ಮಂಗಳವಾರ, ನವೆಂಬರ್ 22, 2011

ಹನುಮಮ್ಮ

ವಿನ್ಯೂ, ಬಪ್ಪ ಓಗಾನಾ…..

ಅಂಬಿಕಾಳ ಧಾವಂತ ನೋಡಿ, ಒಳಗೊಳಗೇ ಕೆಟ್ಟ ಖುಷಿ ಅನುಭವಿಸುತ್ತಿದ್ದೆ. ಸಾಧಾರಣವಾಗಿ, ಅಂಬಿಕಾಳನ್ನು ನಾನು ಹೆಚ್ಚು ಕೆಣಕುವುದಿಲ್ಲ. ಸೆನ್ಸಿಟಿವ್ ಅಂತ ಸುಮ್ಮನಾಗಿಬಿಡುತ್ತೇನೆ. ಈ ಸಲ ಮಾತ್ರ, ಏನಾದರಾಗಲಿ ನೋಡೇಬಿಡೊಣ ಅಂತ ಎಡಬಿಡದೆ, ಎರಡು ದಿನದಿಂದ ಕಾಡಿದ್ದೆ.
``ನಂಗೆ ಈ ಥರ ಸಸ್ಪೆನ್ಸ ಇಷ್ಟ ಆಗೋಲ್ಲ’’ ಅಂತ ಗೊಣಗಿದಳು. ``ಒಂದ್ಸಲ ಅವಳನ್ನು ನೋಡಮ್ಮ. ತುಂಬಾ ಒಳ್ಳೆಯವಳು. ನಿನಗೇ ಇಷ್ಟ ಆಗ್ತಾಳೆ,’’ ಅಂದೆ. ಏನೇ ಹೇಳಿದರೂ, ಗಂಡನ ಹಳೇ ಗೆಳತಿಯನ್ನು ಒಪ್ಪಿಕೊಳ್ಳಲು ಅಂಬಿಕಾ ತಯಾರಿರಲಿಲ್ಲ.
ಆಯುಧ ಪೂಜೆಗೆ ಊರಿಗೆ ಹೋಗುವಾಗ, ಅರಕಲಗೂಡಿನ ಹತ್ತಿರ ನನ್ನ ಹಳೇ ಗೆಳತಿಯನ್ನು ಕಾಣಲು ಹೋಗುತ್ತೇವೆ ಎಂದು ಹೇಳಿದ್ದೆ. ಎಷ್ಟೇ ಕಾಡಿದರೂ, ಅವಳು ಯಾರು ಎಂಬ ವಿವರಗಳನ್ನು ಮಾತ್ರ ಕೊಡಲಿಲ್ಲ. ನನ್ನ ಗೆಳತಿಗೆ ಒಂದು ಸೀರೆಯನ್ನು ತೆಗೆಯುವ ಜವಾಬ್ದಾರಿಯನ್ನೂ ಅಂಬಿಕಾಳಿಗೆ ವಹಿಸಿದ್ದೆ. ಅದು ಅವಳಿಗೆ  ಕಿರಿಕಿರಿಯಾಗಿದ್ದು.
ಆದರೂ ಗುಟ್ಟು ರಟ್ಟಾಗಿಯೇಬಿಟ್ಟಿತ್ತು. ಹೊರಡುವ ಹಿಂದಿನ ದಿನ, ಆಫೀಸಿನಲ್ಲಿ ಗಡಿಬಿಡಿಯಲ್ಲಿದ್ದಾಗ ಅಂಬಿಕಾ ಫೋನ್ ಮಾಡಿದಳು. ``ಸೀರೆ ತೆಗೆಯಲು ಹೇಳಿದ್ದರಲ್ಲ, ಯಾವ ವಯಸ್ಸಿನವರಿಗೆ ತೆಗೆಯಬೇಕು?’’ ಅಂತ ಕೇಳಿದಳು. ಗಡಿಬಿಡಿಯಲ್ಲಿದ್ದ ನಾನು, ``ನಿಮ್ಮಮ್ಮನ ವಯಸ್ಸು ಅಂತ ತಿಳ್ಕೊ,’’ ಅಂದೆ. ತಕ್ಷಣ ನಾಲಿಗೆ ಕಚ್ಚಿಕೊಂಡರೂ, ತಡವಾಗಿತ್ತು.
ಹನುಮಮ್ಮ…. ನಾಳೆ ಸಿಕ್ಕಿದಾಗ ಹೇಗೆ ರಿಯಾಕ್ಟ ಮಾಡ್ತಾಳೆ? ನನ್ನ ಮಗಳು ಸೃಷ್ಟಿಯನ್ನು ನೋಡಿದಾಗ  ಏನು ಹೇಳಬಹುದು? ಅಂತ ಯೋಚನೆಗಳು ಬಂದವು. ಹಾಗೆಯೆ, ದಿನೇಶ್ ಮತ್ತು ಸುರೇಶ್ ಹೇಳಿದ್ದು ಸುಳ್ಳಾಗಿದ್ದರೇ? ಅಂತಾನೂ ಅನ್ನಿಸದಿರಲಿಲ್ಲ.
ಮೂವತ್ತೆರಡು ವರ್ಷದಮೇಲಾಗಿದೆ… ಹನುಮಮ್ಮನನ್ನು ನೋಡಿ. ಯಾಕೋ ಏನೋ, ಇತ್ತೀಚೆಗೆ ತುಂಬಾ ನೆನಪಾಗುತ್ತಿದ್ದಳು. ಅದಕ್ಕೆ ಕಾರಣವೂ ಇತ್ತು. ಪ್ರೆಸ್ ಕ್ಲಬ್ ನಲ್ಲಿ ಕೆಲಸ ಮಾಡುವ ದಿನೇಶನು ಕೇರಳಾಪುರದವನು ಅಂತ ಗೊತ್ತಾದಕೂಡಲೆ ನಾನು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಹನುಮಮ್ಮನ ಬಗ್ಗೆ ಕೇಳಿದೆ. ಈಗ ವಿಚಾರಿಸುತ್ತೀನಿ.. ನಾಳೆ ಊರಿಗೆ  ಹೋಗುತ್ತಿದ್ದೀನಿ ಅಂತ ಕಥೆ ಹೇಳುತ್ತಾ ಎರಡು ವರ್ಷ ಕಳೆದಿದ್ದ.  ಕೊನೆಗೆ ಒಂದು ದಿನ ``ಅಲ್ಲೇ ಇದ್ದಾಳಣ್ಣ. ಹೊಳಿ ಕಡಿಗಿ ಜನತಾ ಮನೆ ಮಾಡಿಕೊಂಡು ಇದ್ದಾಳೆ. ಬೇಕಾದರೆ  ಸುರೇಶನನ್ನು ಕೇಳಣ್ಣ,’’ ಅಂದ. ಸರಿ, ಇದ್ದಾಳಲ್ಲ. ಹೋಗಿ ನೋಡಲೇಬೇಕು ಅಂದುಕೊಂಡು ಅಂಬಿಕಾಳನ್ನು ಕಾಡಲು ಆರಂಭಿಸಿದೆ.
ಅಣ್ಣನಿಗೆ ಕೇರಳಾಪುರಕ್ಕೆ ವರ್ಗವಾದಾಗ ನನಗೆ ಒಂಬತ್ತು ವರ್ಷವಾಗಿತ್ತು ಅಂತ ಕಾಣುತ್ತೆ. ವೆಂಕಟೇಶಣ್ಣನನ್ನು ಶಿವಮೋಗ್ಗದಲ್ಲಿ ದೊಡ್ಡಮ್ಮನ ಮನೆಗೆ ಓದಲು ಕಳುಹಿಸಿದ್ದರು. ಸಕಲೇಶಪುರದ ಕಾನ್ವೆಂಟ್ ನಿಂದ ಬಂದು ಬಯಲುಸೀಮೆಯ ಹಳ್ಳಿಯ ಸರಕಾರಿ ಶಾಲೆಗೆ ಸೇರಿದಾಗ, ನನಗೊಂತರಾ `ಕಲ್ಚರಲ್ ಶಾಕ್’ ಆಯಿತು. ಆದರೆ, ಬೇಗನೇ ಹೊಂದಿಕೊಂಡೆ. ಆದರ ಪರಿಣಾಮವಾಗಿ, ಒಂದಿನ ಸ್ನೇಹಿತನೊಬ್ಬನಿಗೆ `ನಿನ್ನಯ್ಯನ್’ ಅಂತ ಹೇಳಿದಾಗ, `ಕಲ್ಚರಲ್ ಶಾಕ್’ ಅಮ್ಮನಿಗೆ ವರ್ಗಾವಣೆಯಾಗಿ, ನಾನು ಸ್ನೇಹಿತರ ಜೊತೆ ಸುತ್ತಾಡುವುದಕ್ಕೆ ಕತ್ತರಿ ಬಿತ್ತು. ಹಾಗಾಗಿ, ಶಾಲೆಯ ಸಮಯ ಹೊರತುಪಡಿಸಿ, ಆಗಿನ ಕಾಲಕ್ಕೆ ಊರ ಹೊರಗಡೆ ಇದ್ದ ಆಸ್ಪತ್ರೆಯ ಆವರಣವೇ ನನ್ನ ಪ್ರಪಂಚವಾಯಿತು.
ಕೇರಳಾಪುರದ ಆಸ್ಪತ್ರೆ ಹಿಂದುಗಡೆಯೇ ನಮ್ಮ ಮನೆ ಇದ್ದದ್ದು. ಆಣ್ಣನನ್ನೂ ಸೇರಿಸಿ, ಆ ಆಸ್ಪತ್ರೆಯಲ್ಲಿ ಇದ್ದದ್ದು ಆರು ಜನ. ಆ ಆಸ್ಪತ್ರೆಯ ಆವರಣದ ಹಿಟ್ಲರ್ ನಂತೆ ನಮಗೆ ಕಾಣುತ್ತಿದ್ದ ನಿಂಗಶೆಟ್ಟಿ, ಕೃಷ್ಣ, ಆಯಾ ಲಕ್ಷ್ಮಮ್ಮ, ಧೋಬಿ ಲಕ್ಷ್ಮಮ್ಮ ಮತ್ತು ಹನುಮಮ್ಮ. ಬಂದ ಸ್ವಲ್ಪ ದಿನದಲ್ಲಿ, ಹನುಮಮ್ಮ ಅಮ್ಮನಿಗೆ ಆತ್ಮೀಯಳಾದಳು.
ಗುಂಡು ಹೊಡೆದಂತೆ ಮಾತು, ಕೆಲಸದಲ್ಲಿ ಕಳ್ಳತನವಿಲ್ಲ, ಬಾವಿಯಿಂದ ನೀರು ಸೇದಿ, ಎರಡು ಕೊಡಗಳನ್ನು ಒಮ್ಮೆಗೆ ತಲೆ ಮೇಲೆ ಹೊತ್ತುಕೊಂಡು, ಕೈಬೀಸಿಕೊಂಡು ಮನೆಗೆ ನೀರು ತುಂಬುವುದರಿಂದ ಹಿಡಿದು, ಆಸ್ಪತ್ರೆಯ ಆವರಣದಲ್ಲಿ ಅಮ್ಮ ಕೈಗೆತ್ತಿಕೊಂಡ ಹೂತೋಟದ ಉಸ್ತುವಾರಿಯವರೆಗೆ, ಹನುಮಮ್ಮನದೇ ಯಜಮಾನಿಕೆ.
ಸಾಯಂಕಾಲದ ಹೊತ್ತು ಅಮ್ಮ ಮನೆಯಿಂದ ಹೊರಗಡೆ ಇದ್ದಾಗ, ನನಗೆ ಮನೆ ಎದುರುಗಡೆ ಇದ್ದ ಜಾಗದಲ್ಲಿ ಸ್ನೇಹಿತರೋಡನೆ ಆಡಿಕೊಳ್ಳಲು ಅವಕಾಶವಿತ್ತು. ಆದರೆ, ನಿಂಗಶೆಟ್ಟಿ ಯಾರನ್ನೂ ಆಸ್ಪತ್ರೆಯ ಆವರಣದೊಳಗೆ ಬಿಡುತ್ತಿರಲಿಲ್ಲ. ಇದೊಳ್ಳೆ ಫಜೀತಿಯಾಯ್ತು ಅಂತ ಒಮ್ಮೆ ಹನುಮಮ್ಮನಿಗೆ ನನ್ನ ಕಷ್ಟ ಹೇಳಿಕೊಂಡೆ.
`ಯೋ ಶೆಟ್ಟಿ… ಮಗೀನ ಜೊತೆ ಆಡ್ಕೊಳ್ಳೊಕೆ ಬರಾ ಮಕ್ಕಳ್ನ ಯಾಕ್ಲಾ ತಡೀತಿ? ಏನಾಗ್ಯತಿ ನಿಂಗೆ?’ ಅಂತ ಹನುಮಮ್ಮ ಅಬ್ಬರಿಸಿದ್ದೇ ತಡ, ಏನೋ ಗೊಣಗುತ್ತಾ, ಪಂಚೆ ಮೇಲೆ ಕಟ್ಟಿಕೊಂಡು ಆಸ್ಪತ್ರೆಯೊಳಗೆ ಹೋದ. `ಡಾಕುಟ್ರಿಗೆ ನಾ ಯೋಳ್ತೀನಿ. ನೀನಿವನ ಸವಾಸಕ್ಕೆ ಬರ್ಬ್ಯಾಡ… ನೀ ಓಗಿ ಆಡ್ಕ ಮಗಾ’ ಅಂದಳು. ನಿಂಗಶೆಟ್ಟಿಯನ್ನು ಓಡಿಸಿ, ನನಗೆ ಆಟವಾಡಲು ಅನುವು ಮಾಡಿಕೊಟ್ಟ ಹನುಮಮ್ಮ ನನಗೆ ವೀರವನಿತೆಯಾಗಿ ಕಾಣತೊಡಗಿದಳು.
ಅಂದಿನಿಂದ ನನಗೆ ಹನುಮಮ್ಮನ ಮೇಲೆ ಇನ್ನಿಲ್ಲದ ಅಭಿಮಾನ ಶುರುವಾಯ್ತು. ಹನುಮಮ್ಮನ ಜೊತೆ ನಾನು ಎಲ್ಲಿ ಹೋಗಲೂ ಅಮ್ಮ ಆಕ್ಷೇಪಿಸುತ್ತಿರಲಿಲ್ಲ. ವಾರಕೊಮ್ಮೆ ನೆಡೆಯುವ ಸಂತೆಗೆ ಹೋಗಬೇಕು ಅಂತ ಅಮ್ಮನ ಹತ್ತಿರ ಕೇಳಿದಾಗ, ಮನೆಗೆ ಸಂತೆವ್ಯಾಪಾರ ಮಾಡಿಕೊಂಡು ಬರುತ್ತಿದ್ದ ಹನುಮಮ್ಮನ ಜೊತೆ ಕಳುಹಿಸಿದರು.
ದಾರಿಯುದ್ದಕ್ಕೂ, ಕೇಳಿದವರಿಗೆಲ್ಲ `ಡಾಕುಟ್ರ ಮಗ’ ಅಂತ ಪರಿಚಯ ಮಾಡುತ್ತಿದ್ದಳು. ಹತ್ತೂರಿಗೆ ಇದ್ದ ಒಂದೇ ಆಸ್ಪತ್ರೆಗೆ ಅಣ್ಣ ಒಬ್ರೇ ಡಾಕ್ಟರ್. ಹಾಗಾಗಿ, ಎಲ್ಲರೂ ತುಂಬಾ ಪ್ರೀತಿಯಿಂದ ನನ್ನನ್ನು ಮಾತನಾಡಿಸುತ್ತಿದ್ದರು. ಎಡವಟ್ಟಾಗಿದ್ದೇ ವ್ಯಾಪಾರ ಶುರುವಾದ ಮೇಲೆ..
ಸಂತೆಗೆ ಹೋಗಿ ಸರಿಯಾಗಿ ಅಭ್ಯಾಸವಿಲ್ಲದ ನಾನು, ಹನುಮಮ್ಮ ಚೌಕಾಸಿ ಮಾಡುವಾಗ ಗಡಿಬಿಡಿಯಾದೆ. `ಅಲ್ಲ ಹನುಮಮ್ಮ, ಅಮ್ಮ ನಿನಗೆ ದುಡ್ಡು ಕೊಟ್ಟುಂಟಲ್ಲ. ನೀನ್ಯಾಕೆ ಕಡಿಮೆ ರೇಟಿಗೆ ಕೇಳ್ತಿಯಾ’ ಅಂದುಬಿಟ್ಟೆ.
`ನೀನ್ಸೋಲ್ಪ ಬಾಯಿ ಮುಚ್ಚಿಕೊಂಡಿರ್ತಿಯಾ?’ ಅಂತ ಸಿರ್ರನೆ ರೇಗಿದಳು.
`ಅಲ್ಲಾ, ಅವರೆಲ್ಲ ಬಡವರಲ್ವಾ’ ಅಂತ ತಡವರಿಸಿದೆ.
`ಸುಮ್ಮನಿರ್ದೆ ಹೋದರೆ, ಇನ್ನೊಂದುಕಿಟ್ಟ ನಿನ್ನ ಸಂತೀಗೇ ಕರ್ಕೊಂಡು ಬರಲ್ಲ ನೋಡು’ ಅಂದುಬಿಟ್ಟಳು. ನಾನೂ, ಬಾಯಿ ಮುಚ್ಚಿಕೊಂಡು ಸುಮ್ಮನಾದೆ.
ಮನೆಗೆ ಬಂದವಳೇ, `ಅಮ್ಮ, ನಾನು ಮಾತ್ರ ವಿನ್ಯೂನ ಇನ್ನು ಸಂತೆಗೆ ಕರ್ಕೊಂಡು ಓಗಲ್ಲ. ಚೌಕಾಸಿ ಮಾಡೋಕೆ ಬಿಡಲ್ಲ ಕಣವ್ವ,’ ಅಂತ ನೆಡೆದದ್ದನೆಲ್ಲ ಹೇಳಿದಳು. ನಾನೂ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರೂ, ಅಮ್ಮ ಹನುಮಮ್ಮನ ಪರವಹಿಸಿದ್ದರಿಂದ, ಇನ್ನು ಮುಂದೆ `ಸಂತೆ ಯಾತ್ರೆ’ ಬಂದ್ ಅಂದುಕೊಂಡೆ.
ಅದರ ಮುಂದಿನ ವಾರವೇ, ನಾನು ರೂಮಿನಲ್ಲಿ ಮಲಗಿಕೊಂಡು ಯಾವುದೋ ಕಥೆ ಪುಸ್ತಕ ಓದುತ್ತಿರುವಾಗ, ಹನುಮಮ್ಮನ ಧ್ವನಿ ಕೇಳಿತು: `ವಿನ್ಯೂ… ಬಪ್ಪ ಓಗಾನಾ ಸಂತಿಗೆ.. ಒತ್ತಾಯ್ತು.’ ಲಗುಬಗನೆ ಎದ್ದು ಹನುಮಮ್ಮನ ಬಳಿಗೆ ಓಡಿದೆ.
ಕೇರಳಾಪುರ ಇರುವುದು ಕಾವೇರಿ ನದಿಯ ತೀರದಲ್ಲಿ. ಆಸ್ಪತ್ರೆಯ ಆವರಣದಿಂದ ಹೊರಗೇ ಹೋಗಲು ಅವಕಾಶವಿಲ್ಲದವನಿಗೆ, ಹೊಳೆ ಹತ್ತಿರ ಹೋಗುವುದು ಊಹಿಸಲೂ ಆಗುತ್ತಿರಲಿಲ್ಲ. ಅಂತೂ ಒಮ್ಮೆ ಧೈರ್ಯ ಮಾಡಿ ಅಮ್ಮನಿಗೆ ಕೇಳೇಬಿಟ್ಟೆ. ಅಲ್ಲೇ ಇದ್ದ ಹನುಮಮ್ಮ, `ಬುಡವ್ವ, ನಾ ಕರ್ಕಂಡು ಓಗಿ ಬತ್ತೀನಿ’ ಅಂದಳು. ಲಗುಬಗೆಯಿಂದ ಹನುಮಮ್ಮನ ಹಿಂದೆ ಹೊರಟೇಬಿಟ್ಟೆ. ಹೊಳೆ ಹತ್ತಿರ ಹೋದಾಗ,  ಜನರು ಗುಂಪಾಗಿ ನಿಂತಿದ್ದರು. `ಡಾಕುಟ್ರ ಮಗ. ಹೊಳಿ ನೋಡ್ಬೇಕು ಅಂತು, ಕರ್ಕಂಡ್ ಬಂದೆ. ಅಂಗೇ, ಅರ್ಗೋಲಾಗೆ ಒಂದ್ ಸುತ್ತು ಆಕಿಸ್ಕೊಂಡ್ ಬತ್ತೀನಿ’, ಅಂದಳು ಹನುಮಮ್ಮ.
ಅವಳು ಏನೆಂದಳು ಅಂತ ಅರ್ಥವಾಗುವುದರೊಳಗೆ, ಆ ನದಿಯನ್ನು ದಾಟುವ ಏಕೈಕ ಸಾಧನವಾದ ಹರಿಗೋಲು ಬಂದೇ ಬಿಡ್ತು. `ಅಣ್ಣೋ, ಮಗೀನ ಜೊತೆ ಒಂದ್ ಸುತ್ತ್ ಆಕ್ಸು’ ಅಂತ, ನನ್ನನ್ನೂ
 ಎಳೆದುಕೊಂಡು ಹರಿಗೋಲಿನೊಳಗೆ ಹತ್ತೇಬಿಟ್ಟಳು. ಜನರೆಲ್ಲ ಅಲ್ಲೇ ಕಾಯುತ್ತಿರುವಂತೆಯೇ, ಹರಿಗೋಲು ನನ್ನನ್ನು ಹೊಳೆಯೊಳಗೆ ಒಂದು ಸುತ್ತು ಹೊಡೆಸಿ ವಾಪಾಸ್ ತಂದು ಬಿಟ್ಟಿತು.
ಕಾಯಿಲೆ ಬಂದಾಗ ತಮ್ಮ ನೆರವಿಗೆ ಬರುವ ವೈದ್ಯರ ಮಗನ ಬಗ್ಗೆ ಆ ಜನಗಳು ತೋರಿಸಿದ ಪ್ರೀತಿ ಮತ್ತು ಕಾರಣವಿಲ್ಲದೆ ನಾನು ಹರಿಗೋಲಿನಲ್ಲಿ ಒಂದು ಸುತ್ತು ಹೋಗಿಬರುವವರೆಗೆ ಕಾದ ಆ ಜನಗಳ ಬಗ್ಗೆ ಯೋಚಿಸಿದರೆ,ಈಗಲೂ ಆಶ್ಚರ್ಯವಾಗುತ್ತದೆ.
ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನನಗೆ, ಬಯಲುಸೀಮೆಯ ಈ ಹಳ್ಳಿಯ ರೀತಿ ರಿವಾಜುಗಳು ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಒಮ್ಮೆ ಶಾಲೆಯ ಹತ್ತಿರ ಬಿದ್ದಿದ್ದ, ಅರಿಶಿನ-ಕುಂಕುಮ ಹಚ್ಚಿದ್ದ ನಿಂಬೇಹಣ್ಣನ್ನು ದಾಟಿದೆ. ಪಕ್ಕದಲ್ಲೇ ಇದ್ದ ರಮೇಶ ಗಾಬರಿಯಿಂದ, `ಏನ್ರೀ, ಮಾಟ ಮಾಡಿದ ನಿಂಬೇಹಣ್ಣನ್ನು ದಾಟಿದ್ರಿ?’ ಅಂದ.
ಅಲ್ಲಿಯವರೆಗೆ ಮಾಟ ಎಂದರೇನು ಅಂತ ಗೊತ್ತಿಲ್ಲದ ನಾನು, `ದಾಟಿದ್ರೆ ಏನಾಯ್ತು?’ ಅಂದೆ.
`ರೀ, ಮಾಟ-ಮಂತ್ರನೆಲ್ಲ ಹಗುರವಾಗಿ ಮಾತಾಡಬಾರದು. ಅದನ್ನು ಯಾರ ಮೇಲೋ ಮಾಡಿರ್ತಾರೆ. ನಾವು ದಾಟಿದರೆ,  ನಮ್ಮ ಮೇಲೆ ಬರುತ್ತೆ ಅಷ್ಟೆ. ಯಾರೋ ಸಾಯಲಿ ಅಂತ ಮಾಡಿದ್ದರೆ, ದಾಟಿದವರು ಸತ್ತು ಹೋಗುತ್ತಾರೆ, ಅಷ್ಟೆ,’ ಅಂದ.
ನಿಂಬೇಹಣ್ಣು ದಾಟಿದರೆ ಜನ ಹೇಗೆ ಸಾಯುತ್ತಾರೆ ಅಂತ ಅರ್ಥವಾಗಲಿಲ್ಲ. ಸೀದ ಮನೆಗೆ ಹೋದವನೇ, `ಅಮ್ಮ, ಮಾಟ ಅಂದ್ರೆ ಏನಮ್ಮಾ?’ ಅಂತ ಕೇಳಿದೆ. ನನಗ್ಯಾಕೆ ಹೆದರಿಸಬೇಕು ಅಂತಲೋ ಏನೋ, `ಅಂತದ್ದು ಏನೂ ಇಲ್ಲ. ಈ ಬಯಲು ಸೀಮೆಯವರಿಗೆ ಮಾಡಲು ಕೆಲಸವಿಲ್ಲ. ಸುಮ್ಮನೆ ಮಾಟ-ಮಂತ್ರ ಅಂತ ಮಾಡ್ತಾರೆ. ಅದರಿಂದ ಏನೂ ಆಗೋಲ್ಲ,’ ಅಂದರು.
ಮಾರನೇ ದಿನ, ಶಾಲೆಯಿಂದ ಹೊರಬಂದಾಗ, ಮಾಟ ಮಾಡಿಟ್ಟ ತೆಂಗಿನಕಾಯಿಯನ್ನು ನೋಡಿದೆ. ತಕ್ಷಣವೇ, ಅದನ್ನು ಫುಟ್ ಬಾಲ್ ತರ ಒದೆಯಲಾರಂಭಿಸಿದೆ. ನನ್ನ ಜೊತೆಯಲ್ಲಿದ್ದ ಸ್ನೇಹಿತರೆಲ್ಲ, ಭೂತವನ್ನು ಕಂಡಂತೆ ದಿಕ್ಕಾಪಾಲಾಗಿ ಓಡಿಹೋದರು. ನಾನು ತೆಂಗಿನಕಾಯಿಯನ್ನು ಒದ್ದುಕೊಂಡು ಮನೆಯವರೆಗೆ ಬಂದು, ಅಮ್ಮನಿಗೆ ವರದಿ ಒಪ್ಪಿಸಿದೆ. ನನ್ನ ಹುಚ್ಚಾಟ ಕಂಡು ಗಾಭರಿಯಾದರೂ, ಅಮ್ಮ ಅದನ್ನು ತೋರಿಸಿಕೊಳ್ಳಲಿಲ್ಲ. ಆ ತೆಂಗಿನಕಾಯಿಯನ್ನು ಹಾಗೆಯೇ ಒದ್ದುಕೊಂಡು, ಆಸ್ಪತ್ರೆಯ ಮೂಲೆಯಲ್ಲಿದ್ದ ಶವಾಗಾರದ ಹತ್ತಿರ ಬಿಟ್ಟುಬರಲು ಹೇಳಿದರು. ಯಾವುದಕ್ಕೂ ಹೆದರದ ನಾನು, ಹಾಗೆಯೇ ಮಾಡಿದೆ.
ನಾನು ತೆಂಗಿನಕಾಯಿ ಒದ್ದುಕೊಂಡು ಬಂದದ್ದನ್ನು, ಆಯಾ ಲಕ್ಷ್ಮಮ್ಮ, ಹನುಮಮ್ಮನಿಗೆ ಹೇಳಿದಳು ಅಂತ ಕಾಣುತ್ತೆ. ಹತ್ತು ನಿಮಿಷದ ನಂತರ ಆಸ್ಪತ್ರೆಯ ಹತ್ತಿರ ಹೋದಾಗ, `ನಮ್ಮಪ್ಪಾ, ಯಾಕೋ ಮಗಾ ಮಾಟಾನ ತುಳ್ದೇ? ಎಲ್ಲಾ ಕಾಟ್ಗಳೂ ನಿನ್ನಿಂದೂರ ಇರ್ಲಿ,’ ಅಂತ ಹೇಳಿ, ನನ್ನ ಮುಖಕ್ಕೆ ಕೈ ನೀವಳಿಸಿ, ನೆಲಕ್ಕೆ  ತಾಗಿಸಿ, ದೃಷ್ಟಿ ತೆಗೆದಳು.
`ಅಯ್ಯೋ, ಅದೆಲ್ಲಾ ಏನೂ ಆಗಲ್ಲ ಬಿಡು ಹನುಮಮ್ಮ,’ ಅಂದೆ.
`ನೀ ಯೋಳ್ದಂಗೇ ಏನೂ ಆಗ್ದೆ ಇರ್ಲಿ ಸಿವಾ’, ಅಂತಾ ನನ್ನ ಎರಡೂ ಕೆನ್ನೆಗಳನ್ನೂ ಹಿಂಡಿದಳು.
ಒಂದಿನ ಅಮ್ಮ ಹನುಮಮ್ಮನ ಜೊತೆ ಏರು  ಧ್ವನಿಯಲ್ಲಿ ಮಾತನಾಡುವುದು ಕೇಳಿತು. ನಾನು ಹೋಗುವಾಗ, ಹನುಮಮ್ಮ ಹೇಳುತ್ತಿದ್ದಳು: `ಇನ್ನೇನು ಮಾಡ್ಲವ್ವ. ನಂಗೇನು ಮಕ್ಳಾ, ಮರೀನ?’ ಅಂತ. `ಏನಾಯ್ತು?’ ಅಂತ ಕೇಳಿದ ನನಗೆ, `ದೊಡ್ಡವರ ಮಧ್ಯ ನಿನಗೇನು ಕೆಲಸ, ಒಳಗೆ ಹೋಗು,’ ಅಂತ ಅಮ್ಮ ಗದರಿದರು. ಒಳಗೆ ಹೋಗುವವನಿಗೆ ಒಂದಂತೂ ಗೊತ್ತಾಯ್ತು. ಹನುಮಮ್ಮನಿಗೆ ಮಕ್ಕಳಿಲ್ಲ ಅಂತ.
ಈ ಮಧ್ಯ, ರಮೇಶ ಒಂದು ದಿನ ಕೇಳಿದ: `ಹನುಮಮ್ಮ ನಿಮ್ಮ ಅಡಿಗೆ ಮನೆಗೆ ಬರ್ತಾಳಂತೆ ಹೌದಾ?’
 `ಹೌದು’ ಅಂದೆ.
`ಅವಳು ಹೊಲತಿ ಕಣ್ರಿ’ ಅಂದ.
`ಹಂಗಂದ್ರೆ?’ ಅಂದೆ.
`ಅವಳು ಹೊಲೆಯರ ಜಾತಿ ಕಣ್ರಿ. ಅವರನ್ನೆಲ್ಲಾ ಮನೆಯೊಳಗೇ ಸೇರಿಸುವುದಿಲ್ಲ ನಾವು,’ ಅಂದ.
ಅಲ್ಲಿಯವರೆಗೆ, ನನಗೆ ನಾಯಿಗಳ ಜಾತಿ ಬಗ್ಗೆ ಗೊತ್ತಿತ್ತು. ಆ ಊರಿಗೆಲ್ಲಾ ಇದ್ದದ್ದು ಒಂದೇ ಜಾತಿ ನಾಯಿ. ನಮ್ಮ ಮನೆಯ ಜೂಲಿ, ಅದೂ ಪೊಮೇರಿಯನ್. ಈ ಮನುಷ್ಯರ ಜಾತಿ ಯಾವುದು ಮತ್ತು ಹೇಗೆ ಅಂತ ಅರ್ಥವಾಗಲಿಲ್ಲ.
ಮನೆಗೆ ಹೋದವನೇ, `ಅಮ್ಮ, ಹೊಲತಿ ಅಂದರೇನು? ಹನುಮಮ್ಮ ನಮ್ಮ ಅಡುಗೆ ಮನೆಗೆ ಬರಬಾರದಾ?’ ಅಂತ ಕೇಳಿದೆ.
`ಹನುಮಮ್ಮ ತುಂಬಾ ಕ್ಲೀನು. ಕೋಳಕಾಗಿದ್ದರೆ, ನಾನು ಬ್ರಾಹ್ಮಣರನ್ನೂ ಮನೆಯೊಳಗೆ ಸೇರಿಸುವುದಿಲ್ಲ,’ ಅಂತ ಅಮ್ಮ ಹೇಳಿದರು.
ಜಾತಿ ಎಂದರೇನು, ಹೊಲತಿ ಅಂದರೇನು ಅಂತ ಅರ್ಥವಾಗದೆ ತಲೆಕೆಟ್ಟು ಅಮ್ಮನ ಹತ್ತಿರ ಹೋದರೆ, ಅದಕ್ಕೆ ಬ್ರಾಹ್ಮಣರನ್ನೂ ಸೇರಿಸಿ, ತಲೆಯನ್ನು ಗೊಬ್ಬರ ಮಾಡಿಟ್ಟರು. ಅದರ ಮಧ್ಯ, ನಮ್ಮ ಮೇಷ್ಟರು ದಾಸೇಗೌಡರು, `ನೀವು ಒಕ್ಕಲಿಗ ಗೌಡರಾ?’ ಅಂತ ಬೇರೆ ಕೇಳಿದರು. ಆಣ್ಣನ ಹೆಸರಿನ ಮುಂದೆ `ಗೌಡ’ ಅಂತ ಇದ್ದದ್ದರಿಂದ, `ಹೌದು ಸರ್’ ಎಂದೆ. `ದಾಸ ಒಕ್ಕಲಿಗರಾ, ಮುಳ್ಳು ಒಕ್ಕಲಿಗರಾ?’ ಅಂತ ಕೇಳಿದರು. ಅದೇನೆಂದು ಅರ್ಥವಾಗದೆ, ಗಾಬರಿಯಾಗಿ `ಅಣ್ಣನನ್ನು ಕೇಳಬೇಕು’ ಅಂತ ಹೇಳಿ ಜಾಗ ಖಾಲಿ ಮಾಡಿದೆ.
ಜಾತಿ ಪದ್ದತಿ ಹಾಸುಹೊಕ್ಕಾಗಿದ್ದ ಈ ಹಳ್ಳಿಯಲ್ಲಿ, ಸಂಕೇತಿ ಬ್ರಾಹ್ಮಣರ ಸಂಖ್ಯೆ ಬಹಳವಿತ್ತು. ಅವರಲ್ಲಿ ಕೆಲವರು ಮನೆಗೂ ಬರುತ್ತಿದ್ದರು. ಮಾತೆತ್ತಿದರೆ `ಮಡಿ’ ಎನ್ನುತ್ತಿದ್ದರು. ಅವದು ಬಂದಾಗಲೆಲ್ಲ, ಜೂಲಿಯನ್ನು ಕೂಡಬೇಕಾಗಿತ್ತು. ಹಾಗೆಯೆ, ಕುರ್ಚಿಗಳ ಮೇಲಿನ ಮೆತ್ತೆಗಳನ್ನೂ ತೆಗೆಯಬೇಕಿತ್ತು. ಅವರು ಬಂದಾಗಲೆಲ್ಲ ರೇಜಿಗೆಯಾಗುತ್ತಿತ್ತು. ಆದರೆ, ಹಬ್ಬ-ಹರಿದಿನಗಳಲ್ಲಿ, ಅವರ ಮನೆಗಳಿಂದ ತಿಂಡಿಗಳ ರಾಶಿಯೇ ಬಂದು ಬೀಳುತ್ತಿತ್ತು. ಹನುಮಮ್ಮನಿಗೇನಾದರೂ ಆ ತಿಂಡಿಯನ್ನು ಬಡಿಸಲು ಹೋದರೆ, `ಆ ಆರೋರ ಮನೆ ತಿಂಡಿ ನಾ ತಿನ್ನಾಕಿಲ್ಲ. ನಿಮ್ಮನೇದೇ ಆಕಿ’ ಅಂದುಬಿಡುತ್ತಿದ್ದಳು. ಈ ಆರೋರು (ಹಾರುವವರು) ಅಂದರೇನು ಅಂತ ನನಗೆ ಅರ್ಥವಾಗಿದ್ದು, ನಾನು ಕಾಲೇಜು ಮೇಟ್ಟಿಲು ಹತ್ತಿದ ಮೇಲೆ.
ಇದೆಲ್ಲದರ ನೆಡುವೆ ನನಗೆ ಅರ್ಥವಾಗಿದ್ದಿಷ್ಟು. ಹನುಮಮ್ಮ ನಮ್ಮ ಮನೆಯೊಳಗೆ ಬರಲು ಏನೂ ತೊಂದರೆ ಇಲ್ಲ. ಅಷ್ಟರ ಮಟ್ಟಿಗೆ ನನಗೆ ಸಮಾಧಾನವಾಗಿತ್ತು. ನಾನು ಆರನೇ ತರಗತಿಗೆ ಬಂದಾಗ, ನನ್ನನ್ನು ಮೈಸೂರಿನ ರಾಮಕೃಷ್ಣ ವಿಧ್ಯಾಶಾಲೆಗೆ ರವಾನಿಸಲಾಯಿತು. ಅದರ ಮುಂದಿನ ವರ್ಷವೇ, ಅಣ್ಣನಿಗೆ ಕೇರಳಾಪುರದಿಂದ ವರ್ಗವಾಯಿತು.
ನಾನು ಹತ್ತನೇ ತರಗತಿಯಲ್ಲಿದ್ದಾಗ ಅಂತ ಕಾಣುತ್ತೆ. ಒಮ್ಮೆ ರಜಕ್ಕೆಂದು ಮನೆಗೆ ಹೋದಾಗ ಅಮ್ಮ ಹೇಳಿದರು: `ಹನುಮಮ್ಮ ಬಂದಿದ್ದಳು.’
ಮಲೆನಾಡಿನ ಕಾಫಿ ತೋಟಗಳನ್ನು ನೋಡಿ, ಗಾಭರಿಯಾಗಿದ್ದಳಂತೆ. ನಾನು ಮನೆಯಲ್ಲಿ ಇಲ್ಲದನ್ನು ನೋಡಿ ತುಂಬಾ ನಿರಾಸೆಯಾಯ್ತಂತೆ. `ವಿನ್ಯೂನ ನೋಡಬೇಕೂಂತ ಬಂದೆ ಕಣವ್ವಾ’ ಅಂತ ಅವಳ ಎಲೆ ಅಡಿಕೆ ಚೀಲವನ್ನು ನೆಲಕ್ಕಿಟ್ಟು ಹೇಳಿದಳಂತೆ.
`ನಾನು ವೆಂಕಟೇಶುನ ನೋಡ್ಬೇಕೂಂತ ಬಂದೆ’ ಅಂತ ಜೊತೆಯಲ್ಲಿ ಬಂದಿದ್ದ ನಿಂಗಶೆಟ್ಟಿ ಹೇಳಿದರೂ, ಅವನನ್ನು ಯಾರೂ ನಂಬಲಿಲ್ಲ.
`ಅಲ್ಲಮ್ಮ, ಹನುಮಮ್ಮನನ್ನು ಇಲ್ಲೇ ಬಂದು ಇರೋಕೆ ಹೇಳ್ಬೋದಲ್ಲಾ?’ ಅಂತ ಕೇಳಿದೆ. `ಅವಳ್ನ ಕಂಟ್ರೋಲ್ ಮಾಡೋದ್ಯಾರು? ಸರೀ ಕುಡೀತಾಳೆ. ಕೇಳಿದ್ರೆ, ಮಕ್ಕಳಿಲ್ಲ ಅಂತ ರಾಗ ಹಾಡ್ತಾಳೆ’ ಅಂದ್ರು ಅಮ್ಮ. ಯಾಕೋ, ಪಿಚ್ಚೆನಿಸಿತು.
ಮನೆಯಲ್ಲಿ, ಕೇರಳಾಪುರದ ವಿಷಯ ಬಂದಾಗಲೆಲ್ಲ, ಹನುಮಮ್ಮನ ವಿಷಯ ಬರದೆ ಮಾತು ಮುಗಿಯುತ್ತಿರಲಿಲ್ಲ…
ಅರಕಲಗೂಡು ದಾಟಿ, ರಾಮನಾಥಪುರದ ಮೇಲೆ ಕೇರಳಾಪುರದ ಕಡೆಗೆ ಹೊರಟಾಗ, ಅಂಬಿಕಾ ಮತ್ತು ಸೃಷ್ಟಿ ಬಹಳ ಉತ್ಸಾಹಗೊಂಡಿದ್ದರು. ಕಾವೇರಿ ತಟದ ಆ ನಾಡಿನ ಬತ್ತದ ಗದ್ದೆಗಳು, ಅಡಕೆ ಮತ್ತು ತೆಂಗಿನ ತೋಟಗಳನ್ನು ನೋಡಿ `ಇಲ್ಲೇ ಸ್ವಲ್ಪ ತೋಟ ತೆಗೆದುಕೊಂಡರೆ ಚೆನ್ನಾಗಿರುತ್ತೆ’ ಎಂದೂ ಮಾತಾಡಿದರು. ನನ್ನ ತಲೆ ತುಂಬಾ ಹನುಮಮ್ಮ ತುಂಬಿದ್ದಳು. ಅವಳು ಹೇಗಿರಬಹುದು ಅಂತ ಕಲ್ಪಿಸಿಕೊಳ್ಳಲು ಯತ್ನಿಸುತ್ತಿದ್ದೆ. ಆದರೆ, ತೆಳ್ಳಗೆ, ಕಪ್ಪಗೆ ಇರುವ ಹೆಂಗಸೊಬ್ಬಳು, ತಲೆಯಮೇಲೆ ಎರಡು ಕೊಡಪಾನ ಇಟ್ಟುಕೊಂಡು, ಕೈಬೀಸಿ ನೆಡೆಯುವ ಅಸ್ಪಷ್ಟ ಚಿತ್ರ ಮಾತ್ರ ತಲೆಯಲ್ಲಿ ಮೂಡುತ್ತಿತ್ತು.
ಕೇರಳಾಪುರದ ಚಿತ್ರಣ ಹೆಚ್ಚೇನು ಬದಲಾಗಿರಲಿಲ್ಲ. ಊರಿನೊಳಗೆ ಪ್ರವೇಶಿಸುವಾಗ, ಹೊಸ ರೈಸ್ ಮಿಲ್ ನೋಡಿದೆ. ಇದೇ ರಮೇಶನ ರೈಸ್ ಮಿಲ್ ಇರಬೇಕು ಎಂದುಕೊಂಡೆ.  ನಿಲ್ಲಿಸದೆ, ಆಸ್ಪತ್ರೆಯ ಕಡೆ ಹೊರಟೆ. ದಾರಿಯಲ್ಲಿ, ನಾನು ನಾಲ್ಕನೇ ಕ್ಲಾಸ್ ಓದಿದ ಶಾಲೆ ಅಂಗನವಾಡಿಯಾಗಿ ಬದಲಾಗಿದ್ದನ್ನು ಗಮನಿಸಿದೆ. ಆಸ್ಪತ್ರೆಯ ಆವರಣ ಪ್ರವೇಶಿಸುತ್ತಲೇ, ಮೊದಲ ಬದಲಾವಣೆ ನೋಡೆದೆ. ಎರಡು ಚಿಕ್ಕ ಕಟ್ಟಡಗಳಿದ್ದ ಆಸ್ಪತ್ರೆಯನ್ನು ಸೇರಿಸಿ, ಒಂದೇ ಕಟ್ಟಡ ಮಾಡಲಾಗಿತ್ತು. ಅಮ್ಮನ ಹೂತೋಟ ಕಣ್ಮರೆಯಾಗಿ, ಎಲ್ಲೆಡೆ ಕಳೆ ಬೆಳೆದಿತ್ತು. ಆಸ್ಪತ್ರೆಯನ್ನು ಬಳಸಿಕೊಂಡು, ಹಿಂದೆ ಮನೆಕಡೆಗೆ ಹೋದೆ. ಯಾಕೋ ಏನೋ, ಮನೆ ಮುಂದೆ ಇದ್ದ ಮೈದಾನ ಚಿಕ್ಕದಾದಂತೆ ಕಂಡಿತು. ಮನೆ ಮುಂದೆ ಇದ್ದ ಬಾವಿಯ ಕಟ್ಟೆ ಬಿರುಕು ಬಿಟ್ಟಿತ್ತು.
ಒಟ್ಟಾರೆ, ನಾನು ಚಿಕ್ಕದ್ದಿನಲ್ಲಿ ಬದುಕಿದ್ದ ವಿಜಯನಗರ, ಹಾಳು ಹಂಪೆಯಂತೆ ಕಾಣುತ್ತಿತ್ತು.
ಏಕೋ ಮನಸ್ಸಿನಲ್ಲಿ ತಳಮಳ ಆರಂಭವಾಯಿತು. ಕಾರಿನಿಂದ ಇಳಿದು ಆಸ್ಪತ್ರೆಯೊಳಗೆ ಹೋದೆ. ಎಲ್ಲಾ ಬದಲಾಗಿತ್ತು. ಅಲ್ಲೇ ಒಂದು ಕೋಣೆಯೊಳಗ್ಗೆ, ಆಸ್ಪತ್ರೆ ಸಿಬ್ಬಂದಿಯಂತೆ ಕಾಣುವ ಇಬ್ಬರು ಮಾತನಾಡುತ್ತಿದ್ದರು. ಮೆಲ್ಲನೆ ಕೇಳಿದೆ : `ಇಲ್ಲಿ ಹನುಮಮ್ಮ ಅಂತ ಕೆಲಸ ಮಾಡುತ್ತಿದ್ದರಲ್ಲಾ… ಎಲ್ಲಿದ್ದಾರೆ ಈಗ?’
ಪ್ರಶ್ನಾರ್ಥಕವಾಗಿ ನನ್ನ ಮುಖ ನೋಡುತ್ತಾ ಉತ್ತರಿಸಿದ: `ಅವರು ಸತ್ತುಹೋಗಿರಬೇಕು. ನಾನಿಲ್ಲಿಗೆ ಬಂದು ಬರೀ ಎರಡು ವರ್ಷ ಆಗಿದೆ ಅಷ್ಟೆ. ಶ್ರೀನಿವಾಸನ್ನ ಕೇಳಿ. ಹದಿನೈದು ವರ್ಷದಿಂದ ಇದ್ದಾನೆ. ಅವನಿಗೆ ಗೊತ್ತಿರುತ್ತದೆ.’
ಶ್ರೀನಿವಾಸ ಯಾವುದೇ ಅಳುಕಿಲ್ಲದೆ ಹೇಳಿದ: `ಅವಳು ಸತ್ತು ಹತ್ತು-ಹದಿನೈದು ವರ್ಷ ಆಯ್ತು. ನಿಮಗೆ ಹೇಗೆ ಗೊತ್ತು?’
ಉತ್ತರಿಸಲು ಮನಸ್ಸಿಲ್ಲದೆ, ಕಾರಿಗೆ ಹಿಂದುರುಗಿದೆ. ನನ್ನ ಮುಖ ನೋಡಿ ಅಂಬಿಕಾಳಿಗೆ ಏನಾಗಿರಬಹುದೆಂದು ಗೊತ್ತಾಯ್ತು ಅಂತ ಕಾಣುತ್ತೆ. `ತುಂಬಾ ವರ್ಷದ ಹಿಂದೆನೇ ಸತ್ತು ಹೋದಳಂತೆ’ ಅಂದು ಕಾರು ಹತ್ತಿದೆ.
ವಾಪಾಸ್ ಹೋಗುತ್ತಾ ರಮೇಶನ ರೈಸ್ ಮಿಲ್ ಹತ್ತಿರ ನಿಲ್ಲಿಸಿದೆ. ಅವನ್ನನ್ನೂ ನೋಡಿ ಮೂವತ್ತು ವರ್ಷ ದಾಟಿತ್ತು. ಮಿಲ್ಲಿನ ಹತ್ತಿರವೇ ಅವನು, ಅವನ ತಮ್ಮ ಮಧು ಮತ್ತು ನಮ್ಮ ಇನ್ನೊಬ್ಬ ಸಹಪಾಠಿ ಬೂದನಗೆರೆ ನಾಗೇಂದ್ರ ಸಿಕ್ಕಿದರು. ರಮೇಶ ಎಷ್ಟೇ ಒತ್ತಾಯ ಮಾಡಿದರೂ, ಅವನ ಮನೆಗೆ ಹೋಗಲು ಮನಸ್ಸಾಗಲಿಲ್ಲ. ಇನ್ನೊಮ್ಮೆ ಬರುತ್ತೇನೆ ಅಂತ ಹೇಳಿ, ಕಾರು ಹತ್ತಿದೆ.
ಊರಿಗೆ ತಲುಪಿದ ಕೂಡಲೇ, ಅಮ್ಮನಿಗೆ ಹನುಮಮ್ಮ ತೀರಿಹೋದ ವಿಷಯ ಹೇಳಿದೆ. ಅಮ್ಮ ಮತ್ತು ಅಣ್ಣನಿಗೂ ಬೇಸರವಾಯಿತು. ಸಾಯಂಕಾಲ ಅಮ್ಮ ಅಂಬಿಕಾಳಿಗೆ ಹನುಮಮ್ಮನ ಬಗ್ಗೆ ಹೇಳುತ್ತಿದ್ದರು. `ವಿನಯ್ ನ ಕಂಡರೆ ಅವಳಿಗೆ ತುಂಬಾ ಪ್ರೀತಿ. ಹ್ಯಾಗೆ ಕರೀತಿದ್ಲು ಗೊತ್ತಾ…. ವಿನ್ಯೂ… ಬಪ್ಪಾ ಓಗಾನಾ’.
ಕೇಳಿಯೂ ಕೇಳದಂತೆ ಸೃಷ್ಟಿ ಜೊತೆ ಆಟವಾಡಲು ಆರಂಭಿಸಿದೆ.
ಆ ಸಲ, ಊರಿಂದ ಬೆಂಗಳೂರಿಗೆ ಹೊರಡುವಾಗ, ಹನುಮಮ್ಮನಿಗೆಂದು ತೆಗೆದಿದ್ದ ಸೀರೆಯನ್ನು ಊರಿನಲ್ಲೇ ಬಿಟ್ಟು ಬಂದೆ…


ಮಾಕೋನಹಳ್ಳಿ ವಿನಯ್ ಮಾಧವ್.


ಭಾನುವಾರ, ನವೆಂಬರ್ 13, 2011

ತೇಜಸ್ವಿ


ತೇಜಸ್ವಿಯನ್ನರಸಿ . . .  .

ನನಗನ್ನಿಸುತ್ತೆ, ಎಲ್ಲಾ ಜೀವಂತ ವಸ್ತುಗಳಂತೆ, ಭಾಷೆಗೂ ಸಾವಿದೆ. ಇದಕ್ಕೆ ಕನ್ನಡ ಕೂಡ ಹೊರತಲ್ಲ. ಎಂದೋ ಒಂದು ದಿನ ಅದು ಸಂಸ್ಕೃತದಂತೆ ಸಾಯುತ್ತೆ. ಇದನ್ನೆನೂ ನಾನು ಉಳಿಸಿಕೊಳ್ಳುತ್ತೇನೆ ಅನ್ನೋ ಭ್ರಮೆಯಲಿಲ್ಲ. ಆದರೆ ನಾನು ಸಾಯುವಾಗ ಕನ್ನಡವನ್ನು ಉಳಿಸಕೊಳ್ಳಬಹುದಿತ್ತೇನೋ ಎಂಬ ಪಾಪ ಪ್ರಜ್ಞೆ ಕಾಡುತ್ತದೆ. ಆ ಪಾಪ ಪ್ರಜ್ಞೆಯನ್ನು ಉತ್ತರಿಸಲು ಈ ಕಸರತ್ತು.
ನೀನೊಂದು ಕೆಲಸ ಮಾಡು. ಚಂದ್ರಶೇಖರ ಕಂಬಾರರ ನಂಬರ್ ಇದೆಯಲ್ಲ, ಬೆಂಗಳೂರಿಗೆ ಹೋದಾಗ ಅವರನ್ನು ಭೇಟಿ ಮಾಡು. ನೀವೆಲ್ಲಾ ಜರ್ನಲಿಸ್ಟ್ ಗಳು ಸೇರಿ ಆ ರಾಜೀವ್ ಚಾವ್ಲಾ ತಲೆಗೆ ಸ್ವಲ್ಪ ಬುದ್ದಿ ತುಂಬಿ. ಕನ್ನಡ ಸಾಫ್ಟ್ ವೇರ್, ಮೈಕ್ರೋಸಾಫ್ಟ್ ಕೈಯಲ್ಲಿ ಕೊಟ್ಟು ಇನ್ನೊಂದು ಗುಲಾಮಗಿರಿಗೆ ಬೀಳೋದು ಬೇಡ. . .
ಇದಕ್ಕೇನು ಹೇಳುವುದು ?  ಕೋಲೆ ಬಸವನಂತೆ ತಲೆ ಅಲ್ಲಾಡಿಸುತ್ತಾ ಕತ್ತಲಲ್ಲಿ, ತೇಜಸ್ವಿಯವರ ತೋಟದ ಗೇಟಿನ ಹೊರಗೆ ನಿಲ್ಲಿಸಿದ್ದ ಕಾರಿನತ್ತ ಕಾಲು ಹಾಕಿದೆ. ಈ ತೇಜಸ್ವಿಯೇ ಹಾಗೆ. ಪ್ರತೀ ಭಾರಿ ಭೇಟಿಯಾದಾಗೊಂದು ವಿತಂಡವಾದ ಮುಂದಿಡುತ್ತಿದ್ದರು. ಸಾಯೋ ಭಾಷೆ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳಬೇಕು ಅಂತ ಒಮ್ಮೆ ಯೋಚಿಸಿದೆ. ನಾನೇ ನಕ್ಕು ಸುಮ್ಮನಾದೆ. ಪ್ರತೀ ಭೇಟಿಯಲ್ಲಿ ನೆನಪಿಡೋ ಅಂತದ್ದೇನಾದ್ರು ನಡೆತಿತ್ತು.
ಮೊದಲ ಭಾರಿ ಭೇಟಿಯಾದಾಗಲೂ ಅಷ್ಟೇ. ಕೆಂಜಿಗೆ ಪ್ರದೀಪ್ ಜೊತೆ, ಭದ್ರಾ ಅಭಯಾರಣ್ಯದಲ್ಲಿ ಬಿದ್ದ ಬೆಂಕಿಯ ವಿಷಯ ಚರ್ಚಿಸಲು ಹೋಗಿದ್ದೆ. ಪೂರ್ವಾಒರ ವಿಚಾರಿಸಿಯೇ ಮನೆಯೊಳಗೆ ಬಿಟ್ಟಿದ್ದರು ತೇಜಸ್ವಿ. ಅರಣ್ಯಾಧಿಕಾರಿಗಳು ಬರೀ ನೂರಿನ್ನೂರು ಎಕರೆ ಸುಟ್ಟಿದೆ ಎಂದು ಹೇಳಿದ್ದರು. ನಾನು ಹೋಗಿ ನೋಡಿದಾಗ ಅದರ ಹತ್ತು ಪಟ್ಟು ಹೆಚ್ಚು ಕಾಡು ನಾಶವಾಗಿತ್ತು. ವಿಷಯ ತಿಳಿಯುತ್ತಲೇ ತೇಜಸ್ವಿ ಕೆರಳಿದರು. “ ರೀ ಪ್ರದೀಪ್, ನಾಳೆ ಬೆಳಿಗ್ಗೆ ನಾವು ಮೂರು ಜನ ಅಲ್ಲಿಗೆ ಹೋಗೋಣ, ಇವನೇನಾದರೂ ಹೇಳಿದ್ದು ಸತ್ಯವಾದರೆ, ಆ ಫಾರೆಸ್ಟ್ ಆಫೀಸರ್ ಗಳಿಗೆ ಚಪ್ಪಲಿ ಬಿಚ್ಚಿ ಹೊಡಿಯೋಣ”.
ಅವಕ್ಕಾಗಿ  ಪ್ರದೀಪ್ ಮುಖ ನೋಡಿದೆ. ಏನು ಬದಲಾವಣೆ ಇರಲಿಲ್ಲ. ಸಧ್ಯ, ಆ ನಾಳೆಯೂ ಬರಲಿಲ್ಲ.
ಸಾಹಿತಿಗಳನ್ನೇ ಸೃಷ್ಟಿಸದ ಮೂಡಿಗೆರೆ ಎಂಬ ಮರುಭೂಮಿಗೆ ಶಿವಮೊಗ್ಗ ಜಿಲ್ಲೆಯಿಂದ ಕಾಣಿಕೆಯಾಗಿ ಬಂದ ಓಯಸಿಸ್ಸ್ ತೇಜಸ್ವಿ. ಅವರನ್ನು ಬೆರಗಾಗಿ ನೋಡಿದವರೇ ಹೆಚ್ಚು ಅವರ ಒಡನಾಟಕ್ಕಾಗಿ ಹಾತೊರೆದರು. ಬಾಪೂ ದಿನೇಶ್, ಕೆಂಜಿಗೆ ಪ್ರದೀಪ್, ನಂದೀಪುರ ಚರಣ್ ರಂತಹ ಕೆಲವೇ ಜನರನ್ನು ಬಿಟ್ಟರೆ, ಅದು ಹೆಚ್ಚು ಜನಕ್ಕೆ ಸಿದ್ದಿಸಲಿಲ್ಲ. ಅವರ ಸ್ನೇಹಗಳಿಸುವ ರೀತಿ ‘ ಚಿದಂಬರ ರಹಸ್ಯವಾಗೇ, ಉಳಿದಿತ್ತು.
ತೇಜಸ್ವಿಯ ಕಥೆಗಳಂತೆ ಮೂಡಿಗೆರಯಲ್ಲಿ ತೇಜಸ್ವಿಯ ಮೇಲೆ ದಂತ ಕಥೆಗಳೂ ಬಹಳಷ್ಟಿವೆ. ಅವರ ಒಡನಾಟ ಬಯಸಿದವರು ಪಟ್ಟ ಪಾಡು, ಅವರಿಗೆ ಸಲಹೆ ಕೊಟ್ಟವರು ಪಟ್ಟ ಪಾಡುಗಳಂತೂ, ಅವರ ಕತೆಗಳಷ್ಟೇ ರಂಜನೀಯ. ಅದರಲ್ಲಿ ನಿಜವೆಷ್ಟು ಸುಳೆಷ್ಟು ಬಲ್ಲವರಾರು?
ತೇಜಸ್ವಿಯನ್ನು ಒಲಿಸಿಕೊಳ್ಳಲು ಯುವಕನೊಬ್ಬ ಫೋಟೋಗ್ರಫಿ ಕಲಿಯುವ ಅಭಿಲಾಷೆ ವ್ಯಕ್ತಪಡಿಸಿದ. “ ನಾಳೆ ಬೆಳಿಗ್ಗೆ ಮನೆ ಹತ್ತಿರ ಬಾ” ಎಂದು ಸ್ಕೂಟರನ್ನೇರಿ ಹೊರಟೇ ಬಿಟ್ಟರು. ಪಟ್ಟು ಬಿಡದ ಹುಡುಗ ನನ್ನ ಯಶಿಕಾ ಕ್ಯಾಮರಾದೊಂದಿಗೆ ಬೆಳಿಗ್ಗೆ 9.30ಕ್ಕೆ ತೇಜಸ್ವಿ ಮನೆಯ ಹತ್ತಿರ ಹಾಜರಾದ. ಅಷ್ಟರಲ್ಲೇ ತೇಜಸ್ವಿ ತೋಟದ ದಾರಿ ಹಿಡಿದಾಗಿತ್ತು. ಬೆಂಬಿಡದ ಹುಡುಗ ತೇಜಸ್ವಿಯವರನ್ನು ಕೆರೆಯ ಹತ್ತಿರ ಹಿಡಿದ. ಹುಡುಗನ ಮುಖವನ್ನೊಮ್ಮೆ ನೋಡಿದ ತೇಜಸ್ವಿ, ನಮ್ಮ ಪಾಡಿಗೆ ಗಾಳದಲ್ಲಿ ಮೀನು ಹಿಡಿಯುತ್ತಾ, ಯಾವುದೋ ಹಕ್ಕಿಗಳನ್ನು ಹುಡುಕುತ್ತಾ ಕುಳಿತರು.
ಮಧ್ಯಾಹ್ನದ ಹೊತ್ತಿಗೆ ಕೆರೆ ಬಿಟ್ಟು ಪಕ್ಕದ ತೋಟದ ಕಡೆಯಿಂದ ಕಾಡಿಗೆ ಹೊರಟರು. ಸಾಯಂಕಾಲದ ವರೆಗೂ ಈ ಸುತ್ತಾಟ ಮುಂದುವರೆಯಿತು. ಮನೆಗೆ ವಾಪಸ್ ಬಂದ ತೇಜಸ್ವಿ “ ನಾಳೆ ಸಿಗೋಣ” ಎಂದು ಮನೆಯೊಳಗೆ ಹೋದರು.
ಮರು ದಿನವೂ ಅದೇ ಕತೆ. ಸಾಯಂಕಾಲ ವಾಪಾಸ್ಸಾದ ನಂತರ “ ನೀನು ಎಷ್ಟು ಫೋಟೋ ತೆಗೆದೆ?” ಎಂದು ತೇಜಸ್ವಿ ಹುಡುಗನನ್ನು ಕೇಳಿದರು. ತಬ್ಬಿಬ್ಬಾಗಿ “ ನೀವೇನೂ ಹೇಳಲಿಲ್ಲ” ಎಂದು ತಡವರಿಸಿದ.
ಸಿಟ್ಟಾದ ತೇಜಸ್ವಿ “ ಅಲ್ಲಾ ಕಣಯ್ಯ. ಇಷ್ಟೊಂದು ತಿರುಗಾಡಿದಾಗಲೂ ನಿನಗೆ ಯಾವುದೇ ಸನ್ನಿವೇಶವೂ ಫೋಟೋ ತೆಗೆಯಲು ಅರ್ಹ ಎಂದು ಅನಿಸದಿದ್ದರೆ ನೀನು ಹ್ಯಾಗೆ ಫೋಟೋಗ್ರಾಫರ್ ಆಗ್ತೀಯಾ? ಯಾವುದನ್ನು ಪೋಟೋ ತೆಗೀಬೇಕು ಅಂತ ಹೇಳ್ಕೊಡಕ್ಕೆ ಆಗಲ್ಲಪ್ಪ. ನೀನು ತೆಗೆದ ಪೋಟೋವನ್ನು ಹೇಗೆ ತೆಗೆಯಬಹುದಿತ್ತು ಅಂತ ಹೇಳ್ಕೊಡಬಹುದು. ಇದು ನಿಮ್ಮಿಬ್ಬರಿಗೂ ಟೈಂ ವೇಸ್ಟ್, ಸರಿ ನೀ ಹೊರಡು” ಎಂದು ತಿರುಗಿ ನಡೆದೇ ಬಿಟ್ಟರು.
ಕಬ್ಬಿಣದ ಅಂಗಡಿಯವನೊಬ್ಬ ತೇಜಸ್ವಿ  ಅವರ ಪರಮಭಕ್ತ. ತೇಜಸ್ವಿ ಅವರ ಸ್ಕೂಟರ್ ಸದ್ದು ಕೇಳಿದ ತಕ್ಷಣ ಅಂಗಡಿಯಿಂದ ಹೊರಗೆ ಬಂದು ಒಂದು ಪೊಲೀಸ್ ಸಲ್ಯೂಟ್ ಹಾಕುತ್ತಿದ್ದ. ಒಂದು ದಿನ ಆತ ಸೆಲ್ಯೂಟ್ ಹೊಡೆಯುತ್ತಿದ್ದಂತೆ ತೇಜಸ್ವಿ ಯವರ ಸ್ಕೂಟರ್ ಅವನ ಅಂಗಡಿಯತ್ತಲೇ ನುಗ್ಗಿತು. ಲಗುಬಗೆಯಿಂದ ಅಂಗಡಿ ಮಾಲೀಕ ಕುರ್ಚಿಯ ಧೂಳು ಹೊಡೆದು ತೇಜಸ್ವಿ ಬಂದು ಕೂರುವುದನ್ನು ಕಾಯುತ್ತಾ ನಿಂತ.
ಸ್ಕೂಟರಿನಿಂದ ಇಳಿಯದ ತೇಜಸ್ವಿ “ ಅಲ್ಲಾ ಕಣಯ್ಯ, ದಿನಾ ನಾನು ಹೋಗಿ ಬರುವಾಗ ನನಗೆ ಸಲ್ಯೂಟ್ ಹೊಡೆಯುತ್ತೀಯಲ್ಲ. ದಿನಾ ಈ ಜಾಗಕ್ಕೆ ನಾನು ಬರುವಾಗ ನೀನು ಸಲ್ಯೂಟ್ ಹೊಡಿತೀದಿಯೋ ಇಲ್ಲವೋ ಅಂತಾ ನೋಡೋದೇ ಒಂದು ಕೆಲಸ ಆಗಿದೆ. ಅಲ್ಲಾ ಅಕಸ್ಮಾತ್ ನಿನಗೆ ಸಲ್ಯೂಟ್ ಹೊಡೀತಾ ಸ್ಕೂಟರ್ ಬ್ಯಾಲೆನ್ಸ್ ತಪ್ಪಿದರೆ? ಅಥವಾ ಎದುರಿಂದ ಬಂದ ಜೀಪಿಗೋ,ಕಾರಿಗೋ ಡಿಕ್ಕಿ ಹೊಡಿದ್ರೆ? ಸ್ವಲ್ಲ ಯೋಚನೆ ಮಾಡಬೇಕಯ್ಯ” ಎಂದವರೇ ಸ್ಕೂಟರ್ ತಿರುಗಿಸಿ ಮೂಡಿಗೆರೆಯತ್ತ ಹೊರಟೇ ಬಿಟ್ಟರು. ಅಂದಿನಿಂದ ಅಂಗಡಿಯವನ ಸೆಲ್ಯೂಟ್ ಬಂದಾಯ್ತು.
ಬರವಣಿಗೆ ಅಷ್ಟೇ ಅಲ್ಲ. ಕಾಫಿ ಬೆಳೆಗಾರರ ಸಮಸ್ಯೆಗಳಿಗೂ ತೇಜಸ್ವಿ ಬಹಳವಾಗಿ ಸ್ಪಂದಿಸಿದರು. ಕಾಫಿ ಬೆಳೆಗೆ ಮುಕ್ತ ಮಾರುಕಟ್ಟೆ ಒದಗಿಸುವಲ್ಲಿ ತೇಜಸ್ವಿ ಅವರ ಪಾತ್ರ ಬಹಳ ದೊಡ್ಡದು. ಹಾಗೆಯೇ ಕಾಫಿ ಮಾರುಕಟ್ಟೆಗೆ ಸಹಕಾರ ಸಂಸ್ಥೆಯಾದ ಕೊಮಾರ್ಕ್ ಹುಟ್ಟಲು ತೇಜಸ್ವಿಯವರ ಕೊಡುಗೆ ಅಪಾರ, ಆದರೆ ಪುಡಿ ರಾಜಕಾರಣಿಗಳ ಕೈಗೆ ಸಿಕ್ಕಿದ ಕೊಮಾರ್ಕ್ ಪುಡಿಪುಡಿಯಾಯ್ತು.
ಹಾಗೆಂದ ಮಾತ್ರಕ್ಕೆ ತೇಜಸ್ವಿ ಯಾವುದೇ ರಾಜಕಾರಣಕ್ಕಾಗಲಿ ಅಥವಾ ಆಂದೋಲನಕ್ಕಾಗಲಿ ಕೈ ಹಾಕಲಿಲ್ಲ ಅಂತಲ್ಲ. ಕುದುರೇ ಮುಖದ ವಿಷಯ ಬಂದಾಗಲೂ ಅಷ್ಟೇ, ಅವರ ನಿಲುವು ಸ್ಪಷ್ಟ. “ ಕಾಫಿ ಪ್ಲಾಂಟರ್ ಗಳ ಒತ್ತುವರಿಯಿಂದ ನೂರು ವರ್ಷಗಳಲ್ಲಿ ಆಗುವ ಅನಾಹುತವನ್ನು ಒಂದೇ ದಿನದಲ್ಲಿ ಈ ಗಣಿಗಾರಿಗೆ ಮಾಡುತ್ತೆ. ಈ ಫಾರೆಸ್ಟ್ ಆಫೀಸರ್ ಗಳಿಗೆ ಯಾವುದನ್ನು ಉಳಿಸಿಕೊಳ್ಳಬೇಕು, ಯಾವುದನ್ನು ಬಿಡಬೇಕು ಎಂಬ ಪ್ರಜ್ಞೆಯೇ ಇಲ್ಲ. ಗಣಿಗಾರಿಗೆ ಮುಂದುವರೆದರೆ ಸರ್ವನಾಶ ಖಂಡಿತ” ಎಂದಿದ್ದರು. ಆ ವಿಷಯದಲ್ಲಿ ನನ್ನನ್ನು ತುಂಬಾ ಪ್ರೋತ್ಸಾಹಿಸಿದರು ಕೂಡ.
ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಕೊನೆಯ ಹಂತಕ್ಕೆ ಬಂದಾಗ, ಕುದುರೆ ಮುಖ ಗಣಿಗಾರಿಕೆ ವಿರುದ್ದ ತುಂಬಾ ಜನ ಚಳುವಳಿಗೆ ದುಮುಕಿದರು. ಅದರಲ್ಲಿ ಡಾ. ಯು.ಆರ್. ಅನಂತ ಮೂರ್ತಿ ಕೂಡ ಒಬ್ಬರು. ಬೆಂಗಳೂರಿನ ಶಾಸಕರ ಭವನದಲ್ಲಿ ಸಭೆ ನಡೆದಿದ ನಂತರ, ಅನಂತ ಮೂರ್ತಿಯವರಿಗೆ ತೇಜಸ್ವಿಯವರು ಫೋನ್ ಹಚ್ಚಿ, “ ತೇಜಸ್ವಿ, ನಾನು ಕುದುರೆ ಮುಖದ ವಿರುದ್ದ ಚಳುವಳಿಯಲ್ಲಿ ಗೊಡಗಿಸಿಕೊಂಡಿದ್ದೇನೆ. ನೀನು ಬರಬೇಕು.” ಅಂದರು. ಆ ಕಡೆಯ ಉತ್ತರ ನನಗೆ ಸ್ಪಷ್ಟವಾಗಿ ಕೇಳಿತು. “ ಆ ಕೃಷ್ಣನಿಗೆ (ಎಸ್.ಎಂ. ಕೃಷ್ಣ) ಬುದ್ದಿ ಇದ್ದರೆ ಗಣಿಗಾರಿಕೆಯನ್ನು ನಿಲ್ಲಿಸಲಿ, ಇಲ್ಲದಿದ್ದರೆ ದುರ್ಗದ ಹಳ್ಳಿಯವರೆಗೆ ಗಣಿಗಾರಿಕೆಗೆ ಕೊಡಲಿ. ಎಷ್ಟು ಸಲ ಅವರಿಗೆ ಹೇಳುತ್ತಾ ಕೂರುವುದು. ನನಗೇನು ಬೇರೆ ಕೆಲಸವೇ ಇಲ್ಲವಾ” ಎಂದಿದ್ದರು.
ಸರ್ಕಾರವೇನೋ ಸರಿಯಾದ ನಿರ್ಧಾರ ತೆಗೆದುಕೊಂಡಿತು. ಸರ್ವೋಚ್ಚ ನ್ಯಾಯಾಲಯ ಗಣಿಗಾರಿಯನ್ನು ನಿಲ್ಲಿಸಲು ಆದೇಶಿಸಿತ್ತು. ಆದರೆ ಗಣಿಗಾರಿಕೆ ಕಂಪನಿಯವರು ನ್ಯಾಯಾಲಯದಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿತು. ಅನಂತ ಮೂರ್ತಿಯವರಿಗೆ ಕೊಟ್ಟ ಉತ್ತರ ನೋಡಿ, ತೇಜಸ್ವಿ ಇನ್ನೆಂದೂ ಕುದುರೇ ಮುಖದ ವಿಷಯಕ್ಕೆ ಬರೋದಿಲ್ಲ ಅಂದುಕೊಂಡಿದ್ದೆ. “ ಎಚ್.ಕೆ. ಪಾಟೀಲರು ಒಳ್ಳೆ ಮನುಷ್ಯ ಕಣೋ, ನಾನು ಹೇಳಿದೆ ಅಂತ ಹೇಳು, ಸರಿಯಾಗಿ ಕೇಸ್ ನಡೆಸಲಿ,” ಎಂದರು.
ನನ್ನ ಖುಷಿಗೆ ಪಾರವೇ ಇರಲಿಲ್ಲ. ಕಾನೂನು ಮಂತ್ರಿ ಪಾಟೀಲರು ಮತ್ತು ತೇಜಸ್ವಿ ಒಳ್ಳೆ ಗೆಳಯರೆಂದೇ ಭಾವಿಸಿ ನೆಟ್ಟಗೆ ಅವರನ್ನು ಭೇಟಿ ಮಾಡಿ, ತೇಜಸ್ವಿ ಹೇಳಿದರೆಂದು ವರದಿ ಒಪ್ಪಿಸಿದೆ. ನನಗಿಂತ ಸಂತೋಷ ಪಟ್ಟವರು ಪಾಟೀಲರು. “ ತೇಜಸ್ವಿಯವರು ಹೇಳಿದರೇ.? ನೋಡಿ ವಿನಯ್. ಅವರ ಎಲ್ಲಾ ಪುಸ್ತಕಗಳನ್ನು ಓದಿದ್ದೇನೆ. ಒಮ್ಮೆಯೂ ಭೇಟಿ ಮಾಡಿಲ್ಲ ಒಂದು ಕೆಲಸ ಮಾಡಿ. ಶುಕ್ರವಾರ ರಾತ್ರಿ ಅವರನ್ನು ನಮ್ಮ ಮನೆಗೆ ಊಟಕ್ಕೆ ಕರೆತನ್ನಿ ಈ ಕೇಸನ್ನು ನನಗೆ ಬಿಡಿ.” ಎಂದರು.
ಕರ್ಮ . . .. ನಮಾಜು ಮಾಡಲು ಹೋಗಿ, ಮಸೀದಿ ಮೇಲೆ ಬಿದ್ದಂತಾಗಿತ್ತು ನನ್ನ ಅವಸ್ತೆ. ಎರಡು ದಿನದಲ್ಲಿ ತೇಜಸ್ವಿಯವರನ್ನು ಮೂಡಿಗೆಯಿಂದ ಹೊರಡಿಸಿ, ಬೆಂಗಳೂರಿಗೆ , ಅದೂ ಒಂದು ಊಟಕ್ಕಾಗಿ ಕರೆಸಬೇಕಾಗಿತ್ತು. ಅಳುಕುತ್ತಲೇ ನಾನು, ಪ್ರವೀಣ್ ಭಾರ್ಗವ ಮತ್ತು ಡಿ.ವಿ.ಗಿರೀಶ್ ಸೇರಿ ತೇಜಸ್ವಿ ಮತ್ತು ಪಾಟೀಲರ ಭೇಟಿ ಏರ್ಪಡಿಸಿದೆವು. ಕಾರಿನಿಂದಿ ಇಳಿಯುತ್ತಲೇ, ನಾನು ಊಹಿಸಿದಂತೆ ಬೈಗಳಗಳ ಸುರಿಮಳೆ ಆಯ್ತು. ನಾನೇನು ತಲೆ ಕೆಡಿಸಿಕೊಳ್ಳಲಿಲ್ಲ.
ನಾವು ಅಲ್ಲಿಗೆ ಹೋದ ಸಮಯದಲ್ಲಿ ರಾಮಕೃಷ್ಣಾಶ್ರಮದ ಕೆಲವು ಸ್ವಾಮೀಜಿಗಳು ಪಾಟೀಲರ ಮನೆಗೆ ಬಂದು ಹೋದರು. ಅಲ್ಲಿಗೆ, ವಿಷಯಾಂತರಾಗಿ ಹೋಯಿತು. “ ನೋಡ್ರಿ, ಬರ್ತಾ ಬರ್ತಾ ಈ ರಾಮಕೃಷ್ಣಾಶ್ರಮ, ವೈಧಿಕ ಧರ್ಮಕ್ಕೆ ತಿರುಗುತ್ತಿದೆ. ಪರಮಹಂಸ ಮತ್ತು ವಿವೇಕಾನಂದರು ಹೇಳಿದ್ದೊಂದು, ಈಗ ಆಚರಿಸುತ್ತಿರುವುದು ಇನ್ನೊಂದು” ಎಂದು ತೇಜಸ್ವಿ ಶುರು ಮಾಡಿದರು. ಮೈಸೂರು ರಾಮಕೃಷ್ಣ ವಿದ್ಯಾಶಾಲೆಯ ಹಳೆಯ ವಿದ್ಯಾರ್ಥಿಯಾದ ನಾನು ಇರುಸು ಮುರುಸುಗೊಂಡು ಸುಮ್ಮನೆ ಕುಳಿತೆ.
ಊಟವಾಗಿ ಕುದುರೇಮುಖದ ವಿಷಯ ಬರುವ ಹೊತ್ತಿಗೆ ನಡುರಾತ್ರಿ ದಾಟಿತ್ತು. ಎರಡೇ ವಾಕ್ಯದಲ್ಲಿ ಮುಗಿಸಿದರು ತೇಜಸ್ವಿ: “ ನೋಡಿ, ಈಗ ನಿಮ್ಮ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದರೆ, ಮುಂದಿನ ಪೀಳಿಗೆಗೆ ಅಪಚಾರವೆಸಗಿದಂತಾಗುತ್ತದೆ. ನಿಮ್ಮ ನಿರ್ಧಾರದ ಮೇಲೆ ಮುಂದಿನ ಪೀಳಿಗೆಯ ಭವಿಷ್ಯ ನಿಂತಿದೆ”.
ಪಾಟೀಲರು ನಾವು ತೋರಿಸಬೇಕೆಂದಿದ್ದ ಸಾಕ್ಷ್ಯ ಚಿತ್ರದ ಬಗ್ಗೆ ಹೆಚ್ಚಿನ ಆಸಕ್ತಿ ತೋರಲಿಲ್ಲ. ಕೆಲವು ಸಲಹೆಗಳನ್ನಿತ್ತು ತಾವು ಸಹಕಾರ ನೀಡುವುದಾಗಿ ಆಶ್ವಾಸನೆಯನ್ನಿತ್ತರು. ಆ ಆಶ್ವಾಸನೆ ಹುಸಿಯಾಗಲಿಲ್ಲ.
ತೇಜಸ್ವಿ ನನ್ನ ಗುರುವೂ ಅಲ್ಲ, ನಾನು ಅವರಿಗೆ ಶಿಷ್ಯನೂ ಅಲ್ಲ. ಅವರ ಒಡನಾಡಿ ಅಂತೂ ಅಲ್ಲವೇ ಅಲ್ಲ. ಅಭಿಮಾನಿ ಅಷ್ಟೇ. ತೇಜಸ್ವಿಯವರನ್ನು ಎಲ್ಲರೂ ವರ್ಣಿಸುವುದು ಕುರುಡರು ಆನೆಯನ್ನು ಮುಟ್ಟಿ ವರ್ಣಿಸಿದಂತೆ ಅನ್ನಿಸುತ್ತದೆ. ನಾನೂ ಅಷ್ಟೇ.
ನಾಲ್ಕಾರು ಬೇಟಿ,ಆರೆಂಟು ಪುಸ್ತಕ, ನೂರಾರು ದಂತ ಕಥೆಗಳು, ಮೂಡಿಗೆರೆಯ ಬಾಸೇಗೌಡರ ಗಂಡಾನೆ ಗೋಪಾಲ, ಕೃಷ್ಣೇಗೌಡರ ಹೆಣ್ಣಾನೆಯಾಗುತ್ತದೆ. ನನಗೆ ಅತೀ ರೇಜಿಗೆ ಎನಿಸುತ ಮೂಡಿಗೆರೆಯ ಬೇಸಿಗೆಯಲ್ಲಿ ತೇಜಸ್ವಿ ಅವರ ನವೀರಾದ ಹಾಸ್ಯ ಪ್ರಜ್ಞೆ ಅರಳಿ, ಅದ್ಬುತವಾದ ಕಥೆಗಳಿಗೆ ದಾರಿ ಮಾಡಿಕೊಡುತ್ತದೆ. ಆಗತಾನೇ ಪ್ರೌಢಾವಸ್ತೆಗೆ ಕಾಲಿಡುತ್ತಿರುವ ಯುವಕನಂತೆ ಜೀವನದ ಪ್ರತಿಕಣವನ್ನುಪ್ರಯೋಗಕ್ಕೆ ಆಳವಡಿಸಿ ಪಜೀತಿಗೆ ಸಿಕ್ಕಿಕೊಳ್ಳುತ್ತಿದ್ದರು. ಅದರ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.
ನಾನೇ ಹೊಕ್ಕು ಹುಡುಕುವ ಪಶ್ಚಿಮಘಟ್ಟದ ಕಾಡಿನಲ್ಲಿ ತೇಜಸ್ವಿ ಇನ್ನೊಂದು ‘ ವಿಸ್ಮಯ’ವನ್ನು ಸೃಷ್ಟಿಸುತ್ತಾರೆ. ಸಾವಿರಾರು ವರ್ಷಗಳ ಹಳೆಯ ಪಳಯುಳಿಕೆಯಿಂದ ಹಿಡಿದು ಜಾಗತೀಕರಣದ ಅನಿವಾರ್ಯತೆಯವರೆಗೆ ಮಾತನಾಡುತ್ತಾರೆ. ನಮಗಿನ್ನೇನು ಬೇಕು?
ತೇಜಸ್ವಿ ತೀರಿ ಹೋದ ಸುದ್ದಿ ತಿಳಿದಾಗ, ನಾನು ಮದ್ರಾಸಿಗೆ ಹೊರಟಿದ್ದೆ. ರಸ್ತೆ ಬದಿಗೆ ಕಾರು ನಿಲ್ಲಿಸಿ ಸುಮ್ಮನೆ ಕುಳಿತೆ. ಏನೋ ಒಂಥರಾ ಕಳವಳ. ಗಹನವಾದ ಚರ್ಚೆಯನ್ನು ಆರಂಭಿಸಿ, ಹತ್ತಾರು ಜನರನ್ನು ಸೇರಿಸಿ, ಮಹತ್ವದ ಘಟ್ಟದಲ್ಲಿ ಆರಂಭಿಸಿದವರರು, ಏನನ್ನೂ ಹೇಳದೆ ಎದ್ದು ಹೋದೋತಿತ್ತು. ಮುಂದೇನು? ಚರ್ಚೆಯ ಗುರಿಯೇನು?.... ಯಾವುದಕ್ಕೂ ಉತ್ತರವಿಲ್ಲ.
ಛೆ! ಒಂದು `ಗುಡ್ ಬ್ಐ’ ಕೂಡ ಬೇಡವೇ? ಮೂಡಿಗೆರೆಗೆ ಹೋಗುವ ಮನಸ್ಸಾಯಿತು.  ಹೋಗಿ ಮಾಡುವುದೇನು? ನೂರು ಕುರುಡರ ಮಧ್ಯ ನನ್ನದೊಂದು ಒಗ್ಗರಣೆ ಅಷ್ಟೇ.

ತೇಜಸ್ವಿ ಹೋದರು, ನಾನು ತಿರುಗಿ ನೋಡುವುದಿಲ್ಲ.

ಮಾಕೋನಹಳ್ಳಿ ವಿನಯ ಮಾಧವ.

ದತ್ತ ಪೀಠ


ಬಾಬಾ, ದತ್ತ ಮತ್ತು ನೆನ್ನೆ, ನವೀದರ ಕೋಳಿ ಜಗಳ

ಮೂಡಿಗೆರೆ ಹತ್ತಿರದ ನನ್ನೂರಿಗೆ ಹೊದಾಗ, ನನಗೇನು ಕೆಲಸ ಇರುವುದಿಲ್ಲ. ಮನೆ ಹತ್ತಿರ ಕ್ಯಾಮರ ಹರಡಿಕೊಂಡು, ಬಾರದ ಹಕ್ಕಿಗಳನ್ನು ಕಾಯುತ್ತಾ ಕುಳಿತಿರುತ್ತೇನೆ. ಇನ್ನೊಂದು ಕೆಲಸ ಎಂದರೆ, ಅಣ್ಣ(ಅಪ್ಪ) ಎಲ್ಲಾದರೂ ಹೊರಟರೆ, ಡ್ರೈವರ್.
ಪ್ರತಿಸಲದಂತೆ ಆಯುದ ಪೂಜೆಗೆ ಅಣ್ಣ ಗೆಂಡೇಹಳ್ಳಿಗೆ ಹೊರಟರು. ನಾವಿರುವ ಮೂಡಸಸಿಯಿಂದ 8 ಕಿಲೋಮೀಟರ್ ದೂರದಲ್ಲಿ, ಹಾಸನ ಜಿಲ್ಲೆಯ, ಬೇಲೂರು ತಾಲೂಕಿನಲ್ಲಿ ಇದೆ. ನಮ್ಮದೊಂದು ರೈಸ್ ಮಿಲ್ ಮತ್ತು ಸ್ವಲ್ಪ ತೋಟ, ಅಜ್ಜ, ಅಜ್ಜಿ ತೀರಿಹೋದ ಮೇಲೆ ಆ ಮನೆಗೆ ಬೀಗ, ವಾರಕ್ಕೊಮ್ಮೆ ಅಣ್ಣ ಹೋಗಿ ಬರುತ್ತಾರೆ.
ಚಿಕ್ಕ ಊರು, ನಮ್ಮಜ್ಜನ ತಮ್ಮ ಪುಟ್ಟೇಗೌಡರು ಮಿಲ್ಲು ಹಾಕಿದಾಗ ಬೇಲೂರಿನಲ್ಲೂ ಮಿಲ್ಲು ಇರಲಿಲ್ಲವಂತೆ. ಪಾಲಿನಲ್ಲಿ ನಮಗೆ ಬಂತು. ಮನೆಬೀಗ ತೆಗೆದ ತಕ್ಷಣ, ಸದಾ ಕಾರ್ಟೂನ್ ನೆಟ್ವರ್ಕ್ ಗುಂಗಿನಲ್ಲಿರುವ ನನ್ನ ಮಗಳು ಸೃಷ್ಟಿ ಅಂದಳು: `ಅಪ್ಪ ಹಾಂಟೆಂಡ್ ಹೌಸ್ !
ನಗು ಬಂತು. ಗತಕಾಲ ವೈಭವದಲ್ಲಿ ಮನೆ ಯಾವಾಗಲೂ ಗಿಜಿಗುಡುತ್ತಿತ್ತು. ಮಕ್ಕಳು, ಮೊಮ್ಮಕ್ಕಳು, ಆಳು ಕಾಳುಗಳ ಮಧ್ಯ ಈ ಮನೆಯಲ್ಲಿ ನಮ್ಮ ಅಸ್ತಿತ್ವ ಏನು ಎಂದು ಅರ್ಥ ಆಗುವುದರೊಳಗೆ ನಾನು, ನನ್ನಣ್ಣ ವೆಂಕಟೇಶನೂ ಕಾಲೇಜ್ ಮೆಟ್ಟಿಲು ಹತ್ತಿದ್ದೆವು. ಅಜ್ಜ, ಅಜ್ಜಿ ಸಾಯುವುದರೊಳಗೆ, ನಾವಿಬ್ಬರು ಕೆಲಸಕ್ಕೆ ಸೇರಿಕೊಂಡಿದ್ದೆವು.
ವಾರದ ಬಟವಾಡೆ ಮುಗಿದ ಮೇಲೆ, ಆಯುಧ ಪೂಜೆಯ ಮಾತು ಶುರು ಆಯ್ತು. ಪೂಜೆಯ ಲೆಕ್ಕ ಆದ ಮೇಲೆ, ಕೋಳಿ ಲೆಕ್ಕ ಶುರು ಆಯ್ತು. ಮಿಲ್ಲಿನಲ್ಲಿ ಇರುವವರು ಮೂರು ಜನ. ಮೂಟೆ ಹೊರೋಕ್ಕೆ ಮೊಗಣ್ಣ, ಎಲ್ಲರಿಗೂ ಸಣ್ಣ ಪುಟ್ಟ ಕೆಲಸ ಮಾಡಿಕೊಟ್ಟು ಹೊಟ್ಟೆ ಹೊರಯುವ ಪಾಪದ ಅಲೀಮ ಮತ್ತು ಮಿಲ್ಲಿನ ಡ್ರೈವರ್ ನವೀದ್ .
ಎಲ್ಲರಂತೆ ಅಣ್ಣನಿಗೂ ಅಲೀಮನ ಮೇಲೆ ವಿಶೇಷ ಮಮತೆ. ಕುಂಠಿತವಾದ ಬುದ್ದಿ ಬೆಳವಣಿಗೆ, ಮುಗ್ದನಗೆ. ಅವನಿಗೆ ಅನ್ಯಾಯವಾಗುವುದು ಯಾರಿಗೂ ಇಷ್ಟವಾಗದ ವಿಷಯ. ಅವನಿಗೂ ಸೇರಿ ಕೋಳಿ ಲೆಕ್ಕ ಮಾಡುವಾಗ, ನವೀದ್, ನೆನ್ನೆಗೂ ಒಂದು ಕೋಳಿ ಸ್ಯಾಂಕ್ಷನ್ ಮಾಡುವಂತೆ ಕೇಳಿದ ಪಕ್ಕನೆ ನಗುಬಂತು, ಮುಗುಳ್ನಗುತ್ತಾ ಹೊರಗೆ ಬಂದೆ. ನೆನ್ನೆ ಇನ್ತಾರೂ ಅಲ್ಲ. ನವೀದನ ಅಪ್ಪ
ಅಲ್ವೊ, ಇಬ್ಬರೂ ಒಂದೇ ಮನೆಯಲ್ಲಿ ಇದ್ದೀರಲ್ಲೋ. ಮತ್ಯಾಕೆ ಇನ್ನೊಂದು ಕೋಳಿ.ಅಂತ ಅಣ್ಣ ಕೇಳುತ್ತಿದ್ದದು ಕಿವಿಗೆ ಬಿತ್ತು.
ನೀವು ಇನ್ನೊಂದು ಕೊಡದೆ ಹೋದರೆ. ಅವರು ನನ್ನ ಕೋಳಿಯನ್ನೇ ಕಿತ್ತುಕೊಳ್ಳುತ್ತಾರೆ ಅಷ್ಟೆ.ಅಂತ ನವೀದ್ ವಾದಿಸುತ್ತಿದ್ದ. ಅಂತೂ ಇಂತೂ, ನೆನ್ನೆಗೂ ಇಂದು ಕೋಳಿ ಸ್ಯಾಂಕ್ಷನ್ ಆಯ್ತು.
ನಮ್ಮ ಕುಟುಂಬದಂತೆಯೇ, ನೆನ್ನೆ ಕುಟುಂಬದವರೂ, ನಮ್ಮ ಮಿಲ್ಲಿನಲ್ಲಿ ಡ್ರೈವರ್ ಕೆಲಸವನ್ನು ವಂಶಪಾರಂಪರ್ಯವಾಗಿ ಮಾಡಿಕೊಂಡು ಬಂದಿದ್ದಾರೆ. 70 ವರ್ಷಗಳಿಗೂ ಮಿಕ್ಕಿ. ಮಿಲ್ಲಿನಲ್ಲಿ ಗಣಪತಿ ಹಬ್ಬ, ದೀಪಾವಳಿ ಅಥವಾ ಆಯುಧಪೂಜೆ ನಡೆಯುವಾಗಿ ಅವರದೇ ಮುಂದಾಳತ್ವ ಇದೂ, ವಂಶಪಾರಂಪರ್ಯ.
ನವೀದ ನನಗಿಂತ ಐದಾರು ವರ್ಷ ದೊಡ್ಡವನಿರಬಹುದು. ನನ್ನ ಮಗಳ ವಯಸ್ಸಿನ ಮೊಮ್ಮಗುವಿದೆ. ಚಿಕ್ಕದಿನಿಂದ ಚಿನ್ನಿದಾಂಡು, ಕ್ರಿಕೆಟ್ ಆಡಿಕೊಂಡು ಬೆಳೆದವರು, ಗೆಂಡೆಹಳ್ಳಿಗೆ ಹೋದಾಗಲೆಲ್ಲ, ನವೀದನ ಕೈಯಲ್ಲಿ ಸ್ವಲ್ಪ ದುಡ್ಡಿಟ್ಟು, ಮೂರು ಜನ ತಗೊಳ್ಳಿ ಅಂತ ಹೇಳುವಾಗ, ಮೊಗಣ್ಣ ಮತ್ತು ಅಲೀಮ ಮುಗುಳ್ನಗುತ್ತಾರೆ.
ವರ್ಷಗಳ ಹಿಂದೆ ನಾನು ಬೆಂಗಳೂರಿನಲ್ಲಿ ಕೆಲಸಕ್ಕೆ ಹೊರಟಾಗ ನವೀದ ವಿಚಲಿತಗೊಂಡಿದ್ದ. ದೇವರು ಕೊಟ್ಟ ಆಸ್ತಿ ಇದೆ ಅಣ್ಣ, ಕಷ್ಟಪಟ್ಟು ದುಡಿದರೆ ಸಾಕು. ಎಲ್ಲೋ ಹೋಗಿ ಯಾಕೆ ಒದ್ದಾಡಬೇಕು?” ಅಂದಿದ್ದ.
ಮಲೆನಾಡಿನಲ್ಲಿ ಸಂಬಂಧಗಳಿದ್ದದ್ದೇ ಹೀಗೆ. ಚಿಕ್ಕವನಿದ್ದಾಗ, ಗೆಂಡೇಹಳ್ಳಿಗೆ ಬರುತ್ತಿದ್ದದ್ದೇ ಎರಡು ಬಸ್, ಒಂದು ಶಂಕರ್, ಮತ್ತೊಂದು ಹನುಮಾನ್, ಒಂದೆರಡು ಸರ್ಕಾರಿ ಬಸ್ಸುಗಳು ಬೇಲೂರಿನಿಂದ ಮೂಡಿಗೆರೆಗೆ ಹೋಗುತ್ತಿದ್ದವೇನೋ. ಆದರೆ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಚಿಕ್ಕಮಗಳೂರಿಗೋ, ಮೂಡಿಗೆರೆಗೋ ಹೋಗಲು ಜನಗಳು ನೆಚ್ಚಿಕೊಂಡಿದ್ದು ಇರೆರಡೇ ಬಸ್ಸುಗಳನ್ನು.
ಹನುಮಾನ್ ಬಸ್ಸಿನ ಮಾಲೀಕ ಮುಸ್ಲಿಂ. ಅಬ್ಬಾಸ್ ಅಂತ ಏನೋ ಇರಬೇಕು ಮತ್ತು ಹಿರೇಮಗಳೂರಿನ ಹನುಮನ ಭಕ್ತ. ಹನುಮಾನ್ ಪೂಜೆ ಮಾಡದೆ, ಒಂದು ತೊಟ್ಟು ನೀರೂ ಕುಡಿಯುತ್ತಿರಲಿಲ್ಲವಂತೆ.
ಅಣ್ಣ ಚಿಕ್ಕವರಿದ್ದಾಗ. ಮೂಡಿಗೆರೆಯ ಗಣಪತಿ ವಿಸರ್ಜನೆಯಲ್ಲಿ ಕರಗ ಹೊರುತ್ತಿದ್ದದ್ದು ಸಾಬರವನೆ. ಅಬ್ದುಲ್ಲಾ ಅಂತ ಏನೋ ಇರಬೇಕು. ಇವುಗಳ ಬಗ್ಗೆ ಬಹಳ ಕಥೆಗಳನ್ನು ಚಿಕ್ಕಂದಿನಲ್ಲಿ ಕೇಳಿದ್ದೆವು. ಎಲ್ಲಾ ಕಥೆಗಳೂ ನಿಜವಲ್ಲದಿದ್ದರೂ , ಸತ್ಯಕ್ಕೇನೂ ದೂರವಲ್ಲ.
ಸಂಬಂಧಗಳ ಬಗ್ಗೆ ಅನುಮಾನ ಬಂದಿದ್ದೇ ಸುಂದರೇಶ ಚಿಕ್ಕಪ್ಪನ ಮಗಳು ನಿಶ್ಚಿತಾಳ ನಶ್ಛಿತಾರ್ಥದಲ್ಲಿ. ನಮ್ಮ ಮನೆತನದ ಐದಾರು ಹುಡುಗರು ಜೀಪಿನಲ್ಲಿ ಬಂದು ಇಳಿದರು. ಎಲ್ಲರೂ ದತ್ತಮಾಲೆ ದರಿಸಿ, ಯಾವುದೋ ಫ್ಯಾನ್ಸಿಡ್ರೆಸ್ ಗೆ ಹೋಗುತ್ತಿರುವಂತೆ ಅನ್ನಿಸಿತು. ಬೆಂಗಳೂರಿನಲ್ಲಿ ಪಬ್ಬಿಂದ ಪಬ್ಬಿಗೆ ಹಾರುತ್ತಿದ್ದ ಈ ಹುಡುಗರೆಲ್ಲಿ, ದತ್ತಮಾಲೆ ಎಲ್ಲಿ? ಬೆಳಿಗ್ಗೆ 5 ಘಂಟೆಗೆ ತಣ್ಣೀರು ಸ್ನಾನ ಬೇರೆ, ನನಗೇ ಛಳಿ ಬಂದಂತೆ ಆಯ್ತಿ. ಏನ್ರೋ ಇದು ಅಂದ್ರೆ ಹಿ..ಹಿಹಿ.. ಅಂತ ಪೆಚ್ಚು ಪೆಚ್ಚಾಗಿ ಹಲ್ಲು ಕಿರಿದರು.
ಅಂದೇ, ಮೂಡಿಗೆರೆ ಕಡೆಯಿಂದ ಮನೆಗೆ ಹೋಗುವಾಗ ಸಾಲು ಬುರ್ಖಾಗಳು ಮತ್ತು ಗಡ್ಡಧಾರಿ ಮುಸ್ಲಿಮರನ್ನು ನೋಡಿದಾಗ ಪಿಚ್ಚೆನಿಸಿತು. ಅಣ್ಣನನ್ನು ಕೇಳಿದಾಗ, `ಎಲ್ಲಾ ಬದಲಾಗಿದೆ. ಮೊದಲಿನಂತಿಲ್ಲಎಂದು ಫಿಲಾಸಫಿಕಲ್ ಆಗಿ ಹೇಳಿದರು. ಈ ಬದಲಾವಣೆ  ನಾನು ಗಮನಿಸರಿಲಿಲ್ಲ.
ದತ್ತ ಪೀಠವೇ ಒಂದು ವಿಚಿತ್ರವಾದ ಸಮಸ್ಯೆ, ನನಗೆ ತಿಳಿದಂತೆ, ಬಾಬಾ ಬುಡನ್ ಸಾಹೇಬರ ಉರಸಿನಲ್ಲಿ ತಾಯತ ಕಟ್ಟಿಸಕೊಳ್ಳುವ ಹಿಂದೂಗಳಿಗೂ, ದತ್ತಪೂರ್ಣಿಮೆಯಲ್ಲಿ ಹರಕೆ ಸಲ್ಲಿಸುವ ಸಾಬರಿಗೂ ಏನೂ ಕಡಿಮೆ ಇರಲಿಲ್ಲ. ಇದೇನು ಸಾವಿರಾರು ಜನ ಸೇರುವ ಜಾಗವೂ ಆಗಿರಲಿಲ್ಲ. ಅಲ್ಲಿ ಗುರು ದತ್ತಾತ್ರೇಯ ಪೀಠವಿದೆ, ಅನುಸೂಯ ದೇವಿಯವರ ಗುಹೆ ಇದೆ. ಮೈಸೂರು ಮಹಾರಾಜ ಮತ್ತು ಮಹಾರಾಣಿಯವರು ಇಲ್ಲಿಗೆ ಭೇಟಿ ನೀಡಿ ದೇಣಿಗೆ ನೀಡಿದ್ದರು.
ಹಾಗೆಯೇ, ಬಾಬಾ ಬುಡನ್ ಸಾಹೇಬರು ಅರೆಬಿಯಾದಿಂದ ಊರುಗೋಲಿನಲ್ಲಿ ಕಾಫಿ ಬೀಜ ಹಾಕಿಕೊಂಡು ಬಂದು, ಇದೇ ಗುಹೆಯೊಳಗೆ, ಅವರ ಜೀವನದ ಕೊನೆಯ ದಿನಗಳನ್ನು ಕಳೆದದ್ದು ಸಹ ಸತ್ಯ. ಮಲೆನಾಡು ಪ್ರದೇಶದಲ್ಲಿ ಕಾಫಿ ಬೆಳೆ ಬರಲು ಇದೇ ಮೂಲ ಕಾರಣ ಮತ್ತು ಅದು ದಾದ ಹಯಾತ್ ಮೀರ್ ಖಲಂದರ್ ಅಲಿಯಾಸ್ ಬಾಬ ಬುಡಾನ್ ಸಾಹೇಬರ ಪ್ರಸಾದ ಎಂದರೂ ತಪ್ಪಾಗಲಾರದು.,
ಸಮಸ್ಯೆ ಶುರು ಆಗಿದ್ದೇ ಆಗಿನ ಶಾಖಾದ್ರಿ( ಈಗಿನ ಶಾಖಾದ್ರಿಯ ತಂದೆ) ಮತ್ತು ಅಪ್ಪಣ್ಣ ಶೆಟ್ಟರ ಜಗಳದಿಂದ. ಶಾಖಾದ್ರಿ ಪೂಜೆ ಮಾಡಲು ಅಡ್ಡಿಮಾಡಿದಾಗ, 1964ರಲ್ಲಿ ಬಿ.ಎಸ್. ನಾಗರಾಜ್ ಮತ್ತು ಸಿ. ಚಂದ್ರಶೇಖರ್ ಕೋರ್ಟ್ ಮೆಟ್ಟಿಲು ಹತ್ತಿದ್ದರು. 1978ರಲ್ಲಿ ಚಿಕ್ಕಮಗಳೂರು ಕೋರ್ಟ್ ಜಿಲ್ಲಾ ಆಡಳಿತಕ್ಕೆ ಪೀಠದ ಉಸ್ತುವಾರಿಯನ್ನು ವಹಿಸಿಕೊಳ್ಳುವಂತೆ ಹೇಳಿತು. ಆದರೆ ಅಲ್ಲಿಂದಾಚೆ ಕಾನೂನು ಸಮರ ನಿಲ್ಲಲೇ ಇಲ್ಲ. ಒಂದಕ್ಕೊಂದು ತದ್ವಿರುದ್ದವಾದ ತೀರ್ಪುಗಳು ಹೊರಬಂದವು.
ಇದಕ್ಕೆ ತಿರುವು ಬಂದದ್ದೇ ರಾಮ ಜನ್ಮಭೂಮಿ ವಿವಾದದ ನಂತರ, ವಿವಿಧ ಸಂಘ ಸಂಸ್ಥೆಗಳು ಮತ್ತು ಸರ್ಕಾರವು ದತ್ತಪೀಠದ ವಿವಾಧವನ್ನು ಗುತ್ತಿಗೆಗೆ ತೆಗೆದುಕೊಂಡು, ತಮಗೆ ಅನುಕೂಲವಾಗುವ ಕೋರ್ಟ್ ತೀರ್ಪಿನ  ಅನುಗುಣವಾಗಿ ವಾದ-ವಿವಾಧಗಳನ್ನು ಮಂಡಿಸಲಾರಂಭಿಸಿದವು. ಸಂಘ ಪರಿವಾರದಿಂದ ಪ್ರಮೋದ್ ಮುತಾಲಿಕ್, ಸಿ.ಟಿ.ರವಿ ಮುಂತಾದವರು ಮುಂದಾಳತ್ವ ವಹಿಸಿದರೆ ಬುದ್ದಿ ಜೀವಿಗಳೆನಿಸಿದ ಗಿರೀಶ್ ಕಾರ್ನಾಡ್, ಗೌರಿ ಲಂಕೇಶ್ ಹಿಂದೆ ಬೀಳಲಿಲ್ಲ.
ವಿವಾದ ತಾರಕಕ್ಕೇರಿದಾಗ, ನಾನು ಪೊಲೀಸ್ ಗುಪ್ತಚರ ವರದಿಯೊಂದನ್ನು ಸಂಪಾದಿಸಿ ಓದಿದೆ. ಅದರ ಪ್ರಕಾರ, ದತ್ತಪೀಠ ಅಂಥಾ ದೊಡ್ಡ ಸಮಸ್ಯೆಯೇನೂ ಆಗಿರಲಿಲ್ಲ. ವಿವಿಧ ಕೋರ್ಟ್ ತೀರ್ಪುಗಳನ್ನು ವಿಶ್ಲೇಶಿಸಿ. ಸರ್ಕಾರಕ್ಕೆ ಒಂದು ಸಲಹೆ ನೀಡಿತ್ತು. ಹಿರಿಯ ಶಾಖಾದ್ರಿ ಆಗಾಗಲೇ ತೀರಿ ಹೋಗಿದ್ದರು. ಹಾಗಾಗಿ ಅವರ ಮಗನನ್ನು ಶಾಖಾದ್ರಿ ಎಂದು ಒಪ್ಪಿಕೊಂಡರೂ, ಬರೀ ಧಾರ್ಮಿಕ ವಿಧಿ ವಿಧಾನಗಳಿಗೆ ಸೀಮಿತವಾಗಿರಬೇಕೆಂದೂ, ಉರುಸ್ ಮತ್ತು ದತ್ತಜಯಂತಿಯನ್ನು ಜಿಲ್ಲಾಡಳಿತವೇ ನಡೆಸಬೇಕೆಂದು ಸಲಹೆ ನೀಡಿತು. ಆಸಲಹೆ ಸರಿ ಇದೆ ಎಂದು ನನಗೆ ಅನಿಸಿತು.
ಪತ್ರಕರ್ತನಾಗಿ ಮೊದಲ ಸಲ ದತ್ತ ಪೀಠದ ವಿಷಯವನ್ನು ವರದಿ ಮಾಡಲು ಹೋದಾಗ ಅದು ಬುದ್ದಿ ಜೀವಿಗಳ ಸಭೆಯಾಗಿತ್ತು. ಗಿರೀಶ್ ಕಾರ್ನಾಡ್ ಮತ್ತು ಗೌರಿ ಲಂಕೇಶ್ ಉಪಸ್ಥಿತಿಯಿದ್ದ ಸಭೆಯಲ್ಲಿ ಇವರು ಶಾಖಾದ್ರಿ, ಬಾಬಾ ಬುಡನ್ ಗಿರಿಯ ಚೀಫ್ಎಂದು ಕಾರ್ನಾಡರು ಪರಿಚಯಿಸಿದರು. ಸಭೆಯ ನಂತರ ಈ ವಿಷಯ ಪೊಲೀಸ್ ವರದಿಯಷ್ಟು ಸರಳವಿಲ್ಲ ಎನಿಸಿತು.
ಅದೇ ವರ್ಷ ಬಾಬ ಬುಡನ್ ಗಿರಿಯ ದತ್ತ ಜಯಂತಿಯನ್ನು ವರದಿ ಮಾಡಲು ಹೋಗಿದ್ದೆ. ಕೈಮರದಿಂದ ಬಾಬಬುಡನ್ ಗಿರಿಯವರೆಗೆ ಪೊಲೀಸ್ ಬಂದೋಬಸ್ತ್ ನೋಡೊ ದಂಗಾದೆ. ಅಲ್ಲೇ ಹತ್ತಿರದಲ್ಲಿದ್ದ ನನ್ನ ಸಂಬಂಧಿ ಗಿರೀಶನ ಮನೆಗೆ ಹೋದವನೇ ಅಲ್ವೋ ಮಾರಾಯ ಅದ್ಹೇಗೆ ಈ ಸೆಕ್ಯುರಿಟಿ ಅನಿಷ್ಠಾನ ಪ್ರತಿ ವರ್ಷ ಸಹಿಸ್ಕೊಂಡಿದ್ದೀರಾ ನಿಮಗೇನು ಅನ್ಸೋದಿಲ್ವಾಅಂತ ಕೇಳಿದೆ.
ಏನು ಮಾಡೋದ್ ಮಾರಾಯಾ, ದಿನಕ್ಕೆರಡ್ಸಲಾ ಚಿಕ್ಕಮಗಳೂರಿಗೆ ಹೋದ್ರೆ ನಾಲ್ಕು ಸಲ ಚೆಕಿಂಗ್ ಆಗ್ತದೆ. ಅದಕ್ಕೆ ನಾವು ದತ್ತ ಜಯಂತಿಯ ಸಮಯದಲ್ಲಿ ಮೂರು ಮೂರು ದಿನ ಮನೆ ಬಿಟ್ಟು ಹೊರಗೆ ಬರಲ್ಲಾಅಂದ. ಗಿರೀಶ ಅಲ್ದೆ ಆ ಪ್ರದೇಶದಲ್ಲಿ ನೂರಾರು ಎಸ್ಟೇಟ್ ಗಳಿವೆ ಅಲ್ಲಿಯ ಮಾಲೀಕರು ಆಳುಗಳು ಸೇರಿದಂತೆ ಅನೇಕರಿಗೆ ಇದು ಒಂಥರಾ ಓಪನ್ ಜೈಲ್ಅನಿಸಿತು.
ಯಾರೂ ಕೋವಿ ತೆಗೆದುಕೊಂಡು ಇವರಿಗೆ ಗುಂಡುಹೊಡೆದಿಲ್ವಾ ಇನ್ನೂ, ಎನ್ನಿಸಿತು.
 ಅಷ್ಟರಲ್ಲಿ ಚಿಕ್ಕಮಗಳೂರಿನಿಂದ ಹೊರಟ ಪಾದಯಾತ್ರೆ ಬಾಬ ಬುಡನ್ ಗಿರಿ ಸಮೀಪಿಸಿತು. ಮುಂಚೂಣಿಯಲ್ಲಿದ್ದ ಸಿ.ಟಿ.ರವಿ ಪಂಚೆಯೊಂದನ್ನು ತೊಟ್ಟು ಬರಿಕಾಲಿನಲ್ಲಿ ನಡೆದುಕೊಂಡು ಬರುತ್ತಿದ್ದರು. ಪೂಜೆಯಾದ ಮೇಲೆ ಹತ್ತಿರದಲ್ಲೇ ಮಟ್ಟಮಾಡಿದ ಜಾಗದಲ್ಲಿ ಭಾಷಣಗಳು ಆರಂಭವಾದವು. ಉದ್ವೇಗಗೊಂಡಂತೆ ಕಾಣುತ್ತಿದ್ದ ಮುತಾಲಿಕ್ ಪದೇಪದೇ ಮುಸ್ಲಿಂಎಂದು ಕೂಗುತ್ತಿದ್ದರು. ಮಿತ್ರನಾದ ಮಾಕೋಡು ಸುಧೀರನು ಕಾರ್ನಾಡರನ್ನು ಯದ್ವಾ-ತದ್ವಾ ತರಾಟೆಗೆ ತೆಗೆದುಕೊಳ್ಳುತ್ತಿದ್ದ. ಅವನನ್ನು ಬಿಟ್ಟರೆ ಭಾಷಣಕಾರರೆಲ್ಲಾ ಹೊರಗಿನವರು. ಅಂದು ಸಂಜೆ ಸಾಧ್ವಿ ರಿತಂಬರ ಚಿಕ್ಕಮಗಳೂರಿನಲ್ಲಿ ದತ್ತ ಪೀಠದ ಚರಿತ್ರೆಯ ಬಗ್ಗೆ ಉದ್ದದ ಭಾಷಣವನ್ನೇ ಬಿಗಿದರು. ಅಲ್ಲಿಗೆ ದತ್ತ ಪೀಠದ ಸಮಸ್ಯೆಗೆ ಚಿಕ್ಕಮಗಳೂರಿನವರು ಪರಿಹಾರ ಕಂಡು ಕೊಳ್ಳಲು ಸಾಧ್ಯವೇ ಎಂದು ಎಂದು ನನಗೆ ಬಲವಾಗಿ ನಂಬಿಕೆ ಮೂಡಿತು. ಹೊರಗಿನವರಿಗೆ ಈ ಸಮಸ್ಯೆಯ ಉಸಾಬರೀ ಏತಕ್ಕೆ ಎಂದು ವಿಪರೀತ ರೇಜಿಗೆಯಾಯಿತು.
ರೇಜಿಗೆಯನ್ನು ಯಾರೊಟ್ಟಿಗೂ ಹಂಚಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಒಮ್ಮೆ ನಕ್ಸಲ್ ವಿಚಾರದಲ್ಲಿ ನಾನು ಬರೆದ ವರದಿಯ ಬಗ್ಗೆ ಮಾತನಾಡಲು ಗೌರಿ ಲಂಕೇಶ್ ಫೋನ್ ಮಾಡಿದ್ದರು. ಅದೂ ಹೊರಗಿನವರೂ ತಲೆ ಹಾಕಿತ್ತಿರುವ ವಿಷಯವಾಗಿದ್ದರಿಂದ ನಾನು ಸ್ವಲ್ಪ ಉದ್ವೇಗಗೊಂಡೆ. ಮಾತಿನ ಭರದಲ್ಲಿ ದತ್ತ ಪೀಠವನ್ನು ಪ್ರಸ್ತಾಪಿಸಿ, ನಮ್ಮ ಮನೆಯಲ್ಲಿನ ಸಮಸ್ಯೆಯ ಮಧ್ಯ ತಲೆಹಾಕಲು ಉಮಾಭಾರತಿ, ರಿತಂಬರ, ಗೌರಿ ಲಂಕೇಶ್ ಇವರಿಗೆಲ್ಲಾ ಯಾರು ಅಧಿಕಾರ ಕೊಟ್ಟಿದ್ದು ಎಂದು ಕೇಳೇ ಬಿಟ್ಟೆ. ಅಲ್ಲಿಗೆ ಮುಗಿಯಿತು ನನ್ನ ಗೌರಿ ಲಂಕೇಶರ ಸಂಬಂಧ.
ಮುಂದಿನ ಸಲ ಊರಿಗೆ ಹೋದಾಗ ಸೀದ ತೇಜಸ್ವಿಯವರನ್ನು ಭೇಟಿಯಾದೆ. ನಡೆದ ವಿಷಯವನ್ನು ಹೇಳಿ ಸರ್, ಇಲ್ಲಿ ನಾವು ಒಂದು ನಿಲುವನ್ನು ತೆಗೆದುಕೊಳ್ಳಲೇ ಬೇಕಾ? ನೀವು ಮಾಡೋದು ತಪ್ಪು ಎಂದು ಎಡಪಂಥೀಯರಿಗೆ ಹೇಳಿದರೆ, ನಮ್ಮನ್ನು ಸಂಘ ಪರಿವಾರದವರು ಎಂದು ಪಟ್ಟಿ ಕಟ್ತಾರೆ. ಸಂಘ ಪರಿವಾರದವರಿಗೆ ಹೇಳಿದ್ರೆ ನೀವು ನಕ್ಸಲ್ ಅಂತಾರೆ. ನಾವು ಮಧ್ಯದಲ್ಲಿರೋದೇ ತಪ್ಪಾ,” ಅಂತ ಕೇಳಿದೆ.
ಮಧ್ಯದಲ್ಲಿರಕ್ಕೆ ನೀನೇನು ಜಡ್ಜಾ. ನೋಡಯ್ಯಾ ನೀನು ನಿನ್ನ ಸಮಯ ಹಾಳು ಮಡ್ತಾ ಇದ್ದೀಯ, ನನ್ನದ್ನೂ ಹಾಳು ಮಾಡ್ತಾ ಇದ್ದೀಯ. ದತ್ತ ಪೀಠ ಯಾರದೂ ಅಲ್ಲ. ಆ ದತ್ತಾತ್ರೇಯನ ಫೋಟೋ ಕೆಳಗೆ ನೋಡು, ನಾಯಿ ಇದೆ. ನಾಯಿನ ಹಿಂದೂಗಳಾಗ್ಲಿ, ಮುಸ್ಲೀಮರಾಗಲಿ ಪೂಜೆ ಮಾಡಲ್ಲ. ಈ ವಿವಾದ ಒಂದು ಸಿವಿಲ್ ಡಿಸ್ಪೂಟ್ ಅಷ್ಟೇ. ಟೈಮ್ ವೇಸ್ಟ್ ಮಾಡ್ಬೇಡ ಹೋಗುಎಂದರು.
ಅಲ್ಲಿಗೆ ನಾನು ಆ ವಿಷಯದಲ್ಲಿ ತಲೆ ಹಾಕೋಂದನ್ನು ನಿಲ್ಲಿಸಿದೆ. ಮುಂದಿನ ಚುನಾವಣೆಯಲ್ಲಿ ಸಿ.ಟಿ.ರವಿ ಎಂ.ಎಲ್.ಎ ಕೂಡಾ ಆದರು. ದತ್ತನಾಗಲಿ ಬಾಬನಾಗಲಿ, ಅವರನ್ನು ನಂಬಿದವರ ಕೈ ಬಿಟ್ಟಂತೆ ಕಾಣಲಿಲ್ಲ. ಎಲ್ಲರೂ ಒಂದಲ್ಲ ಒಂದು ಥರ ಒಳಿತನ್ನೇ ಕಂಡರು. ಎಂ ಎಲ್ ಎ ಆದ ನಂತರ ಪಾದಯಾತ್ರೆಯಲ್ಲಿ, ಸಿ.ಟಿ.ರವಿಯ ಕಾಲಿನಲ್ಲಿ ನೈಕಿ ಷೂ ಮತ್ತು ಮುಖದಲ್ಲಿ ರೇಬಾನ್ ಗ್ಲಾಸ್ ರಾರಾಜಿಸುತ್ತಿದ್ದವು. ಹಾಗೇ ಉರುಸ್ ಗೆ ಹೋಗುವ ಹಿಂದುಳ ಸಂಖ್ಯೆಯೂ, ದತ್ತ ಜಯಂತಿಯಲ್ಲಿ ಭಾಗವಹಿಸುವ ಮುಸ್ಲೀಂಮರ ಸಂಖ್ಯೆಯೂ ಶೂನ್ಯವಾಗಿದೆ ಎಂಬುದು ನನಗೆ ತಿಳಿದಿತ್ತು. ದತ್ತ ಜಯಂತಿಯಾದ ಮೇಲೆ ಉಟ್ಟ ಅರಿವೆಯನ್ನು ಮಾಣೀಕ್ಯಾಧಾರ ಜಲಪಾತಕ್ಕೆ ಎಸೆಯುವ ಅನಾಹುತಕಾರಿ ಸಂಪ್ರದಾಯವೂ ಹುಟ್ಟು ಹಾಕಿಕೊಂಡಿದೆ. ದತ್ತ ಪೀಠದ ಸುತ್ತ ಒಂದಲ್ಲೊಂದು ಸಣ್ಣಪುಟ್ಟ ನಿರ್ಮಾಣಗಳು ನಡೆಯುತ್ತಲ್ಲೇ ಇರುತ್ತದೆ.
ನನಗೆ ಈಗ ದತ್ತಪೀಠ ಒಂದು ಇತಿಹಾಸ.
ಸಲದ ಆಯುದ ಪೂಜೆ ಮುಗಿಸಿ ಬೆಂಗಳೂರಿಗೆ ಬರುತ್ತಿರುವಾಗ ಗೆಂಡೆಹಳ್ಳಿಯ ಮೇಲೆ ಹಾದು ಬಂದೆ. ನಿಲ್ಲಿಸದಿದ್ದರೂ ಗೇಟಿನ ಮುಖಾಂತರ ಮನೆ ಮತ್ತು ಮಿಲ್ಲಿನ ಕಡೆ ಕಣ್ಣು ಹಾಯಿಸಿದೆ. ನವೀದ ಕಾಣಲಿಲ್ಲ. ಅಷ್ಟಾವಕ್ರನಂತೆ ಹೆಜ್ಜೆ ಹಾಕುತ್ತಾ ಅಲೀಮ ಮಿಲ್ಲಿನ ಕಡೆ ನಡೆದು ಹೋಗುತ್ತಿದ್ದ. ನಿನ್ನೆ ಮತ್ತು ನವೀದರಲ್ಲಿ ದೊಡ್ಡ ಕೋಳಿ ಯಾರಿಗೆ ಸಿಕ್ಕಿತು ಎಂದು ಕೆಳಬೇಕೆನಿಸಿತು. ಒಳಗೆ ನಗುತ್ತಾ ಮುಂದೆ ಹೋದೆ.
ಬೇಲೂರು ಹತ್ತಿರವಾಗುತ್ತಿದ್ದಂತೆ ಯಗಚೀ ಅಣೆಕಟ್ಟಿನ ಹಿನ್ನೀರಿನ ಹತ್ತಿರ ಕಾರನ್ನು ನಿಲ್ಲಿಸಿದೆ. ಅಲ್ಲಿಂದ ಬಾಬಬುಡನ್ ಗಿರಿಯ ಪರ್ವತ ಶ್ರೇಣಿ ಮನೋಹರವಾಗಿ ಕಾಣಿಸುತ್ತಿತ್ತು. ಇದಕ್ಕೆ ಹೇಳುವುದುರುದ್ರರಮಣೀಯಅಂದುಕೊಂಡು ಕಾರು ಹತ್ತಿದೆ.

ಮಾಕೋನಹಳ್ಳಿ ವಿನಯ್ ಮಾಧವ್.


ಘೋರ್ಪಡೆ


ಹೀಗೊಬ್ಬ ಮಹಾರಾಜ

ಹೊಸಪೇಟೆ ಬಿಟ್ಟು ಸಂಡೂರಿನ ದಾರಿ ಹಿಡಿದಾಗ, ನಾನು ಸತೀಷನಷ್ಟೇ ಉತ್ಸಹದಲ್ಲಿದ್ದೆ ಕಾರಣ ಬೇರೆ. ಏಳು ವರ್ಷಗಳಾಗಿದೆ ಅವರನ್ನು ನೋಡಿ. ಎಷ್ಟು ಸಲ ಬರಬೇಕು ಅಂದು ಕೊಂಡಿದ್ದೆ, ಆದರೆ ಆಗಿರಲಿಲ್ಲ. ಅಕ್ರಮ ಗಣಿಗಾರಿಕೆನೋ, ಸುಡುಗಾಡೋ, ಅಂತೂ ಘೋರ್ಪಡೆಯವರನ್ನು ಮತ್ತೆ ನೋಡುತ್ತೇನೆ.
ಬಳ್ಳಾರಿಗೆ ಹೊರಡುವ ಮೊದಲು ಸಂಡೂರಿಗೆ ಫೋನ್ ಮಾಡಿ ವಿಚಾರಿಸಿದ್ದೆ. ಘೋರ್ಪಡೆಯವರನ್ನು ನೋಡಿಕೊಳ್ಳುವ ಕುಮಾರ್ ಆಗಲಿ, ಸಂಡೂರು ಮ್ಯಾಂಗನೀಸ್ ಕಂಪನಿ ಜಂಟಿ ವ್ಯವಸ್ತಾಪಕ ನಿರ್ದೇಶಕ ನಾಜೀಮ್ ಶೇಖ್ ಆಗಲಿ ಯಾವುದೇ ಆಶ್ವಾಸನೆ ನೀಡಿರಲಿಲ್ಲ.
“ ಸಾಹೇಬರು ನಡೆದಾಡುವ, ಮಾತನಾಡುವ ಸ್ತಿತಿಯಲ್ಲಿಲ್ಲ. ತುಂಬಾ ವರ್ಷದಿಂದ ಗೊತ್ತು ಅಂತೀರ. ಗಣಿಗಾರಿಕೆ ಬಗ್ಗೆ ಆದರೆ ನಾವೇ ಮಾತಾಡುತ್ತೇವೆ. ಸಾಹೇಬರು ಹುಶಾರಾಗಿದ್ದರೆ, ಒಂದೈದು ನಿಮಿಷ ಮಾತನಾಡಬಹುದು.” ಅಂದಿದ್ದರು.
ಅಷ್ಟಾದರೂ ಸಾಕು ಅಂದುಕೊಂಡೆ.
ಕಾಡು ಪ್ರಾಣಿಗಳನ್ನರಸಿ ನಾಗರಹೊಳೆ, ಬಂಡಿಪುರಕ್ಕೆ ಹೋದಾಗಲೆಲ್ಲ ಘೋರ್ಪಡೆಯವರ   ಫೋಟೊಗಳನ್ನು ನೋಡುತ್ತಿದ್ದೆ. ಸಂಡೂರಿನ ಮಹಾರಾಜ ಮತ್ತು ರಾಜ್ಯದ ಮಂತ್ರಿ ಅನ್ನುವುದು ಬಿಟ್ಟು ಅವರ ಬಗ್ಗೆ ನನಗೇನು ತಿಳಿದಿರಲಿಲ್ಲ. ರಾಜಕೀಯ ವರದಿಗಾಗಿ ವಿಧಾನಸೌಧ ಪ್ರವೇಶಿಸಿದಾಗಿ ಮೊದಲ ಭಾರಿಗೆ  ನೋಡಿದೆ. ವನ್ಯಜೀವಿಗಳ ಬಗ್ಗೆ ಇಷ್ಟೊಂದು ಆಸಕ್ತಿ ಇರುವವರು, ಅರಣ್ಯ ಮಂತ್ರಿ ಆಗುವುದು ಬಿಟ್ಟು ಪಂಚಾಯತ್ ರಾಜ್ ಮಂತ್ರಿ ಯಾಕಾಗಿದ್ದಾರೆ ಅನ್ನಿಸಿತು. ಇದೇ ಪ್ರಶ್ನೆ ಮುಂದೆ ಎಂ.ಪಿ. ಪ್ರಕಾಶ್ ವಿಷಯದಲ್ಲೂ ಕಾಡಿತ್ತು.
ವನ್ಯಜೀವಿ ಛಾಯಾಗ್ರಹಕ್ಕೆ ಕೈ ಹಾಕಿ, ಯದ್ವಾತದ್ವ ಫೋಟೊ ತೆಗೆದು, ಬೆಂಗಳೂರಿನ ಛಾಯಾಗ್ರಾಹಕ ಮಿತ್ರರ ತಲೆ ತಿನ್ನುತಿದ್ದ ನನಗೆ ದೊಡ್ಡ ಮಿಕ ನೋಡಿ ಸಂತೋಷವೇನೋ ಆಯಿತು. ಆದರೆ, ಪತ್ರಿಕಾ ವರದಿಗಾರರನ್ನು ಓಲೈಸದೆ, ಅವರ ಪಾಡಿಗೆ ಇರುವ ಘೋರ್ಪಡೆಯವರು, ವಿಧಾನಸೌಧದ ವರದಿಗಾರರ ಮಧ್ಯ ಅಂಥಹ ‘ಪಾಪ್ಯುಲರ್ ಫಿಗರ್’ ಏನೂ ಆಗಿರಲಿಲ್ಲ. ‘ಆಫ್ ದಿ ರೆಕಾರ್ಡ್ ಸ್ಟೋರಿ’ ಎಂಬ ವರದಿಗಾರ- ರಾಜಕಾರಣಿಗಳ ನೆಂಟಸ್ತನವನ್ನು ಆಫ್ ಮಾಡಿಕೊಂಡು, ಎಗ್ಗಿಲ್ಲದ ಒಂಟಿ ಸಲಗನಂತೆ ಸುತ್ತುತ್ತಿದ್ದರು. ನಾನೂ ಖೆಡ್ಡಾಕ್ಕೆ ಕೆಡವಲು ಕಾಯುತ್ತಿದ್ದೆ.
ಅಂತಹದೊಂದು ಸಂದರ್ಭ ಬಂದೇ ಬಿಟ್ಟಿತು. ವಿಧಾನಸಭೆಯ ಮೊಗಸಾಲೆಯಲ್ಲಿ, ಒಬ್ಬರೇ ಅನ್ಯ ಮನಸ್ಕರಾಗಿ ಕುಳಿತಿದ್ದ ಘೋರ್ಪಡೆಯವರ ಪಕ್ಕದಲ್ಲಿ ಧೈರ್ಯಮಾಡಿ ಕುಳಿತೇ ಬಿಟ್ಟೆ. ತಿರುಗಿ ಏನು ಎಂಬಂತೆ  ತಲೆ ಆಡಿಸಿದರು.
ಸಾರ್, ನಾನು ವಿನಯ್ ಮಾಧವ್ ಅಂತ. ಇಂಡಿಯನ್ ಎಕ್ಸ್ ಪ್ರೆಸ್ ರಿಪೋರ್ಟರ್ ಎಂದೆ. ತಲೆ ಆಡಿಸಿ ಸುಮ್ಮನಾದರು. ಏನಾದರೂ ಮಾತನಾಡಲೇ ಬೇಕಿತ್ತು. ಎಲ್ಲಾದರು ಎದ್ದು ಹೋದರೆ ಅಂತ ಭಯ ಬೇರೆ.
 ಸರ್, ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ಆನೆ ಫೋಟೋ ಕಲ್ಕೆರೆ ಗೆಸ್ಟ್ ಹೌಸ್ನಲ್ಲಿ ನೋಡಿದ್ದೆ, ಚೆನ್ನಾಗಿದೆ ಎಂದೆ. “ ಅದು ತೆಗೆದದ್ದು ನಾಗರಹೊಳೆಯಲ್ಲಿ, ಕಲ್ಕೆರೆಗೆ ಹೇಗೆ ಬಂತು?” ಅಂದರು. ಆಗಲೆ ನನಗೆ ಹೊಳೆದದ್ದು ನಾನು ಫೋಟೋ ನೋಡಿದ್ದು ನಾಗರಹೊಳೆಯ ಸುಂಕದಕಟ್ಟೆ ಗೆಸ್ಟ್ ಹೌಸ್ ನಲ್ಲಿ ಹೊರತು ಬಂಡೀಪುರದ ಕಲ್ಕೆರೆಯಲಲ್ಲ ಅಂತ. ಪೇಚಾಡಿಕೊಂಡರೂ, ಹೇಳಿದ ಸುಳ್ಳಿನ ಜೊತೆ ಬದುಕಲೇ ಬೇಕಾದ ಅನಿರಾರ್ಯತೆ ಬಂದಿತ್ತು.
 ಆದರೆ. ಅವರೇ ಮಾತು ಮುಂದುವರೆಸಿದರು. “ ನೀವ್ಯಾಕೆ ಅಲ್ಲಿ ಹೋಗಿದ್ದಿರಿ?”
ಗೆದ್ದೆ ಅಂದು ಕೊಂಡವನೆ, ನನ್ನ ವನ್ಯ ಜೀವಿ ಛಾಯಾಗ್ರಹಣದ ಹವ್ಯಾಸದ ಬಗ್ಗೆ ಕೊರದೆ. ಸ್ವಲ್ಪ ಇಂಪ್ರೆಸ್ ಮಾಡೋಕೆ ಅಂತ ಹೇಳಿದೆ, “ ನಿಮ್ಮ ಟೈಮ್ ನಲ್ಲಿ, ನೀವೇ ನಂಬರ್ ಒನ್ ಸರ್.” ಅಷ್ಟರವತೆಗೆ ಆಸಕ್ತಿಯಿಂದ ಕೇಳುತ್ತಿದ್ದವರು ಗಂಭೀರವಾದರು. “ ಹೌದು. ನನಗೆ ಕಾಂಪಿಟೇಷನ್ ಎಲ್ಲಿತ್ತು? ಆಗ ಅದೊಂದು ದುಬಾರಿ ಅಭ್ಯಾಸವೇ ಹೊರತು, ಪ್ರೊಫೇಷನ್ ಆಗಿರಲಿಲ್ಲ. ನನ್ನ ಹತ್ತಿರ ಲೆನ್ಸ್ ಬದಲಾಯಿಸೋ ಕ್ಯಾಮರಾ ಇದ್ದರೆ, ಬೇರೆಯವರು ಸಣ್ಣ ಕ್ಯಾಮರಾಗಳನ್ನು ಉಪಯೋಗಿಸುತ್ತಿದ್ದರು. ನನ್ನ ಜೀಪ್ ನಲ್ಲಿ ಕ್ಯಾಮೆರಾ ಮೌಂಟ್ ಮಾಡಬಹುದಿತ್ತು, ಯಾವ ಫೋಟೋಗ್ರಾಫರ್ ಗಳ ಬಳಿಯೂ ಅಷ್ಟಾಗಿ ಹಣಕಾಸಿನ ಅನುಕೂಲಗಳಿರಲಿಲ್ಲ. ಐ ವಾಸ್ ಆನ್ ಅಡ್ವಾಂಟೇಜಿಯಸ್ ಸೈಡ್.” ಎಂದರು.
 ಪೆಚ್ಚಾಗಿ ಅವರ ಮುಖವನ್ನೇ ನೋಡುತ್ತಾ ಕುಳಿತೆ. “ಏನಿವೇ, ಹ್ಯಾವ್ ಯೂ ಗಾಟ್ ಎನಿ ಗುಡ್ ಪಿಕ್ಚರ್ಸ್?” ಎಂದು ಕೇಳಿದರು. ನಾಲ್ಕೈದು ಒಳ್ಳೆಯವು ಇವೆ ಸರ್. ಪ್ರಯತ್ನ ಮಾಡ್ತಾ ಇದ್ದೀನಿ ಎಂದೆ. “ ಕೀಪ್ ಅಪ್ ದಿ ಇಂಟರೆಸ್ಟ್, ಯು ವಿಲ್ ಕಮ್ ಅಕ್ರಾಸ್ ಗುಡ್ ಒನ್ಸ್” ಎಂದು ಹೇಳಿ ಎದ್ದು ಹೋದರು.
ಅಷ್ಟರಲ್ಲಾಗಲೇ ಬೆವತು ಹೋಗಿದ್ದೆ. ಏನೋ ಒಂದು, ಅಂತೂ ಪರಿಚಯವಾಯಿತ್ತಲ್ಲ ಅಂತ ಸಮಾಧಾನ ಮಾಡಿಕೊಂಡು ನಿಧಾನವಾಗಿ ಹೊರಟೆ.
ಅಂದಿನಿಂದ ಎಲ್ಲೇ ಕಂಡರೂ, ಏನು ಎನ್ನುವಂತೆ ತಲೆ ಆಡಿಸುತ್ತಿದ್ದರು. ಆಗೊಮ್ಮೆ ಈಗೊಮ್ಮೆ ಕಾಡಿಗೆ ಹೋಗಿದ್ದಾ? ಅಂತ ಕೇಳುತ್ತಿದ್ದರು. ನಾನೂ ಕೂಡ ನಗುವಿನಲ್ಲೇ ಉತ್ತರಿಸುತ್ತಿದ್ದೆ. ಮೊದಲನೆಯ ಭೇಟಿಯ ನಂತರ ಇವರ ಜೊತೆ ಕಡಿಮೆ ಮಾತನಾಡಿದರೆ ಮಾತ್ರ ನನಗೆ ಕ್ಷೇಮ ಅಂತ ನಿರ್ಧರಿಸಿದ್ದೆ. ಆಗಾಗ ಬದಲಿಸಿಕೊಳ್ಳುತ್ತಿದ್ದ ನಮ್ಮ ಈ ಉಭಯಕುಷಲೋಪರಿಗಳನ್ನು ನೋಡುತ್ತಿದ್ದ ಪತ್ರಕರ್ತ ಮಿತ್ರರು. ಆಫ್ ದಿ ರೆಕಾರ್ಡ್ ಸುದ್ದಿಗಳನ್ನು ಕೇಳುವಂತೆ ಹೇಳುತ್ತಿದ್ದರು. ನಾನು ನಕ್ಕು ಸುಮ್ಮನಾಗುತ್ತಿದ್ದೆ.
ಈ ನಡುವೆ, ಘೋರ್ಪಡೆಯವರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದಾರೆಂಬ ಕಥೆಗಳು ಕೇಳಿ ಬರತೊಡಗಿದವು. ಇದೇ ಸಮಯದಲ್ಲಿ, ಆಗಿನ ಎಸ್.ಎಂ. ಕೃಷ್ಣ ಸರ್ಕಾರ, ಘೋರ್ಪಡೆಯವರ ಸಾಮ್ಯದ ಸಂಡೂರ್ ಮ್ಯಾಂಗನೀಸ್ ಕಂಪನಿಯ 35 ಕೋಟಿ ವಿದ್ಯುತ್ ಶುಲ್ಕ ಬಾಕಿಯನ್ನು ಮನ್ನಾ ಮಾಡಿತ್ತು. ಮೊದಲೇ ಕಡಿಮೆ ಮಾತನಾಡುತ್ತಿದ್ದ ಘೋರ್ಪಡೆಯವರು ಅಂತರ್ಮುಖಿಯಾಗಿ, ಮೌನಕ್ಕೆ ಶರಣಾದರು.
ಕೃಷ್ಣಾರವರ ಸಹವರ್ತಿಯೊಬ್ಬರನ್ನು ಇದರ ಬಗ್ಗೆ ವಿಚಾರಿಸಿದೆ. ಸ್ವಲ್ಪ ದಿನಗಳ ಹಿಂದೆ, ಘೋರ್ಪಡೆಯವರು, ಕೃಷ್ಣರವನ್ನು ಭೇಟಿಯಾಗಿ, ರಾಜಿನಾಮೆ ಕೊಡುವ ಇಂಗಿತ ವ್ಯಕ್ತಪಡಿಸಿದರಂತೆ. ಪಂಚಾಯತ್ ರಾಜ್ ಗಳಿಗೆ ಹೆಚ್ಚಿನ ಅಧಿಕಾರ ಕೊಡುವ ನಿಟ್ಟಿನಲ್ಲಿ ಹೊಸ ನೀತಿಯ ಕರಡನ್ನು ತಯಾರಿಸುತ್ತಿದ್ದವರು, ಏಕಾ ಏಕಿ ಈ ನಿರ್ಧಾರಕ್ಕೆ ಏಕೆ ಬಂದರೆಂದು ಕೃಷ್ಣರವರು ವಿಚಾರಿಸಿದಾಗ, ವೈಯಕ್ತಿಕ ಸಮಸ್ಯೆಗಳಿಗೆ ಸಮಯ ಸಿರುತ್ತಿಲ್ಲ ಎಂದಷ್ಟೇ ಹೇಳಿದರಂತೆ.  ಅವರ ಸಮಸ್ಯೆಗಳ ಬಗ್ಗೆ ತಿಳಿದಿದ್ದ ಕೃಷ್ಣ, ಹೊಸ ನೀತಿಯನ್ನು ಮುಗಿಸಿದ ನಂತರ ನಿರ್ಧಾರ ತೆಗೆದುಕೊಳ್ಳುವಂತೆ ಹೇಳಿದಲ್ಲದೆ, ಅವರ ವೈಯಕ್ತಿಕ ಸಮಸ್ಯೆಗಳ ಬಗ್ಗೆ ತಾವೂ ಗಮನ ಹರಿಸುವುದಾಗಿ ಆಶ್ವಾಸನೆ ನೀಡಿದರಂತೆ.
ಮಂತ್ರಿ ಮಂಡಲದ ಸಭೆಗೆ ವಿಷಯ ಬರುವವರೆಗೆ ವಿಷಯ ಘೋರ್ಪಡೆಯವರಿಗೆ ತಿಳಿಯದಂತೆ ಎಚ್ಚರ ವಹಿಸಲಾಗಿತ್ತಂತೆ. ಸರ್ಕಾರ ಮನ್ನಾ ಮಾಡಿದ ಮೇಲೆ ಇರಸು ಮುರುಸಾದರೂ, ಘೋರ್ಪಡೆಯವರು ಆ ವಿಷಯವನ್ನು ಯಾರ ಹತ್ತಿರವೂ ಮಾತನಾಡಲಿಲ್ಲವಂತೆ .
ಏಕೋ ಏನೋ ಈ ವಿಷಯವನ್ನು ಮತ್ತೆ ಕೆದಕಲು ಇಷ್ಟವಾಗಲಿಲ್ಲ.  ಇಂದಿಗೂ ಅದೇ ಸತ್ಯ ಅಂತ ನಂಬಿದ್ದೇನೆ.
ಸ್ವಲ್ಪ ದಿನಗಳ ನಂತರ, ಘೋರ್ಪಡೆಯವರು ಪತ್ರಿಕಾಗೋಷ್ಟಿ ಕರೆದು ಪಂಚಾಯತ್ ರಾಜ್ ಹೊಸ ನೀತಿಯನ್ನು ಪ್ರಕಟಿಸಿದರು. ಅದರ ಹಿಂದೆಯೇ, ತಾವು ಮುಂದಿನ ಚುನಾವಣೆ ಸಮಯದಲ್ಲಿ. ರಾಜಕೀಯ ನಿವೃತ್ತಿ ಹೊಂದುವುದಾಗಿ ಘೋಷಿಸಿದರು. ಪತ್ರಿಕಾ ಘೋಷ್ಟಿ ಮುಗಿದ ಕೂಡಲೇ ಘೋರ್ಪಡೆಯವರ ಹತ್ತಿರ ಹೋಗಿ: “ ಸಾರ್, ಪಂಚಾಯತ್ ರಾಜ್ ನೀತಿ  ಮುಗಿದರೇನಂತೆ, ಫಾರೆಸ್ಟ್ ನಲ್ಲಿ ತುಂಬಾ ಕೆಲಸ ಇದೆಯಲ್ಲಾ,” ಅಂದೆ. “ ನೀನು ಮಾಡು ನನಗೆ ತುಂಬಾ ಕೆಲಸ ಇದೆ. ಊರಲ್ಲಿ ಮಕ್ಕಳು ಕಾಯುತ್ತಿದ್ದಾರೆ.’’ ಎಂದು ಹೇಳಿ ಹೊರಟು ಹೋದರು.
ಮುಂದಿನ ವಿಧಾನಮಂಡಲದ ಅಧಿವೇಶನದಲ್ಲಿ, ಘೋರ್ಪಡೆಯವರು ತುಂಬಾ ಉಲ್ಲಾಸಿತರಾದಂತಿದ್ದರು, ಸಿಕ್ಕಾಗ ಮಾತನಾಡುತ್ತಿದ್ದರು. ಒಂದು ದಿನ ಕಲಾಪದ ಸಮಯದಲ್ಲಿ ಮಂಡ್ಯದ  ಸದಸ್ಯ ಎಂ.ಎಸ್. ಆತ್ಮಾನಂದ ಪ್ರಶ್ನೆಯೊಂದನ್ನು ಕೇಳಿದರು. ಪಂಚಾಯತ್ ರಾಜ್ ಸಂಸ್ಥೆಗಳ ಸದಸ್ಯರೂ ಆಗಿರುವ ವಿಧಾನಸಭಾ ಸದಸ್ಯರ ವಿವೇಚನೆಗೆ ಎಷ್ಟು ನಿಧಿ ಇಡಲಾಗಿದೆ. ?
ತಣ್ಣನೆಯ ದ್ವನಿಯಲ್ಲಿ ಘೋರ್ಪಡೆಯವರು ಹೇಳಿದರು: “ ಏನೂ ಇಟ್ಟಿಲ್ಲ”
ವಿಷಯವಿಷ್ಟೇ. ವಿಧಾನಸಭೆ ಸದಸ್ಯರಿಗೆ, ಅವರ ಕ್ಷೇತ್ರಾಭಿವೃದ್ದಿಗಾಗಿ ನಿಧಿ ಮೀಸಲಿಡುವುದಾಗಿ ಸರ್ಕಾರ ಘೋಷಿಸಿತು. ಸತತ ಬರಗಾಲದಿಂದ ಕೆಂಗೆಟ್ಟ ಸರ್ಕಾರ, ಆ ಹಣವನ್ನು ಬರ ಪರಿಹಾರಕ್ಕಾಗಿ ವಿನಿಯೋಗಿಸಿತು. ಕ್ಷೇತ್ರದ ಜನರು ರಸ್ತೆ, ಕುಡಿಯುವ ನೀರಿಗಾಗಿ ಶಾಸಕರ ಬೆನ್ನು ಬಿದ್ದಾಗ, ಯಾವುದೇ ಯೋಜನೆಗಳಿಲ್ಲದೆ, ಶಾಶಕರು ಕಣ್ಣು ಕಣ್ಣು ಬಿಡುವ ಪರಿಸ್ಥಿತಿ ಉದ್ಬವಿಸಿತ್ತು, ಆದರೆ, ಪಂಚಾಯತ್ ರಾಜ್ ಹೊಡ ನೀತಿಯಲ್ಲಿ, ಅಲ್ಲಿನ ಸದಸ್ಯರಿಗೆ ನಿಧಿ ಮೀಸಲಿಟ್ಟಿತು. ಪಂಚಾಯತ್ ರಾಜ್  ಸಂಸ್ಥೆಗಳಿಗೆ ನೇರವಾಗಿ ಹಣ ಬಿಡುಗಡೆಯಾಗುತ್ತಿದ್ದರಿಂದ, ಆ ಹಣಕ್ಕೆ ಸರ್ಕಾರ ಕೈ ಹಾಕುವಂತಿರಲಿಲ್ಲ. ಶಾಸಕರು ತಮಗೆ ಅಲ್ಲೂ ನಿಧಿ ಮೀಸಲಿಡುವಂತೆ ಕೇಳಿದ್ದರು.
ಘೋರ್ಪಡೆಯವರೇನೋ ತಣ್ಣಗೆ ಉತ್ತರಿಸಿದರು. ಆದರೆ, ವಿಧಾನಸಭೆಯ ಸದಸ್ಯರು ಗರಂ ಆದರು. ಪಕ್ಷ ಭೇದ ಮರೆತು, ಎಲ್ಲರೂ ಘೋರ್ಪಡೆಯವರ ಮೇಲೆ ಮುಗಿಬಿದ್ದು, ಧರಣಿಗೆ ಮುಂದಾದರು. ವಿಷಯವನ್ನು ಅಲ್ಲಿಗೇ ಮುಗಿಸಲು ಹವಣಿಸುತ್ತಾ, ಸಭಾಧ್ಯಕ್ಷ ಎಂ.ವಿ. ವೆಂಕಟಪ್ಪ. “ ಘೋರ್ಪಡೆಯವರೆ, ಒಪ್ಪಿಕೊಂಡಿ ಬಿಡಿ” ಎಂದರು.
“ ಯಾಕೆ ಒಪ್ಪಿಕೋ ಬೇಕು ?  ಆ ಹಣ ಇರುವುದು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹೊರತು, ವಿಧಾನಮಂಡಲಕ್ಕಲ್ಲ. ಯಾವುದೇ ಕಾರಣಕ್ಕೂ ನಾನು ಒಪ್ಪುವುದಿಲ್ಲ.” ಅಂದೇ ಬಿಟ್ಟರು.
ಪರಿಸ್ಥಿತಿ ಬಿಗಡಾಯಿಸಿತು. ಅಲ್ಲಿಯವರೆಗೆ ಶಾಂತವಾಗಿ ಕುಳಿತಿದ್ದ ಘೋರ್ಪಡೆಯವರ ಮುಖ ಕೆಂಪೇರ ತೊಡಗಿತು. ವೆಂಕಟಪ್ಪನವರು “ ಒಂದು ಸಭೆ ಕರೆದು ತೀರ್ಮಾನ ತೆಗೆದುಕೊಳ್ಳುತ್ತೇನೆ ಅಂತ ಏನಾದರು ಹೇಳಿ, ವಿಷಯ ಮುಗಿಸಿ ಬಿಡೋಣ” ಎನ್ನ ತೊಡಗಿದರು.
 ಒಮ್ಮೆಲೆ ಎದ್ದು ನಿಂತ ಘೋರ್ಪಡೆಯವರು. “ ಪಂಚಾಯತ್ ರಾಜ್ ರಾಜೀವ್ ಗಾಂಧಿಯ ಕನಸಿನ ಕೂಸು ಅವುಗಳನ್ನು ಬಲಪಡಿಸಬೇಕು ಎಂದು ಹೊಸ ನೀತಿ ತಂದಿರುವುದು. ರಸ್ತೆ. ಕುಡಿಯುವ ನೀರು ವಿಧಾನಸಭೆಯ ಸದಸ್ಯರ ಕೆಲಸ ಅಲ್ಲ. ಇಲ್ಲಿಯ ಕೆಲಸ ಏನಿದ್ದರೂ ಶಾಸನಗಳನ್ನು ಮಾಡುವುದು. ಅದು ಬಿಟ್ಟು ಪಂಚಾಯ್ತಿ ರಾಜಕೀಯ ಮಾಡುವ ಆಸೆ ಇರುವವರು ಅಲ್ಲಿ ಚುನಾವಣೆ ನಿಲ್ಲಬೇಕು. ವಿಧಾನಸಭೆಗೆ ಬಂದು ಪಂಚಾಯ್ತಿಗಳಲ್ಲಿ ಕೈ ಹಾಕಬಾರದು” ಎಂದು ಹೇಳಿ ಕುಳಿತೇ ಬಿಟ್ಟರು.
ಇಂತಹ ಸಂದರ್ಭಗಳಲ್ಲಿ, ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸುವುದು ಸಾಮಾನ್ಯ. ಈ ಕಲಾಪ ನಡೆಯುವಾಗ, ಕೃಷ್ಣರವರು ಪಕ್ಕದಲ್ಲಿದ್ದ ತಮ್ಮ ಕೊಠಡಿಯಲ್ಲಿ ಕುಳಿತು, ದೂರರ್ಷನದಲ್ಲಿ ಕಲಾಪವನ್ನು ವೀಕ್ಷಿಸುತಿದ್ದರು. ಆದರೆ, ಸದನಕ್ಕೆ ಬಂದು ಮಧ್ಯ ಪ್ರವೇಶಿಸಲು ಧೈರ್ಯಮಾಡಲಿಲ್ಲ.
ಈ ಘಟನೆಯ ನಂತರ ನನಗೆ ಘೋರ್ಪಡೆಯವರನ್ನು ಮಹಾರಾಜ ಎಂದು ಒಪ್ಪಿಕೊಳ್ಳಲು ಮನಸ್ಸು ಬರಲಿಲ್ಲ. ಎಲ್ಲಾ ಅಧಿಕಾರಗಳನ್ನು ತಮ್ಮಲ್ಲೇ ಇಟ್ಟುಕೊಂಡು, ಪಾಳೆಗಾರಿಕೆಯಲ್ಲಿ ಆಳುತಿದ್ದ ಆ ಮಹಾರಾಜರೆಲ್ಲಿ ? ಜನಗಳಿಗೆ ಅಧಿಕಾರ ಹಂಚಲು ಹೋರಾಡುತ್ತಿದ್ದ ಈ ಮಹಾರಾಜರೆಲ್ಲಿ?
ಮುಂದಿನ ಚುನಾವಣೆಯಲ್ಲಿ ಘೋರ್ಪಡೆಯವರು ಸ್ಪರ್ಧಿಸಲಿಲ್ಲ. ಕೆಲವು ತಿಂಗಳ ಬಳಿಕೆ ಪತ್ರಿಕೆಯೊಂದರಲ್ಲಿ, ಘೋರ್ಪಡೆಯವರು ಸಂಡೂರಿನ ಶಾಲಾ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ ಎಂಬ ಸುದ್ದಿ ಓದಿ ಅವರನ್ನು ಭೇಟಿಯಾಗ ಬೇಕೆಂದು ಆಸೆಯಾಯ್ತು. ಒಂದೆರಡು ಬಾರಿ ಫೋನಿನಲ್ಲಿ ಸಂಪರ್ಕಿಸಲು ವ್ಯರ್ಥ ಪ್ರಯತ್ನಗಳೂ ಆದವು. ಇಂದು, ನಾಳೆ ಎನ್ನುತ್ತಾ, ಸಮಯಕ್ಕೆ ಮರ್ಯಾದೆ ಇಲ್ಲದೆ ಬೆಂಗಳೂರಿನಲ್ಲಿ ಏಳು ವರ್ಷಗಳು ಕಳೆದು ಹೋಗಿದ್ದವು.
ಹೊಸಪೇಟೆಯಿಂದ ಸಂಡೂರಿಗೆ 28 ಕಿಲೋಮೀಟರ್ ಮಾತ್ರ ಆದರೆ ಎರಡು ಘಂಟೆ ಪ್ರಯಾಣ.  ದಾರಿಯುದ್ದಕ್ಕೂ ಸತೀಶ ಪಾಳುಬಿದ್ದಂತಿದ್ದ ಗಣಿಗಳ ಫೋಟೋ ತೆಗೆಯುತ್ತಿದ್ದ. ಬೆಳಿಗ್ಗೆ ತಿಂಡಿ ತಿನ್ನದೆ ಹೊರಟ ಪ್ರಯುಕ್ತ, ಘೋರ್ಪಡೆಯವರ ಶಿವಪುರ ಅರಮನೆಗೆ ತಲುಪುವ ಹೊತ್ತಿಗೆ, ಹೊಟ್ಟೆಯಲ್ಲಿ ಇಲಿಗಳು ಓಡಾಡುವ ಅನುಭವಾಗುತ್ತಿತ್ತು.
ಶೇಖ್ ಅವರು ಘೋರ್ಪಡೆಯವರು ನಮ್ಮ ಜೊತೆ ಮಾತನಾಡುತ್ತಾರೆ ಎಂಬ ಸಿಹಿ ಸುದ್ದಿಯನ್ನು ಕೊಟ್ಟರು. ಅರ್ಧ ಘಂಟೆ ಅವರ ಜೊತೆಯಲ್ಲಿ ಮಾತನಾಡಿ ಒಳಗೆ ಹೋದೆವು. ಎಲ್ಲಿ ನೋಡಿದರೂ, ಘೋರ್ಪಡೆಯವರು ತೆಗೆದ ವನ್ಯಜೀವಿಗಳ ಛಾಯಾಚಿತ್ರಗಳೇ. ಅವರ ಬಗ್ಗೆ ಅಷ್ಟೊಂದು ತಿಳಿದಿಲ್ಲದಿದ್ದ ಸತೀಶ ಮಾತ್ರ ಬೆರಗಾಗಿ ಹೋಗಿದ್ದ. “ ಸ್ವಲ್ಪ ಕೇಳಿದ್ದೆ  ಅಣ್ಣ, ಇಂಥಾ ಫೋಟೋಗ್ರಾಫರ್ ಅಂತ ಗೊತ್ತಿರಲಿಲ್ಲ ನೋಡಿ,” ಅಂದ.
ಘೋರ್ಪಡೆಯವರ ಕಛೇರಿ ಒಂದು ಶಾಲಾ ಕೊಠಡಿಯಂತಿತ್ತು. ಆರೋಗ್ಯ ಕೆಡಲಾರಂಭಿಸಿದ ಮೇಲೆ, ಮಕ್ಕಳನ್ನು ಅರಮನೆಗೆ ಕರೆಸಿ ಪಾಠ ಹೇಳುವ ಪರಿಪಾಟ ಮಾಡಿಕೊಂಡಿದ್ದು ನನಗೆ ತಿಳಿದಿತ್ತು. ಎರಡೇ ನಿಮಿಷದಲ್ಲಿ ಕುಮಾರ್ ಗಾಲಿ ಕುರ್ಚಿಯನ್ನು ತಳ್ಳಿಕೊಂಡು ಬಂದರು. ಅದೇ ನಗು, ಸ್ವಲ್ಪ ದಪ್ಪಗಾಗಿದ್ದಾರೆ ಅಂತ ಅನಿಸಿತು. ಮುಂದೆ ಹೋದವನೇ ಅವರ ಕಾಲು ಮುಟ್ಟಿ ನಮಸ್ಕರಿಸಿದೆ. ಹಿಂದೆ ತಿರುಗಿ ಬರುವಾಗ ಸತೀಶನ ಮುಖ ನೋಡಿದರೆ. ಕರೆಂಟ್ ಹೊಡೆದ ಹಾಗಿತ್ತು. ಹತ್ತಾರು ವರ್ಷಗಳಿಂದ ನನ್ನ ಸ್ವಭಾವ ಗೊತ್ತಿದ್ದ ಅವನಿಗೆ, ನಾನು ಒಬ್ಬ ರಾಜಕಾರಣಿಯ ಕಾಲು ಮುಟ್ಟಿದ್ದು ಶಾಕಿಂಗ್ ಆಗಿತ್ತು. ನಾನೇನೂ ಮಾತಾಡಲು ಹೋಗಲಿಲ್ಲ.
ಈ ಏಳು ವರ್ಷಗಳಲ್ಲಿ, ನಾನು ಘೋರ್ಪಡೆಯವರು ಸ್ಮೃತಿಪಟಲದಿಂದ ಹಿಂದೆ ಸರಿದಿದ್ದೆ. ವನ್ಯ ಜೀವಿಗಳ ವಿಷಯ ಬಂದ ಕೂಡಲೇ ಕೇಳಿದರು. “ ಹ್ಯಾವ್ ಯೂ ಗಾಟ್ ಎನಿ ಗುಡ್ ಪಿಕ್ಚರ್ಸ್ ?” ಲಗುಬಗೆಯಿಂದ ನನ್ನ ಐಪ್ಯಾಡ್ ತೆಗೆದು, ಆಪ್ರಿಕಾದಲ್ಲಿ ತೆಗೆದ ಚಿತ್ರಗಳನ್ನು ಅವರ ಮುಂದಿಟ್ಟೆ. ಕೆಲವು ಚಿತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಘೋರ್ಪಡೆಯವರು ಮರದ ಮೇಲೆ ಕುಳಿತ ಚಿರತೆಯನ್ನು ನೋಡುತ್ತಲೇ, `ಲೈಟಿಂಗ್ ಸರಿ ಇಲ್ಲ ನೋಡು’ ಎಂದರು.
ಆಪ್ರಿಕಾದ ರೋಲರ್ ಹಕ್ಕಿ ಚಿತ್ರ ತೋರಿಸುತ್ತಾ. “ ಸರ್, ಈ ಹಕ್ಕಿಯಲ್ಲಿ 72 ಬಣ್ಣಗಳಿರುತ್ತವಂತೆ, ನನಗೆ ಗೊತ್ತೇ ಇರಲಿಲ್ಲ.” ಎಂದೆ.
“ ಯಾಕೆ ಗೊತ್ತಿರಬೇಕು? ಬೇಕಾಗಿರುವುದು ಒಳ್ಳೆಯ ಚಿತ್ರ. ತೆಗೆದ ಮೇಲೆ ತಿಳಿದುಕೊಳ್ಳಬಹುದು ಹೊರತು, ಚಿತ್ರ ತೆಗೆಯಲು ಅದು ಮಾನದಂಡವಲ್ಲ. ನೋಡು ಇದರ ಲೈಟಿಂಗ್ ಎಷ್ಟು ಚೆನ್ನಾಗಿದೆ.’ ಎಂದರು.
ಬೆಂಗಳೂರಿಗೆ ಹೋದ ಮೇಲೆ, ಅವರು ಇಷ್ಟಪಟ್ಟ ನಾಲ್ಕಾರು ಚಿತ್ರಗಳನ್ನು ಅಚ್ಚು ಹಾಕಿಸಿ ಅವರಿಗೆ ಕಳುಹಿಸಬೇಕು ಅಂದು ಕೊಂಡೆ.
ಸಂದರ್ಶನಕ್ಕೆ, ಏಕೋ ಏನೋ ರಾಜಕೀಯ ಪ್ರಶ್ನೆಗಳನ್ನು ಕೇಳುವುದು ಬೇಡ ಎಂದೆನಿಸಿತು. ನೀವು ತೆಗೆದ ಕೊನೆ ಚಿತ್ರ ಯಾವುದು ಅಂತ ಕೇಳಿದೆ. “ ಈಗ ತೆಗೆಯುತ್ತೇನಲ್ಲ, ಅದೇ” ಅಂದರು. ಏನೆಂದು ಅರ್ಧವಾಗುವುದರೊಳಗೆ, ಕುಮಾರ್ ಅವರ ನಿಕಾನ್ ಕ್ಯಾಮೆರಾ ಕೈಗಿಟ್ಟರು. “ ಕಡೆಯ ಚಿತ್ರ ಅಂತ ಏನೂ ಇಲ್ಲ. ಕೊನೆಯವರೆಗೆ ತೆಗೆಯುತ್ತಲೇ ಇರಬೇಕು ಎಂದರು.’’ ಮಾತನಾಡುತ್ತಾ, ನನ್ನ ಚಿತ್ರಗಳನ್ನು ತೆಗೆಯಲು ಆರಂಭಿಸಿದರು.
ಸುಮ್ಮನೆ ಮಕ್ಕಳ ಪಾಠದ ಬಗ್ಗೆ ವಿಷಯ ತೆಗೆದೆ. “ ನೀಡು, ಗ್ರಾಮೀಣ ಪ್ರದೇಶದ ಮಕ್ಕಳು ಪ್ರತಿಭಾವಂತರು, ಆದರೆ, ಇಂಗ್ಲೀಷ್ ಭಾಷೆಯಲ್ಲಿ ಸೋಲುತ್ತಾರೆ. ಇಂಗ್ಲೀಷ್ ನಲ್ಲಿ ಒಳ್ಳೆ ಅಂಕ ಪಡೆದರೂ, ಅದನ್ನು ಉಪಯೋಗಿಸಲು ಬರುವುದಿಲ್ಲ. ಇಲ್ಲಿ ನಾನು ಮಕ್ಕಳಿಗೆ ಅವರ ಪಠ್ಯಪುಸ್ತಕದ ಬಗ್ಗೆ ಹೇಳಿಕೊಡುವುದಿಲ್ಲ. 4ನೇ ತರಗತಿಯಿಂದ 9ನೇ ತರಗತಿಯವರೆಗಿನ ಮಕ್ಕಳು ಬಂದು ಇಂಗ್ಲೀಷ್ ಉಪಯೋಗಿಸುವುದನ್ನು ಕಲಿಯುತ್ತಾರೆ.’’
 ಹಾಗೇ ಮಾತನಾಡುತ್ತ ಗಣಿಗಾರಿಕೆಯ ವಿಷಯಕ್ಕೂ ಬಂತು. ಸುಪ್ರೀಂ ಕೋರ್ಟ್ ಆದೇಶದಂತೆ, ಎಲ್ಲಾ ಗಣಿಗಳ ಜೊತೆ, ಘೋರ್ಪಡೆಯವರ ಗಣಿಗಳಲ್ಲೂ ಕೆಲಸ ಸ್ಥಗಿತಗೊಂಡಿತ್ತು. ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ವರದಿಯಲ್ಲಿ, ಕೇಂದ್ರದ ಸಮಿತಿ ಘೋರ್ಪಡೆಯವರ ಕಂಪನಿಗೆ ಮಾತ್ರ ಸ್ವಚ್ಚ ವ್ಯವಹಾರದ ಚೀಟಿ ಕೊಟ್ಟಿತ್ತು. ಆದರೆ ಎಲ್ಲಾ ಗಣಿಗಳಿಗೆ ಅನ್ವಯವಾದದ್ದು, ಇವರಿಗೂ ಆಯಿತು.
ಗಣಿಗಳೆಲ್ಲ ತಮ್ಮ ಕಾರ್ಮಿಕರನ್ನು ಕೆಲಸದಿಂದ ತೆಗೆದರೂ, ಸಂಡೂರಿನ ಧಣಿ ಯಾವುದೇ ಕಾರ್ಮಿಕರನ್ನು ಕೆಲಸದಿಂದ ತೆಗೆಯದಂತೆ ಆದೇಶಿಸಿದ್ದರು. ಕಂಪನಿಯು 2000 ಕಾರ್ಮಿಕರನ್ನು ಗಣಿಗಾರಿಕೆ ನಡೆಸಿದ ಪ್ರದೇಶದಲ್ಲಿ ಗಿಡ ನೆಡುವ ಮತ್ತು ನೋಡಿಕೊಳ್ಳುವ ಕೆಲಸಕ್ಕೆ ಹಚ್ಚಿದರು. ಆದಾಯ ನಿಂತು ಹೋದ ಕಂಪನಿಗೆ ಇದು ದೊಡ್ಡ ಹೊರಯಂತೂ ಆಗಿದೆ ಅಂತ ಶೇಖ್ ಹೇಳಿದರು.
“ ಅವರೆಲ್ಲಿ ಹೋಗಬೇಕು? ಇಡೀ ಜಿಲ್ಲೆಯಲ್ಲಿ ಎಲ್ಲೂ ಕೆಲಸ ಸಿಗುತಿಲ್ಲ. ನಾವೂ ಕೈ ಬಿಟ್ಟರೆ, ಅವರ ಸಂಸಾರಗಳ ಗತಿ ಏನು?'' ಅಂತ ಹೇಳಿದರು. ಇದು ಬದಲಾಗುವ ವ್ಯಕ್ತಿತ್ವವಲ್ಲ ಎಂದುಕೊಂಡು, ಹೊರಡಲು ಎದ್ದು ನಿಲ್ಲುತ್ತಾ ಸತೀಶನ ಮುಖ ನೋಡಿದೆ. ಕ್ಯಾಮೆರಾ ಹಿಡಿದುಕೊಂಡು ಏನೋ ಗಾಢವಾಗಿ ಯೋಚಿಸುತ್ತಿದ್ದ. ಇನ್ನೊಮ್ಮೆ ಘೋರ್ಪಡೆಯವರ ಕಾಲು ಮಟ್ಟಿ ನಮಸ್ಕರಿಸಿ ಹಿಂದೆ ತಿರುಗಿದಾಗ, ಸತೀಶನೂ ಮುಂದೆ ಬಂದು ಅವರ ಕಾಲಿಗೆ ನಮಸ್ಕರಿಸಿದ.
ಅರಮನೆ ಹೊರಗೆ ನಡೆಯುತ್ತಾ ಸತೀಶ ಪಿಸುಗುಟ್ಟಿದ. “ ಅಣ್ಣ, ಇವರು ಇಷ್ಟೊಂದು ದೊಡ್ಡ ವ್ಯಕ್ತಿತ್ವ ಅಂತ ಗೊತ್ತಿರಲಿಲ್ಲ. ಇಂಥವರೂ ಇದ್ದಾರೆ ಅಂದರೆ ನಂಬೋಕೆ ಕಷ್ಟ.’’
“ ಇವರು, ಕೆ.ಎಚ್.ರಂಗನಾಥ್ ಎಲ್ಲಾ ವಿನಾಶದ ಅಂಚಿನಲ್ಲಿರುವ ವ್ಯಕ್ತಿತ್ವಗಳು, ಮುಂದೆ ಬರ್ತಾರೋ ಇಲ್ಲವೋ ಗೊತ್ತಿಲ್ಲ. ಅದಕ್ಕೆ ನಾನು ಕಾಲು ಮುಟ್ಟಿ ನಮಸ್ಕರಿಸಿದು.’’ ಎಂದೆ.
ನನಗೂ ಹಾಗೆ ಅನಿಸಿತು, ಅಂದ ಸತೀಶ.
ಬೆಂಗಳೂರಿಗೆ ಬಂದ ತಕ್ಷಣ ರಂಗನಾಥ್ ಅವರನ್ನು ಕಾಣಬೇಕು ಅನ್ನಿಸಿತು. ಘೋರ್ಪಡೆಯವರಂತೆ ನನಗೇನು ಅವರ ಹತ್ತಿರ ಸಲುಗೆ ಇರಲಿಲ್ಲ. ಆದರೂ ಹೋಗಬೇಕು ಎನಿಸಿತು. ಇವತ್ತು, ನಾಳೆ ಎನ್ನುತ್ತಾ ಹದಿನೈದು ದಿನ ಕಳೆಯುದರೊಳಗೆ, ರಂಗನಾಥ್ ತೀರಿಕೊಂಡರು. ಘೋರ್ಪಡೆಯವರಿಗೆ ಕೊಡಬೇಕು ಅಂದುಕೊಂಡ ಚಿತ್ರಗಳನ್ನು ಅಚ್ಚುಹಾಕಿಸಲೂ ಕೊಟ್ಟರಲಿಲ್ಲ. ಪ್ರತಿ ತಪ್ಪಿಗೂ ಬೆಂಗಳೂರನ್ನು ಶಪಿಸುತ್ತಾ, ಘೋರ್ಪಡೆಯವರ ನೆನೊಪಿನ ಬಗ್ಗೆ ಏನಾದರೂ ಬರೆಯೋಣ ಎಂದು ಕುಳಿತುಕೊಂಡ ಎರಡು ವಾರದಲ್ಲಿ ನಾಲ್ಕು  ಸಾಲು ಬರೆದು ಬಿಟ್ಟು ಬಿಟ್ಟಿದೆ.
ಶನಿವಾರ ವಾರದ  ರಜೆಯಾದ್ದರಿಂದ ಬರೆದು ಮುಗಿಸಬಹುದು ಎಂದು ಕೊಂಡಿದ್ದೆ. ಹಿರಿಯ ಮಿತ್ರ ಉಮಾಪತಿಯವರು ಕೂಡ ಘೋರ್ಪಡೆಯವರನ್ನು ಕುರಿತು ಬರೆದಿಡು ಎಂದು ಹೇಳಿ ಮೂರು ವಾರವಾಗುತ್ತಾ ಬಂದಿತ್ತು. ಟೀವಿ ನೋಡುತ್ತಾ, ಮಗಳ ಜೊತೆ ಆಟವಾಡುತ್ತಿದ್ದಾಗ, ಸಾಗ್ಗೆರೆ ರಾಮಸ್ವಾಮಿ ಕರೆ ಮಾಡಿ, ಘೋರ್ಪಡೆಯವರು ತೀರಿ ಹೋದರಂತೆ, ಸ್ವಲ್ಪ ಕನ್ ಫರ್ಮ ಮಾಡ್ತೀರಾ? ಅಂದರು.
ಹಿರಿಯ ಛಾಯಾಗ್ರಾಹಕರಾದ ರಾಮಸ್ವಾಮಿಯವರಿಗೆ ಬಂದ ಈ ಸುದ್ದಿನ್ನು ಕನ್ ಫರ್ಮ್ ಮಾಡುವ ಅವಶ್ಯಕತೆ ಏನೂ ಕಾಣಲಿಲ್ಲ. ಟೀವಿ ಚಾನಲ್ ಬದಲಾಯಿಸಿದಾಗ, ಸುದ್ದಿ ಆಗಲೇ ಬಿತ್ತರವಾಗುತ್ತಿತ್ತು. ಏನೂ ಹೇಳಲು ತೋಚದೆ ಸುಮ್ಮನೆ ಕುಳಿತವನಿಗೆ ಎರಡು ನಿಮಿಷಗಳ ನಂತರ ಅನಿಸಿತ್ತು. “ ಅವರು ತೆಗೆದ ಕೊನೆಯ ಚಿತ್ರ ನನ್ನದಾಗಿರಲಿ.”
ಅಂದು ಶೇಖ್ ಅವರೊಂದಿಗೆ ಮಾತನಾಡುವಾಗಿ, ಬಹಳ ದಿನದಿಂದ “ಹಾರ್ನ ಬಿಲ್’ ನೋಡಿಲ್ಲ ಅಂದಿದ್ದರು. ಸಮೀಪದ ತಮ್ಮ ಮೆನಗೆ ಹತ್ತಿರ ದಿನಾ ಬರುತ್ತದೆಂದೂ. ಅಲ್ಲಿಗೆ ಬಂದರೆ ಚಿತ್ರ ಸಹ ತೆಗೆಯಬಹುದೆಂದು ಶೇಖ್ ಹೇಳಿದ್ದರು. ಆ ಹಾರ್ನಬಿಲ್ ಅವರಿಗೆ ಸಿಕ್ಕಿರಲಿ ಅನ್ನಿಸಿತು.
ಏನೂ ಮಾಡಲು ತೋಚದೆ, ಲ್ಯಾಪ್ ಟಾಪ್ ತೆಗೆದು, ಘೋರ್ಪಡೆಯವರ ನೆನಪನ್ನು ಬರೆದಿಡುವ ಕಾರ್ಯ ಮುಂದುವರೆಸಿದೆ. . . .


ಮಾಕೋನಹಳ್ಳಿ ವಿನಯ್ ಮಾಧವ್

ಬ್ಯಾರಿ



ನಮ್ಮ ಡಾಕ್ಟರ್ ಮಗಳಿಗೊಂದು ಗಂಡು

ಆಗಲೇ, ಮೂರು ಸಲ ಆಗಿತ್ತು, ಅಮ್ಮ ನನ್ನನ್ನು ಎಬ್ಬಿಸಲು ಶುರುಮಾಡಿ. ಘಂಟೆ ಏಳೂಕಾಲು ದಾಟಿತ್ತು. ಊರಿಗೆ ಹೋದಾಗಲೆಲ್ಲಾ ಇದೊಂದು ರಗಳೆ, ಸೂರ್ಯವಂಶಸ್ಥನೆಂದೇ ನಂಬಿ ಏಳೂವರೆಯವರೆಗೆ ಮಲಗುತ್ತಿದ್ದ ನನ್ನನ್ನು ಎಬ್ಬಿಸಲು ಅಮ್ಮ ಮತ್ತು ಅಣ್ಣ ಹರ ಸಾಹಸ ಮಾಡುತ್ತಿದ್ದರು. ನಾನು ಎದ್ದು ಪ್ರಾತವಿಧಿಗಳನ್ನು ಮುಗಿಸುವ ಹೊತ್ತಿಗೆ, ಅವರ ತಿಂಡಿ ಮುಗಿದು, ಅರ್ಧ ದಿನದ ಕೆಲಸ ಮುಗಿದಿರುತ್ತಿತ್ತು. ನನ್ನ ಸಹೋದರ ವೆಂಕಟೇಶನೂ ಇದಕ್ಕೆ ಹೊರತಲ್ಲ.

ಡಾಕ್ಟರೆ, ನಿಮ್ಮ ಮಗಳಿಗೆ ಒಂದು ಒಳ್ಳೆ ಗಂಡು ನೋಡಿದ್ದಲ್ಲಎಂದು ರಾಗವಾದ ಧ್ವನಿ ಹೊರಗಿನಿಂದ ಕೇಳಿಬಂತು. ಮಾತಿನನ ಧಾಟಿ ನೀಡಿದರೆ, ಯಾರೋ ಬ್ಯಾರಿ ಇರಬೇಕು ಅಂದುಕೊಂಡೆ. ಇದಿನಬ್ಬನ ಧ್ವನಿ ನನಗೆ ಪರಿಚಿತ. ಇದು ಯಾವುದೋ ಹೊಸ ಧ್ವನಿ ಅಂದುಕೊಂಡು, ನೋಡಲು ಎದ್ದೆ.

ಅಷ್ಟರಲ್ಲೇ, `ಯಾರದು ಗಂಡು?’ ಅಂತ ಅಣ್ಣನ ದ್ವನಿ ತೇಲಿ ಬಂತು. ಇರುವುದೇ ನಾನು ಮತ್ತು ವೆಂಕಟೇಶಣ್ಣ. ಗಂಡು ನೋಡಲು ಇವರಿಗ್ಯಾವ ಮಗಳಿದ್ದಾರೆ? ಅಂದುಕೊಂಡು, ಕೋಣೆಯಿಂದ ಹೊರಗೆ ಹೊರಟೆ.
ಅಷ್ಟರಲ್ಲಿ ಬ್ಯಾರಿ ಧ್ವನಿ ಹೇಳಿತು… ‘ನಮ್ಮ ಬೇಂಕ್ ಮೇನೇಜರ್ ಜಯೇಶ್ ಇದ್ದಾರಲ್ಲ…. ಒಳ್ಳೆ ಗಂಡು ಅಲ್ಲವಾ?. ಮಾಕೋನಹಳ್ಳಿ ಹ್ಯಾಂಡ್ ಪೋಸ್ಟ್ ನಲ್ಲಿರುವ  ಸ್ಟೇಟ್ ಬ್ಯಾಂಕ್ ಅಫ್ ಮೈಸೂರು ಶಾಖೆಗೆ ಜಯೇಶ್ ಎಂಬ ಯುವಕರೊಬ್ಬರು  ಬಂದಿದ್ದಾರೆ ಅಂತ ಗೊತ್ತಿತ್ತು. ಗೌಡರು ಮತ್ತು ಒಳ್ಳೆಯ ಅಧಿಕಾರಿ ಅಂತ ಜನಗಳು ಮಾತನಾಡುತ್ತಿದ್ದದ್ದು ನನ್ನ ಕಿವಿಗೆ ಬಿದ್ದಿತ್ತು. ಆದರೆ ಅವರಿಗೆ ಹೆಣ್ಣು ಹುಡುಕೋ ಕೆಲಸ ಅಣ್ಣ ಯಾಕೆ ಮಾಡ್ತಾ ಇದ್ದಾರೆ ಅಂತ ಅರ್ಥ ಆಗಲಿಲ್ಲ.
ಅಷ್ಟರಲ್ಲಿ ಅಣ್ಣನೇ ಕೇಳಿದರು: ಅಲ್ಲ ಕಣೋ, ಗಂಡೇನೋ ಒಳ್ಳೆಯದೆ, ಆದರೆ ಅವರಿಗೆ ಕೊಡೋಕೆ ನನಗೆ ಮಗಳೆಲ್ಲಿದ್ದಾಳೆ?’. ಅಷ್ಟರಲ್ಲಿ, ನಾನು ಕೋಣೆಯಿಂದ ಹೊರಬಂದಿದ್ದೆ. ಬಿಳಿ ಅಂಗಿ ತೊಟ್ಟು, ಬಣ್ಣ ಬಣ್ಣದ ಲುಂಗಿ ಹಾಕಿಕೊಂಡು, ಪೆಚ್ಚಾಗಿ ತನ್ನ ಬಿಳಿಯಾದ ತಲೆ ಕೂದಲೆಳೆಗೆ ಕೈತೋರಿಸಿಕೊಂಡಿದ್ದ ಬ್ಯಾರಿಯ ದರ್ಶನವಾಯಿತು.
ಮಗಳಿಲ್ಲವಾ! ನಾನು ಇಲ್ಲೇ ನೋಡಿದ್ದೇನಲ್ಲಾ?’’ ಅಂದಾಗ ನನಗೆ ಅರ್ಥವಾಯಿತು. ಊರಿನ ಎಲ್ಲಾ ಮನೆಗಳಲ್ಲಿರುವಂತೆ, ಡಾಕ್ಟರಿಗೂ ಮಗಳಿದ್ದಾಳೆಂದು ಈ ಬ್ಯಾರಿ ಅಂದುಕೊಂಡಿದ್ದ ಅಂತ ಕಾಣುತ್ತೆ. ಕಾಲೇಜುಗಳಿಗೆ ರಜವಿದ್ದಾಗ ಬಂದು ಹೋಗುತ್ತಿದ್ದ ನಮ್ಮ ಸಂಬಂಧಿ ಹುಡುಗಿಯರ ಪೈಕಿ ಯಾರೋ ಡಾಕ್ಟರ ಮಗಳು ಅಂತ ತಿಳಿದುಕೊಂಡಿದ್ದ.
ನಾನು ಹೊರಗೆ ಬಂದಿದ್ದು ನೋಡಿ ಅಣ್ಣ ನನ್ನನ್ನು ತಮ್ಮ ಕಿರಿಯ ಮಗ, ಉಡುಪಿಯಲ್ಲಿ ಓದುತ್ತಿದ್ದಾನೆ ಎಂದು ಪರಿಚಯಿಸಿದರು. ಹಾಗೆಯೇ, ಇವನು ಖೋಜು ಬ್ಯಾರಿ ಎಂದು ಹೇಳಿದರು. , ಇವರೇನಾಅಂದೆ.
ಖೋಜು ಬ್ಯಾರಿಯನ್ನು ತಮ್ಮ ಕಡೆಯಲ್ಲಿ ಗೊತ್ತಿಲ್ಲದವರಿಲ್ಲ. ಹೆಸರು ಖ್ವಾಜಾ ಬ್ಯಾರಿ ಅಂತ, ಆದರೆ ಜನಗಳ ಬಾಯಲ್ಲಿ ಖೋಜು ಬ್ಯಾರಿ ಆಗಿದ್ದ. ಆದರೆ, ಅದಕ್ಕೆಂದೂ ತಲೆ ಕೆಡಿಸಿಕೊಂಡವನಲ್ಲ. ಏನಿದ್ದರೂ, ಊರು ಊರು ತಿರುಗಿ, ಅವನ ವ್ಯಾಪಾರ ಮಾಡಿಕೊಂಡು ಅವನ ಪಾಡಿಗೆ ಅವನಿರುತ್ತಿದ್ದ.
ರಸ್ತೆ ವ್ಯವಸ್ತೆ ಮತ್ತು ವಾಹನ ಸೌಕರ್ಯಗಳು ಸರಿಯಿಲ್ಲದ ಎಂಬತ್ತರ ದಶಕದಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಕಾಫಿ ತೋಟಗಳಲ್ಲಿ ಬ್ಯಾರಿಗಳದೊಂದು ದೊಡ್ಡ ಪಾತ್ರವಿತ್ತು. ಕಾಫಿ ತೋಟ ಮಾಲಿಕರಿಗೆ ಬೇಕಾಗುವ ಚಿಲ್ಲರೆ ಗೊಬ್ಬರ, ತೋಟಕ್ಕೆ ಹಾಕುವ ಸುಣ್ಣ, ಮೈಲುತುತ್ತ(ಕಾಪರ್ ಸಲ್ಪೇಟ್), ಮೆಣಸಿನ ಬಳ್ಳಿಗಳು ಮುಂತಾದವನ್ನು ಸರಬರಾಜು ಮಾಡುವುದಲ್ಲದೆ, ಚಿಲ್ಲರೆ ಅಡಿಕೆ, ಏಲಕ್ಕಿ ಮತ್ತು ಮೆಣಸನ್ನು ಕೊಳ್ಳುತ್ತಲೂ ಇದ್ದರು. ಇವರ ಚೌಕಾಸಿಯನ್ನು ನೋಡುವುದೇ ಒಂದು ಮಜಾ. ಕೈಗೆ ಸಿಕ್ಕಿದ ಬಸ್ಸು , ಕಂಡವರ ಕಾರು, ಜೀಪು, ಆಟೋರಿಕ್ಷಾ ಹತ್ತಿಕೊಂಡು, ವ್ಯಾಪಾರ ಕುದುರಿಸಿಕೊಂಡು ದಿನವಿಡೀ ತೋಟದಿಂದ ತೋಟಕ್ಕೆ ಸುತ್ತುತ್ತಿರುತ್ತಿದದ್ದ.
ಖೋಜು ಬ್ಯಾರಿ ಸಾದಾರಣವಾಗಿ ಮಾಕೋನಹಳ್ಳಿ ಸುತ್ತಮುತ್ತ ವ್ಯಾಪಾರ ಮಾಡಿಕಕೊಂಡಿದ್ದನು. ಬೇರೆ ಊರುಗಳಿಗೆ ಹೋದರೆ, ಬೇರೆ ಬ್ಯಾರಿಯ ಹೆಸರು ಕೇಳಿ ಬರುತಿತ್ತು. ಹಾಗಾಗಿ, ಬ್ಯಾರಿಗಳ ಈ ಸಾಮಾಜ್ಯ ಕಾಫಿ ಬೆಳೆಯುವ ಎಲ್ಲಾ ಪ್ರದೇಶದಲ್ಲೂ ಇದೆ ಎಂದು ತಿಳಿದುಕೊಂಡಿದ್ದೆ. ಕೇರಳದ ಮಲಬಾರು ಪ್ರದೇಶದಿಂದ ಬಂದ ಈ ಮುಸ್ಲಿಂ ಸಮುದಾಯ, ತಮ್ಮದೇ ಒಂದು ಅಸ್ತಿತ್ವವನ್ನು ಸ್ಥಾಪಿಸಿಕೊಂಡಿದ್ದರು. ಬಹು ಪತ್ನಿತ್ವ, ಮನೆ ತುಂಬಾ ಮಕ್ಕಳು ಮತ್ತು ಕೈತುಂಬಾ ಕೆಲಸ. ಒಂಥರಾ, ಅಲೆಮಾರಿ ಜೀವನ ಅವರದು. ಆದರೆ, ಬೇರೆ ಮುಸ್ಲಿಂಗಳು ಇವರ ಹತ್ತಿರ ಅಷ್ಟೇನು ಸಂಬಂಧ ಬೆಳಸಿದ್ದು ನಾನು ನೋಡಿಲ್ಲ.
ಇವರು ಪೂರ್ತಿ ಮುಸ್ಲಿಂ ಅಲ್ಲವಂತೆ. ಟೀಪ್ಪು ಸುಲ್ತಾನನ ಸೇನಾಪತಿಯೊಬ್ಬ ಮಲಬಾರ್ ಪ್ರದೇಶದಲ್ಲಿ ಹಿಂದುಗಳಿಗೆ ಬಲವಂತವಾಗಿ ದನದ ಮಾಂಸ ತಿನ್ನಿಸಿದ್ದರಿಂದ ಇವರು ಮುಸ್ಲಿಂ ಆದರಂತೆ ಅಂತ ಕಥೆ ಕೇಳಿದ್ದೆ. ಆ ಸೇನಾಪತಿಯ ಚರಿತ್ರೆ ಕೆದುಕಲು ಅಂಥಾ ಉತ್ಸಾಹವೇನೂ ಬರಲಿಲ್ಲ.
ಅರವತ್ತು ಮತ್ತು ಎಪ್ಪತ್ತರ ದಶಕಗಳಲ್ಲಿ, ಇವರು ಇನ್ನೂ ಮೂರು ವ್ಯಾಪಾರಗಳನ್ನು ಮಾಡುತ್ತಿದ್ದರು. ಸೈಕಲ್ ಮೇಲೆ ಮೀನುಗಳನ್ನು, ಸೀರೆಗಳನ್ನು ಮತ್ತು ಪಾತ್ರೆಗಳನ್ನು ಹೊತ್ತು ಮಾರುವುದು. ಆಗ, ಜನಗಳು ಮೂಡಿಗೆರೆ ಮತ್ತು ಚಿಕ್ಕಮಗಳೂರಿನ ದರ್ಷನ ಮಾಡುತ್ತಿದ್ದದ್ದು   ಬರೀ ಮದುವೆ ಸೀಸನ್ ನಲ್ಲಿ ಮಾತ್ರ. ಈ ಮೂರು ಸರಕುಗಳಿಗೆ ಮನೆ ಹೆಂಗಸರು ಮಾತ್ರ ಗ್ರಾಹಕರು.
  ಬ್ಯಾರಿಗಳದ್ದು ಒಂದೇ ಸಮಸ್ಯೆ ಎಂದರೆ ಅವರು ಮಾತನಾಡುವ ಕನ್ನಡ. ಮೊದಲೇ ರಾಗವಾಗಿ ಮಾತನಾಡುವ ಅವರ ಕನ್ನಡದಲ್ಲಿ, ಅಲ್ಪವಿರಾಮ ಮತ್ತು ಪೂರ್ಣ ವಿರಾಮಗಳು ಸ್ಥಾನಪಲ್ಲಟವಾಗಿ, ಸಂಭಾಷಣೆಗಳಿಗೆ ಆಪಾರ್ಥವನ್ನು ಕೊಡುತ್ತವೆ. ಸೀರೆ ಮಾರಲು ಮನೆಗೆ ಬಂದವನೋಬ್ಬನ ಸಂಭಾಷಣೆ ಹೀಗಿರುತ್ತದೆ: ಅಮ್ಮ, ನೀವು ಚಾಪೆ ಹಾಸಿ, ನಾನು ಸೀರೆ ಬಿಚ್ಚುತ್ತೇನೆ.
ಸುತ್ತಲಿರುವ ಆಳು-ಕಾಳುಗಳು ಮುಸಿ ಮುಸಿ ನಗುತ್ತಿದ್ದರೆ, ಗಂಡನೆಂಬ ಮಹಾಶಯನ ತಲೆ ಚೆಚ್ಚಿಕೊಳ್ಳಬೇಕು ಅಷ್ಟೆ.
ಇನ್ನೊಂದು ಸಂಭಾಷಣೆ ಹೀಗಿದೆ: ಅಮ್ಮ, ನಿಮ್ಮ ಗಂಡ ನಾನು, ನನ್ನ ಹೆಂಡತಿ ನೀವು, ಒಮ್ಮೆ ಮೆಂಗಳೂರಿಗೆ ಹೋಗುವ’.
ರಾಗವಾಗಿ ಮಾತನಾಡುವಾಗ ಅಲ್ಪವಿರಾಮ ಸ್ಥಾನಪಲ್ಲಟವಾಗಿ, ಆ ಅಮ್ಮನು ಬ್ಯಾರಿಯ ಹೆಂಡತಿಯಾಗಿಯೂ, ಆಕೆಯ ಗಂಡ ಬ್ಯಾರಿಯಾಗಿಯೂ ಪರಿವರ್ತಿತವಾಗಿ, ಪಕ್ಕದಲ್ಲಿರುವ  ಅಮ್ಮನ ಗಂಡ ಜಾಣ ಕಿವುಡಿಗೆ ಮೊರೆಹೋಗುವಂತಾಗುತ್ತದೆ.
ಆದರೂ ಅವರ ಮೇಲೆ ಅಷ್ಟೇನು ಸಿಟ್ಟು ಬರುವುದಿಲ್ಲ. ಯಾಕೆಂದರೆ, ಅವರೂ ಯಾರೊಡನೆಯೂ ಸಿಟ್ಟು ಮಾಡಿಕೊಳ್ಳುವುದಿಲ್ಲ. ನಮ್ಮ ಮನೆಯ ಹತ್ತಿರ ಅಂಗಡಿ ಹಾಕಿಕೊಂಡು, ಎತ್ತಿನಗಾಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಇದಿನಬ್ಬನಿಗೆ 16 ಮಕ್ಕಳಿದ್ದವು.
ಕಲ್ಲಿನ ಜೊತೆಯಾದರೂ ಕಾರಣವಿಲ್ಲದೆ ಜಗಳವಾಡಬಲ್ಲ ನಮ್ಮ ತೋಟದ ಕೆಲಸಕ್ಕೆ ಬರುತ್ತಿದ್ದ ರಮೇಶ, ಅದೇಕೋ ಒಂದು ದಿನ ಇದಿನಬ್ಬನಿಗೆ ತಗುಲಿಕೊಂಡ. ರಮೇಶನಎಲ್ಲಾ ವಿತಂಡವಾದಗಳಿಗೂ ಇದಿನಬ್ಬ ಸಹನೆಯಿಂದಲೇ ಉತ್ತರಿಸುತ್ತಿದ್ದ.ಸ್ವಲ್ಪ ಸಹನೆ ಕಳೆದುಕೊಂಡಾಗ ಇದಿನಬ್ಬ ಹೇಳಿದ :ಅಲ್ವೋ, ನಿನಗೇನು ಗೊತ್ತು ಜೀವನ. ನಾನು ಹದಿನಾರು ಮಕ್ಕಳನ್ನು ಮಾಡಿದ್ದೇನೆ.
ಸರ್ರನೆ ಬಂತು ರಮೇಶನ ಉತ್ತರ: ``ಅದೇನು ಮಹಾ, ನಾಯಿಗಳೂ ಮಾಡ್ಕೋತ್ತಾವೆ ಹದಿನೆಂಟು.
ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದೇನೋ ಅಂತ ಗಾಬರಿಯಿಂದ ಇದಿನಬ್ಬನ ಮುಖ ನೋಡಿದೆ. ನಗುತ್ತಾ ಹೇಳಿದ: ಅವು ಸುಮ್ಮನೆ ಬೊಗಳುತ್ತಾ ಕಾಲಹರಣ ಮಾಡೋಲ್ಲ. ಅಷ್ಟೂ ಮಕ್ಕಳನ್ನು ಚೆನ್ನಾಗಿ ಸಾಕ್ತಾವೆ.
ಹಾಗಂತ ಎಲ್ಲಾ ಬ್ಯಾರಿಗಳೂ ಸಹನಶೀಲರೂ, ಕಷ್ಟಪಟ್ಟು ದುಡಿಯುವವರೂ ಆಗಿರುತ್ತಾರಂತ ಹೇಳಲಾಗುವುದಿಲ್ಲ. ನಮ್ಮ ಕುಟುಂಬಕ್ಕೆ ಮರೆಯಲಾಗದ ಆಘಾತವೆಂದರೆ, ಮನೆಯ ಕೆಲಸ ಹುಡುಗಿಯೊಬ್ಬಳು ಕೊಲೆಯಾಗಿದ್ದು. ಆ ಹುಡುಗಿಗೆ ಐದು ವರ್ಷ ಕೂಡ ದಾಟಿರಲಿಲ್ಲ ಅನ್ನಿಸುತ್ತೆ. ಮನೆ ಕೆಲಸಕ್ಕೆ ಹುಡುಗಿ ಬೇಕು ಅಂತ ತೋಟಕ್ಕೆ ಆಳುಗಳನ್ನು ಸರಬರಾಜು ಮಾಡುವ ಮೇಸ್ತ್ರಿಗೆ ಅಮ್ಮ ಹೇಳಿದ್ದರು. ಹಾಸನದ ಕಡೆಯಿಂದ, ಆಳುಗಳ ಜೊತೆ ಈ ಹುಡುಗಿಯನ್ನೂ ಕಳುಹಿಸಿದರು. ನೋಡಿದ ತಕ್ಷಣ, ಆ ಹುಡುಗಿ ತುಂಬಾ ಚಿಕ್ಕವಳು, ವಾಪಸ್ ಕಳುಹಿಸಿ ಅಂತ ಅಮ್ಮ ಹೇಳಿದರು. ಆದರೆ ಯಾರ ಜೊತೆ ಕಳುಹಿಸುವುದು? ಮೇಸ್ತ್ರಿಬಂದಿಲ್ಲ. ಬೇರೆ ಆಳುಗಳು ಕೆಲಸಕ್ಕೆ ಹೊರಡಬೇಕು ಸದ್ಯಕ್ಕೆ ಇರಲಿ, ಮೇಸ್ತ್ರಿ ಬಂದ ಮೇಲೆ ವಾಪಸ್ ಕಳುಹಿಸಿದರಾಯಿತು ಎಂದು ಸುಮ್ಮನಾದರು.
ಆಮೇಲೆ ತಿಳಿದಿದ್ದೇನೆಂದರೆ, ಆ ಹುಡುಗಿಯ ಮನೆಯಲ್ಲಿ ಊಟಕ್ಕೂ ಕಷ್ಟ. ಏನೂ ಕೆಲಸ ಮಾಡಲು ಆಗದಿದ್ದರೂ, ಮುಗ್ದವಾಗಿ ಅಮ್ಮನ ಹಿಂದೆ ಮುಂದೆ ಸುತ್ತುತ್ತಾ, ಕೊಟ್ಟದನ್ನು ತಿಂದು, ಮೂಲೆಯಲ್ಲಿ ಮುದುಡಿ ಮಲಗುತ್ತಿತ್ತು. ನಾನಾಗಲೇ ಬೆಂಗಳೂರು ಸೇರಾಗಿತ್ತು. ವೆಂಕಟೇಶಣ್ಣನೂ ಬೆಂಗಳೂರಿನತ್ತ ಮುಖಮಾಡುತ್ತಿದ್ದ. ಸರಿ ಇಲ್ಲೇ ಇರಲಿ ಅಂತ ಸುಮ್ಮನಾದರು.
ಯಾವುದೋ ಮದುವೆಗೆಂದು ಮನೆಯವರೆಲ್ಲ ಬಣಕಲ್ ಗೆ ಹೋಗಿದ್ದಾಗ, ಈ ಹುಡುಗಿಯ ಕೊಲೆಯಾಗಿತ್ತು. ಸಾಧಾರಣವಾಗಿ, ಅಂಥ ಸಂದರ್ಬಗಳಲ್ಲಿ ತೋಟದ ರೈಟರ್ ಆಗಿದ್ದ ಕೃಷ್ಣ ಮನೆಯಲ್ಲಿರುತ್ತಿದ್ದ. ಅವತ್ತು ಮೂಡಿಗೆರೆಗೆ ಹೋಗಿ ಬರುವ ಹೊತ್ತಿಗೆ ಅನಾಹುತವಾಗಿತ್ತು. ಇದಿನಬ್ಬನ  ಕೊನೆ ಮಗ ಚೋರೆ ಮೋಣುವನ್ನು ಪೊಲೀಸರು ಬಂಧಿಸಿದರು. ಆದರೂ.
ಇದಿನಬ್ಬನ ಜೊತೆ ನಮ್ಮ ಕುಟುಂಬದ ಸಂಬಂಧ ಕೆಡಲಿಲ್ಲ. ಅಣ್ಣನಿಗೆ ಮಾತ್ರ ಈ ಘಟನೆಯ ಆಘಾತದಿಂದ ಹೊರಬರಲು ಬಹಳ ದಿನ ಹಿಡಿಯಿತು.
ರಾಮ ಜನ್ಮಭೂಮಿ ಮತ್ತು ದತ್ತಪೀಠಗಳ ಬಗ್ಗೆ ಈ ಬ್ಯಾರಿಗಳ ನಿಲುವೇನಾಗಿರಬಹುದೆಂದು ನನಗೆ ಒಂದೆರಡು ಸಲ ಕಾಡಿತ್ತು. ಅಷ್ಟರಲ್ಲಾಗಲೇ, ಕಾಫಿನಾಡಿನಲ್ಲಿ ಮಹತ್ತರ ಬದಲಾವಣೆಗಳಾಗಿದ್ದವು. ಕಾಫಿ ಮುಕ್ತ ಮಾರುಕಟ್ಟೆಯಾದ ನಂತರ, ಕಾರುಗಳ ಸಂಖ್ಯೆ ಗಣನೀಯವಾಗಿ  ಹೆಚ್ಚಾಗಿತ್ತು. ಅಲ್ಲಿಯವರೆಗೆ  ಮುದುಡಿ ಕುಳಿತ್ತಿದ್ದ ಗೌಡರ ಹುಡುಗರೂ ಕಾಫಿ ಮತ್ತಿತರ ವ್ಯಾಪಾರಕ್ಕಿಳಿದರು. ಮೂಡಿಗೆರೆ, ಚಿಕ್ಕಮಗಳೂರಿಗೆ, ತಮ್ಮ ತೋಟಕ್ಕಿಂತ ಹೆಚ್ಚಾಗಿ ಹೋಗಲಾರಂಭಿಸಿದರು. ಹಾಗೆಯೆ, ನಗರ ಪ್ರದೇಶಗಳಲ್ಲಿ ವಲಸೆ ಹೋಗುವ ಬ್ಯಾರಿಗಳ ಸಂಖ್ಯೆಯೂ ಹೆಚ್ಚಾಯಿತು. ನಾನು ಬೆಂಗಳೂರು ಸೇರಿದ ಪ್ರಯುಕ್ತ, ಬ್ಯಾರಿಗಳ ವಿಷಯ ಅಷ್ಟೇನೂ ತಿಳಿಯುತ್ತಿರಲಿಲ್ಲ.
ಮೊನ್ನೆ ಅಮ್ಮನ ಜೊತೆ ಫೋನಿನಲ್ಲಿ ಮಾತನಾಡುವಾಗ ತೋಟದ ಯಾವುದೋ ಕೆಲಸದ ಬಗ್ಗೆ ಹೇಳುತ್ತಿದ್ದರು. ನೆನ್ನೆ ಮಾಡಿಸೋಣ ಅಂತ ಇದ್ದೆ. ಆ ಬ್ಯಾರಿ ಹುಡುಗರು ಏನೇ ಕೆಲಸ ಇದ್ದರೂ ಮೊನ್ನೆಗೇ ಮುಗಿಸಬೇಕು. ನೆನ್ನೆ ಕೃಷ್ಣಜನ್ಮಾಷ್ಟಮಿ ಇರುವುದರಿಂದ ಕೆಲಸಕ್ಕೆ ಹೊರಡುವುದಿಲ್ಲ ಅಂದರು. ಅದಕ್ಕೆ ಮಾಡಿಸಿ ಮುಗಿಸಿದೆ. ಅಂದರು.
ಯಾವ ಬ್ಯಾರಿ ಹುಡುಗರು?” ಅಂತ ಕೇಳಿದೆ. ಅದೇ, ಆ ಚೊರೆ ಮೋಣು ಇದ್ದನಲ್ಲ ಅವನ ಅಣ್ಣ ಮೋಣು ಮತ್ತೆ ಅವನಣ್ಣ ಅಬ್ಬು. ಕೃಷ್ಣಜನ್ಮಾಷ್ಟಮಿಯ ದಿನ ಮೂಡಿಗೆರೆಯಲ್ಲಿ ಎಣ್ಣೆ ಹಚ್ಚಿದ ಕಂಭ ಹತ್ತಿ ಕಾಯಿ ಒಡೆಯುವ ಆಟ ಇರುತ್ತಲ್ಲ, ಅದಕ್ಕೆ ಇವರ ಗುಂಪೂ ಪ್ರತೀ ವರ್ಷ ಹೋಗ್ತದೆ. ಈ ವರ್ಷ ಇವರ ಗುಂಪು ಗೆಲ್ತು ಅಂತ ಯಾರೋ ಮಾತಾಡ್ತಿದ್ದರು. ನಾಳೆ ಬಂದಾಗ ಕೇಳಬೇಕು.ಅಂದರು.
ಯಾಕೋ ದತ್ತ ಪೀಠ ನೆನಪಾಗಿ ಮುಗುಳ್ನಕ್ಕೆ

ಮಾಕೋನಹಳ್ಳಿ ವಿನಯ್ ಮಾಧವ್.