು ಮಲೆಯಾಳಿ ಭಾಷೆಯಲ್ಲಿ ಮಾತಾಡುವ ಅವರನ್ನು ಸುಲಭವಾಗಿ ಗುರ್ತಿಸಬಹುದು. ಬ್ರೆಡ್ ಏನೋ ಸಿಕ್ತು, ಮೊಟ್ಟೆ ಎಲ್ಲಿ ಅಂತ ಹುಡುಕುವಾಗ, ಅದು ಯಾವಾಗಲೂ ಇರೋ ಜಾಗದಲ್ಲಿ ಇರ್ಲಿಲ್ಲ. ಕೆಳಗೆಲ್ಲಾದರೂ ಇಟ್ಟಿದ್ದಾರಾ? ಅಂತ ಬಗ್ಗಿ ನೋಡಿದರೆ, ಅಲ್ಲಿ ನಗ್ತಿತ್ತು: `ಅದೇ ಲಿಂಬೂ ಹುಳಿ ಪೆಪ್ಪರ್  ಮೆಂಟ್’.
ಒಂದೆರೆಡು ನಿಮಿಷ ಹ್ಯಾಗೆ ರಿಯಾಕ್ಟ್ ಮಾಡ್ಬೇಕೂ ಅಂತ ಗೊತ್ತಾಗಲಿಲ್ಲ. ನಾವು ಚಿಕ್ಕಂದಿನಲ್ಲಿದ್ದಾಗ, ಲಿಂಬೂ ಮತ್ತೆ ಕಿತ್ತಳೆ ಅಂತ ಎರಡು ರುಚಿಯಲ್ಲಿ ಬರ್ತಿದ್ವು. ಆಮೇಲೆ ಬಣ್ಣ ಬಣ್ಣದ ಕ್ಯಾಂಡಿಗಳು ಸಹ ಇದ್ದವು. ಇಲ್ಲಿ ನೋಡಿದರೆ, ಅದೇ ಥರದಲ್ಲಿ ತೆಂಗಿನಕಾಯಿ, ರಾಸ್ಬೆರಿ ಸಹ ಇದ್ವು. ಒಟ್ಟು, ಏಳೆಂಟು ಥರದ ಲಿಂಬೂಗಳನ್ನು ಬೇರೆ ಬೇರೆ ಪ್ಯಾಕೆಟ್ ಗಳಲ್ಲಿ ಇಟ್ಟಿದ್ರು.
ಒಂದೆರೆಡು ಪ್ಯಾಕೆಟ್ ಗಳನ್ನು ಕೈಗೆತ್ತಿಕೊಂಡು ಹಾಗೇ ನೋಡಿದೆ. ಅದೇ ನಿಂಬೂ ಹುಳಿ. ಸ್ವಲ್ಪ ಗಾತ್ರದಲ್ಲಿ ವ್ಯತ್ಯಾಸ ಇದೆ. ಜೊತೆಯಲ್ಲಿ ಸ್ವಲ್ಪ ಜಾಸ್ತಿ ವೆರೈಟಿ ಇದೆ. ತಮಾಶೆ ಎಂದ್ರೆ, ಇದಕ್ಕೂ ಒಂದು ಬ್ರಾಂಡ್ ಇತ್ತು: `ಅರವಿಂದ್’ ಅಂತ. ಏನು ಮಾಡ್ಬೇಕು ಅಂತ ಗೊತ್ತಾಗದೆ, ವಾಪಾಸ್ ಇಟ್ಟೆ. ಮೊಟ್ಟೆ ಎಲ್ಲಿ? ಅಂತ ಕೇಳಿದಾಗ, ಅಂಗಡಿಯವನು `ಗೋಡೋನ್ ನಲ್ಲಿದೆ ಸರ್, ಈಗ ತಂದ್ಕೊಡ್ತೀನಿ,’ ಅಂತ ಒಳಗೆ ಹೋದ. ಅವನು ಒಳಗೆ ಹೋದ ತಕ್ಷಣ ಮತ್ತೆ ಆ ಪ್ಯಾಕೆಟ್ ಗಳನ್ನು ತಗೊಂಡು ನೋಡ್ತಾ ನಿಂತೆ. ಅಂಗಡಿಯವನು ಮೊಟ್ಟೆ ತಗೊಂಡು ಬಂದ ತಕ್ಷಣ, ಅದನ್ನು ವಾಪಾಸ್ ಇಟ್ಟೆ. ಬಿಲ್ ಮಾಡಿಸುವಾಗ ಏನನ್ನಿಸಿತೋ ಏನೋ, ವಾಪಾಸ್ ಹೋದವನೇ, ಮೂರು ಪ್ಯಾಕೆಟ್ ತಂದು, ಅದರದ್ದೂ ಬಿಲ್ ಮಾಡಿಸಿದೆ.
ದಾರಿಯಲ್ಲಿ ವಾಪಾಸ್ ಬರುವಾಗ ತಲೆಯಲ್ಲಿದ್ದಿದ್ದು ಒಂದೇ. ರಾಘುವನ್ನು ಕರೆದು, `ತಗೋ, ನೀನ್ ತಂದ್ಕೋಡೋಕ್ಕಿಂತ ಮುಂಚೆ ನಾನೇ ಹುಡುಕಿದ್ದೀನಿ,’ ಅಂತ ಹೇಳಿ ಒಂದು ಪ್ಯಾಕೆಟ್ ಕೊಡೋದು. ಹಾಗೇನೇ, ನನ್ನ ಮಗಳು ಸೃಷ್ಟಿಗೆ ಒಂದು ಕೊಟ್ಟರೆ ಏನಾಗಬಹುದು? ಅಂತ ಅನ್ನಿಸ್ತು. ಯದ್ವಾ ತದ್ವಾ ಚಾಕಲೇಟ್ ತಿನ್ನೋ ಈಗಿನ ಮಕ್ಕಳಿಗೆ ಲಿಂಬೂ ಪೆಪ್ಪರ್ ಮೆಂಟ್ ರುಚಿ ತಾಗುತ್ತಾ? ಅಂತಾನೂ ಅನ್ನಿಸ್ತು.
ಮನೆಗೆ ತಗೊಂಡು ಹೋಗಿ ಇಟ್ಟತಕ್ಷಣ ಅಂಬಿಕ ಕೇಳಿದ್ಲು: `ಇದೇನ್ರಿ? ಎಲ್ಲಿಂದ ಹಿಡ್ಕೊಂಡು ಬಂದ್ರಿ? ನಾವು ಚಿಕ್ಕಂದಿನಲ್ಲಿ ತಿಂತಿದ್ವಿ,’ ಅಂತ. ನೆಡೆದಿದ್ದನೆಲ್ಲ ಹೇಳಿ, ಪುಟ್ಟುಗೆ ಒಂದು ಕೊಟ್ಟು ನೋಡ್ಬೇಕು ಅಂದೆ.
`ಮಗಳೇ ನೋಡು, ನಾವೆಲ್ಲ ನಿನ್ನ ಥರ ಚಿಕ್ಕವರಿದ್ದಾಗ ಇದ್ನ ತಿಂತಿದ್ವಿ. ನೋಡು ನಿಂಗೆ ಇಷ್ಟ ಆಗುತ್ತಾ ಅಂತ,’ ಹೇಳಿ ಒಂದನ್ನು ಕೊಟ್ಟೆ. ಅದನ್ನ ಬಾಯಲ್ಲಿಟ್ಟುಕೊಂಡು ಸ್ವಲ್ಪ ಹೊತ್ತು ಚೀಪಿದವಳೇ, `ಅಪ್ಪ, ನಂಗೆ ಇನ್ನೂ ಬೇಕು’ ಅಂದಳು. `ಹ್ಯಾಗಿದೆ ಮಗಳೇ?’ ಅಂತ ಕೇಳ್ದಾಗ, `ಅಪ್ಪ ಚಾಕಲೇಟ್ ಗಿಂತ ಇದೇ ಪರವಾಗಿಲ್ಲ. ಬೇರೆ ಕ್ಯಾಂಡಿಗಳಿಗಿಂತ ಚೆನ್ನಾಗಿದೆ,’ ಅಂದ್ಲು. ಚಾಕಲೇಟ್ ಗಿಂತ ಚೆನ್ನಾಗಿದೆ ಅಂತ ನನ್ನ ಮಗಳಿಗೆ ಅನ್ನಿಸಿದ್ದು ಉತ್ಪ್ರೇಕ್ಷೆ ಅನ್ನಿಸಿದ್ರೂ, ಇಷ್ಟರಮಟ್ಟಿಗೆ ಇಷ್ಟ ಆಯ್ತಲ್ಲ, ಪರವಾಗಿಲ್ಲ, ಅನ್ನಿಸ್ತು.
`ಅಪ್ಪ, ಚಿಕ್ಕಂದಿನಲ್ಲಿ ನೀನು ಕೂಡ ಇದನ್ನ ತುಂಬಾ ತಿಂತಿದ್ದಾ?’ ಅಂತ ಮಗಳು ಕೇಳಿದಳು.
`ಹೂಂ ಮಗಳೇ. ಗೋಲಿ ಆಡುವಾಗ, ಜೇಬಲ್ಲಿ ಇವನ್ನ ಕೂಡ ಗೋಲಿ ಜೊತೆ ಇಟ್ಕೊಂಡಿರ್ತಿದ್ವಿ. ಯಾರಿಗೂ ಗೊತ್ತಾಗದ ಹಾಗೆ, ಒಂದೊಂದೇ ತೆಗೆದು ಬಾಯಿಗೆ ಹಾಕೊಳ್ತಿದ್ವಿ,’ ಅಂದೆ.
`ಅಯ್ಯೋ..  ಗೋಲಿ ಆಡುವಾಗ ಗೋಲಿ ಮತ್ತೆ ಕೈ ಮಣ್ಣಾಗಿರ್ತಿರ್ಲಿಲ್ವಾ?’ ಅಂದಳು ಸೃಷ್ಟಿ.
`ಆಗಿರ್ತಿತ್ತು. ಏನು ಮಾಡೋದು? ಆಗೆಲ್ಲ ಅಷ್ಟು ತಲೆ ಕೆಡಿಸಿಕೊಳ್ತಿರಲಿಲ್ಲ,’ ಅಂದೆ.
`ಮತ್ತೆ ವೆಂಕಟೇಶ್ ದೊಡ್ಡಪ್ಪ ಬೈತಿರಲಿಲ್ವ?’ ಅಂದಳು.
`ಅವನೂ ಚಿಕ್ಕವನಾಗಿದ್ದನಲ್ಲ. ಅವನೂ ಹಾಗೇ ಮಾಡ್ತಿದ್ದ,’ ಅಂದೆ.
`ವೆಂಕಟೇಶ್ ದೊಡ್ಡಪ್ಪ ತುಂಬಾ ಕ್ಲೀನ್ ಅಲ್ವ? ಮತ್ತೆ ಅವರೂ ಹಾಗೇ ಮಾಡ್ತಿದ್ರಾ? ಅವರು ಹಾಗೆ ಮಾಡೋಕೆ ಸಾಧ್ಯನೇ ಇಲ್ಲ,’ ಅಂತ ವಾದಕ್ಕಿಳಿದಳು. ಅವಳಿಗೆ ಹ್ಯಾಗೆ ವಿವರಿಸಿ ಹೇಳ್ಬೇಕು ಅಂತ ನಂಗೆ ಗೊತ್ತಾಗಲಿಲ್ಲ.
ಅಷ್ಟರಲ್ಲಿ ಅದಕ್ಕೆ ಅಂಬಿಕ ಕೂಡ ನಿಂಬೂ ಪೆಪ್ಪರ್ ಮಿಂಟ್ ಗೆ ಪಾಲುದಾರಳಾದಳು. `ವಿನು, ನಾನೊಂದ್ನಾಲ್ಕು ತಗೋತೀನಿ. ನಮ್ಮ ಮಮ್ಮಿಗೂ ಇಂಥದೆಲ್ಲ ಇಷ್ಟ. ಅವರಿಗೂ ತಗೊಂಡು ಹೋಗ್ತೀನಿ,’ ಅಂತ ಹೇಳಿದ ತಕ್ಷಣ, ಒಂದು ಪ್ಯಾಕೆಟ್ ಅವಳ ಕೈಗೆ ಕೊಟ್ಟೆ. ಅಷ್ಟು ಬೇಗ ಒಂದು ಪ್ಯಾಕೆಟ್ ಖಾಲಿಯಾಗಿದ್ದು ನೋಡಿ ಸ್ವಲ್ಪ ನಗು ಬಂತು. ನೋಡೋಣ ಅನ್ಕೊಂಡು ಕ್ಲಬ್ ಕಡೆ ದಾರಿ ಹಿಡಿದೆ.
ಕ್ಲಬ್ ತಲುಪೋಕೆ ಮುಂಚೆನೇ ರಾಘುಗೆ ಫೋನ್ ಮಾಡಿ ರಿಪೋರ್ಟರ್ಸ್ ಗಿಲ್ಡ್ ಹತ್ತಿರ ಬರೋಕೆ ಹೇಳ್ದೆ.  ಸ್ವಲ್ಪ ಹೊತ್ತಿನ ನಂತರ ಅವನು ಬಂದ ತಕ್ಷಣ,  ಪ್ಯಾಕೆಟ್ ತೆಗೆದು ಎರಡು ಲಿಂಬೂ ಪೆಪ್ಪರ್ ಮೆಂಟ್ ಅವನಿಗೆ ಕೊಟ್ಟೆ. `ಎಲ್ಲಿ ಸಿಕ್ತು ಸರ್ ಇದೂ?’ ಅಂತ ಚಪ್ಪರಿಸೋಕೆ ಶುರು ಮಾಡ್ದ. `ನೋಡು, ನೀನು ಬರೀ ಫೋಟೋ ಹಾಕ್ದೆ. ನಾನು ಹುಡುಕ್ಕೊಂಡೇ ಬಂದೆ,’ ಅಂತ ನಗುತ್ತಾ ಒಂದನ್ನು ಬಾಯಿಗೆ ಹಾಕ್ಕೊಂಡೆ. ಹಾಗೆನೇ, ಅಲ್ಲಿ ಬರುತ್ತಿದ್ದ ಕೆಲವು ರಿಪೋರ್ಟರ್ ಗಳಿಗೆ ಎರೆಡೆರೆಡು ಕೊಡೋಕೆ ಶುರು ಮಾಡ್ದೆ. ನಾನು ಕೊಟ್ಟ ತಕ್ಷಣ ಅದಕ್ಕೆ ಹ್ಯಾಗೆ ರಿಯಾಕ್ಟ್ ಮಾಡ್ಬೇಕು ಅಂತ ಯಾರಿಗೂ ಸರಿಯಾಗಿ ಗೊತ್ತಾಗಲಿಲ್ಲ. ಕೆಲವರು ಸುಮ್ಮನೆ ಥ್ಯಾಂಕ್ಸ್ ಹೇಳಿದರೆ, ಇನ್ನು ಕೆಲವರು `ಏನು ವಿಶೇಷ?’ ಅಂತ ಕೇಳಿದ್ರು. `ಏನಿಲ್ಲ, ಇದನ್ನ ಚಿಕ್ಕಂದಿನಲ್ಲಿ ತಿಂದಿದ್ರಾ?’ ಅಂತ ಕೇಳಿದ್ರೆ, `ಅದಕ್ಕೆ ಕೇಳ್ದೆ, ಏನು ವಿಶೇಷ ಅಂತ. ಇದು ಎಲ್ಲಿ ಸಿಗುತ್ತೆ?’ ಅಂತ ಕೇಳ್ತಿದ್ರು.
ಅಷ್ಟರಲ್ಲಿ ಬಂದವನೇ ಅನಂತರಾಮ ಸಂಕಲಾಪುರ. `ಎಲ್ಲಿ ಸಿಕ್ತೋ ಇದು? ಚಿಕ್ಕಂದಿನಲ್ಲಿ ಎಷ್ಟೊಂದು ತಿಂತಿದ್ವಿ ಗೊತ್ತಾ? ನಮ್ಮ ಹಳ್ಳಿಯಿಂದ ಅಜ್ಜಂಪುರಕ್ಕೆ ಬಸ್ಸಿನಲ್ಲಿ ಆಗ 35 ಪೈಸೆ ಬಸ್ ಚಾರ್ಜ್. ಈ ಲಿಂಬೂ ಪೆಪ್ಪರ್ ಮೆಂಟ್, ಮಂಡಕ್ಕಿ ಮತ್ತೆ ಬೋಟಿ ತಿನ್ನೋಕೆ ಅಂತ ಒಂದು ದಾರಿ ನೆಡ್ಕೊಂಡು ಬರ್ತಿದ್ವಿ. ಕೈನ ಬೆರಳುಗಳಿಗೆಲ್ಲ ಬೋಟಿ ಸಿಗಿಸ್ಕೊಂಡು, ಜೇಬಲ್ಲಿ ಮಂಡಕ್ಕಿ ಮತ್ತೆ ಲಿಂಬೂ ಪೆಪ್ಪರ್ ಮೆಂಟ್ ತುಂಬಿಕೊಂಡು, ನೆಡ್ಕೊಂಡು ಬರೋದು ಅಂದ್ರೆ ಎಷ್ಟು ಖುಶಿಯಾಗ್ತಿತ್ತು ಗೊತ್ತಾ?’ ಅಂತ ಗತಕಾಲಕ್ಕೆ ಜಾರಿದ.
ಅಷ್ಟರಲ್ಲಿ, ಕ್ಲಬ್ ಸೆಕ್ರಟರಿ ಸದಾಶಿವ ಶೆಣೈ ಬಂದರು. ಅವರಿಗೂ ಎರಡು ಕೊಟ್ಟ ತಕ್ಷಣ, `ಎಲ್ಲಿ ಸಿಕ್ತು ವಿನಯ್ ಇದು? ಎಷ್ಟು ವರ್ಷವಾಗಿತ್ತು ನೋಡಿ? ನಾವು ಚಿಕ್ಕವರಿದ್ದಾಗ, ಒಂದು ಪೈಸೆಗೆ ಎರಡು ಸಿಕ್ತಿತ್ತು,’ ಅಂದರು. ನಾನು ಚಿಕ್ಕವನಿದ್ದಾಗ ಇದು ಪೈಸೆಗೊಂದಿತ್ತೋ ಅಥವಾ ಐದು ಪೈಸೆಗೆ ಮೂರಿತ್ತೋ ಅಂತ ಸರಿಯಾಗಿ ನೆನಪಾಗಲ್ಲ.
ಅದೇ ದಾರಿಯಲ್ಲಿ ಬಂದ ಉದಯವಾಣಿಯ ಗಿರಿ ಸಹ ಪೆಪ್ಪರ್ ಮೆಂಟ್ ಚಪ್ಪರಿಸುತ್ತಾ, `ಎಲ್ಲಿಂದ ತಂದ್ರಿ ಸರ್? ನಂಗಿನ್ನೊಂದೆರಡು ಕೊಡಿ,’ ಅಂದ. ಅಷ್ಟರಲ್ಲಿ ಅಲ್ಲಿಗೆ ಬಂದ ರತ್ನಾಕರ ಜೋಶಿ, `ಒಳ್ಳೆ ಕೆಲ್ಸ ಮಾಡಿದ್ರಿ ವಿನಯ್. ಎಷ್ಟು ವರ್ಷ ಆಯ್ತ್ರೀ ತಿಂದು. ಎಲ್ಲಿಂದ ತಂದ್ರಿ ಇದ್ನಾ?’ ಅಂದರು.
ಯಾಕೋ ಲಿಂಬೂವಿಗೆ ಡಿಮ್ಯಾಂಡ್ ಇನ್ನೂ ಇದೆ ಅಂತ ಅನ್ನಿಸೋಕ್ಕೆ ಶುರುವಾಯ್ತು. ರಾಘುನೂ ಇನ್ನೂ ಬೇಕು ಅನ್ನೋಕೆ ಶುರು ಮಾಡ್ದ. `ಇದೇ ಕೊನೆ ಕಣ್ರೋ. ಇನ್ನೂ ಬೇಕಾದ್ರೆ ನಾಳೆ ತಂದ್ಕೊಡ್ತೀನಿ. ಈಗ ಸಿಕ್ಕಿದವರಿಗೆಲ್ಲಾ ಕೊಡ್ತೀನಿ. ಎಷ್ಟು ಜನಕ್ಕೆ ಅವರ ಬಾಲ್ಯ ನೆನಪಾಗುತ್ತೆ ನೋಡೋಣ,’ ಅಂದೆ.
ಏನನ್ನಿಸ್ತೋ ಏನೊ, ಸೀದ ಕ್ಲಬ್ ನ ಒಳಗೆ ಕಾರ್ಡ್ಸ್ ರೂಮಿಗೆ ನುಗ್ಗಿದೆ. ಅಲ್ಲಿ ಪೊನ್ನಪ್ಪ, ವಿಜಯೇಂದ್ರ ಮತ್ತಿನ್ನಿಬ್ಬರು ಬಿಟ್ಟರೆ ಯಾರೂ ಪರಿಚಯವಿರಲಿಲ್ಲ. ಸರಿ, ನಂಗೇನಾಗ್ಬೇಕು ಅಂತ ಎಲ್ಲರಿಗೂ ಎರೆಡೆರೆಡು ಹಂಚೋಕೆ ಶುರು ಮಾಡ್ದೆ. ಮೊದಲು ಎಲ್ಲಾ ಸುಮ್ಮನೆ ಮುಖ ನೋಡ್ತಾ ಇಸ್ಕೊಂಡ್ರು. ವಿಜಯೇಂದ್ರ ಮಾತ್ರ ಕಾರ್ಡ್ಸ್ ಎಸೆದು ಎದ್ದು ನಿಂತರು. ಎಲ್ಲೋ ಕಳೆದು ಹೋದ ವಸ್ತು ಸಿಕ್ಕಿದಂತೆ ಸಂಭ್ರಮ ಪಟ್ಟರು. `ಎಲ್ಲಿಂದ ತಂದೋ ಇದನ್ನ? ಎಷ್ಟು ವರ್ಷ ಆಗಿತ್ತು ಇದನ್ನ ನೋಡಿ. ಚಿಕ್ಕಂದಿನ ಎಲ್ಲಾ ದಿನಗಳೂ ನೆನಪು ಬರುತ್ತೆ ಇದನ್ನ ನೋಡಿದ್ರೆ,’ ಅಂತ ಚಪ್ಪರಿಸೋಕೆ ಶುರು ಮಾಡಿದ್ರು. ಅವರ ಸಂಭ್ರಮ ನೋಡಿ ಕೈಲಿದ್ದ ಅರ್ಧ ಪ್ಯಾಕೆಟ್ ವಿಜಯೇಂದ್ರನ ಕೈಗೆ ತುರುಕಿ `ಇಟ್ಕೊಳಿ ಇದನ್ನ,’ ಅಂದೆ. ಆಗ ಒಬ್ಬೊಬ್ಬರೇ ಲಿಂಬೂ ಪೆಪ್ಪರ್ ಮೆಂಟಿನ ನೆನಪುಗಳ ಮೂಲಕ ತಮ್ಮ ಬಾಲ್ಯದ ಕಥೆಗಳನ್ನು ಹೇಳೋಕೆ ಶುರು ಮಾಡಿದ್ರು. ಹೆಚ್ಚಿನವರೆಲ್ಲಾ ನನಗಿಂತ ಇಪ್ಪತ್ತು-ಇಪ್ಪತೈದು ವರ್ಷ ದೊಡ್ಡವರಿರಬಹುದು.
ವಿಜಯೇಂದ್ರನಿಗೂ ಸೇರಿ, ಅಲ್ಲಿ ಸಕ್ಕರೆ ಕಾಯಿಲೆ ಇದ್ದವರು ಸುಮಾರು ಜನ ಇದ್ದರು. ಅದರ ಬಗ್ಗೆ ಯಾರೂ ತಲೆ ಕಡಿಸಿಕೊಂಡಂತೆ ಕಾಣಲಿಲ್ಲ. ನಂಗೇನೋ ಇದು ಬಹಳ ಮಜವಾಗಿದೆ ಅನ್ನಿಸ್ತು.
ಇದ್ದ ಕೊನೆಯ ಪ್ಯಾಕೆಟನ್ನು ಜೇಬಿಗೆ ಹಾಕಿಕೊಂಡು ವಿಧಾನಸೌಧಕ್ಕೆ ನೆಡೆದೆ. ಅಲ್ಲಿ ಕಮಿಟಿ ರೂಮಿನ ಹತ್ತಿರ ಯಾವುದೋ ಮೀಟಿಂಗ್ ನೆಡೆಯುತ್ತಿತ್ತು. ಅಲ್ಲೆ ಹೊರಗಡೆ ಕಾಯ್ತಾ, ಲಕ್ಷ್ಮಣ್ ಹೂಗಾರ್ ಜೊತೆ ಮಾತಾಡ್ತಾ ಇದ್ದೆ. ಎಲ್ಲಿಂದಲೋ ಬಂದ ಕಾರಟಗಿ, ಜೇಬಿನಿಂದ ಲವಂಗ ತೆಗೆದು ಹೂಗಾರ್ ಗೆ ಕೊಡಲು ಹೊರಟ. ತಕ್ಷಣವೇ ನಾನು ಜೇಬಿನಿಂದ ಲಿಂಬೂ ಪೆಪ್ಪರ್ ಮೆಂಟ್ ತೆಗೆದು ಹೂಗಾರ್ ಗೆ ಕೊಟ್ಟೆ. `ಎಲ್ಲಿಂದ ತಂದ್ರಿ ನಾಯಕರೆ? ಎಲ್ಲಾರೂ ಚಿಕ್ಕಂದಿನಲ್ಲಿ ಇದ್ನ ತಿಂದಿರ್ತಾರೆ. ಎಷ್ಟು ವರ್ಷ ಆಯ್ತು ಗೊತ್ತಾ ನೋಡಿ,’ ಅಂದರು. ತಕ್ಷಣವೇ ನಾನು ಸುತ್ತ ಇದ್ದ ಎಲ್ಲಾ ರಿಪೋರ್ಟರ್ ಗಳಿಗೆ ಹಂಚೋಕೆ ಶುರು ಮಾಡ್ದೆ. ಯಾಕೋ ತಿರುಗಿ ನೋಡಿದರೆ ಸುಮಾರು ಕೈಗಳು ಮುಂದೆ ಬಂದಿದ್ದು ಕಾಣ್ತು. ಅಲ್ಲಿದ್ದ ಪೋಲಿಸರು, ಮಂತ್ರಿಗಳ ಸಹಾಯಕರು, ಎಲ್ಲರೂ ಕೈ ಚಾಚಿದ್ದರು. ಎಲ್ಲರೂ ಒಂದೇ ಪ್ರಶ್ನೆ ಕೇಳ್ತಿದ್ರು: `ಎಲ್ಲಿ ಸಿಕ್ತು ಸರ್ ಇದು?’ ಅಂತ. ಎರಡೇ ನಿಮಿಷದಲ್ಲಿ ಇಡೀ ಪ್ಯಾಕೆಟ್ ಖಾಲಿಯಾಯ್ತು. ಆಗ ಬಂದ ಈ ಟಿವಿ ನಾಣಯ್ಯ. `ನಂಗೆಲ್ಲಿ ವಿನಯ್?’ ಅಂದಾಗ `ನಾಳೆ ಒಂದಿಡೀ ಪ್ಯಾಕೆಟ್ ನಿಂಗೆ ಕೊಡ್ತೀನಿ’ ಅಂದೆ. ಅಲ್ಲೆ ಪಕ್ಕದಲ್ಲಿದ್ದ ಸಮಯ ಟಿವಿಯ ಸೌಮ್ಯ ರಾಣಿ, `ಸರ್ ನಂಗೂ ಒಂದು ಪ್ಯಾಕೆಟ್ ಬೇಕು,’ ಅಂದಳು. `ಸರಿಯಮ್ಮ, ತಂದ್ಕೊಡ್ತೀನಿ,’ ಅಂದ.
ಎಲ್ಲಾ ಕಥೆಗಳನ್ನು ನೋಡಿದ ಮೇಲೆ ನನಗೆನಿಸಿದ್ದು ಅಂದ್ರೆ, ಈ ಲಿಂಬೂ ಪೆಪ್ಪರ್ ಮೆಂಟ್ ಅನ್ನೋದು ಇತ್ತೀಚಿನವರೆಗೂ ಎಲ್ಲಾ ಮಕ್ಕಳ ಫೇವರೆಟ್ ಕ್ಯಾಂಡಿಯಾಗಿತ್ತು. ಯಾಕೆಂದ್ರೆ, ನಮ್ಮ ಆಫೀಸಿನಲ್ಲಿ ಅಲೀನಾಳಿಗೆ ಕೊಟ್ಟಾಗಲೂ, ಅವಳು ಚಿಕ್ಕಂದಿನಲ್ಲಿ ತಿನ್ನುತ್ತಿದ್ದಿದಾಗಿ ಹೇಳಿದಳು. ಆದ್ರೆ ಇದು ಎಲ್ಲಿ ನಾಪತ್ತೆಯಾಗಿತ್ತು ಇಷ್ಟು ದಿನ ಅಂತ ಗೊತ್ತಾಗಲಿಲ್ಲ.
ಜೋಶಿಯಂತೂ ಒಂದು ಪ್ಯಾಕೆಟ್ ತೆಗೆದುಕೊಂಡು ರಿಪೋರ್ಟರ್ಸ್ ಗಿಲ್ಡ್ ನಲ್ಲಿ ಇಟ್ಟುಕೊಂಡರು. ಕಸ್ತೂರಿ ಟಿವಿಯ ಬದ್ರುದ್ದೀನ್ ಒಂದು ಪ್ಯಾಕೆಟ್ ಮನೆಗೆ ತಗೊಂಡು ಹೋದ. ಇದರ ಮಧ್ಯ ವಿಜಯೇಂದ್ರ ಫೇಸ್ ಬುಕ್ ನಲ್ಲಿ, ಅವರಿಗೆ ಸಿಕ್ಕಿದ ಲಿಂಬೂ ಪೆಪ್ಪರ್ ಮೆಂಟ್ ಬಗ್ಗೆ ಬರೆದರು. ಅದನ್ನು ನೋಡಿದ, ನನ್ನ ಜೊತೆ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದ ಸ್ಯಾವಿ ಕರ್ನೆಲ್ ತನಗೂ ಒಂದು ಪ್ಯಾಕ್ ಬೇಕು ಅಂದಳು.
ಅವತ್ತಿನಿಂದ, ಒಬ್ಬರಲ್ಲೋಬ್ಬರಿಗೆ ಬೇಕಾಗಿ ನಾನು ಸೂಪರ್ ಮಾರ್ಕೆಟ್ ನ ಖಾಯಂ ಗಿರಾಕಿಯಾಗಿದ್ದೇನೆ. ನನ್ನ ಮಗಳು ವಾರಕ್ಕೊಂದರಂತೆ ಪ್ಯಾಕೆಟ್ ಗಳನ್ನು ಖಾಲಿ ಮಾಡ್ತಾ ಇದ್ದಾಳೆ.  ಯಾತಕ್ಕಾದರೂ ಇರಲಿ ಅಂತ ಕಾರಿನಲ್ಲಿ ಒಂದು ಪ್ಯಾಕೆಟ್ ಇಟ್ಟಿರುತ್ತೇನೆ.
ಮೊನ್ನೆ ವಿಧಾನ ಸೌಧಕ್ಕೆ ಹೋಗೋಣ ಅಂತ ಕ್ಲಬ್ ಹತ್ತಿರ ಕಾರು ನಿಲ್ಲಿಸಿದೆ. ಅಲ್ಲಿಗೆ ಬಂದ ಬದ್ರುದ್ದೀನ್, `ಅದೆಲ್ಲಿ ಸಿಗುತ್ತಣ್ಣ ನಿಂಬೂ ಪೆಪ್ಪರ್ ಮೆಂಟ್? ಅವತ್ತು ತಗೊಂಡು ಹೋಗಿದ್ದು ಖಾಲಿಯಾಯ್ತು. ನನ್ನ ಮಗಂಗೆ ರುಚಿ ಹತ್ತಿದೆ. ಅದು ನನ್ನ ಹೆಂಡತಿ ಫೇವರೆಟ್ ಬೇರೆ. ಅವಳು ಚಿಕ್ಕಂದಿನಿಂದ ಹಳ್ಳಿಯಲ್ಲಿ ಬೆಳೆದದ್ದು ಬೇರೆ. ಯಾವಾಗಲೂ ಇಂಥ ತಿಂಡಿ ತಿಂದುಕೊಂಡೇ ಬೆಳೆದದ್ದು. ಇಡೀ ಬಸವೇಶ್ವರ ನಗರ ಹುಡುಕ್ದೆ. ಸಿಗ್ಲಿಲ್ಲ. ಎಂ.ಕೆ.ಅಹ್ಮದ್ ನಲ್ಲಿ ಸಿಗ್ತದಾ ಅಂತ ನೋಡ್ಬೇಕು,’ ಅಂದ.
`ತಗೋ, ಕಾರಲ್ಲೇ ಇದೆ. ದೇವೇಗೌಡರ ಮನೆಗೆ ಬರ್ತೀಯಲ್ಲ, ಯಾವುದಾದರೂ ಇಂಟರ್ ವ್ಯೂಗೆ. ಅಲ್ಲೇ ಪಕ್ಕದಲ್ಲಿ ಇದೆ,’ ಅಂದೆ.
`ಅದಾಗಲ್ಲ ಅಣ್ಣ. ಅಲ್ಲಿಗೆ ಬರೋದು ಕಾಯೋಕಾಗಲ್ಲ. ಈಗ ಬಸವೇಶ್ವರ ನಗರದಲ್ಲಿ ಯಾವುದಾದ್ರು ಬ್ಯಾರಿಯ ಅಂಗಡಿ ಹುಡುಕಬೇಕು,’ ಅಂದ. ಅಷ್ಟರಲ್ಲಿ ಅಲ್ಲಿಗೆ ಬಂದ ಜೋಶಿ, ಲಿಂಬೂ ಪೆಪ್ಪರ್ ಮೆಂಟಿನ ವಿಷಯ ಮಾತಾಡ್ತಿದ್ದನ್ನು ನೋಡಿ, ರಿಪೋರ್ಟರ್ಸ್ ಗಿಲ್ಡ್ ನಲ್ಲಿ ಇಟ್ಟಿದ್ದ ಸ್ಟಾಕ್ ಖಾಲಿಯಾಯ್ತು, ಅಂದರು. ಸರಿ, ಉಳಿದಿದ್ದ ಇನ್ನೊಂದು ಪ್ಯಾಕೆಟ್ ತೆಗೆದು ಗಿಲ್ಡ್ ನಲ್ಲಿ ಇಟ್ಟಿದ್ದಾಯ್ತು.
ವಿಧಾನ ಸೌಧದಲ್ಲಿ ಶಿವರಾಜ್ ಮತ್ತೆ ವಿಠ್ಠಲ್ ಮೂರ್ತಿ ಸಿಕ್ಕಿದ್ರು. ಅದೂ ಇದೂ ಮಾತಾಡ್ತಾ, ಲಿಂಬೂ ಪೆಪ್ಪರ್ ಮೆಂಟ್ ಸ್ಟಾಕ್ ಮತ್ತೆ ಬಂದಿರುವ ವಿಷಯ ಹೇಳ್ದೆ. ತಕ್ಷಣ ವಿಠ್ಠಲ್ ಮೂರ್ತಿ, `ಅಣ್ಣ, ವಿಷ್ಯ ಗೊತ್ತ. ಈ ಲಿಂಬೂ ಹೊಡೆತದಲ್ಲಿ, ಶಿವರಾಜ್ ಮತ್ತೆ ಜೋಶಿ ಅಡಕೆ ತಿನ್ನೋದು ಬಿಟ್ಟಿದ್ದಾರೆ. ದಿನಾ ಊಟ ಆದ ಮೇಲೆ ಎರೆಡೆರೆಡು ಪ್ಯಾಕ್ ಅಡಕೆ ಪುಡಿ ತಿಂತಿದ್ರು. ಈಗ ಎರೆಡೆರೆಡು ಲಿಂಬೂ ತಿಂತಾರೆ,’ ಅಂದ.
ಇದೆಲ್ಲದರ ಮಧ್ಯ ಒಂದು ಘಟನೆ ನೆಡೆದಿತ್ತು. ಏಪ್ರಿಲ್ 5 ನೇ ತಾರೀಖು ಫೇಸ್ ಬುಕ್ ನಲ್ಲಿ ಯಾರೋ ಪೂರ್ಣಚಂದ್ರ ತೇಜಸ್ವಿಯವರ ಹುಟ್ಟಿದ ದಿನ ಅಂತ ಬರೆದಿದ್ದರು. `ಎಂಥಾ ಅಭಿಮಾನಿಗಳಪ್ಪಾ ಇವರು? ಹುಟ್ಟಿದ ಮತ್ತು ಸತ್ತ ದಿನಗಳನ್ನು ಸರಿಯಾಗಿ ನೆನಪು ಇಟ್ಟುಕೊಳ್ಳೋದಿಲ್ಲ’, ಅಂತ ಬೇಜಾರು ಮಾಡ್ಕೊಂಡಿದ್ದೆ. ಮಧ್ಯಾಹ್ನ ಪ್ರೆಸ್ ಕ್ಲಬ್ ಹತ್ತಿರ ಹೋದಾಗ ತೇಜಸ್ವಿಯವರ ಫೋಟೋ ನೋಡಿದೆ. ಅಲ್ಲಿನ ವೇದಿಕೆ ಮೇಲೆ ಯಾರೋ ಓಡಾಡುತ್ತಿದ್ದದ್ದು ಕಂಡಿತು. ಹತ್ತಿರ ಹೋಗಿ ನೋಡಿದಾಗ, ಯಾವುದೋ ನಾಟಕ ತಂಡದವರು ತೇಜಸ್ವಿಯವರ ಪರಿಸರದ ಕಥೆಗಳ ಸರಣಿಯಲ್ಲಿ ಬರುವ ಗಾಡ್ಲಿ ಕೋತಿ ಹಿಡಿಯಲು ಹೊರಟ ಪ್ರಸಂಗದ ನಾಟಕ ನೆಡೆಯುತ್ತಿತ್ತು. ತುಂಬಾನೇ ಚೆನ್ನಾಗಿ ಮಾಡಿದರು.
ಗಾಡ್ಲಿ ಕೋತಿಗಳನ್ನು ಬೋನಿನಲ್ಲಿ ಹಿಡಿದು, ನಂತರ ಕಾಡಿನಲ್ಲಿ ಬಿಡಲು ಹೋದಾಗ, ತಾನೇ ಬೋನಿನಲ್ಲಿ ಸಿಕ್ಕಿಹಾಕಿಕೊಂಡದ್ದನ್ನು, ಈ ತಂಡದವರು ಅಧ್ಬುತವಾಗಿ ಅಭಿನಯಿಸಿದ್ದರು. ಈಗೀಗ ನಂಗನ್ನಿಸ್ತಿದೆ, ನಾನೂ ಗಾಡ್ಲಿ ಥರ ಸಿಕ್ಕಿಹಾಕಿಕೊಂಡಿದ್ದೇನೆ. ಲಿಂಬೂ ಪೆಪ್ಪರ್ ಮೆಂಟಿನ ಬೋನಿನಲ್ಲಿ…..   

2 ಕಾಮೆಂಟ್‌ಗಳು:

  1. ವಿನಯ್,
    ನಿಮ್ಮಪೆಪ್ಪರ್ ಮೆಂಟ್ ರುಚಿ ನಾವು ಕಳೆದ ಗತಕಾಲದ ದಿನಗಳನ್ನು ಮೆಲುಕು ಹಾಕುವಂತೆ ಮಾಡಿತು.ಆದರೆ ಅದಕ್ಕಿಂತ ನೀವು ಪೆಪ್ಪರ್ ಮೆಂಟ್ ಗಾಡ್ಲಿ ಕಥೆಗೆ ಹೋಲಿಸಿದ್ದು ತುಂಬಾ ಮೆಚ್ಚುಗೆಯಾಯಿತು.ನಿಮ್ಮ ಪೆಪ್ಪರ್ ಮೆಂಟ್ ರುಚಿ ಸವಿದ ನಮ್ಮ ಆಫೀಸಿನ ಅನೇಕರು ತಮ್ಮ ಬಾಲ್ಯದಲ್ಲಿ ಸಿಗುತ್ತಿದ್ದ ಅದರ ಬೆಲೆ ಇತ್ಯಾದಿ ಮೆಲುಕು ಹಾಕಿದರು.
    ನಿಮ್ಮ ಪೆಪ್ಪರ್ ಮೆಂಟ್ ಪುರಾಣ ಹೀಗೇ ಮುಂದುವರಿಯಲಿ.ಅದರ ಸವಿ ನಮಗೂ ಸಿಗಲಿ.

    ಪ್ರತ್ಯುತ್ತರಅಳಿಸಿ
  2. hi,vini,, ee limbu pepperment nanna kelavu balyada snehithara nenapu marukalicithu. haage edara jothege " SHUNTI " pepperment aantha eede, try madidare ennondu story, enna halavaru nenapugalu.
    TAKE CARE WHILE JOGGING! ROADS ARE VERY GOOD..........

    ಪ್ರತ್ಯುತ್ತರಅಳಿಸಿ