ಬುಧವಾರ, ಅಕ್ಟೋಬರ್ 31, 2018

ಕಾಳಿಂಗ




ಕಾಳಿಂಗರಾಯನ ಪುನರ್ವಸತಿ ಪುರಾಣ….


`ಅಗಾ… ಅಲ್ಲಿದೆ ನೋಡಿ,’ ಅಂತ ಬಾಲಣ್ಣನ (ಬಾಲಾಜಿ) ಮೇಸ್ತ್ರಿ ಕೈ ತೋರಿಸಿದ. ಕಾಫಿ ಗಿಡದ ಕೆಳಗೆ ಬಗ್ಗಿ ನೋಡಿದಾಗ, ಒಂದಿಪ್ಪತೈದು ಅಡಿ ಕೆಳಗೆ, ಕಾಫಿ ಗಿಡಗಳ ಮಧ್ಯದಲ್ಲಿ ಮರ ಕಸಿ ಮಾಡಿದಾಗ ಕೆಳಗೆ ಬಿದ್ದಿದ್ದ ಒಣಗಿದ ಕೊಂಬೆಗಳ ನೆಡುವೆ ಅರ್ಧ ಅಡಿ ಮುಖ ಮಾತ್ರ ಕಾಣುತ್ತಿತ್ತು.

ಕಾಳಿಂಗ ಸರ್ಪವನ್ನು ಕಾಡಿನಲ್ಲಿ ನೋಡಿದ್ದು ಮೊದಲಲ್ಲದೇ ಹೋದರೂ, ಅದನ್ನು ಹಿಡಿಯುವುದು ನೋಡುವುದು ಮೊದಲನೇ ಸಲವಾದ್ದರಿಂದ ವಿಪರೀತ ಕುತೂಹಲವಿತ್ತು. ಅದನ್ನು ಹಿಡಿದು ಬೇರೆಕಡೆ ಬಿಡುವುದರ ಬಗ್ಗೆ ನನಗೆ ಭಿನ್ನಾಭಿಪ್ರಾಯವಿದ್ದರೂ, ನಾನು ಬಿಳಗಲಿಗೆ ಹೋಗುವುದಕ್ಕಿಂತ ಮುಂಚೆಯೇ ಅದನ್ನು ಹಿಡಿಯುವುದಕ್ಕೆ ಮುಹೂರ್ತ ನಿಗದಿಯಾಗಿತ್ತು. ಮುಂದೇನಾಗುತ್ತೆ ನೋಡೋಣ ಅಂತ ಸುಮ್ಮನಾದೆ.

ಮೂಡಿಗೆರೆಯ ಕಳಸದ ಹತ್ತಿರ ಇರೋ ಈ ಬಿಳಗಲಿಯ ನಂಟು ಕಳೆದುಕೊಳ್ಳೋದು ನನಗೆ ಬಹಳ ಕಷ್ಟ. ಅಪ್ಪನ ತಂಗಿ ಶಾಂತತ್ತೆಯನ್ನು ಅಲ್ಲಿಗೆ ಕೊಟ್ಟಿದ್ದು ಮಾತ್ರವಲ್ಲ, ನನ್ನಜ್ಜಿಯ ತವರು ಮನೆಯೂ ಬಿಳಗಲಿಯೇ. ಚಿಕ್ಕಂದಿನಲ್ಲಿ ಹೆಚ್ಚಿನ ರಜಾದಿನಗಳನ್ನು ಕಳೆದಿರುವುದೂ ಇಲ್ಲೇ. ಬಿಳಗಲಿ ಕುಟುಂಬದ ಎಲ್ಲರೂ ಮಾವ, ಭಾವಂದಿರೇ. ಹಾಗಾಗಿ, ಬಿಳಗಲಿ ಕುಟುಂಬದವರ ಜೊತೆ ನನಗೆ ಕೆಲವು ಅಘೋಶಿತ ಸ್ವಾತಂತ್ರ್ಯಗಳಿವೆ.

ಶಾಂತತ್ತೆ ಮಗ ಅಶೋಕಣ್ಣ ಇರುವ ಮನೆಯೇ ನಾನು ಹುಟ್ಟಿದಾಗ ಹೇಗಿತ್ತೋ, ಹಾಗೇ ಇದೆ. ಸದಾ ಹರಿಯುವ ಹಳ್ಳದ ಸೇತುವೆ ದಾಟಿದರೆ, ಮೂರು ಸುತ್ತಲೂ ಗದ್ದೆ ಬೈಲು, ಮನೆ ಪಕ್ಕದಲ್ಲೊಂದು ಚಿಕ್ಕ ದೇವಸ್ಥಾನ, ಹಿಂದೆ ಗುಡ್ಡ, ಕಾಡು ಮತ್ತೆ ಸುತ್ತಲೂ ಕಣ್ಣು ಹಾಯಿಸುವಷ್ಟೂ ಹಸಿರು. ಮಲೆನಾಡಿನಲ್ಲಿ ಹುಟ್ಟಿ ಬೆಳೆದವರು ಸಹ `ವಾವ್’ ಎನ್ನುವಂಥಹ ಜಾಗ.

ಅವತ್ತು ಅಶೋಕಣ್ಣನ ಎರಡನೇ ಮಗ ಪ್ರತೀಕ್ ನ ಮದುವೆಯ ಹಿಂದಿನ ದಿನದ ಸಮಾರಂಭ. ಮನೆ ತಲುಪಿ ಇನ್ನೂ ಬಂದ ನೆಂಟರನ್ನು ಮಾತಾಡಿಸಿ ಮುಗಿದಿರಲಿಲ್ಲ. ಅಷ್ಟರಲ್ಲಿ ಸುಂಕಸಾಲೆ ರವಿ ಮಾವ ಬಂದವನೇ, `ಅಳಿಯ, ಕಾಳಿಂಗ ಸರ್ಪ ಹಿಡಿಯೋಕೆ ಹೋಗ್ತಿದ್ದೀನಿ,’ ಅಂದ.

`ಎಲ್ಲಿ? ಯಾವಾಗ?’ ಅಂದೆ.

`ಇಲ್ಲೇ ಹಿಂದೆ ಕಣೋ… ಬಾಲು ತೋಟದಲ್ಲಿದೆ. ನಾಲ್ಕೈದು ದಿನದಿಂದ ಅಲ್ಲೇ ಮಲಗಿದೆಯಂತೆ. ಏನಾಗಿದೆ ಅಂತ ಗೊತ್ತಿಲ್ಲ. ಅಲ್ಲೇ ಇದೆ ಅಂದ್ರೆ ಏನಾದ್ರೂ ಆಗಿರ್ಬೇಕು,’ ಅಂದ. `ಇರಬಹುದು… ನೀನೇ ಹಿಡೀತ್ತೀಯಾ?’ ಅಂತ ಕೇಳಿದೆ.

`ಯಾರೋ ಬರ್ತಾರಂತೆ. ಇಲ್ಲದೇ ಹೋದರೆ ನಾನೇ ಹಿಡಿಯೋದು,’ ಅಂದ. ಪೂರ್ತಿ ನಂಬಿಕೆ ಬರದೇ ಹೋದರೂ, ತಲೆ ಅಲ್ಲಾಡಿಸಿದೆ. ಅಷ್ಟರಲ್ಲೇ ನೆನಪಾಯಿತು. ಯಾವಾಗಲೂ ಬೆಂಗಳೂರು ಬಿಡುವಾಗ ಕ್ಯಾಮರಾ ಕಾರಿನಲ್ಲಿ ಹಾಕಿಕೊಳ್ಳುತ್ತಿದ್ದ ನಾನು, ಮದುವೆ ಮನೆಗೆ ಏಕೆ ಅಂತ ಬಿಟ್ಟು ಬಂದಿದ್ದೆ. ಪಿಚ್ಚೆನಿಸಿತು, ಅಂತೂ ಮೊಬೈಲ್ ನಲ್ಲಿ ಎಷ್ಟಾಗುತ್ತೋ ನೋಡೋಣ ಅಂತ ಸುಮ್ಮನಾದೆ.

ಊಟ ಮುಗಿದರೂ ಹಾವು ಹಿಡಿಯುವ ಸುದ್ದಿಯೇ ಇರಲಿಲ್ಲ. ಸ್ವಲ್ಪ ಹೊತ್ತು ಬಿಟ್ಟು ರವಿ ಮಾವನನ್ನು ಕೇಳಿದಾಗ, ಹಿಡಿಯುವವರು ಮತ್ತು ಫಾರೆಸ್ಟ್ ಗಾರ್ಡ್ ಊಟ ಮಾಡುತ್ತಿದ್ದಾರೆ, ಮುಗಿದ ತಕ್ಷಣ ಹೋಗೋಣ ಅಂದ. ಅವರ ಊಟ ಮುಗಿದ ತಕ್ಷಣ, ನಾನು, ಅಣ್ಣ ವೆಂಕಟೇಶ್, ರವಿ ಮಾವ, ಶ್ರೀನಾಥ್ ಎಲ್ಲರೂ ಬಾಲಣ್ಣನ ಜೀಪಿನಲ್ಲಿ ಹೊರಟೆವು. ನಮ್ಮ ಜೀಪಿನ ಹಿಂದೆ ಕಾರಿನಲ್ಲಿ ಇಬ್ಬರು ಮತ್ತು ಬೈಕಿನಲ್ಲಿ ಫಾರೆಸ್ಟ್ ಗಾರ್ಡ್ ಬಂದರು.

ನಮಗಾಗೇ ಕಾಯುತ್ತಿದ್ದ ಬಾಲಣ್ಣನ ಮೇಸ್ತ್ರಿ ಮತ್ತು ತೋಟದ ಕೆಲಸದವರು ಸೀದ ಕಾಫಿ ಗಿಡಗಳ ಮಧ್ಯೆ ನೆಡೆಯೋಕೆ ಶುರುಮಾಡಿದರು. ನಾನು ಅವರ ಬೆನ್ನ ಹಿಂದೆಯೇ ಇದ್ದೆ. ಸ್ವಲ್ಪ ದೂರ ಹೋದವರೇ, ಬಗ್ಗಿ ನೋಡುತ್ತಾ, ಕಾಫಿಗಿಡಗಳ ನೆಡುವೆ ತೋರಿಸಿದಾಗ, ನನಗೆ ಕಾಣಿಸಿದ್ದು ಬರೀ ಅರ್ಧ ಅಡಿಯಷ್ಟು ಮಾತ್ರ. ಹಿಂದೆ ಬರುತ್ತಿದ್ದ ಆರು ಜನಗಳಿಗೆ ನಾನೇ ಜೋರಾಗಿ ಹೇಳಿದೆ – ಇಲ್ಲೇ ಇದೆ, ಅಂತ.

ಒಂದು ನಿಮಿಷ ಹಾಗೇ ಇದ್ದ ಕಾಳಿಂಗ ಸರ್ಪ, ತನ್ನ ತಲೆಯನ್ನು ಸರಕ್ಕನೆ ಹಿಂದಕ್ಕೆ ಎಳೆದುಕೊಂಡು ಮಾಯವಾಯಿತು. ಒಣಗಿದ ಸೌದೆ ಮತ್ತು ಸೊಪ್ಪುಗಳ ನೆಡುವೆ ಏನೂ ಕಾಣಲಿಲ್ಲ. ಹಾವು ಹಿಡಿಯಲು ಬಂದ ರಫೀಕ್ ಮತ್ತು ಅಹ್ಮದ್ ರಿಗೆ ಕೆಳಗಿನಿಂದ ಬರಲು ಹೇಳಿ, ನಾನೂ ಬಳಸಿಕೊಂಡು ಕೆಳಗಿನಿಂದ ಕಾಫಿಗಿಡಗಳ ನಡುವೆ ಬಂದೆ. ಯಾಕೋ ಕೆಳಗೆ ಬಿದ್ದಿದ್ದ ಎಲ್ಲಾ ಕೊಂಬೆ ಮತ್ತು ಎಲೆಗಳೂ ಒಂದೇ ಥರ ಕಾಣೋಕೆ ಶುರುವಾಯಿತು. `ಈ ಕೊಂಬೆ ಹತ್ತಿರ ಇತ್ತು ಅಂತ ಕಾಣುತ್ತೆ,’ ಅಂತ ಹೇಳುವಾಗಲೇ, ಮೇಲಿನಿಂದ ನನಗೆ ಹಾವು ತೋರಿಸಿದ ಮೇಸ್ತ್ರಿ, `ಇಲ್ಲ ಅಣ್ಣ, ಆ ಮುಂದಿನ ಕೊಂಬೆ ಹತ್ತಿರ ಇತ್ತು,’ ಅಂದ. ಅವನು ನಿಂತಿದ್ದ ಜಾಗ ನೋಡಿದಾಗಲೇ ನಾನು ಎಲ್ಲಿದ್ದೇನೆ ಅನ್ನುವುದು ಸರಿಯಾಗಿ ಗೊತ್ತಾಗಿದ್ದು. ಹಾಗೇ ಕೆಳಗೆ ಕಣ್ಣು ಹಾಯಿಸಿದೆ…. ಯಾಕೋ, ಕಾಳಿಂಗ ತಪ್ಪಿಸಿಕೊಂಡಿತು ಅಂತ ಅನ್ನಿಸೋಕೆ ಶುರುವಾಯಿತು.

ಅಹ್ಮದ್ ಸುಮ್ಮನೆ ಸುತ್ತಾ ಕಣ್ಣಾಡಿಸುತ್ತಿದ್ದ. ರಫೀಕ್ ಮಾತ್ರ ನನಗೆ ಎಷ್ಟು ಕಾಣಿಸಿತು? ಹೇಗೆ ತಲೆ ಹಿಂದೆ ಎಳೆದುಕೊಂಡಿತು ಅಂತ ಪ್ರಶ್ನೆ ಮಾಡುತ್ತಾ, ಅಕ್ಕಪಕ್ಕದಲ್ಲಿದ್ದ ಮರಗಳ ಬುಡಗಳ ಕಡೆ ಕಣ್ಣಾಡಿಸುತ್ತಾ ಇದ್ದ. ನಾನು ಪಕ್ಕದಲ್ಲಿದ್ದ ನೇರಳೆ ಮರದ ಕಡೆಗೆ ಹೋಗಲು ಹೆಜ್ಜೆ ಹಾಕಿದ ತಕ್ಷಣ, ನನ್ನ ಕೈ ಹಿಡಿದು ಬದಿಗೆಳೆದ. ಸುತ್ತಲೂ ನೋಡಿದೆ, ಏನೂ ಕಾಣಿಸಲಿಲ್ಲ.
ನಿಧಾನವಾಗಿ ಮರದ ಬುಡದ ಹತ್ತಿರ ಕುಳಿತ ರಫೀಕ್, `ಓ, ಬುಡದಲ್ಲಿ ಒಟ್ಟೆ (ತೂತು) ಇವೆ… ಇಲ್ಲಿ ನೋಡಿ, ಹಾವು ಓಡಾಡಿ ಅಂತ ಕಾಣ್ತದೆ, ದಾರಿ ಸವೆದಿದೆ,’ ಅಂತ ತೋರಿಸಿದ. ಮರದ ಎರಡು ಬೇರುಗಳ ಮಧ್ಯದಲ್ಲಿ ಇದ್ದ ಬಿಲದ ಥರದ ತೂತಿನ ದಾರಿಯೇನೋ ಸವೆದು, ಮಣ್ಣು ನುಣುಪಾಗಿ ಹೋಗಿತ್ತು. ಆದರೆ, ನಾನು ನೋಡಿದ ಹಾವಿನ ಗಾತ್ರಕ್ಕಿಂತ ಬಿಲದ ಬಾಗಿಲು ಚಿಕ್ಕದಾಗಿದೆ ಅನ್ನಿಸಿತು. ಒಬ್ಬೊಬ್ಬರಾಗಿ ಬಂದು ಮರದ ಸುತ್ತ ನಿಲ್ಲೋಕೆ ಶುರು ಮಾಡಿದರು.

ಮೊಬೈಲ್ ಫೋನಿನ ಟಾರ್ಚ್ ಹಾಕಿ, ರಫೀಕ್ ಒಳಗೆ ಬಗ್ಗಿ ನೋಡಿದ. `ಕಾಣ್ತಿದೆಯಾ?’ ಅಂತ ನಾನು ಕೇಳಿದಾಗ, ಅದಕ್ಕೆ ಉತ್ತರ ಕೊಡುವ ಗೋಜಿಗೆ ಹೋಗದೆ, `ಒಂದು ಕಡ್ಡಿ ಕೊಡಿ,’ ಅಂದ. ಪಕ್ಕದಲ್ಲಿದ್ದ ಮೇಸ್ತ್ರಿ ಒಂದು ಒಣಗಿದ ಕಡ್ಡಿ ಕೊಟ್ಟಾಗ, `ಇದರಲ್ಲಿ ಚುಚ್ಚಿದರೆ, ಅಲ್ಲಿ ಹಾವು ಇದ್ದರೆ, ಅದಕ್ಕೆ ಗಾಯವಾಗುತ್ತೆ. ಹಸಿ ಕಡ್ಡಿ ಕೊಡಿ. ಒಳಗೆ ತಾಗಿದರೆ ಬಗ್ಗಬೇಕು, ಅಂತಹದು,’ ಅಂದ. ಒಂದು ಹಸಿ ಕಾಫಿ ಗಿಡದ ಚಿಗುರು ರೆಂಬೆಯನ್ನು ಒಳಗೆ ಚುಚ್ಚಿ ನೋಡಿದ ರಫೀಕ್, ಏನೂ ಸಿಗಲಿಲ್ಲ ಅನ್ನುವಂತೆ ತಲೆ ಆಡಿಸಿದ. ಆದರೆ, ದೃಷ್ಟಿ ಮಾತ್ರ ಅಲ್ಲಿಂದ ಕದಲಲಿಲ್ಲ.

`ಇವೆರೆಡು ಬೇರುಗಳನ್ನು ಬಿಡಿಸಬೇಕು… ಪಿಕಾಸಿ ತರಿಸಿ’, ಅಂತ ರಫೀಕ್ ಹೇಳಿದ ತಕ್ಷಣ, ಒಂದಿಬ್ಬರು ಆಳುಗಳು ಮೇಲೆ ಸಲಕರಣೆ ಇಡಲು ಕಟ್ಟಿರುವ ಕೋಣೆಗೆ ಓಡಿದರು. ಅಷ್ಟು ಹೊತ್ತಿಗಾಗಲೇ ಮರದ ಸುತ್ತ ಜನ ಕಡಿಮೆಯಾಗಿದ್ದರು. ಹಾರೆ ಮತ್ತು ಪಿಕಾಸಿ ಬಂದ ತಕ್ಷಣ, ಎರಡು ಬೇರುಗಳ ಮಧ್ಯ ಇದ್ದ ಮಣ್ಣನ್ನು ತೆಗೆಯೋಕೆ ಶುರುಮಾಡಿದರು. ಮೊಬೈಲ್ ನಲ್ಲಿ ಇದ್ದ ಟಾರ್ಚ್ ಬೆಳಕು ಬಿಟ್ಟು ಸಂದಿಯೊಳಗೆ ಬಗ್ಗಿನೋಡಿ, ತಲೆ ಆಡಿಸುವುದು ಮುಂದುವರೆದಿತ್ತು. ಆ ಮರಕ್ಕೆ ಹಬ್ಬಿದ ಮೆಣಸಿನ ಬಳ್ಳಿಯನ್ನೂ ಕತ್ತರಿಸಿ ಹಾಕಲಾಯಿತು. ಮಣ್ಣು ಸರಿಸಿದ ತಕ್ಷಣ, ಮರದ ಕೆಳಗೆ ಟೊಳ್ಳಾಗಿದ್ದು, ಗೆದ್ದಲು ಗೂಡಿನ ಅವಶೇಷಗಳು ಕಾಣಿಸಿದವು. ಅಂತೂ ಹಾವಿನ ಪತ್ತೆಯಿರಲಿಲ್ಲ. ಆದರೆ, ಮರದ ಕೆಳಗೆ ತುಂಬಾ ಜಾಗ ಇರುವುದು ಗೊತ್ತಾಯಿತು. ಗೆದ್ದಲುಗಳು ಹಾವಿಗೆ ಅರಮನೆ ಕಟ್ಟಿವೆ ಅಂತ ಅನ್ನಿಸ್ತು.

ರಫೀಕ್ ಮತ್ತು ಅಹ್ಮದ್ ತುಂಬಾ ಎಚ್ಚರಿಕೆಯಿಂದ ಮಣ್ಣು ತೆಗೆಯೋಕೆ ಹೇಳುತ್ತಿದ್ದ. ಸ್ವಲ್ಪ ಹೊತ್ತಿಗೆ, ಬೇರು ಕತ್ತರಿಸಲು ಮರ ಕುಯ್ಯುವ ಯಂತ್ರ ಸಹ ಬಂತು. ಯಾಕೋ, ನಾವು ಯೋಚನೆ ಮಾಡಿದ್ದಕ್ಕಿಂತ ಹೆಚ್ಚಿನ ಸಮಯ ಆಗುತ್ತೆ ಅಂತ ಅನಿಸಿ, ಗಿಡಗಳ ಮಧ್ಯದಿಂದ ರಸ್ತೆಗೆ ಬಂದು ನಿಂತೆ.

ರಸ್ತೆಯಲ್ಲಿದ್ದ ಬಾಲಣ್ಣ,  `ನೋಡಲ್ಲಿ ಕಾಣ್ತಾ ಇದ್ಯಲ್ಲ, ಅದೇ ಮಲ್ಲೇಶನ ಬೆಟ್ಟ,’ ಅಂದ.

`ಓ… ಆ ಕಡೆಯಿಂದ ಮಳೆ ಈಕಡೆಗೇ ಬರ್ತಾ ಇರೋ ಹಾಗಿದೆ?’ ಅಂದೆ.

`ಅದಕ್ಕೆ ಆಳುಗಳು ಕೊಡೆ ತಂದಿಟ್ಟಿದ್ದಾರೆ ನೋಡು,’ ಅಂದ ಬಾಲಣ್ಣ. ಅದ್ಯಾವ ಮಾಯೆಯಲ್ಲೋ, ಬಾಲಣ್ಣನ ಕೆಲಸದವರು ಆರು ಕೊಡೆಗಳು ಮತ್ತೆ ಎರಡು-ಮೂರು ದೊಡ್ಡ ಪ್ಲಾಸ್ಟಿಕ್ ಹಾಳೆಗಳನ್ನು ತಂದಿಟ್ಟಿದ್ದರು. ನೋಡ್ತಾ ಇದ್ದ ಹಾಗೆ ಮಳೆ ಬಂದೇ ಬಿಡ್ತು. ಕೊಡೆ ಹಿಡಿದುಕೊಂಡು ಕೆಳಗೆ ಕಾಲನ್ನು ನೋಡಿದರೆ, ಒಂದೆರೆಡು ಜಾಗದಲ್ಲಿ ಜಿಗಣೆ ಕಚ್ಚಿದ ರಕ್ತದ ಗುರುತು ಕಾಣಿಸಿತು. ಸಾಯಲಿ ಅಂತ ಸುಮ್ಮನಾದೆ.

ಹದಿನೈದಿಪ್ಪತ್ತು ನಿಮಿಷ ಕಳೆದಿರಬಹುದು. ಮರ ಕುಯ್ಯುವ ಯಂತ್ರದ ಸದ್ದು ಮತ್ತು ಮಣ್ಣು ತೆಗೆಯುವ ಸದ್ದು ಕೇಳುತ್ತಲೇ ಇತ್ತು. ಒಮ್ಮೆಗೆ ಗಿಡಗಳ ಮಧ್ಯದಿಂದ ಹೊರಗೆ ಓಡಿಬಂದ ಇಬ್ಬರು ಹೆಣ್ಣಾಳುಗಳು `ಹಾವು,’ ಅಂದರು. ನಾನು ಗಿಡಗಳೊಳಗೆ ನುಗ್ಗಿ, ನೇರಳೆ ಮರದ ಹತ್ತಿರ ಹೋದೆ. ಪ್ಲಾಸ್ಟಿಕ್ ಹೊದ್ದಿದ್ದ ಅಹ್ಮದ್, ನನಗೆ ಬೆನ್ನು ಹಾಕಿ, ಮರದ ಬೇರುಗಳ ನೆಡುವೆ ಮಾಡಿದ್ದ ಜಾಗದಲ್ಲಿ ಬಗ್ಗಿ ನೋಡುತ್ತಿದ್ದ. ಹಾವನ್ನು ಹಿಡಿಯುವ ಇಕ್ಕಳವೊಂದನ್ನು ಹಿಡಿದುಕೊಂಡ ರಫೀಕ್, ಅವನ ಪಕ್ಕ ನಿಂತಿದ್ದ.

ಒಂದೆರೆಡು ನಿಮಿಷದ ಬಳಿಕ, ಅಹ್ಮದ್ ಕೈ ಹಾಕಿ ಹಾವನ್ನು ಹೊರಗೆ ಎಳೆಯಲು ಪ್ರಯತ್ನಿಸಿದ. ಆದರೆ, ಮಳೆಯ ನೀರೂ ಸೇರಿಕೊಂಡು, ಎಳೆದಂತೆಲ್ಲ ಜಾರಿ ವಾಪಾಸ್ ಹೋಗುತ್ತಿತ್ತು. ಇಕ್ಕಳವನ್ನು ಮರದ ಕೆಳಗೆ ಹಾಕಿ, ಹಾವನ್ನು ಹೊರಗೆ ಎಳೆಯಲು ಪ್ರಯತ್ನಿಸಿದವನೇ, ಹಾಗೇ ಇಕ್ಕಳವನ್ನು ಪಕ್ಕಕ್ಕಿಟ್ಟರು. `ತಲೆ ಸಿಕ್ತಾ ಇಲ್ಲ. ಸೊಂಟಕ್ಕೆ ಕ್ಲ್ಯಾಂಪ್ ಹಾಕಿದರೆ ಅದಕ್ಕೆ ಏಟಾಗುತ್ತೆ. ಒಂದು ಸಣ್ಣ ಕೊಕ್ಕೆ ಮಾಡ್ಕೊಡಿ. ಕಾಫೀ ಗಿಡದ್ದಾದರೆ ಒಳ್ಳೆಯದು. ಗಟ್ಟಿ ಇರ್ತದೆ,’ ಅಂದ.

ಅಹ್ಮದ್ ಬೆನ್ನಿನಿಂದಾಗಿ, ಒಳಗೇನಾಗುತ್ತಿದೆ ಎನ್ನುವುದು ನನಗೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಮಳೆಯಲ್ಲೇ ಗಿಡದೊಳಗೆ ನುಗ್ಗಿದ್ದರಿಂದ ಬಟ್ಟೆಯೆಲ್ಲ ಒದ್ದೆಯಾಗಿತ್ತು. ಪಕ್ಕದ ಗಿಡದೊಳಗೆ ಹೋಗೋಣ ಅಂತ ನೋಡಿದರೆ, ರವಿ ಮಾವ ಅಲ್ಲಿ ನಿಂತುಕೊಂಡು ವಿಡಿಯೋ ಮಾಡುತ್ತಿದ್ದ. ಇರಲಿ ಅಂತ ಅಲ್ಲೇ ನಿಂತುಕೊಂಡೆ. ಎರಡೇ ನಿಮಿಷದಲ್ಲಿ ಕೊಕ್ಕೆಯೊಂದು ಅಹ್ಮದ್ ಕೈಸೇರಿತು. ಕೊಕ್ಕೆಯನ್ನು ಒಳಗೆ ಹಾಕಿ ಅರ್ಧ ಹಾವನ್ನು ಎಳದೇ ಬಿಟ್ಟ. ಏನಾಗ್ತಿದೆ ಅಂತ ನೋಡುವಷ್ಟರಲ್ಲಿ, ಮತ್ತೊಮ್ಮೆ ಹಾವಿನ ಮೈಯನ್ನು ಹೊರಗೆಳೆದು, ಕೊಕ್ಕೆಯನ್ನು ಅಲ್ಲೇ ಬಿಟ್ಟು, ಕೈ ಹಾಕಿ ಹೊರಗೆಳೆದಾಗ ನನಗೆ ಕಾಣಿಸಿದ್ದು ಅಹ್ಮದ್ ಕೈಯಲ್ಲಿದ್ದ ಕಾಳಿಂಗದ ತಲೆ. ಯಾವ ಗಳಿಗೆಯಲ್ಲಿ ಅಂತ ಗೊತ್ತಿಲ್ಲ, ರಫೀಕ್ ಅದರ ಬಾಲ ಹಿಡ್ಕೊಂಡಿದ್ದ....
ಮೊದಲು ನೋಡಿದಾಗ ನಾನೆಂದುಕೊಂಡಿದ್ದರಗಿಂತ ತಲೆ ದಪ್ಪವಾಗಿತ್ತು. ಮಳೆ ನೀರಿನಿಂದಾಗಿ, ಹಾವು ಒದ್ದಾಡಿದಾಗಲೆಲ್ಲ ಅಹ್ಮದ್ ಮತ್ತು ರಫೀಕರ ಕೈ ಜಾರುತ್ತಿತ್ತು ಅಂತ ಕಾಣುತ್ತೆ. ಹಂತ ಹಂತವಾಗಿ ತಮ್ಮ ಹಿಡಿತವನ್ನು ಬಿಗಿಗೊಳಿಸುತ್ತಿದ್ದರು. ಹಾವನ್ನು ಹಿಡಿದುಕೊಂಡೇ, ಬಗ್ಗಿಕೊಂಡು, ಗಿಡಗಳ ನೆಡುವಿನಿಂದ ರಸ್ತೆಗೆ ಬಂದರು. ಅಲ್ಲಿಂದ ಮೇಲೆ ಸಮತಟ್ಟಾದ ಜಾಗಕ್ಕೆ ನೂರೈವತ್ತು ಮೀಟರ್ ಗಳಾದರೂ ಇತ್ತು.

ನಾನು ಸ್ವಲ್ಪ ಹಿಂದಿದ್ದೆ. ಹನ್ನೊಂದರಿಂದ ಹನ್ನೆರೆಡು ಅಡಿ ಉದ್ದವಿದ್ದ ಹಾವು ಭಾರವಾಗಿ ಕಾಣುತ್ತಿತ್ತು. ಮಳೆ ಕಾರಣ ಜಾರುತ್ತಿದ್ದ ಹಾವಿನ ತಲೆಯನ್ನು ಒಂದೆರೆಡು ಬಾರಿ ಕೆಳಕ್ಕೆ ಅಹ್ಮದ್ ಇಟ್ಟರೂ, ರಫೀಕ್ ಬಾಲದಿಂದ ಕೈ ತೆಗೆಯುತ್ತಿರಲಿಲ್ಲ. ಹಾವು ತೋಟದೊಳಗೆ ಓಡಿಹೋಗಲು ಪ್ರಯತ್ನಿಸುತ್ತೇ ಹೊರತು, ಯಾವುದೇ ಪ್ರತಿರೋಧ ವ್ಯಕ್ತಪಡಿಸುತ್ತಿರಲಿಲ್ಲ.

ಆಗ ಶುರುವಾಯ್ತು ಜಿಜ್ಞಾಸೆ… ಹಾವನ್ನು ಚೀಲದೊಳಗೆ ಹಾಕಿಕೊಂಡು ಅಲ್ಲಿಗೆ ತೆಗೆದುಕೊಂಡು ಹೋಗಬೇಕೋ, ಅಥವಾ ಮತ್ತೆ ಹಾಗೇ ಎತ್ತಿಕೊಂಡು ಹೋಗಬೇಕೋ?  ಅಂತ. ಹಿಡಿದವರೇನೋ ಚೀಲಕ್ಕೆ ಹಾಕಲು ತಯಾರಾದರು, ಆದರೆ, ಫಾರೆಸ್ಟ್ ಗಾರ್ಡ್ ಮಾತ್ರ, ಒಂದು ಸಲ ಚೀಲಕ್ಕೆ ಹಾಕಿದರೆ, ಮತ್ತೆ ಹಾವನ್ನು ಹೊರಗೆ ತೆಗೆಯೋಕೆ ಬಿಡೋದಿಲ್ಲ ಅಂತ ಶುರು ಮಾಡಿದ. ಆದರೆ ರಫೀಕ್ ಅದಕ್ಕೆ ಒಪ್ಪಲಿಲ್ಲ. `ನಾವು ಇದನ್ನ ಚಾರ್ಮಾಡಿಗೆ ತಗೊಂಡು ಹೋಗಿ ಬಿಡಬೇಕು. ದಾರಿಯಲ್ಲಿ ಯಾರಾದರೂ ಕೇಳಿದರೆ, ನಾವು ಯಾರ ತೋಟದಲ್ಲಿ ಹಿಡಿದೆವು ಅನ್ನೋದನ್ನ ಹೇಳಬೇಕಾಗುತ್ತೆ. ಹಾಗಾಗಿ, ತೋಟದ ಯಜಮಾನರ ಜೊತೆ ನಮಗೆ ಹಾವಿನ ಫೋಟೋ ಬೇಕು. ಅದಕ್ಕಾದರೂ ಹೊರಗೆ ತೆಗೆಯಲೇ ಬೇಕು,’ ಅಂತ ಹಟ ಹಿಡಿದ.

ನನಗ್ಯಾಕೋ ಎರಡೂ ಅಪಾಯಕಾರಿ ಅಂತ ಅನ್ನಿಸಿತು. ಏನಾಗುತ್ತೋ ನೋಡೋಣ ಅಂತ ಸುಮ್ಮನಾದೆ. ಹಾವನ್ನು   ಹಾಗೇ ಹೊತ್ತುಕೊಂಡು ಹೋಗುವುದಕ್ಕೆ ಎಲ್ಲರ ವಿರೋಧ ಬಂತು. ಹಾಗೇ, ಚೀಲದಿಂದ ಮತ್ತೆ ತೆಗೆಯಲೇ ಬೇಕು ಅನ್ನುವವರ ಸಂಖ್ಯೆಯೂ ಹೆಚ್ಚಾಯಿತು. ಪೆಚ್ಚಾದ ಗಾರ್ಡ್, `ಏನಾದ್ರೂ ಮಾಡ್ಕೊಳ್ಳಿ,’ ಅಂತ ಸುಮ್ಮನಾದ. ಹಾವು ಚೀಲದೊಳಗೆ ಸೇರಿತು.

ತೋಟದ ಗೇಟಿನ ಹತ್ತಿರ ಚಪ್ಪರದ ಹಾಗಿರುವ, ಗೋಡೆಗಳಿಲ್ಲದ ಒಂದು ಹೆಂಚಿನ ಚಾವಣಿ ಇತ್ತು. ಹಾವನ್ನು ಅದರ ಕೆಳಗೆ ನೆಲದಲ್ಲಿ ಮೊದಲು ಬಿಟ್ಟರು. ಕಾಳಿಂಗ ಸರ್ಪದ ಬಗ್ಗೆ ಬಗೆಬಗೆಯ ಕಥೆಗಳನ್ನು ಕೇಳಿದ್ದ ಕೆಲಸದವರಿಗೆ ನಿರಾಸೆಯಾಗಿರಬೇಕು. `ಹೆಡೆನೇ ಎತ್ತುತ್ತಿಲ್ಲ? ಎಷ್ಟು ಎತ್ತರ ನಿಲ್ಲುತ್ತೇ?’ ಅಂತ ಪ್ರಶ್ನೆ ಕೇಳುತ್ತಿದ್ದರು. ಮೂವತ್ತಕ್ಕಿಂತಲೂ ಹೆಚ್ಚು ಕಾಳಿಂಗ ಹಿಡಿದಿದ್ದೇವೆ ಎಂದು ಹೇಳಿಕೊಂಡ ರಫೀಕ್ ಸುಮ್ಮನೆ ನಗುತ್ತಾ, `ಹಾಗೆಲ್ಲ ಸುಮ್ಮನೆ ಯಾರಿಗೂ ಕಚ್ಚಲ್ಲ. ಕಚ್ಚಿಸಿಕೊಂಡವರು ಉಳಿಯೋಲ್ಲ. ಕಳಸದ ಭಟ್ಟರನ್ನ ಬಿಟ್ಟರೆ, ಕಾಳಿಂಗದ ಕೈಯಲ್ಲಿ ಕಚ್ಚಿಸಿಕೊಂಡವರನ್ನು ನಾನು ಕೇಳೇ ಇಲ್ಲ. ಇದು ಇದ್ದ ಕಡೆ ಬೇರೆ ಹಾವು, ಹೆಗ್ಗಣಗಳ ಕಾಟನೇ ಇರಲ್ಲ. ಮನುಷ್ಯರು ಬರೋದು ಕಂಡ್ರೆ ಸಾಕು, ಓಡಿ ಹೋಗಿ ಅವಿತುಕೊಳ್ತದೆ. ಎಲ್ಲರೂ ಹೋದಮೇಲೆ ಹೊರಗೆ ಬರುತ್ತೆ,’ ಅಂದ.

ಬಾಲಣ್ಣನ ಮೇಸ್ತ್ರಿ, `ಓ, ಇದು ಇಲ್ಲೇ ಇದಿದ್ದಿದ್ದರೆ ಏನೂ ಆಗ್ತಿರಲಿಲ್ಲ, ಅಂತ ಹೇಳಿದಾಗ, ರಫೀಕ್ ಸುಮ್ಮನೆ ನಕ್ಕ. ಕೆಲಸದವರಿಂದಾದಿಯಾಗಿ ಎಲ್ಲರೂ ಅವರವರ ಮೊಬೈಲ್ ಫೋನ್ ಗಳಲ್ಲಿ ಫೋಟೋ ತೆಗೆಯುವುದರಲ್ಲಿ ನಿರತರಾದರು. ಹಾವು ಮಾತ್ರ ತಪ್ಪಿಸಿಕೊಂಡು ಹೋಗಲು ಜಾಗವಿದೆಯೇ ಎಂದು ಹುಡುಕುತ್ತಿತ್ತು. ರಫೀಕ್ ಅದಕ್ಕೆ ಅವಕಾಶ ಕೊಡದೆ, ಬಾಲ ಹಿಡಿದುಕೊಂಡಿದ್ದ. ಅಹ್ಮದ್ ಹಿಂದುಗಡೆಯಿಂದ ನಿಧಾನವಾಗಿ ಹಾವಿನ ಬೆನ್ನನ್ನು ತಡುವುತ್ತಾ ಬಂದವನು, ಒಮ್ಮೆ ಮೆಲ್ಲಗೆ ಅದರ ತಲೆ ಸವರಿದ.

ಒಂದೈದು ನಿಮಿಷದ ಬಳಿಕ, ಅಹ್ಮದ್ ಮತ್ತು ರಫೀಕ್ ಹಾವನ್ನೆತ್ತಿಕೊಂಡು ಸ್ವಲ್ಪ ಬಯಲಿಗೆ ತಂದರು. ಅಷ್ಟು ಹೊತ್ತಿಗೆ ಮಳೆಯೂ ನಿಂತಿತ್ತು. ಅವರಿಗೆ ಬಾಲಣ್ಣನ ಜೊತೆ ಒಂದು ಫೋಟೋ ಬೇಕಿತ್ತಷ್ಟೆ. ಬಾಲಣ್ಣ ಫೋಟೋಗೆ ಬರೋ ಹೊತ್ತಿಗೆ, ರವಿ ಮಾವ, ಶ್ರೀನಾಥ್ ಎಲ್ಲರೂ ಫೋಟೋಗಳನ್ನು ತೆಗೆಸಿಕೊಂಡಾಗಿತ್ತು. ಹಾವು ನಿಧಾನವಾಗಿ ಚೀಲದೊಳಗೆ ಸೇರಿದಾಗ, ಮನಸ್ಸಿಗೆ ಪಿಚ್ಚೆನಿಸಿತು. ಅಣ್ಣ ವೆಂಕಟೇಶ್ ಮಾತ್ರ ಫಾರೆಸ್ಟ್ ಗಾರ್ಡ್ ಗೆ, ರಫೀಕ್ ಮತ್ತು ಅಹ್ಮದ್ ಜೊತೆ ಹೋಗಿ, ಚಾರ್ಮಾಡಿಯಲ್ಲಿ ಬಿಡುವವರೆಗೆ ಇರಬೇಕೆಂದು ಹೇಳುತ್ತಿದ್ದ. ಕಾಳಿಂಗ ಸರ್ಪದ ಬಗ್ಗೆ ಇರುವಂತೆಯೇ, ಅವುಗಳನ್ನು ಹಿಡಿಯುವವರ ಬಗ್ಗೆಯೂ ಬಹಳಷ್ಟು ಕಥೆಗಳಿವೆ. ಅದರ ವಿಷವನ್ನು ಕ್ಯಾನ್ಸರ್ ಚಿಕಿತ್ಸೆಗಾಗಿ ಬಳಸುತ್ತಾರೆ ಮತ್ತು ಅದನ್ನು ಹಿಡಿದವರಿಂದ ಕಾಳಿಂಗ ಸರ್ಪವನ್ನು ಕೊಂಡು, ಮಾರುವವರ ದೊಡ್ಡ ಜಾಲವೇ ಇದೆ, ಅಂತ. ಇದರಲ್ಲಿ ಬಹಳಷ್ಟು ನಿಜವಿದ್ದರೂ, ಈ ಇಬ್ಬರು ಹುಡುಗರ ಬಗ್ಗೆ ಅನುಮಾನ ಪಡುವಂಥಹದು ನನಗೇನೂ ಕಾಣಿಸಲಿಲ್ಲ. 

ಕಾಳಿಂಗ ಸರ್ಪ ಆರು ಅಡಿ ಎತ್ತರ ನಿಂತು ವಿಷವನ್ನು ಉಗುಳುತ್ತದೆ, ಅದು ಅಟ್ಟಿಸಿಕೊಂಡು ಬಂದು ಕಚ್ಚುತ್ತದೆ, ಕಚ್ಚಿದ ಅರ್ಧ ನಿಮಿಷದೊಳಗೆ ಜೀವ ಹೋಗುತ್ತದೆ… ಇತ್ಯಾದಿ ಕಥೆಗಳನ್ನು ನಾವು ಮುಂಚಿನಿಂದಲೂ ಕೇಳಿಕೊಂಡೇ ಬೆಳೆದವರು.

ಮೊದಲನೆಯದಾಗಿ, ಕಾಳಿಂಗ ಸರ್ಪ ವಿಷಪೂರಿತ ಹಾವುಗಳಲ್ಲೇ ದೊಡ್ಡದು ಎನ್ನುವುದು ನಿಜ. ಹಾಗೆ ನೋಡಿದರೆ, ನಾವು ಹಿಡಿದ ಕಾಳಿಂಗ ಚಿಕ್ಕದು ಎಂದೇ ಹೇಳಬೇಕು. ಸಾಧಾರಣವಾಗಿ 13-14 ಅಡಿಗಳಷ್ಟು ಉದ್ದವಿರುತ್ತವೆ. 16 ಅಡಿ ಉದ್ದದ ಕಾಳಿಂಗ ಸರ್ಪವಿರುವುದೂ ನಿಜ. ಸಾಧಾರಣವಾಗಿ ಹಾವುಗಳು ತಮ್ಮ ಉದ್ದದ ಮೂರನೇ ಒಂದರಷ್ಟು ಎತ್ತರ ನಿಲ್ಲಬಲ್ಲವು. ಆ ಲೆಖ್ಖದಲ್ಲಿ ಹೇಳುವುದಾದರೆ ಮಾತ್ರ ಇವು ಐದು ಅಡಿಗಳಷ್ಟು ಎತ್ತರದವರೆಗೆ ನಿಲ್ಲಬಲ್ಲವು. ನೋಡಿದವರು ಯಾರೂ ಇಲ್ಲ.
ಕಾಳಿಂಗ ಸರ್ಪ ವಿಷ ಉಗುಳುವುದೂ ಒಂದು ಮೂಢನಂಬಿಕೆಯೇ ಹೊರತು ಸತ್ಯವಲ್ಲ. ಎಲ್ಲಾ ಹಾವುಗಳಂತೆ, ಇವುಗಳಿಗೂ ಕಣ್ಣು ಮಂದ ಮತ್ತುಕಿವಿ ಇರುವುದಿಲ್ಲ. ಅವುಗಳೇನಿದ್ದರೂ, ನಾಲಿಗೆಯಿಂದ ವಾಸನೆ ಹಿಡಿಯುತ್ತವೆ. ಸಾಧಾರಣವಾಗಿ, ಅವುಗಳು ತಾವು ಬದುಕುವ ಜಾಗದಲ್ಲಿ ಪ್ರಾದೇಶಿಕ ಪ್ರಾತಿಬಲ್ಯತೆ ಹೊಂದಿರುತ್ತವೆ. ಬೇರೆ ಕಾಳಿಂಗ ಸರ್ಪವನ್ನು ಆ ಜಾಗದಲ್ಲಿ ಬರಲು ಬಿಡುವುದಿಲ್ಲ. ತನ್ನ ಪ್ರದೇಶದಲ್ಲಿ ಬರುವ ಬೇರೆ ಹಾವುಗಳು, ನವಿಲಿನ ಮೊಟ್ಟೆಗಳು, ಇಲಿ, ಹೆಗ್ಗಣಗಳು ಮುಂತಾದ ಚಿಕ್ಕ ಪ್ರಾಣಿಗಳನ್ನು ತಿಂದು ಬದುಕುತ್ತವೆ. ನಿಜ ಹೇಳಬೇಕೆಂದರೆ, ಕಾಳಿಂಗ ರೈತ ಮಿತ್ರನೇ ಹೊರತು, ಶತ್ರುವಂತೂ ಅಲ್ಲವೇ ಅಲ್ಲ.

ಇಷ್ಟೆಲ್ಲಾ ಬಲಶಾಲಿಯಾದ ಈ ಹಾವು, ಅತೀವ ನಾಚಿಕೆ ಸ್ವಭಾವದ್ದು. ಮನುಷ್ಯರ ಹೆ‍ಜ್ಜೆ ಸದ್ದು ಕೇಳಿದ ತಕ್ಷಣ ಓಡಿಹೋಗಿ ಬಿಲದಲ್ಲಿ ಸೇರಿಕೊಳ್ಳುತ್ತವೆ. ನೇರಳೆ ಮರದ ಪೊಟರೆಯೊಳಗೆ ಆರಾಮವಾಗಿದ್ದ ಈ ಕಾಳಿಂಗ ಹೇಗೆ ನಾಲ್ಕೈದು ದಿನ ಹೊರಗಡೆ ಇತ್ತು ಅನ್ನೋದು ನನಗೆ ಅರ್ಥವಾಗಲಿಲ್ಲ.

ಹೋದ ವರ್ಷ, ಕಳಸದ ಹತ್ತಿರ ಪ್ರಫುಲ್ಲದಾಸ್ ಭಟ್ಟರು ತಾವೇ ಹಿಡಿದ ಕಾಳಿಂಗ ಸರ್ಪಕ್ಕೆ ಬಲಿಯಾದರು. ಬಹಳಷ್ಟು ಕಾಳಿಂಗಗಳನ್ನು ಹಿಡಿದಿದ್ದ ಭಟ್ಟರು, ಅತೀವ ಆತ್ಮವಿಶ್ವಾಸದಿಂದ ಫೋಟೋ ತೆಗೆಸುವ ಸಲುವಾಗಿ ಹಾವಿನ ತಲೆಯನ್ನು ತಮ್ಮ ಎದೆಯ ಬಳಿಗೆ ತಂದರು. ಮೊದಲೇ ಗಾಭರಿಯಾಗಿದ್ದ ಹಾವು, ಹಿಡಿತ ಸ್ವಲ್ಪ ಸಡಿಲವಾದ ತಕ್ಷಣ, ಅವರ ಎದೆಗೆ ಮತ್ತು ಕೈಗೆ ಕಚ್ಚಿತಂತೆ. ಬಹುಶಃ, ವಿಶ್ವದಲ್ಲಿ ಕಾಳಿಂಗ ಸರ್ಪದ ಕಡಿತಕ್ಕೆ ಬಲಿಯಾದ ಮೂರನೇ ವ್ಯಕ್ತಿ ಭಟ್ಟರು ಅಂತ ಕಾಣುತ್ತೆ.

ರಫೀಕ್ ಮತ್ತು ಅಹ್ಮದ್ ಚೀಲವನ್ನು ಕಾರಿನೊಳಗೆ ಹಾಕಿಕೊಂಡು ಹೊರಟಾಗ ಸ್ವಲ್ಪ ಬೇಸರವಾಯಿತು. ಕಾಳಿಂಗಕ್ಕೆ ಹೆದರಿ ಕೆಲಸದವರು ತೋಟದ ಆ ಕಡೆಗೆ ಹೋಗುವುದನ್ನೇ ನಿಲ್ಲಿಸಿದ್ದರು. ಹಾಗಾಗಿ, ಬಾಲಣ್ಣನಿಗೆ ಹೇಳಿದ್ದರೂ ಹಿಡಿಸದೇ ಬಿಡುತ್ತಿರಲಿಲ್ಲ.
ನಾನು ಅಲ್ಲಿಗೆ ತಲುಪುವ ಮೊದಲೇ ಆ ಕಾಳಿಂಗದ ಹಣೆಬರಹ ನಿರ್ಧಾರವಾಗಿದ್ದರಿಂದ, ನಾನೂ ಸುಮ್ಮನಾದೆ…


ಮಾಕೋನಹಳ್ಳಿ ವಿನಯ್ ಮಾಧವ












 



ಮಂಗಳವಾರ, ಅಕ್ಟೋಬರ್ 9, 2018

ವಿಶ್ವನಾಥ್





 ಕೊಂಡಿ ಕಳಚುವ ಮುನ್ನ ಮಾತನಾಡಿದ ವಿಶ್ವಣ್ಣನ ಲೇಖನಿ…..


ಪತ್ರಿಕೋದ್ಯಮಕ್ಕೆ ಬಂದು ಒಂದೆರೆಡು ವರ್ಷಗಳಾಗಿತ್ತು ಅಂತ ಕಾಣುತ್ತೆ. ಇಂಡಿಯನ್ ಎಕ್ಸ್ ‍ಪ್ರೆಸ್ ಕಛೇರಿಯಲ್ಲಿ ಕುಳಿತು ಯಾವುದೋ ಪೋಲಿಸ್ ಸ್ಟೇಷನ್ ಗೆ ಫೋನ್ ಮಾಡಿ, ಏನೋ ಮಾತಾಡುತ್ತಾ ಇರುವಾಗ, ನಮ್ಮ ಹಿರಿಯರಾದ ಎಂ ಎನ್ ಚಕ್ರವರ್ತಿ ಯಾರಿಗೋ ಹೇಳುತ್ತಿದ್ದದ್ದು ಕಿವಿಗೆ ಬಿತ್ತು.
`ನೋಡೋ, ವಿಶ್ವನಾಥ್ ಅವನ ಮಗಳ ಮದುವೆಯನ್ನ ಸಾಮೂಹಿಕ ವಿವಾಹದಲ್ಲಿ ಮಾಡ್ತಾನಂತೆ. ಒಂದೈವತ್ತು ಮದುವೆ ಒಟ್ಟಿಗೆ ಆಗ್ಬಹುದಂತೆ.’
ಫೋನ್ ಕೆಳಗಿಟ್ಟ ತಕ್ಷಣ ಕೇಳಿದೆ… `ನಚ್ಚಿ, ಯಾರದು ವಿಶ್ವನಾಥ್?’
`ಮುಂಚೆ ಫಾರೆಸ್ಟ್ ಮಿನಿಸ್ಟರ್ ಆಗಿರ್ಲಿಲ್ವಾ? ಕೆ ಆರ್ ನಗರದವನು…. ನಿಂಗೆ ಪಟೇಲ, ದೇವೇಗೌಡ ಬಿಟ್ರೆ ಯಾರು ಗೊತ್ತು? ಇವ್ನೂ ಸ್ವಲ್ಪ ಪಟೇಲನ ಥರ ಕಣೋ. ಒಳ್ಳೇ ಜೋಕ್ ಮಾಡ್ತಾನೆ, ಆದ್ರೆ, ಸ್ವಲ್ಪ raw ಅಷ್ಟೆ. ನಿಂಗಿಷ್ಟ ಆಗ್ತಾನೆ ನೋಡು,’ ಅಂತ ಅಂದ್ರು.
ಫಾರೆಸ್ಟ್ ಮಿನಿಸ್ಟರ್ ಆಗಿದ್ದ ವಿಶ್ವನಾಥ್ ಬಗ್ಗೆ ನನ್ನ ವನ್ಯಜೀವಿ ಗುರು ಚಿನ್ನಪ್ಪನವರ ಬಾಯಲ್ಲಿ ಕೇಳಿದ್ದೆ. 1994 ರ ಚುನಾವಣೆಯಲ್ಲಿ ಸೋತಿದ್ದರು. ನನಗೆ ಜೆ ಎಚ್ ಪಟೇಲರು ಇಷ್ಟವಾಗಿದ್ದವರು ಅನ್ನೋದರಲ್ಲಿ ಇವತ್ತಿಗೂ ಸಂಶಯವಿಲ್ಲ. ವಿಶ್ವನಾಥ್ ಮತ್ತು ಜೆ ಎಚ್ ಪಟೇಲರ ಹೋಲಿಕೆ ಬಗ್ಗೆ ನನಗೆ ಸಂಶಯವಿತ್ತು. ಆದರೂ, ನಚ್ಚಿ ಸಾಧಾರಣವಾಗಿ ಉತ್ಪ್ರೇಕ್ಷೆ ಮಾಡುವುದಿಲ್ಲವಾದ್ದರಿಂದ, ನಾನು ಸುಮ್ಮನಾದೆ. ವಿಶ್ವನಾಥ್ ರವರ ಮಗಳ ಮದುವೆ 125 ಸಾಮೂಹಿಕ ವಿವಾಹದಲ್ಲಿ ನೆಡೆದದ್ದು ಪತ್ರಿಕೆಗಳಲ್ಲೂ ಬಂದಿತ್ತು.
1999 ರ ಚುನಾವಣೆಯಲ್ಲಿ ವಿಶ್ವನಾಥ್ ಗೆದ್ದಿದ್ದಲ್ಲದೆ, ಮಂತ್ರಿಯೂ ಆದರು. ಪಟೇಲರಿಗಿಂತ ಸುಲಭವಾಗಿ ನನಗೆ ಸಿಗುತ್ತಿದ್ದರು. ಕಾರಣವೇನೆಂದರೆ, ಆಗಾಗ ವಿಧಾನಸೌಧಕ್ಕೂ ನನ್ನನ್ನು ನಚ್ಚಿ ಕಳುಹಿಸುತ್ತಿದ್ದರು. ಪಟೇಲರಂತೆ ಇವರಿಗೂ ಹಾಸ್ಯಪ್ರಜ್ಞೆ ಚೆನ್ನಾಗಿದೆ ಅಂತ ನನಗೆ ಅನ್ನಿಸಿತ್ತು. ಆದರೂ, ಪಟೇಲರಿಗೂ, ಇವರಿಗೂ ಏನೋ ಒಂದು ವ್ಯತ್ಯಾಸ ಎದ್ದು ಕಾಣುತ್ತಿತ್ತು. ಅದೇನೆಂದು ಅರ್ಥವಾಗಲು ಬಹಳ ವರ್ಷಗಳೇ ಬೇಕಾದವು.
1994 ರಿಂದ 2004 ರವರೆಗೆ ಇದ್ದ ಜನತಾ ಮತ್ತು ಕಾಂಗ್ರೆಸ್ ಸರ್ಕಾರಗಳಲ್ಲಿ ನಾನು ಗಮನಿಸಿದ್ದು ಎಂದರೆ, ನಮ್ಮ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನಲ್ಲಿದ್ದ ಪ್ರತಿನಿಧಿಗಳು. ಅದರಲ್ಲಿ ಬಹಳಷ್ಟು ಉತ್ತಮ ವಾಗ್ಮಿಗಳು ಮತ್ತು ಜ್ಞಾನಿಗಳು ಇದ್ದರು ಅಂತ ಹೇಳಬಹುದು. ಜೆ ಎಚ್ ಪಟೇಲ್, ಎಂ ಪಿ ಪ್ರಕಾಶ್, ಎಸ್ ಎಂ ಕೃಷ್ಣ, ಎಂ ವೈ ಘೋರ್ಪಡೆ, ಮಲ್ಲಿಕಾರ್ಜುನ ಖರ್ಗೆ, ಭೈರೇಗೌಡ, ರಮೇಶ್ ಕುಮಾರ್, ನಂಜೇಗೌಡ, ಕೆ ಎಚ್ ರಂಗನಾಥ್, ಡಿ ಬಿ ಚಂದ್ರೇಗೌಡ, ಸಿದ್ದರಾಮಯ್ಯ… ಹೀಗೇ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಅವರ ಸಾಲಿನಲ್ಲಿ ವಿಶ್ವನಾಥ್ ಅನಾಮತ್ತಾಗಿ ಸೇರುತ್ತಾರೆ.
ಪಟೇಲರಿಗಿದ್ದ ತಾಳ್ಮೆ ವಿಶ್ವನಾಥ್ ರವರಿಗೆ ಇಲ್ಲ. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ, ಪಟೇಲ್ ಒಂದು ಜ್ಞಾನಸಾಗರ ಅಂತಾನೇ ಹೇಳಬಹುದು. ಎಸ್ ಎಂ ಕೃಷ್ಣ ಬಿಟ್ಟರೆ, ಈ ವಿಷಯದಲ್ಲಿ ಅವರಿಗೆ ಯಾರನ್ನೂ ಹೋಲಿಸಲು ಕಷ್ಟ. ಆದರೂ, ಎಸ್ ಎಂ ಕೃಷ್ಣರಿಗಿಂತ ಪಟೇಲರು ಭಿನ್ನವೇ. ಪಟೇಲ್ ಸಮಾಜವಾದಿ ಮತ್ತು ಶ್ರೀಮಂತ ಹಿನ್ನೆಲೆಯಿಂದ ಬಂದವರು. ಆದರೆ, ಜೀವನದ ಅನುಭವ ಮತ್ತು ಅವರ ಅಗಾಧ ಜ್ಞಾನದಿಂದ, ಅವರು ಯಾವುದೇ ಸೈದ್ದಾಂತಿಕ ನೆಲೆಗಟ್ಟನ್ನು ಸಾರ್ವತ್ರಿಕ ಸತ್ಯ ಅಂತ ಒಪ್ಪಿಕೊಳ್ಳಲಿಲ್ಲ.
ಆದರೆ ವಿಶ್ವನಾಥ್ ಬೆಳೆದದ್ದೇ ಬೇರೆ ಮೂಸೆಯಲ್ಲಿ. ಕಡು ಬಡತನದಿಂದ ಬಂದಿರದಿದ್ದರೂ, ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ಚಳುವಳಿಗಳನ್ನು ಮೈಗಂಟಿಸಿಕೊಂಡು, ದೇವರಾಜ ಅರಸುರವರ ಗರಡಿಯಲ್ಲಿ ಬೆಳೆದವರು. ಯಾವಾಗಲೂ ಸೈದ್ದಾಂತಿಕ ನೆಲೆಕಟ್ಟಿನಲ್ಲಿ ನಿಂತು ಮಾತನಾಡುತ್ತಿದ್ದರು. ಅದೇ ಅವರಿಗೂ, ಪಟೇಲರಿಗೂ ಇದ್ದ ವ್ಯತ್ಯಾಸ.
ಪರಿಚಯವಾದ ಮೇಲೆ ನಿಧಾನವಾಗಿ ವಿಶ್ವನಾಥರ ಜೊತೆ ಸಲುಗೆಯಿಂದ ಇರಲು ಆರಂಭಿಸಿದೆ. ಸರ್ ಅನ್ನೋ ಪದ ಹೋಗಿ, ರೀ ವಿಶ್ವಣ್ಣ ಅಂತಾನೂ ಕರೆಯೋಕೆ ಶುರು ಮಾಡಿದೆ. ಅವರ ಹಾಸ್ಯಪ್ರಜ್ಞೆಯಂತೂ ಬಹಳ ಇಷ್ಟವಾಗುತ್ತಿತ್ತು. ವಿಷಯಾಧಾರಿತ ಚರ್ಚೆಗಳಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿದ್ದರು. ಒಂದು ಸಲ ವಿಧಾನ ಪರಿಷತ್ತಿನಲ್ಲಿ ಉಮಾಶ್ರೀಯವರು, `ವಿಶ್ವನಾಥರು ಒಳ್ಳೆ ಜೋಕರ್,’ ಅಂದುಬಿಟ್ಟರು. ಒಂದು ಕ್ಷಣ ಸಿಟ್ಟಾದರೂ, ಸುಧಾರಿಸಿಕೊಂಡ ವಿಶ್ವನಾಥರು, ಜೋಕರ್ ಅನ್ನೋದರ ಬದಲು `ವಿಕಟಕವಿ’ ಅಂತ ಹೇಳಬಹುದು ಅಂದರು…. ಆ ಪದವನ್ನು ಯಾವಕಡೆಯಿಂದ ಓದಿದರೂ, ವಿಕಟಕವಿಯೇ ಆಗುತ್ತದೆ ಅಂತ ನನಗೆ ಅನ್ನಿಸಿತು.
2004 ಮತ್ತು 2008ರ ಚುನಾವಣೆಯಲ್ಲಿ ಸೋತನಂತರ, ವಿಶ್ವನಾಥ್ ಇನ್ನು ರಾಜಕೀಯ ನಿವೃತ್ತಿ ಅಂದುಕೊಂಡಿದ್ದೆ. ಅಷ್ಟರಲ್ಲಿ ಅವರು ಲೋಕಸಭೆಯ ಮೆಟ್ಟಿಲು ಹತ್ತಿದ್ದರು. ಮತ್ತೆ 2014ರಲ್ಲಿ ಸೋತರು. ಇನ್ನು ಮುಗಿದೇ ಹೋಯಿತು ಅನ್ನುವಷ್ಟರಲ್ಲಿ, ಕಾಂಗ್ರೆಸ್ ಬಿಟ್ಟು ಯಾರೂ ಊಹಿಸದಂತೆ ಜನತಾ ದಳಕ್ಕೆ ಸೇರಿ, ಮತ್ತೆ ಹುಣಸೂರಿನಿಂದ ಗೆದ್ದು, ಪಕ್ಷದ ಅಧ್ಯಕ್ಷರೂ ಆದರು.
ಇದರ ಹಿಂದಿನ ರಾಜಕೀಯ ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ಯಾಕಂದರೆ, ನಾನೀಗ ಬರೆಯುತ್ತಿರುವುದು ವಿಶ್ವನಾಥರ ಪುಸ್ತಕಗಳ ಬಗ್ಗೆ.  2004ರ ನಂತರ ವಿಧಾನಸಭೆಗೆ ಬರುವ ಸದಸ್ಯರ ಗುಣಮಟ್ಟ ಕಡಿಮೆಯಾಗಿದೆ ಅನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ವಿಷಯಾಧಾರಿತ ಚರ್ಚೆಗಳಿಗಿಂತ, ಗಲಾಟೆಗಳೇ ಹೆಚ್ಚಾದಂತ ಅನ್ನಿಸುತ್ತಿದೆ. ಹೊಸ ವಿಷಯಗಳು ತಿಳಿದುಕೊಳ್ಳುವುದು ಮರೀಚಿಕೆಯೇ ಸರಿ. ಕೆಲವೊಂದು ಕೊರೆತಗಳನ್ನೂ ಸೇರಿದಂತೆ, ಅಧ್ಬುತವಾದ ಚರ್ಚೆ, ಭಾಷಣಗಳನ್ನು ಕೇಳಿರುವ ನಮಗೆ, ಯಾಕೋ ವಿಧಾನಸಭಾ ಕಲಾಪಗಳು ಮೀನು ಮಾರುಕಟ್ಟೆಯ ಗಲಾಟೆಯಂತೆ ಅನ್ನಿಸುತ್ತದೆ ಅಂದರೂ ತಪ್ಪಾಗಲಾರದು.
ಮೊನ್ನೆ ನನ್ನ ಗಮನ ಸೆಳೆದದ್ದು ವಿಶ್ವನಾಥರ ಪುಸ್ತಕ -- `ಅಥೆನ್ಸ್ ನ ರಾಜ್ಯಾಡಳಿತ’ ಬಿಡುಗಡೆ ಸಮಾರಂಭ. ಮೊದಲಿಂದಲೂ ನನಗೆ ಗ್ರೀಕ್ ಕಥೆಗಳು ನಮ್ಮ ಪುರಾಣಗಳಷ್ಟೇ ಇಷ್ಟ. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಗ್ರೀಕ್ ಮತ್ತು ಭಾರತದ ಪುರಾಣಗಳ ಮೂಲ ಒಂದೇ. ಗ್ರೀಕ್ ರಾಜ್ಯಾಡಳಿತದ ಬಗ್ಗೆ ವಿಶ್ವನಾಥ್ ಬರೆದಿದ್ದಾರೆ ಅಂದಾಗ ಕುತೂಹಲ ತಡೆಯಲಾಗಲಿಲ್ಲ. ಒಂದು ಪ್ರತಿಯನ್ನು ಪಡೆದು ಓದಿದೆ.
ಹಾಗಂತ, ಇದು ವಿಶ್ವನಾಥ್ ರವರ ಮೊದಲನೇ ಪುಸ್ತಕವೇನಲ್ಲ. ನನ್ನ ಗಮನಕ್ಕೆ ಬಂದ ಮೊದಲನೇ ಪುಸ್ತಕ ಎಂದರೆ ಅವರ ಆತ್ಮ ಚರಿತ್ರೆಯಾದ `ಹಳ್ಳಿ ಹಕ್ಕಿಯ ಹಾಡು’. ಜೀವನ, ಕಷ್ಟಗಳು, ಬಡತನ, ಹಾಸ್ಯ, ರಾಜಕೀಯ, ಸಿದ್ದಾಂತಗಳನ್ನು ಚರ್ಚೆ ಮಾಡುತ್ತಲೇ ಅಧ್ಬುತವಾಗಿ ಓದಿಸಿಕೊಂಡು ಹೋಗುವ ಪುಸ್ತಕ ಅದು. ಅದನ್ನು ಪಠ್ಯಪುಸ್ತಕವನ್ನಾಗಿ ಯಾವುದಾದರೂ ತರಗತಿಗೆ ಮಾಡಬಹುದಿತ್ತು ಅಂತ ನನಗೆ ಎಷ್ಟೋ ಸಲ ಅನ್ನಿಸಿದೆ. ಅದರ ನಂತರ ಕೆಲವು ಪುಸ್ತಕಗಳನ್ನು ಬರೆದರೂ, ಅವು ಹಳ್ಳಿ ಹಕ್ಕಿಯಷ್ಟು ಸುಲಭವಾಗಿ ಓದಿಸಿಕೊಂಡು ಹೋಗುವ ಪುಸ್ತಕಗಳಲ್ಲ. ತುರ್ತುಪರಿಸ್ಥಿತಿಯ ಕುರಿತು ಬರೆದ `ಆಪತ್ ಸ್ಥಿತಿಯ ಆಲಾಪಗಳು’ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರನ್ನು ಮತ್ತು ದೇವರಾಜ ಅರಸುರವರನ್ನು ಸಮರ್ಥಿಸುವ ಯತ್ನದಂತೆ ಕಾಣುತ್ತದೆ. ನಾನೂ ಇಂದಿರಾಗಾಂಧಿಯವರ ಅಭಿಮಾನಿ ಅನ್ನೋದು ಸುಳ್ಳಲ್ಲ. ತುರ್ತುಪರಿಸ್ಥಿತಿಯ ಕಾಲದಲ್ಲಿ 20 ಅಂಶಗಳ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಟಾನವಾಯಿತು ಅನ್ನುವುದನ್ನೂ ಒಪ್ಪುತ್ತೇನೆ. ಅದನ್ನು ಸಮಾಜದ ವಿವಿಧ ಸ್ತರಗಳ ವ್ಯಕ್ತಿಗಳ ಸ್ವಗತ ರೀತಿಯಲ್ಲಿ ನಿರೂಪಿಸಲಾಗಿದೆ. ತುರ್ತುಪರಿಸ್ಥಿತಿಯ ಎಷ್ಟೋ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದರೂ, ಎಲ್ಲರನ್ನೂ ಸುಲಭವಾಗಿ ಓದಿಸಿಕೊಂಡು ಹೋಗಲಾರದು.
ಹಾಗೆಯೇ, ಸಿರಿಭೂಮಿ… ಕೇಂದ್ರದಲ್ಲಿ ಬಂದ ಮೋದಿ ಸರ್ಕಾರವು ಭೂಸ್ವಾಧೀನವನ್ನು ಮಾರುಕಟ್ಟೆಗೆ ಹೋಗಿ ತರಕಾರಿ ತರುವಷ್ಟೇ ಸುಲಭಮಾಡಿದಾಗ ಆಕ್ರೋಶಗೊಂಡವರಲ್ಲಿ ನಾನೂ ಒಬ್ಬ. ಸಿರಿ ಭೂಮಿ ಈ ವಿಷಯವನ್ನು ಕೂಲಂಕುಶವಾಗಿ ಚರ್ಚಿಸುತ್ತದೆ. ಆದರೆ, ಇದನ್ನೂ ಪ್ರಕೃತಿಯ ಸ್ವಗತ ರೂಪದಲ್ಲಿ ಬರೆದಿದ್ದಾರೆ. ಈ ವಿಷಯದ ಬಗ್ಗೆ ಆಸಕ್ತಿ ಇಲ್ಲದವರನ್ನು ಸುಲಭವಾಗಿ ಓದಿಸಿಕೊಳ್ಳುವುದಿಲ್ಲ.
ಅಥೆನ್ಸ್ ನ ರಾಜ್ಯಭಾರದ ಮುಂಚೆ, ವಿಶ್ವನಾಥರು `ದಿ ಟಾಕಿಂಗ್ ಶಾಪ್’ ಅನ್ನೋ ಪುಸ್ತಕವನ್ನು ಬರೆದಿದ್ದರು. ಆ ಪುಸ್ತಕ ನನಗೆ ಓದಲಾಗಲಿಲ್ಲ. ಅದು ಹೆಚ್ಚಾಗಿ ಸಂಸದೀಯ ರಾಜಕೀಯ ಮತ್ತು ಅದರ ಚರಿತ್ರೆಯ ಬಗ್ಗೆ ಬರೆಯಲಾಗಿದೆಯಂತೆ. ಅದರ ಮುಂದುವರೆದ ಭಾಗವೇ, ಅಥೆನ್ಸ್ ನ ರಾಜ್ಯಭಾರ. ಇದು ಗ್ರೀಕ್ ಇತಿಹಾಸದಲ್ಲಿ, ಎರಡೂವರೆ ಸಾವಿರ ವರ್ಷಗಳ ಹಿಂದೆ ಪ್ರಜಾಪ್ರಭುತ್ವ ಹುಟ್ಟಿದ ಮತ್ತು ನೆಡೆದು ಬಂದ ದಾರಿಯ ಬಗ್ಗೆ ಸವಿಸ್ತಾರವಾಗಿ ಬೆಳಕು ಚೆಲ್ಲುತ್ತದೆ.
ಕ್ರಿಸ್ತ ಪೂರ್ವದಲ್ಲೇ ಅಥೆನ್ಸ್ ನಲ್ಲಿ ಹುಟ್ಟಿದ ಪ್ರಜಾಪ್ರಭುತ್ವದ ಬಗ್ಗೆ ನನಗೆ ಅಲ್ಪಸ್ವಲ್ಪ ತಿಳುವಳಿಕೆ ಇತ್ತು. ಆದರೆ, ವಿಲ್ಲಿಯಂ ಶೇಕ್ಸ್ ಪಿಯರ್ ನ ನಾಟಕಗಳ ಮೂಲಕ, ರೋಮನ್ ಸಾಮ್ರಾಜ್ಯದಲ್ಲಿ ಇದ್ದ ಪ್ರಜಾಪ್ರಭುತ್ವದ ಬಗ್ಗೆ ಗೊತ್ತಾದರೂ, ಸಮಗ್ರವಾದ ಜ್ಞಾನ ಇರಲಿಲ್ಲ. ಪ್ರಜಾಪ್ರಭುತ್ವದ ಮೂಲದ ಬಗ್ಗೆ ಯಾರಿಗಾದರೂ ತಿಳಿಯುವ ಹಂಬಲವಿದ್ದರೆ, ಈ ಪುಸ್ತಕ ಉತ್ತಮವಾದ ಕೈಪಿಡಿಯೂ ಆಗಬಲ್ಲದು ಹಾಗೂ ಸುಲಭವಾಗಿ ಓದಿಸಿಕೊಂಡು ಹೋಗಬಲ್ಲದು.
ಪ್ರಜಾಪ್ರಭುತ್ವದ ಮೂಲವನ್ನು ಸಾಕ್ಷ್ಯಚಿತ್ರದಂತೆ ನಿರೂಪಿಸುವುದರ ಬದಲು, ಕ್ರಿಸ್ತಪೂರ್ವದಲ್ಲಿದ್ದ ಗ್ರೀಕ್ ಸಮಾಜ, ಕಟ್ಟುಪಾಡುಗಳು, ನಂಬಿಕೆಗಳ ಬಗ್ಗೆ ಕೂಲಂಕುಶವಾಗಿ ಚರ್ಚಿಸಿದ್ದಾರೆ. ಗ್ರೀಕರ ಸಾಮಾಜಿಕ ಬೆಳವಣಿಗೆಗಳಿಗೆ ಕಾರಣಕರ್ತರಾದ ಮಹಾನ್ ಚಿಂತಕರಾದ ಪ್ಲಾಟೋ, ಸಾಕ್ರಟಿಸ್, ಅರಿಸ್ಟಾಟಲ್ ಮತ್ತು ಅವನ ಶಿಷ್ಯ ಅಲೆಕ್ಸಾಂಡರ್ ಬಗ್ಗೆಯೂ ವಿವರಗಳಿವೆ.  ಕಲ್ಲುಗಳೇ ಮತಗಳಾಗಿ, ಆಲಿವ್ ಮರದ ಕೆಳಗೆ ಅಥಿನಾ ದೇವಿಯ ಪೂಜೆಯೊಂದಿಗೆ ಆರಂಭವಾಗುತ್ತಿದ್ದ ಕಲಾಪಗಳನ್ನು ಲಿಖಿತ ರೂಪದಲ್ಲಿ ದಾಖಲಿಸಲಾಗುತ್ತಿತ್ತು. ಅದೂ ಎರಡೂವರೆ ಸಾವಿರ ವರ್ಷಗಳ ಕೆಳಗೆ ಅನ್ನುವುದೇ ಅಧ್ಬುತ.
ಹಾಗೆಯೇ, ಗ್ರೀಕ್ ಪ್ರಜಾಪ್ರಭುತ್ವಕ್ಕೆ ಅಪಾರ ಕೊಡುಗೆ ಇತ್ತು, ಕೊನೆಗೆ ಬೇಸತ್ತು ಅಧಿಕಾರ ತ್ಯಜಿಸಿದ ಸೋಲನ್, ಪ್ರಜಾಪ್ರತಿನಿಧಿಗಳ ಆಸ್ತಿ ಪಾಸ್ತಿಗಳ ವಿವರವನ್ನು ಅವರ ಮನೆಯ ಮುಂದೆಯೇ ತೂಗು ಹಾಕುವ ಪಾರದರ್ಶಕ ವಿಧಾನಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಹಾಗೆಯೇ, ಪ್ರಜಾಪ್ರಭುತ್ವದ ಆಶಯದಂತೆ ಎಲ್ಲಾ ವರ್ಗದವರಿಗೂ ಪ್ರಾತಿನಿಧ್ಯ ನೀಡಿ, ಸಾಮಾಜಿಕ ನ್ಯಾಯ ಒದಗಿಸಿದರೆ, ಕೆಳಸ್ತರ ವರ್ಗದಿಂದ ಬಂದ ಪ್ರಜಾ ಪ್ರತಿನಿಧಿಗಳು ಸೋಮಾರಿಗಳಾಗಿ, ಪ್ರಜೆಗಳ ಆಶಯವನ್ನು ಹಾಳುಮಾಡಿದ್ದನ್ನೂ ವಿವರಿಸಿದ್ದಾರೆ. ಹೆಣ್ಣುಮಕ್ಕಳಿಗೆ ಮತದಾನದ ಹಕ್ಕನ್ನು ಕೆಲವು ಶತಮಾನಗಳವರೆಗೆ ಮೊಟಕುಗೊಳಿಸಿದ್ದನ್ನು ಓದುವಾಗ ಮನಸ್ಸಿಗೆ ಪಿಚ್ಚೆನ್ನಿಸುತ್ತದೆ.
ನನ್ನ ಅಭಿಪ್ರಾಯದಲ್ಲಿ, ನಮ್ಮ ವಿಶ್ವವಿಧ್ಯಾಲಯಗಳಲ್ಲಿ ಇತಿಹಾಸ ಪ್ರಾಧ್ಯಾಪಕರು ಮಾಡಬೇಕಾಗಿದ್ದ ಕೆಲಸವನ್ನು, ವಿಶ್ವನಾಥ್ ಅವರಿಗಿಂತ ಚೆನ್ನಾಗಿ ಮಾಡಿದ್ದಾರೆ. ಪ್ರಜಾಪ್ರಭುತ್ವಕ್ಕೆ ಗ್ರೀಕ್ ಸಮಾಜದ ಕೊಡುಗೆಯ ಬಗ್ಗೆ ಇದೊಂದು ಉತ್ತಮ ಪುಸ್ತಕ. ಈ ಪುಸ್ತಕವನ್ನು ಓದಿ, ಗ್ರೀಕ್ ದೇಶದ ಇಂದಿನ ಸ್ಥಿತಿಗತಿಗಳನ್ನು ಅವಲೋಕಿಸಿದಾಗ, ಟ್ರಾಯ್ ಯುದ್ದಕ್ಕೆ ಹೊರಡುವ ಮುನ್ನ, ಯುದ್ದದ ನಾಯಕ ಅಕಿಲೀಸ್ ಗೆ ಅವನ ತಾಯಿ ಹೇಳುವ ಮಾತು ನೆನಪಾಗುತ್ತದೆ: `your glory walks hand in hand with your doom’.
ಪತ್ರಿಕೋದ್ಯಮದ ಆರಂಭದಲ್ಲಿ ನಾನು ಕಂಡ ರಾಜಕಾರಣಿಗಳು ಈಗ ಪಳೆಯುಳಿಕೆಗಳಾಗಿದ್ದಾರೆ. ಅದರ ಕೊನೆಯ ಕೊಂಡಿಯೇ ವಿಶ್ವನಾಥ್ ಅಂದರೆ ತಪ್ಪಾಗಲಾರದು. ಆ ಕೊಂಡಿ ಕಳಚುವ ಮುನ್ನ, ಅವರ ಲೇಖನಿ ಮತ್ತಷ್ಟು ಮಾತನಾಡಲಿ ಅಂತ ಅನ್ನಿಸ್ತಿದೆ…..

ಮಾಕೋನಹಳ್ಳಿ ವಿನಯ್ ಮಾಧವ.