ಶನಿವಾರ, ಜನವರಿ 28, 2012

ಅಪರಿಚಿತ


ಕರ್ಫ್ಯೂ ಮಧ್ಯದಲ್ಲೊಂದು ಸಿಗರೇಟ್ ಪುರಾಣ

ಹೈದರಾಬಾದ್ ತಲುಪಿದ ತಕ್ಷಣ ಮಾಡಿದ ಮೊದಲ ಕೆಲಸ ಎಂದರೆ ಕಾಚಿಗುಡ ಹುಡುಕಿ, ಅಲ್ಲಿ ಟೂರಿಸ್ಟ್ ಹೋಂ ಲಾಡ್ಜ್  ನಲ್ಲಿ ರೂಂ ಮಾಡಿದ್ದು. ಬೆಂಗಳೂರಿಂದ ಇನ್ನೂ ಕೆಲವರು ಬರಹುದು ಅಂತ ಗೊತ್ತಿತ್ತು. ಬೆಂಗಳೂರಿನ ಮಂಗಳೂರು ಕರೆಸ್ಪಾಂಡೆನ್ಸ್ ಕಾಲೇಜಿನಲ್ಲಿ ನನಗೆ ಹೇಳಿದ್ದರು.  ಮಧ್ಯಾಹ್ನದ ಹೊತ್ತಿಗೆ ಯಾರಾದರೂ ಸಿಗಬಹುದು ಅಂತ ಅನ್ಕೊಂಡಿದ್ದೆ, ಆದರೆ ಯಾರೂ ಸಿಗಲಿಲ್ಲ.
ಲಾಡ್ಜ್ ನಲ್ಲಿ ರೂಂ ಮಾತ್ರ ಇತ್ತು. ಊಟಕ್ಕೆ ರಸ್ತೆ ದಾಟಿ, ಇದೇ ಲಾಡ್ಜ ನವರ ರೆಸ್ಟೋರಂಟ್ ಗೆ ಹೋಗಬೇಕಿತ್ತು. ರಾತ್ರಿ ಊಟಕ್ಕೆ ಹೋದಾಗ, ಪಕ್ಕದ ಟೇಬಲ್ ನಲ್ಲಿ ಇಬ್ಬರು ಕನ್ನಡದಲ್ಲಿ ಮಾತಾಡುತ್ತಿದ್ದರು. ಅವರು ಬೆಂಗಳೂರಿನವರಾ ಅಂತ ವಿಚಾರಿಸಿದರೆ, ಅವರು ಅಲ್ಲಿನವರೇ ಅಂತ ಗೊತ್ತಾಯ್ತು. ಕಾಚಿಗುಡ ಸ್ವಲ್ಪ ಜಾಸ್ತಿ ಕನ್ನಡದವರು ಇರುವ ಜಾಗ ಅಂತ ನನಗೆ ಹೇಳಿದರು.
ಸರಿ, ತಲೆ ಕೆರ್ಕೊಂಡು ರೂಮಿಗೆ ತಲುಪಿ, ಪುಸ್ತಕ ತೆಗೆದು ಓದಲು ಶುರುಮಾಡಿದಾಗ, ಯಾರೋ ಬಾಗಿಲು ತಟ್ಟಿದರು. ತೆಗೆದಾಗ: `ನೀವು ಬೆಂಗಳೂರಿಂದ ಪರೀಕ್ಷೆ ಬರೆಯಲು ಬಂದಿದ್ದೀರಾ?’ ಅಂತ ಕೇಳಿದರು. `ಹೌದು ಬನ್ನಿ,’ ಅಂತ ಒಳಗೆ ಕರೆದೆ.
ಅವರ ಹೆಸರು ಶ್ರೀಧರ್ ಅಂತ. ಅವರು ಅಕೌಂಟೆಂಟ್ ಎಂದೂ, ಫೆರಾ ಕೇಸ್ ಗಳನ್ನು ನೋಡಿಕೊಳ್ಳುತ್ತೇನೆಂದೂ ಪರಿಚಯ ಮಾಡಿಕೊಂಡರು. ಮೊದಲನೆಯದಾಗಿ, ನನಗೆ ಫೆರಾ ಕೇಸ್ ಅಂದರೇನು ಅಂತ ಗೊತ್ತಿರಲಿಲ್ಲ. ಮತ್ತು, ನನಗೆ ಪರಿಚಯ ಹೇಳಿಕೊಳ್ಳಲು ಏನೂ ಇರಲಿಲ್ಲ. ಚಿಕ್ಕಮಗಳೂರಿನವನೆಂದೂ, ತಂದೆ ಡಾಕ್ಟರ್ ಎಂದೂ ಪರಿಚಯ ಮಾಡಿಕೊಂಡೆ. ಹಾಗೇ ಮಾತಾಡ್ತಾ ಕೂತಿದ್ದಾಗ, ಇನ್ನಿಬ್ಬರು ಒಳಗೆ ಬಂದರು. ಒಬ್ಬರು ಶಂಕರ್ ಅಂತ, ಇನ್ನೊಬ್ಬರು ಆನಂದ್ ಅಂತ.  ಆನಂದ್ ಎನ್ಐಐಟಿ  ಯಲ್ಲಿ ಕಂಪ್ಯೂಟರ್ ಕಲಿಯುತ್ತಿದ್ದರಂತೆ, ಆದರೆ ಶಂಕರ್ ನನ್ನಂತೆಯೇ, ಏನೂ ಮಾಡುತ್ತಿಲ್ಲ ಎಂದರು.
ನನಗೂ, ಶಂಕರ್ ಗೂ ಏನಾದರೂ ಕೆಲಸ ಹುಡುಕಲು ಡಿಗ್ರಿ ಬೇಕು. ಆದರೆ, ಶ್ರೀಧರ್ ಮತ್ತೆ ಆನಂದ್ ಗೆ ಯಾಕೆ ಬೇಕು? ಅಂತ ಕೇಳುತ್ತಿದ್ದಾಗಲೇ, ನಮ್ಮೆಲ್ಲರಿಗಿಂತ ಸ್ವಲ್ಪ ವಯಸ್ಸಾಗಿದ್ದವರೊಬ್ಬರು ಒಳಗೆ ಬಂದು: `ನಾನು ಶೇಖರ್ ಅಂತ. ನೇವಿಯಲ್ಲಿದ್ದೇನೆ. ನಮ್ಮ ಸರ್ವೀಸ್ ಹದಿನೈದು ವರ್ಷ ಮಾತ್ರ. ಈಗ ಬಿ.ಇ.ಎಲ್ ನಲ್ಲಿ ಪೋಸ್ಟಿಂಗ್. ಮುಂದಿನ ವರ್ಷ ರಿಟೈರ್ ಆಗ್ತೀನಿ. ನಮ್ಮ ಡಿಫೆನ್ಸ್ ನಲ್ಲಿ ಡಿಪ್ಲೋಮಾ ಅಂತ ಕೊಡೋದ್ರಿಂದ, ಡಿಗ್ರಿ ಒಂದಿರಲಿ ಅಂತ ಬಂದಿದ್ದೀನಿ,’ ಅಂದರು.
ಒಟ್ಟಿನಲ್ಲಿ, ನಾವೆಲ್ಲರೂ ನಾನಾ ಕಾರಣಗಳಿಂದ `ಡಿಗ್ರಿ ವಂಚಿತರು’. ಉಸ್ಮೇನಿಯಾ ವಿಶ್ವವಿಧ್ಯಾಲಯದಲ್ಲಿ, ಒಂದೇ ಬಾರಿಗೆ ಪರೀಕ್ಷೆ ಬರೆದು, ಡಿಗ್ರಿ ಸಂಪಾದಿಸಲು, 1990 ನೇ ಇಸವಿಯ ಅಕ್ಟೋಬರ್ ತಿಂಗಳಲ್ಲಿ ಹೈದರಾಬಾದಿಗೆ ಬಂದಿದ್ದೆವು. ರಾತ್ರಿ ಹೊತ್ತಿಗೆ ಐದಿದ್ದವರು, ಬೆಳಗ್ಗೆ ತಿಂಡಿ ತಿನ್ನಲು ಹೊರಡುವ ಹೊತ್ತಿಗೆ ಹತ್ತು ಜನವಾಗಿದ್ದೆವು.
ಮೊದಲ ಹತ್ತು ದಿನ ಅಂಥಾ ವಿಶೇಷವೇನೂ ನೆಡೆಯಲಿಲ್ಲ. ಲಾಡ್ಜ್ ನಲ್ಲಿ ಕಾಲೇಜಿನ ವಾತಾವರಣವಿತ್ತು. ಬೆಳಗ್ಗೆ ಎಲ್ಲರೂ ಪರೀಕ್ಷೆಗೆ ಹೋಗಿ ಬಂದರೆ, ಸಾಯಂಕಾಲ ಸ್ವಲ್ಪ ಹೊತ್ತು ಹರಟೆ ಹೊಡೆಯುತ್ತಿದ್ದೆವು. ಎಲ್ಲರಿಗಿಂತ ಚಿಕ್ಕವನಾಗಿದ್ದು, ನಾನು ನೋಡಿದ ಕುದುರೆಗೆ ಮೂರು ಕೊಂಬು ಇದೇ ಎಂದು ವಾದಿಸುವ ವಿತಂಡವಾದಿಯಾಗಿದ್ದ ನನ್ನ ಕಾಲೆಳೆದು, ಎಲ್ಲಾರೂ ಮಜಾ ತೆಗೆದುಕೊಳ್ಳುತ್ತಿದ್ದರು. ಹತ್ತು ದಿನಗಳಲ್ಲಿ, ಬೆಳಗ್ಗೊಂದು, ಮಧ್ಯಾಹ್ನ  ಒಂದರಂತೆ, ಇಪ್ಪತ್ತು ಪೇಪರ್ ಬರೆದಮೇಲೆ, ಹತ್ತು ದಿನ ವಿರಾಮವಿತ್ತು. ಅದಾದ ನಂತರ ಕನ್ನಡ ಮತ್ತು ಇಂಗ್ಲಿಷ್ ಪರೀಕ್ಷೆ ಇದ್ದವು. ಅವತ್ತು ಸಾಯಂಕಾಲ ವಾಪಾಸ್ ಬರುತ್ತ ಶೇಖರ್ ಗೆ ಹೇಳಿದೆ: `ಇನ್ನು ಹತ್ತು ದಿನ ಹೈದರಾಬಾದ್ ಪೂರ್ತಿ ಸುತ್ತಬೇಕು,’ ಅಂತ.
`ವಿನಯ್, ಬೇಗನೆ ಹೋಟೆಲ್ ಸೇರಬೇಕು. ಅದ್ವಾನಿ ಬಿಹಾರದಲ್ಲಿ ಅರೆಸ್ಟ್ ಆಗಿದ್ದಾರೆ. ಗಲಾಟೆಯಾಗಬಹುದು,’ ಅಂದರು.
`ಅಲ್ಲಾ ಸರ್, ಅದ್ವಾನಿ ಬಿಹಾರದಲ್ಲಿ ಅರೆಸ್ಟ್ ಆದರೆ, ಇಲ್ಯಾಕೆ ಗಲಾಟೆಯಾಗುತ್ತೆ?’ ಅಂತ ಕೇಳಿದೆ.
`ಸುಮ್ಮನೆ ನೆಡೀರಿ. ಅದನ್ನಾಮೇಲೆ ಮಾತಾಡೋಣ,’ ಅಂತ ಬೇಗ ಬೇಗನೆ ನೆಡೆದರು. ದಾರಿಯುದ್ದಕ್ಕೂ ಜನಗಳು ಗುಂಪು ಗುಂಪಾಗಿ ನಿಂತಿದ್ದರು. ಲಾಡ್ಜ್ ತಲುಪಿದ ತಕ್ಷಣ ಶೇಖರ್ ಮತ್ತು ಶಂಕರ್ ಒಳಗೆ ಹೋದರು. ನಾನು ಸಿಗರೇಟ್ ಅಂಗಡಿಗೆ ಹೋದಾಗ, ಅವನು ಬಾಗಿಲು ಮುಚ್ಚುತ್ತಿದ್ದ. `ಏನು? ಇಷ್ಟು ಬೇಗ?’ ಅಂತ ಹಿಂದಿಯಲ್ಲಿ ಕೇಳಿದೆ.
`ಪೋಲಿಸರು ಮೂರು ದಿನ ಕರ್ಫ್ಯೂ ಹಾಕಿದ್ದಾರೆ,’ ಅಂದ.
ತಕ್ಷಣವೇ ನೂರು ರೂಪಾಯಿ ನೋಟು ಕೊಟ್ಟು, ಅಷ್ಟಕ್ಕೂ ಸಿಗರೇಟ್ ಕೊಡು ಅಂದೆ. ಹನ್ನೆರಡು ಪ್ಯಾಕ್ ಸಿಗರೇಟು ನನ್ನ ಕಡೆಗೆ ನೀಡಿದವನೇ, ಬಾಗಿಲು ಹಾಕಿ, ಹಿಂದಕ್ಕೆ ತಿರುಗಿಯೂ ನೋಡದೆ ಹೊರಟು ಹೋದ. ಸಿಗರೇಟ್ ತೆಗೆದುಕೊಂಡ ನಾನು, ಏನಾಗ್ತಾ ಇದೆ ಅಂತ ಲಾಡ್ಜ್ ಬಾಗಿಲಲ್ಲಿ ನಿಂತು ನೋಡುತ್ತಿದ್ದಾಗಲೇ, ವ್ಯಾನುಗಳಲ್ಲಿ ಬಂದಿಳಿದ ಪೋಲಿಸರು ನಮ್ಮನ್ನು ಒಳಗೆ ಹೋಗುವಂತೆ ಹೇಳಿದರು.
ಕರ್ಫ್ಯೂ ಅನ್ನೋದು ಎಂಥಾ ಬೋರು ಅನ್ನೋದು ಮರುದಿನ ಮಧ್ಯಾಹ್ನವೇ ಗೊತ್ತಾಯ್ತು. ಮೊಬೈಲ್, ಇಂಟರ್ ನೆಟ್ ಏನೂ ಇಲ್ಲದ ಕಾಲ. ಟೆಲಿವಿಷನ್ ಕೂಡ ಬರೀ ದೂರದರ್ಷನ್ ಚಾನೆಲ್ ಬರುತ್ತಿತ್ತು. ಊಟ, ತಿಂಡಿಯನ್ನು ಲಾಡ್ಜ್ ನವರೇ ಸರಬರಾಜು ಮಾಡಿದರು. ಎರಡು ಇಡ್ಲಿಗೆ ಹತ್ತು ರೂಪಾಯಿ. ಮಧ್ಯಾಹ್ನ ಒಂದು ಪ್ಲೇಟ್ ಅನ್ನ, ಸಾಂಬಾರಿಗೆ ಇಪ್ಪತ್ತೈದು ರೂಪಾಯಿ. ಹೊಟ್ಟೆಯ ಯಾವ ಮೂಲೆಗೂ ಸಾಲದಾಗಿತ್ತು. ಬೆಳಗ್ಗಿನಿಂದ ಒಂದರ ಹಿಂದೊಂದು ಸಿಗರೇಟ್ ಸುಡುತ್ತಿದ್ದೆ.
ಮಧ್ಯಾಹ್ನ ಊಟವಾದ ಮೇಲೆ ಟೆರೆಸ್ ನಲ್ಲಿ ಸಿಗರೇಟ್ ಸೇದಿ ರೂಮಿನ ಕಡೆಗೆ ಬಂದೆ. ರೂಮಿನ ಬಾಗಿಲಿನಲ್ಲಿ ಸ್ವಲ್ಪ ವಯಸ್ಸಾದವರೊಬ್ಬರು ನಿಂತಿದ್ದರು. ಅವರನ್ನು ಕೆಳಗಡೆ ಅಂತಸ್ಥಿನ ಕಾರಿಡಾರಿನಲ್ಲಿ ನೋಡಿದ್ದೆ. ಯಾರು ಎದುರಿಗೆ ಸಿಕ್ಕಿದರೂ ಮುಗುಳ್ನಗುತ್ತಿದ್ದರು. ತುಂಬ ವಿನಮ್ರತೆಯಿಂದ ಇಂಗ್ಲಿಷ್ ನಲ್ಲಿ ಕೇಳಿದರು: `ನೀವು ಸಿಗರೇಟ್ ಸೇದುತ್ತಿದ್ದೀರಲ್ಲಾ, ನಿಮಗೆ ಎಲ್ಲಿ ಸಿಕ್ಕಿತು?’ ಅಂತ.
`ಓ ಅದಾ? ಪೋಲಿಸರು ಕರ್ಫ್ಯೂ ಹಾಕಿದರಲ್ಲಾ, ಆಗಲೇ ಕೊಂಡುಕೊಂಡಿದ್ದೆ,’ ಅಂದೆ.
`ನಿಮಗೆ ತೊಂದರೆ ಇಲ್ಲದಿದ್ದರೆ, ನನಗೆ ಒಂದು ಸಿಗರೇಟ್ ಸಿಗಬಹುದೇ?’ ಅಂತ ದೈನತೆಯಿಂದ ಕೇಳಿದರು. ಏನೂ ಮಾತಾಡದೆ, ಜೇಬಿನಿಂದ ಸಿಗರೇಟ್ ಪ್ಯಾಕ್ ತೆಗೆದು, ಅವರ ಮುಂದೆ ಇಟ್ಟೆ. ಲಗುಬಗೆಯಿಂದ ಒಂದು ಸಿಗರೇಟ್ ತೆಗೆದು ಹಚ್ಚಿದವರೇ, ಧೀರ್ಘವಾಗಿ ಹೊಗೆ ಎಳೆದುಕೊಂಡು ಹೇಳಿದರು: `ಕಳೆದ ಇಪ್ಪತ್ತೈದು ವರ್ಷಗಳಿಂದ ಸಿಗರೇಟ್ ಸೇದುತ್ತಿದ್ದೇನೆ. ಇವತ್ತೇ ಮೊದಲನೇ ದಿನ, ಬೆಳಗ್ಗಿನಿಂದ ಒಂದೂ ಸಿಗರೇಟ್ ಸೇದಿರಲಿಲ್ಲ,’ ಅಂದರು.
ನಂಗಾಗ ಇನ್ನೂ ಇಪ್ಪತ್ತೊಂದು ವರ್ಷ. ಏನೂ ಮಾತಾಡದೆ ರೂಮಿನೊಳಗೆ ಹೋದವನೇ ಒಂದು ಪ್ಯಾಕ್ ಸಿಗರೇಟ್ ತೆಗೆದುಕೊಂಡು ಬಂದು ಅವರ ಕೈಯಲ್ಲಿಟ್ಟೆ. `ನಾನು ಈ ಬ್ರಾಂಡ್ ಸೇದುವುದಿಲ್ಲ. ಆದರೆ, ಇವತ್ತು ಸೇದಲೇ ಬೇಕು. ಇದಕ್ಕೆಷ್ಟು ಕೊಡಲಿ?’ ಅಂತ ಕೇಳಿದರು. `ಇರಲಿ ಬಿಡಿ ಸರ್,’ ಅಂತ ನಕ್ಕೆ. ಅವರೂ ಹೆಚ್ಚಿಗೆ ಒತ್ತಾಯಿಸದೆ, ಥ್ಯಾಂಕ್ಸ್ ಹೇಳಿ ಹೊರಟು ಹೋದರು.
ಅವರು ಆ ಕಡೆ ಹೋಗುತ್ತಲೇ, ರೂಮಿನಲ್ಲಿದ್ದ ಶಂಕರ್: `ಅಲ್ರೀ, ಅವರ್ಯಾರು ಅಂತಾನೇ ಗೊತ್ತಿಲ್ಲ. ಒಂದು ಪ್ಯಾಕ್ ಸಿಗರೇಟ್ ಕೊಟ್ರಲ್ಲ. ದುಡ್ಡು ಜಾಸ್ತಿಯಾಗಿದೆಯಾ ನಿಮಗೆ?’ ಅಂದ್ರು.
`ಇರ್ಲಿ ಬಿಡಿ ಸರ್, ನಮ್ಮ ತಂದೆ ವಯಸ್ಸಾಗಿದೆ ಅವರಿಗೆ. ಅವರ ಮುಖ ನೋಡಿದ್ರೆ ಯಾರ ಮುಂದೆನೂ ಕೈ ಚಾಚಿದವರ ಥರ ಕಾಣೋಲ್ಲ. ಅವರ ಮಗನ ವಯಸ್ಸಿನವನ ಜೊತೆ ಸಿಗರೇಟ್ ಕೇಳುವಾಗ ಅವರಿಗೆ ಎಷ್ಟು ನಾಚಿಗೆಯಾಗಿರಬೇಕು,’ ಅಂದೆ.
`ಸುಮ್ನಿರಿ ನೀವು. ಸ್ವಲ್ಪ ಅತಿ ಕಣ್ರಿ. ಜೀವನದಲ್ಲಿ ಇವೆಲ್ಲಾ ನೆಡೆಯೋಲ್ಲ. ನಾವು ಬದುಕೋ ದಾರಿ ಕಲೀಬೇಕು. ಇಲ್ಲದಿದ್ದರೆ ಕಷ್ಟ,’ ಅಂದ್ರು. ನಾನು ನಕ್ಕು ಸುಮ್ಮನಾದೆ.
ಸಾಯಂಕಾಲ ಕಾಫಿ ಕುಡಿದ ಮೇಲೆ, ಕೆಳಗಡೆ ಲಾಡ್ಜ್ ನ ಮುಂಬಾಗದ ಕಬ್ಬಿಣದ ಗೇಟ್ ಸಂದಿಯಲ್ಲಿ ಹೊರಗಡೆ ನೋಡುತ್ತಾ, ಸಿಗರೇಟ್ ಸೇದುತ್ತಾ ನಿಂತಿದ್ದೆ. ಹತ್ತು ಹೆಜ್ಜೆಗೊಬ್ಬರಂತೆ ಪೋಲಿಸರು ಕೈಯಲ್ಲಿ ಬಂದೂಕು ಹಿಡಿದುಕೊಂಡು ನಿಂತಿದ್ದರು. ನಮ್ಮ ಲಾಡ್ಜ್ ಮುಂದೆ ನಿಂತಿದ್ದ ಪೋಲಿಸ್ ಆಗಾಗ ತಿರುಗಿ ನನ್ನನ್ನು ನೋಡುತ್ತಿದ್ದರು. ಒಮ್ಮೆ ತಿರುಗಿ ನೋಡಿದಾಗ ನಾನು ನಕ್ಕೆ. ಅದಕ್ಕೆ ಅವನು ನಕ್ಕ. ಹಿಂದಿಯಲ್ಲಿ ಕೇಳಿದೆ: `ನಿಮ್ಮೂರು ಯಾವುದು?’
`ಕರ್ನಾಟಕ… ಬಿಜಾಪುರ,’ ಅಂದ. `ಓ, ನೀವು ಬಿಜಾಪುರದವರಾ?’ ಅಂತ ಕನ್ನಡದಲ್ಲಿ ಕೇಳಿದ್ದೇ  ತಡ, ಅವರು ಕೂಡ `ನೀಮ್ಮ ಊರು ಯಾವುದು?’ ಅಂತ ಕನ್ನಡದಲ್ಲಿ ಕೇಳಿದರು.  ಅಲ್ಲಿಂದ ಅದೂ, ಇದೂ ಮಾತು ಶುರುವಾಯ್ತು. ನನಗೆ ಗೊತ್ತಾಗಿದ್ದೇನೆಂದ್ರೆ, ಅವರ ಹೆಸರು ಬಸಪ್ಪ ಅಂತೇನೋ ಇರಬೇಕು ಮತ್ತು ಅವರು ಬಿ.ಎಸ್.ಎಫ್. ನಲ್ಲಿ ಕೆಲಸ ಮಾಡುತ್ತಿದ್ದರು. ಮಾತಿನ ಮಧ್ಯ ನಾನು ಊಟದ ವಿಷಯದಲ್ಲಿ ತೊಂದರೆ ಆದದ್ದನ್ನು ಹೇಳಿದಾಗ, ಅವರು ಹೇಳಿದರು: `ಇಲ್ಲೇ ಹತ್ತಿರದಲ್ಲಿ ಮಂಜರ ಬಾರ್ ಅಂತ ಇದೆ. ಅದು ತೆಗೆದಿರುತ್ತದೆ. ಯಾಕೆಂದ್ರೆ, ಪೋಲಿಸರಿಗೆ ಬೇಕಾಗಿ ಅದನ್ನು ತೆಗೆಯಲು ಬಿಟ್ಟಿದ್ದಾರೆ. ಕತ್ತಲಾದ ಮೇಲೆ ನಮಗೆ ಊಟ ತರಲು ನಾನೂ ಹೋಗುತ್ತೇನೆ. ಆಗ ಬೇಕಾದರೆ ನಿನ್ನನ್ನೂ ಕರ್ಕೊಂಡು ಹೋಗ್ತೀನಿ. ಬಿರಿಯಾನಿ  ಊಟ,’ ಅಂದರು.
ಸಿಕ್ಕಾಬಟ್ಟೆ ಖುಶಿಯಾಯ್ತು. ಮೇಲಕ್ಕೆ ಹೋದವನೇ ಶಂಕರ್ ಮತ್ತು ಶ್ರೀಧರ್ ಗೆ ವಿಷಯ ಹೇಳಿದೆ. ಸಸ್ಯಹಾರಿಯಾಗಿದ್ದ ಶ್ರೀಧರ್, `ರೀ, ಅದೆಲ್ಲಾ ರಿಸ್ಕ್ ತಗೋಬೇಡ್ರಿ. ಗೊತ್ತಿಲ್ಲದ ಊರಲ್ಲಿ ಏನೋ ಮಾಡೋಕೆ ಹೋಗಿ ಒಂದಕ್ಕೆರಡು ಆದರೆ ಕಷ್ಟ,’ ಅಂದರು. ಶಂಕರ್ ಮತ್ತೆ ಉಳಿದವರು: `ನಮಗೂ ಪಾರ್ಸೆಲ್ ತರೋಕೆ ಆಗುತ್ತಾ,’ಅಂತ ಕೇಳಿದ್ರು. ಸರಿ, ಯರ್ಯಾರಿಗೆ ಬೇಕು ಅಂತ ಒಂದು ಪಟ್ಟಿ ಮಾಡಿಕೊಂಡು, ಖಾಲಿ ಬ್ಯಾಗ್ ಬೆನ್ನಿಗೆ ತಗುಲಿಸಿಕೊಂಡು ಕೆಳಕ್ಕೆ ಹೊರಟೆ. ಮೆಟ್ಟಲನ್ನು ಇಳಿಯುವಾಗ, ಕೆಳ ಅಂತಸ್ಥಿನಲ್ಲಿ ಆ ವಯಸ್ಸಾದವರು ಕಾರಿಡಾರಿನಲ್ಲಿ ಏನೋ ಯೋಚಿಸುತ್ತಾ ನಿಂತಿದ್ದರು. ನನ್ನ ನೋಡಿ ನಕ್ಕ ತಕ್ಷಣ ನಾನು ಅವರ ಹತ್ತಿರ ಹೋದವನೇ ವಿಷಯ ಹೇಳಿ, ಅವರಿಗೂ ಏನಾದರೂ ತಿನ್ನಲು ಬೇಕಾ, ಅಂತ ಕೇಳಿದೆ.
`ನಾನು ಸಾಧಾರಣ ರಾತ್ರಿ ಊಟ ಮಾಡುವುದಿಲ್ಲ. ಬಾರ್ ನಲ್ಲಿ ಡ್ರಿಂಕ್ಸ್ ಸಿಕ್ಕಿದರೆ ತರೋಕೆ ಆಗುತ್ತಾ? ನಿಮಗೆ ಬೇಜಾರಿಲ್ಲದಿದ್ದರೆ,’ ಅಂತ ಹೇಳಿದರು. ನಾನು ತೊಂದರೆ ಇಲ್ಲ ಅಂದಾಗ ರೂಮಿನೊಳಗೆ ದುಡ್ಡು ಕೊಡಲು ಕರೆದರು. ಅದು ಡಬಲ್ ರೂಂ. ಒಬ್ಬರಿಗೆ ಡಬಲ್ ರೂಂ ಯಾಕೆ ಅಂತ ನೋಡುವಾಗ ಗೊತ್ತಾಯ್ತು, ಅದು ಏರ್ ಕಂಡೀಷನರ್ ಇರುವ ರೂಂ ಅಂತ. ಸಿಗರೇಟನ್ನು ಸಾಹೇಬರು ರೇಷನ್ ತರಹ ಉಪಯೋಗಿಸುತ್ತಿದ್ದರು. ಆಗಲೇ ಐದಾರು ಸಿಗರೇಟನ್ನು ಸುಟ್ಟಿದ್ದರೂ, ಎಲ್ಲವನ್ನೂ ಮುಕ್ಕಾಲು ಸೇದಿ, ಆರಿಸಿ ಜೋಪಾನವಾಗಿಟ್ಟಿದ್ದರು. ತುಂಬಾ ಪೇಪರ್ ಮತ್ತು ಫೈಲ್ ಗಳನ್ನು ಟೇಬಲ್ ಮೇಲೆ ಹರಡಿಕೊಂಡಿದ್ದರು.
`ವ್ಯಾಟ್  69 ಅಥವಾ ಆ ಥರದೇ ಒಳ್ಳೆ ಡ್ರಿಂಕ್ ಸಿಕ್ಕಿದರೆ ನೋಡಿ. ಜೊತೆಯಲ್ಲಿ ನೆಂಚಿಕೊಳ್ಳಲು ಗೋಡಂಬಿ ಸಿಕ್ಕಿದರೆ ಒಳ್ಳೆಯದು. ತಿನ್ನಲು ಇನ್ನೇನೂ ಬೇಡ. ಬಾರ್ ನಲ್ಲಿ ಸಿಗರೇಟ್ ಸಿಕ್ಕಿದರೆ, ಬ್ರಿಸ್ಟಲ್ ತನ್ನಿ,’ ಅಂದು ಐನೂರು ರೂಪಾಯಿ ಕೊಟ್ಟರು. ಅಷ್ಟೊಂದು ದುಡ್ಡು ನೋಡಿ ಸ್ವಲ್ಪ ಗಾಬರಿಯಾದರೂ, ಸರಿ ಅಂತ ಹೊರಡಲು ತಿರುಗಿದಾಗ ಹೇಳಿದರು: `ನಿಮ್ಮನ್ನು ಕರ್ಕೊಂಡು ಹೋಗ್ತಾರಲ್ಲ, ಅವರಿಗೂ ಕುಡಿಯಲು ಏನಾದ್ರು ಡ್ರಿಂಕ್ಸ್ ಕೊಡಿಸಿ. ದುಡ್ಡು ಹೆಚ್ಚಾದರೆ ಸಂಕೋಚವಿಲ್ಲದೆ ನನಗೆ ಹೇಳಿ, ನಾ ನು ಕೊಡ್ತೀನಿ,’ ಅಂದರು.
ಬಸಪ್ಪನ ಜೊತೆ ಉತ್ಸಾಹದಿಂದಲೇ ಹೊರಟೆ. ಐದು ನಿಮಿಷದಲ್ಲಿ ಉತ್ಸಾಹ ಕಮ್ಮಿಯಾಗಿ, ಯಾಕೋ ಒಳಗೊಳಗೆ ಹೆದರಿಕೆ ಶುರುವಾಯ್ತು. ಎಲ್ಲಾ ಕಡೆ ಖಾಲಿ ರಸ್ತೆಗಳು. ಬರೀ ಬಂದೂಕು ಹಿಡಿದ ಪೋಲಿಸರು. ಎಲ್ಲಿಂದ, ಯಾವ ಗುಂಪು ಬಂದು ಗಲಾಟೆ ಮಾಡಬಹುದು ಅಂತ ನೋಡ್ತಿದ್ದೆ. `ಹೈದರಾಬಾದ್ ನಲ್ಲಿ ಗಲಾಟೆ ಆಗಿದೆಯಾ?’ ಅಂತ ಬಸಪ್ಪನ್ನ ಕೇಳ್ದೆ. `ಚಾರ್ ಮಿನಾರ್ ಮತ್ತೆ ಲಕಡಿ ಕಾ ಫೂಲ್ ಏರಿಯಾದಲ್ಲಿ ಆಗಿದೆ ಅಂತ ವೈರ್ ಲೆಸ್ ಮೆಸೆಜ್ ಇತ್ತು. ಮೂರ್ನಾಲ್ಕು ಜನ ಸತ್ತಿರಬೇಕು,’ ಅಂದರು.
`ಈ ಕರ್ಫ್ಯೂ ಕರ್ಮ ಕಣ್ರಿ. ಏನೂ ಸಿಗೋಲ್ಲ,’ ಅಂ ತ ಗೊಣಗಿದೆ. `ಬೆಳಗ್ಗೆ ಆರೂವರೆಯಿಂದ ಏಳು ಘಂಟೆಯವರೆಗೆ ರಿಲಾಕ್ಸ್ ಮಾಡಿರುತ್ತಾರೆ. ಆಗ ಅಂಗಡಿ, ಬೇಕರಿಗಳು ತೆಗೆದಿರುತ್ತವೆ. ನಿಮಗೇನು ಬೇಕೋ ತೆಗೆದಿಟ್ಟುಕೊಂಡಿರಿ,’ ಅಂದರು. ಮಾತಾಡ್ತಾ ಬಾರ್ ಬಂದೇ ಬಿಡ್ತು. ಜಾಸ್ತಿ ಗಿರಾಕಿಗಳಿರಲಿಲ್ಲ.  ಆದರೆ ತುಂಬಾ ಜನ ಪಾರ್ಸೆಲ್ ಮಾಡಿಸಿಕೊಳ್ಳುತ್ತಿದ್ದರು. ಹೆಚ್ಚಿನವರೆಲ್ಲಾ ಪೋಲಿಸರೇ. ನಾನೂ ಊಟದ ಪಾರ್ಸೆಲ್ ಆರ್ಡರ್ ಮಾಡಿ, ಬಾರ್ ಕೌಂಟರ್ ಹತ್ತಿರ ಹೋಗಿ ವ್ಯಾಟ್ 69 ಇದೆಯಾ ಅಂತ ಕೇಳಿದೆ. ಮೇಲಿಂದ ಕೆಳಗಿನವರೆಗೆ ನನ್ನನ್ನು ನೋಡಿದ ಬಾರ್ ಕೌಂಟರ್ ನಲ್ಲಿ ಇದ್ದವನು: `ಪೂರ್ತಿ ಬಾಟಲ್ ಇಲ್ಲ. ನಾಲ್ಕೈದು ಪೆಗ್ ಉಳಿದಿರಬೇಕು. ಮುನ್ನೂರು ರೂಪಾಯಿ ಆಗುತ್ತೆ,’ ಅಂದ. `ಸರಿ ಕೊಡಿ’ ಅಂತ ಹೇಳಿ, ಬಸಪ್ಪನಿಗೆ ಅರ್ಧ ಬಾಟಲ್ ರಮ್ ಸಹ ತಗೊಂಡೆ. ಸಿಗರೇಟ್ ಕೇಳಿದಾಗ, ಬ್ರಿಸ್ಟಲ್ ಇರಲಿಲ್ಲ. ಬೇರೆ ಬ್ರಾಂಡ್ ಸಿಗರೇಟ್ ಗೆ ಇಪ್ಪತ್ತೈದು ರೂಪಾಯಿ ಹೇಳಿದ. ಬೆಳಗ್ಗೆ ನೋಡಿದರಾಯ್ತು ಅಂತ ಸುಮ್ಮನಾಗಿ, ಅವನು ಕೊಟ್ಟ ಬಿಲ್ಲನ್ನು ಜೋಪಾನವಾಗಿ ಇಟ್ಟುಕೊಂಡೆ.
ರಮ್ ಕೊಟ್ಟಾಗ ಬಸಪ್ಪನಿಗೆ ಖುಶಿಯಾಯ್ತು. `ಏನ್ರಿ ಪಾರ್ಟಿನಾ’ ಅಂತ ಕೇಳಿದ್ರು. `ಇಲ್ಲ, ನಾನು ಕುಡಿಯೋಲ್ಲ,’ ಅಂದೆ. `ಮತ್ತೇನೋ ತಗೊಂಡ್ರಿ?’ ಅಂದರು. `ಓ ಅದಾ… ನಮ್ಮ ಲಾಡ್ಜಲ್ಲಿ ಒಬ್ಬರು ವಯಸ್ಸಾದವರು ಇದ್ದಾರೆ. ಅವರಿಗೆ,’ ಅಂದೆ.
ರೂಮಿಗೆ ಹೋಗಿ ಪಾರ್ಸೆಲ್ ಇಟ್ಟು ಬಾಟಲ್ ತೆಗೆದುಕೊಂಡು ಕೆಳಕ್ಕೆ ಹೊರಟಾಗ ಶಂಕರ್ ತಮಾಷೆ ಮಾಡಿದ್ರು: `ಏನ್ರಿ ವಿನಯ್? ಅಂಕಲ್ ನಿಮ್ಮನ್ನ ದತ್ತು ತಗೊಳ್ಳೋ ಹಾಗಿದೆ?’. ಕೆಳಗೆ ರೂಮಿಗೆ ಹೋದಾಗ, ಅವರು ಏನೋ ಫೈಲ್ ನೋಡಿಕೊಂಡು ಬರೆಯುತ್ತಿದ್ದರು. `ಬನ್ನಿ, ನೀವೂ ಸ್ವಲ್ಪ ತಗೊಳ್ಳಿ,’ ಅಂದರು. `ಇಲ್ಲ ಸರ್, ನಾನು ಕುಡಿಯೋದಿಲ್ಲ,’ ಅಂದೆ.
`ಒಂದ್ಸಲನೂ ಟ್ರೈ ಮಾಡಿಲ್ವಾ?’ ಅಂತ ಮುಗುಳ್ನಕ್ಕರು.
`ಕಾಲೇಜಿನಲ್ಲಿದ್ದಾಗ ಕುಡೀತ್ತಿದ್ದೆ. ಬೆಂಗಳೂರಿಗೆ ಬಂದ ಮೇಲೆ ನಿಲ್ಲಿಸಿದೆ,’ ಅಂದು ಬಿಲ್ಲು ಮತ್ತು ಚಿಲ್ಲರೆಯನ್ನು ಅವರ ಮುಂದೆ ಇಟ್ಟಾಗ, ಅವರು ಮೆಲ್ಲಗೆ ನನ್ನ ಕೆನ್ನೆ ತಟ್ಟಿ ಮುಗುಳ್ನಕ್ಕರು. `ಸರ್, ನಿಮ್ಮ ಮನೆಯವರಿಗೆ ಇಲ್ಲಿ ಸಿಕ್ಕಿಹಾಕಿಕೊಂಡಿರೋದು ಹೇಳಿದ್ದೀರಾ?’ ಅಂತ ಕೇಳಿದಾಗ: `ಮನೆಯವರು ಅಂತ ಯಾರೂ ಇಲ್ಲ. ನಾನು ಮದುವೆ ಆಗಿಲ್ಲ. ನಮ್ಮ ಆಫೀಸಿನವರಿಗೆ ಹೇಳಿದ್ದೀನಿ. ನಾಳೆಯ ಹೊತ್ತಿಗೆ ಏನಾಗುತ್ತೆ ಅಂತ ನೋಡಬೇಕು,’ ಅಂದರು.
`ಸರ್, ಡ್ರಿಂಕ್ಸ್ ಮಾಡೋಕೆ ಟೆರೆಸ್ ಒಳ್ಳೆ ಜಾಗ. ಅಲ್ಲಿಂದ ಬಿರ್ಲಾಮಂದಿರ ಚೆನ್ನಾಗಿ ಕಾಣುತ್ತೆ. ರಾತ್ರಿ ಬೇರೆ ಲೈಟ್ ಹಾಕಿರುತ್ತಾರೆ. ಹೊಳೆಯುತ್ತಿರುತ್ತದೆ,’ ಎಂದೆ.
`ಇಲ್ಲ, ಸ್ವಲ್ಪ ಕೆಲಸ ಇದೆ. ಬೆಳಗ್ಗೆ ಸಿಕ್ತೀನಿ,’ ಅಂದರು. `ಸರ್, ಬೆಳಗ್ಗೆ ಅರ್ಧ ಘಂಟೆ ಕರ್ಫ್ಯೂ ರಿಲ್ಯಾಕ್ಸ್ ಆಗಿರುತ್ತೆ. ಅವಾಗ ನಿಮ್ಮ ಸಿಗರೇಟ್ ಸಿಗಬಹುದು. ಈಗ ಇಟ್ಕೊಂಡಿರಿ,’ ಅಂತ ಇನ್ನೊಂದು ಪ್ಯಾಕ್ ಸಿಗರೇಟ್ ಕೊಟ್ಟೆ. ಅವರು ಮತ್ತೆ ನನ್ನ ಕೆನ್ನೆ ತಟ್ಟಿ `ಗುಡ್ ನೈಟ್’ ಅಂದರು.
ಊಟಮಾಡಲು ಎಲ್ಲರೂ ಟೆರೆಸ್ ಗೆ ಹೋದಾಗ `ಅಂಕಲ್’ ವಿಷಯ ಬಂತು. ಅವರಿಗೆ ಮದುವೆಯಾಗಿಲ್ಲ ಅಂತ ಹೇಳಿದ ತಕ್ಷಣ ಎಲ್ಲರೂ: `ವಿನಯ್, ಸರಿಯಾಗಿ ನೋಡ್ಕೊಳ್ರಿ. ಲೈಫ್ ಸೆಟಲ್ ಆಗುತ್ತೆ,’ ಅಂತ ತಮಾಷೆ ಮಾಡಿದರು.
ಬೆಳಗ್ಗೆ ಎದ್ದವರೇ, ನಾವೆಲ್ಲರೂ ಹೋಟೆಲ್ ನಿಂದ ಹೊರಗೆ ಹೋದೆವು. ಅರ್ಧ ಘಂಟೆಯ ಸ್ವಾತಂತ್ರ ಅನುಭವಿಸಲು. ನಾನಂತೂ ಎಲ್ಲಾ ಅಂಗಡಿಗಳನ್ನೂ ಸುತ್ತಿದೆ. ಹಣ್ಣು, ತರಕಾರಿ ಮತ್ತು ಇತರೆ ಹಾಳಾಗುವ ವಸ್ತುಗಳನ್ನು ವ್ಯಾಪಾರಿಗಳು ಕೈಗೆ ಬಂದಷ್ಟು ಬೆಲೆಗೆ ಮಾರುತ್ತಿದ್ದರು. ನನಗೆ ಬೇಕಾದಷ್ಟು ಬ್ರೆಡ್, ಬಿಸ್ಕೆಟ್ ಮತ್ತು ಬಾಳೆಹಣ್ಣುಗಳನ್ನು ತೆಗೆದುಕೊಂಡು, ನಿಧಾನವಾಗಿ ರೂಮಿಗೆ ವಾಪಾಸ್ ಬಂದಾಗ, `ಅಂಕಲ್’ ಬಾಗಿಲಿನಲ್ಲೇ ನನಗೆ ಕಾಯುತ್ತಿದ್ದರು. ಅವರ ಕೈಯಲ್ಲಿ ಒಂದು ದೊಡ್ಡ ಕವರ್ ಇತ್ತು. `ನಿಮ್ಮಿಂದ ನೆನ್ನೆ ತುಂಬಾ ಸಹಾಯವಾಯಿತು. ಇಟ್ ಇಸ ಜಸ್ಟ್ ಎ ಟೋಕನ್ ಆಫ್ ಅಪ್ರೆಸಿಯೇಷನ್,’ ಅಂತ ನಂಗೆ ಕೊಟ್ಟರು. ನೋಡಿದರೆ, ಇಪ್ಪತ್ತು ಪ್ಯಾಕ್ ಸಿಗರೇಟ್ ಇರುವ ಒಂದು ಕಾರ್ಟೂನ್ ಮತ್ತು ಇನ್ನೊಂದು ಸೀಲ್ ಮಾಡಿದ ಪ್ಯಾಕೆಟ್ ಇತ್ತು. `ಇದೆಲ್ಲಾ ಯಾಕೆ ಸರ್?’ ಅಂದೆ. ಅವರು ಕೆನ್ನೆ ತಟ್ಟಿ: `ಪರ್ವಾಗಿಲ್ಲ, ಇಟ್ಕೊಳ್ಳಿ,’ ಅಂದು ಅವರ ರೂಮಿನ ಕಡೆ ಹೋದರು.
ರೂಮಿನೊಳಗೆ ಹೋಗಿ ಆ ಪ್ಯಾಕೆಟ್ ಒಳಗಡೆ ಏನಿದೆ ಅಂತ ನೋಡಲು ತೆಗೆದೆ. ಅಷ್ಟರೊಳಗೆ ಶಂಕರ್ ಬಂದು ಕಾಫಿಗೆ ಕರೆದರು. ಸರಿ, ಅದನ್ನು ಬ್ಯಾಗಿನೊಳಗೆ ತುರುಕಿ, ಕಾಫಿಗೆ ಹೋದೆ. ಕಾಫಿ ಕುಡಿದು ವಾಪಾಸ್ ಬರುವಾಗ, `ಅಂಕಲ್’ ಲಾಬಿಯಲ್ಲಿ ಫೋನ್ ನಲ್ಲಿ ಮಾತಾಡ್ತಾ ಇದ್ದರು. ನಾನು ನಕ್ಕೆ. ಫೋನ್ ಮುಗಿಸಿದವರೇ ನನ್ನನ್ನು ಲಾಬಿಯಲ್ಲಿದ್ದ ಸೋಫಾ ಕಡೆ ಕೈಮಾಡಿ ಕರೆದರು. ಅದೂ ಇದೂ ಮಾತಾಡುತ್ತಾ ನನ್ನ ವಿಷಯ ಕೇಳಿದರು. ನಾನು ಮುಂದೆ ಏನು ಮಾಡಬೇಕೆಂದಿದ್ದೇನೆ ಅಂತಾನೂ ಕೇಳಿದರು. `ಡಿಗ್ರಿ ಸಿಕ್ಕಿದ ತಕ್ಷಣ ಇಂಡಿಯನ್ ಮಿಲಿಟರಿ ಅಕಾಡೆಮಿ ಪರೀಕ್ಷೆ ಬರೆದು ಆರ್ಮಿ ಸೇರಬೇಕೆಂದಿದ್ದೇನೆ’ ಎಂದಾಗ ಮುಗುಳ್ನಕ್ಕರು. ಸುಮಾರು ಒಂದು ಘಂಟೆ ರಾಜಕೀಯ ಮತ್ತು ದೇಶದ ಆರ್ಥಿಕ ಸ್ಥಿತಿಗಳ ಬಗ್ಗೆ ಮಾತಾಡಿದರು. ಅದ್ಭುತಾದ ಇಂಗ್ಲಿಷ್ ನಲ್ಲಿ ಮಾತಾಡಿದಾಗ, ವೆಸ್ಟ್ ಇಂಡೀಸ್ ಬೌನ್ಸರ್ ಗಳಿಗೆ ತಿಣುಕಾಡುತ್ತಿದ್ದ ಭಾರತದ ಬ್ಯಾಟ್ಸ್ ಮನ್ ಗಳ ಅವಸ್ಥೆಯಂತಾಗಿತ್ತು ನನ್ನ ಸ್ಥಿತಿ. ಅವರು ಮುಕ್ತ ಮಾರುಕಟ್ಟೆಯ ಬಗ್ಗೆ ಮಾತಾಡಿದಾಗ, ನನಗವರು ಬಂಡವಾಳಶಾಹಿಯ ತರಹ ಕಂಡುಬಂದರು. ನಾನೂ ಬಿಡದೆ, ಮೂಡಿಗೆರೆಯ ಕಮ್ಯುನಿಸ್ಟ್ ನಾಯಕ ಬಿ ಕೆ ಸುಂದರೇಶ್ ವಿಷಯ ಪ್ರಸ್ತಾವಿಸಿ, ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಬಿಗಿದೆ. ಎಲ್ಲವನ್ನೂ ಸಮಾಧಾನವಾಗಿ ಕೇಳಿಕೊಂಡ ಅವರು, `ನಮ್ಮ ಕಂಪನಿ ಹತ್ತಿರ ಕೂಡ ಸ್ವಲ್ಪ ಕಾಫೀ ಎಸ್ಟೇಟ್ ಇದೆ’ ಅಂದರು.
`ಯಾವುದು?’ ಅಂತ ಕೇಳಿದಾಗ, `ಕನ್ಸಾಲಿಡೇಟೆಡ್ ಕಾಫಿ’ ಅಂದರು. `ಅದು ದೊಡ್ಡ ಎಸ್ಟೇಟ್, ಟಾಟಾದವರು ತೆಗೆದುಕೊಂಡಿದ್ದಾರೆ,’ ಅಂದಾಗ ಅವರು ಮುಗುಳ್ನಗುತ್ತಾ ತಲೆ ಆಡಿಸಿದರು. ಅದರಲ್ಲಿ ಕೆಲಸ ಮಾಡುತ್ತಿದ್ದ ನನ್ನ ಗೆಳೆಯರೊಂದಿಬ್ಬರ ಹೆಸರು ಹೇಳಿದಾಗ, ಅವರು ಗೊತ್ತಿಲ್ಲ ಎಂಬಂತೆ ತಲೆ ಆಡಿಸಿದರು.
ಅಲ್ಲಿಂದ ನಾವು ಹೊರಡುವಾಗ `ಅಂಕಲ್’ ಹೇಳಿದರು: `ನೀನು ತುಂಬಾ ಪ್ರಾಮಾಣಿಕ ಮತ್ತು ಮುಗ್ದ. ಜೀವನದಲ್ಲಿ ಮುಂದೆ ಬರ್ತೀಯ,’ ಅಂತ.
ನನಗಂತೂ ತುಂಬಾನೇ ಬೇಜಾರಾಯ್ತು. ನಾನು ಸಮಾಜವಾದದ ಬಗ್ಗೆ ಅಷ್ಟೆಲ್ಲಾ ಮಾತಾಡಿದರೂ ನನ್ನ ಬುದ್ದಿವಂತಿಕೆಯನ್ನು ಅವರು ಗುರುತಿಸಲಿಲ್ಲ ಅಂತ. ಮುಗ್ದ ಅಂತ ಹೇಳಿದ್ದು ನನ್ನ ಆತ್ಮಾಭಿಮಾನವನ್ನು ಕೆಣಕಿತ್ತು. ಏನೂ ಮಾತಾಡದೆ ರೂಮಿನ ಕಡೆಗೆ ನೆಡೆದೆ.
ಮಧ್ಯಾಹ್ನ ಊಟಮಾಡಿ, ಟೆರೆಸ್ ಗೆ ಹೋಗಿ ಸಿಗರೇಟ್ ಸೇದಿ ರೂಮಿನ ಕಡೆಗೆ ಬರುತ್ತಿರುವಾಗ, ರೂಂ ಬಾಯ್ ಬಂದು ಹೇಳಿದ: `ಇಂಜಿನಿಯರ್ ಸಾಬ್ ನಿಮ್ಮನ್ನು ಹುಡುಕುತ್ತಿದ್ದಾರೆ.’
`ಯಾವ ಇಂಜಿನೀಯರ್ ಸಾಬ್?’ ಅಂತ ಕೇಳಿದಾಗ, `ಕೆಳಗಿನ ರೂಮಿನವರು. ಲಾಬಿಯಲ್ಲಿದ್ದಾರೆ,’ ಅಂತ ಹೇಳಿದ.
ಕೆಳಗೆ ಲಾಬಿಗೆ ಹೋದಾಗ, ಬೆಂಗಳೂರಿನಿಂದ ಬಂದವರು ಮೂಲೆಯಲ್ಲಿ ಗುಂಪಾಗಿ ನಿಂತು ಮಾತಾಡ್ತಾ ಇದ್ದರು. ಸೋಫಾ ಮೇಲೆ `ಅಂಕಲ್’ ಕೂತಿದ್ದರೆ, ಅವರ ಎದುರು ಯಾರೋ ಪೋಲಿಸ್ ಆಫಿಸರ್ ಕೂತಿದ್ದರು. ಸೋಫಾದ ಸುತ್ತ ನಾಲ್ಕೈದು ಪೋಲಿಸರು ಇದ್ದರು.
`ಏನಾಯ್ತು?’ ಅಂತ ನೋಡುತ್ತಿರುವಾಗಲೇ, `ಅಂಕಲ್’ ನನ್ನನ್ನು ನೋಡಿ ಮುಗುಳ್ನಗುತ್ತಾ ಎದ್ದರು. ಅವರ ಹಿಂದೆಯೇ ಪೋಲಿಸರು ಕೂಡ. ನನ್ನ ಹೆಗಲಿಗೆ ಕೈ ಹಾಕಿ, `ವಿಮಾನ ಹಾರಾಟ ಮತ್ತೆ ಶುರುವಾಗಿದೆಯಂತೆ. ನಾನು ಬಾಂಬೆಗೆ ಹೊರಟೆ,’ ಅಂತ ಮಾತಾಡಿಸಿಕೊಂಡು, ಲಾಡ್ಜ್ ನಿಂದ ಹೊರಗೆ ಕರೆದುಕೊಂಡು ಬಂದರು. ಹೊರಗಡೆ, ಒಂದು ಬೆಂಝ್ ಕಾರು, ಅದರ ಹಿಂದೆ ಒಂದು ಪೋಲಿಸರ ಅಂಬಾಸಡರ್ ಕಾರ್ ನಿಂತಿದ್ದವು. ಅವುಗಳ ಮುಂದೊಂದು, ಹಿಂದೊಂದು ಪೋಲಿಸ್ ಜೀಪ್ ನಿಂತಿದ್ದವು. ಕಾರಿಗೆ ಹತ್ತುವ ಮುಂಚೆ ಜೇಬಿನಿಂದ ಅವರ ಕಾರ್ಡ್ ಕೊಟ್ಟು ಹೇಳಿದರು: `ಬಾಂಬೆಗೆ ಬಂದಾಗ ಫೋನ್ ಮಾಡಿ.’
ಕಾರು ಹೋದ ಮೇಲೆ ಕಾರ್ಡ್ ಓದಿದೆ. `ಅಂಕಲ್’ ನ ಮೊದಲ ಹೆಸರು ಹೇಗೆ ಓದಬೇಕು ಅಂತ ಗೊತ್ತಾಗಲಿಲ್ಲ. ಅದಾದ ಮೇಲೆ ಡಿ.ಇಂಜಿನಿಯರ್ ಅಂತ ಇತ್ತು. ಅಡ್ರಸ್ ಏನೋ ಟಾಟಾ ಹೌಸ್, ಬಾಂಬೆ ಅಂತ ಇತ್ತು.
ಒಳಗ್ಗೆ ಬರುತ್ತಲೇ ಶೇಖರ್ ನನ್ನ ಕೈಯಿಂದ ಕಾರ್ಡ್ ಕಿತ್ತುಕೊಂಡು `ಯಾರ್ರೀ ಅವರು?’ ಅಂತ ಕೇಳಿದರು. ಕಾರ್ಡ್ ಓದುತ್ತಲೇ ಹೌಹಾರಿದಂತೆ ಕಂಡ ಅವರು, `ಇವರ್ಯಾಕ್ರೀ ಈ ಹೋಟೆಲ್ ನಲ್ಲಿ ಇದ್ದರು?’ ಅಂತ ಕೇಳಿದರು.
`ನಂಗೊತ್ತಿಲ್ಲ ಸರ್. ಯಾರು ಸರ್ ಅವರು?’ ಅಂತ ಅವರಿಗೇ ಪ್ರಶ್ನೆ ಮಾಡಿದೆ.
`ರೀ, ಇವರು ಟಾಟಾದ ಎಲೆಕ್ಟ್ರಿಕ್ ಡಿವಿಶನ್ ನಲ್ಲಿ ಡೈರೆಕ್ಟರ್ ಕಣ್ರಿ. ಈ ಕಂಪನಿ ಬಿ.ಇ.ಎಲ್ ನ ಕಸ್ಟಮರ್ ಕೂಡ. ತುಂಬಾ ದೊಡ್ಡ ಪೋಸ್ಟ್ ನಲ್ಲಿದ್ದಾರೆ ಕಣ್ರಿ. ಮೊದಲೇ ಗೊತ್ತಾಗಿದ್ರೆ ಕೂತು ಮಾತಾಡಬಹುದಿತ್ತು,’ ಅಂದರು.
ಉಳಿದವರೆಲ್ಲ, `ಹೊಡೆದ್ರಲ್ರಿ ಲಾಟರಿ. ಪರೀಕ್ಷೆ ಮುಗಿಸಿ ಬಾಂಬೆಗೆ ಹೋಗಿ ಅಂಕಲ್ ನ ಮೀಟ್ ಮಾಡಿ. ಚೆನ್ನಾಗಿ ಇಂಪ್ರೆಸ್ ಮಾಡಿದ್ದೀರ. ಟಾಟಾ ಕಂಪನಿಯಲ್ಲಿ ಒಳ್ಳೆ ಕೆಲಸ ಕೊಡಿಸ್ತಾರೆ. ಸೆಟಲ್ ಆಗಿಬಿಡಬಹುದು,’ ಅಂತ ತಮಾಷೆ ಮಾಡಲು ಶುರು ಮಾಡಿದ್ರು.
ರೂಮಿಗೆ ಹೋದಾಗ ಅಂಕಲ್ ಕೊಟ್ಟಿದ್ದ ಪ್ಯಾಕೆಟ್ ನೆನಪಾಯ್ತು. ತೆಗೆದು ನೋಡಿದರೆ, ಐದು ಸಿಗಾರ್ ಗಳಿದ್ದ ಒಂದು ಪ್ಯಾಕೆಟ್ ಮತ್ತು ಸುಂದರವಾಗಿದ್ದ ಒಂದು ಲೈಟರ್ ಇತ್ತು. ನಮ್ಮ ಜೊತೆ ಇದ್ದ ದಿಲೀಪ್ ಎನ್ನುವವರು ಸಿಗಾರ್ ಪ್ಯಾಕೆಟ್ ತೆಗೆದುಕೊಂಡು ನೋಡಿ: `ಇದು ಹವಾನಾ ಸಿಗಾರ್. ವೈನ್ ಡಿಪ್’ ಅಂದರು. ನಾನು ಲೈಟರ್ ಹತ್ತಿಸಿದಾಗ, ಅದರಿಂದ ಬೆಂಕಿ ಜೊತೆ ಮ್ಯೂಸಿಕ್ ಕೂಡ ಬಂತು. `ಮ್ಯುಸಿಕಲ್ ಬೀಚ್ ಲೈಟರ್’ ಅಂದರು ದಿಲೀಪ್.
ಎಂದೂ ಸಿಗಾರ್ ಸೇದಿರದ ನನಗೆ, ದಿಲೀಪ್ ಇಲ್ಲದಿದ್ದಿದ್ದರೆ ಅದನ್ನು ಸೇದಲು ಆಗುತ್ತಲೇ ಇರಲಿಲ್ಲ. ಅವರಿಗೂ ಒಂದು ಕೊಟ್ಟು, ನಾನೂ ಒಂದು ಹತ್ತಿಸಿಕೊಂಡೆ. ಅಲ್ಲಿಂದ ಮುಂದೆ ಎಲ್ಲರೂ ನನಗೆ ತಮಾಷೆ ಮಾಡುತ್ತಿದ್ದರು: `ವಿನಯ್ ಗೆ ಬಿಡಿ. ಪರೀಕ್ಷೆ ಮುಗಿದ ತಕ್ಷಣ ಬಾಂಬೆಗೆ ಹೋದರೆ ಸಾಕು. ಲೈಫ್ ಸೆಟಲ್,’ ಅಂತ.
ಬೆಂಗಳೂರಿಗೆ ವಾಪಾಸ್ ಬಂದು ಎಷ್ಟೋ ವರ್ಷಗಳವರೆಗೆ, ಆ ಕಾರ್ಡ್ ಮತ್ತು ಲೈಟರ್ ಜೋಪಾನವಾಗಿ ಇಟ್ಟಿದ್ದೆ. ರೂಂ, ಮನೆಗಳನ್ನು ಬದಲಾಯಿಸುವಾಗ ಮಧ್ಯದಲ್ಲೆಲ್ಲೋ ಕಳೆದುಹೋಯಿತು. ಹಾಗೆಯೇ, ಅಂಕಲ್ ಕೂಡ…


ಮಾಕೋನಹಳ್ಳಿ ವಿನಯ್ ಮಾಧವ್

5 ಕಾಮೆಂಟ್‌ಗಳು:

  1. Vinay,
    I could not control my feelings after reading this particular one. Perhaps you too have not realised your writing ability in Kannada till recently. I am enjoying every bit of your writing. Carry on.Vijayendra

    ಪ್ರತ್ಯುತ್ತರಅಳಿಸಿ
  2. wonderfull writing... Eagerly wating for every Saturday to come. Cheers to you my Friend.-

    ಪ್ರತ್ಯುತ್ತರಅಳಿಸಿ
  3. ಪ್ರೀತಿಯ ವಿನಯ್್,
    ಅಭರಣ ಅಲಂಕಾರ ಇಲ್ಲದ ಸರಳ ಬರವಣಿಗೆ ನೇರವಾಗಿ ಮನಸ್ಸು ಮುಟ್ಟುತ್ತದೆ. ಇಪ್ಪತ್ತು ವಷ೯ಗಳ ಹಿಂದಿನ ಘಟನೆಯನ್ನು ಚಿತ್ರವತ್ತಾಗಿ ಬರೆದಿರುವ ನಿಮ್ಮ ನೆನಪಿನ ಶಕ್ತಿ ಅಸಾಧಾರಣ. ಓದಿ ಎಂಜಾಯ್್ ಮಾಡಿದೆ.

    ಪ್ರತ್ಯುತ್ತರಅಳಿಸಿ