ಶುಕ್ರವಾರ, ಮೇ 18, 2012

ಶೆರಿಲ್



ಅವಳಿಗೆ ಇನ್ನೊಂದು ಛಾನ್ಸ್ ಸಿಗಬಾರದಿತ್ತಾ?

`ಅದ್ಸರಿ ಮ್ಯಾಡಂ, ಅವಳಿಗೆ ಸೀಮೇಎಣ್ಣೆ ಎಲ್ಲಿ ಸಿಕ್ಕಿದ್ದು?’ ಅಂತ ಕೇಳ್ದೆ.
`ಕಿಚನ್ ನಿಂದ ಕದ್ಕೊಂಡು ಹೋಗಿರ್ಬೇಕು ಸರ್... ಎಷ್ಟು ಜನನಾಂತ ನಾವೂ ಕಾಯ್ತಾ ಇರೋಕೆ ಆಗುತ್ತೆ. ಆ ಹುಡುಗಿ ಬಂದಾಗಿಂದ ಹಾಗೆನೆ. ದಿನಾ ಒಂದಲ್ಲಾ ಒಂದು ರಗಳೆ. ಒಂದ್ಸಲ ಓಡಿ ಹೋಗಿದ್ಲು. ಆಗ್ಲೇ ನಾವು ಅವಳನ್ನ ಮತ್ತೆ ಕರ್ಕೊಂಡು ಬರ್ಬೇಡಿ ಅಂತ ಹೇಳಿದ್ವಿ. ನಮ್ಮ ಮಾತು ಯಾರು ಕೇಳ್ತಾರೆ. ಪೋಲಿಸ್ ಎಲ್ಲಾರನ್ನೂ ತಂದು ಇಲ್ಲಿ ತುಂಬ್ತಾರೆ, ಹೀಗಾದಾಗ ನಮ್ಮ ತಲೆಗೆ ಕಟ್ತಾರೆ, ಅಷ್ಟೆ,’ ಅಂತ ಒಂದೇ ಉಸಿರಿಗೆ ಆ ಹೆಂಗಸು ಹೇಳಿದ್ಲು.
ಆ ಕಡೆಯಲ್ಲಿ ಮಾತಾಡ್ತಿದ್ದಿದ್ದು ಬಾಲಾಪರಾಧಿಗಳ ಕೇಂದ್ರದ ವಾರ್ಡನ್. ಹಿಂದಿನ ದಿನ ಸಾಯಂಕಾಲ  ಒಂದು ಹುಡುಗಿ ಬಾತ್ ರೂಮಿನಲ್ಲಿ ಸೀಮೆಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಬೆಳಗ್ಗೆನೇ ಫೋನ್ ಮಾಡಿ, ಏನಾದ್ರೂ ಫಾಲೋ ಅಪ್ ಮಾಡೋಕೆ ಇದ್ಯಾ ಅಂತ ಕೆದಕುತ್ತಿದ್ದೆ.
`ಅಲ್ಲಾ ಮ್ಯಾಡಂ....’ಅಂತ ಮತ್ತೇನೋ ಕೇಳೋಕೆ ಹೋದಾಗ, ಅರ್ಧಕ್ಕೇ ತಡೆದು ಹೇಳಿದ್ಲು: `ನೋಡಿ ಸರ್, ಈಗ್ಲೇ ನಮ್ಗೆ ಪೂರ್ತೀ ಪ್ರಾಬ್ಲಂ ಆಗಿದೆ. ಮತ್ತೆ ನೀವು ಏನೇನೊ ಬರ್ದು ಬಿಟ್ರೆ ಮುಗೀತು. ನಾವು ಸಾಯೋವರೆಗೂ ದಿನಾ ನಮ್ಮ ತಿಥಿ ಮಾಡ್ತಾರೆ. ಮೊದಲನೇ ಸಲ ಇಲ್ಲಿಗೆ ಕರ್ಕೊಂಡು ಬರುವಾಗಲೇ ಇವ್ಳು ಇಬ್ಬರು ಹುಡುಗರ ಜೊತೆ ರೂಮಿನಲ್ಲಿ ಇದ್ಲಂತೆ. ಈ ವಯಸ್ಸಿಗೇ ಇಷ್ಟು. ಇನ್ನೊಂದು ಹತ್ತು ವರ್ಷ ಬದುಕಿದ್ದರೆ, ಇಡೀ ಬೆಂಗ್ಳೂರೇ ತಿಂದು ಹಾಕ್ತಿದ್ಲು,’ ಅಂತ ತನ್ನ ಸಿಟ್ಟನ್ನೇಲ್ಲಾ ಕಾರಿ, ಫೋನ್ ಕುಕ್ಕಿದಳು.
`ಥತ್ತೇರಿ,’ ಅನ್ಕೊಂಡೆ. ನಾನು ಏನೋ ಕೇಳೋಕೆ ಹೋದ್ರೆ, ಈ ಹೆಂಗಸು ಇನ್ನೇನೋ ಮಾತಾಡ್ತದೆ. ಅಲ್ಲ, ಹದಿನೈದು ವರ್ಷದ ಆಂಗ್ಲೋ ಇಂಡಿಯನ್ ಹುಡುಗಿ ಇಬ್ಬರು ಹುಡುಗ್ರ ಜೊತೆ ಹೋಗಿದ್ಲು ಸರಿ. ದಾರಿ ತಪ್ಪಿದ್ಲು ಅನ್ಕೊಳ್ಳೋಣ. ಆದ್ರೆ, ಬಾಲಾಪರಾಧಿಗಳ ಕೇಂದ್ರದಲ್ಲಿ ಅವಳು ಸೀಮೇಎಣ್ಣೆ ಸುರ್ಕೊಂಡು ಬೆಂಕಿ ಹಾಕ್ಕೋಬೇಕು ಅಂತೇನೂ ಇಲ್ಲ ಅನ್ನಿಸ್ತು.
ಸರಿ, ಪೋಲಿಸರಿಗೇ ಕೇಳೋಣ ಅನ್ಕೊಂಡು ಫೋನ್ ಮಾಡಿದರೆ, ವಿಲ್ಸನ್ ಗಾರ್ಡನ್ ಮತ್ತೆ ಸಿದ್ದಾಪುರ ಪೋಲಿಸ್ ಮಧ್ಯ ಜ್ಯುರಿಸ್`ಡಿಕ್ಷನ್ ಪ್ರಾಬ್ಲಂ ಶುರುವಾಯ್ತು. ಕೊನೆಗೂ ಸಿದ್ದಾಪುರದ ಪೋಲಿಸ್ ಕಾನ್ಸ್ ಟೇಬಲ್ ಮಾತಾಡಲು ಒಪ್ಪಿಕೊಂಡ. ಫೋನಲ್ಲೇಕೆ ಅಂತ ನಾನು ಅಲ್ಲಿಗೇ ಹೋದೆ.
`ನಂಗ್ಯಾಕೋ ಆ ಹುಡುಗಿ ಬಗ್ಗೆ ಪಾಪ ಅನ್ನಿಸ್ತು ಸರ್. ತುಂಬಾನೇ ಮುದ್ದಾಗಿದ್ಲು. ಅದು ಸ್ಯುಸೈಡ್ ಅನ್ನೋದ್ರ ಬಗ್ಗೆ ನಿಮಗೆ ಸಂಶಯ ಬೇಡ. ಅವಳೇ ಚಿಕ್ಕ ಚೀಟಿಯಲ್ಲಿ ಬರೆದಿದ್ದಾಳೆ – ನಂಗೆ ಜೀವನದಲ್ಲಿ ಅಪ್ಪ, ಅಮ್ಮ ಇಬ್ಬರೂ ಸಿಗದಿದ್ರೂ ಪರವಾಗಿಲ್ಲ. ನಾನು ಸತ್ತ ಮೇಲೆ, ನನ್ನ ತಂಗಿ ಮತ್ತೆ ತಮ್ಮನಿಗೆ ಸಿಕ್ಕಿದರೂ ಸಾಕು ಅಂತ. ಹೆಣ ತಗೊಂಡು ಹೋಗೋಕ್ಕೆ ತಂದೆ, ತಾಯಿ ಇಬ್ಬರೂ ಬರಲಿಲ್ಲ. ಯಾರೋ ವಯಸ್ಸಾದವರು -- ಅಂಕಲ್ ಅನ್ಕೊಂಡು ಬಂದಿದ್ರು. ಅವರೇ ಬಾಡಿ ತಗೊಂಡು ಹೋದ್ರು,’ ಅಂದರು.
`ಸರ್, ಅವಳ ಫೋಟೋ ಇದೆಯಾ?’ ಅಂತ ಕೇಳ್ದೆ.
ಅಲ್ಲೇ ಫೈಲಿನಲ್ಲಿ ಹುಡುಕಿ, ಒಂದು ಪಾಸ್ ಪೋರ್ಟ್ ಸೈಜ್ ಫೋಟೋ ಕೊಟ್ಟರು.
ತುಂಬಾ ಮುದ್ದಾಗಿದ್ದ ಹುಡುಗಿ. ಶೆರಿಲ್ ಅಂತ ಹೆಸರಿರಬೇಕು. ವಯಸ್ಸಿಗೆ ಮೀರಿ ಬೆಳೆದಿದ್ದಳೇನೋ ಅನ್ನಿಸಿತು. `ಯಾಕೆ`? ಅಪ್ಪ, ಅಮ್ಮ ಸರಿ ಇರಲಿಲ್ವಾ?’ ಅಂತ ಕೇಳ್ದೆ.
`ನಮ್ಗೂ ಹಾಗೇ ಅನ್ನಿಸಿತು. ಬಾಡಿ ನೋಡೋಕೂ ಬರ್ಲಿಲ್ಲ, ಮತ್ತೆ ಅವಳ ಅಂಕಲ್ ಕೂಡ ಬಾಡಿಯನ್ನ ಮನೆಗೆ ತಗೊಂಡು ಹೋಗ್ಲಿಲ್ಲ. ಇಲ್ಲೇ ವಿಲ್ಸನ್ ಗಾರ್ಡನ್ ಹತ್ತಿರ ದಫನ್ ಮಾಡಿದ್ರಂತೆ. ಅದ್ಕೂ ಮನೆಯವರ್ಯಾರೂ ಬಂದಿರಲಿಲ್ಲ. ಆ ಮನುಷ್ಯನ ಮುಖ ನೋಡಿದ್ರೆ, ಇನ್ನುಳಿದ ಡೀಟೇಲ್ಸ್ ಕೇಳೋಕೆ ಮನಸ್ಸು ಬರ್ಲಿಲ್ಲ. ತಂದೆ, ತಾಯಿ ಈ ಊರಲಿಲ್ಲ ಅಂತ ಬರ್ಕೊಂಡ್ವಿ,’ ಅಂದರು.
ಯಾಕೋ ಎಲ್ಲಾ ಸರಿ ಇಲ್ಲ ಅನ್ನಿಸ್ತು. ಸರಿ, ಫೈಲ್ ನಲ್ಲಿದ್ದ ಅಡ್ರೆಸ್ ಬರ್ಕೊಂಡು ಸೀದ ಕಮೀಷನರ್ ಆಫೀಸಿಗೆ ಬಂದೆ. ಯಾಕೋ ಜಾಸ್ತಿ ಕ್ರೈಂ ಇಲ್ಲ ಅನ್ನಿಸ್ತು. ಯಾಕೆ ಜೇಬಿನಲ್ಲಿರೋ ಅಡ್ರೆಸ್ ಹುಡ್ಕೊಂಡು ಲಿಂಗರಾಜಪುರಂಗೆ ಹೋಗಬಾರ್ದು? ಅನ್ನಿಸ್ತು. ಸರಿ, ಬೈಕ್ ಹತ್ತಿದವನೇ, ಲಿಂಗರಾಜಪುರಂ ಕಡೆಗೆ ಹೊರಟೆ.
ಆಗಿನ್ನೂ ಲಿಂಗರಾಜಪುರಂ ಇಷ್ಟೊಂದು ಬೆಳೆದಿರಲಿಲ್ಲ. ಕೆಲವು ಕಡೆ ಹಳ್ಳಿಗಳಂತೆ ಇತ್ತು. ನನ್ನ ಕೈಲಿದ್ದ ಅಡ್ರೆಸ್ ಕೂಡ ಹಾಗೇ ಇತ್ತು. ಟಾರ್ ರಸ್ತೆ ಬಿಟ್ಟು ಮಣ್ಣಿನ ರಸ್ತೆಗೆ ಇಳಿದೆ. ದಾರಿ ಪಕ್ಕದಲ್ಲೆಲ್ಲಾ ಚರಂಡಿಗಳು ಹರಿಯುತ್ತಿದ್ದವು. ದೂರ ದೂರದಲ್ಲಿ ಒಂದೊಂದು ಮನೆಗಳು. ಒಂದೆರೆಡು ಗೂಡಂಗಡಿಗಳಲ್ಲಿ ಕೇಳಿಕೊಂಡು ಅರ್ಧ ಘಂಟೆ ಹುಡುಕಿದ ಮೇಲೆ, ಒಂದು ಗೂಡಂಗಡಿಯವನು ಅಲ್ಲಿಂದಲೇ ದೂರದಲ್ಲಿದ್ದ ಮನೆಗಳನ್ನು ತೋರಿಸಿದ. `ಅಲ್ಲಿ ಎರಡು ಮನೆಗಳಿವೆ. ಬಲಗಡೆಯದು, ಶೆರಿಲ್ ತಾಯಿ ಇರುವ ಮನೆ. ಅದಕ್ಕೆ ಸ್ವಲ್ಪ ಹಿಂದೆ ಇದೆಯಲ್ಲ, ಅದ್ರಲ್ಲಿ ತಂದೆ ಇರ್ತಾನೆ. ಹೋಗಿ ನೋಡಿ,’ ಅಂದ.
 ಬೈಕ್ ಅಲ್ಲೇ ನಿಲ್ಲಿಸಿ ನೆಡ್ಕೊಂಡು ಹೋದೆ. ಮೊದಲನೇ ಮನೆ ಹತ್ತಿರ ಹೋಗುತ್ತಲೇ ಬಾಗಿಲು ತೆಗೆದುಕೊಂಡಿತು. ದಪ್ಪಗೆ, ಎತ್ತರವಾಗಿದ್ದ ಹೆಂಗಸೊಬ್ಬಳು, ನೈಟ್ ಡ್ರೆಸ್ ಹಾಕಿಕೊಂಡು, `ಏನು?’ ಅನ್ನುವಂತೆ ನನ್ನ ಕಡೆ ನೋಡ್ತಿದ್ಲು. ಮುಖ ನೋಡಿದ ತಕ್ಷಣ, ಶೆರಿಲ್ ತಾಯಿ ಅನ್ಕೊಂಡೆ. 35-36 ವರ್ಷದ ಅವಳು, ನೋಡಲು ಸುಂದರವಾಗಿದ್ದಳು.
`ನಾನು ಇಂಡಿಯನ್ ಎಕ್ಸ್ ಪ್ರೆಸ್ ನಿಂದ ಬಂದಿದ್ದೀನಿ. ಶೆರಿಲ್ ವಿಷಯ ಮಾತಾಡ್ಬೇಕಿತ್ತು,’ ಅಂದೆ.
ಅಳಬಹುದು ಅನ್ಕೊಂಡಿದ್ದೆ... ಊಹೂಂ... ಸಿಟ್ಟಿಗೆದ್ದಳು. `ಅವಳಪ್ಪ ಅಂತ ಇದ್ದಾನಲ್ಲ, ಆ ಬಾಸ್ಟರ್ಡ್. ಅವನನ್ನ ಕೇಳು. ಇಪ್ಪತ್ನಾಲ್ಕು ಘಂಟೆ ಕುಡ್ಕೊಂಡು ಕೂತಿರ್ತಾನೆ. ಅವಳೇನೋ ಸುಖವಾಗಿ ಸತ್ತು ಹೋದ್ಲು. ನಾನಿನ್ನೂ ಬದುಕಿದ್ದೇನಲ್ಲಾ, ಈ ನರಕದಲ್ಲಿ,’ ಅಂದ್ಲು. ಮುಖದಲ್ಲಿ ನೋವೇ ಇರಲಿಲ್ಲ. ಮಗಳು ಸತ್ತಿದ್ದು ತನಗೆ ಸಂಬಂಧವೇ ಇಲ್ಲ ಅನ್ನುವ ಹಾಗಿದ್ದು, ತನ್ನ ಗಂಡನ ಬಗ್ಗೆ ವಾಚಾಮಗೋಚರವಾಗಿ ಏರಿದ ಸ್ವರದಲ್ಲಿ ಕೂಗಾಡಲು ಶುರು ಮಾಡಿದ್ಲು.
ಅವಳ ಕೂಗಾಟ ಕೇಳಿ, ಹಿಂದಿದ್ದ ಮನೆಯಿಂದ ಅವಳ ಗಂಡ ಹೊರಗಡೆ ಬಂದವನೇ, ಇವಳ ಮೇಲೆ ಕೂಗಾಡಲು ಶುರು ಮಾಡಿದ. ನಾನು ಯಾರು ಅಂತ ಗೊತ್ತಿಲ್ಲದಿದ್ದರೂ, ನನ್ನ ಹತ್ತಿರ ದೂರತೊಡಗಿದ. `ಇವಳಿದ್ದಾಳಲ್ಲ... ದೊಡ್ಡ ಸೂಳೆ. ದಿನಕ್ಕೆ ಎಷ್ಟು ಜನಗಳ ಜೊತೆ ಮಲಗ್ತಾಳೆ ಅಂತ ಅವಳಿಗೇ ಗೊತ್ತಿಲ್ಲ. ನನ್ನ ಮೇಲೆ ಕೂಗಾಡ್ತಳೆ. ಇವಳಿಗೆ ಮಕ್ಕಳನ್ನ ನೋಡ್ಕೊಳೋಕ್ಕೆ ಬಂದ್ರೆ ತಾನೆ, ನನ್ನ ಬಗ್ಗೆ ಮಾತಾಡೋದು,’ ಅಂತ ಕೂಗಾಡಿದ.
ಒಂದೇ ಕ್ಷಣದಲ್ಲಿ ಆ ಜಾಗ ರಣರಂಗವಾಯ್ತು. ಇಬ್ಬರೂ ಕೂಗಾಡಲು ಶುರು ಮಾಡಿದ್ರು. ಸುತ್ತಮುತ್ತಲಿನ ಯಾವ ಮನೆಯವರೂ ಹೊರಗೆ ಬರಲಿಲ್ಲ. ಅಲ್ಲೇ ಆಟಾಡುತ್ತಿದ್ದ ಎರಡು ಮಕ್ಕಳು ಮಾತ್ರ ಹೋ.... ಅಂತ ಅಳೋಕೆ ಶುರು ಮಾಡಿದ್ವು. ನಾನ್ಯಾಕಾದರೂ ಇಲ್ಲಿಗೆ ಬಂದ್ನೋ, ಅಂತ ಅನ್ನಿಸೋಕ್ಕೆ ಶುರುವಾಯ್ತು. ಇಬ್ಬರೂ ಕಚ್ಚಾಡುತ್ತಿರುವಾಗಲೇ, ಅಲ್ಲಿಂದ ಮೆಲ್ಲಗೆ ಕಾಲು ತೆಗೆದೆ.
ಮೆಲ್ಲಗೆ ನೆಡ್ಕೊಂಡು ಗೂಡಂಗಡಿಯ ಹತ್ತಿರ ಬಂದು, ಒಂದು ಸಿಗರೇಟ್ ಹಚ್ಚಿಕೊಂಡೆ. `ಅವರಿಬ್ಬರೂ ಹಾಗೇ ಸರ್, ಸರಿಯಿಲ್ಲ. ಅದಕ್ಕೇ ಆ ಮಗು ಬೆಂಕಿ ಹಾಕಿಕೊಂಡಿದ್ದು,’ ಅಂತ ಗೂಡಂಗಡಿಯವನು ಹೇಳಿದ.
`ಅವಳು ಸತ್ತು ಹೋದ್ರೂ ಇವರಿಬ್ಬರು ಜಗಳ ಆಡ್ತಿದ್ದಾರಲ್ರೀ?’ ಅಂದೆ.
`ಅವಳೇನು. ಆ ಇನ್ನೆರಡು ಮಕ್ಕಳು ಸತ್ರೂ ಇವರೇನೂ ಸರಿಯಾಗೊಲ್ಲ, ಬಿಡಿ. ದರಿದ್ರದವರು. ಇವರಿಬ್ಬರಿಂದ, ಈ ಏರಿಯಾದಲ್ಲಿ ಯಾರಿಗೂ ನೆಮ್ಮದಿಯಿಲ್ಲ. ಪಾಪ, ಆ ಅಂಕಲ್ ಸ್ವಲ್ಪನಾದ್ರೂ ಈ ಮಕ್ಕಳನ್ನ ನೋಡ್ಕೋತ್ತಾರೆ. ಅವ್ರ ಜೊತೆನೂ ಇವರಿಬ್ಬರು ಜಗಳ ಆಡ್ತಿದ್ರು. ಶೆರಿಲ್ ಸತ್ತಳು ಅಂತ ಗೊತ್ತಾದ ತಕ್ಷಣ ಅವರೇ ಹೋಗಿ, ಬಾಡಿನ ದಫನ್ ಕೂಡ ಮಾಡಿದ್ರು. ಹಾಗೆ ನೋಡದ್ರೆ, ಅಂಕಲ್ ಗೂ, ಇವರಿಗೂ ಸಂಬಂಧನೇ ಇಲ್ಲ,’ ಅಂದ.
`ಮತ್ತೆ ಅಂಕಲ್ ಅಂತ ಯಾಕೆ ಕರೀತಿದ್ರು?’ ಅಂತ ಕೇಳ್ದೆ.
`ಅದೇನಿಲ್ಲ. ಅವ್ರು ಒಬ್ರೇ ಇರೋದು. ಹೆಂಡತಿ, ಮಕ್ಕಳು ಯಾರೂ ಇಲ್ಲ. ಈ ಮೂರು ಮಕ್ಕಳಿಗೆ ಆಗಾಗ ಊಟ, ತಿಂಡಿ ಕೊಡ್ತಿದ್ರು. ಇನ್ನು ಈ ಎರಡು ಮಕ್ಕಳು ಉಪವಾಸ ಸಾಯ್ತಾವೆ, ಅಷ್ಟೆ,’ ಅಂದ.
`ಸರಿ, ಈ ಶೆರಿಲ್ ಹ್ಯಾಗೆ?’ ಅಂತ ಕೇಳ್ದೆ.
`ತುಂಬಾ ಒಳ್ಳೆ ಹುಡುಗಿ ಸರ್, ಎಲ್ಲಾರ ಹತ್ರ ನಕ್ಕೊಂಡು, ಮಾತಾಡ್ಕೊಂಡು ಇರ್ತಿದ್ಲು. ಎಲ್ಲರಿಗೂ ಚಿಕ್ಕ ಪುಟ್ಟ ಕೆಲಸ ಮಾಡಿಕೊಟ್ಟು, ಅವರೇನಾದ್ರು ಕೊಟ್ರೆ, ತಮ್ಮ, ತಂಗಿ ಜೊತೆ ಹಂಚಿಕೊಂಡು ತಿಂತಿದ್ಲು. ಅಪ್ಪ, ಅಮ್ಮ ಜಗಳ ಶುರು ಮಾಡಿದ್ರೆ, ಮಧ್ಯ ಹೋಗಿ ಬಿಡಿಸೋಕ್ಕೆ ಟ್ರೈ ಮಾಡಿ, ಇಬ್ಬರು ಕೈಲೂ ಪೆಟ್ಟು ತಿಂತಿದ್ಲು. ನೆನಸ್ಕೊಂಡ್ರೆ ಹೊಟ್ಟೆ ಉರಿಯುತ್ತೆ,’ ಅಂದ.
`ಮತ್ತೆ, ಈ ಪೋಲಿಸ್ ಕಂಪ್ಲೇಂಟ್ ನಲ್ಲಿ ಇವಳು ಇಬ್ಬರು ಹುಡುಗರ ಜೊತೆ ಸಿಕ್ಕಿಹಾಕಿಕೊಂಡಿದ್ಲು ಅಂತ ಇದೆಯಲ್ಲಾ?’ ಅಂದೆ.
`ಅದೊಂದು ದೊಡ್ಡ ಕಥೆ ಸರ್. ಶೆರಿಲ್ ನ ಎಲ್ಲಾ ಮನೆಯವರೂ ಇಷ್ಟ ಪಡ್ತಿದ್ರು. ಅವಳು ನಾಲ್ಕನೇ ಕ್ಲಾಸೋ, ಐದನೇ ಕ್ಲಾಸೋ ಇದ್ದಾಗ, ಅವಳಪ್ಪ, ಅಮ್ಮ ಸ್ಕೂಲ್ ಬಿಡಿಸಿದ್ರು. ಅಪ್ಪ ಕುಡಿದು ಎಲ್ಲೆಲ್ಲೋ ಬಿದ್ದಿರ್ತಿದ್ದ. ಅಮ್ಮನ ಜೊತೆ ಬೇರೆ ಬೇರೆ ಗಂಡಸರೆಲ್ಲ ಬಂದು ಇರ್ತಿದ್ರು. ಹಾಗಾಗಿ, ಎರಡು ಮನೆ ಇದ್ದೂ, ಮಕ್ಕಳಿಗೆ ಮನೆ ಇಲ್ಲದ ಹಾಗೆ ಇತ್ತು. ಹಗಲೆಲ್ಲ ಅಮ್ಮನ ಮನೆ, ಅಂಕಲ್ ಮನೆ ಅಥವಾ ರಸ್ತೆಯಲ್ಲಿ ಆಟ ಆಡ್ತಿದ್ದ ಮಕ್ಕಳು, ರಾತ್ರಿ ಅಪ್ಪನ ಮನೆಯಲ್ಲಿ ಮಲ್ಕೊಳ್ತಿದ್ರು. ಶೆರಿಲ್ ಏನಾದ್ರು ಮಾಡಿ ತಮ್ಮ ಮತ್ತೆ ತಂಗಿಗೆ ತಿನ್ನೋಕೆ ವ್ಯವಸ್ತೆ ಮಾಡ್ತಿದ್ಲು.’
ಬೇರೆಯವರಿಗಾದರೆ ಸಂಸಾರಗಳಿದ್ವು. ಸಂಸಾರವಿಲ್ಲದ ಅಂಕಲ್ ಮಾತ್ರ ಈ ಮಕ್ಕಳನ್ನು ಸ್ವಲ್ಪ ಜಾಸ್ತಿ ಹಚ್ಚಿಕೊಂಡಿದ್ರು. ಆದ್ರೆ, ಅವರಿಗೂ ಹಣಕಾಸಿನ ಅನುಕೂಲ ಏನೂ ಜಾಸ್ತಿ ಇರಲಿಲ್ಲ. ಹಾಗಾಗಿ, ಕೈಯಲ್ಲಿ ಆದಷ್ಟು ಸಹಾಯ ಮಾಡ್ತಿದ್ರು. ಒಂದ್ಸಲ, ಶೆರಿಲ್ ತಮ್ಮನ ಹುಟ್ಟಿದ ಹಬ್ಬ ಹತ್ತಿರ ಬಂದಾಗ, ಅಂಕಲ್ ಹತ್ತಿರ ಹೋದ ಶೆರಿಲ್, ತಮ್ಮನಿಗೆ ಹುಟ್ಟಿದ ಹಬ್ಬಕ್ಕೆ ಹೊಸ ಬಟ್ಟೆ ಮತ್ತೆ ಕೇಕ್ ತರಬೇಕು ಅಂತ ಕೇಳಿದ್ದಾಳೆ. ಅದಕ್ಕಿಂತ ಮುಂಚೆ ಅಪ್ಪ ಮತ್ತು ಅಮ್ಮನ ಕೈಲಿ ಕೇಳಿ ಪೆಟ್ಟು ತಿಂದಿದ್ದಾಳೆ. ಆದರೆ, ಅಂಕಲ್ ಕೈಲಿ ದುಡ್ಡಿರಲಿಲ್ಲ. ಏನಾಯ್ತೋ ಏನೋ, ಶೆರಿಲ್ ಅಂಕಲ್ ಕೈಲಿದ್ದ ಚಿನ್ನದ ಉಂಗುರು ಕದ್ದಿದ್ದಾಳೆ.
ಮುಂದೆ ಏನು ಮಾಡ್ಬೇಕು ಅಂತ ಗೊತ್ತಾಗದೆ, ನೇರವಾಗಿ ದೊಡ್ಡ ಬೇಕರಿ ಒಂದಕ್ಕೆ ಹೋಗಿ, ಈ ಉಂಗುರಕ್ಕೆ ಬದಲು ಒಂದು ಬರ್ತ್ ಡೇ ಕೇಕ್ ಕೊಡ್ತೀರಾ? ಅಂತ ಕೇಳಿದ್ದಾಳೆ. ಅನುಮಾನ ಬಂದ ಬೇಕರಿಯವನು ಪೋಲಿಸರಿಗೆ ಶೆರಿಲ್ ನನ್ನು ಹಿಡಿದು ಕೊಟ್ಟಿದ್ದಾನೆ. ಪೋಲಿಸ್ ಕೇಳಿದ ತಕ್ಷಣ, ಶೆರಿಲ್ ಈ ಉಂಗುರವನ್ನು ತನ್ನ ಅಂಕಲ್ ತನಗೆ ಕೊಟ್ಟಿದ್ದು ಅಂತ ಸುಳ್ಳು ಹೇಳಿದ್ದಾಳೆ. ಪೋಲಿಸರು, ಶೆರಿಲ್ ನನ್ನು ಅಂಕಲ್ ಹತ್ತಿರ ಕರೆದುಕೊಂಡು ಹೋಗಿದ್ದಾರೆ. ಶೆರಿಲ್ ಮತ್ತೆ ಉಂಗುರು ನೋಡಿದ ತಕ್ಷಣ, ಅಂಕಲ್ ಗೆ ಏನಾಗಿದೆ ಅಂತ ಗೊತ್ತಾಗಿದೆ. `ಹೌದು, ಇದು ನನ್ನದೇ ಉಂಗುರ. ಇವಳಿಗೆ ಕೊಟ್ಟಿದ್ದೆ. ಇದನ್ಯಾಕೆ ಮಾರೋಕೆ ಹೊರಟಳು ಅಂತ ಗೊತ್ತಿಲ್ಲ,’ ಅಂತ ಹೇಳಿದ್ದಾರೆ. ಅದನ್ನು ಕೇಳಿದ ಪೋಲಿಸರು, ಶೆರಿಲ್ ನನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ.
ಆದರೆ, ಪೋಲಿಸ್ ಶೆರಿಲ್ ಕರ್ಕೊಂಡು ಬಂದಿದ್ದು, ಮತ್ತೆ ಉಂಗುರದ ವಿಚಾರ ಸುತ್ತ ಮುತ್ತಲಿನವರಿಗೆ ಗೊತ್ತಾಗಿದೆ. ಅಂಕಲ್, ಶೆರಿಲ್ ನನ್ನು ಸಮಾಧಾನ ಮಾಡಿ, ಅವಳ ತಮ್ಮನ ಹುಟ್ಟು ಹಬ್ಬಕ್ಕೆ ಕೇಕ್ ತೆಗೆಸಿಕೊಟ್ಟಿದ್ದಾರೆ. ಶೆರಿಲ್ ಮತ್ತು ಅಂಕಲ್ ಈ ವಿಷಯವನ್ನು ಮರೆತರೂ, ಸುತ್ತ ಮುತ್ತಲಿನ ಮನೆಯವರು ಮರೆಯಲಿಲ್ಲ. ಅಲ್ಲಿಂದ ಮುಂದೆ, ಶೆರಿಲ್ ನನ್ನು ಯಾರೂ ಮನೆಯೊಳಗೆ ಸೇರಿಸುತ್ತಿರಲಿಲ್ಲ. ಅವರ ಮಕ್ಕಳನ್ನೂ ಅವಳ ಜೊತೆ ಆಟವಾಡಲು ಬಿಡುತ್ತಿರಲಿಲ್ಲ.
ಅಲ್ಲಿಂದ ಮುಂದೆ ಶೆರಿಲ್ ತುಂಬಾ ಗಂಭೀರವಾಗತೊಡಗಿದಳು. ಅಂಕಲ್ ಇಲ್ಲದ ಸಮಯದಲ್ಲಿ ತಮ್ಮ, ತಂಗಿಯರ ಊಟ, ತಿಂಡಿಗೂ ತೊಂದರೆಯಾಗತೊಡಗಿತು. ಆಗಾಗ, ಅಂತಾ ದಿನಗಳಲ್ಲಿ ಹೊರಗಡೆ ಏನಾದ್ರು ಕೆಲಸ ಸಿಗುತ್ತಾ ಅಂತ ಏರಿಯಾದಿಂದ ಹೊರಗಡೆ ಹೋಗ್ತಿದ್ಲು. ಒಂದೆರೆಡು ಸಲ ಹೋದಾಗ, ಏನೂ ಕೆಲಸ ಸಿಗಲಿಲ್ಲ ಅಂತ ನಿರಾಶೆಯಿಂದ ಬಂದಾಗ, ಅಂಕಲ್ ಅವಳಿಗೆ ಬೈದಿದ್ದರಂತೆ. ಇನ್ನೊಂದ್ಸಲ ಹೊರಗಡೆ ಹೋಗಿದ್ದು ಗೊತ್ತಾದ್ರೆ, ನಿನ್ನ ಮಾತಾಡಿಸೋಲ್ಲ, ಅಂತಾನೂ ಹೇಳಿದ್ದರಂತೆ.
ಅವತ್ತೇನಾಯ್ತೋ, ಏನೋ, ಶೆರಿಲ್ ಮತ್ತೆ ಹೊರಗಡೆ ಹೋಗಿದ್ದಾಳೆ. ಫ್ರೇಜರ್ ಟೌನ್ ಹತ್ತಿರ ಹೋಗಿ, ಯಾವುದೋ ಅಂಗಡಿಯಲ್ಲಿ ಕೆಲಸ ಏನಾದ್ರೂ ಖಾಲಿ ಇದೆಯಾ? ಅಂತ ಕೇಳಿದ್ದಾಳೆ. ಅವರು ಇಲ್ಲ ಅಂತ ಹೇಳ್ದಾಗ, ನಿರಾಶೆಯಿಂದ ಅಲ್ಲಿಂದ ಹೊರಟಿದ್ದಾಳೆ. ಆಗ ಇಬ್ಬರು ಹುಡುಗರು ಬಂದು, ಇಲ್ಲೇ ಹತ್ತಿರದ ಅಂಗಡಿಯಲ್ಲಿ ಕೆಲಸ ಖಾಲಿ ಇದೆ ಅಂತ ಹೇಳಿದ್ದಾರೆ. ನಿಜ ಅನ್ಕೊಂಡು ಅವರ ಜೊತೆ ನೆಡ್ಕೊಂಡು ಹೊರಟಿದ್ದಾಳೆ ಅಷ್ಟೆ, ಅಷ್ಟರಲ್ಲಿ ಅಲ್ಲೇ ಬರುತ್ತಿದ್ದ ಪೋಲಿಸರಿಗೆ ಅನುಮಾನ ಬಂದಿದೆ. ಏನು, ಎತ್ತ ಅಂತ ವಿಚಾರಿಸುವಾಗ, ಹುಡುಗರು ಜಾಗ ಖಾಲಿ ಮಾಡಿದ್ದಾರೆ. ಶೆರಿಲ್ ಮಾತ್ರ ಇದ್ದ ವಿಷಯ ಹೇಳಿದ್ದಾಳೆ.
`ಇಬ್ಬರು ಹುಡುಗರ ಜೊತೆ ರೂಮಿನಲ್ಲಿ ಸಿಕ್ಕಿದ್ದು ಸುಳ್ಳು ಸರ್. ಪೋಲಿಸರು ಶೆರಿಲ್ ಕರ್ಕೊಂಡು ಇಲ್ಲಿಗೆ ಬಂದ್ರು. ಯಥಾ ಪ್ರಕಾರ, ಪೋಲಿಸರ ಎದುರ ಅವಳ ಅಪ್ಪ, ಅಮ್ಮ ಜಗಳ ಮಾಡೊಕೆ ಶುರು ಮಾಡಿದ್ರು. ಇವರ ಜಗಳ ನೋಡೋಕ್ಕಾಗ್ದೆ ಪೋಲಿಸರು ಅವಳನ್ನ ರಿಮ್ಯಾಂಡ್ ಹೋಂ ಗೆ ಕಳಿಸ್ತೀವಿ ಅಂದ್ರು. ಅಂಕಲ್ ಪರಿಪರಿಯಾಗಿ ಬೇಡ್ಕೊಂಡ್ರೂ, ಪೋಲಿಸರು ಬಿಡಲಿಲ್ಲ. ಅವಳ ಅಪ್ಪ, ಅಮ್ಮಂಗೇ ಬೇಡ್ದವಳನ್ನ, ನೀವೇನು ನೋಡ್ಕೋತ್ತೀರ? ನಾಳೆ ಏನಾದ್ರೂ ಹೆಚ್ಚು ಕಡಿಮೆ ಆದ್ರೆ, ನಮ್ಮ ತಲೆಗೆ ಬರುತ್ತೆ, ಅಂತ ಹೇಳಿ ಕರ್ಕೊಂಡೇ ಹೋದ್ರು,’ ಅಂದ ಅಂಗಡಿಯವನು.
ಅಲ್ಲಿಂದ ಮುಂದೆ ಶೆರಿಲ್ ನನ್ನು ಯಾರೂ ನೋಡಲಿಲ್ಲ. ಮೂರ್ನಾಲ್ಕು ತಿಂಗಳು ಕಳೆದ ಮೇಲೆ, ರಿಮ್ಯಾಂಡ್ ಹೋಂ ನಿಂದ ತಪ್ಪಿಸಿಕೊಂಡಿದ್ದಾಳೆ. ಆದ್ರೆ, ಎಲ್ಲಿಗೆ ಹೋಗಬೇಕು ಅಂತ ಗೊತ್ತಾಗದೆ, ಸಾಯಂಕಾಲದೊಳಗೆ ಪೋಲಿಸರ ಕೈಲಿ ಸಿಕ್ಕಿಹಾಕಿಕೊಂಡಿದ್ದಾಳೆ. ಮತ್ತೆ ವಾಪಾಸ್, ರಿಮ್ಯಾಂಡ್ ಹೋಂ ಗೆ. ಮತ್ತೊಂದ್ಸಲ ತಪ್ಪಿಸಿಕೊಳ್ಳೋಕೆ ಪ್ರಯತ್ನ ಮಾಡಿದ್ದಾಳೆ, ಆದ್ರೆ ಸಿಕ್ಕಿಹಾಕಿಕೊಂಡಿದ್ದಾಳೆ.
ಮತ್ತೆರೆಡು ತಿಂಗಳು ಕಳೆದಿದೆ. ಒಂದ್ಸಲ ಓಡಿ ಹೋದವಳು ಅಂತ, ಸಾಯಂಕಾಲ ಕಾಂಪೌಂಡಿನೊಳಗೆ ವಾಕಿಂಗ್ ಕೂಡ ಕಟ್ ಮಾಡಿದ್ದರಂತೆ. ಆ ದಿನ ಸಾಯಂಕಾಲ, ಎಲ್ಲರೂ ಕಟ್ಟಡದ ಹೊರಗೆ ತಿರುಗಾಡುತ್ತಿದ್ದಾಗ, ಬಾತ್ ರೂಂಗೆ ಹೋಗಿ, ಸೀಮೆಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡಿದ್ದಾಳೆ.
ಅಂಗಡಿಯವನು ಕಥೆ ಹೇಳಿ ಮುಗಿಸಿದ ತಕ್ಷಣ ಕೇಳಿದೆ: `ಅಂಕಲ್ ಮನೆ ಯಾವುದು?’
ಎದುರು ಮನೆಯನ್ನು ತೋರಿಸುತ್ತಾ, ಅಂಗಡಿಯವನು ಹೇಳ್ದ: `ಅದರಲ್ಲಿದ್ದರು. ನೆನ್ನೆ ದಫನ್ ಮುಗಿಸಿ ಬಂದವರೇ, ಮನೆ ಖಾಲಿ ಮಾಡಿ ಹೋದರು. ಕಮ್ಮನಹಳ್ಳಿಗೆ ಹೋಗ್ತೀನಿ ಅಂದ್ರು. ತುಂಬಾ ಅಳ್ತಿದ್ರು,’ ಅಂದ.
ಈ ಕಥೆ ಎಲ್ಲಿ ಶುರು ಮಾಡ್ಬೇಕು, ಎಲ್ಲಿ ಕೊನೆ ಮಾಡ್ಬೇಕು ಅಂತ ಅರ್ಥಾನೇ ಆಗ್ಲಿಲ್ಲ. ಮತ್ತೆ, ಈ ಥರದ ಏರಿಯಾದಲ್ಲಿ ಆದ ಹ್ಯೂಮನ್ ಇಂಟರೆಸ್ಟ್ ಸ್ಟೋರಿಗಳು, ನಮ್ಮ ಪೇಪರ್ ನಲ್ಲಿ ಅಚ್ಚಾಗುವುದು ಸ್ವಲ್ಪ ಅನುಮಾನವೇ ಆಗಿತ್ತು. ಇದನ್ನ ಆಫೀಸಿನಲ್ಲಿ ಹ್ಯಾಗೆ ಹೇಳ್ಬೇಕೂ ಅಂತ ಯೋಚನೆ ಮಾಡ್ಕೊಂಡು ವಾಪಾಸ್ ಬಂದೆ.
ಆಫೀಸಿಗೆ ಬಂದ ತಕ್ಷಣ ಬ್ಯುರೋ ಛೀಫ್ ಮಟ್ಟೂ ಕೇಳಿದ್ರು: `ವಿನಯ್, ಎನಿಥಿಂಗ್ ಇಂಪಾರ್ಟೆಂಟ್ ಇನ ಕ್ರೈಂ?’ ಅಂತ.
`ನೋ ಸರ್... ಬಟ್ ದೆರ್ ಇಸ್ ಎ ಸ್ಟೋರಿ ಆನ್ ಕುದ್ರೇಮುಖ್. ಐ ಹ್ಯಾವ್ ಟು ಫೈಲ್ ಇಟ್ ನೌ,’ ಅಂದೆ.
`ನೋ... ಡೋಂಟ್ ಫೈಲ್ ಇಟ್ ಟುಡೇ.... ದೆರ್ ಇಸ್ ಸೆಕೆಂಡ್ ಸ್ಯಾಟರ್ ಡೇ ಆ್ಯಂಡ್ ಸಂಡೇ ಕಮಿಂಗ್. ಟುಡೇ, ದೆರ್ ಆರ್ ಸಫೀಶಿಯೆಂಟ್ ಸ್ಟೋರೀಸ್. ಯುವರ್ ಸ್ಟೋರಿ ವಿಲ್ ಗೆಟ್ ಗುಡ್ ಡಿಸ್ ಪ್ಲೇ ಆನ್ ಲೀನ್ ಡೇಸ್,’ ಅಂದ್ರು.
ಈ ಕಥೆಯನ್ನು ಹೇಳ್ಬೇಕು ಅಂತ ಎಷ್ಟೇ ಪ್ರಯತ್ನ ಮಾಡಿದ್ರೂ, ಬಾಯಿಂದ ಹೊರಗೆ ಬರಲಿಲ್ಲ. ಆದರೆ, ಮುಂದೆ ಅನೇಕ ದಿನಗಳವರೆಗೆ, ಆ ಪಾಸ್ ಪೋರ್ಟ್ ಸೈಜಿನ ಫೋಟೋದಲ್ಲಿನ ಮುದ್ದು ಮುಖ ಆಗಾಗ ನೆನಪಾಗುತ್ತಿತ್ತು.
ಆ ಹುಡುಗಿಗೆ ರಿಮ್ಯಾಂಡ್ ಹೋಂ ನಿಂದ ತಪ್ಪಿಸಿಕೊಳ್ಳೋಕೆ ಇನ್ನೊಂದು ಛಾನ್ಸ್ ಸಿಗಬಾರದಿತ್ತಾ? ಅಂತ ಅನ್ನಿಸ್ತಿತ್ತು.


ಮಾಕೋನಹಳ್ಳಿ ವಿನಯ್ ಮಾಧವ್

2 ಕಾಮೆಂಟ್‌ಗಳು: