ಶುಕ್ರವಾರ, ಮೇ 25, 2012

ಚಿದು


ಜನ, ಚೇಂಜ್ ಕೇಳ್ತಾರಮ್ಮಾ…..


ಮೊನ್ನೆ ಲಾ ಕಮಿಷನ್ ಸರ್ಕಾರಕ್ಕೆ ಕಳುಹಿಸಿದ ಕೆಲವು ಸಲಹೆಗಳನ್ನು ಓದ್ತಾ ಇದ್ದೆ. ಅದ್ರಲ್ಲಿ ಪ್ರಮುಖವಾಗಿದ್ದದ್ದೇ ಡೌರಿ ಕೇಸುಗಳು ತುಂಬಾ ದುರುಪಯೋಗವಾಗುತ್ತಿರುವುದರಿಂದ, ಅದಕ್ಕೆ ತಿದ್ದುಪಡಿ ತರಬೇಕು ಅಂತ. ಈಗ ಡೌರಿ ಕೇಸ್ ಕೊಟ್ಟ ತಕ್ಷಣ, ದೂರಿನಲ್ಲಿ ಹೆಸರಿರುವವರನ್ನೆಲ್ಲ ಅರೆಸ್ಟ್ ಮಾಡಿ, ಒಳಗೆ ಹಾಕ್ತಾರೆ ಮತ್ತೆ ಅವರಿಗೆ ಬೇಲ್ ಸಿಗೋದು ಕಷ್ಟ.
ಲಾ ಕಮಿಷನ್, ಎಷ್ಟೊ ಕೇಸ್ ಗಳನ್ನು ಅಭ್ಯಾಸ ಮಾಡಿ, ಡೌರಿ ಕೇಸ್ ಗಳಲ್ಲಿ ತಕ್ಷಣ ಅರೆಸ್ಟ್ ಮಾಡದಂತೆಯೂ, ಆಪಾ ದಿತರಿಗೆ ಬೇಲ್ ಸಿಗುವಂತೆ, ಕಾನೂನಿಗೆ ತಿದ್ದುಪಡಿ ತರಬೇಕು ಅಂತ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.
ಅದು ಓದ್ತಾ ಇದ್ದಂತೆ ತಲೆಗೆ ಬಂದಿದ್ದು ಒಂದೇ ಡೈಲಾಗ್ : ಜನ, ಚೇಂಜ್ ಕೇಳ್ತಾರಮ್ಮಾ! ಇಷ್ಟು ವರ್ಷದ ಮೇಲಾದ್ರೂ ಸತ್ಯ ಆಗ್ತಿದೆ ಅನ್ಕೊಂಡು ನಕ್ಕೆ.
ನಾನು ಮೊದಲ ಸಲ ಈ ಡೈಲಾಗ್ ಕೇಳಿದ್ದು ಬೆಂಗಳೂರಿಗೆ ಬಂದ ಹೊಸತರಲ್ಲಿ. ನನ್ನ ಕಸಿನ್ ಡಾ. ದೇವಿ ಪ್ರಸಾದ್ ನೋಡೋಕೆ ಕೆಂಪೇಗೌಡ ಮೆಡಿಕಲ್ ಕಾಲೇಜಿಗೆ ಹೋಗಿದ್ದೆ.  ಅಲ್ಲಿನ ಡೆಂಟಲ್ ಕಾಲೇಜ್ ಪೂರ್ತಿ ನನಗೆ ಗೆಳೆಯರಿದ್ದರು. ಎಲ್ಲರ ಜೊತೆ ಮಾತಾಡ್ತಾ ಇದ್ದಾಗ  ಅವನು ಮೆಟ್ಟಿಲು ಹತ್ತಿಕೊಂಡು ಬಂದವನೇ, ಸಿನೆಮಾ ಹೀರೋ ಗತ್ತಲ್ಲಿ, ನಮ್ಮ ಕಡೆ ತಿರುಗಿಯೂ ನೋಡದೆ, `ಹಾಯ್….’ ಅಂದವನೇ ಮುಂದಕ್ಕೆ ಹೋದ.
ನಮಗೇ ವಿಚಿತ್ರ ಅನ್ನಿಸುವಂತ ಪ್ಯಾಂಟ್, ಶರ್ಟ್ ಹಾಕ್ಕೊಂಡು, ಕೂದಲನ್ನು ಪಾಪ್ ಸಿಂಗರ್ಸ್ ಥರ ಮಾಡ್ಕೊಂಡು, ಕಾಲೇಜಿನ ನಾಲ್ಕನೇ ಅಂತಸ್ತಿನಲ್ಲೂ ಕೂಲಿಂಗ್ ಗ್ಲಾಸ್ ಹಾಕ್ಕೊಂಡು ಬಂದವನನ್ನು ನೋಡಿ ಸುಸ್ತಾದೆ. `ಏನಮ್ಮಾ ಚಿದೂ… ಗಡ್ಡ ಶೇವ್ ಮಾಡ್ಬಿಟ್ಟಾ?’ ಅಂತ ಕುಲದೀಪ್ ತಮಾಷೆ ಮಾಡ್ದ.
ತಿರುಗಿನೂ ನೋಡ್ದೆ ಅವನು ಉತ್ತರಿಸಿದ: `ಜನ, ಚೇಂಜ್ ಕೇಳ್ತಾರಮ್ಮಾ’ ಅಂತ.
ಆ ಗುಂಪಲ್ಲಿದ್ದವರ್ಯಾರೂ ಅವನನ್ನು ಸೀರಿಯಸ್ ಆಗಿ ತಗೊಂಡ ಹಾಗೆ ಕಾಣಲಿಲ್ಲ. ನಾನೇ ಕೇಳ್ದೆ: `ಯಾರೋ ಇದು ನಮೂನ?’ ಅಂತ.
`ಅವ್ನು ಚಿದು, ದಿ ಗ್ರೇಟ್ ವಿನಯಣ್ಣ… ಹಿ ಇಸ್ ಡಿಫರೆಂಟ್. ನೋಡು, ಯಾರ್ನೂ ಕೇರ್ ಮಾಡ್ದೆ ಎಷ್ಟು ಆರಾಮವಾಗಿ ಹೋದ. ದಿನಕ್ಕೊಂಥರ ಸ್ಟೈಲ್ ಮಾಡ್ತಾನೆ. ಒಂದಿನ ಸೂಟ್ ಹಾಕ್ಕೊಂಡು ಬಂದ್ರೆ, ಇನ್ನೊಂದಿನ ಬರ್ಮುಡ ಹಾಕ್ಕೊಂಡು ಬರ್ತಾನೆ. ಒಂದಿನ ಮೀಸೆ, ಗಡ್ಡ ಬಿಟ್ಕೊಂಡು ಬಂದ್ರೆ, ಇನ್ನೊಂದಿನ ಮೀಸೆ ಬೋಳಿಸಿ, ಬರೀ ಗಡ್ಡ ಬಿಟ್ಕೊಂಡು ಬರ್ತಾನೆ…’ ಅಂತ ದೇವಿ ಪ್ರಸಾದ್ ನಾಟಕೀಯವಾಗಿ ಹೇಳ್ತಾ ಹೋದ.
ಶುದ್ದ ತರ್ಲೆ ಗ್ಯಾಂಗ್ ಅಂತ ಮೊದಲಿಂದ್ಲೇ ಗೊತ್ತಿತ್ತು. `ಏ… ಅವ್ನಿಗೆಲ್ಲೋ ಇದೆ ಮೀಸೆ, ಗಡ್ಡ? ಪಾಪದವ್ನು ಸಿಕ್ದ ಅಂತ ಸಿಕ್ಕಾಬಟ್ಟೆ ತಮಾಷೆ ಮಾಡ್ತೀಯ,’ ಅಂತ ಗದರಿಸಿದೆ.
`ಅವ್ನು ಕೆಟ್ಟವ್ನು ಅಂತ ನಾನೆಲ್ಲಿ ಹೇಳ್ದೆ? ಅವ್ನು ಒಳ್ಳೆಯವ್ನೇ…. ಡಿಫರೆಂಟ್ ಅಷ್ಟೆ,’ ಅಂತ ಎಲ್ಲರೂ ನಗೋಕೆ ಶುರು ಮಾಡಿದ್ರು.
ಯಾವಾಗಲೂ ಸೀರಿಯಸ್ ಆಗಿ ಇರ್ತಿದ್ದ ಆದರ್ಶ, ಗಂಭೀರವಾಗಿ ಹೇಳ್ದ: `ಇವ್ನ ಕಂಡ್ರೆ ಹುಡುಗೀರು ಮಾತ್ರ ಲಾಠಿ ಚಾರ್ಜ್ ಆದ ಹಾಗೆ ಓಡ್ತಾರೆ,’ ಅಂದ.
`ಯಾಕೋ?’ ಅಂತ ಕೇಳ್ದೆ.
`ತುಂಬಾ ಕೊರೀತಾನಂತೆ. ನಮಗೆ ಹುಡುಗರಿಗೆ ತೊಂದ್ರೆ ಇಲ್ಲ. ಯಾಕೆಂದ್ರೆ, ನಮ್ಮನ್ನೇನು ಜಾಸ್ತಿ ಮಾತಾಡ್ಸೋಲ್ಲ,’ ಅಂತ ನಕ್ಕ.
ಸರಿ, ಇವರ್ಗೆಲ್ಲಾ ಆಡಿಕೊಳ್ಳೋಕೆ ಒಂದು ಕಾರ್ಟೂನ್ ಸಿಕ್ಕಿದೆ ಅಂತ ಅನ್ಕೊಂಡೆ.
ಈ ಗ್ಯಾಂಗ್ ಜೊತೆ ಸೇರಿದಾಗಲೆಲ್ಲ ಒಂದಲ್ಲ ಒಂದು ಸಲ ಚಿದು ಹೆಸರು ಬಂದು ಹೋಗ್ತಿತ್ತು. ಯಾವುದೋ ಒಂದು ಡೈಲಾಗ್ ಅಥವಾ ಅವನು ಹಾಕಿದ್ದ ಬಟ್ಟೆ, ಯಾವ ಹುಡುಗಿಗೆ ಚೆನ್ನಾಗಿ ಕೊರೆದು, ಅವಳು ಎರಡು ದಿನ ಕಾಲೇಜಿಗೆ ತಲೆ ಹಾಕಲಿಲ್ಲ. ಇವನ್ನು ಸ್ವಾರಸ್ಯವಾಗಿ ಹೇಳುವ ಸುಮಾರು ಜನ ಆ ಗ್ಯಾಂಗ್ ನಲ್ಲಿದ್ದಿದ್ದರಿಂದ, ಅದೊಂಥರ ಎಂಟರ್ ಟೈನ್ಮೆಂಟ್ ಅಂತಲೇ ನಾವು ಅನ್ಕೋತ್ತಿದ್ವಿ.
ಎಲ್ಲಾರೂ ಕಾಲೆಜ್ ಮುಗಿಸಿದಂತೆ, ಈ ಗ್ಯಾಂಗ್ ದೂ ಕಾಲೇಜ್ ಮುಗೀತು. ಕೆಲವರು ಫೇಲಾಗಿ ದಂಡಯಾತ್ರೆಗಳನ್ನು ಶುರು ಮಾಡಿದ್ರೆ, ಕೆಲವರು ಕ್ಲಿನಿಕ್ ಗಳನ್ನು ತೆಗೆದರು. ಇನ್ನು ಕೆಲವರು, ಬೇರೆ ಬೇರೆ ಕಾಲೇಜುಗಳಲ್ಲಿ ಕೆಲಸಕ್ಕೆ ಸೇರಿದರು.
ಆದ್ರೂ ಈ ಗ್ಯಾಂಗ್ ಆಗಾಗ ಸಿಕ್ತಿತ್ತು. ಸಿಕ್ಕಿದಾಗಲೆಲ್ಲ ಚಿದು ಜೋಕ್ಸ್ ಗ್ಯಾರಂಟಿ. ಚಿದುನೂ ಯಾವುದೋ ಒಂದು ಕಾಲೇಜಿನಲ್ಲಿ ಲೆಕ್ಚರ್ ಆಗಿ ಸೇರಿದ್ದಾನಂತೆ. ಅದೇ ಥರ ಡ್ರೆಸಿಂಗ್ ಸೆನ್ಸ್… ಕಾಲೇಜಿನಲ್ಲಿ ವಾಕ್ ಮನ್ ಹಾಕಿಕೊಂಡು ಓಡಾಡುವ ಏಕೈಕ ಲೆಕ್ಚರ್ ಅಂತೆ. ಇವನ್ನ ಕಂಡ್ರೆ ಈಗಲೂ ಹುಡುಗೀರು ಹೆದರ್ತಾರಂತೆ. ಆದ್ರೆ, ಏನೂ ಮಾಡೋ ಹಾಗಿಲ್ಲವಂತೆ. ಯಾಕೇಂದ್ರೆ ಲೆಕ್ಚರ್ ಕಾಫಿಗೆ ಕರೆದ್ರೆ ಹೋಗಲೇ ಬೇಕಾಗುತ್ತಂತೆ… ಹೀಗೇ ಕಥೆಗಳು.
`ಅಲ್ವೋ, ಕಾಲೇಜ್ ಮೇನೇಜ್ ಮೆಂಟ್ ಏನೂ ಇವನಿಗೆ ಹೇಳೋಲ್ವಂತಾ? ಯಾರೂ ಕಂಪ್ಲೇಂಟ್ ಮಾಡಿಲ್ವಾ?’ ಅಂತ ಒಂದ್ಸಲ ದೇವಿ ಪ್ರಸಾದ್ ಗೆ ಕೇಳ್ದೆ.
`ವಿನಯಣ್ಣ… ಚಿದು ಒಳ್ಳೆಯವ್ನು ಕಣೋ. ಯಾರ ತಂಟೆಗೂ ಹೋಗಲ್ಲ. ಹುಡುಗೀರ್ನ ಕ್ಯಾಂಟೀನಿಗೆ ಕರ್ಕೊಂಡು ಹೋಗಿ ಕೊರೀತಾನೆ ಅನ್ನೋದು ಬಿಟ್ಟರೆ, ಅವ್ನು ಹಾರ್ಮ್ ಲೆಸ್ ಪ್ರಾಣಿ ಕಣೋ. ಮತ್ತೆ, ಚೆನ್ನಾಗಿ ಪಾಠನೂ ಮಾಡ್ತಾನಂತೆ,’ ಅಂದ. ಸರಿ, ಅಂತ ನಾನು ಸುಮ್ಮನಾದೆ.
ಅದಾಗಿ ಮೂರ್ನಾಲ್ಕು ವರ್ಷಗಳು ಕಳೆದಿರಬಹುದು. ದೇವಿ ಪ್ರಸಾದನ ಹಳೇ ಗ್ಯಾಂಗ್ ಮತ್ತು ನನ್ನ ಒಡನಾಟ ಕಮ್ಮಿಯಾಗಿತ್ತು. ಅವರವರ ಕೆಲಸದಲ್ಲಿ ಬ್ಯಸಿಯಾಗಿದ್ದೆವು. ಒಂದ್ಸಲ ಬಸವೇಶ್ವರನಗರದಲ್ಲಿ ದೇವಿ ಪ್ರಸಾದ್ ಮನೆಯಲ್ಲಿದ್ದಾಗ, ಅವನ ಕಿಮ್ಸ್ ಗ್ಯಾಂಗ್ ನ ಕೆಲವು ಮೆಂಬರ್ ಗಳು ಬಂದಿಳಿದರು. ಮತ್ತೆ ಶುರುವಾಯ್ತು… ಹಳೇ ನೆನಪುಗಳನ್ನು ಕೆದುಕೋ ಕೆಲ್ಸ.
ಮಧ್ಯದಲ್ಲಿ ನಾನು ಕೇಳ್ದೆ: `ಅಲ್ರೋ… ಚಿದು ಹ್ಯಾಗಿದ್ದಾನೆ?’ ಅಂತ.
`ಪಾಪ ಕಣೋ… ಅವ್ನಿಗೆ ಹಾಗಾಗ ಬಾರ್ದಿತ್ತು. ಹುಚ್ಚ ಕಣೋ. ಅವನಿಗ್ಯಾಕೆ ಬೇಕಿತ್ತು ಊರು ಉದ್ದಾರ ಮಾಡೋ ಕೆಲ್ಸ. ಈಗೇನೋ ಪರ್ವಾಗಿಲ್ಲವಂತೆ. ಅಪ್ಪ, ಅಮ್ಮನ ಜೊತೆಲೇ ಇದ್ದಾನಂತೆ,’ ಅಂತ ಹರೀಶ್ ಗುಟ್ಟಳ್ಳಿ ಹೇಳ್ದ.
`ಯಾಕೋ? ಏನಾಯ್ತೋ?’ ಅಂತ ಕೇಳ್ದೆ.
`ನಿಂಗೊತ್ತಿಲ್ವಾ? ಚಿದುದು ಮದ್ವೆ ಆಗಿ ಡೈವೋರ್ಸ್ ಆಯ್ತು. ಅದೊಂದು ದೊಡ್ಡ ಕಥೆ. ಇವ್ನ ಹಳೇ ಫ್ರೆಂಡ್ ಅಂತೆ. ಒಂದಿನ ಬಂದು ಕಷ್ಟ ಹೇಳ್ಕೊಂಡಿದ್ದಾನೆ. ಇವ್ನ ಫ್ರೆಂಡ್, ಒಂದು ಹುಡುಗೀನ ಲವ್ ಮಾಡಿದ್ದಾನಂತೆ. ಅವ್ನ ತಂಗಿ ಮದುವೆ ಆಗೋವರೆಗೆ ಮನೆಯಲ್ಲಿ ಅವ್ನಿಗೆ ಮದುವೆ ಆಗೋಕೆ ಬಿಡೋಲ್ಲವಂತೆ. ಅವ್ನ ತಂಗಿಗೆ ಗಂಡು ಕೂಡ ಸೆಟ್ ಆಗ್ತಿಲ್ಲವಂತೆ. ಹಾಗಾಗಿ ನನ್ನ ತಂಗೀನ ಮದ್ವೆ ಆಗ್ತೀಯಾ? ಅಂತ ಚಿದುಗೆ ಕೇಳಿದ್ದಾನೆ,’ ಅಂತ ಹರೀಶ್ ಶುರು ಮಾಡ್ದ.
`ಫ್ರೆಂಡ್ ಕಷ್ಟಕ್ಕೆ ಆಗ್ದೆ ಹೋದ್ರೆ ಫ್ರೆಂಡ್ ಶಿಪ್ ಯಾಕಮ್ಮಾ ಇರ್ಬೇಕು?’ ಅಂತ ಡೈಲಾಗ್ ಹೊಡೆದ ಚಿದು, ಮದುವೆಗೆ ಒಪ್ಪಿದ್ದಾನೆ. ಆದ್ರೆ ಚಿದು ತಂದೆ, ತಾಯಿ, ಇವನಿಗೆ ಈಗಲೇ ಮದುವೆ ಬೇಡ ಅಂದಿದ್ದಾರೆ. ಯಾರ ಮಾತನ್ನೂ ಸುಲಭವಾಗಿ ಕೇಳದ ಚಿದು, ಹಟ ಹಿಡಿದು ಮದುವೆಗೆ ಒಪ್ಪಿಸಿದ್ದಾನೆ.
ಮದುವೆಯೇನೋ ಜೋರಾಗಿ ಆಯ್ತು. ಆದ್ರೆ, ಹುಡುಗಿ ಮಾತ್ರ ಚಿದು ಹತ್ತಿರವಾಗ್ಲಿ, ಅವನ ಮನೆಯವರ ಹತ್ತಿರವಾಗ್ಲಿ, ಹೆಚ್ಚು ಮಾತಾಡ್ತಾ ಇರ್ಲಿಲ್ಲ. ಲಾ ಓದಿದ ಅವಳು, ಯಾವುದೋ ಲಾಯರ್ ಆಫೀಸಿನಲ್ಲಿ ಕೆಲಸ ಮಾಡ್ತಿದ್ಲು. ಸ್ವಲ್ಪ ದಿನ ಆದ್ಮೇಲೆ, ಬೇರೆ ಮನೆ ಮಾಡೋಕೆ ಹೇಳಿದ್ಲು. ಕುರಿ ಥರ, ಬೇರೆ ಮನೆ ಮಾಡಿದ್ದಾನೆ.
ಯಾಕೋ ಎಲ್ಲಾ ಸರಿ ಇಲ್ಲ ಅಂತ ಚಿದುಗೆ ಅನ್ನಿಸೋಕೆ ಶುರುವಾಗಿದೆ. ಅದಕ್ಕೆ ಸರಿಯಾಗಿ, ಎದುರು ಮನೆಯವರು ಚಿದುಗೆ ಹಳೆ ಪರಿಚಯ. ಒಂದು ದಿನ ಅವನನ್ನು ಕರೆದು, ಪ್ರತಿದಿನ ಮಧ್ಯಾಹ್ನ ಅವನ ಹೆಂಡತಿ ಯಾರೋ ಒಬ್ಬ ಹುಡುಗನ ಜೊತೆ ಮನೆಗೆ ಬರ್ತಾಳೆ, ಮತ್ತೆ ನಾಲ್ಕು ಘಂಟೆ ಹೊತ್ತಿಗೆ ಇಬ್ಬರೂ ವಾಪಾಸ್ ಹೋಗ್ತಾರೆ, ಅಂತ ಹೇಳಿದ್ದಾರೆ.
ಮಾರನೇ ದಿನ, ಚಿದು ಮಧ್ಯಾಹ್ನದ ಹೊತ್ತಿಗೆ ರಜಾ ಹಾಕಿ ಮನೆಗೆ ಬಂದಿದ್ದಾನೆ. ಎದುರು ಮನೆಯವರು ಹೇಳಿದ್ದು ಸುಳ್ಳೇನೂ ಆಗಿರಲಿಲ್ಲ. ಮನೆಯ ಬೀಗ ತೆಗೆದು ಒಳಗೆ ನುಗ್ಗಿದವನೇ, ವೀರಾವೇಶದಿಂದ ಹೆಂಡತಿಯ ಕೆನ್ನೆಗೊಂದು ಹೊಡೆದು, ಆ ಹುಡುಗನಿಗೂ ಹೊಡೆಯಲು ಹೋಗಿದ್ದಾನೆ. ಇವನಿಗಿಂತ ಬಲವಾಗಿದ್ದ ಆ ಹುಡುಗ, ಚಿದುಗೆ ಯದ್ವಾ ತದ್ವಾ ಬಾರಿಸಿದ್ದಾನೆ.
ಚಿದು ತನ್ನ ಹೆಂಡತಿಯ ಅಣ್ಣನಿಗೆ  ಮತ್ತೆ ಅತ್ತೆ, ಮಾವಂದಿರಿಗೆ ಫೋನ್ ಮಾಡಿ ಜಾಡಿಸಿದ್ದಾನೆ. ಹಾಗೇ, ತನ್ನ ತಂದೆ, ತಾಯಿಯರಿಗೆ ವಿಷಯ ಹೇಳಿ ಗೋಳಾಡಿದ್ದಾನೆ. ಅವನ ತಂದೆ, ತಾಯಿಯರು ಅವಳನ್ನ ಬಿಟ್ಟು ಬಾ ಅಂತ ಹೇಳಿದ್ದಾರೆ.
ಚಿದುವಿಗೆ ಗೊತ್ತಾಗಿದ್ದು ಇಷ್ಟು. ಮದುವೆಗೆ ಮುಂಚೆನೇ ಅವನ ಹೆಂಡತಿಗೆ ಬಿಹಾರಿ ಹುಡುಗನೊಬ್ಬನ ಜೊತೆ ಅಫೇರ್ ಇತ್ತಂತೆ. ಅದು ಗೊತ್ತಾದ ಮನೆಯವರು, ನಮ್ಮ ಜಾತಿಯ ಹುಡುಗನಿಗೆ ಕೊಟ್ಟು ಮದುವೆ ಮಾಡಲು ಓಡಾಡ್ತಾ ಇದ್ರಂತೆ. ಆ ಸಮಯದಲ್ಲಿ ಅವಳ ಅಣ್ಣ ಚಿದುಗೆ ಗಾಳ ಹಾಕಿ, ತನ್ನ ತಂಗಿಯನ್ನು ಸಾಗ ಹಾಕಿದ್ದಾನೆ, ಅಷ್ಟೆ.
ಚಿದು ಮಾವನ ಕಡೆಯವರು ಯಾವುದೇ ಮಧ್ಯಸ್ತಿಕೆ ವಹಿಸಲು ಮುಂದೆ ಬರಲಿಲ್ಲ. ಮನೆತನದ ಮರ್ಯಾದೆಗೆ ಅಂಜಿದ ಅವರು ಮಗಳಿಗೇ ಬೈದಿದ್ದಾರೆ. ಸ್ವಲ್ಪ ದಿನ ಹಾಗೇ ಕಳೆದಿದೆ. ಒಂದು ದಿನ ಸಾಯಂಕಾಲ ಏಳು ಘಂಟೆಯ ಹೊತ್ತಿಗೆ ಪೋಲಿಸ್ ಬಂದು, ಚಿದು, ಅವನ ತಂದೆ, ತಾಯಿ ಮತ್ತೆ ತಮ್ಮ ಎಲ್ಲರನ್ನೂ ಅರೆಸ್ಟ್ ಮಾಡಿಕೊಂಡು ಹೋಗಿದ್ದಾರೆ. ಅವನ ಹೆಂಡತಿ ಡೌರಿ ಕೇಸ್ ಜಡಿದಿದ್ದಾಳೆ.
ಕಾನೂನು ಅಂದ್ರೆ ಏನು ಅಂತ ಗೊತ್ತಿಲ್ಲದ ಕುಟುಂಬದವರು ಪೋಲಿಸರ ಹತ್ತಿರ ಗೋಳಾಡಿದ್ದಾರೆ. ಆ ಇನ್ಸ್ ಪೆಕ್ಟರ್, ಅವರಿಗೆ ಲಾಯರ್ ಗೆ ಪೋನ್ ಮಾಡಲು ಬಿಟ್ಟಿದ್ದಾರೆ. ಲಾಯರ್ ಬಂದವರೇ, `ಇವತ್ತು ಶುಕ್ರವಾರ. ನಾಳೆ, ಸೆಕೆಂಡ್ ಸ್ಯಾಟರ್ ಡೇ. ಇನ್ನು ಕೋರ್ಟ್ ತೆಗೆಯೋದು ಸೋಮವಾರವೇ. ಅಲ್ಲಿ ತನಕ ಏನೂ ಮಾಡೋಕ್ಕಾಗಲ್ಲ,’ ಅಂದಿದ್ದಾರೆ.
ಈ ಮಧ್ಯ, ಚಿದುವಿನ ಅತ್ತೆ, ಮಾವನಿಗೆ ವಿಷಯ ಗೊತ್ತಾಗಿ, ಅವರೂ ಪೋಲಿಸ್ ಸ್ಟೇಶನ್ ಗೆ ಬಂದಿದ್ದಾರೆ. ತಮ್ಮ ಮಗಳದೇ ತಪ್ಪು ಅಂತ ಪೋಲಿಸರ ಮುಂದೆ ಹೇಳಿಕೆ ಕೊಟ್ಟರೂ, ಹುಡುಗಿಯೇ ಬಂದು ಕಂಪ್ಲೇಂಟ್ ವಾಪಾಸ್ ತೆಗೆಯದೆ ಹೋದರೆ ಏನೂ ಮಾಡಲಾಗುವುದಿಲ್ಲ ಅಂತ ಹೇಳಿ ಕಳುಹಿಸಿದ್ದಾರೆ. ಅಂತೂ ಇಂತೂ, ಸೋಮವಾರ ಸಾಯಂಕಾಲದ ಹೊತ್ತಿಗೆ ಮನೆಯವರೆಲ್ಲಾ ಬಿಡುಗಡೆಯಾಗಿ ವಾಪಾಸ್ ಬಂದಿದ್ದಾರೆ.
ಅವತ್ತಿಡೀ ನಾವೆಲ್ಲಾ ಚಿದೂದೇ ವಿಷಯ ಮಾತಾಡಿದ್ವಿ. ಕೆಲವರು ಹುಚ್ಚ ಅಂದ್ರೆ, ಇನ್ನು ಕೆಲವರು, ಪಾಪ ಅಂತಿದ್ರು. ಒಟ್ಟಾರೆ, ಅವ್ನಿಗೆ ಒಳ್ಳೆದಾಗ್ಲಿ ಅಂತಾನೇ ಎಲ್ಲಾರೂ ಮಾತಾಡ್ಕೊಂಡ್ವಿ.
ಮುಂದಿನ ಹತ್ತು ವರ್ಷ ಚಿದು ನಂಗೆ ನೆನಪಾಗಿರ್ಲಿಲ್ಲ. ಮತ್ತೆ ನೆನಪಾಗಿದ್ದು ಬೆಂಗಳೂರಿನಲ್ಲಿ ಟೆಕ್ಕಿ ಗಿರೀಶ್ ಕೊಲೆಯಾದಾಗ. ಲಾಯರ್ ಹುಡುಗಿ, ಬಿಹಾರಿ ಹುಡುಗನ ಜೊತೆ ಅಫೇರ್ ಇಟ್ಕೊಂಡು, ನಿಶ್ಚಿತಾರ್ಥವಾಗಿದ್ದ ಹುಡುಗನನ್ನು ಕೊಲೆ ಮಾಡಿಸಿದಾಗ, ಚಿದು ಲಕ್ಕಿ ಅನ್ನಿಸಿತು. ಆಗೆಲ್ಲ ಮಧ್ಯಮ ವರ್ಗದ ಜನಗಳಿಗೆ, ಕೊಲೆ ಮಾಡುವ ಅಥವಾ ಮಾಡಿಸುವ ಧೈರ್ಯ ಇರಲಿಲ್ಲ.
ಚಿದು ಜೀವಂತವಾಗಿ ಉಳಿದಿದ್ದ……


ಮಾಕೋನಹಳ್ಳಿ ವಿನಯ್ ಮಾಧವ್  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ