ಬುಧವಾರ, ಏಪ್ರಿಲ್ 18, 2018

ಹಬ್ಬಾಚರಣೆ



ಹಬ್ಬಾಚರಣೆ ಎಂಬ ಹುಚ್ಚು ಮುಂಡೇ ಮದುವೆ


`ಈ ವರ್ಷ ನಮ್ಮ ಕ್ಲಬ್ ನಲ್ಲಿ ಕ್ರಿಸ್ ಮಸ್ ಪಾರ್ಟಿಗೆ ಬರ್ತೀಯಾ? ಮುಂಚೇನೇ ಹೇಳಿ ಹೆಸರು ರಿಜಿಸ್ಟರ್ ಮಾಡ್ಬೇಕು,’ ಅಂತ ನನ್ನ ಸಂಬಂಧಿಯೊಬ್ಬನು ಕೇಳಿದಾಗ, ಪುಸುಕ್ಕನೆ ಅವನ ಮುಖಕ್ಕೇ ನಕ್ಕೆ.

`ಏನಾಯ್ತೋ? ಪಾರ್ಟಿಗೆ ಬರ್ತೀಯಾ ಅಂತ ಕೇಳಿದ್ರೆ ನಗ್ತೀಯಲ್ಲಾ?’ ಅಂದ.

`ಅಲ್ವೋ, ಮೊನ್ನೆ ನೋಡಿದ್ರೆ ತೋಟದ ಆಳುಗಳನ್ನ ಈ ಕ್ರಿಶ್ಚಿಯನ್ ಮಿಷನರಿಯವರು ಬಂದು ಮತಾಂತರ ಮಾಡಿ ಹಾಳುಮಾಡ್ತಿದ್ದಾರೆ ಅಂತ ಕೂಗಾಡ್ತಿದ್ದಲ್ಲ. ನೀನ್ಯಾವಾಗ ಪರ್ಬು (ಕ್ರಿಶ್ಚಿಯನ್ ಗಳಿಗೆ ಮಲೆನಾಡಿನಲ್ಲಿ ಉಪಯೋಗಿಸುವ ಪದ) ಆದೆ? ನಿಮ್ಮ ಕ್ಲಬ್ ನಲ್ಲಿ ಎಷ್ಟು ಜನ ಪರ್ಬುಗಳಿದ್ದಾರೆ?’ ಅಂತ ಕೇಳಿದೆ.

`ಹತ್ತಿಪ್ಪತ್ತು ಇರ್ಬೇಕು. ಅವ್ರು ಬರಲ್ಲ ಕಣಾ... ಚರ್ಚ್ ಗೆ ಹೋಗಿರ್ತಾರೆ. ನಾವೇ ಪಾರ್ಟಿ ಮಾಡಾದು,’ ಅಂದ.

`ನಿಮ್ಮನೆಲಿ ಚೌಡಿಗೆ ಕೋಳಿ, ಹಂದಿ ಕಡ್ದಾಗ ಅಥವಾ ಸುಗ್ಗಿ ಸಮಯದಲ್ಲಿ ಕ್ಲಬ್ ನಲ್ಲಿ ಪಾರ್ಟಿ ಮಾಡ್ತೀರಾ?’ ಅಂತ ಕೇಳ್ದೆ.

`ಇಲ್ಲಪ್ಪ... ಅವೆಲ್ಲ ಮನೆ ಮಟ್ಟಿಗೆ ಮಾತ್ರ ಅಲ್ಲಾ ಮಾರಾಯಾ... ಯಾಕ್ಹೇಳು?’ ಅಂದ.

`ಅಲ್ವೋ... ನಮ್ ಮಲೆನಾಡಲ್ಲಿ, ಗಣಪತಿ ಹಬ್ಬ ಸೇರ್ದಂಗೆ ಎಲ್ಲಾ ಹಬ್ಬದಲ್ಲೂ ಮಾಂಸ ಮಾಡ್ತಾರೆ. ನಮ್ಮ ಹಬ್ಬ ಯಾವ್ದೂ ನಿಮ್ ಕ್ಲಬ್ ನಲ್ಲಿ ಮಾಡಲ್ಲ. ಯುಗಾದಿ ಸಮೇತ ಮಾಡಲ್ಲ. ಕ್ರಿಸ್ ಮಸ್ ಮತ್ತೆ ಹೊಸ ವರ್ಷ ಮಾತ್ರ ಮಾಡ್ತೀರ. ಹೆಂಗೋ ಇದು?’ ಅಂತ ಕೇಳ್ದೆ.

`ಬರ್ತೀಯೋ ಇಲ್ವೋ ಹೇಳೋ ಮಾರಾಯ. ಸುಮ್ಮನೆ ತಲೆ ತಿನ್ಬೇಡ. ಬರೋದಿದ್ರೆ ನಿನ್ನ ಹೆಸರು ಬರ್ಸಿರ್ತೀನಿ. ಇಲ್ದೇ ಹೋದ್ರೆ ತೆಪ್ಪಗೆ ಬೆಂಗ್ಳೂರಲ್ಲೇ ಬಿದ್ದಿರು,’ ಅಂದ.  ನಾ ಸುಮ್ಮನೆ ನಕ್ಕೆ.

ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಅನ್ನೋದು ಮಲೆನಾಡಿನಲ್ಲಿ ಒಂದು ಪಿಡುಗು. ಇವಾಂಗಲಿಸ್ಟ್ ಅನ್ನೋ ಒಂದು ಪಂಗಡ ಇದೆ. ಮತಾಂತರವನ್ನು ದಂಧೆಯಾಗಿ ಮಾಡಿಕೊಂಡಿದೆ. ಆಳುಗಳ ಕೇರಿಗೆ ಹೋಗಿ, ಏಸುಕ್ರಿಸ್ತನ ಬಗ್ಗೆ ಮತ್ತು ಅವನು ಮಾಡುವ ಜಾದುಗಳ ಬಗ್ಗೆ ಕಥೆಗಳನ್ನು ಹೇಳುತ್ತಾರೆ. ಕೆಲವು ಸಭೆಗಳನ್ನು ಆಯೋಜಿಸಿ, ಅಲ್ಲಿದೆವ್ವದ ಕಾಟಕ್ಕೊಳಗಾದವರು ಎನ್ನಲಾದ ಕೆಲವರನ್ನು ಕರೆತಂದು, ಅವರ ಮೈಮೇಲಿನ ದೆವ್ವವನ್ನು ಬಿಡಿಸಿ ತೋರಿಸುತ್ತಾರೆ. ಆನಂತರ, ಅಲ್ಲಿಗೆ ಹೋದ ಈ ಕೆಲಸದ ಆಳುಗಳನ್ನು ಮತಾಂತರ ಮಾಡಿ, ಅವರ ಕುತ್ತಿಗೆಗೆ ಶಿಲುಬೆ ಸಿಗಿಸಿ ಕಳುಹಿಸುತ್ತಾರೆ.

ಮನೆಗೆ ವಾಪಾಸಾದ ಆಳುಗಳು ಮುಂಚಿನಂತೆಯೇ ಕಾಫಿ ತೋಟದ ಕೆಲಸಗಳಿಗೆ ಬರುತ್ತಿರುತ್ತಾರೆ. ಹೋದ ವರ್ಷ ಸುಗ್ಗಿ, ಗಣಪತಿ ಹಬ್ಬ ಮತ್ತು ಆಯುಧ ಪೂಜೆಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದವರು, ಈ ವರ್ಷ ಬದಿಯಲ್ಲಿ ನಿಂತು ನೋಡುತ್ತಿರುತ್ತಾರೆ. ಪ್ರಸಾದ ಕೊಡಲು ಹೋದರೆ, `ನಮ್ಮ ಜಾತಿಯಲ್ಲಿ ಪ್ರಸಾದ ತಗೊಳ್ಳೋದಿಲ್ಲ,’ ಅಂತ ಮುಖಕ್ಕೆ ಹೊಡೆದ ಹಾಗೆ ಹೇಳ್ತಾರೆ. ಇವರುಗಳಿಗೆ ಜಾತಿ ಮತ್ತು ಧರ್ಮದ ನೆಡುವಿನ ವ್ಯತ್ಯಾಸವೇ ಗೊತ್ತಿರೋದಿಲ್ಲ. ತೋಟದ ಮಾಲಿಕರು ಮತ್ತು ಮತಾಂತರಗೊಳ್ಳದ ಆಳುಗಳಿಗೆ ಇದೊಂದು ದೊಡ್ಡ ಕಿರಿಕಿರಿಯ ವಿಷಯ. ವರ್ಷವಿಡೀ ಪರ್ಬುಗಳನ್ನು ಬೈದುಕೊಂಡು ತಿರುಗ್ತಿರ್ತಾರೆ.

ತಮಾಷೆ ಎಂದರೆ, ಮತಾಂತರವಾದವರಿಗೆ ಏಸು ಕ್ರಿಸ್ತನ ಭಜನೆಗಳನ್ನು ಸಹ ಹೇಳಿಕೊಟ್ಟಿರುತ್ತಾರೆ. ಇವ್ಯಾವುದೂ ನಿಜವಾದ ಕ್ರೈಸ್ತ ಧರ್ಮದ ಆಚರಣೆಯಲ್ಲಿ ಇಲ್ಲ. ಮೂಡಿಗೆರೆಯ ಚರ್ಚ್ ನ  ಫಾದರ್ ಪಿಂಟೋ ಹತ್ತಿರ ಈ ವಿಷಯ ಕೇಳಿದಾಗ, ಅವರು ನಗಲಾರಂಬಿಸಿದರು. `ಏನು ಮಾಡುವುದು ಹೇಳಿ?  ಭಾನುವಾರ ಚರ್ಚ್ ಗೆ ಬಂದು, ಇಲ್ಲಿ ಭಜನೆ ಮಾಡೋದಿಲ್ಲ ಅಂತ ಗೊತ್ತಾದಾಗ ಕಕ್ಕಾಬಿಕ್ಕಿಯಾಗುತ್ತಾರೆ. ಇಲ್ಲಿ ಬೈಬಲ್ ಓದುವುದು ಮಾತ್ರ. ಯಾವಾಗಾದ್ರೂ ಹಾಡುವವರು ಸಿಕ್ಕಿದಾಗ ಕಾಯರ್ (Choir) ಇರುತ್ತದೆ. ಭಜನೆಗಳಿಗೂ ಮತ್ತು ಕಾಯರ್ ಗಳಿಗೂ ವ್ಯತ್ಯಾಸ ಇರುತ್ತದೆ ನೋಡಿ. ಇಲ್ಲಿ ಯಾರೇ ಬಂದರೂ ನಾವು ಬರಬೇಡ ಅನ್ನೋದಿಲ್ಲ. ಬಂದು ಪ್ರಾರ್ಥನೆ ಮಾಡಿಕೊಂಡು ಹೋಗ್ತಾರೆ. ಇನ್ನು ಮಾಟ, ಮಂತ್ರ ಎಲ್ಲ ಇಲ್ಲಿ ಇರೋದಿಲ್ಲ,’ ಅಂದರು.

ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ, ಬಡವರೇ ಹೆಚ್ಚಾಗಿರೋ ಜಾಗಗಳಲ್ಲಿ ಬೋರ್ಡ್ ಹಾಕಿಕೊಂಡಿರೋ ಮಾಂತ್ರಿಕ, ತಾಂತ್ರಿಕರು ಮತ್ತು ದರ್ಗಾಗಳಲ್ಲಿ ಎಲ್ಲಾ ಕಾಯಿಲೆ ವಾಸಿ ಮಾಡುತ್ತೇವೆ ಎಂದು ಹೇಳಿಕೊಳ್ಳೋ ಬಾಬಾಗಳಷ್ಟೇ ಡೋಂಗಿಗಳು ಇವರು. ಮಲೆನಾಡಿನಲ್ಲಿ ಈ ಥರದ ಮತಾಂತರದ ಪಿಡುಗನ್ನು ಕುವೆಂಪುರವರ `ಕ್ರೈಸ್ತನಲ್ಲ, ಪಾದ್ರಿಯ ಮಗಳು,’ ಅನ್ನೋ ಸಣ್ಣ ಕಥೆಯಿಂದ ಹಿಡಿದು, ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಸಹ ನೋಡಬಹುದು. ಕುವೆಂಪುರವರ ಬಾಲ್ಯದಿಂದ ಹಿಡಿದು, ಇವತ್ತಿನವರೆಗೆ, ಮಲೆನಾಡಿನಲ್ಲಿ ಇದೊಂದು ದಂಧೆಯಾಗಿ ಉಳಿದಿದೆ.

ಅದೆಲ್ಲ ಹಾಳಾಗಲಿ. ದಿನ ಬೆಳಗೆದ್ದರೆ ಪರ್ಬುಗಳನ್ನ ಬೈಕೊಂಡು, ಬಿಜೆಪಿಗೆ ಓಟು ಕೊಡೋ ಹುಡುಗರು ಸಹ, ಕ್ರಿಸ್ ಮಸ್ ಮತ್ತು ಹೊಸ ವರ್ಷ ಆಚರಣೆಗೆ, ಹೊಸ ಸೂಟುಗಳನ್ನು ಹೊಲಿಸಿಕೊಂಡು, ಕ್ಲಬ್ ಎಡತಾಗುವುದನ್ನು ನೋಡಿದರೆ, ನಗು ಬರುತ್ತದೆ. ಪಾರ್ಟಿ ಎಂದರೆ ಗುಂಡು, ತುಂಡು ಮತ್ತು ಸೊಂಟ ಬಿದ್ದು ಹೋಗುವವರೆಗೆ ಕುಣಿತ. ಕೆಲವು ಆಟಗಳು. ಇನ್ನೇನೂ ಘನಾಂದಾರಿ ಕೆಲಸ ಮಾಡೋದು ನನ್ನ ಗಮನಕ್ಕಂತೂ ಬಂದಿಲ್ಲ.

ಈಗೆಲ್ಲ ಹಬ್ಬಗಳ ಆಚರಣೆ ನೋಡಿದಾಗ ತಲೆ ಬಿಸಿಯಾಗುತ್ತೆ. ನಮಗೆಲ್ಲ ಯುಗಾದಿ, ದೀಪಾವಳಿ, ಗಣಪತಿ ಹಬ್ಬ ಬಿಟ್ಟರೆ ಬೇರೆ ಹಬ್ಬಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನಮ್ಮ ಕಡೆ ಹೋಳಿಯೇನು ಅಂಥಾ ದೊಡ್ಡ ಹಬ್ಬವಲ್ಲ. ಇನ್ನುಳಿದ ಹಾಗೆ, ಚೌಡಿ ಕಲ್ಲಿಗೆ ಪೂಜೆ, ಸುಗ್ಗಿ ಹಬ್ಬಗಳು ನಮಗೆ ವಿಶೇಷ ಅಷ್ಟೆ. ಸಕಲೇಶಪುರದ ಕಾನ್ವೆಂಟ್ ನಲ್ಲಿ ಓದುವಾಗ, ಕ್ರಿಸ್ ಮಸ್ ಸಮಯದಲ್ಲಿ ಸಿಸ್ಟರ್ ಗಳು ಕೇಕ್ ಕೊಡುತ್ತಿದ್ದದ್ದು ನೆನಪಿದೆ. ಇನ್ನೊಂದೆರೆಡು ತುಂಡು ಕೊಟ್ಟಿದ್ದರೆ ಇವರ ಗಂಟೇನು ಹೋಗ್ತಿತ್ತು ಅಂತ ಗೊಣಗಿಕೊಳ್ಳುತ್ತಿದ್ದೆವು.

ಕಾಲೇಜಿಗೆ ಬರುವ ಹೊತ್ತಿಗೆ ಬಕ್ರೀದ್ ಹಬ್ಬಕ್ಕೆ ಗೆಳೆಯರ ಮನೆಯಿಂದ ಬಿರಿಯಾನಿ ಬರುತ್ತಿತ್ತು, ಇಲ್ಲಾ ಅವರ ಮನೆಗೆ ನಾವೇ ಹೋಗುತ್ತಿದ್ದೆವು. ಮನೆಗೆ ಹೋಗೋದು ತುಂಬಾ ಇಷ್ಟ. ಯಾಕಂದರೆ, ಬಿರಿಯಾನಿ ತಿಂದ ಮೇಲೆ ಫಿರ್ನಿ ತಿನ್ನೋ ಮಜಾನೇ ಬೇರೆ. ಇತ್ತೀಚಿನ ವರ್ಷಗಳಲ್ಲಿ ಬಕ್ರೀದ್ ಗೆ ಯಾರೂ ಕರೆದದ್ದು ನೆನಪಿಲ್ಲ. ಆದರೆ, ಪ್ರತಿ ಈದ್ ಮಿಲಾದ್ ಸಮಯದಲ್ಲಿ, ಈಗ ದೂರದರ್ಶನದಲ್ಲಿ ಕೆಲಸ ಮಾಡುತ್ತಿರುವ ಆಯೆಶಾ ಖಾನುಂ, ಮನೆಗೆ ಕರೆದು ಊಟ ಹಾಕುತ್ತಾಳೆ.

ಇತ್ತೀಚಿನ ದಿನಗಳಲ್ಲಿ ಯಾವ ಹಬ್ಬ, ಯಾಕೆ ಆಚರಿಸುತ್ತಾರೆ ಅಂತ ಗೊತ್ತೇ ಆಗೋದಿಲ್ಲ. ಮೊನ್ನೆ ಆಫೀಸಿನಲ್ಲಿ ಸುಧಾ ಜೊತೆ ಮಾತಾಡುವಾಗ, ಅಕ್ಷಯ ತೃತೀಯದ ಬಗ್ಗೆ ಮಾತು ಬಂತು. `ನೀನೇನು ಚಿನ್ನ ತಗೊಳೋಲ್ವಾ?’ ಅಂತ ತಮಾಷೆ ಮಾಡಿದೆ.

`ಅಕ್ಷಯ ತದಿಗೆ ತಗೊಳ್ಳೋ ಹಬ್ಬ ಅಲ್ಲಾರಿ. ಇದು ದಾನ ಕೊಡೋ ಹಬ್ಬ. ತಗೊಳ್ಳೋ ಹಬ್ಬ ಅಂತ ಯಾಕಾಯ್ತು ಅನ್ನೋದು ನಮಗೇ ಗೊತ್ತಿಲ್ಲ,’ ಅಂದಳು.
ಅಂದ್ರೆ, ಇದು ನಿಮ್ಮ ಹಬ್ಬಾನ? ತದಿಗೆ ಅಂದ್ರೆ? ‘ ಅಂತ ಜೈನ ಧರ್ಮಕ್ಕೆ ಸೇರಿದ ಸುಧಾಳಿಗೆ ಕೇಳಿದೆ.

`ತದಿಗೆ ಅಂದ್ರೆ, ಇದು ಪಕ್ಷದ ಮೂರನೇ ದಿನ ಬರೋದು. ಪಾಡ್ಯ, ಬಿದಿಗೆ, ತದಿಗೆ ಇಲ್ವಾ? ಅದು. ಈ ಹಬ್ಬಕ್ಕೆ ಒಂದು ಕಥೆ ಇದೆ. ನಮ್ಮ ಮೊದಲ ತೀರ್ಥಂಕರರು ಕಾಡಲ್ಲಿ ಹನ್ನೆರೆಡು ವರ್ಷ ತಪಸ್ಸು ಮಾಡಿ, ಊರಿಗೆ ಇದೇ ತದಿಗೆಯ ದಿನ ವಾಪಾಸು ಬಂದರಂತೆ. ಆಗ ಕಬ್ಬಿನ ಹಾಲು ಮಾರುತ್ತಿದ್ದವನೊಬ್ಬ, ಅವನ ಹತ್ತಿರ ಏನೂ ಇಲ್ಲ ಅಂತ, ತೀರ್ಥಂಕರರಿಗೆ ಕಬ್ಬಿನ ಹಾಲು ಕೊಟ್ಟನಂತೆ. ಅಲ್ಲಿಂದ ಮುಂದೆ ಅವನ ವ್ಯಾಪಾರ ಅಭಿವೃದ್ದಿಯಾಯಿತಂತೆ. ಹಾಗಾಗಿ, ಈ ತದಿಗೆಯ ದಿನ ಏನಾದರೂ ದಾನ ಮಾಡಿದರೆ, ಅದು ಅಕ್ಷಯವಾಗುತ್ತೆ ಅಂತ ನಂಬಿಕೆ. ಅದಕ್ಕೇ ನೋಡಿ, ಶ್ರವಣಬೆಳಗೊಳದಲ್ಲಿ ನಾಳೆ ಗೊಮ್ಮಟೇಶ್ವರನಿಗೆ ಕಬ್ಬಿನ ಹಾಲಿನ ಅಭಿಷೇಕ ಇರುತ್ತೆ,’ ಅಂದಳು.

`ಓ... ತೃತೀಯ ಅನ್ನೋದೇ ಸುಳ್ಳು. ಮತ್ತೆ ಚಿನ್ನ ತಗೊಳ್ಳೋದು ಅನ್ನೋ ನಂಬಿಕೆ ಯಾವಾಗ ಬಂತು?’ ಅಂತ ಕೇಳಿದೆ.

`ಗೊತ್ತಿಲ್ಲ ಕಣ್ರಿ.... ರಾಜಸ್ಥಾನದಿಂದ ಮಾರ್ವಾಡಿಗಳು ಚಿನ್ನದ ವ್ಯಾಪರಕ್ಕೆ ಬಂದ್ರಲ್ಲ, ಅದರ ಸಲುವಾಗಿ ಆಗಿರ್ಬೇಕು. ಅದೂ ಇತ್ತೀಚೆಗೆ ಶುರುವಾಗಿದ್ದು,’ ಅಂದಳು.

ಅಕ್ಷಯ ತೃತೀಯಕ್ಕೆ ಒಂದು ತಿಂಗಳಿಂದ ಎಲ್ಲಾ ಚಿನ್ನದ ಅಂಗಡಿಗಳು ಸಿಂಗರಿಸಿಕೊಂಡಿರುತ್ತವೆ. ಎಲ್ಲಾ ಬಗೆಯ ವ್ಯಾಪಾರಿಗಳೂ ಒಂದೊಂದು ಗಿಮಿಕ್ ಮಾಡುತ್ತಿರುತ್ತಾರೆ. ಕಾರು ಕೊಂಡರೂ ಸಹ, ಐದು ಗ್ರಾಂ ಚಿನ್ನ ಉಚಿತ ಅನ್ನೋ ಜಾಹಿರಾತುಗಳು ರೇಡಿಯೋ ಮತ್ತು ಟೀವಿಗಳಲ್ಲಿ ಕೂಗಾಡುತ್ತಿರುತ್ತವೆ. ಅಕ್ಷಯ ತದಿಗೆಯನ್ನು ಅಕ್ಷಯ ತೃತೀಯ ಅಂತ ನಂಬಿದವರ ಜೇಬಿಗೆ ತೂತು ಕೊರೆಯೋ ಯೋಜನೆ ಅಷ್ಟೆ.

ಅದೇ ಯೋಚನೆ ಮಾಡುತ್ತಾ ಇದ್ದೆ. ನಾವೆಲ್ಲ ಓದುವಾಗ, ಯಾರದಾದರೂ ಹುಟ್ಟಿದ ಹಬ್ಬಕ್ಕೆ ಮತ್ತು ಹೊಸ ವರ್ಷಕ್ಕೆ ಗ್ರೀಟಿಂಗ್ ಕಾರ್ಡ್ ಕಳುಹಿಸುವುದು ಒಂದು ವಾಡಿಕೆಯಾಗಿತ್ತು. ನಂತರ, ಯುಗಾದಿ, ಸಂಕ್ರಾಂತಿ ಮತ್ತು ದೀಪಾವಳಿ ಹಬ್ಬಗಳು ಇವಕ್ಕೆ ಸೇರ್ಪಡೆಯಾದವು. ಇವುಗಳ ಸಂಖ್ಯೆ ನಿಧಾನವಾಗಿ ಹೆಚ್ಚಾಗಿದ್ದು ಆರ್ಚೀಸ್ ಅನ್ನೋ ಗ್ರೀಟಿಂಗ್ ಮತ್ತು ಉಡುಗೊರೆಗಳ ಕಂಪನಿ ಭಾರತಕ್ಕೆ ಬಂದ ಮೇಲೆ.
ಹುಟ್ಟಾ ಹುಂಬರಾಗಿ, ನಿಂತಕಾಲಲ್ಲಿ ಯಾರ ಜೊತೆ, ಎಲ್ಲಿ ಬೇಕಾದರೂ ಹೊಡೆದಾಟಕ್ಕೆ ನಿಲ್ಲುವಂತಹ ನಾವು, ಕಾಲೇಜಿನಲ್ಲಿ ಓದುವಾಗ ಹೀರೋಗಳಾಗುವ ಕನಸು ಕಾಣಲೂ ಸಾಧ್ಯವಿರಲಿಲ್ಲ. ಆದರೂ, ವಯಸ್ಸು. ಫುಟ್ ಬಾಲ್, ಬ್ಯಾಸ್ಕೆಟ್ ಬಾಲ್ ಆಡುವಾಗ, ಯಾವುದಾದರೂ ಹುಡುಗಿ ನಮ್ಮ ಕಡೆಗೂ ನೋಡುತ್ತಿರಬಹುದು ಅನ್ನೋ ಆಸೆ. ಕದ್ದು ಮುಚ್ಚಿ ನೋಡಿದರೂ, ನೋಡುತ್ತಿದ್ದಾರೋ, ಇಲ್ಲವೋ ಅನ್ನೋದು ಗೊತ್ತಾಗ್ತಾ ಇರಲಿಲ್ಲ. ಮತ್ತೆ, ಆಗೇನೂ ವ್ಯಾಲೆಂಟೈನ್ಸ್ ಡೇ ಅನ್ನೋದನ್ನ ನಾವು ಕೇಳೇ ಇರಲಿಲ್ಲ. ಆಗೇನಾದ್ರು ಗೊತ್ತಿದ್ದರೆ, ಒಂದು ಪ್ರಯತ್ನ ಮಾಡಬಹುದಿತ್ತೋ, ಏನೋ?

ಆಗೆಲ್ಲ ಕೆಂಪು ಬಟ್ಟೆ ಹಾಕಿದವರನ್ನು ಕೊಂಗ, ತಮಿಳ ಅಂತ ತಮಾಷೆ ಮಾಡ್ತಿದ್ವಿ. ಈಗ ನೋಡಿದರೆ, ವ್ಯಾಲೆಂಟೈನ್ಸ್ ದಿನ ಎಲ್ಲರೂ ಕೆಂಪು ಬಟ್ಟೆಯನ್ನೇ ಹಾಕಿಕೊಂಡು ತಿರುಗುತ್ತಿರುತ್ತಾರೆ. ಹೊಟೆಲ್ ಗಳಿಂದ ಹಿಡಿದು, ಮೊಬೈಲ್, ಚಿನ್ನ, ಪ್ರವಾಸೋದ್ಯಮ..... ಎಲ್ಲಾರೂ ಹೇಳೋದು ಒಂದೆ. `ನಮ್ಮ ಗ್ರಾಹಕರು ಮಾತ್ರ ತಮ್ಮ ಮನದನ್ನೆಯನ್ನು ಹೆಚ್ಚು ಪ್ರೀತಿಸುವುದು,’ ಅಂತ. ಅದನ್ನು ನಂಬಿ ಪಿಗ್ಗಿ ಬಿದ್ದವರ ಸಂಖ್ಯೆ ಎಷ್ಟು ಅನ್ನೋದು, ವ್ಯಾಪಾರಿಗಳು ಜಾಹಿರಾತಿಗೆ ಖರ್ಚು ಮಾಡುವ ಪರಿ ನೋಡಿದರೆ ಗೊತ್ತಾಗುತ್ತೆ.

ಅದಷ್ಟೇ ಅಲ್ಲ. ಪ್ರೇಮಿಗಳ ದಿನದ ಜೊತೆಗೆ, ಅಪ್ಪ, ಅಮ್ಮ, ಮಗ, ಮಗಳು, ಗಂಡ ಮತ್ತು ಹೆಂಡತಿಯ ದಿನಗಳೂ ಹುಟ್ಟಿಕೊಂಡಿವೆ. ವ್ಯಾಪಾರಿಗಳಿಗೆ ಇವೆಲ್ಲ `ಮಿನಿ ಲಾಟರಿಗಳು’ ಅಷ್ಟೆ. ಒಟ್ಟಲ್ಲಿ, ಈ ಹಬ್ಬದಾಚರಣೆಗಳು ಒಂಥರಾ ಹುಚ್ಚು ಮುಂಡೆ ಮದುವೆ ಅಷ್ಟೆ. ಇದರಲ್ಲಿ ಉಣ್ಣೋಕೇನಾದ್ರೂ ಕಲ್ತಿದ್ರೆ, ನಂಗೂ ನಾಕು ಕಾಸು ಸಿಕ್ತಿತ್ತೇನೋ?....



ಮಾಕೋನಹಳ್ಳೀ ವಿನಯ್ ಮಾಧವ


ಗುರುವಾರ, ಏಪ್ರಿಲ್ 5, 2018

ತೇಜಸ್ವಿ



ತೇಜಸ್ವಿ ಮತ್ತು ಅರ್ಥವಾಗದ ವಿಷಯಗಳು



ನಮ್ಮ ಪ್ರೆಸ್ ಕ್ಲಬ್ ನಲ್ಲಿ ಕಾಮ್ರೇಡ್ ನಾಗೇಶ್ ರನ್ನು ನೋಡಿದಾಗಲೆಲ್ಲ ತೇಜಸ್ವಿ ಹೇಳುತ್ತಿದ್ದ ಮಾತುಗಳು ನೆನಪಾಗುತ್ತದೆ : `ಈ ಲೆಫ್ಟಿಸ್ಟ್ ಗಳು ಇದ್ದಾರಲ್ಲ, ಒಂಥರಾ ಭ್ರಮೆಯಲ್ಲಿರ್ತಾರೆ. ರಾತ್ರಿ ಪೂರ ಕುಡ್ದು, ನಾಳೆ ಬೆಳಗ್ಗೆಯಿಂದ ಕ್ರಾಂತಿ ಶುರುವಾಗುತ್ತೆ ಅಂತ ವಾದ ಮಾಡಿ, ಮನೆಗೆ ಹೋಗಿ ಮಲಗಿ, ಬೆಳಗ್ಗೆ ಹ್ಯಾಂಗ್ ಓವರ್ ನಲ್ಲಿ ಏಳ್ತಾರೆ. ಮತ್ತೆ ಅವತ್ತು ಕೂಡಾ ಅದೇ ಕಥೆಯಾಗಿರ್ತದೆ’.

ನಮ್ಮ ಪ್ರೆಸ್ ಕ್ಲಬ್ ನಲ್ಲಿ ಎಡ ಪಂಥೀಯರ ಸಂಖ್ಯೆ ಕಡಿಮೆಯಾದರೂ, ಪೂರ್ತಿ ನಶಿಸಿ ಹೋಗಿಲ್ಲ. ಹಾಗಂತ ಬಲ ಪಂಥೀಯರೇ ತುಂಬಿ ಹೋಗಿದ್ದಾರೆ ಅಂತ ನನಗನ್ನಿಸೋದಿಲ್ಲ. ಮುಂಚೆ ಎಡ ಪಂಥೀಯರಾಗಿದ್ದವರೆಲ್ಲ ಈಗ ಅವರವರ ಜಾತಿ ಪಂಥೀಯರಾದಂತೆ ಅನ್ನಿಸೋಕೆ ಶುರುವಾಗಿದೆ.

ಆದರೆ ನಮ್ಮ ನಾಗೇಶ್ ಒಂಥರಾ.... ಪೂರ್ತಿ ಎಡ ಪಂಥೀಯರಲ್ಲ. ಆದರೆ, ಬಲ ಪಂಥೀಯ ದ್ವೇಷಿ ಅಂತ ಹೇಳಬಹುದು. ಜಾತಿವಾದಿಯೂ ಅಲ್ಲ. ಯಾರ ಮಾತನ್ನೂ ಅಷ್ಟು ಸುಲಭವಾಗಿ ಒಪ್ಪಿಕೊಳ್ಳೋ ಸ್ವಭಾವವಲ್ಲ. ಯಾರಿಗೂ ಹಾನಿ ಮಾಡುವುದಿಲ್ಲ. ಆಗಾಗ, ಬೇಡದ ಕೆಲಸ ಮಾಡಲು ಕೈ ಹಾಕಿ, ಸೆಲ್ಫ್ ಗೋಲ್ ಹೊಡ್ಕೊಳೋ ಗಿರಾಕಿ. ಇತ್ತೀಚೆಗೆ ನಾಗೇಶ್ ಅದೇ ಥರ ಸೆಲ್ಫ್ ಗೋಲ್ ಹೊಡ್ಕೊಂಡಾಗ, ತೇಜಸ್ವಿಯವರು ಮೈಸೂರಿನಲ್ಲಿ ಉದಯ ರವಿ ಪ್ರೆಸ್ ಮಾಡಿದ ಘಟನೆ ನೆನಪಾಯ್ತು. ನಮ್ಮ ನಾಗೇಶ್, ಒಂಥರಾ....

ನಾಗೇಶ್ ಬೆಳೆದು ಬಂದ ದಾರಿಯಲ್ಲಿ ಎಡವಿಕೊಂಡದ್ದು ಸಾಹಿತಿಗಳು ಮತ್ತು ರೈತ ಚಳುವಳಿಗಳಿಗೆ. ಚಿಕ್ಕ ವಯಸ್ಸಿನಲ್ಲೇ, ಪ್ರೊಫೆಸರ್ ನಂಜುಂಡಸ್ವಾಮಿಯವರಿಗೆ ಮಾರು ಹೋಗಿ, ಇನ್ನೂ ಅವರ ಗುಂಗಿನಿಂದ ಹೊರಬರಲಾಗದೇ ಇರುವವರಲ್ಲಿ, ನಾಗೇಶ್ ಕೂಡ ಒಬ್ಬರು. ರೈತ ಸಂಘದ ಎಷ್ಟೋ ಬೆಳವಣಿಗೆಗಳನ್ನು ಹತ್ತಿರದಿಂದ ಮೂಕಪ್ರೇಕ್ಷಕರಾಗಿ ನೋಡಿರುವವರು. ಯಾಕಂದರೆ, ಆಗ ಇವರಿಗೆ ಇನ್ನೂ ನಾಯಕರಾಗುವ ವಯಸ್ಸಾಗಿರಲಿಲ್ಲ.

ಹೀಗೇ ಮಾತಾಡ್ತಾ ಇದ್ದಾಗ, ನಾಗೇಶ್ ರೈತ ಸಂಘದ ಒಂದು ಕಥೆ ಹೇಳಿದ್ದರು. 1983 ರ ಸಮಯದಲ್ಲಿ, ತೇಜಸ್ವಿಯವರು ಸಹ ರೈತ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಆಗ, ರೈತ ಸಂಘವು  ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಮಾಡಿತ್ತು. ಬೆಂಗಳೂರಿನ ಗಾಂಧಿ ಭವನದಲ್ಲಿ ಸಭೆಯಲ್ಲಿ ಪ್ರೊಫೆಸರ್, ತೇಜಸ್ವಿ ಸೇರಿದಂತೆ, ಎಲ್ಲಾ ರೈತ ಸಂಘದ ನಾಯಕರೂ ಸೇರಿದ್ದರು. ಪ್ರೊಫೆಸರ್ ಮತ್ತು ತೇಜಸ್ವಿಯವರು ವೇದಿಕೆ ಮೇಲೆ ಕುಳಿತಿದ್ದರು.

ಭಾಷಣಗಳು ನೆಡೆಯುತ್ತಿದ್ದಾಗ, ತೇಜಸ್ವಿಯವರು ಶೌಚಾಲಯದ ಕಡೆಗೆ ಹೋಗಲೆಂದು ವೇದಿಕೆಯ ಕೆಳಗೆ ಇಳಿದರಂತೆ. ಬಾಗಿಲ ಹತ್ತಿರ ಒಂದಿಬ್ಬರು ತೇಜಸ್ವಿಯವರನ್ನು ತಡೆದು, `ಸರ್, ನೀವು ವೇದಿಕೆಯ ಮೇಲೆ ಹೋಗಿ. ಆ ಕಡೆ ಬೇರೇನೇ ಚರ್ಚೆ ನೆಡೆಯುತ್ತಿದೆ. ಲಿಂಗಾಯಿತರೆಲ್ಲ ಸೇರಿ, ನಮ್ಮ ಸರ್ಕಾರದಲ್ಲಿ ನಂಜುಂಡಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡ್ಬೇಕೂಂತ ಕೂತಿದ್ದಾರಂತೆ. ಒಕ್ಕಲಿಗರೆಲ್ಲ ನಿಮ್ಮನ್ನು ಮಾಡ್ಬೇಕೂಂತ ಇದ್ದೀವಿ. ನೀವು ಕೆಳಗೆ ಬಂದರೆ, ಲಿಂಗಾಯಿತರು ನಂಜುಂಡಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವ ವಿಷಯದಲ್ಲಿ ನಿಮ್ಮನ್ನು ಒಪ್ಪಿಸಿಬಿಡುವ ಸಾಧ್ಯತೆ ಇದೆ. ನೀವು ಮೇಲೆ ಇದ್ದರೆ, ಉಳಿದ ವಿಷಯವನ್ನು ನಾವು ನಿಭಾಯಿಸಿಕೊಳ್ಳುತ್ತೇವೆ,’ ಅಂದರಂತೆ.

`ತಾಳ್ರಯ್ಯ... ರೀಸಸ್ ಗೆ ಹೋಗಿ ಬಂದು ಬಿಡ್ತೀನಿ. ಆಮೇಲೆ ನೀವು ಹೇಳಿದ ಹಾಗೇ ಮಾಡೋಣ,’ ಅಂತ ಹೊರಗಡೆ ಹೋದ ತೇಜಸ್ವಿ, ಅಲ್ಲೇ ಒಂದು ಕುರ್ಚಿಯ ಮೇಲೆ ತಮ್ಮ ಹೆಗಲಲ್ಲಿದ್ದ ಹಸಿರು ಶಾಲನ್ನು ಇಟ್ಟು, ಸಭೆ ಮುಗಿಯುವ ಹೊತ್ತಿಗೆ ಮೂಡಿಗೆರೆ ಸೇರಿಕೊಂಡರಂತೆ.

ಮಾರನೇ ದಿನ ಪ್ರೋಫೆಸರ್ ನಂಜುಂಡಸ್ವಾಮಿ ಫೋನ್ ಮಾಡಿದಾಗ, `ಅಲ್ಲಾಕಣ್ರಿ, ಇನ್ನೂ ಎಲೆಕ್ಷನ್ ಗೆ ನಿಂತಿಲ್ಲ, ಗೆದ್ದಿಲ್ಲ. ಈಗ್ಲೇ ಸಂಘದಲ್ಲಿ ಯಾವ ಜಾತಿಯವರು ಮುಖ್ಯಮಂತ್ರಿ ಆಗ್ಬೇಕೂಂತ ಶುರುವಾದ್ರೆ, ರೈತರು ಉದ್ದಾರ ಕಣ್ರಿ. ನಾನು ಸಂಘದ ಕಡೆ ಬರೋಲ್ಲ,’ ಅಂತ ಫೋನ್ ಕುಕ್ಕಿದರಂತೆ. ಆಮೇಲೆಂದೂ ಅವರು ರೈತ ಸಂಘದ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲವಂತೆ.

 ಈ ವಿಷಯ ಮೊನ್ನೆ ಹಿಂದೂ ದಿನಪತ್ರಿಕೆಯ ಮುರಳೀಧರ ಖಜಾನೆ ಜೊತೆ ಮಾತನಾಡುವಾಗ ಈ ವಿಷಯ ಬಂತು. ಎಡ ಪಂಥ ಮತ್ತು ರೈತ ಚಳುವಳಿಯ ಹಿನ್ನೆಯಲ್ಲಿ ಬಂದ ಖಜಾನೆಗೆ ಸಿಟ್ಟೇ ಬಂದಿತು. `ಯಾರೋ, ಏನೋ ಮಾತಾಡಿದ್ರು ಅಂತ ಶಾಲು ಎಸೆದು ಹೋಗ್ಬಿಟ್ರೆ, ಅವ್ರನ್ನ ನಂಬಿಕೊಂಡು ಬಂದವರೆಲ್ಲ ಎಲ್ಲಿಗೆ ಹೋಗಬೇಕು? ಅದೇ ವಿಷಯದಲ್ಲಿ ನಾನು ತೇಜಸ್ವಿ ಜೊತೆ ಒಂದೆರೆಡು ಸಲ ಜಗಳ ಆಡಿದ್ದೇನೆ,’ ಅಂದ.

`ಅವ್ರನ್ನ ನಂಬ್ಕೊಂಡು ಯಾರಯ್ಯ ಅಲ್ಲಿ ಬಂದಿದ್ದವರು? ಅದೊಂದು ಚಳುವಳಿ ಮತ್ತೆ ಎಲ್ಲರಿಗೂ ಅವರದೇ ಆದ ಆಕಾಂಕ್ಷೆಗಳಿರ್ತವೆ. ಹಾಗಾಗಿ ಬಂದಿರ್ತಾರೆ ಅಷ್ಟೆ. ತೇಜಸ್ವಿಗೆ ಇಷ್ಟ ಆಗಲಿಲ್ಲ ಎದ್ದು ಹೋದ್ರು. ಆಮೇಲೆ ಶಾಮಣ್ಣನ್ನ (ಕಡಿದಾಳ್) ಕಂಡ್ರೆ ಪ್ರೊಫೆಸರ್ ಗೆ ಇಷ್ಟ ಆಗ್ಲಿಲ್ಲ  ಅಂತ ಸಂಘದಿಂದ ಹೊರಗೆ ಹಾಕಿರ್ಲಿಲ್ವಾ? ಅದಕ್ಯಾಕೆ ನೀನು ಸಿಟ್ಟಾಗ್ಬೇಕು?’ ಅಂತ ಕೇಳಿದೆ.

`ಅಲ್ಲ ಮಾರಾಯ... ನಂಬಿ ನಾಯಕತ್ವ ಕೊಟ್ಟಿರ್ತೀವಿ. ಇಷ್ಟ ಇಲ್ಲ ಅಂತ ಮಧ್ಯದಲ್ಲಿ ಎದ್ದು ಹೋದರೆ? ನಾವೆಲ್ಲ ಎಷ್ಟು ತೊಂದರೆಗೊಳಗಾದ್ವಿ ಅಂತ ನಿಂಗೆ ಗೊತ್ತಾ. ರೈತ ಚಳುವಳಿ ಹಾಳಾಗಿದ್ದೇ ಹೀಗೆ. ನಾಯಕತ್ವ ವಹಿಸಿಕೊಂಡವರೆಲ್ಲ ಮಧ್ಯದಲ್ಲಿ ಎದ್ದು ಹೋದರೆ, ರೈತರು ಏನು ಮಾಡ್ಬೇಕು?’ ಅಂತ ಕೂಗಾಡೋಕೆ ಶುರು ಮಾಡಿದ.

`ಅಲ್ಲಾ ಮಾರಾಯ... ತೇಜಸ್ವಿ ಚಳುವಳಿಗೆ ಅನಿವಾರ್ಯ ಅಂತ ನಿನಗ್ಯಾರು ಹೇಳಿದ್ರು? ಯಾವುದೇ ಚಳುವಳಿಗೆ ಯಾರೂ ಅನಿವಾರ್ಯವಲ್ಲ. ಅವರು ಹೋದರೆ, ನೀನೇ ನಾಯಕತ್ವ ವಹಿಸಿಕೋಬೇಕಿತ್ತು. ನೀನೇ ಸರ್ಕಾರನ ಪ್ರಶ್ನಿಸಬೇಕಿತ್ತು. ನಾಯಕರು ಅನ್ನಿಸಿಕೊಳ್ಳೋರು ಒಂದು ಮೇಲ್ಪಂಕ್ತಿ ಹಾಕಿ ಕೊಡ್ತಾರೆ ಅಷ್ಟೆ. ಇನ್ನುಳಿದ ಹಾಗೆ, ಜನಗಳು ಅದನ್ನು ಮುಂದುವರೆಸಿಕೊಂಡು ಹೋಗಬೇಕು. ಒಬ್ಬ ನಾಯಕ ಹೋದರೆ, ಆ ಜಾಗಕ್ಕೆ ಇನ್ನೊಬ್ಬ ಬರಬೇಕು. ಇಲ್ಲದೇ ಹೋದರೆ, ಅದು ಸಂಘಟನೆ ಅಂತ ಅನ್ನಿಸಿಕೊಳ್ಳೋದಿಲ್ಲ. ರೈತ ಸಂಘ ಮುಳುಗೋಕೆ ಇನ್ನೂ ಹತ್ತಾರು ಕಾರಣಗಳಿವೆ,’ ಅಂದೆ.

`ನಾವು ಅನುಭವಿಸಿದ ನೋವು ನಿನಗೆ ಹೇಗೆ ಅರ್ಥವಾಗಬೇಕು?’ ಅಂತ ಗೊಣಗುತ್ತಾ ಖಜಾನೆ ಮಾತು ಮುಗಿಸಿದ. ಖಜಾನೆ ಹೇಳಿದ್ದು ಸರಿಯಾಗಿತ್ತು. ನನಗಿಂತ ವಯಸ್ಸಿನಲ್ಲಿ ಹಿರಿಯನಾದ ಖಜಾನೆ, ಚಳುವಳಿಗಳನ್ನು ತುಂಬಾ ಹಚ್ಚಿಕೊಂಡಿದ್ದ. ಆ ನೋವು ನನಗೆ ಅರ್ಥವಾಗುವ ಸಾಧ್ಯತೆ ಬಹಳ ಕಡಿಮೆ.

ತೇಜಸ್ವಿಯವರು ಯಾವುದೇ ತತ್ವ ಸಿದ್ದಾಂತಗಳಿಗೆ ಅಂಟಿಕೊಂಡಿದ್ದು ನಾನು ನೋಡಿಲ್ಲ. ಉದಯ ರವಿಯ ಮೇಲೆ ಎಬಿವಿಪಿ ಹುಡುಗರು ದಾಳಿ ಮಾಡಿದ ಸಮಯದಿಂದ, ಬಲ ಪಂಥೀಯರ ವಿಷಯದಲ್ಲಿ ಕಟು ನಿಲುವು ತೆಗೆದುಕೊಂಡರೂ, ಅದಕ್ಕೋಸ್ಕರ ಎಡ ಪಂಥಕ್ಕೆ ವಾಲಿದವರಲ್ಲ. ಅವರ ಹೊಸ ವಿಚಾರಗಳು ಸಂಕಲನವನ್ನು ಓದುವಾಗ, ಎಲ್ಲರನ್ನೂ ಎಗ್ಗಿಲ್ಲದೆ ಟೀಕಿಸುವ ಅವರ ಸ್ವಭಾವ ಅರ್ಥವಾಗುತ್ತದೆ.

ಮೂಡಿಗೆರೆಯ ಕಮ್ಯುನಿಸ್ಟ್ ನಾಯಕ ದಿವಂಗತ ಬಿ ಕೆ ಸುಂದರೇಶ್ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದರೂ, ಹೊಸ ವಿಚಾರಗಳಲ್ಲಿ ಕಾರ್ಲ್ ಮಾರ್ಕ್ಸ್ ನ ವಿಚಾರಧಾರೆಯನ್ನು ಅಧ್ಬುತವಾಗಿ ವಿಮರ್ಶಿಸಿದ್ದಾರೆ. ಅವರ ಪ್ರಕಾರ, ಕಾರ್ಲ್ ಮಾರ್ಕ್ಸ್ ತತ್ವ ಹುಟ್ಟುತ್ತಲೇ ಸೋತಿತ್ತು. ಯಾಕಂದರೆ, ಆ ತತ್ವವು ಆಗಿನ ಕಾಲದಲ್ಲಿ ಕೈಗಾರಿಕರಣ ಹೊಂದಿದ್ದ ಯೂರೋಪ್ ನ ಇಂಗ್ಲೆಂಡ್, ಫ್ರಾನ್ಸ್ ಮತ್ತು ಅಮೆರಿಕಾ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಬೇಕಿತ್ತು. ಅಲ್ಲಿ ಆಳುವವರ ಮತ್ತು ಆಳಿಸಿಕೊಳ್ಳುವವರ ಅಂತರ ಹೆಚ್ಚಾಗಿತ್ತೇ ಹೊರತು, ರಷ್ಯಾ, ಚೈನಾ ಮತ್ತು ದಕ್ಷಿಣ ಅಮೆರಿಕಾ ದೇಶಗಳಲಲ್ಲ. ಹಾಗಾಗಿ, ಅದು ಸಲ್ಲದ ಪ್ರದೇಶಗಳಲ್ಲಿ ಮಾತ್ರ ಪ್ರಭಲವಾಗಿ ಹರಡಿ, ಆ ದೇಶದ ಸ್ಥಿತಿಗತಿಗಳನ್ನೂ ಹಾಳು ಮಾಡಿತ್ತು.

ಎಡ-ಬಲಗಳನ್ನು ತಿರಸ್ಕರಿಸಿದ ಮಾತ್ರಕ್ಕೆ, ಕಾಂಗ್ರೆಸ್ ಅಥವಾ ಜನತಾ ಪಕ್ಷಗಳಿಗೆ ಮಣೆ ಹಾಕಲೂ ಹೋಗಲಿಲ್ಲ. ದೇಶವನ್ನು ಅಧಿಕಾರಶಾಹಿಗಳ ತೆಕ್ಕೆಗೆ ದೂಡಿದವರೇ ಈ ಎರಡೂ ಪಕ್ಷಗಳು ಅನ್ನೋದು ಅವರ ವಿಚಾರವಾಗಿತ್ತು. ಅದು ವಾಸ್ತವ ಕೂಡ. ಹೊಸ ವಿಚಾರಗಳಲ್ಲಿ, ಭೂ ಸುಧಾರಣೆ ಹರಿಕಾರ ಎಂದೇ ಹೆಸರಾಗಿರುವ ದಿ. ದೇವರಾಜ್ ಅರಸು ಅವರನ್ನು ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಂಡಿರುವುದನ್ನೂ ಕಾಣಬಹುದು. ಅರಸುರವರನ್ನು ಟೀಕಿಸುವುದು ಎಂದರೆ ಇಂದಿಗೂ ಊಳಿಗಮಾನ್ಯ ಪದ್ದತಿಯನ್ನು ಪ್ರತಿಪಾದಿಸುವುದು ಎಂದೇ ಭಾವಿಸುತ್ತಾರೆ. ತೇಜಸ್ವಿಯವರನ್ನು ಬಿಟ್ಟರೆ, ಅರಸುರವರನ್ನು ಟೀಕಿಸಿದವರು ಕೇಶವರೆಡ್ಡಿ ಹಂದ್ರಾಳ ಮಾತ್ರ ಅಂತ ನನಗನ್ನಿಸುತ್ತದೆ.

ನಂತರದ ದಿನದಲ್ಲಿ, ಲಂಕೇಶರ ಜೊತೆ ಸೇರಿ ಪ್ರಗತಿರಂಗ ಅನ್ನೊ ಸಂಘ ಕಟ್ಟಿದರೂ, ಅದು ಕಡಿದು ಕಟ್ಟೆ ಹಾಕಿದ್ದು ಅಷ್ಟರಲ್ಲೇ ಇದೆ. ಕೊನೆಗೂ, ಇವರ ರಾಜಕೀಯ ನಿಲುವೇನು ಅನ್ನೋದು ನನಗೆ ಅರ್ಥವಾಗಲೇ ಇಲ್ಲ. ಆರ್ಥಿಕ ಉದಾರೀಕರಣ ಸಾಮಾಜಕ್ಕೆ ಪಿಡುಗು ಅನ್ನೋದನ್ನು ಹೇಳುತ್ತಲೇ, ಅದೊಂದು ಅನಿವಾರ್ಯ ಭೂತ ಮತ್ತು ಅದರಲ್ಲಿ ನಮ್ಮದೇ ಆದ ಸ್ಥಾನಮಾನ ಕಂಡುಕೊಳ್ಳುವ ಅನಿವಾರ್ಯತೆ ಇದೆ ಅಂತ ಹೇಳಿದ್ದರು.

ಒಮ್ಮೆ ತೇಜಸ್ವಿಯವರನ್ನು ಹೆಮಿಂಗ್ವೆಗೆ ಹೋಲಿಸಿ ಬರೆದ ಲೇಖನವನ್ನು ಓದಿದ್ದೆ. ಹಾಗೇ ಅದರ ವಿಷಯವನ್ನು, ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ನನ್ನ ಹಿರಿಯರಾಗಿದ್ದ ನಚ್ಚಿಯವರ ಜೊತೆ ಪ್ರಸ್ತಾವಿಸಿದೆ. `ಇಲ್ವೋ ಮಾಕೋನಹಳ್ಳಿ... ಅವರಿಬ್ಬರನ್ನು ಒಂದೇ ತಕ್ಕಡಿಗೆ ಹಾಕಿ ತೂಗೋಕೆ ಆಗೋದಿಲ್ಲ. ಇಬ್ಬರೂ ಬದುಕಿದ ರೀತಿಗಳೇ ಬೇರೆ. ಹೆಮಿಂಗ್ವೆ ಹೆಮಿಂಗ್ವೆನೇ, ತೇಜಸ್ವಿ ತೇಜಸ್ವಿನೇ,’ ಅಂತ ಹೇಳಿದರು. ಅವತ್ತು ಆ ಮಾತು ನನಗಿಷ್ಟವಾಗಿರಲಿಲ್ಲ. ಕೆಲವು ವರ್ಷಗಳ ಮೇಲೆ, ನಚ್ಚಿ ಹೇಳಿದ್ದು ಸರಿ ಅಂತ ಅನ್ನಿಸ್ತು.

ಜೀವನದಲ್ಲಿ ಅರ್ಥವಾಗದ ವಿಷಯಗಳು ಎಷ್ಟೋ ಇರುತ್ತವೆ. ಕೆಲವೊಮ್ಮೆ, ಅರ್ಥವಾಗಿಯೂ, ಅರ್ಥವಾಗದೇ ಇರುವ ವಿಷಯಗಳೂ ಇವೆ. ಅದು ಗ್ರಹಿಕೆಯ ಲೋಪವೋ, ಅಥವಾ ಅರ್ಥವಾಗಿದೆ ಅನ್ನೋ ತಪ್ಪು ಗ್ರಹಿಕೆಯೋ ಅನ್ನುವುದೇ ಒಂದು ಗೊಂದಲದ ಗೂಡು.

ನನ್ನ ಅಭಿಪ್ರಾಯದಲ್ಲಿ, ಮನುಷ್ಯನನ್ನು ಹೆಚ್ಚಾಗಿ ಕಾಡುವ ವಿಷಯಗಳೆಂದರೆ, ಮೌನ ಮತ್ತು ಸಾವು. ಕಾಡಿನಲ್ಲಿ ಒಬ್ಬನೇ ಕುಳಿತು, ಶೂನ್ಯದತ್ತ ದೃಷ್ಟಿ ನೆಟ್ಟು, ಮೌನದ ನೀರವತೆಯನ್ನು ಅನುಭವಿಸುವುದರಿಂದ ಅಪಾರ ಮನಶಾಂತಿ ದೊರಕುತ್ತದೆ ಅನ್ನೋದು ನನ್ನ ಅಭಿಪ್ರಾಯ. ಅದನ್ನು ತೇಜಸ್ವಿಯವರು ಅಪಾರವಾಗಿ ಅನುಭವಿಸಿದ್ದರು.

ಅದೇ, ಸಾವಿನ ಬಗ್ಗೆ ಯೋಚನೆ ಮಾಡಿದರೆ, ಗೊಂದಲಗಳೇ ಹೆಚ್ಚಾಗುತ್ತದೆ. ಅಮರ ಅನ್ನೋ ಪದಕ್ಕೆ ಅರ್ಥ ಹುಡುಕೋಕೆ ಹೋಗೋದು ಒಂದು ಸಾಹಸವೇ ಸರಿ.

ಹನ್ನೊಂದು ವರ್ಷಗಳ ಕೆಳಗೆ, ಏಪ್ರಿಲ್ ಒಂದನೇ ತಾರೀಖಿನಂದು ಎಷ್ಟು ನಕ್ಕಿದ್ದೆನೋ ಏನೋ? ಮೂರ್ಖರ ದಿನವಲ್ಲವೇ ಅದು? ಆದರೆ, ಇನ್ನೂ ನಾಲ್ಕು ದಿನಗಳ ನಂತರ ದೊಡ್ಡ ಮೂರ್ಖನಾಗುವೆ ಅನ್ನೋದು ಗೊತ್ತಿರಲಿಲ್ಲ. ತೇಜಸ್ವಿಯವರ ಮಾಯಾ ಲೋಕದ ಎರಡನೇ ಭಾಗಕ್ಕಾಗಿ ಕಾಯುತ್ತಿದ್ದ ಕಾಲ ಅದು. ಒಂದು ಗುಡ್ ಬೈನೂ ಹೇಳದೆ ಹೋಗಿಬಿಟ್ಟರು.
ಸಾವೇ ಕೊನೆಯಾಗಿದ್ದರೆ, ಅವತ್ತೇ ತೇಜಸ್ವಿಯೂ ನಮ್ಮೆಲ್ಲರ ಜೀವನದಿಂದ ಹೊರಗಾಗಬೇಕಿತ್ತು. ಪ್ರಕೃತಿ, ಪರಿಸರ, ವಿಕಾಸ, ವಿಜ್ಞಾನ, ದಿನ ನಿತ್ಯದ ಜೀವನ, ರಾಜಕೀಯ, ರೈತರ ಬವಣೆ ಎಲ್ಲವನ್ನೂ ಸರಳವಾಗಿ ಜನರ ಮನ ಮುಟ್ಟುವಂತೆ ಬರೆದು, ಹಾಗೇ ನಮ್ಮೊಳಗೆ ಉಳಿದುಕೊಂಡರು. ಹಾಗೇಕೆ? ಸಾವಿನ ನಂತರವೂ ತೇಜಸ್ವಿ ನನ್ನ ಜೀವನದಿಂದ ಏಕೆ ಮಾಸಿ ಹೋಗಿಲ್ಲ ಅಂತ ಎಷ್ಟೋ ಸಲ ನನ್ನನ್ನು ನಾನೇ ಕೇಳಿಕೊಂಡಿದ್ದೇನೆ. ಉತ್ತರ ಇನ್ನೂ ಸಿಕ್ಕಿಲ್ಲ.

ಜೀವನದಲ್ಲಿ ನನಗರ್ಥವಾಗದ ವಿಷಯಗಳ ಪಟ್ಟಿ ದೊಡ್ಡದಿದೆ. ಅದರಲ್ಲಿ ಒಂದು.... ತೇಜಸ್ವಿ.


ಮಾಕೋನಹಳ್ಳಿ ವಿನಯ್ ಮಾಧವ