ಶುಕ್ರವಾರ, ಫೆಬ್ರವರಿ 3, 2012

ಗಂಧದ ಗುಡಿ


ಗುಜ್ರಾಲ್ ಸರ್ಕಾರ ಮತ್ತು ಗಂಧದ ಮರ

`ರೀ ಸಮಿ, ಈ ಥರದ ಏನಾದ್ರು ದೊಡ್ಡ ಸುದ್ದಿಯಾಗಿದ್ದಾಗ, ಒಂದು ಪೇಜ್ ವನ್ ಸ್ಟೋರಿ ಹೊಡಿಬೇಕು ಕಣ್ರಿ,’ ಅಂತ ಹೇಳಿದೆ.
`ಅದು ಯಾವುದೇ ಜರ್ನಲಿಸ್ಟ್ ತೆಗೆದುಕೊಳ್ಳೋ ಅತಿ ದೊಡ್ಡ ಚಾಲೆಂಜ್,’ ಅಂದ್ರು ಸಮಿ.
ಅವತ್ತು ದೆಹಲಿಯಲ್ಲಿ ದೇವೇಗೌಡರು ಪ್ರಧಾನಿ ಪಟ್ಟ ಕಳೆದುಕೊಂಡಿದ್ದರು. ಇಂಡಿಯನ್ ಎಕ್ಸ್ ಪ್ರೆಸ್ ಆಫೀಸಿಗೆ ಬೆಲಗೂರು ಸಮೀವುಲ್ಲಾ ಎಂದಿನಂತೆ ಅಫ್ ಶಾನ್ ಳನ್ನು ಕರೆದುಕೊಂಡು ಹೋಗಲು ಬಂದಿದ್ದರು. ಎಂದಿನಂತೆ ಅದೂ ಇದೂ ಮಾತಾಡ್ತಾ ಈ ವಿಷಯ ಹೇಳಿದ್ದೆ.
ಸಮಿಗೆ ಈ ವಿಷಯ ಎಷ್ಟು ದಿನ ನೆನಪಿತ್ತು ಅಂತ ಗೊತ್ತಿಲ್ಲ. ಯಾವಾಗಲೂ ಏನಾದರೊಂದು ತರಲೆ ಕೆಲಸಕ್ಕೆ ಕೈ ಹಾಕುವ ನನ್ನ ತಲೆಯಲ್ಲಂತೂ ಈ ಹುಳ ನಿಂತುಬಿಟ್ಟಿತ್ತು. ಆಗಿನ್ನೂ ಕ್ರೈಂ ರಿಪೋರ್ಟಿಂಗ್ ಶುರು ಮಾಡಿ ಒಂದು ವರ್ಷ ಕೂಡ ಆಗಿರಲಿಲ್ಲ. ಎಗ್ಗಿಲ್ಲದೆ ಎಲ್ಲರ ಜೊತೆ ಜಗಳಕ್ಕೆ ನಿಲ್ಲುತ್ತಿದ್ದೆ.
ಅದಕ್ಕೇನು ಬಹಳ ದಿನ ಕಾಯಬೇಕಾಗಿರಲಿಲ್ಲ. ದೇವೇಗೌಡರ ನಂತರ ಬಂದ ಇಂದ್ರ ಕುಮಾರ್ ಗುಜ್ರಾಲ್ ಸರ್ಕಾರವೇನೂ ಬಹಳ ದಿನ ಉಳಿಯಲಿಲ್ಲ. ಅದರ ಕೊನೆಯ ದಿನವೂ ಬಂದಿತ್ತು. ಬೆಳಗ್ಗೆ ಆಫೀಸಿನಿಂದ ಪೋಲಿಸ್ ಕಮೀಷನರ್ ಆಫೀಸಿಗೆ ಹೋಗುವಾಗ, ಸಾಯಂಕಾಲದೊಳಗೆ ಗುಜ್ರಾಲ್ ಸರ್ಕಾರ ಕೊನೆಯಾಗುತ್ತೆ ಅಂತ ಗೊತ್ತಾಗಿತ್ತು.
ಅವತ್ತು ಏನೇನು ಸ್ಟೋರಿಗಳನ್ನು ಹೊಡೆಯಬಹುದು ಅಂತ ಯೋಚನೆ ಮಾಡುತ್ತಲೇ ನೆಡೆದೆ. ಯಾವುದೂ ಮುಖಪುಟಕ್ಕೆ ಬರುವಂತಿರಲಿಲ್ಲ. ಯಾರನ್ನು ಕೇಳುವುದು? ಅಂತ ಯೋಚನೆ ಮಾಡುತ್ತಾ, ಕಾಫಿ ಬೋರ್ಡ್ ಎದುರಿಗಿದ್ದ ಶ್ಯಾಮ್ ಪ್ರಕಾಶ್ ಹೋಟೆಲ್ ದಾಟಿದೆ. ಈಗ ಆ ಜಾಗದಲ್ಲಿ ದೊಡ್ಡದೊಂದು ಐಟಿ ಕಂಪನಿ ಆಫೀಸಿದೆ. ಶ್ಯಾಮ್ ಪ್ರಕಾಶ್ ಮತ್ತು ಕಮೀಷನರ್ ಆಫೀಸ್ ಮಧ್ಯದಲ್ಲಿ ಆದಾಯ ತೆರಿಗೆ ಇಲಾಖೆಯವರ ವಸತಿ ಗೃಹವಿದೆ.
ಕಮೀಶನರ್ ಆಫೀಸಿನ ಗೋಡೆಗೆ ಹೊಂದಿಕೊಂಡಂತೆ, ವಸತಿ ಗೃಹದ ಆವರಣದಲ್ಲಿ ಮತ ಬಿದ್ದಂತೆ ಕಂಡಿತು. ನಿಂತು ಸರಿಯಾಗಿ ನೋಡಿದರೆ, ಯಾರೋ ಮರ ಕಡಿದು, ಸೊಪ್ಪನ್ನೆಲ್ಲ ಅಲ್ಲೇ ಬಿಟ್ಟು ಹೋಗಿದ್ದು ಗೊತ್ತಾಯ್ತು. ಸರಿಯಾಗಿ ನೋಡಿದೆ—ಗಂಧದ ಮರ! ಪೋಲಿಸ್ ಕಮೀಷನರ್ ಕಛೇರಿಯ ಆವರಣದ ಪಕ್ಕದಲ್ಲೇ ಯಾರೋ ಕದ್ದಿದ್ದಾರೆ… ಎಂಥಾ ಸ್ಟೋರಿ ಅನ್ಕೊಂಡೆ.
ಈಗಿನಂತೆ ಟೆಲಿವಿಷನ್ ಚಾನಲ್ ಗಳ ಹಾವಳಿಯಾಗಲಿ, ಮೊಬೈಲ್ ಫೋನ್ ಗಳಾಗಲಿ ಇರಲಿಲ್ಲ. ಹಾಗಾಗಿ ಸುದ್ದಿ ಕಾಳ್ಗಿಚ್ಚಿನಂತೆ ಹರಡಲು ಸಾಧ್ಯವಿರಲಿಲ್ಲ. ಮತ್ತೆ, ಅವರದೇ ಆವರಣದ ಪಕ್ಕದಲ್ಲಿ ಆದ ಪ್ರಕರಣವನ್ನು ಆದಷ್ಟೂ ಮುಚ್ಚಿಡಲು ಪೋಲಿಸರು ಪ್ರಯತ್ನಿಸುತ್ತಾರೆ ಅಂತ ನನಗೆ ಗೊತ್ತಿತ್ತು. ಆದರೂ, ಬೇರೆ ಪತ್ರಿಕೆಯವರಿಗೆ ಗೊತ್ತಾಗದಂತೆ ಇಡುವುದು ಹೇಗೆ? ಅನ್ನೋದು ಕೊರೆಯಲು ಶುರುವಾಯ್ತು.
ಮೊದಲನೆಯದಾಗಿ, ಫೋಟೋಗ್ರಾಫರ್ ಗೆ ಸಾಯಂಕಾಲದ ಮೇಲೆ ಹೇಳುವುದು ಅನ್ಕೊಂಡೆ. ಆದರೆ, ಈ ಸುದ್ದಿಯ ವಿವರಗಳನ್ನು ಯಾರಬಳಿ ತೆಗೆದುಕೊಳ್ಳುವುದು ಎನ್ನುವುದು ದೊಡ್ಡ ಸಮಸ್ಯೆಯಾಗಿತ್ತು.
ಮೊದಲನೆಯದಾಗಿ, ಆಗಿನ ಪೋಲಿಸ್ ಕಮೀಷನರ್ ರೇವಣ್ಣಸಿದ್ದಯ್ಯ ಮತ್ತು ನನ್ನ ಜಾತಕ ಹೊಂದಿಬರುತ್ತಿರಲಿಲ್ಲ. ಅವರು ಏತಿ ಅಂದರೆ ನಾನು ಪ್ರೇತಿ ಅನ್ನುತ್ತಿದ್ದೆ. ನಮ್ಮಿಬ್ಬರ ಸಂಬಂಧ ಇಡೀ ಪೋಲಿಸ್ ಕಮೀಷನರ್ ಆಫೀಸಿನಲ್ಲಿ ಕೆಲಸ ಮಾಡುವ ಎಲ್ಲರಿಗೂ ಗೊತ್ತಿದ್ದ ವಿಷಯ. ಹಾಗಾಗಿ, ಈ ವಿಷಯದ ವಿವರಗಳು ನೇರವಾಗಿ ಸಿಗುವುದು ಕಷ್ಟ ಅಂತ ಗೊತ್ತಿತ್ತು. ಇಂಥ ಸಂದರ್ಭಗಳಿಗಾಗಿ ನಾನು ಕಮೀಷನರ್ ಕಛೇರಿಯಲ್ಲಿ ಕೆಲವು ಅತೃಪ್ತಾತ್ಮಗಳನ್ನು ಹುಡುಕ್ಕಿಟ್ಟಿದ್ದೆ. ಇವರುಗಲೆಲ್ಲಾ ಕಮೀಷನರ್ ಆಫೀಸ್ ಆವರಣದೊಳಗೆ ಎಷ್ಟೊ ವರ್ಷಗಳಿಂದ ಇದ್ದು, ಆ ಆವರಣದ ಬಗ್ಗೆ ವಿಶೇಷವಾದ ದ್ವೇಶ ಬೆಳಸಿಕೊಂಡಿದ್ದವರು. ಅದರಲ್ಲೂ ಚಂದ್ರಪ್ಪನಂತೂ ಪೂರ್ತಿ ಸಿನಿಕತನವನ್ನು ಬೆಳೆಸಿಕೊಂಡಿದ್ದ.
ಈ ಚಂದ್ರಪ್ಪ ಯಾಕೆ ಹೀಗೆ ಅಂತ ನೂರಾರು ಸಲ ಯೋಚಿಸಿದ್ದೇನೆ. ಯಾವುದರ ಬಗ್ಗೆಯೂ ಒಳ್ಳೆಯದಾಗಿ ಮಾತಾಡುತ್ತಿರಲಿಲ್ಲ. ಯಾರಾದರೂ ಒಳ್ಳೆಯ ಸಿಹಿತಿಂಡಿ ಕೊಟ್ಟರೆ ತಿಂದು: `ಈ ಬೋಳಿ ಮಗಂದು ತಿಂದು ಸಕ್ಕರೆ ಕಾಯಿಲೆ ಬರಿಸ್ಕೊಳ್ತಿವಲ್ಲಾ, ನಮಗೆ ನಾವೇ ಚಪ್ಪಲಿಯಲ್ಲಿ ಹೊಡ್ಕೋಬೇಕು, ಅಷ್ಟೆ,’ ಅಂತಿದ್ದ. ಆದರೆ, ಯಾಕೋ ಏನೋ, ನನ್ನ ಜೊತೆ ಮಾತ್ರ ವಿಶ್ವಾಸದಿಂದ ಇದ್ದ. ಇದಕ್ಕೆಲ್ಲಾ ಅವನೇ ಸರಿ ಅಂದ್ಕೊಂಡು, ಅವನನ್ನು ಕರೆದುಕೊಂಡು ಮೊಬೈಲ್ ಕ್ಯಾಂಟೀನ್ ಗೆ ಹೋಗಿ, ಟೀ ಕುಡಿಯತ್ತಾ ಮೆತ್ತಗೆ ಪೀಠಿಕೆ ಹಾಕಿದೆ: `ಚಂದ್ರಪ್ಪ, ಆಫೀಸ್ ಪಕ್ಕದಲ್ಲಿ ರಾತ್ರಿ ಯಾರೋ ಗಂಧದ ಮರ ಕಡಿದಿದ್ದಾರೆ.’
`ಬೆಳಗ್ಗೆನೇ ಗೊತ್ತಾಯ್ತು. ನೋಡಿದಾಗ ಒಂಬತ್ತು ಘಂಟೆಯಾಗಿತ್ತಂತೆ. ಹೈ ಗ್ರೌಂಡ್ ಪೋಲಿಸ್ ಗೆ ಕಂಪ್ಲೇಂಟ್ ಕೊಡುವ ಹೊತ್ತಿಗೆ ಹತ್ತು ಘಂಟೆಯಾಗಿತ್ತಂತೆ. ಈಗ ಕ್ಲೀನ್ ಮಾಡೋಕೆ ಹೋದರೆ ಪ್ರೆಸ್ ನವರ ಗಮನಕ್ಕೆ ಹೋಗುತ್ತೆ ಅಂತ ಹಾಗೇ ಬಿಟ್ಟಿದ್ದಾರೆ. ಆ ಕಂಟ್ರೋಲ್ ರೂಮ್ ನಾಯಕ ಇದ್ದಾನಲ್ಲ, ಅವನು ಯಾರೂ ಬಾಯಿ ಬಿಡಬಾರದು ಅಂತ ಫರ್ಮಾನು ಬೇರೆ ಹೊರಡಿಸಿದ್ದಾನೆ. ಎಲ್ಲಾ ಕಳ್ಳ ನನ್ಮಕ್ಕಳು,’ ಅಂದ.
`ಅಲ್ರಿ, ಕಮೀಷನರ್ ಆಫೀಸ್ ಪಕ್ಕದಲ್ಲೇ ಕದ್ದಿದ್ದಾರಲ್ಲ, ಏನ್ರಿ ಧೈರ್ಯ ಅವರಿಗೆ?’ ಅಂದೆ.
`ನೈಟ್ ಡ್ಯೂಟಿ ಗೂಬೆ ನನ್ಮಕ್ಕಳು ಒಂಬತ್ತು ಘಂಟೆಗೇ ಕುಡಿದು ಹೊದ್ಕೊಂಡು ಮಲಗಿರ್ತಾರೆ. ಹೀಗಾದ್ರೆ ಇನ್ನೇನಾಗುತ್ತೆ? ಇದೇನು ಮೊದಲ ಸಲನಾ ಆಗಿರೋದು? ಈ ತಿಂಗಳೇ ಎಂಟೋ, ಹತ್ತೊ ಹೋಗಿವೆ. ಶ್ಯಾಮ್ ಪ್ರಕಾಶ್ ಹೋಟೆಲಿನೊಳಗಿಂದಾನೇ ಎರಡು ಹೋಗಿವೆ,’ ಅಂದ.
`ಅಷ್ಟೊಂದು ಹೋಗಿದ್ದಾವಾ? ಎಲ್ಲೆಲ್ರೀ?’ ಅಂತ ಕೇಳದೆ.
ಶ್ಯಾಮ್ ಪ್ರಕಾಶ್ ಹೋಟೆಲ್ ನ ಎರಡು ಮರ ಸೇರಿದಂತೆ, ಆರು ಮರಗಳ ಲೆಖ್ಖ ಕೊಟ್ಟು, ಜಾಗಗಳನ್ನು ತೋರಿಸಿದ. `ಬಡ್ಡೀಮಗಂದು ಸಿಕ್ತು,’ ಅನ್ಕೋಂಡು ಸುಮ್ಮನೆ ಕಾದೆ. ಮಧ್ಯಾಹ್ನ, ಎಲ್ಲಾ ಕ್ರೈಂ ರಿಪೋರ್ಟರ್ ಗಳು ಸೇರಿದಾಗ ಈ ವಿಷಯ ಬರಲೇ ಇಲ್ಲ. `ಸರಿ, ಇನ್ನೂ ಯಾರ ಗಮನಕ್ಕೂ ಬಂದಿಲ್ಲ,’ ಅಂತ ಸುಮ್ಮನಿದ್ದೆ. ಸಾಯಂಕಾಲದ ಹೊತ್ತಿಗೆ ಗೊತ್ತಾದರೂ, ಒಂದು ಗೊತ್ತಾಗುತ್ತೆ ಅಷ್ಟೆ. ಇನ್ನುಳಿದ ಐದರ ಸುದ್ದಿ ನನಗೆ ಮಾತ್ರ ಅಂತ ಗ್ಯಾರಂಟಿಯಾಯ್ತು. ಸಾಯಂಕಾಲದ ಹೊತ್ತಿಗೆ ಫೋಟೋಗ್ರಾಫರ್ ಕರೆದುಕೊಂಡು ಬಂದು, ಯಾರ ಗಮನಕ್ಕೂ ಬಾರದಂತೆ ಒಂದೆರೆಡು ಫೋಟೊ ಕೂಡ ತೆಗೆಸಿದೆ.
ಆಗೆಲ್ಲ, ಹೊಸಕೋಟೆಯ ಹತ್ತಿರದ ಮೇಡಿ ಮಲ್ಲಸಂದ್ರ, ಕಟ್ಟಿಗಾನಹಳ್ಳಿ, ಬೈಲನರಸಾಪುರ ಗ್ರಾಮಗಳು ಕಳ್ಳಭಟ್ಟಿ ಶರಾಬು ಮತ್ತು ಗಂಧ ಕಳ್ಳಸಾಗಾಣಿಕೆಗೆ ಹೆಸರುವಾಸಿಯಾಗಿದ್ದವು. ಎಕ್ಷೈಸ್ ಅಧಿಕಾರಿಗಳಾಗಲೀ, ಪೋಲಿಸರಾಗಲಿ ಆ ಊರಿಗೆ ಕಾಲಿಟ್ಟದ್ದೇ ಆದರೆ, ಗಂಡಸರು ಮತ್ತು ಹೆಂಗಸರು ಸೇರಿಕೊಂಡೇ ಬಾರಿಸುತ್ತಿದ್ದರು. ಹಾಗಾಗಿ, ಅಲ್ಲಿಗೆ ಯಾರೂ ಕಾಲಿಡದೆ, ಕಾನೂನು ಮತ್ತು ಸುವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಂಡಿದ್ದರು. ಹೊಸಕೋಟೆಯ ಸುತ್ತಮುತ್ತ ಇದ್ದ ಗಂಧದ ಮರಗಳನ್ನು ಬೇರು ಸಹಿತ ಮಾರಿಕೊಂಡ ಮೇಲೆ, ಈ ಊರಿನವರ ಕಣ್ಣು, ಬೆಂಗಳೂರಿನಲ್ಲಿದ್ದ ಗಂಧದ ಮರಗಳ ಮೇಲೆ ಬಿದ್ದಿತ್ತು. ಇವೆಲ್ಲವನ್ನು ಸೇರಿಸಿ, ಒಂದು ದೊಡ್ಡ ವರದಿ ಬರೆದೆ: `ಪೋಲಿಸ್ ಕಮೀಷನರ ಮೂಗಿನಡಿಯಲ್ಲಿಯೇ ಗಂಧದ ಕಳ್ಳರು.’
ಆಫೀಸಿನಲ್ಲಿ ಸಾಯಂಕಾಲದ ಮೀಟಿಂಗ್ ಮುಗಿದ ಸ್ವಲ್ಪ ಹೊತ್ತಿನಲ್ಲಿ ಸಂಪಾದಕರಾಗಿದ್ದ ಕೆ.ವಿ.ರಮೇಶ್ ರಿಂದ ಕರೆ ಬಂತು. ಗಂಧದ ಮರದ ಕಥೆ ಬಗ್ಗೆ ಅಂತ ಗೊತ್ತಿತ್ತು. ಅಲ್ಲಿ ಕೂತಿದ್ದ ಉತ್ತರಾ ಕೇಳಿದರು: `ಈ ಸ್ಟೋರಿ ಒಂದು ದಿನ ತಡೆಯಬಹುದಾ? ಇವತ್ತು ಡೆಲ್ಲಿಯಿಂದ ತುಂಬಾ ಸ್ಟೋರಿಗಳು ಇವೆ. ಈ ಸ್ಟೋರಿ ಪೇಜ್ ವನ್ ಗೇ ಹೋಗಬೇಕು,’ ಅಂದರು.
`ಇಲ್ಲ ಮ್ಯಾಡಂ. ಒಂದು ಗಂಧದ ಮರ ಹೋಗಿರೋದು ನೆನ್ನೆ ರಾತ್ರಿ. ಇನ್ನುಳಿದ ಮರಗಳ ಬಗ್ಗೆ ವಿವರ ಯಾರಿಗೂ ಸಿಗದಿದ್ದರೂ, ಆ ಒಂದು ಮರದ ವಿಷಯ ಬೇರೆಯವರಿಗೆ ಸ್ವಲ್ಪವಾದರೂ ಗೊತ್ತಾಗಬಹುದು,’ ಅಂದೆ. ರಮೇಶ್ ಕೂಡ: `ಉತ್ತರಾ, ಏನಾದ್ರು ಮಾಡಬಹುದಾ ನೋಡು,’ ಅಂದರು.
`ನನ್ನ ಕೈಲೆಷ್ಟು ಆಗತ್ತೆ ನೋಡ್ತೀನಿ. ಗುಡ್ ಸ್ಟೋರಿ ಕಣೋ,’ ಅಂತ ತಲೆ ಆಡಿಸುತ್ತಾ ಉತ್ತರಾ ಹೇಳಿದರು.
ತುಂಬಾನೇ ಖುಶಿಯಾಗಿ ಹೊರಗೆ ಬಂದೆ. ಆದರೆ ಬೆಳಗ್ಗೆ ಎದ್ದು ನೋಡಿದಾಗ, ನನ್ನ ಲೇಖನ ಮೂರನೇ ಪುಟಕ್ಕೆ ಹೋಗಿತ್ತು. ಸಿಕ್ಕಾಬಟ್ಟೆ ಬೇಜಾರಾಗಿ, ಇನ್ನೊಂದು ಸುತ್ತು ಹೊದ್ದುಕೊಂಡು ಮಲಗಿದೆ. ಎಂಟೂವರೆ ಸುಮಾರಿಗೆ ಪೇಜರ್ ಗೆ ಒಂದು ಮೆಸೇಜ್ ಬಂತು:
`ಬೇಗನೆ ಕಮೀಷನರ್ ಆಫೀಸ್ ಗೆ ಬಂದು ನನ್ನನ್ನು ಕಾಣು. ಸುರೇಶ್ ಬಾಬು ನಿನ್ನನ್ನು ಕಾಣಬೇಕಂತೆ,’ ಅಂತ. ಕಂಟ್ರೋಲ್ ರೂಂ ಎ.ಸಿ.ಪಿಯಾಗಿದ್ದ ಟಿ.ಆರ್.ನಾಯಕ್ ಕಳುಹಿಸಿದ್ದರು. ಏನಪ್ಪಾ ಇಷ್ಟು ಬೆಳಗ್ಗೆ ನಾಯಕರು ಕಳುಹಿಸಿದ್ದಾರೆ? ಏನೋ ದೊಡ್ಡ ಬೆಳವಣಿಗೆ ಆಗಿರಬೇಕು, ಅನ್ಕೊಂಡು ಬೇಗನೆ ತಯಾರಾಗಿ, ಕಮೀಷನರ್ ಆಫೀಸ್ ಗೆ ಹೋದೆ. ಯಾವಾಗಲೂ ನಗುಮುಖದಿಂದ ಇರುತ್ತಿದ್ದ ನಾಯಕರು ಯಾಕೋ ತುಂಬಾನೆ ಗಂಭೀರವಾಗಿದ್ದರು. ನನ್ನ ಮುಖ ನೋಡಿದ ತಕ್ಷಣ: `ಏನಪ್ಪಾ ನಿನ್ನ ಕಾಟ. ದಿನಾ ಏನಾದ್ರೊಂದು ಮಾಡ್ತಾ ಇರ್ತಿಯಲ್ಲ. ಹೋಗು, ಸುರೇಶ್ ಬಾಬು ಸಾಹೇಬ್ರನ್ನ ನೋಡು. ನಿನಗೆ ಕಾಯ್ತಾ ಇದ್ದಾರೆ,’ ಅಂದ್ರು.
`ನಾನೇನ್ರಿ ಮಾಡ್ದೆ ಈಗ?’ ಅಂತ ಕೇಳ್ದೆ.
`ಅಲ್ಲಪ್ಪ, ಇವತ್ತು ಬರ್ದಿದ್ದೀಯಲ್ಲ ಗಂಧದ ಮರ….’ ಅಂದ್ರು.
`ಓ ಅದಾ, ಅಲ್ರಿ, ಅದ್ರಲ್ಲಿ ನಾನೇನಾದರೂ ಸುಳ್ಳು ಬರ್ದಿದ್ದೀನಾ?’ ಅಂತ ಕೇಳಿದೆ.
`ಸುಳ್ಳು ಬರ್ದಿದ್ದೀಯ ಅಂತ ಹೇಳ್ತಿಲ್ಲಪ್ಪಾ. ಅದು ನಮಗೂ ಗೊತ್ತಿತ್ತು. ಬೆಳಗ್ಗೆ ಇಲ್ಲಿ ಸುಪ್ರಭಾತ ಆಗಿದೆ. ನೀನು ಹೋಗಿ ಸುರೇಶ್ ಬಾಬು ಸಾಹೇಬರನ್ನ ನೋಡು. ಅವರು ಮಾತಾಡ್ತಾರೆ,’ ಅಂದರು.
`ಏನಾಯ್ತ್ರೀ ಬೆಳಗ್ಗೆ?’ ಅಂತ ಗಾಭರಿಯಿಂದ ಕೇಳಿದೆ.
ರೇವಣ್ಣಸಿದ್ದಯ್ಯನವರು ಹೇಳಿ ಕೇಳಿ ಗತ್ತಿನ ಪೋಲಿಸ್ ಅಧಿಕಾರಿ. ಯಾವುದೇ ಕೇಸಿನ ಹಿಂದ ಹೋದರೆ, ಸೀಳುನಾಯಿಯಂತೆ ಬೆನ್ನಟ್ಟುತ್ತಿದ್ದರು. ನಾಲ್ಕು ಸರಣಿ ಸರಗಳ್ಳತನವಾದರೆ, ಬೆಂಗಳೂರು ಪೋಲಿಸ್ ಇರಲಿ, ಅವರೇ ಬಂದು ಬೀದಿಯಲ್ಲಿ ನಿಲ್ಲುತ್ತಿದ್ದರು. ಯಾವುದೋ ಮನೆಯಲ್ಲಿ ದೊಡ್ಡ ಕಳ್ಳತನವಾದರೆ, ತಮ್ಮ ಮನೆಯಲ್ಲೇ ಆದಂತೆ ಚಡಪಡಿಸಿ, ಅಲ್ಲಿನ ಪೋಲಿಸ್ ಗಳಿಗೆ ಶನಿ ಬಿಡಿಸುತ್ತಿದ್ದರು. ಪತ್ರಿಕೆಗಳಲ್ಲಿ ಬರುವ ವರದಿಗಳನ್ನು ತುಂಬಾನೇ ತಲೆಗೆ ಹಚ್ಚಿಕೊಂಡು, ಅದನ್ನು ಸರಿಪಡಿಸುವವರೆಗೆ ಬಿಡುತ್ತಿರಲಿಲ್ಲ.
 ಅಂಥವರಿಗೆ, ಅಕ್ಕಪಕ್ಕದಲ್ಲಿರುವ ತಮ್ಮ ಮನೆ ಮತ್ತು ಕಛೇರಿಯ ಸುತ್ತ ಮುತ್ತ ಆರು ಗಂಧದ ಮರಗಳು, ಒಂದೇ ತಿಂಗಳಲ್ಲಿ ಕದ್ದಿದ್ದಾರೆಂದು ಪತ್ರಿಕೆಯಲ್ಲಿ ಓದಿದಾಗ ಹೇಗಾಗಿರಬೇಡ? ಆರೂಮುಕ್ಕಾಲಿಗೇ ವೈರ್ ಲೆಸ್ ಮೆಸೆಜ್ ಕೊಟ್ಟಿದ್ದಾರೆ: `ಪೋಲಿಸ್ ಕಮೀಷನರ್ ಕಛೇರಿಯಲ್ಲಿ ಕೆಲಸ ಮಾಡುವ ಎಲ್ಲಾ ಪೋಲಿಸ್ ಗಳೂ ಮತ್ತು ಅಧಿಕಾರಿಗಳೂ ಎಂಟು ಘಂಟೆಯ ಒಳಗೆ ಕಛೇರಿಗೆ ಬರಬೇಕು. ನೈಟ್ ಡ್ಯೂಟಿ ಮಾಡಿದವರೂ ಸಹ ಇರಬೇಕು,’ ಅಂತ.
ಎಂಟು ಘಂಟೆಗೆ ಸರಿಯಾಗಿ ಕಛೇರಿ ಆವರಣದೊಳಗೆ ಧೂರ್ವಾಸ ಮುನಿಯಂತೆ ನುಗ್ಗಿದ ರೇವಣ್ಣಸಿದ್ದಯ್ಯನವರು ಎಲ್ಲಾರಿಗೂ ವಾಚಾಮಗೋಚರವಾಗಿ ಬೈದಿದ್ದಾರೆ. ಸಂಸ್ಕೃತವಂತೂ ನಿರರ್ಗಳವಾಗಿ ಹರಿದಿದೆ. ಯಾರನ್ನೂ ಬಿಟ್ಟಿಲ್ಲ. ಹೋಗುವಾಗ: `ಇನ್ನೊಂದು ಗಂಧದ ಮರ ಹೋಗಿದ್ದು ಗೊತ್ತಾಗಬೇಕು. ಎಲ್ಲಾರಿಗೂ ಶನಿ ಬಿಡಿಸ್ತೀನಿ ಅಷ್ಟೆ. ಕತ್ತೆ ಕಾಯಲು ಕೂಡ ಲಾಯಕ್ಕಿಲ್ಲದವರು, ಪೋಲಿಸ್ ಕೆಲಸಕ್ಕೆ ಬರ್ತಾರೆ,’ ಅಂತ ಬೈದಿದ್ದರಂತೆ.
ಇದೊಳ್ಳೆ ಕಥೆಯಾಯ್ತಲ್ಲಾ ಅಂತ ತಲೆ ಕೆರೆದುಕೊಂಡು ಸುರೇಶ್ ಬಾಬುರವರ ಕಛೇರಿಗ ಹೋದೆ. ನನ್ನನ್ನು ನೋಡಿದವರೇ: `ಬಾರಪ್ಪಾ… ಬಾ. ಏನು ಇಷ್ಟು ಬೆಳಗ್ಗೆ ಬಂದ್ಬಿಟ್ಟೆ?’ ಅಂತ ನಗೋಕೆ ಶುರು ಮಾಡಿದ್ರು. `ಸರ್, ನಾಯಕ್ ಹೇಳಿದ್ರು, ನೀವು ನೋಡ್ಬೇಕು ಅಂದ್ರಂತೆ?’ ಅಂದೆ.
`ಅದಾ.. ನೀನು ಇಲ್ಲಿಗೆ ಬಂದಾಗ ನನಗೆ ಸಿಗೊಕ್ಕೆ ಹೇಳು ಅಂತ ನಾಯಕ್ ಗೆ ಹೇಳಿದ್ದೆ. ನೀನು ಬೆಳಗ್ಗೆನೆ ನಮ್ಮೆಲ್ಲರ ನಿದ್ರೆ ಹಾಳುಮಾಡಿದ್ಯಲ್ಲಾ, ನಾಯಕ್ ನಿನ್ನ ನಿದ್ರೆ ಹಾಳುಮಾಡಿದ್ದಾರೆ, ಅಷ್ಟೆ. ಮತ್ತಿನ್ನೇನು ವಿಷಯ?’ ಅಂತ ನನ್ನನ್ನೇ ಕೇಳಿದರು. ನಾನು ಸುಮ್ಮನೆ ಅವರ ಮುಖ ನೋಡುತ್ತಾ ಕೂತಾಗ, ಅವರೇ ಮುಂದುವರೆಸಿದರು: `ಇದು ನಮಗೂ ಗೊತ್ತಿತ್ತು. ನಾನೂ ಒಂದು ಟೀಮ್ ಮಾಡಿ, ಈ ಗಂಧದವರ ಹಿಂದೆ ಬಿಟ್ಟಿದ್ದೀನಿ. ಇನ್ಫರ್ ಮೇಷನ್ ಇದೆ. ಇನ್ನು ಸ್ವಲ್ಪದಿನದಲ್ಲಿ ಸಿಕ್ತಾರೆ. ಎಲ್ಲಿಗೆ ಹೋಗ್ತಾರೆ ಹೇಳು,’ ಅಂದರು.
ಒಂದೆರೆಡು ದಿನ ಬಿಟ್ಟು, ಎಲ್ಲಾ ವಿಷಯಗಳಂತೆ ಇದನ್ನೂ ಮರೆತೆ.
ಒಂದು ತಿಂಗಳ ಮೇಲಾಗಿರಬಹುದು. ಒಂದಿನ ಒಂಬತ್ತು ಘಂಟೆ ಹೊತ್ತಿಗೆ ಆಫೀಸ್ ತಲುಪುದಿದ್ದ ನಾನು, ಆಫೀಸಿಗೆ ಹೋಗದೆ ಕಮೀಷನರ್ ಆಫೀಸಿಗೆ ನುಗ್ಗಿದೆ. ಯಾಕೋ ಏನೋ, ಸ್ವಲ್ಪ ಗಡಿಬಿಡಿಯ ವಾತಾವರಣವಿತ್ತು. ಏನೋ ಆಗಿರಬೇಕು ಅಂತ ಕಂಟ್ರೋಲ್ ರೂಂ ಕಡೆ ಹೋದೆ. ನಾಯಕ್ ಹೊರಗಡೆ ಬರುತ್ತಿದ್ದವರು, ನನ್ನನ್ನು ನೋಡಿದ ತಕ್ಷಣ ಹೇಳಿದರು: `ಮಲ್ಲೇಶ್ವರಂನಲ್ಲಿ ಎನ್ ಕೌಂಟರ್. ಇಬ್ಬರು ಸತ್ತಿದ್ದಾರೆ.’
`ಹೌದಾ? ಯಾರು ಹೊಡೆದಿದ್ದು?’ ಅಂತ ಕೇಳಿದೆ.
`ಮಲ್ಲೇಶ್ವರಂ ಇನ್ಸ್ ಪೆಕ್ಟರ್,’ ಅಂದರು ನಾಯಕ್.
`ಜಯಪ್ರಕಾಶಾ?... ರೀ, ಅವರೊಂದು ಸೊಳ್ಳೆ ಕೂಡ ಹೊಡೆಯೋಲ್ಲ. ಅವರಿಗೆ ಯಾರಿಗಾದ್ರು ಬೈದು ಕೂಡ ಗೊತ್ತಿಲ್ಲ. ಅಷ್ಟು ಪಾಪದ ಮನುಷ್ಯ ಅವರು ಹ್ಯಾಗ್ರಿ ಎನ್ ಕೌಂಟರ್ ಮಾಡ್ತಾರೆ? ಅದೂ ಇಬ್ಬರನ್ನ?’ ಅಂದೆ.
`ನಂಗೊತ್ತಿಲ್ಲ. ಯಾರೋ ಗಂಧದ ಕಳ್ಳರ ಗ್ಯಾಂಗ್ ಅಂತೆ. ಅಲ್ನೋಡು, ಸುರೇಶ್ ಬಾಬು ಸಾಹೇಬ್ರು ಬರ್ತಾ ಇದ್ದಾರೆ. ಅವರೂ ಹೋಗಿದ್ರು. ಅವರನ್ನೇ ಕೇಳು,’ ಅಂತ ನಗುತ್ತಾ ಹೇಳಿದರು
ತಿರುಗಿ ನೋಡಿದಾಗ ಸುರೇಶ್ ಬಾಬುರವರ ಕಾರು ಒಳಗ್ಗೆ ಬರುವುದು ಕಂಡಿತು. ಒಂದೇ ನೆಗೆತದಲ್ಲಿ, ಅವರು ಕಾರಿನಿಂದ ಇಳಿಯುವ ಮೊದಲೇ ಹೋಗಿ ಅವರ ಕೋಣೆಯ ಹತ್ತಿರ ನಿಂತೆ. ನನ್ನನ್ನು ನೋಡಿದ ತಕ್ಷಣ: `ಏನಪ್ಪಾ? ಇಷ್ಟು ಬೇಗ ಬಂದಿದ್ದೀಯ? ಎನ್ ಕೌಂಟರ್ ಆದ ತಕ್ಷಣ ನಿನಗೇ ಮೊದಲ ಮೆಸೆಜ್ ಕೊಟ್ಟಹಾಗಿದೆ? ಅಥವಾ ಎನ್ ಕೌಂಟರ್ ಆಗ್ತಾ ಇದೆ ಅಂತ ಮೆಸೆಜ್ ಬಂತಾ?’ ಅಂತ ನಗುತ್ತಾ ಹೇಳಿದರು. ಯಾಕೋ ಕೀಟಲೆ ಮಾಡ್ತಾ ಇದ್ದಾರೆ ಅನ್ನಿಸಿತು.
`ಅಲ್ಲಾ ಸರ್, ಜಯಪ್ರಕಾಶ್ ಅಷ್ಟೋಂದು ಪಾಪದ ಮನುಷ್ಯ. ಅವರು ಸೊಳ್ಳೆ ಕೂಡ ಹೊಡಿತಾರೋ ಇಲ್ವೋ. ಇಬ್ಬರನ್ನ ಹ್ಯಾಗೆ ಎನ್ ಕೌಂಟರ್ ಮಾಡ್ತಾರೆ ಸರ್?’ ಅಂದೆ.
`ಈ ಸೊಳ್ಳೆ, ನೊಣಗಳ ವಿಷಯ ನಂಗೊತ್ತಿಲ್ಲಪ್ಪ. ನಂಗೊತ್ತಿರೋದು ಇಷ್ಟೆ. ರಾತ್ರಿ ಗಂಧದ ಕಳ್ಳರನ್ನ ಬೆರೆಸಿದ್ದಾರೆ. ಅವರು ಓಡುವಾಗ ಒಂದು ದೊಡ್ಡ ಗೋಡೆ ಅಡ್ಡ ಬಂದಿದೆ. ಇಬ್ಬರು ಗೋಡೆ ಹಾರಿ ಓಡಿಹೋಗಿದ್ದಾರೆ. ಇನ್ನಿಬ್ಬರು ಮಚ್ಚು ತೆಗೆದುಕೊಂಡು ಪೋಲೀಸರನ್ನು ಅಟ್ಯಾಕ್ ಮಾಡಿದ್ದಾರೆ. ಪ್ರಾಣ ರಕ್ಷಣೆಗಾಗಿ ಪೋಲೀಸರು ಗುಂಡು ಹಾರಿಸಿದಾಗ, ಅವರಿಬ್ಬರು ಸತ್ತಿದ್ದಾರೆ,’ ಅಂತ ನಾಟಕೀಯವಾಗಿ ಹೇಳಿದರು.
ನಂಗ್ಯಾಕೋ ಸಮಾಧಾನವಾಗಲಿಲ್ಲ. ಇನ್ನೇನೋ ಕೇಳುವುದರೊಳಗೆ, ಕಮೀಷನ್ ರಿಂದ ಫೋನ್ ಬಂದು, ಸುರೇಶ್ ಬಾಬು ಅವರ ಕೋಣೆಗೆ ಹೊರಟರು. ನಾನು ಅವರ ಕೋಣೆಯಿಂದ ಹೊರಬಂದಾಗ, ನಾಯಕ್ ಕಂಟ್ರೋಲ್ ರೂಂ ಕಡೆ ಹೋಗುತ್ತಿರುವುದು ಕಂಡಿತು. ಸೀದ ಅವರ ಹತ್ತಿರ ಹೋದವನೆ ಕೇಳಿದೆ: `ರೀ ನಾಯಕ್, ಏನಾಗ್ತಾ ಇದೆ? ನಿಮ್ಮನ್ನ ಕೇಳಿದ್ರೆ, ಸುರೇಶ್ ಬಾಬು ಕೇಳಿ ಅಂತೀರಿ. ಅವರು ನೋಡಿದ್ರೆ ನನ್ನನ್ನೇ ತಮಾಶೆ ಮಾಡ್ತಾರೆ. ಏನಾಯ್ತ್ರೀ?’ ಅಂತ ಗೋಗರೆದೆ.
`ನೋಡು. ಈ ಗಂಧದವರ ಹಾವಳಿ ಜಾಸ್ತಿ ಆದ ಮೇಲೆ, ಕಮೀಷನರ್ ಆಯಾ ಸ್ಟೇಶನ್ ಇನ್ಸ್ ಪೆಕ್ಟರ್ ಗಳೇ ಹೊಣೆ ಅಂತ ಹೇಳಿದ್ರು. ಅದ್ರೂ ಒಂದೈದಾರು ಕಡೆ ಮತ್ತೆ ಗಂಧದ ಮರಗಳನ್ನ ಕಡಿದ್ರು. ಆಚೆ ಸಲ ರಿವ್ಯೂ ಮೀಟಿಂಗ್ ನಲ್ಲಿ ಕಮೀಷನರ್ ತುಂಬಾ ಕೂಗಾಡಿದರು. ಮತ್ತೇನಾದ್ರು ಗಂಧದ ಮರ ಹೋದ್ರೆ, ಆ ಸ್ಟೇಶನ್ ನಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಸಿಬ್ಬಂಧಿಗಳ ಹಳೇ ವಿಚಾರಣೆಗಳೇನಾದ್ರು ಇದ್ರೆ, ಅದನ್ನೂ ತೆಗೆಸಿ ಕ್ರಮ ಕೈಗೊಳ್ಳುತ್ತೇನೆ ಅಂದಿದ್ದರು. ಅಲ್ಲಿಂದ ಎಲ್ಲಾ ಇನ್ಸ್ ಪೆಕ್ಟರ್ ಗಳೂ ತುಂಬಾನೆ ಅಲರ್ಟ್ ಆಗಿದ್ದರು. ನೆನ್ನೆದೇ ನೋಡು, ನಾಲ್ಕು ಜನ ಬಂದಿದ್ದರು. ಇಬ್ಬರು ತಪ್ಪಿಸಿಕೊಂಡು ಹೋದರು. ಇನ್ನಿಬ್ಬರೂ ತಪ್ಪಿಸಿಕೊಂಡು ಹೋಗಿದ್ದರೆ, ಇಡೀ ಸ್ಟೇಶನ್ ಗೆ ಗ್ರಹಚಾರ ಕಾಡಿತ್ತು,’ ಅಂದರು.
`ಅದೂ ಜಯಪ್ರಕಾಶ್ ಎನ್ ಕೌಂಟರ್ ಮಾಡುವವರೆಗೂ ಹೋಯ್ತು,’ ಅಂತ ನಕ್ಕೆ.
`ಜಯಪ್ರಕಾಶ್ ಸಿಕ್ಕಿದ್ದರು. ನೋಡಿ ನಾಯಕ್, ಯಾರನ್ನೋ ಕೊಲ್ಲೋ ಪೋಲಿಸ್ ಕೆಲಸ ನನಗೆ ಬೇಕಿತ್ತಾ? ಅಂತ ಬೇಜಾರು ಮಾಡಿಕೊಂಡರು,’ ಅಂದರು ನಾಯಕ್.
ಬೇರೆ ಸಂಧರ್ಭದಲ್ಲಾಗಿದ್ದರೆ, ಎನ್ ಕೌಂಟರ್ ಆದ ಜಾಗಕ್ಕೆ ಹೋಗಿ, ಸರ್ವೆ ಮಾಡಿ, ಇನ್ಸ್ ಪೆಕ್ಟರ್ ಗೆ ತಲೆ ಚಿಟ್ಟು ಹಿಡಿಯುವಷ್ಟು ಪ್ರಶ್ನೆ ಕೇಳಿ ಬರುತ್ತಿದ್ದೆ. ಅಂಥ ಸಂದರ್ಭಗಳಲ್ಲಿ ಪ್ರೆಸ್ ಕಾನ್ಪರೆನ್ಸ್ ಗೆ ಹೋಗುತ್ತಿದ್ದದ್ದೇ ಅಪರೂಪ. ಅವತ್ತು ಮಾತ್ರ ನೇರವಾಗಿ ಪ್ರೆಸ್ ಕ್ಲಬ್ ಗೆ ಹೋಗಿ, ಪ್ರೆಸ್ ಕಾನ್ಪರೆನ್ಸ್ ಸಮಯಕ್ಕೆ ಸರಿಯಾಗಿ ವಾಪಾಸ್ ಬಂದೆ. ವರದಿ ಬರೆಯುವಾಗ ಕೂಡ, ಕಮೀಷನರ್ ಎಷ್ಟು ಹೇಳಿದರೋ, ಅಷ್ಟನ್ನು ಮಾತ್ರ ಬರೆದು ಕೈ ತೊಳೆದುಕೊಂಡೆ.

ಮಾಕೋನಹಳ್ಳಿ ವಿನಯ್ ಮಾಧವ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ