ಶುಕ್ರವಾರ, ಜುಲೈ 20, 2012

ಗಾಳಿಪಟ


ಆ ಗಾಳಿಪಟ ಹಾರಿಸಲೇ ಇಲ್ಲ

ಸುಮ್ಮನೆ ಮಾತಾಡ್ತಾ ನೆಡೆಯುತ್ತಿದ್ದ ನಾನು ತಲೆ ಎತ್ತಿ ನೋಡಿದೆ. ಹಾಗೇ ಅಲ್ಲೇ ನಿಂತೆ. ಸ್ವಲ್ಪ ಮುಂದೆ ಹೋದ ವಿನೋದ್ ಮತ್ತು ಅಮರೇಶ್, ತಿರುಗಿ ನೋಡಿ `ಏನೋ?’ ಅಂದ್ರು. ಹಾಗೇ ಮೇಲಕ್ಕೆ ಕೈ ತೋರಿಸಿದೆ.
ಅವರೂ ಹಿಂದೆ ಬಂದವರೇ `ಗಾಳಿಪಟ ನೋಡ್ದೇ ಇದ್ದಹಾಗೆ ನಿಂತಿದ್ದೀಯಲ್ಲ? ಏನ್ಸಮಾಚಾರ?’ ಅಂದ್ರು.
`ಚಿಕ್ಕಂದಿನಲ್ಲಿ, ಅಪ್ಪ ಕೇರಳಾಪುರ ಅನ್ನೋ ಊರಲ್ಲಿ ಇದ್ದಾಗ, ಗಾಳಿಪಟ ತುಂಬಾ ಹಾರಿಸ್ತಿದ್ದೆ. ಬೆಂಗಳೂರಲ್ಲೂ, ಬಸವೇಶ್ವರನಗರದಲ್ಲಿ ದೊಡ್ಡಮ್ಮನ ಮನೆಗೆ ರಜಕ್ಕೆ ಬಂದಾಗ ಹಾರಿಸಿದ್ದೀನಿ. ಈಗೆಲ್ಲೂ ಗಾಳಿಪಟಗಳು ಕಾಣೋದಿಲ್ಲ ಕಣ್ರೋ,’ ಅಂದೆ.
`ಈಗೆಲ್ಲಿ ಹಾರ್ಸೋಕ್ಕಾಗುತ್ತೆ. ಎಲ್ಲಾ ಕಡೆ ಬಿಲ್ಡಿಂಗ್ ಗಳು. ಗಾಳಿನೇ ಬೀಸೋಲ್ಲ,’ ಅಂದ ಅಮರೇಶ.
`ಅಂತೂ ನನ್ನ ಮಗಳಿಗೆ ಗಾಳಿಪಟ ಹಾರ್ಸೋದು ಹೇಳ್ಕೊಡ್ಬೇಕು ಕಣೋ. ಈಗಿನ ಜನರೇಶನ್ ಗೆ ಮರೆತೇ ಹೋಗಿದೆ ನೋಡು. ಒಂದು ತಗೊಳ್ತೀನಿ,’ ಅಂದೆ. ನನ್ನ ಮಗಳು ಮರ ಹತ್ತೋದು ಕಲೀಬೇಕು, ಗೋಲಿ, ಬುಗುರಿ ಆಡಬೇಕು ಅನ್ನೋ ಹುಚ್ಚು ಕನಸುಗಳಿಗೆ, ಅವಳು ಗಾಳಿಪಟ ಹಾರಿಸಬೇಕು ಅನ್ನೋದೂ ಸೇರಿಕೊಂಡಿತು.
`ಯಾರ್ಗೂ ಹೇಳ್ಬೇಡ ಕಣೋ, ಇಲ್ಲಿ ತಗೊಂಡೆ ಅಂತ. ಶ್ರೀಲಂಕಾಗೆ ಹೋಗಿ ಗಾಳಿಪಟ ತಂದ ಅಂತ ನಗ್ತಾರೆ,’ ಅಂತ ವಿನೋದ್ ತಮಾಶೆ ಮಾಡಿದ.
ಕೊಲೊಂಬೋದ ಸಮುದ್ರ ತೀರದಲ್ಲಿ ಸಾಯಂಕಾಲ ವಾಕಿಂಗ್ ಹೊರಟಿದ್ದೆವು. ನನ್ನ ಹೆಂಡತಿ ಅಂಬಿಕಾ ಮತ್ತು ಅಮರೇಶನ ಹೆಂಡತಿ ಸೌಮ್ಯ, ಅಲ್ಲಿನ ಅಂಗಡಿಗಳಲ್ಲಿ ಏನೇನೋ ನೋಡ್ತಿದ್ದರು. ನಾವು ಮೂರು ಜನ ಮಾತ್ರ ನಮ್ಮ ಪಾಡಿಗೆ, ಬ್ಯಾಚುಲರ್ ಬಾಯ್ ವಿನೋದನ್ನ ಗೋಳುಹೊಯ್ಕೊಳ್ತಾ ಇದ್ದಾಗ ನನ್ನ ಕಣ್ಣಿಗೆ ಈ ಗಾಳಿಪಟ ಕಣ್ಣಿಗೆ ಬಿದ್ದದ್ದು.
ಆ ಗಾಳಿಪಟ ಬಿಡ್ತಾ ಇದ್ದ ಹುಡುಗನ ಹತ್ತಿರ ಹೋಗಿ ನೋಡಿದೆ. ಅವನು ಗಾಳಿಪಟ ಮಾರೋಕೆ ಅಂತಲೇ ಅಲ್ಲಿ ಕೂತಿದ್ದ. ಆ ಗಾಳಿಪಟಗಳು ನಾವು ಹಾರಿಸುತ್ತಿದ್ದ ಗಾಳಿಪಟಗಳಂತಿರಲಿಲ್ಲ. ಚಿಕ್ಕಂದಿನಲ್ಲಿ ನಾವೆಲ್ಲಾ ಪೇಪರಿನಲ್ಲಿ ಗಾಳಿಪಟ ಮಾಡಿ, ಕೈಮಗ್ಗ ಇಟ್ಟವರನ್ನು ಕಾಡಿ, ಬೇಡಿ, ದಾರ ತಂದು ಗಾಳಿಪಟ ಹಾರಿಸುತ್ತಿದ್ದೆವು. ಇದು ಒಂಥರಾ ತೆಳು ಪ್ಲಾಸ್ಟಿಕ್ ನಿಂದ ಮಾಡಿದ್ದು. ಅದರ ದಾರ ಕೂಡ. ಅಷ್ಟು ಸುಲಭವಾಗಿ ಹಾಳಾಗೋದಿಲ್ಲ ಅನ್ನಿಸ್ತು.
ರೇಟು ಮಾತ್ರ ವಿದೇಶಿಯರಿಗೆ ಹೇಳಿದಂತೆ, 250 ರೂಪಾಯಿ ಅಂತ ಕೂಲಾಗಿ ಹೇಳ್ದ. ಚೌಕಾಶಿಗೆ ಬಗ್ಗುವವನಂತೆ ಕಾಣಲಿಲ್ಲ. ಹಾಗೂ ಹೀಗೂ ಎಳೆದು, 150 ರೂಪಾಯಿ ಕೊಟ್ಟು, ಗಾಳಿಪಟ ಮತ್ತೆ ದಾರ ತಗೊಂಡು ಬಂದೆ.
ಬೆಂಗಳೂರಿಗೆ ಬಂದವನೇ ನನ್ನ ಮಗಳು ಸೃಷ್ಟಿಗೆ ಗಾಳಿಪಟ ತೋರಿಸಿದೆ. ಅವಳಂತೂ ಖುಶಿಯಲ್ಲಿ ಕುಣಿದಾಡಿದಳು. ಅದನ್ನು ಹಾರಿಸೋಕೆ ಅಂತ ಚಾಮರಾಜಪೇಟೆಯ ನನ್ನ ಅತ್ತೆಯ ಮನೆ ಟೆರೆಸ್ ಗೆ ತಗೊಂಡು ಹೋದಾಗ ಅದರ ಸಮಸ್ಯೆಗಳು ಅರ್ಥವಾದವು.
ಮನೆಯ ಹಿಂಬಾಗದ ದಿಕ್ಕಿನಲ್ಲಿ ಹಲಸಿನ ಮರ ಅಡ್ಡ ಬರುತ್ತಿತ್ತು. ಮುಂದಿನ ಭಾಗದ ದಿಕ್ಕಿನಲ್ಲಿ ಕೇಬಲ್ ವೈರ್ ಗಳು ಇದ್ದವು. ಬಲಗಡೆಯಲ್ಲಿ ದೊಡ್ಡದಾದ ಮನೆಯಿದ್ದರೆ, ಎಡಭಾಗದಲ್ಲಿ ನೇರಳೆ ಮರ ಅಡ್ಡ ಬರುತ್ತಿತ್ತು. ಇದೊಳ್ಳೆ ಗ್ರಹಚಾರ ಆಯ್ತಲ್ಲ ಅಂತ ಪೇಚಾಡಿಕೊಂಡೆ. ಆಗಲೇ ನೆನಪು ಬಂದಿದ್ದು ಕೆ.ಎನ್. ಫಾರ್ಮ್. ಗಾಳಿಪಟ ಹಾರಿಸೋಕೆ ಅದಕ್ಕಿಂತ ಒಳ್ಳೆ ಜಾಗ ಇಲ್ಲ ಅಂದ್ಕೊಂಡೆ.
ಕೆ.ಎನ್. ನಮ್ಮ ಸ್ನೇಹಿತ ಕೃಷ್ಣ ನಾರಾಯಣನನ್ನು ನಾವು ಕರೆಯುತ್ತಿದ್ದ ರೀತಿ. ಹೇಗೂ ಆ ಶನಿವಾರ ಅವರ ಫಾರ್ಮ್ ಗೆ ಹೋಗುವುದಿತ್ತು.  ಆಗ ತಗೊಂಡು ಹೋಗೋಣ ಅಂತ ಯೋಚನೆ ಮಾಡ್ದೆ. ಅಷ್ಟರಲ್ಲೇ ಇನ್ನೊಂದು ವಿಷಯ ತಲೆಗೆ ಬಂತು. ಸೃಷ್ಟಿಯ ಹುಟ್ಟಿದ ಹಬ್ಬಕ್ಕೆ ಮೂರು ವಾರ ಮಾತ್ರ ಬಾಕಿ ಇತ್ತು. ಅವಳ ಐದನೇ ಹುಟ್ಟಿದ ಹಬ್ಬಕ್ಕೇ ಅವಳು ಗಾಳಿಪಟ ಹಾರಿಸುವುದನ್ನು ಕಲಿಯಲಿ ಅಂತ ಅನ್ನಿಸ್ತು.
ಬನ್ನೇರುಘಟ್ಟಕ್ಕೆ ಹೊಂದಿಕೊಂಡಂತಿದ್ದ ಕೆ.ಎನ್ ಫಾರ್ಮ್ ಸುತ್ತುತ್ತಾ ಇರುವಾಗಲೇ ಅವರಿಗೆ ನಾನು ಗಾಳಿಪಟದ ವಿಷಯ ಹೇಳಿದೆ. `ಅಲ್ವೋ… ಅದೇನು ಬರ್ತ್ ಡೇ ಅಂತ ಮುಹೂರ್ತ ಬೇರೆ. ಬರ್ತಾ ತರೋಕೆ ಆಗ್ಲಿಲ್ವಾ. ಇವತ್ತೂ ಹಾರಿಸ್ತಿದ್ಲು, ಅವತ್ತೂ ಹಾರಿಸ್ತಿದ್ಲು. ನಾನೂ ಹಾರಿಸಿ ತುಂಬಾ ವರ್ಷ ಆಗಿತ್ತು. ಯಾವೂರೋ ನಿಂದು? ಇದನ್ನೆಲ್ಲಾ ನಿಂಗೆ ಹೇಳ್ಕೊಡ್ಬೇಕಾ?’ ಅಂತ ಕೆ.ಎನ್ ರೇಗಿದರು. ನಾನು ಸುಮ್ಮನೆ ನಕ್ಕೆ.
ಕೆ.ಎನ್ ಹಾಗೇನೆ. ಮನಸ್ಸಿಗೆ ಬಂದಿದ್ದನ್ನು ನೇರವಾಗಿ ಹೇಳ್ತಿದ್ರು. ಜೀವನದಲ್ಲಿ ತುಂಬಾನೇ ಆಸಕ್ತಿ. ಒಂದು ನಿಮಿಷ ಕೂತಲ್ಲಿ ಕೂರುತ್ತಿರಲಿಲ್ಲ. ಯಾವುದರಲ್ಲೂ ಆಸಕ್ತಿ ಇಲ್ಲ ಅಂತಿಲ್ಲ. ಏನು ನೋಡಿದ್ರೂ, ಅದನ್ನು ಪೂರ್ತಿ ತಿಳ್ಕೊಳ್ಳೋವರೆಗೆ ಬಿಡ್ತಿರ್ಲಿಲ್ಲ.
`ಯಾವತ್ತು ಬರುತ್ತೋ ಫೆಬ್ರವರಿ 15?’ ಅಂತ ಕೇಳಿದ್ರು.
`ಗುರುವಾರನೋ, ಶುಕ್ರವಾರನೋ ಇರ್ಬೇಕು,’ ಅಂದೆ.
`ಸರಿ, ನಾನೂ ಬರ್ತೀನಿ. ಸಾಯಂಕಾಲ ಆಗ್ಬಹುದು. ನೀನು ಬಂದಿರು. ಹ್ಯಾಗೂ ಶಿವಣ್ಣ ಇರ್ತಾನಲ್ಲ,’ ಅಂದ್ರು.
ಅವತ್ತಿಡೀ ಸೃಷ್ಟಿ ಕೆ.ಎನ್ ಜೊತಯಲ್ಲೇ ಹೆಚ್ಚು ಸಮಯ ಕಳೆದಳು. ಫಾರ್ಮ್ ನಲ್ಲಿದ್ದ ಕೆರೆಯಲ್ಲಿ ಹರಿಗೋಲಿನಲ್ಲಿ ಸುತ್ತಿದಳು. ಕೆ.ಎನ್ ಹೊಸದಾಗಿ ಮಾಡಿದ `ನೇಚರ್ ಕ್ಯಾಂಪ್’ ಸುತ್ತಿ, ಅವರು ರಾಜಸ್ಥಾನದಿಂದ ತಂದಿದ್ದ ಕುದುರೆಯನ್ನು ಬಾಯಿ ಬಿಟ್ಟುಕೊಂಡು ನೋಡಿದಳು. ನಾನೂ ಫಾರ್ಮ್ ಗೆ ಹೋಗಿ ತುಂಬಾ ದಿನಗಳಾಗಿದ್ದವು. ಕೆ.ಎನ್ ತುಂಬಾ ಬದಲಾವಣೆ ಮಾಡಿದ್ದರು.
`ನೋಡು… ಒಂದು ವರ್ಷದ ಮೇಲಾಯ್ತಲ್ಲ ನೀನು ಬಂದು.ಎಷ್ಟೆಲ್ಲಾ ಬದಲಾವಣೆ ಆಗಿದೆ ಅಂತ,’ ಎಲ್ಲವನ್ನೂ ತೋರಿಸುತ್ತಾ, ಇನ್ನೂ ಏನೇನು ಮಾಡ್ಬೇಕು ಅಂತ ಹೇಳಿದ್ರು.
ಹಾಗೇನೆ, `ನಿಮಗೆಲ್ಲ ವೈಲ್ಡ್ ಲೈಫ್ ಒಂದು ಶೋಕಿ ಕಣ್ರೋ. ಎಷ್ಟು ದಿನದಿಂದ ಹೇಳ್ತಿದ್ದೀನಿ ನಿಂಗೆ. ಇಬ್ಬರೂ ಕೂತ್ಕೊಂಡು ಈ ಬನ್ನೇರುಘಟ್ಟಕ್ಕೆ ಒಂದು ರೂಪ ಕೊಡೋಣಾ ಅಂತ. ನೋಡ್ತಾ ನೋಡ್ತಾ, ಇಡೀ ಬೆಂಗಳೂರೇ ಇಲ್ಲಿವರೆಗೆ ಬಂತು ನೋಡು,’ ಅಂತ ಬೈದರು.
ಬನ್ನೇರುಘಟ್ಟ ಕಾಡನ್ನು ಉಳಿಸಲು ಕೆ.ಎನ್ ಅವರದೇ ಯೋಜನೆ ಹಾಕಿದ್ದರು. ಅದನ್ನು ಸರ್ಕಾರದಲ್ಲಿ ಕಾರ್ಯರೂಪಕ್ಕೆ ತರಲು ಓಡಾಡುತ್ತಿದ್ದರು. ಅದಕ್ಕೆ ನನ್ನನ್ನೂ ಸೇರಿಸಿಕೊಂಡಿದ್ದರು. ಆದರೆ, ಅರಣ್ಯಾಧಿಕಾರಿಗಳನ್ನು ಮತ್ತು ಜಿಲ್ಲಾಡಳಿತವನ್ನು ಒಂದೇ ಕಡೆ ಸೇರಿಸೋಕ್ಕೆ ಕಷ್ಟ ಆಗ್ತಿತ್ತು. `ಈ ಸಲ ಸೀರಿಯಸ್ ಆಗಿ ಮಾಡೋಣ,’ ಅಂದೆ.
ಕೆ.ಎನ್ ಪರಿಚಯವಾಗಿದ್ದೇ ನನ್ನ ವನ್ಯಜೀವಿಗಳ ಹುಚ್ಚಿನಿಂದ. 1997 ರಲ್ಲಿ, ನಾನು ವನ್ಯಜೀವಿಗಳ ಬಗ್ಗೆ ವರದಿ ಬರೆಯಲು ಶುರ ಮಾಡಿದಾಗ, ಯಾರಾದರೊಬ್ಬರ ಹೇಳಿಕೆಯನ್ನು ತೆಗೆದುಕೊಳ್ಳಬೇಕಿತ್ತು. ವರದಿಗೆ ಸಂಬಂಧ ಪಟ್ಟ ಎಲ್ಲಾ ದಾಖಲೆಗಳನ್ನು ಕೊಟ್ಟವರು, ತಮ್ಮ ಹೆಸರು ಬರಬಾರದೆಂದು ಹೇಳುತ್ತಿದ್ದರು. ಅಂಥಾ ಸಂದರ್ಭಗಳಲ್ಲಿ ನನ್ನ ಸಹಾಯಕ್ಕೆ ಬರುತ್ತಿದ್ದಿದ್ದೇ ಈ ಕೆ.ಎನ್.
ವಿಲ್ ಪೆಗ್ ಎಂಬ ಗುಂಪನ್ನು ಕಟ್ಟಿ, ಸುಮಾರು ವರ್ಷ ಅದನ್ನು ನೆಡೆಸಿದ್ದರು. ನಾನು ಈ ವರದಿಗಳನ್ನು ಬರೆಯುವಾಗ, ವಿಲ್ ಪೆಗ್ ಚಟುವಟಿಕೆಗಳು ನಿಂತು ಹೋಗಿತ್ತು. ಅದರ ಸದಸ್ಯರೆಲ್ಲ ತಮ್ಮ ವ್ಯವಹಾರಗಳಲ್ಲಿ ಮುಳುಗಿ ಹೋಗಿದ್ದರು. ಕೆ.ಎನ್ ಮಾತ್ರ, ಇಸ್ರೋದ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಸೋಲಾರ್ ಬೇಲಿಯ ವ್ಯವಹಾರು ಶುರುಮಾಡಿಕೊಂಡು, ವಿಲ್ ಪೆಗ್ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರು. ಹಾಗಾಗಿ, ತಮ್ಮ ಮತ್ತು ವಿಲ್ ಪೆಗ್ ಹೆಸರನ್ನು ಧಾರಾಳವಾಗಿ ಬಳಸಿಕೊಳ್ಳಲು ಅನುಮತಿ ನೀಡಿದ್ದರು.
ಕೆ.ಎನ್ ಹೆಸರು ಬಳಸಲು ಆರಂಭಿಸಿ ಒಂದು ವರ್ಷವಾದರೂ ನಾನು ಅವರನ್ನು ಭೇಟಿಯಾಗಿರಲಿಲ್ಲ. ನೇರವಾಗಿ ಮಾತು ಕೂಡ ಆಡಿರಲಿಲ್ಲ. ಒಂದು ದಿನ ಕೆ.ಎನ್ ಅವರೇ ಫೋನ್ ಮಾಡಿದರು.
`ವಿನಯ್, ಬನ್ನೇರುಘಟ್ಟದ ಹತ್ತಿರ ಶಿವಪುರದಲ್ಲಿ ಒಂದು ರಾಮಕೃಷ್ಣ ಆಶ್ರಮ ಇದೆ. ಅಲ್ಲಿ ಆಕ್ರಮವಾಗಿ ಕಲ್ಲು ಗಣಿಗಾರಿಕೆ ನೆಡೆಯುತ್ತಿದೆ. ಸ್ವಾಮೀಜಿಯಂತೂ ಎಲ್ಲಾ ಥರ ಪ್ರಯತ್ನ ಮಾಡಿದರೂ, ಏನೂ ಮಾಡೋಕೆ ಆಗ್ತಾ ಇಲ್ಲ. ಅಲ್ಲಿನ ಪಂಚಾಯ್ತಿಯವರೆಲ್ಲ ಶಾಮೀಲಾಗಿದ್ದಾರೆ. ನಿಮ್ಮ ಪೇಪರ್ ನಲ್ಲಿ ಒಂದು ರಿಪೋರ್ಟ್ ಹಾಕ್ತೀಯಾ?’ ಅಂತ ನೇರವಾಗಿ ಕೇಳಿದ್ರು.
`ಅಲ್ಲಿನ ಫೋಟೋ ಇದ್ದಿದ್ರೆ ಚೆನ್ನಾಗಿತ್ತು. ಸ್ವಾಮೀಜಿ ಹತ್ರಾನೂ ಮಾತಾಡಬೇಕಿತ್ತು. ಮುಂದಿನ ವಾರ ಯಾವಾಗಾದ್ರೂ ಹೋಗಿ ಬರ್ತೀನಿ,’ ಅಂದೆ.
`ಫೋಟೋ ನಾನೇ ತೆಗೆದಿದ್ದೀನಿ. ಸ್ವಾಮೀಜಿ ನಂಬರ್ ಬೇಕಾದ್ರೆ ಕೊಡ್ತೀನಿ. ಇಲ್ಲದೇ ಹೋದ್ರೆ ಬೆಂಗಳೂರಿನ ಆಶ್ರಮಕ್ಕೆ ಕರೆಸ್ತೀನಿ,’ ಅಂದ್ರು.
`ಸರಿ, ನಂಬರ್ ಕೊಡಿ. ಫೋಟೋ ಎಲ್ಲಿಂದ ಕಲೆಕ್ಟ್ ಮಾಡ್ಬೇಕು?’ ಅಂತ ಕೇಳ್ದೆ.
`ಅದೇನು ಮಹಾ.. ನಿನ್ನ ಆಫೀಸಿಗೇ ಕಳುಹಿಸ್ತೀನಿ ಬಿಡು,’ ಅಂದ್ರು.
ಅವರು ನೇರವಾಗಿ ಏಕವಚನಕ್ಕೆ ಇಳಿದರೂ, ನನಗೆ ಅದರಲ್ಲಿ ಅತ್ಮೀಯತೆ ಕಾಣಿಸಿತು. ಇನ್ನೊಂದು ಘಂಟೆಯೊಳಗೆ ಫೋಟೋ ಬಂದು ನನ್ನ ಆಫೀಸಿನಲ್ಲಿ ಬಿದ್ದಿತ್ತು. ಫೋಟೋ ನೋಡಿದ ತಕ್ಷಣ ಅಲ್ಲಿ ಆಗುತ್ತಿದ್ದ ಅನಾಹುತ ಅರ್ಥವಾಯ್ತು. ಸ್ವಾಮೀಜಿಗೆ ಮಾತಾಡಿ, ಒಂದು ವರದಿ ಬರೆದು ಹಾಕಿದೆ.
ಅದಾದ ಒಂದು ವಾರದಲ್ಲಿ, ಆಗಿನ ಹೈಕೋರ್ಟ್ ನ್ಯಾಯಾಧೀಶರಾದ ಜಸ್ಟೀಸ್ ಸಲ್ಡಾನರವರು ಆ ಕಲ್ಲುಗಣಿಗೆ ಹೋಗಿಯೇಬಿಟ್ಟರು. ವಾಪಾಸು ಬಂದವರೇ, ನನ್ನ ವರದಿಯನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಂತ ಪರಿಗಣಿಸಿ, ಗಣಿಗಾರಿಕೆಯನ್ನು ನಿಲ್ಲಿಸಿಯೇ ಬಿಟ್ಟರು. ಅದಾಗಿ ಇನ್ನೊಂದು ವಾರದ ನಂತರ, ಗಣಿಗಾರಿಕೆ ನಿಜವಾಗಲೂ ನಿಂತಿದೆಯಾ ಅಂತ ನಾನು ನೋಡಲು ಹೋಗಿ, ಅಲ್ಲಿನ ಗಣಿಯವರಿಗೆ ಅದು ಗೊತ್ತಾಗಿ, ನನ್ನನ್ನು ಅಟ್ಟಾಡಿಸಿ, ದೊಡ್ಡ ಫಜೀತಿಯಾಗಿತ್ತು. ಕೊನೆಗೆ ನಾನೇ ಅವರ ವಿರುದ್ದ ತಿರುಗಿಬಿದ್ದಾಗ, ವಿಷಯ ರಾಜಿ-ಪಂಚಾಯ್ತಿಯೊಂದಿಗೆ ಮುಕ್ತಾಯವಾಗಿ, ನಾನು ವಾಪಾಸ್ ಬಂದೆ.
ಮರುದಿನ ಕೆ.ಎನ್ ಗೆ ಫೋನ್ ಮಾಡಿ ವಿಷಯ ಹೇಳಿದೆ. `ಹೋಗ್ಲಿ ಬಿಡು. ಅಲ್ಲಿ ಸಧ್ಯಕ್ಕೆ ಗಣಿಗಾರಿಕೆ ನಿಂತಿದೆ. ಶನಿವಾರ ಏನ್ಮಾಡ್ತಾ ಇದ್ದೀಯಾ? ಶುಕ್ರವಾರ ಸಾಯಂಕಾಲ, ಅಲ್ಲೇ ನನ್ನ ಫಾರ್ಮ್ ಗೆ ಹೋಗ್ತಾ ಇದ್ದೀನಿ. ನೀನೂ ಬಾ,’ ಅಂದರು.
ಅಲ್ಲಿಯವರೆಗೆ ಕೆ.ಎನ್ ಗೆ ಬನ್ನೇರುಘಟ್ಟದ ಹತ್ತಿರ ಫಾರ್ಮ್ ಇರೋದು ನಂಗೆ ಗೊತ್ತಿರಲಿಲ್ಲ. ಅದೂ ಅಲ್ದೆ, ಅವರ ಮುಖವನ್ನೇ ನೋಡಿರಲಿಲ್ಲ. ಹಾಗೇ ಮನೆಗೆ ಬಂದವನೇ, ಆಗಿನ ನನ್ನ ರೂಂ ಮೇಟ್ ಆಗಿದ್ದ ರಾಜೇಶ್ ಗೆ ವಿಷಯ ಹೇಳ್ದೆ. `ಹೋಗಿ ನೋಡೋಣ,’ ಅಂದ. 
ಸರಿ, ನೆಟ್ಟಕಲ್ಲಪ್ಪ ವೃತ್ತದ ಹತ್ತಿರ ಇರುವ ಅವರ ಮನೆಗೆ ಹೋದೆವು. ಅಲ್ಲಿಂದ ಅವರ ಜೀಪು ಹತ್ತಿ ಬನ್ನೇರುಘಟ್ಟದ ಕಡೆಗೆ ಹೊರಟೆವು. ಜೀಪಿನಲ್ಲಿ ನೋಡಿದರೆ ಒಂದೆರೆಡು ಕಂತ್ರಿ ನಾಯಿಗಳು ಮುದುಡಿ ಕೂತಿದ್ದರು. `ಈ ನಾಯಿಗಳು ಫಾರ್ಮಿಗಾ?’ ಅಂತ ಕೇಳ್ದೆ.
`ಹೌದು ಕಣೋ. ಅಲ್ಲಿನ ನಾಯಿಗಳನ್ನು ಚಿರತೆ ತಿಂದು ಹಾಕಿದೆ,’ ಅಂದ್ರು.
`ಇವನ್ನ ಬಿಟ್ಟರೆ ಚಿರತೆ ಇವನ್ನೂ ತಿನ್ನುತ್ತೆ,’ ಅಂದೆ.
`ತಿನ್ನಲಿ ಬಿಡು. ಊರವರ ಕುರಿ ಹಿಡಿಯೋದು ಕಮ್ಮಿ ಆಗುತ್ತೆ. ಆ ಕುರಿಗಳನ್ನು ಚಿರತೆ ಹಿಡಿದ್ರೆ, ಅವರು ಚಿರತೆಯನ್ನ ವಿಷ ಹಾಕಿ ಕೊಲ್ತಾರೆ. ಅದ್ರ ಬದಲು, ಬೀದಿ ನಾಯಿ ಹಿಡ್ಕೊಂಡು ತಿನ್ನಲಿ. ನಾನೂ ಅದಕ್ಕೆ ನಾಯಿ ಸಾಕೋದು,’ ಅಂದ್ರು. ನಾನೂ ಮತ್ತು ರಾಜೇಶ, ಮುಖ ಮುಖ ನೋಡಿಕೊಂಡೆವು.
ಆನೆಗಳ ನಾಡಿನಲ್ಲಿರುವ ಈ ಫಾರ್ಮ್ ನಲ್ಲಿ ಏನೇನು ಬೆಳಿತಾರೆ ಅಂತ ನನಗೆ ಕುತೂಹಲವಿತ್ತು. ಆದ್ರೆ ಶಿವಪುರಕ್ಕಿಂತ ತುಂಬಾ ಮುಂಚೆ, ರಾಗಿಹಳ್ಳಿಯ ಹತ್ತಿರ ಬಲಕ್ಕೆ ಇವರ ಫಾರ್ಮ್ ಇದ್ದಿದ್ದು. ಫಾರ್ಮ್ ತಲುಪಿದ ಮೇಲೆ ನೋಡಿದರೆ, ಅಲ್ಲೋಂದು ಮನೆ ಬಿಟ್ಟರೆ ಇನ್ನೇನೂ ಇರಲಿಲ್ಲ. `ಇಲ್ಲೇನು ಬೆಳಿತೀರಾ?’ ಅಂತ ಕೇಳ್ದೆ.
`ಫಾರ್ಮ್ ಅಂದ್ರೆ ಅಗ್ರಿಕಲ್ಚರ್ ಫಾರ್ಮ್ ಅಲ್ಲ ಕಣೋ. ಈ ಜಾಗ ನಂಗೆ ತೋರಿಸಿದ್ದು ರಾಮಕೃಷ್ಣಾಶ್ರಮದ ಸ್ವಾಮೀಜಿನೇ. ಇಲ್ಲಿ ಮೇಲುಗಡೆ ಇದೆಯಲ್ಲ ಬಂಡೆ, ಅದನ್ನ ದೊಡ್ಡಾನ ಗುಡ್ಡ ಅಂತ ಕರೀತಾರೆ. ಆ ರಾಗಿಹಳ್ಳಿ ಕಲ್ಲು ಗಣಿ ನೋಡಿದ್ಯಲ್ಲ, ಅದರ ಮಾಲಿಕರು ಈ ಗುಡ್ಡದ ಮೇಲೂ ಕಣ್ಣು ಹಾಕಿದ್ದರು. ಸ್ವಾಮೀಜಿ ನನ್ನನ್ನು ಕರ್ಕೊಂಡು ಬಂದು ತೋರಿಸಿದರು. ಇದನ್ನು ಹ್ಯಾಗಾದ್ರೂ ಮಾಡಿ ಉಳಿಸ್ಬೇಕೂ ಅಂತ ಹೇಳಿದ್ರು. ನಂಗೂ ಜಾಗ ಇಷ್ಟ ಆಯ್ತು. ಈ ಗುಡ್ಡದ ಸುತ್ತ 35 ಎಕರೆಯನ್ನು ಸರ್ಕಾರದಿಂದ ದುಡ್ಡು ಕೊಟ್ಟು ತಗೊಂಡೆ. ಅದಕ್ಕೆ ಮೂರು ಕಡೆಯಿಂದಲೂ ಬೇಲಿ ಹಾಕಿ, ಇನ್ನೊಂದು ಕಡೆಯನ್ನು ಹಾಗೇ ಬಿಟ್ಟಿದ್ದೀನಿ. ಕಾಡಿನ ಕಡೆಗೆ. ಎಲ್ಲಾ ಪ್ರಾಣಿಗಳೂ ಇಲ್ಲಿಗೆ ಬರ್ತಾವೆ. ಅದಕ್ಕೆ ನೋಡು, ಬೇಸಿಗೆಯಲ್ಲಿ ಅವುಗಳಿಗೆ ಕುಡಿಯೋಕೆ ನೀರು ಸಿಗಲಿ ಅಂತ ಕೆರೆ ತೋಡಿಸ್ತಿದ್ದೀನಿ,’ ಅಂದ್ರು.
ಸ್ವಲ್ಪ ಹೊತ್ತಿನ ಬಳಿಕೆ, ನಾವು ಮೂವರೂ ಗುಡ್ಡಕ್ಕೆ ನೆಡೆದುಕೊಂಡು ಹೋದೆವು. ಗುಡ್ಡದ ಮೇಲೆ ಕೆ.ಎನ್ ಒಂದು ವಾಚ್ ಟವರ್ ಕಟ್ಟಿದ್ದರು. ಅಲ್ಲಿ ನಿಂತರೆ, ಇಡೀ ಬನ್ನೇರುಘಟ್ಟ ಕಾಡು ಕಾಣುತ್ತಿತ್ತು. ಅಂಥಾ ಸುಂದರವಾದ ದೃಶ್ಯವನ್ನು ಕಾಪಾಡಿದ ಕೆ.ಎನ್ ಬಗ್ಗೆ ಹೆಮ್ಮೆ ಎನ್ನಿಸಿತು. ಅಲ್ಲಿಂದ ಮುಂದೆ, ಕೆ.ಎನ್ ಫಾರ್ಮ್ ಬಗ್ಗೆ ವಿಪರೀತ ಸಲುಗೆ ಇಟ್ಟುಕೊಂಡೆ. ಇಷ್ಟ ಬಂದಾಗಲೆಲ್ಲ ಫಾರ್ಮ್ ಗೆ ಹೋಗ್ತಿದ್ದೆ. ವಾರದಲ್ಲಿ ಒಂದೆರೆಡು ಸಲವಾದ್ರೂ ಕೆ.ಎನ್ ಭೇಟಿಯಾಗ್ತಿದ್ದೆ. ಎಷ್ಟೋ ಸಲ ನಾಗರಹೊಳೆಗೂ ಒಟ್ಟಿಗೆ ಹೋಗಿದ್ದೆವು.
ಅದು ನನ್ನ ಮದುವೆಯಾಗುವವರೆಗೆ ಮುಂದುವರೆಯಿತು. ಆಮೇಲೆ ನಮ್ಮ ಭೇಟಿ ನಿಧಾನವಾಗಿ ಕಡಿಮೆಯಾಗತೊಡಗಿತು. ಹೋದರೂ, ಫಾರ್ಮ್ ನಲ್ಲಿ ಉಳಿಯದೇ, ವಾಪಾಸ್ ಬರುತ್ತಿದ್ದೆ. ಸೃಷ್ಟಿಯ ಹುಟ್ಟಿದ ಹಬ್ಬಕ್ಕೆ ಬಂದ ಸಂದರ್ಭದಲ್ಲಿ ಬಂದಾಗ ಎರಡು ದಿನ ಉಳಿಬೇಕು ಅಂತ ಅನ್ಕೊಂಡು, ಬೆಂಗಳೂರಿಗೆ ವಾಪಾಸ್ ಬಂದೆ.
ಕಣ್ಣು ಮುಚ್ಚಿ ಬಿಡುವುದರೊಳಗೆ ಎರಡು ವಾರ ಕಳೆದು ಹೋಯ್ತು. ಅವತ್ತು ಶುಕ್ರವಾರ ಸಾಯಂಕಾಲ. ಕೆ.ಎನ್ ಗೆ ಫೋನ್ ಮಾಡಿ, ಮುಂದಿನ ಗುರುವಾರದ ಕಾರ್ಯಕ್ರಮದ ಬಗ್ಗೆ ನೆನಪಿಸಬೇಕು ಅಂತ ಯೋಚಿಸಿದೆ. ಫೋನ್ ಸಿಗಲಿಲ್ಲ. ಫಾರ್ಮ್ ನಲ್ಲಿದ್ದಾರೆ ಅಂತ ಗ್ಯಾರಂಟಿಯಾಯ್ತು. ಸರಿ, ಸೋಮವಾರ ಫೋನ್ ಮಾಡಿದ್ರಾಯ್ತು ಅಂತ ಸುಮ್ಮನಾದೆ. ಶನಿವಾರ ರಾತ್ರಿ, ಸುಮಾರು 10.30 ಘಂಟೆಗೆ, ಪ್ರವೀಣ್ ಭಾರ್ಗವ್ ಒಂದು ಎಸ್.ಎಂ.ಎಸ್ ಕಳುಹಿಸಿದರು: `ಕೆ. ಎನ್ ನೋ ಮೋರ್,’ ಅಂತ.
ತಕ್ಷಣವೇ ಪ್ರವೀಣ್ ಗೆ ಫೋನ್ ಮಾಡಿ ಕೇಳ್ದೆ: `ಏನಾಯ್ತು?’ ಅಂತ.
ಆಗಿದ್ದಿಷ್ಟು. ಫಾರ್ಮಿನ ಕೆರೆಯ ಪಕ್ಕದಲ್ಲಿ, ನೆರಳಿಗೆ ಮತ್ತು ಹರಿಗೋಲುಗಳನ್ನು ಇಡಲು, ಕೆ.ಎನ್ ಒಂದು ಶೆಡ್ ಕಟ್ಟಿಸಿದ್ದರು. ಇದ್ದಕ್ಕಿದ್ದಂತೆ, ಈ ಶೆಡ್ಡು ಸ್ವಲ್ಪ ಅಗಲ ಮಾಡಿದರೆ, ಅಲ್ಲಿ ವನ್ಯಜೀವಿ ಛಾಯಾಚಿತ್ರಗಳ ಒಂದು ಗ್ಯಾಲರಿ ಮಾಡಬಹುದು ಅಂತ ಮನಸ್ಸಿಗೆ ಬಂತಂತೆ. ಹಾಗಾಗಿ, ಬೆಂಗಳೂರಿಂದ ಸ್ವಲ್ಪ ಹೆಂಚುಗಳನ್ನು ತರಲು ಹೇಳಿದ್ದರಂತೆ.
ಅವತ್ತು ಫಾರ್ಮ್ ನಲ್ಲಿ, ಕೆ.ಎನ್ ಜೊತೆ ಅವರ ಪತ್ನಿ ಶೋಭಾ, ಅನಿಲ್ ಕುಂಬ್ಳೆ ತಮ್ಮ ದಿನೇಶ್ ಕುಂಬ್ಳೆ ಕೂಡ ಇದ್ದರಂತೆ. ಸಾಯಂಕಾಲದ ಹೊತ್ತಿಗೆ ಹೆಂಚುಗಳು ಬಂದಿವೆ. ಬೆಳಗ್ಗೆ ಹಾಕಿಸಿದರಾಯ್ತು ಅಂತ ಎಲ್ಲರೂ ಹೇಳಿದರೂ, ಕೆ.ಎನ್ ಮಾತ್ರ ಈಗಲೇ ಹಾಕಿಸಿದರೆ ಒಂದು ಕೆಲಸ ಮುಗಿಯುತ್ತೆ ಅಂತ ಹಟ ಹಿಡಿದರಂತೆ.
ಶೆಡ್ಡು ಅಗಲ ಮಾಡೋಕೆ ಅಂತ, ಇದ್ದ ಶೆಡ್ಡಿನ ಛಾವಣಿಗೆ ಒಂದು ದೊಡ್ಡ ಕಬ್ಬಿಣದ ತೊಲೆಯನ್ನು ಹಾಕಿಸಿದ್ದರು. ಕೆಲಸದವನು ಹೆಂಚು ಹಾಕಲು ಶುರು ಮಾಡಿದ ತಕ್ಷಣ, ಭಾರ ತಡೆಯದ ಸೂರು ಕೆಳಗೆ ಬರಲು ಆರಂಭಿಸಿತು. ಕೆ.ಎನ್ ಪಕ್ಕದಲ್ಲಿದ್ದ ದಿನೇಶ್ ಕುಂಬ್ಳೆ, ಓಡಿ ಹೋಗಿ ಕೆರೆಗೆ ಹಾರಿದ್ದಾರೆ. ಆದರೆ, ಕೆ.ಎನ್ ಮಾತ್ರ, ಅಲ್ಲಾಡದೆ ನಿಂತಿದ್ದಾರೆ. ಇಡೀ ಸೂರು ಅವರ ಮೇಲೆ ಬಿದ್ದರೆ, ಕಬ್ಬಿಣದ ತೊಲೆ ಅವರ ತಲೆಗೇ ಹೊಡೆದಿದೆ. ಎಲ್ಲರೂ ಸೇರಿ ಅವರನ್ನು ಜೀಪಿನಲ್ಲಿ ಹಾಕಿಕೊಂಡು ಬೆಂಗಳೂರಿಗೆ ಬರುವ ಹೊತ್ತಿನಲ್ಲಿ, ಅವರು ತೀರಿಕೊಂಡಿದ್ದರು.
`ಸುಮಾರು ಮುಕ್ಕಾಲು ನಿಮಿಷ ಸಮಯವಿತ್ತು ವಿನಯ್. ದಿನೇಶ್ ಓಡಲು ಕೂಗಿಕೊಂಡರೂ, ಏನೂ ಆಗೋಲ್ಲ ಕಣೋ ಅಂತ ಹೇಳ್ಕೊಂಡು ಕೆ.ಎನ್ ಅಲ್ಲೇ ನಿಂತಿದ್ದನಂತೆ. ಬರೀ ಐದು ಹೆಜ್ಜೆ ಆ ಕಡೆ ಹೋಗ್ಬೇಕಿತ್ತು ಅಷ್ಟೆ. ನೆಡ್ಕೊಂಡು ಹೋಗಿದ್ರೂ ಬಚಾವಾಗುತ್ತಿದ್ದ. ಎಲ್ಲಾ ಗ್ರಹಚಾರ,’ ಅಂದ್ರು ಪ್ರವೀಣ್.
ನಂಗೇನು ಮಾತಾಡಬೇಕು ಅಂತ ಗೊತ್ತಾಗಲಿಲ್ಲ. ಬೆಳಗ್ಗೆ ಕೆಂಪೇಗೌಡ ಆಸ್ಪತ್ರೆಗೆ ಹೋಗಿ, ಅಲ್ಲಿಂದ ಕೆ.ಎನ್ ದೇಹದ ಜೊತೆ ಅವರ ಮನೆಗೆ ಹೋದೆ. ದೇಹವನ್ನು ಮನೆಯ ಮುಂದೆ ಇಟ್ಟ ಮೇಲೆ ಏನು ಮಾಡ್ಬೇಕು ಅಂತ ನನಗೆ ಗೊತ್ತಾಗಲಿಲ್ಲ. ಶೋಭಾರವರಾಗಲಿ, ಕೆ.ಎನ್ ನ ಇಬ್ಬರು ಹೆಣ್ಣು ಮಕ್ಕಳಾದ ಅರಣ್ಯ ಮತ್ತು ಕಾನನ, ನನಗೆ ಪರಿಚಯವಿರಲಿಲ್ಲ. ಅಷ್ಟರಲ್ಲಿ ಚಿದಾನಂದ ಮೂರ್ತಿಯವರ ಮಗ ವಿನಯ್ ಸಿಕ್ಕಿದರು.
`ವಿನಯ್, 12 ಘಂಟೆಗೆ ಬಾಡಿ ಎತ್ತುತ್ತಾರಂತೆ,’ ಅಂದ್ರು.
`ಇಲ್ಲ ವಿನಯ್. ಇನ್ನು ನಂಗೆ ಕೆ.ಎನ್ ನ ನೋಡೋಕೆ ಆಗೋಲ್ಲ,’ ಅಂದೆ.
`ಕ್ರಿಮೇಶನ್ ಗೆ ಇರೋಲ್ವ?’ ಅಂತ ಕೇಳಿದ್ರು.
`ಇಲ್ಲ,’ ಅಂದವನೇ, ಸೀದ ಕಾರು ಹತ್ತಿ ಮನೆ ಕಡೆ ಹೋದೆ.
ಅಲ್ಲಿಂದ ಮುಂದೆ ನಾನು ಯಾವತ್ತೂ ರಾಗಿಹಳ್ಳಿಯ ಕಡೆಗೆ ಹೋಗಲೇ ಇಲ್ಲ. ಹಾಗೇ, ಆ ಗಾಳಿ ಪಟ ಕೂಡ ಹಾರಿಸಲೇ ಇಲ್ಲ…..


ಮಾಕೋನಹಳ್ಳಿ ವಿನಯ್ ಮಾಧವ

ಶನಿವಾರ, ಜುಲೈ 14, 2012

ಸಂದರ್ಶನ



  
ಆ ಸಂದರ್ಶನ ಕಾವೇರಿ ನೀರಿನೊಂದಿಗೆ ಕೊಚ್ಚಿ ಹೋಗಿತ್ತು

`ಅಲ್ಲ ಕಣ್ಲೆ.. ನಾಳೆ ಬೆಳಗಾ ಮುಂದೆ ಒಂದ್ ಕೆಲ್ಸ ಮಾಡೋಣ. ಕೃಷ್ಣನ ಇಂಟರ್ ವ್ಯೂ ಮಾಡಾಣ.. ಏನಂತಿ?’
ಬಾಟ್ಲಿಯಿಂದ ಬೀರನ್ನು ಲೋಟಕ್ಕೆ ಸುರಿಯುತ್ತಿದ್ದ ನಾನು, ಒಂದು ಕ್ಷಣ ನಿಲ್ಲಿಸಿ, `ಹೂಂಅಂದವನೇ ಮತ್ತೆ ಸುರಿಯುವುದನ್ನು ಮುಂದುವರೆಸಿದೆ.
ಬಿಯರ್ ಸುರಿದುಕೊಂಡು ಒಂದು ಗುಟುಕು ಕುಡಿದವನೇ, ಬೇರರ್ ಕಡೆಗೆ ಕೈ ಬೀಸಿ ಕರೆದು, `ತಿನ್ನೋಕೆ ಏನಾದ್ರೂ ಬೇಕಾ?’ ಅಂತ ಕೇಳ್ದೆ.
ಕುಡಿಯೋದಿಲ್ಲ, ಸೇದೋದಿಲ್ಲ ಮತ್ತು ಮಾಂಸ ಸಹ ತಿನ್ನೋದಿಲ್ಲ. ಭರತನಿಗೆ ಒಂದು ಪ್ಲೇಟ್ ಪಕೋಡ ಮತ್ತು ಒಂದು ಪ್ಲೇಟ್ ಮೊಸರನ್ನ ಇದ್ರೆ ಸಾಕು. ಜ್ಯೂಸ್ ಕುಡಿಯೋಕೂ ಹಿಂದೆ ಮುಂದೆ ನೋಡ್ತಿದ್ದ. ಸರಿ, ಪಕೋಡ ಆರ್ಡರ್ ಮಾಡಿ, ಸಿಗರೇಟ್ ಹಚ್ಕೊಂಡೆ.
ಅಷ್ಟರವರೆಗೆ ಅಸಹನೆಯಿಂದ ನನ್ನನ್ನೇ ನೋಡ್ತಿದ್ದ ಭರತ, `ಅಲ್ಲಲೇ, ಒಂದು ಫೋನ್ ಮಾಡ್ಲೇ,’ ಅಂದ.
`ಯಾರಿಗೆ?’ ಅಂತ ಕೇಳ್ದೆ.
`ಅದೇ, ಕೃಷ್ಣನ ಜೊತೆ ಇರ್ತಾರಲ್ಲದಿನೇಶ್ ಅಥವಾ ಶ್ರೀಧರ್ ಗೆ. ಇಂಟರ್ ವ್ಯೂ ಫಿಕ್ಸ್ ಮಾಡೋಕೆ,’ ಅಂದ.
ನಂಗಂತೂ ರೇಗಿ ಹೋಯ್ತು. ಇದೇನು ಮೊದಲ ಸಲ ಅಲ್ಲ, ಭರತ ಮಾತಾಡಿದ್ದು ಅಸಂಬದ್ದ ಅಂತ ನಂಗೆ ಅನ್ನಿಸಿದ್ದು. `ಸ್ವಲ್ಪ ಸುಮ್ಮನಿರ್ತಿಯಾ? ನೋಡೋ, ಕೃಷ್ಣನ ಸರ್ಕಾರಕ್ಕೆ ಮೂರು ವರ್ಷ ತುಂಬಿದೆ. ಎಲ್ಲಾ ಎಡಿಟರ್ ಗಳೂ ಬಂದು ಅವರನ್ನ ಇಂಟರ್ ವ್ಯೂ ಮಾಡಿಕೊಂಡು ಹೋಗ್ತಿದ್ದಾರೆ. ನಾವಿಬ್ಬರು ಪುಟುಗೋಸಿ ರಿಪೋರ್ಟರ್ ಗಳು ಮಾಡಿದ ಇಂಟರ್ ವ್ಯೂ ಯಾರು ಪ್ರಿಂಟ್ ಮಾಡ್ತಾರೆ ಹೇಳು? ನಿನ್ನ ಮತ್ತು ನನ್ನ ಎಡಿಟರ್ ಗಳೂ ಬಂದು ಇಂಟರ್ ವ್ಯೂ ಮಾಡಿಯಾಗಿದೆ. ನಾವಿಬ್ಬರೂ ಮತ್ತಿನ್ನೇನು ಮಾಡೋದು ಹೇಳು. ಹಾಗೇನಾದ್ರೂ ಕೃಷ್ಣ ಜೊತೆ ಮಾತಾಡ್ಬೇಕು ಅಂತಿದ್ರೆ, ನಾಳೆ ನೋಡೋಣಂತೆ. ಯಾವಾಗಾದ್ರೂ ರೆಸ್ಟ್ ತಗೊಳ್ಳೋಕೆ ಅಂತ ನಿಂತಾಗ, ಇಬ್ಬರೇ ಮಾತಾಡ್ಸೋಕೆ ಅರೇಂಜ್ ಮಾಡ್ತೀನಿ,’ ಅಂದೆ.
ಆಗಿದ್ದಿಷ್ಟೆ. ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪಾದಯಾತ್ರೆ ಹೊರಟಿದ್ದರು. ಕಳೆದ ಮೂರು ವರ್ಷಗಳಲ್ಲಿ, ಕೃಷ್ಣರವರಿಗೆ ಯಾವುದೂ ಸರಿ ಹೋಗಿರಲಿಲ್ಲ. ಮೊದಲ ಆರು ತಿಂಗಳು ಮಾತ್ರ ಹನಿಮೂನ್ ಪಿರಿಯಡ್ ಇದ್ದದ್ದು. ಅಲ್ಲಿಂದ ಮುಂದೆ ಬರೀ ಬರಗಾಲ, ಕೋರ್ಟ್ ಕೇಸ್ ಗಳು ಮತ್ತು ವೀರಪ್ಪನ್ ಹಾವಳಿ.
ಅದು ಹಾಳಾಗಿ ಹೋಗಲಿ ಅಂದರೆ, ಕೃಷ್ಣರವರು ತರಬೇಕು ಅಂತ ಇದ್ದ ಬದಲಾವಣೆಗಳಿಗೆ ಅವರ ಪಕ್ಷದವರೇ ವಿರೋಧವಾಗಿದ್ದರು. ಅಲ್ಲಿವರೆಗೆ ತಮ್ಮ ಪಾಡಿಗೆ ಬ್ಯುಸಿನೆಸ್ ಮಾಡಿಕೊಂಡಿದ್ದ ಕಾರ್ಪೋರೆಟ್ ಧಣಿಗಳು, ಸರ್ಕಾರದ ನಿರ್ಧಾರಗಳಲ್ಲಿ ಮೂಗು ತೂರಿಸಲು ಶುರುಮಾಡಿದ್ದರು. ಮಂತ್ರಿಗಳಂತೂ, ತಮ್ಮೊಳಗೆ ಹಾವು-ಮುಂಗುಸಿಗಳಂತೆ ಕಚ್ಚಾಡಲು ಶುರುಮಾಡಿ, ಸರ್ಕಾರದ ಮರ್ಯಾದೆಯನ್ನು ಮೂರಾಬಟ್ಟೆ ಮಾಡಿದ್ದರು.
ಆಗಲೇ ಶುರುವಾಗಿದ್ದು ತಮಿಳುನಾಡಿನ ತರಲೆ. ಕಾವೇರಿ ನೀರನ್ನು ಕರ್ನಾಟಕ ಬಿಡುತ್ತಿಲ್ಲ ಅಂತ ಸುಪ್ರೀಂ ಕೋರ್ಟ್ ಮೆಟ್ಟಲು ಹತ್ತಿದ್ದರು. ಏನೇ ಆದರೂ, ರಾಜ್ಯ ಸಂಕಷ್ಟದಲ್ಲಿದ್ದಾಗ ಕಾವೇರಿ ನೀರು ಬಿಡುವುದಿಲ್ಲ ಅಂತ ಕೃಷ್ಣರವರು, ಬೆಂಗಳೂರಿನಿಂದ ಕೆ.ಆರ್. ಸಾಗರದವರೆಗೆ  ಪಾದಯಾತ್ರೆ ಹೊರಡುತ್ತೇವೆ ಅಂತ ಘೋಷಿಸಿದರು.
ಅವರು ಹೊರಟ ತಕ್ಷಣವೇ, ದೇವೇಗೌಡರು ಅವರಿಗೆ `ವಿನೂತನ ಮಣ್ಣಿನ ಮಗಅಂತ ಬಿರುದು ದಯಪಾಲಿಸಿದರು. ಅವರ ಪಕ್ಷದವರೇ ಆದ ಮಂಡ್ಯದ ಜಿ.ಮಾದೇಗೌಡರು ಪಾದಯಾತ್ರೆಯ ವಿರದ್ದ ಧರಣಿ ಶುರುಮಾಡಿದರು. ಕೊನೆಗೂ ಮಾತುಕತೆಗಳಾಗಿ, ಮಂಡ್ಯದವರೆಗೆ ಪಾದಯಾತ್ರೆ ಮಾಡುವುದು ಅಂತ ನಿಶ್ಚಯವಾಯಿತು.
ಎಲ್ಲಾ ಪತ್ರಿಕೆಗಳಿಂದ ಹೊರಟಂತೆ, ನಮ್ಮ ಪತ್ರಿಕೆಯಿಂದ ನಾನೂ ಪಾದಯಾತ್ರೆಯಲ್ಲಿ ಕಾಲು ಹಾಕಿದೆ. ಹಾಗೇ, ಕನ್ನಡ ಪ್ರಭದಿಂದ ಭರತ್ ಬಂದಿದ್ದ. ಒಂಬತ್ತು ದಿನ ನೆಡೆದ ಮೇಲೆ, ಕೃಷ್ಣರವರು ಮಂಡ್ಯದ ಹೊರಭಾಗದಲ್ಲಿ, ಹೋಟೆಲ್ ಒಂದರಲ್ಲಿ ತಂಗಿದ್ದರು. ನಾನು ಮತ್ತು ಭರತ, ಮಂಡ್ಯದ ಹೋಟೆಲ್ ಒಂದರಲ್ಲಿ ರೂಮು ಮಾಡಿಕೊಂಡು ಉಳಿದಿದ್ದೆವು. ಮಾರನೇ ದಿನದ ಪಾದಯಾತ್ರೆ ಮುಗಿದ ನಂತರ, ಒಂದು ಸಾರ್ವಜನಿಕ ಸಭೆಯೊಂದಿಗೆ ನಮ್ಮ ಪಾದಯಾತ್ರೆ ಮುಕ್ತಾಯವಾಗುತ್ತಿತ್ತು.
ರಾತ್ರಿ ಊಟಕ್ಕೆ ಅಂತ ಹೋಟೆಲ್ ಒಂದರಲ್ಲಿ ಕೂತ ತಕ್ಷಣವೇ ಭರತನಿಗೆ ಇಂಟರ್ ವ್ಯೂ ವಿಷಯ ತಲೆಗೆ ಬಂದಿದ್ದು. ಯಥಾ ಪ್ರಕಾರ,ನಾನು ಅವನ ಮೇಲೆ ರೇಗಿದ್ದೆ.
`ಅಲ್ಲ ಕಣ್ಲೆನಾ ಹೇಳೋದ್ ಸ್ವಲ್ಪ ಕೇಳು. ನಮ್ಮ ಇಂಟರ್ ವ್ಯೂ, ಛೀಫ್ ಮಿನಿಸ್ಟರ್ ಕೃಷ್ಣನನ್ನು ಅಲ್ಲ. ಸೋಮನಹಳ್ಳಿಯ ಕೃಷ್ಣನನ್ನು…’ ಅಂತ ಹೇಳ್ದ.
`ಅಲ್ವೋ, ಮುಖ್ಯಮಂತ್ರಿಯಾದಮೇಲೆ ಸೋಮನಹಳ್ಳಿ ಕೃಷ್ಣ ಅನ್ನೋ ಐಡೆಂಟಿಟಿನೇ ಉಳಿಯೋದಿಲ್ವಲ್ಲೋ,’ ಅಂದೆ.
`ಅದನ್ನೇ ನಾನು ಹೇಳ್ತಿರೋದು. ನಾವು ಆ ಐಡೆಂಟಿಟಿನ ಮತ್ತೆ ಸೃಷ್ಟಿ ಮಾಡ್ಬೇಕು. ನಾವು ಮಖ್ಯಮಂತ್ರಿಯನ್ನು ಮಾತಾಡ್ಸಲೇ ಬಾರದು. ಬರೀ ಕೃಷ್ಣನನ್ನು ಮಾತ್ರ ಮಾತಾಡ್ಸಬೇಕು,’ ಅಂದ.
ಯಾಕೋ ವಿಷಯ ಕಾಂಪ್ಲಿಕೇಟ್ ಮಾಡ್ತಿದ್ದಾನೆ ಅನ್ನಿಸ್ತು. `ಸರಿಯಪ್ಪ, ಸೋಮನಹಳ್ಳಿ ಕೃಷ್ಣನ್ನೇ ಇಂಟರ್ ವ್ಯೂ ಮಾಡೋಣ. ಏನಂತ ಕೇಳ್ತೀಯಾ?’ ಅಂದೆ.
ಅಲ್ಲಿವರೆಗೆ ಸ್ವಲ್ಪ ಸಪ್ಪೆಯಾಗಿದ್ದ ಭರತ ಒಮ್ಮೆಲೆ ಉತ್ಸಾಹಗೊಂಡ. `ನೋಡ್ಲೆಕೃಷ್ಣ, ತಮ್ಮ ಜೀವನದಲ್ಲಿ ಎಷ್ಟೊ ಸಲ ಮಂಡ್ಯಕ್ಕೆ ಬಂದಿದ್ದಾರೆ. ಕಾರಲ್ಲಿ, ಬಸ್ಸಲ್ಲಿ, ಟ್ರೈನ್ ನಲ್ಲಿ ಮತ್ತೆ ಹೆಲಿಕಾಪ್ಟರ್ನಲ್ಲಿ ಕೂಡ. ಇದೇ ಮೊದಲ ಸಲ ನೆಡ್ಕೊಂಡು ಬರ್ತಿದ್ದಾರೆ. ಅವರಿಗೆ ದಾರಿಯಲ್ಲಿ ಏನನ್ನಿಸಿತು?’ ಅವರ ಜೀವನದಲ್ಲಿ, ಅದೂ ಈ ವಯಸ್ಸಿನಲ್ಲಿ ನೆಡೆಯುವಾಗ, ಅವರಿಗೆ ಬಂದ ಬಾಲ್ಯದ ನೆನಪುಗಳೇನು?.....’ ಅಂತ ಭರತ್ ಹೇಳ್ತಾನೇ ಇದ್ದ.
ಅಲ್ಲಿವರೆಗೆ ಒರಗಿ ಕುಳಿತು ಬಿಯರ್ ಕುಡಿಯುತ್ತಿದ್ದ ನಾನು, ನೆಟ್ಟಗೆ ಕೂತು ಕೇಳೋಕೆ ಶುರು ಮಾಡ್ದೆ. ಭರತ್ ಇನ್ನೂ ಮಾತಾಡ್ತಾ ಇದ್ದ ಹಾಗೇನೆ, ನನ್ನ ಮೊಬೈಲ್ ಫೋನ್ ಎತ್ತಿಕೊಂಡು, ದಿನೇಶ್ ನಂಬರ್ ಡಯಲ್ ಮಾಡಿ, ಹಾಗೇ ಎದ್ದು ಹೋದೆ.
`ಡೌಟು ವಿನಯ್ಸಾಹೇಬ್ರಿಗೆ ವಯಸ್ಸಾಗಿದೆ ನೋಡಿ. ನೆಡೆದೂ ನೆಡೆದೂ ಸುಸ್ತಾಗಿ ಹೋಗಿರ್ತಾರೆ. ಅದೂ ಅಲ್ದೆ, ಎಲ್ಲರಿಗೂ ಇಂಟರ್ ವ್ಯೂ ಕೊಟ್ಟೂ ಕೊಟ್ಟೂ ಸಾಕಾಗಿ ಹೋಗಿದೆ. ಅವ್ರು ಮಾತಾಡಲ್ಲ ಅನ್ಸುತ್ತೆ,’ ಅಂದ್ರು ದಿನೇಶ್.
`ನೋಡ್ರಿಇಷ್ಟು ದಿನದಲ್ಲಿ ಏನೂ ಕೇಳಿಲ್ಲ. ಇಂಟರ್ ವ್ಯೂ ಕೇಳ್ತಿದ್ದೀನಿ ಅಂದ್ರೆ, ಅದು ಡಿಫರೆಂಟ್ ಆಗಿರುತ್ತೆ. ಸಾಹೇಬ್ರು ಮಾತಾಡ್ತಾರೋ, ಇಲ್ವೋ ಅನ್ನೋದು ಆಮೇಲೆ ನೋಡೋಣ. ಬೆಳಗ್ಗೆ ಏಳುವರೆಗೆ ಬರ್ತೀನಿ, ಅಷ್ಟೆ,’ ಅಂತ ಹೇಳಿ ಫೋನ್ ಕಟ್ ಮಾಡಿದೆ.
ದಿನೇಶ್ ಗೇನೂ ಇದು ಹೊಸದಲ್ಲ. ಸಲಿಗೆ ಇದ್ದಿದ್ದರಿಂದ, ನಾನು ಒರೊಟೊರಟಾಗಿ ಹೇಳಿದ್ರೂ ಬೇಜಾರು ಮಾಡ್ಕೋತ್ತಿರಲಿಲ್ಲ. ಹಾಗೇಂತ, ನಾನ್ಯಾವತ್ತೂ ಅವರನ್ನು ಇಕ್ಕಟ್ಟಿಗೆ ಸಿಕ್ಕಿಸಿರಲಿಲ್ಲ.
`ನಾಳೆ ಬೆಳಗ್ಗೆ ಏಳೂವರೆಗೆ ಇಂಟರ್ ವ್ಯೂ ಕಣೋ,’ ಅಂತ ಹೇಳಿದ ತಕ್ಷಣ ಭರತನ ಮುಖ ಅರಳಿತು. ಇನ್ನೇನೋ ಹೇಳೋಕೆ ಅಂತ ಹೋದಾಗ, ನಾನೇ ಅಡ್ಡ ಹಾಕೆ ಹೇಳ್ದೆ: `ಏನು ಕೇಳ್ಬೇಕೂಂತ ಇದ್ದೀಯೋ, ಅದನ್ನ ಕೃಷ್ಣನ ಹತ್ತಿರ ಕೇಳು. ನನ್ನ ತಲೆ ತಿನ್ಬೇಡ,’ ಅಂತ.
ಮಾರನೇ ದಿನ ಬೆಳಗ್ಗೆ ಏಳೂವರೆ ಹೊತ್ತಿಗೆ ನಾವು ಕೃಷ್ಣ ತಂಗಿದ್ದ ಹೋಟೆಲ್ ಹೊರಗೆ ನಿಂತಿದ್ದೆವು. ಸೆಕ್ಯುರಿಟಿ ತಪ್ಪಿಸಿಕೊಳ್ಳೋಕೆ ಆಗ್ದೆ, ದಿನೇಶ್ ನನ್ನೇ ಹೋಟೆಲ್ ನಿಂದ ಹೊರಗೆ ಕರೆದು, ಮತ್ತೆ ಒಳಗೆ ಹೋದೆವು. ಕೃಷ್ಣರವರು ಉಳಿದುಕೊಂಡಿದ್ದ ರೂಮಿಗೆ ಕರೆದುಕೊಂಡು ಹೋದ ದಿನೇಶ್, ನಮ್ಮಿಬ್ಬರನ್ನು ಬಿಟ್ಟು ಸುಮ್ಮನೆ ನಿಂತರು.
ಕೃಷ್ಣರವರಿಗೆ ಇಂಟರ್ ವ್ಯೂ ಬಗ್ಗೆ ಏನೂ ಗೊತ್ತಿದ್ದಂತೆ ಕಾಣಲಿಲ್ಲ. ಕುರ್ಚಿಯಲ್ಲಿ ಕೂತು, ಕಾಲು ಮಸಾಜ್ ಮಾಡಿಸಿಕೊಳ್ಳುತ್ತಾ ಕೂತಿದ್ದರು. ನಮ್ಮನ್ನು ನೋಡಿ ನಕ್ಕರಷ್ಟೆ, ಮಾತಾಡಲು ಅಂಥಾ ಆಸಕ್ತಿ ತೋರಿಸಲಿಲ್ಲ.
`ಕಾಲು ನೋವೇನಾದ್ರೂ ಇದೆಯಾ ಸರ್?’ ಅಂತ ಕೇಳ್ದೆ.
`ಹಾಂಸ್ವಲ್ಪ. ಏಜ್ ಫ್ಯಾಕ್ಟರ್ ನೋಡಿ, ಒತ್ತಿಸಿಕೊಳ್ಳಬೇಕಾಗುತ್ತೆ,’ ಅಂತ ನಿರಾಸಕ್ತಿಯಿಂದ ಅಂದ್ರು. `ಯಾಕೋ ಕೈ ಕೊಡ್ತಿದೆ,’ ಅನ್ಕೊಂಡೆ.
ಒಂದು ಸೆಕೆಂಡ್ ತಡೆದು, ನಾನೇ ಭರತನ ಪ್ರಶ್ನೆ ಕದ್ದು, ಕೃಷ್ಣರಿಗೆ ಕೇಳಿದೆ: ` ಸರ್, ಜೀವನದಲ್ಲಿ ಲೆಖ್ಖವಿಲ್ಲದಷ್ಟು ಸಲ ಮಂಡ್ಯಕ್ಕೆ ಬಂದಿದ್ದೀರಿ. ಕಾರಲ್ಲಿ, ಬಸ್ಸಲ್ಲಿ, ಟ್ರೈನ್ ನಲ್ಲಿ ಮತ್ತೆ ಹೆಲಿಕಾಪ್ಟರ್ನಲ್ಲಿ ಕೂಡ. ಇದೇ ಮೊದಲ ಸಲ ನೆಡ್ಕೊಂಡು ಬರ್ತಿದ್ದೀರಿ. ನಿಮಗೆ ದಾರಿಯಲ್ಲಿ ಏನನ್ನಿಸಿತು?’
ಅಲ್ಲಿವರೆಗೆ ಅನ್ಯಮನಸ್ಕರಾಗಿ ಕೂತಿದ್ದ ಕೃಷ್ಣ ಒಂದೇ ಸಲ ನೆಟ್ಟಗೆ ಕುಳಿತರು. ಅವರ ಮುಖದಲ್ಲಿ ಏನೋ ಒಂದು ಥರದ ಮುಗುಳ್ನಗೆ ಮೂಡಿತು. ಧೀರ್ಘವಾಗಿ ಉಸಿರೆಳೆದುಕೊಂಡು, ಏನೋ ಯೋಚನೆ ಮಾಡಿಕೊಂಡು, ನಿಧಾನವಾಗಿ ಹೇಳಿದರು: `ಇದು ಮೊದಲನೇ ಸಲ ಅಲ್ಲ. ಬೆಂಗಳೂರಿಂದ, ಮಂಡ್ಯಕ್ಕೆ ಮೊದಲ ಸಲ. ಆದ್ರೆ, ಒಂದ್ಸಲ ಮಂಡ್ಯದಿಂದ ಸೋಮನಹಳ್ಳಿಗೆ ನೆಡೆದಿದ್ದೆ. ಆಗಿನ್ನೂ ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದೆ. ಯಾವುದೋ ಮುಷ್ಕರವಾಗಿ, ರೈಲು ಮತ್ತು ಬಸ್ ಗಳು ಎರಡನ್ನೂ ನಿಲ್ಲಿಸಿದ್ದರು….,’ ಅಂತ ಗತಕಾಲಕ್ಕೆ ತೆರಳಿದರು.
ಅಲ್ಲಿಂದ ಮುಂದೆ, ಭರತ ಮತ್ತು ಕೃಷ್ಣರವರ ಸಂಭಾಷಣೆಯಾದರೆ, ನಾನು ಮೂಕ ಪ್ರೇಕ್ಷಕನಾಗಿ ಕೂತಿದ್ದೆ. ಕೆಲವು ಸಲ, ಕೃಷ್ಣರ ಸಹೋದರನಾದ ಎಸ್.ಎಂ.ಶಂಕರ್ ಕೆಲವು ವಿಷಯಗಳನ್ನು ನೆನಪಿಸುತ್ತಿದ್ದರು. ಇಂಟರ್ ವ್ಯೂ ಮುಗಿದಾಗ, ಕೃಷ್ಣರವರೇ ಹೇಳಿದ್ರು: `ಈ ಸಂಭಾಷಣೆ ತುಂಬಾ ಚೆನ್ನಾಗಿತ್ತು,’ ಅಂತ. ಹೊರಗಡೆ ಬರುವಾಗ ದಿನೇಶ್ ಮೆಲ್ಲನೆ ನನ್ನ ಕಿವಿಯಲ್ಲಿ ಹೇಳಿದ್ರು: `ಎಲ್ಲರೂ ರಾಜಕೀಯದ ಬಗ್ಗೆ ಕೇಳಿದ ಪ್ರಶ್ನೆಯನ್ನೇ ಕೇಳಿ, ಸಾಹೇಬರಿಗೆ ತಲೆ ಕೆಟ್ಟು ಹೋಗಿತ್ತು. ನಿಮ್ಮ ಪ್ರಶ್ನೆಗಳು ತುಂಬಾ ಚೆನ್ನಾಗಿದ್ದವು,’ ಅಂದರು.
ನಾನೂ ಮತ್ತು ಭರತ ಆಟೋ ಹತ್ತಿ ಸೀದ ಮಂಡ್ಯಕ್ಕೆ ಬಂದೆವು. ಇಂಟರ್ ನೆಟ್ ಪಾರ್ಲರ್ ಗೆ ಹೋದವರೇ, ಇಂಟರ್ ವ್ಯೂ ಬರೆಯಲು ಶುರುಮಾಡಿದೆವು. ಅಂದಿನ ಪಾದಯಾತ್ರೆಯಲ್ಲಿ ನೆಡೆಯುವುದು ನಮಗೆ ಅರ್ಥಹೀನವಾಗಿತ್ತು. ಇಂಟರ್ ವ್ಯೂ ಬರೆದು ಆಫೀಸಿಗೆ ಕಳುಹಿಸಿದವನೇ, ನಮ್ಮ ಸಂಪಾದಕರಾಗಿದ್ದ ಶಂತನು ದತ್ತರಿಗೆ ಫೋನ್ ಮಾಡಿ, `ಸರ್, ಕೃಷ್ಣರವರನ್ನು ಮಾತಾಡಿಸಿದ್ದೆ. ಅದನ್ನ ಇಂಟರ್ ವ್ಯೂ ಥರ ಬರೆದು ಕಳುಹಿಸಿದ್ದೇನೆ. ಸ್ವಲ್ಪ ನೋಡಿ,’ ಅಂದೆ.
`ಅವರ ಇಂಟರ್ ವ್ಯೂ ಆಗಲೇ ಅಚ್ಚಾಗಿದೆ. ನೋಡೋಣ,’ ಅಂದ್ರು. ಅಷ್ಟರೊಳಗೆ, ಭರತ ಕೂಡ ಇಂಟರ್ ವ್ಯೂ ಬರೆದು ಮುಗಿಸಿ ಬಂದ. ಇಬ್ಬರೂ ಕೃಷ್ಣರ ಪಾದಯಾತ್ರೆ ಮಂಡ್ಯ ತಲುಪುವುದನ್ನು ಕಾಯುತ್ತಾ ಕೂತೆವು.  ಒಂದು ಘಂಟೆಯೊಳಗೆ ಆಫೀಸಿನಿಂದ ಫೋನ್ ಮಾಡಿದ ದತ್ತ ಅವರು, `ವಿನಯ್, ಇಂಟರ್ ವ್ಯೂ ತುಂಬಾ ಇಂಟರೆಸ್ಟಿಂಗ್ ಆಗಿದೆ. ನಾಳೆಗೆ ತಗೊಳ್ತೀನಿ,’ ಅಂದ್ರು.
ಸಾಯಂಕಾಲದ ಸಾರ್ವಜನಿಕ ಸಭೆ ಮುಗಿಸಿದ ನಾನು ಮತ್ತುಭರತ, ಇಂಟರ್ ನೆಟ್ ಪಾರ್ಲರ್ಗೆ ಹೋಗಿ, ಸಣ್ಣ ಸುದ್ದಿಗಳನ್ನು ಬರೆದು ಕಳುಹಿಸಿದೆವು. ಹಾಗೇ, ಸಿಕ್ಕಿದ ಕಾರೊಂದನ್ನು ಹತ್ತಿ, ಬೆಂಗಳೂರು ತಲುಪಿದೆವು.
ಮನೆ ತಲುಪಿ, ಸ್ನಾನ ಮಾಡಿ ಮುಗಿಸುವ ಹೊತ್ತಿಗೆ ಭರತ ಫೋನ್ ಮಾಡಿ, `ಸುದ್ದಿ ಗೊತ್ತಾಯ್ತಾ?’ ಅಂದ.
`ಏನೋ?’ ಅಂತ ಕೇಳ್ದೆ.
`ಸುಪ್ರೀಂ ಕೋರ್ಟ್ ತೀರ್ಪು ನಾಳೆ ಇದೆ. ಕೋರ್ಟ್ ಹಿಗ್ಗಾ  ಮುಗ್ಗ ಜಾಡಿಸುತ್ತೆ ಅಂತ ರಾಜ್ಯದ ಲಾಯರ್ ಗಳು ಹೇಳಿದ್ರಂತೆ. ಅದಕ್ಕೆ ಕಾವೇರಿಯಿಂದ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ,’  ಅಂದ.
ಒಂದು ನಿಮಿಷ ಏನು ಹೇಳ್ಬೇಕು ಅಂತ ಗೊತ್ತಾಗಲಿಲ್ಲ. `ಥುತ್ತೇರಿಇದೂ ಎಡವಟ್ಟಾಯ್ತಾ ಕೃಷ್ಣನಿಗೆ. ಆ ಮನುಷ್ಯನ ಹಣೆಬರಹನೇ ಸರಿ ಇಲ್ಲ,’ ಅಂದೆ.
`ಏನಪ್ಪಾನಾವು ಇಂಟರ್ ವ್ಯೂ ಮಾಡಿದ ದಿನಾನೇ ಹೀಗಾಗ್ಬೇಕಾ?’ ಅಂದ.
`ಸಾಯಲಿ ಬಿಡು,’ ಅಂತ ಫೋನ್ ಇಟ್ಟೆ.
ಮಾರನೇ ದಿನ, ಕನ್ನಡ ಪ್ರಭದಲ್ಲಿ ಇಂಟರ್ ವ್ಯೂ ಮುಖಪುಟದಲ್ಲೇ ಬಂದಿತ್ತು. ನಮ್ಮ ಪತ್ರಿಕೆಯಲ್ಲಿ ಮಾತ್ರ, ಎರಡನೇ ಪುಟದಲ್ಲಿ ಹುಗಿದು ಕೂತಿತ್ತು. ಎರಡು ದಿನ ಬಿಟ್ಟು ವಿಧಾನಸೌಧದಲ್ಲಿ ದಿನೇಶ್ ಕೊಠಡಿಗೆ ಹೋಗಿದ್ದೆ. ಅಲ್ಲಿ ನಮ್ಮ ಪತ್ರಿಕೆಯಲ್ಲಿ ಅಚ್ಚಾಗಿದ್ದ ಇಂಟರ್ ವ್ಯೂ ಕತ್ತರಿಸಿ ಇಟ್ಟಿದ್ದರು.
`ಅಲ್ರೀ, ಇಷ್ಟು ಒಳ್ಳೆ ಇಂಟರ್ ವ್ಯೂ ಎರಡನೇ ಪುಟದಲ್ಲಿ ಹಾಕಿದ್ದಾರಲ್ರಿ. ಎಲ್ಲಿ ಬಂದಿದೇ ಅಂತ ಹುಡುಕಬೇಕಾಯ್ತು, ಅಂದ್ರು.
`ಅದು ಬಿಡಿ, ಕಾವೇರಿ ನೀರಲ್ಲಿ ಕೊಚ್ಕೊಂಡು ಹೋಯ್ತು,’ ಅಂತ ನಕ್ಕೆ


ಮಾಕೋನಹಳ್ಳಿ ವಿನಯ್ ಮಾಧವ

ಶನಿವಾರ, ಜುಲೈ 7, 2012

ಮಲ್ಯ


ಕಾರ್ಪೊರೇಟ್ ಪಾಲಿಟಿಕ್ಸ್

ಹೆಚ್ಚು ಕಡಿಮೆ ಮೂರು ಘಂಟೆಗಳಾಗಿದ್ದವು, ಸದಾಶಿವ ನಗರದ ಫುಟ್ ಪಾತ್ ಮೇಲೆ ಅಬ್ಬೇಪಾರಿ ಥರ ಕೂತು. ತಲೆ ಚಿಟ್ಟು ಹಿಡಿದು ಹೋಗಿತ್ತು. ಆಗ ಟೆಲಿವಿಷನ್ ಹಾವಳಿ ಇಷ್ಟೇನೂ ಇರಲಿಲ್ಲ. ಬೇರೆ ಪತ್ರಿಕೆಯವರೂ ಬಂದಿರಲಿಲ್ಲ.
ನಾ ಕೂತಿದ್ದದು, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಮನೆ ಮುಂದೆ. ಸಂಯುಕ್ತ ಜನತಾ ದಳದ ಮುಖಂಡರುಗಳೆಲ್ಲಾ ದಂಡು ಕಟ್ಟಿಕೊಂಡು ಬಂದಿದ್ದಾರೆ ಅಂತ ಸುದ್ದಿ ಬಂದಿತ್ತು. ನೆಟ್ಟಗೆ ಹೆಗಡೆಯವರ ಮನೆ ಮುಂದೆ ಬಂದು ಕಾಯೋಕೆ ಶುರು ಮಾಡಿದೆ.
ನಾನು ಪತ್ರಕರ್ತನಾದ ಮೇಲೆ, ಇದು ಎರಡನೇ ಚುನಾವಣೆಯಾಗಿತ್ತು. 1999 ರಲ್ಲಿ, ಆಫೀಸಿನಲ್ಲಿ ನಾನೇ ಜೂನಿಯರ್. ಹಾಗಾಗಿ, ಎಲೆಕ್ಷನ್ ವಿಷಯ ಅಷ್ಟೇನೂ ತಲೆ ಕೆಡಿಸಿಕೊಂಡಿರಲಿಲ್ಲ. ಅದಾದ ಮೇಲೆ, ಶಂಕರಪ್ಪ ರಿಟೈರ್ ಆದರು. ಗೋವಿಂದ ರಾಜು, ನಚ್ಚಿ, ಭಾನುತೇಜ್, ಮಧು ಮತ್ತು ಕೆ.ಎನ್.ರೆಡ್ಡಿ ಬಿಟ್ಟು ಹೋದ ಮೇಲೆ, ನನಗೆ ಸೀನಿಯರ್ ಪಟ್ಟ ಬೇರೆ ಸಿಕ್ಕಿತ್ತು. ಅವರೆಲ್ಲ ಇದ್ದಾಗ, ಯಾವುದಕ್ಕೆ ಹೋಗಬೇಕು, ಯಾವುದನ್ನು ಫೋನಲ್ಲೇ ತಗೋಬಹುದು ಅಂತ ಹೇಳಿಕೊಡ್ತಿದ್ದರು. ಈಗ, ನಾನೇ ಎಲ್ಲಾದನ್ನೂ ನಿರ್ಧರಿಸಬೇಕಿತ್ತು.
ಕೊನೆಗೂ ಮನೆ ಬಾಗಿಲು ತೆಗೆದುಕೊಂಡಿತು. ಪಿ.ಜಿ.ಆರ್. ಸಿಂಧ್ಯಾ, ಮಹದೇವ ಪ್ರಸಾದ್, ಡಾ ಮಹದೇವಪ್ಪ, ಬಚ್ಚೇಗೌಡ… ಹೀಗೇ ಒಬ್ಬರ ಹಿಂದೊಬ್ಬರು ಬಂದರು. ಎಲ್ಲರ ಮುಖ ಕುಂಬಳಕಾಯಿಯಂತೆ ದಪ್ಪಗಾಗಿತ್ತು. ಇದ್ದಿದ್ದರಲ್ಲಿ ಮಹದೇವ ಪ್ರಸಾದ್ ಮುಖವೇ ಪರವಾಗಿರಲಿಲ್ಲ.
ಯಾರನ್ನಾದರೂ ಮಾತಾಡ್ಸೋಣ ಅಂತ ಮುಂದೆ ಹೋದೆ. ಎಲ್ಲರೂ ಕಾರುಗಳನ್ನು ಹತ್ತಿಕೊಂಡು ಮುಂದೆ ಹೋದ್ರು. ಸರಿ, ಹೆಗಡೆಯವರನ್ನು ಮಾತಾಡ್ಸೋಣ ಅಂತ ಮನೆ ಗೇಟ್ ಗೆ ಹೋದರೆ, ವಾಚ್ ಮನ್ ಆಗಲೇ ಒಳಗಿನಿಂದ ಚಿಲುಕ ಹಾಕಿ, `ಸಾಹೇಬರು ಸುಸ್ತಾಗಿದ್ದಾರೆ, ನಾಳೆ ಬನ್ನಿ’ ಅಂದ.
`ಥೂತ್ತೆರಿ, ಇನ್ನೇನು ಮಾಡೋದೀಗ?’ ಅಂತ ಯೋಚನೆ ಮಾಡ್ತಾ ಇದ್ದಾಗಲೇ ಆಫೀಸಿನಿಂದ ಫೋನ್ ಬಂದು, ಕಾಂಗ್ರೆಸ್ ಆಫೀಸಿನಲ್ಲಿ ಪ್ರೆಸ್ ಕಾನ್ಫರೆನ್ಸ್ ಇದೆ, ಅಲ್ಲಿಗೆ ಹೋಗಬೇಕು ಅಂತ ಮಾಹಿತಿ ಸಿಕ್ತು. ಕಾಂಗ್ರೆಸ್ ಆಫೀಸಿಗೆ ಹೋಗಿ, ಅಲ್ಲಿಂದ ಆಫೀಸಿಗೆ ಬಂದ ಮೇಲೂ, ಹೆಗಡೆಯವರ ಮನೆಯಲ್ಲಿ ಏನು ನೆಡೀತು ಅನ್ನೋದು ತಲೆಯಲ್ಲಿ ಕೊರೀತಾ ಇತ್ತು.
ಆಗಿದ್ದಿಷ್ಟೆ. 1999ರ ಚುನಾವಣೆಯಲ್ಲಿ, ಬಿ.ಜೆ.ಪಿಯ ಸಖ್ಯ ಮಾಡಿದ್ದ ಜೆಡಿ(ಯು), ಈ ಸಲ ಅದು ಬೇಡ ಅಂತ ನಿರ್ಧರಿಸಿತ್ತು. ಆದರೆ, ರಾಷ್ಟ್ರಮಟ್ಟದಲ್ಲಿ ಅವರ ಸಖ್ಯ ಮುಂದುವರೆದಿತ್ತು. ಇಲ್ಲಿನ ಜೆಡಿ(ಯು) ನಾಯಕರು, ಮುಂದೇನು ಮಾಡಬೇಕು ಅಂತ ಕೇಳೋಕೆ ಹೆಗಡೆಯವರ ಮನೆಗೆ ಹೋಗಿದ್ದರು. ಅನಾರೋಗ್ಯದ ಕಾರಣ, ಹೆಗಡೆಯವರು ಮನೆ ಬಿಟ್ಟು ಹೊರಗೆ ಬರುತ್ತಿರಲಿಲ್ಲ. ವಯಸ್ಸಾದ ಕಾರಣ, ಅವರಿಗೆ ಮರೆವೂ ಶುರುವಾಗಿದೆ ಅಂತ ಜನ ಮಾತಾಡ್ಕೋತ್ತಿದ್ರು.
ಸಾಯಂಕಾಲ ಬೆಲಗೂರು ಸಮೀಉಲ್ಲಾ ಸಿಕ್ಕಿದ್ರು. `ಅಲ್ರಿ, ಹೆಗಡೆ ಮನೇಲಿ ಏನೋ ಮೀಟಿಂಗ್ ನೆಡೆದಿದೆ. ಅದೇನು ಅಂತಾ ಗೊತ್ತಾಗ್ತಾ ಇಲ್ಲ. ಜೆಡಿ (ಯು) ಲೀಡರ್ಸ್ ಎಲ್ಲಾ ಹೋಗಿದ್ರು ಕಣ್ರಿ. ಯಾರೂ ಮಾತಾಡ್ಲಿಲ್ಲ,’ ಅಂದೆ.
`ಓ ಅದಾ? ಇವ್ರೆಲ್ಲಾ ಹೋಗಿ, ಮುಂದೆ ಏನು ಮಾಡ್ಬೇಕೂ ಅಂತ ಕೇಳಿದ್ರಂತೆ. ಮೊದಲೊಂದೈದು ನಿಮಿಷ ಸರಿಯಾಗೇ ಮಾತಾಡಿದ ಹೆಗಡೆಯವರು, ಆಮೇಲೆ ನೀವೆಲ್ಲಾ ಹೋಗಿ ವಿಜಯ್ ಜೊತೆ ಸೇರ್ಕೊಳ್ಳಿ. ಅವನ `ಯುವ ಶಕ್ತಿ, ರೈತ ಶಕ್ತಿ’ ಒಳ್ಳೇ ಸ್ಲೋಗನ್. ಗೆಲ್ತೀರಾ ಅಂದ್ರಂತೆ. ವಯಸ್ಸಾಗಿದೆ ನೋಡಿ, ಅವ್ರಿಗೆ ವಿಪರೀತ ಮರೆವು. ಹೇಳಿದ್ದನ್ನೇ ಮೂರು ಘಂಟೆ ಹೇಳಿದ್ರಂತೆ. ಎಲ್ಲರಗೂ ತಲೆನೋವು ಬಂದು, ಹೊರಗೆ ಬಂದ್ರಂತೆ,’ ಅಂದರು.
`ಯಾವ ವಿಜಯ್?’ ಅಂದೆ.
`ವಿಜಯ್ ಮಲ್ಯರೀ. ಎಲ್ಲರೂ ಹೋಗಿ ಜನತಾ ಪಕ್ಷ ಸೇರ್ಕೊಳ್ಳಿ ಅಂದ್ರಂತೆ,’ ಅಂತ ನಗಾಡೋಕೆ ಶುರು ಮಾಡಿದ್ರು. ನಾನೂ ನಗೋಕೆ ಶುರು ಮಾಡ್ದೆ. `ಅಲ್ರಿ, ಈ ಮಲ್ಯಂಗೇನು ಬಂತು? ರಾಜ್ಯ ಸಭಾ ಮೆಂಬರ್ ಆಗಿದ್ದಾನೆ. ಅವನ ಬ್ಯುಸಿನೆಸ್ ನೋಡ್ಕೊಂಡು ಇರೋದು ಬಿಟ್ಟು, ರಾಜಕಾರಣ ಮಾಡೋಕ್ಕಾಗುತ್ತಾ?’ ಅಂದೆ.
`ಅಲ್ಲಿಂದ್ಲೇ ಶುರುವಾಗಿದ್ದಂತೆ ಕಣ್ರಿ ಈ ಹುಚ್ಚು. ಅದಕ್ಕೆ ಹೆಗಡೆ ಹಿಡ್ಕೊಂಡು, ಸುಬ್ರಮಣ್ಯ ಸ್ವಾಮಿ ಜೊತೆ ಸೇರ್ಕೊಂಡು, ಜನತಾ ಪಕ್ಷನ ಮತ್ತೆ ಕಟ್ತೀನಿ ಅಂತ ಹೊರಟಿದ್ದಾನೆ. ಯಾರ್ಯಾರು ಅವನ ದುಡ್ಡು ತಿನ್ನೋಕೆ ಕಾಯ್ತಿದ್ದಾರೆ ಅಂತ ನೋಡ್ಬೇಕು,’ ಅಂದ್ರು.
`ಅಲ್ರಿ… ಆ ಹೆಗಡೆಗೆ ಹುಶಾರಿಲ್ಲ ಅಂತ ಗೊತ್ತಿದ್ದು ಇವರೆಲ್ಲ ಯಾಕ್ರಿ ಹೋಗ್ಬೇಕು?’ ಅಂದೆ.
`ಅದು ಹಾಗಲ್ಲ ಕಣ್ರಿ. ಹೋದವರೆಲ್ಲ ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷದಿಂದ ನಿಲ್ಲಬೇಕು ಅನ್ನೋದು ಡಿಸೈಡ್ ಮಾಡಿಕೊಂಡಿದ್ದಾರೆ. ಏನಂದ್ರೆ, ಹೆಗಡೆಯವರ ಹೆಸರು ಕೆಲವು ಕಡೆ ನೆಡೆಯುತ್ತೆ. ಅಲ್ಲೆಲ್ಲಾ ಹೋಗಿ ನಾವು ಹೆಗಡೆಯನ್ನು ಕೇಳಿ ಈ ಪಕ್ಷದಿಂದ ನಿಂತಿದ್ದೀವಿ ಅಂತ ಹೇಳೋಕೆ, ಅಷ್ಟೆ. ಹೆಗಡೆ ಮಾತು ಕೇಳ್ಕೊಂಡು ಮಲ್ಯನ ಜೊತೆ ಹೋಗುವಷ್ಟು ದಡ್ಡರ್ಯಾರೂ ಇಲ್ಲ ಬಿಡಿ,’ ಅಂದ್ರು ಸಮೀಉಲ್ಲಾ.
ಈ ವಿಜಯ್ ಮಲ್ಯನ ಮೊದಲು ನೋಡಿದ್ದು ಅವರು ರಾಜ್ಯ ಸಭೆ ಚುನಾವಣೆಗೆ ನಿಂತಾಗ. ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರು ಸಂಬಂಧಿಯಾದ್ದರಿಂದ ಸಹಾಯ ಮಾಡ್ತಾರೆ ಅನ್ನೋ ಹಮ್ಮಿನಲ್ಲಿ ನಿಂತು ಸೋತಿದ್ದರು.  ಎರಡನೇ ಸಲ ನಿಂತಾಗ, ಕೃಷ್ಣರವರು ಕಾಂಗ್ರೆಸ್ ನಿಂದ ಸಹಾಯ ಮಾಡಿ, ಬಿ.ಜೆ.ಪಿಯ ಶಾಸಕರನ್ನು ಖರೀದಿಸಿ, ಮಲ್ಯ ರಾಜ್ಯಸಭೆಗೆ ಆಯ್ಕೆಯಾಗುವಂತೆ ನೋಡಿಕೊಂಡರು.
ಆ ಎರಡೂ ಸಂಧರ್ಭಗಳಲ್ಲೂ, ಮಲ್ಯ ವಿಧಾನ ಸಭೆಯ ಮೊಗಸಾಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಎದುರು ಬಂದವರಿಗೆಲ್ಲ ಕೈ ಮುಗಿದು ಮಾತಾಡಿಸುತ್ತಿದ್ದರು. ಅವರ ವೇಷ ಭೂಷಣಕ್ಕೂ, ಅವರ ನಡುವಳಿಕೆಗಳಿಗೂ, ಒಂದಕ್ಕೊಂದು ತಾಳೆಯಾಗುತ್ತಿರಲಿಲ್ಲ.
ಚುನಾವಣೆ ಘೋಷಣೆಯಾದಾಗ, ಸಮೀಉಲ್ಲಾ ಹೇಳಿದ್ದು ನಿಜವಾಯ್ತು. ಜೆಡಿ(ಯು)ನಲ್ಲಿದ್ದ ಕೆಲವು ನಾಯಕರು ಅಲ್ಲೇ ಉಳಿದುಕೊಂಡರೆ, ಇನ್ನುಳಿದವರು ಜೆಡಿ(ಎಸ್), ಕಾಂಗ್ರೆಸ್ ಪಕ್ಷಗಳ ಕಡೆಗೆ ವಲಸೆ ಹೋದರು. ಮಾಜೀ ಮಂತ್ರಿ ಬಿ.ಟಿ.ಲಲಿತಾ ನಾಯಕ್ ಮತ್ತು ಮಾಜೀ ಕಾರ್ಪೋರೇಟರ್ ಪ್ರದೀಪ್ ಕುಮಾರ್ ರೆಡ್ಡಿ ಬಿಟ್ಟು, ಇನ್ಯಾರೂ ಮಲ್ಯನ ದಿಕ್ಕಿಗೆ ತಲೆ ಹಾಕಿ ಮಲಗಲಿಲ್ಲ. ಆದ್ರೂ ಮಲ್ಯ ಧೃತಿಗೆಟ್ಟಂತೆ ಕಾಣಲಿಲ್ಲ.
ಮೊದಲನೇ ಪ್ರೆಸ್ ಕಾನ್ಫರೆನ್ಸಿನಲ್ಲೇ ನಾನು ಮಲ್ಯನಿಗೆ ತಗುಲಿಕೊಂಡಿದ್ದೆ. ಒಂದೆರೆಡು ಪ್ರಶ್ನೆಗಳನ್ನು ಕೇಳುತ್ತಲೇ, ಮಲ್ಯನಿಗೆ ಕಿರಿಕಿರಿಯಾಯ್ತು ಅಂತ ಕಾಣುತ್ತೆ. `ಈವನ್ ಐ ಓನ್ ಅ ನ್ಯೂಸ್ ಪೇಪರ್, ಮೈ ಫ್ರೆಂಡ್,’ ಅಂತ ನಕ್ಕರು. `ಬಟ್, ಐ ಆಮ್ ನಾಟ್ ಸ್ಟ್ಯಾಂಡಿಂಗ್ ವಿಥ್ ಅನ್ ಅಪ್ಲಿಕೇಶನ್ ಟು ಜಾಯಿನ್ ದಟ್ ಪೇಪರ್,’ ಅಂತ ಅಷ್ಟೇ ತೀಕ್ಷ್ಣವಾಗಿ ಉತ್ತರಿಸಿದ್ದೆ. ಆಗ, ಏಶಿಯನ್ ಏಜ್ ಪತ್ರಿಕೆ ಮಲ್ಯರ ಒಡೆತನದಲ್ಲಿತ್ತು. ಅದರ ಸಂಪಾದಕಿಯಾಗಿದ್ದ ತುಷಿತ ಮಿತ್ರ ಮಲ್ಯರವರ ಪತ್ರಿಕಾ ಪ್ರಚಾರ ಕಾರ್ಯದರ್ಶಿನಿಯಾಗಿ ಸೇರಿದ್ದರು.
ಅಲ್ಲಿಗೆ ಇಬ್ಬರೂ ಸುಮ್ಮನಾಗಿ, ಪ್ರೆಸ್ ಕಾನ್ಫರೆನ್ಸ್ ಮುಂದುವರೆಯಿತು. ಕೊನೆಗೆ ಏನಾದ್ರೂ ಪ್ರಶ್ನೆಗಳಿವೆಯಾ ಅಂತ ಮಲ್ಯ ನನ್ನ ಕಡೆ ನೋಡಿದಾಗ, ನಾನು ಮುಖ ತಿರುಗಿಸಿಕೊಂಡೆ.
`ಮೈ ಫ್ರೆಂಡ್ ಇಸ್ ಸ್ಟಿಲ್ ಆಂಗ್ರಿ ವಿಥ್ ಮಿ. ವಿ ಹ್ಯಾವ್ ಟು ಟೇಕ್ ಇಟ್ ಸ್ಪೋರ್ಟಿವ್ ಲಿ,’ ಅಂತ ನಕ್ಕರು. `ಕೊಬ್ಬು ನನ್ಮಗಂಗೆ… ಈಗ ಮಸ್ಕಾ ಹೊಡಿಯೋಕೆ ನೋಡ್ತಿದ್ದಾನೆ,’ ಅಂತ ಮನಸ್ಸಲ್ಲೇ ಬೈಕೊಂಡೆ.
ಅದಾದ ನಂತರ ನನಗೂ ಮತ್ತು ಮಲ್ಯರಿಗೂ ಯಾವುದೇ ವಿಷಯಗಳಲ್ಲಿ ಜಗಳವಾಗಲಿಲ್ಲ. ಮಲ್ಯರೇನೋ ಇಡೀ ರಾಜ್ಯವನ್ನು ಹೆಲಿಕಾಪ್ಟರ್ ನಲ್ಲಿ ಸುತ್ತುತ್ತಾ, ಮಧ್ಯದಲ್ಲಿ ಬೆಂಗಳೂರಿಗೂ ಬಂದು ಪ್ರೆಸ್ ಕಾನ್ಫರೆನ್ಸ್ ಮಾಡುತ್ತಾ ಇದ್ದರು. ನಮಗೇನೋ ಈ ಪಕ್ಷ ಮೇಲೇಳುವ ಯಾವುದೇ ಲಕ್ಷಣಗಳು ಕಾಣುತ್ತಿರಲಿಲ್ಲ.
ಚುನಾವಣೆ ಒಂದು ವಾರವಿದ್ದಾಗ, ಮಲ್ಯ ಪತ್ರಿಕಾ ಮಿತ್ರರಿಗಾಗಿ ಒಂದು ಪಾರ್ಟಿ ಕೊಟ್ಟರು. ನಮ್ಮ ಬ್ಯರೋ ಛೀಫ್ ಮಟ್ಟೂವಂತೂ, ನೀನು ಹೋಗಲೇ ಬೇಕು ಅಂತ ಫರ್ಮಾನು ಹೊರಡಿಸಿದರು. ಪ್ರೆಸ್ ಕಾನ್ಫರೆನ್ಸಿನಲ್ಲಿ ನಡೆಯುವುದನ್ನು ತುಷಿತ ಮೂಲಕ ಮಟ್ಟೂ ತಿಳಿದುಕೊಳ್ಳುತ್ತಿದ್ದರು. ಇಂಥಾ ಪಾರ್ಟಿಗಳಿಂದ ಸಾಧಾರಣವಾಗಿ ದೂರವಿರುವ ನಾನು, ಮನಸ್ಸಿಲ್ಲದ ಮನಸ್ಸಿನಿಂದ ಹೋದೆ.
ಅವತ್ತೇ ಗೊತ್ತಾಗಿದ್ದು ನನಗೆ, ಮಲ್ಯ ಎಂಥಾ ಒಳ್ಳೆ ಅತಿಥೇಯ ಅಂತ. ಬಂದ ಪ್ರತೀಯೊಬ್ಬರನ್ನೂ ಕೈ ಹಿಡಿದು ಒಳಗೆ ಕರೆದುಕೊಂಡು ಹೋಗುತ್ತಿದ್ದರು. ಮಲ್ಯರ ಪಾರ್ಟಿ ಎಂದ ಮೇಲೆ ಕೇಳಬೇಕೆ. ವಿಂಡ್ಸರ್ ಮ್ಯಾನರ್ ಹೋಟೆಲಿನಲ್ಲಿ, ಅತ್ಯುತ್ತಮ ಸ್ಕಾಚ್ ಇಟ್ಟಿದ್ದರು. ಆದರೆ, ಶೇಕಡಾ ತೊಂಬತ್ತಕ್ಕಿಂತ ಹೆಚ್ಚು ಪತ್ರಕರ್ತರು ಪೆಪ್ಸಿ ಹಿಡ್ಕೊಂಡು ನಿಂತಿದ್ದರು. ನಾನೂ ಒಂದು ಸಾಫ್ಟ್ ಡ್ರಿಂಕ್ ಹಿಡ್ಕೊಂಡು, ಕೈಲೊಂದು ಸಿಗರೇಟ್ ಹಚ್ಕೊಂಡು ನಿಂತಿದ್ದೆ.
ನಮ್ಮ ಕಡೆಗೆ ಬಂದವರೇ, ಮಲ್ಯ ಆಶ್ಚರ್ಯದಿಂದ ಕೇಳಿದರು: `ವಾಟ್ ಇಸ್ ದಿಸ್. ಎವೆರಿಬಡಿ ಆರ್ ಡ್ರಿಂಕಿಂಗ್ ಸಾಫ್ಟ್ ಡ್ರಿಂಕ್ಸ್. ದಿಸ್ ಇಸ್ ಎ ಪಾರ್ಟಿ… ನಾಟ್ ಪ್ರೆಸ್ ಕಾನ್ಫರೆನ್ಸ್,’ ಅಂದ್ರು.
ಮಧ್ಯದಲ್ಲಿದ್ದವರೊಬ್ಬರು, `ನನ್ ಆಫ್ ಅಸ್ ಡ್ರಿಂಕ್,’ ಅಂದಾಗ, ಮಲ್ಯ ದಂಗಾದಂತೆ ಕಂಡರು. `ಐ ಕಾಂಟ್ ಬಿಲಿವ್ ದಿಸ್.  ದಿ ಪ್ರೆಸ್ ಪೀಪಲ್ ಡಸ್ ನಾಟ್ ಡ್ರಿಂಕ್. ಐ ಆಮ್ ರೂಯಿನ್ಡ್. ಐ ಮೇಕ್ ಎ ಲಿವಿಂಗ್ ಬೈ ಸೆಲ್ಲಿಂಗ್ ಲಿಕ್ಕರ್. ಇಫ್ ಪ್ರೆಸ್ ಡಸ್ ನಾಟ್ ಪ್ರಮೋಟ್ ಮೈ ಪ್ರಾಡಕ್ಟ್, ಹೂ ವಿಲ್ ಡ್ರಿಂಕ್ ಇಟ್?’ ಅಂತ ನಗೋಕೆ ಶುರು ಮಾಡಿದ್ರು. ನಾವೂ ಜೋರಾಗಿ ನಗಲು ಶುರು ಮಾಡಿದ ತಕ್ಷಣ, `ಡೋಂಟ್ ವರಿ ವಿಜಯ್… ಐ ಆಮ್ ಡ್ರಿಂಕಿಂಗ್. ದೆರ್ ಆರ್ ಪ್ರೆಸ್ ಪೀಪಲ್ ಹೂ ವಿಲ್ ಪ್ರಮೋಟ್ ವಿಸ್ಕಿ ಆಲ್ಸೋ,’ ಅಂತ ಒಂದು ಧ್ವನಿ ಬಂತು.
ಯಾರೂಂತ ನೋಡಿದ್ರೆ, ಪತ್ರಿಕಾ ಪ್ರಪಂಚದಲ್ಲಿ ಬಿಲ್ಲಾ ಅಂತ್ಲೇ ಗುರುತಿಸಲ್ಪಟ್ಟ ಪ್ರಸಾದ್, ಒಂದು ಕೈಯಲ್ಲಿ ವಿಸ್ಕಿ ಲೋಟ ಇಟ್ಕೊಂಡು, ಇನ್ನೊಂದು ಕೈಯನ್ನು ಮಲ್ಯ ಹೆಗಲ ಮೇಲೆ ಇಟ್ಟಿದ್ದ. ನಮಗೆಲ್ಲ ನಾಚಿಗೆಯಾಗಿ ತಲೆ ತಗ್ಗಿಸಿಕೊಂಡೆವು. ಅಷ್ಟರಲ್ಲಿ ಪ್ರಸಾದ್ ಮತ್ತೆ ಮುಂದುವರೆಸಿ, `ವಿಜಯ್, ಐ ವಿಲ್ ಆಲ್ಸೋ ಟೇಕ್ ಎ ಬಾಟಲ್ ಟು ರೋಡ್,’ ಅಂದ.
ಸುಧಾರಿಸಿಕೊಂಡ ಮಲ್ಯ, `ಐ ಆಮ್ ಸೋ ಹ್ಯಾಪಿ ಫಾರ್ ಯು. ಐ ವಿಲ್ ಜಸ್ಟ್ ಅಟೆಂಡ್ ದೀಸ್ ನಾನ್ ಡ್ರಿಂಕರ್ಸ್ ಆಂಡ್ ಜಾಯಿನ್ ಯು ಇನ್ ಟೂ ಮಿನಿಟ್ಸ್,’ ಅಂತ ಹೇಳಿ ಸಾಗ ಹಾಕಿದ್ರು.
ಅಲ್ಲಿಂದ ಮುಂದೆ ಸುಮಾರು ಹೊತ್ತು ನಮ್ಮ ಜೊತೆ ಮಾತಾಡ್ತಾ ನಿಂತಿದ್ರು. ಈ ಮನುಷ್ಯನಿಗೆ ಯಾರ ಬಗ್ಗೆಯೂ ದ್ವೇಶವಿದ್ದಂತೆ ಕಾಣಲಿಲ್ಲ. ಯಾರ ಬಗ್ಗೆಯೂ ಕೆಟ್ಟದಾಗಿ ಮಾತಾಡಲಿಲ್ಲ. ಒಂದು ಭ್ರಮಾಲೋಕ ಸೃಷ್ಟಿಸಿಕೊಂಡು, ಅದರಲ್ಲಿ ವಿಹರಿಸುತ್ತಿದ್ದಂತೆ ಕಾಣುತ್ತಿತ್ತು. ಕೊನೆಗೆ ನಾನು ಹೊರಡುತ್ತೇನೆ ಅಂದಾಗ, `ಕ್ಯನ್ ವಿ ಟಾಕ್ ಫಾರ್ ಎ ಮಿನಿಟ್?’ ಅಂತ ಕೇಳಿದ್ರು.
ನನ್ನ ಹತ್ತಿರ ಇವರಿಗೇನಪ್ಪಾ ಮಾತು ಅನ್ಕೊಂಡು, ಅವರ ಹಿಂದೆ ಹೋಗಿ ಒಂದು ಟೇಬಲ್ ಎದುರು ಕೂತೆ. ಅದೂ ಇದೂ ಮಾತಾಡ್ತಾ, `ಡು ಯು ರಿಯಲ್ಲೀ ಥಿಂಕ್ ದಟ್ ದ ಯೂತ್ ಕೇರ್ ಮಚ್ ಅಬೌಟ್ ಕ್ಯಾಸ್ಟ್, ವ್ಹೈಲ್ ವೋಟಿಂಗ್? ದಟ್ ಇಸ್ ಟೂ ಇನ್ ದಿಸ್ ಟ್ವೆಂಟಿ ಫಸ್ಟ್ ಸೆಂಚ್ಯುರಿ?’ ಅಂತ ಕೇಳಿದ್ರು.
ಒಂದೇ ಕ್ಷಣದಲ್ಲಿ ತಡಬಡಾಯಿಸಿ ಹೋಗಿದ್ದೆ. ಆ ಪ್ರಶ್ನೆ ಹಾಕುವಾಗ, ಮುಖದಲ್ಲಿ ಒಂದು ಮುಗ್ದತೆಯಿತ್ತು. ಪ್ರತೀ ಸಲ ಮಾತಾಡುವಾಗ, ಈ ರಾಜ್ಯಕ್ಕೆ ಒಂದು ಒಳ್ಳೆ ಆಡಳಿತ ಕೊಡಬೇಕು ಅಂತ ಮಲ್ಯ ಹೇಳ್ತಿದ್ರು. ಆ ಮಾತಿನ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತಿರಲಿಲ್ಲ. ಆದರೆ, ಅವರಿಗೆ ವ್ಯವಸ್ಥೆ ಸರಿಯಾಗಿ ಅರ್ಥವಾಗಿಲ್ಲ ಅನ್ನುವುದರಲ್ಲಿ ಅನುಮಾನವಿರಲಿಲ್ಲ.
ಒಂದು ಕ್ಷಣ ಸುಧಾರಿಸಿಕೊಂಡು, ನಿಧಾನವಾಗಿ ಹೇಳಿದೆ. `ಹೌದು. ಇಪ್ಪತ್ತು ವರ್ಷಗಳ ಹಿಂದಿಗಿಂತಲೂ ಈಗ ಜಾತಿ ಪದ್ದತಿ ಭಾವನೆ ಈಗ ಜಾಸ್ತಿಯಾಗಿದೆ. ಚುನಾವಣೆ ಸಮಯದಲ್ಲಂತೂ ಅದು ಇನ್ನೂ ಹೆಚ್ಚಾಗುತ್ತೆ,’ ಅಂದು, ಅದಕ್ಕೆ ಕಾರಣಗಳನ್ನು ಹೇಳುತ್ತಾ ಹೋದೆ.
ಸುಮ್ಮನೆ ಕೂತು ಕೇಳಿಸಿಕೊಂಡ ಮಲ್ಯ, ಕೊನೆಗೆ ತಲೆ ಆಡಿಸಲು ಶುರುಮಾಡಿದ್ರು. `ಯು ನೋ.. ಐ ಹ್ಯಾವ್ ಎ ಡ್ರೀಮ್ ಫಾರ್ ದಿ ಸ್ಟೇಟ್. ಇನ್ ದಿಸ್ ಎಲೆಕ್ಷನ್, ವಿ ಹ್ಯಾವ್ ಟು ವಿನ್ ಸಮ್ ಸೀಟ್ಸ್ ಅಂಡ್ ಕೀಪ್ ದಿ ಪಾರ್ಟಿ ಅಜೆಂಡಾ ಅಲೈವ್ ಫಾರ್ ದಿ ನೆಕ್ಸ್ಟ್ ಎಲೆಕ್ಷನ್,’ ಅಂತ ಎದ್ದರು.
ಮೊದಮೊದಲು, ನಾವು ಮಲ್ಯರ ಪಕ್ಷ ಹತ್ತರಿಂದ, ಹದಿನೈದು ಸೀಟ್ ಗೆಲ್ಲಬಹುದು ಅಂದ್ಕೊಂಡಿದ್ದೆವು. ಬರುಬರುತ್ತಾ, ಅದು ಐದಕ್ಕಿಂತ ಕಮ್ಮಿಯಾಗತೊಡಗಿತು. ಮಲ್ಯನಿಂದ ಕೋಟಿಗಟ್ಟಲೆ ಹಣ ಪಡೆಯಬಹುದು ಅಂತ ಅವರ ಪಕ್ಷಕ್ಕೆ ಹೋದವರಿಗೆ ನಿರಾಶೆ ಕಾದಿತ್ತು. ಪ್ರಚಾರಕ್ಕೆ ಬೇಕಾದ ಪದಾರ್ಥಗಳನ್ನು ಎಷ್ಟು ಬೇಕಾದ್ರೂ ಕೊಡುತ್ತಿದ್ದ ಮಲ್ಯ, ಯಾರಿಗೂ ದುಡ್ಡು ಕೊಡಲು ಒಪ್ಪಲಿಲ್ಲ.
ಚುನಾವಣೆ ಫಲಿತಾಂಗ ಬಂದಾಗ, ಮಲ್ಯರ ಪಕ್ಷ ಒಂದೂ ಸೀಟ್ ಗೆಲ್ಲದೆ, ಧೂಳೀಪಟವಾಗಿತ್ತು. ಹಾಗೇ, ಮಲ್ಯರ ಕಾರ್ಪೊರೇಟ್ ಪಾಲಿಟಿಕ್ಸ್ ಕೂಡ………


ಮಾಕೋನಹಳ್ಳಿ ವಿನಯ್ ಮಾಧವ