ಬುಧವಾರ, ಫೆಬ್ರವರಿ 22, 2017

ಮಡುಗಟ್ಟಿದ ಮೌನಗಳು



ಮೌನಗಳು ಮಾತಾಡಿದಾಗ......



ಬೆಳಗಿನ ಜಾವ ಒಂದೂವರೆ ದಾಟಿತ್ತು. ಬೆಳಗ್ಗೆ ಬೇಗ ಎದ್ದು ಆಫೀಸಿಗೆ ಹೊರಡುವುದಿದ್ದರೂ, ಪುಸ್ತಕ ಮುಗಿಸಿಯೇ ಮಲಗಬೇಕೂಂತ ಹಠ ತೊಟ್ಟಿದ್ದೆ. ಜೆಫ್ರಿ ಆರ್ಚರ್ ನ ಸಣ್ಣ ಕಥೆ: ಕ್ರಿಸ್ಟೀನಾ ರೋಸಾಂತಿಲ್.... ಅದರ ನಂತರ, ಪುಸ್ತಕದಲ್ಲಿ ಓದಲು ಇನ್ನೂ ಮೂರ್ನಾಲ್ಕು ಕಥೆಗಳಿದ್ದವು. ಕಥೆಯ ಕೊನೆಯ ವಾಕ್ಯ ಮುಗಿಯುವಾಗ, ನನಗರಿವಿಲ್ಲದೆ ಫಳ್ಳನೆ ಕಣ್ಣಿಂದ ನೀರು ಹರಿಯಲಾರಂಭಿಸಿತು.

ಇನ್ನೊಂದು ಮಂಚದಲ್ಲಿ ಮಲಗಿದ್ದ ಸ್ನೇಹಿತನಿಗೆ ತೊಂದರೆಯಾಗಬಾರದು ಅಂತ ಕೋಣೆಯಿಂದ ಎದ್ದು ಹೊರಬಂದೆ. ಯಾಕೋ ತಡೆಯಲಾಗಲಿಲ್ಲ. ಒಬ್ಬ ಮುದುಕನ ಮೂವತ್ತು ವರ್ಷಗಳ ಮೌನ ಮನಸ್ಸನ್ನು ಕಲಕಿಬಿಟ್ಟಿತ್ತು.

ಹಾಗೇ ಯೋಚನೆ ಮಾಡಿದೆ... ನಾವು ಹೈಸ್ಕೂಲಿನಲ್ಲಿದ್ದಾಗ, ಇಂಗ್ಲಿಷ್ ಮೇಷ್ಟ್ರು ಎಂ ರಾಮರಾವ್, ಕಾಬೂಲಿವಾಲ ಪಾಠ ಮಾಡುತ್ತಿದ್ದರು. ಕಥೆಯ ಕೊನೆಯ ಘಟ್ಟದಲ್ಲಿ ಕಾಬೂಲಿವಾಲ ಮೌನವಾಗಿ ತನ್ನ ಪುಟ್ಟ ಮಗಳ ಹಸ್ತದ ಗುರುತನ್ನು ನೋಡುತ್ತಾ ಕುಳಿತ ಪ್ರಸಂಗವನ್ನು ವಿವರಿಸುವಾಗ, ಇಡೀ ತರಗತಿಯೇ ಕಣ್ಣೀರಲ್ಲಿ ಮುಳುಗಿತ್ತು. ಖುಶ್ವಂತ್ ಸಿಂಘ್ ಬರೆದ `ಎ ಲವ್ ಸ್ಟೋರಿ ಇನ್ ಲಂಡನ್ಇರಬಹುದು, ಓ ಹೆನ್ರಿಯ ಕಥೆಗಳಿರಬಹುದು -- `ಮೌನಬಹಳವಾಗಿ ಕಾಡುತ್ತದೆ.

ಕಥೆಗಳಲ್ಲೇ ಇಷ್ಟೊಂದು ಭಾವುಕತೆಯಾದರೆ, ಕ್ಯಾರೆಲ್ ಮತ್ತು ಆಯೆಲೀನಾರ ಪರಿಸ್ಥಿತಿ ಏನಾಗಿರಬಹುದು? ವಿಮಾನ ಏರುವ ಮುನ್ನ, ಅಮ್ಮ ಕ್ಯಾರೆಲ್ಲಳ ಕೈ ಚೀಲದೊಳಗೆ ಒಂದು ನೋಟ್ ಪುಸ್ತಕ ಹಾಕಿ, ಆಮೇಲೆ ಓದು ಅಂತಾಳೆ. ಆಯೆಲೀನಾಗೆ ಪುಸ್ತಕ ಕೊಟ್ಟು, ಪುರುಸೊತ್ತಾದಗ ಓದು ಅಂತಾಳೆ. ಓದಿದಾಗ, ಐವತ್ತು ವರ್ಷಗಳ ಹಿಂದೆ ತಮ್ಮ ತಾಯಿ ಯುದ್ದಕೈದಿಯಾಗಿದ್ದಾಗ, ಸತತವಾಗಿ ಮೂರು ತಿಂಗಳು ಜಪಾನಿ ಸೈನಿಕರು ಅತ್ಯಾಚಾರವೆಸಗಿದ ವಿಷಯ ಅನಾವರಣವಾಗುತ್ತದೆ. ಆಕೆ, ಜಪಾನಿ ಸೈನಿಕರಿಗೆ ಸುಖದಾಯಿ ಹೆಂಗಸಾಗಿ ಉಪಯೋಗಿಸಲ್ಪಟ್ಟಿದ್ದಳು. ದಿನಗಟ್ಟಲೆ, ಲೆಖ್ಖವಿಲ್ಲದಷ್ಟು ಸೈನಿಕರು ತಮ್ಮ ಲೈಂಗಿಕ ತೃಷೆಯನ್ನು ಅಮಾನುಷವಾಗಿ ತೀರಿಸಿಕೊಂಡಿದ್ದರು.

ಯಾನ್ ರಫ್ ಓಹರ್ನ್, ತನ್ನ `ಅರೆಶತಮಾನದ ಮೌನವನ್ನು ಮುರಿಯುವುದು ಹೀಗೆ.

ಯುದ್ದ ಕ್ರೌರ್ಯದ ಭಯಾನಕತೆಯನ್ನು ಈ ಪುಸ್ತಕಕ್ಕಿಂತ ಚೆನ್ನಾಗಿ ವಿವರಿಸಲು ಸಾಧ್ಯವೇ? ನನಗೆ ಗೊತ್ತಿಲ್ಲ. ಸುಖದಾಯಿಯಾಗಿ ತನ್ನನ್ನು ಉಪಯೋಗಿಸಿದ ಜಪಾನಿಯರು ತನಗೆ ಹೂವಿನ ಹೆಸರಿಟ್ಟಿದ್ದರಿಂದ, ಇಡೀ ಜೀವನ ಹೂವನ್ನು ಸಹಿಸಿಕೊಳ್ಳದ ಪರಿಸ್ಥಿತಿಯಲ್ಲಿ ಯಾನ್ ಬದುಕುತ್ತಾಳೆ. ಜಪಾನಿಯರ ಕ್ಯಾಂಪ್ ಗಳಲ್ಲಿ ಸಾವು ಸಹಜ ಕ್ರಿಯೆಯಾಗಿತ್ತಂತೆ.... ಮೈ ನಡುಗಿ ಹೋಯಿತು.

ಯುದ್ದಕ್ಕಿಂತ ಮೊದಲು ಗೆದೊಂಗ್ ಸೊಂಗೋದಲ್ಲಿದ್ದ ಜಪಾನಿ ದಂಪತಿಗಳು ಪುಟ್ಟ ಯಾನ್ ಳನ್ನು ಎಷ್ಟೊಂದು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರುಆದರೆ, ಅದೇ ಸಮಯದಲ್ಲಿ, ಇವರು ಜಪಾನ್ ದೇಶದ ಗುಪ್ತಚರರಾಗಿ ಕೆಲಸ ಮಾಡುತ್ತ, ಇಂಡೋನೇಸಿಯಾದಲ್ಲಿದ್ದ ಡಚ್ ಗಳ ಮೇಲಿನ ಕ್ರೌರ್ಯಕ್ಕೂ ಕಾರಣರಾಗುತ್ತಾರೆ. ಇಂಥಹ ಸಂದರ್ಭದಲ್ಲಿ ಮಾನವೀಯತೆಯ ಮೇಲೆ ನಂಬಿಕೆ ಉಳಿಯಲು ಸಾಧ್ಯವೇ?

ಆದರೆ, ಜಪಾನಿಯರ ಕ್ರೌರ್ಯ ತಪ್ಪಿಸಿಕೊಳ್ಳಲು ಸ್ವಯಿಚ್ಚೆಯಿಂದ ಸುಖದಾಯಿಯಾದ ಈಘೋನ್ಯಾಳ ಮಾನವೀಯತೆ ನೋಡಿದಾಗ, ಒಂದು ವಾರವಿಡೀ ಇವಳ ಕೋಣೆಯಲ್ಲಿ ಕಳೆದು, ಕಡೆ ಪಕ್ಷ ರಾತ್ರಿಯ ಸರದಿ ಅತ್ಯಾಚಾರ ತಡೆಯುವ ಜಪಾನಿ ಸೈನಿಕನನ್ನು ನೋಡಿದಾಗ, ಮನಸ್ಸು ನವಿರಾಗುತ್ತದೆ.

ಮುಂದೆ, ಯುದ್ದ ಕ್ರೌರ್ಯಗಳ ಸಾಕ್ಷಿಯಾದಾಗ, ಯಾನ್ ತನ್ನ ಗಂಡನ ಎದುರು ಹೋರಾಡಿರಬಹುದಾದ ಜಪಾನಿ ಸೈನಿಕ ಮತ್ತು ತನ್ನ ತಂದೆ ಹಿಂಸೆ ಅನುಭವಿಸಿದ ಕ್ಯಾಂಪ್ ನ ಕಮಾಂಡಟ್ ಜೊತೆ ಊಟ ಮಾಡುತ್ತಾಳೆ, ಮತ್ತು ಅವರನ್ನು ಅಪ್ಪಿಕೊಳ್ಳುತ್ತಾಳೆ. ಎಲ್ಲದ್ದಂಕ್ಕಿಂತ ಹೆಚ್ಚಾಗಿ, ಮೌನ ಮುರಿದ ಮೊದಲನೇ ಭಾಷಣದಲ್ಲೇ, ಎಲ್ಲರನ್ನು ಕ್ಷಮಿಸಿದ್ದಾಗಿ ಹೇಳುತ್ತಾಳೆ.

ಯುದ್ದ ಕೊನೆಯಾದಾಗ, ಯಾನ್ ಮೇಲಿನ ಅತ್ಯಾಚಾರದ ವಿವರ ಮತ್ತು ಸನ್ಯಾಸಿನಿಯಾಗಬೇಕೆಂಬ ಬಯಕೆಯನ್ನು ಕೇಳಿದಾಗ, ನೀನು ಹೀಗೇ ಇರೋದು ಒಳ್ಳೆಯದು ಎಂದು ಹೇಳುವ ಪಾದ್ರಿಗಿಂತ, ಆಕೆಯ ಕಥೆ ಗೊತ್ತಿದ್ದೂ ಆಕೆಯನ್ನು ಮದುವೆಯಾಗುವ ಟಾಮ್, ಆತನ ಕುಟುಂಬದವರು ಮತ್ತು ಆಕೆಯನ್ನು ತುಂಬುತೋಳಿನಿಂದ ಸ್ವೀಕರಿಸುವ ವಾಲ್ಸಲಿ ಜನಗಳು, ಏಸುವಿಗೆ ಹತ್ತಿರದವರಾಗಿ ಕಾಣುತ್ತಾರೆ. ತಮ್ಮ ಮಗಳ ಮೇಲಿನ ಅತ್ಯಾಚಾರದ ವಿವರಗಳನ್ನು ಕೇಳಿದ ತಂದೆ ಮತ್ತು ತಾಯಿ, ತಾನು ಮದುವೆಯಾಗಲಿರುವ ಹುಡುಗಿಯ ಕಥೆ ಕೇಳಿದ ಟಾಮ್,  ಮುಂದೆಂದೂ ಆ ವಿಷಯವನ್ನು ಚರ್ಚಿಸಲು ಹೋಗುವುದಿಲ್ಲ.

 ಮಡುಗಟ್ಟಿದ ಮೌನ.....

ಕೆಲವು ತಿಂಗಳ ಹಿಂದೆ, ನನ್ನ ಹಿರಿಯ ಸ್ನೇಹಿತರೂ, ಇಂಡಿಯನ್ ಎಕ್ಸ್ ಪ್ರೆಸ್ನ ಹಿರಿಯ ಸಹೋದ್ಯೋಗಿಯೂ ಆಗಿದ್ದ ಅರುಣ್ ಫೋನ್ ಮಾಡಿ, ನಾನು ಯಾನ್ ಆತ್ಮಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದೇನೆ, ಆಕೆ ಆಸ್ಟ್ರೇಲಿಯಾದಲ್ಲಿದ್ದಾರೆ. ಅನುವಾದಕ್ಕೆ ಅವರ ಸಹಮತ ಬೇಕಾಗಿದೆ. ಅವರನ್ನು ಸಂಪರ್ಕಿಸುವಂತವರನ್ನು ಹುಡುಕಲು ಸಾಧ್ಯವೇ ಎಂದರು. ನಾನೂ ಆಸ್ಟ್ರೇಲಿಯಾಗೆ ವಲಸೆ ಹೋಗಿರುವ ಒಂದಿಬ್ಬರು ಸ್ನೇಹಿತರನ್ನು ಸಂಪರ್ಕಿಸಿ, ಅಲ್ಲಿನ ಯಾವುದೋ ಒಂದು ಪತ್ರಿಕೆಯ ಸಂಪಾದಕರಿಗೂ ಇ-ಮೇಲ್ ಕಳುಹಿಸಿದೆ. ಏನೂ ಆಗಲಿಲ್ಲ
ಹದಿನೈದು ದಿನದ ಹಿಂದೆ, ನನ್ನ ಪುಸ್ತಕ ಬಿಡುಗಡೆ ಅಂತ ವಾಟ್ಸಪ್ ನಲ್ಲಿ ಅರುಣ್ ಮೆಸೆಜ್ ಕಳುಹಿಸಿದರು. ಯಾನ್ ಪುಸ್ತಕ ಬಿಡುಗಡೆಯೂ ಆಯ್ತು.

ನನ್ನ ಮತ್ತು ಅರುಣ್ ರವರ ಸ್ನೇಹ ಎರಡು ದಶಕಗಳಿಂದಲೂ ಇದೆ. ಅವರು ನನ್ನನ್ಯಾಕೆ ಸಹಿಸಿಕೊಂಡಿದ್ದಾರೆ ಅಂತ ಕೆಲವು ಸಲ ಅನ್ನಿಸುತ್ತೆ. ಅರುಣ್ ಮಿತಭಾಷಿ. ನನ್ನ ಬಾಯಿಯನ್ನು ನಾನು ಮಾತ್ರ ಮುಚ್ಚಿಸಬಹುದು. ಆದರೆ, ಈ ಪುಸ್ತಕವನ್ನು ಓದುವಷ್ಟು ಸಮಯವೂ, ನಾನು ಮೌನವಾಗಿದ್ದೆ. ಅರುಣ್ ಮಾತನಾಡುತ್ತಿದ್ದರು.
ಥ್ಯಾಂಕ್ಸ್ ಅರುಣ್ ಸರ್.......


ಮಾಕೋನಹಳ್ಳಿ ವಿನಯ್ ಮಾಧವ.

  

ಶುಕ್ರವಾರ, ಅಕ್ಟೋಬರ್ 30, 2015

ಕಲಾವಿದರು

ಬೇಸರ ಮೂಡಿದ್ರೆ ಹೀಗಾ ಆಟ ಮುಗಿಸೋದು?

ವಿಶಾಲ್…… ಗೆಟ್ ಔಟ್ ಆಫ್ ದಟ್ ಪ್ಲೇಸ್…. ಡೋಂಟ್ ಈವನ್ ಡೇರ್ ಟಾಕಿಂಗ್ ಇನ್ ಇಂಗ್ಲಿಷ್…. ಗೆಟ್ ಬ್ಯಾಕ್ ಟು ದಿ ಆಫಿಸ್… ಅಂತ ಕೂಗಾಡುತ್ತಿದ್ದೆ.
ಐ ಕಾಂಟ್ ಈವನ್ ಮೂವ್ ವಿನಯ್…. ಪೀಪಲ್ ಆರ್ ಕ್ರೇಜಿ ಹಿಯರ್…. ದೆ ಆರ್ ಥ್ರೋಯಿಂಗ್ ಸ್ಟೋನ್ಸ್ ಅಟ್ ಅಸ್.. ವಿ ಆರ್ ಇನ್ ದಿ ಮಿಡ್ಲ್ ಆಫ್ ದಿ ಕ್ರೌಡ್, ಅಂತ ಆ ಕಡೆಯಿಂದ ವಿಶಾಲ್ ಜೋರಾಗಿ ಕೂಗುತ್ತಿದ್ದ.
ನನ್ನ ಪತ್ರಿಕೋದ್ಯಮದ ವೃತ್ತಿಯಲ್ಲಿ ಅಷ್ಟೊಂದು ಗಾಭರಿಯಾಗಿರಲಿಲ್ಲ. ಎಷ್ಟೋ ಥರದ ದೊಂಬಿ, ಗಲಾಟೆಗಳ ಮಧ್ಯ ಹೋಗಿ ವರದಿ ಮಾಡಿದ್ದೆ. ಕೆಲವು ಸಲ ನನ್ನ ಎದುರೇ ಹೆಣಗಳು ಉರುಳಿದ್ದಾಗಲೂ ಅಷ್ಟೊಂದು ಗಡಿಬಿಡಿಯಾಗಿರದಲಿಲ್ಲ. ಅವತ್ತು ಮಾತ್ರ ವರದಿಗೆ ಅಂತ ಹೋಗಿದ್ದ ಮೂರು ಜನ ಜ್ಯೂನಿಯರ್ ಗಳು ಏನು ಅನಾಹುತ ಮಾಡಿಕೊಳ್ಳುತ್ತಾರೋ ಅಂತ ಗಾಭರಿಯಾಗಿತ್ತು.
ಆ ಥರದಲ್ಲಿ ಬೆಂಗಳೂರು ಹತ್ತಿ ಉರಿದಿದ್ದನ್ನು ನಾನು ಕಂಡೇ ಇರಲಿಲ್ಲ. ಮತ್ತೆ, ಟೆಲಿವಿಷನ್ನ ನಲ್ಲಿ ನೋಡೋದು ಬಿಟ್ಟರೆ, ಸ್ಥಳದಲ್ಲಿ ಏನಾಗ್ತಿದೆ ಅಂತ ಗೊತ್ತೂ ಆಗ್ತಿರ್ಲಿಲ್ಲ. ನನ್ನ ನೆನಪು ಸರಿಯಾಗಿದ್ದರೆ, ವಿಶಾಲ್ ಜೊತೆ ಒಂದು ಹುಡುಗಿಯೂ ಹೋಗಿತ್ತು. ಇದ್ದದ್ದರಲ್ಲಿ ಸ್ವಲ್ಪ ಅನುಭವ ಇದ್ದವನು ಅಜಯ್ ಮಾತ್ರ ಅಂತ ಕಾಣುತ್ತೆ.
ಏಪ್ರಿಲ್ 17, 2006. ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್ ಕುಮಾರ್ ತೀರಿಕೊಂಡ ಮಾರನೇ ದಿನ. ನಾನಿನ್ನೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲೇ ಇದ್ದೆ. ಅಣ್ಣಾವ್ರು ತೀರಿಕೊಂಡಾಗ ಅವಸರದಲ್ಲಿ ಡಾಕ್ಟರ್ ಗಳು ಸುದ್ದಿಯನ್ನು ಟಿವಿ ಮಾಧ್ಯಮಗಳಿಗೆ ಹೇಳಿದ್ದರಿಂದ ಬೆಂಗಳೂರಲ್ಲಿ ಏನು, ಇಡೀ ರಾಜ್ಯದಲ್ಲಿ ಗಲಾಟೆ ಶುರುವಾಗಿತ್ತು. ಆದರೆ, ಸಾಯಂಕಾಲದ ಹೊತ್ತಿಗೆ ಪೋಲಿಸರು ಪರಿಸ್ಥಿತಿಯನ್ನು ಹತೋಟಿಗೆ ತಂದುಕೊಂಡಿದ್ದರು. ಹಾಗಾಗಿ, ನಾವು ಪತ್ರಕರ್ತರು ಸಹ ವಿಷಯವನ್ನು ಹಗುರವಾಗಿ ತೆಗೆದುಕೊಂಡು, ಒಬ್ಬೊಬ್ಬರನ್ನು ಒಂದೊಂದು ದಿಕ್ಕಿಗೆ ಕಳುಹಿಸುವುದು ಅಂತ ಆಫೀಸಿನಲ್ಲಿ ಮಾತಾಡಿಕೊಂಡಿದ್ದೆವು.
ಯಾವಾಗ ಕಂಠೀರವ ಕ್ರೀಡಾಂಗಣದಿಂದ ಅಣ್ಣಾವ್ರ ಪಾರ್ಥವ ಶರೀರ ಹೊರಗೆ ಹೊರಟಿತೋ, ಅಲ್ಲಿ ಮತ್ತೆ ಶುರುವಾಯ್ತು ಗಲಾಟೆ. ಒಂದಿಬ್ಬರು ಪೋಲೀಸರ ಮೇಲೇ ಹಲ್ಲೆಯಾಗಿ, ಅವರುಗಳ ಸ್ಥಿತಿ ಗಂಭೀರ ಅಂತ ಗೊತ್ತಾಯ್ತೋ, ಆಗ ಅನ್ನಿಸಿತ್ತು ನನಗೆ…. ಇವತ್ತು ಏನೋ ಅನಾಹುತ ಕಾಯ್ದಿದೆ ಅಂತ. ಸದಾಶಿವನಗರ ಮತ್ತೆ ಯಶವಂತಪುರ ಕಡೆ ಇದ್ದ ವಿಶಾಲ್ ಕೃಷ್ಣನಿಗೆ ಫೋನ್ ಮಾಡಿದ್ರೆ, ಕಲ್ಲುಗಳು ಎಲ್ಲಾ ದಿಕ್ಕಿನಿಂದ ಬಂದು ಬೀಳ್ತಾ ಇದೆ ಅಂತ ಹೇಳ್ದ.
ಅವನು ಇಂಗ್ಲಿಷ್ ನಲ್ಲಿ ಮಾತಾಡಿದ ತಕ್ಷಣ ಪಕ್ಕದಲ್ಲಿದ್ದ ಒಂದಿಬ್ಬರು ಅವನನ್ನು ತಳ್ಳಿದ್ದಾರೆ ಬೇರೆ. ವಿಶಾಲ್ ದೇನೂ ತಪ್ಪಿರಲಿಲ್ಲ. ಹುಟ್ಟಿದ್ದು ಬೆಂಗಳೂರಿನಲ್ಲಾದರೂ, ಹೆಚ್ಚಿನ ಜೀವನವನ್ನೆಲ್ಲ ತನ್ನ ತಂದೆಯ ಜೊತೆ ದಕ್ಷಿಣ ಆಫ್ರಿಕಾದಲ್ಲಿ ಕಳೆದವನು. ಕನ್ನಡ ಮಾತಾಡುತ್ತಿದ್ದರೂ, ಹೆಚ್ಚಿನ ಸಮಯ ಇಂಗ್ಲಿಷ್ ಪದಗಳೇ ಬಾಯಿಂದ ಬರುತ್ತಿದ್ದವು. ಇಂತಹ ಗಾಭರಿಯ ಸಮಯದಲ್ಲಂತೂ, ನಮಗೇ ಕನ್ನಡ ಮರೆತು ಹೋಗುವಂತಿತ್ತು…. ಇನ್ನು ವಿಶಾಲ್ ಪರಿಸ್ಥಿತಿ ಏನಾಗಿರಬೇಡ?.
`ಛೀಫ್…. ಐ ಥಿಂಕ್ ವಿ ಮೇಡ್ ಅ ಮಿಸ್ಟೇಕ್ ಬೈ ಸೆಂಡಿಂಗ್ ದೀಸ್ ಬಾಯ್ಸ್ ಆನ್ ದಿ ಫೀಲ್ಡ್…. ಥಿಂಗ್ಸ್ ಆರ್ ಗೋಯಿಂಗ್ ಔಟ್ ಆಫ್ ಹ್ಯಾಂಡ್…. ಐ ಶುಡ್ ಹ್ಯಾವ್ ಗಾನ್ ಬೈ ಮೈಸೆಲ್ಫ್,’ ಅಂತ ಮಟ್ಟೂ ಛೇಂಬರ್ ಗೆ ನುಗ್ಗಿ ಹೇಳಿದೆ.
ಟಿವಿ ನೋಡುತ್ತಿದ್ದ ಮಟ್ಟೂ, `ಐ ಹರ್ಡ್ ಯು ಟಾಕಿಂಗ್ ಟು ವಿಶಾಲ್…. ಕ್ಯಾನ್ ದೇ ಕಮ್ ಬ್ಯಾಕ್ ಸೇಫ್ ಲೀ?’ ಅಂತ ಕೇಳಿದರು.
`ಐ ಹೋಪ್ ಸೋ,’ ಅಂದವನೇ, ನಾನೇ ಆ ಕಡೆ ಹೋಗಿ ನೋಡ್ಕೊಂಡು ಬರ್ತೀನಿ ಅಂದೆ. `ಹುಚ್ಚುಚ್ಚಾಗಿ ಆಡ್ಬೇಡ. ಅಲ್ಲಿಗೆ ಹೋಗಿ ಹ್ಯಾಗೆ ತಲುಪ್ತೀಯ? ಹೋದ್ರೂ ನಿಂಗೆ ಆ ಜನಗಳು ನಿಂಗೆ ಹೊಡೆಯೋಲ್ಲ ಅಂತ ಗ್ಯಾರಂಟಿ ಏನು? ನಿಂಗೆ ಇಂಥಾ ಗುಂಪುಗಳ ಮಧ್ಯ ಸೇರ್ಕೊಂಡು ಅಭ್ಯಾಸ ಇರಬೋದು. ಇವರನ್ನ ಎಲ್ಲಿ ಅಂತ ಹುಡುಕ್ತೀಯ ಮತ್ತೆ ಹ್ಯಾಗೆ ಕರ್ಕೊಂಡು ಬರ್ತೀಯ? ನಿನ್ನ ಪೋಲಿಸ್ ಫ್ರೆಂಡ್ಸ್ ಯಾರಾದ್ರೂ ಫೋನ್ ಗೆ ಸಿಕ್ತಾರಾ ನೋಡು. ಅವರೇನಾದ್ರೂ ಸಹಾಯ ಮಾಡ್ಬೋದು ಅಷ್ಟೆ,’ ಅಂತ ಮಟ್ಟೂ ಹೇಳಿದ್ರು.
ನಂಗೂ ಸರಿ ಅನ್ನಿಸ್ತು. ಯಾಕಂದ್ರೆ, ಕಂಠೀರವ ಕ್ರೀಡಾಂಗಣದಿಂದ ಹೊರಟ ಮೆರವಣಿಗೆ ಯಾರ ಹಿಡಿತಕ್ಕೂ ಸಿಗದೆ, ಎಲ್ಲೆಲ್ಲೋ ಹೋಗುತ್ತಿತ್ತು. ಕಂಠೀರವ ಕ್ರೀಡಾಂಗಣದಿಂದ, ಕಂಠೀರವ ಸ್ಟುಡಿಯೋದವರೆಗೆ ಎಲ್ಲಾ ದಿಕ್ಕುಗಳಲ್ಲೂ ಜನಗಳೇ. ಯಾರು, ಯಾರಿಗೆ, ಯಾಕಾಗಿ ಕಲ್ಲು ಹೊಡೀತ್ತಿದ್ದಾರೆ, ಕಾರು, ಪೆಟ್ರೋಲ್ ಬಂಕ್ ಗಳಿಗೆ ಬೆಂಕಿ ಹಾಕ್ತಿದ್ದಾರೆ ಅನ್ನೋದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಸುದ್ದಿಯನ್ನ ಎಲ್ಲಿಂದ ಶುರುಮಾಡಿ, ಎಲ್ಲಿಗೆ ಕೊನೆ ಮಾಡ್ಬೇಕೂ ಅನ್ನೋದು ಸಹ ಗೊತ್ತಾಗ್ತಾ ಇರಲಿಲ್ಲ.
`ಏನಾಗ್ತಿದೆ ಇಲ್ಲಿ? ನಂಗೇನೂ ಅರ್ಥ ಆಗ್ತಿಲ್ಲ,’ ಅಂತ ಮಟ್ಟೂ ಇಂಗ್ಲಿಶ್ ನಲ್ಲಿ ಶುರುಮಾಡಿದ್ರು.
`ಇವರ್ಯಾರೂ ಅಸಲಿಗೆ ರಾಜ್ ಕುಮಾರ್ ಅಭಿಮಾನಿಗಳೇ ಅಲ್ಲ. ಬೆಳಗ್ಗೆ ಸ್ಟೇಡಿಯಂ ಹತ್ತಿರ ನೆಡೆದ ಘಟನೆ ನೋಡಿದ್ರೆ, ಯಾವುದೋ ಗುಂಪು ಬರೀ ಗಲಾಟೆ ಮಾಡಿಸೋ ಸಲುವಾಗಿ ಸೇರಿಕೊಂಡ ಹಾಗಿದೆ. ಕೆಲವು ಪೋಲಿಸ್ ಗಳನ್ನೇ ಟಾರ್ಗೆಟ್ ಮಾಡಿ ಹೊಡೆದಿದ್ದಾರೆ. ಒಂದಿಬ್ಬರ ಸ್ಥಿತಿ ಗಂಭೀರವಾಗಿದೆ. ಎಷ್ಟೇ ಕೆಣಕಿದರೂ, ಪೋಲಿಸ್ ಏನೂ ಪ್ರತಿಕ್ರಿಯೆ ತೋರಿಸುತ್ತಿಲ್ಲ. ಕಮೀಷನರ್ ಆರ್ಡರ್ ಅಂತೆ…. ಏನೇ ಆದ್ರೂ ಫೈರ್ ಓಪನ್ ಮಾಡಬಾರದು ಅಂತ,’ ಅಂದೆ.
`ಮತ್ತೆ ಗಲಾಟೆ ಹೇಗೆ ಕಂಟ್ರೋಲ್ ಮಾಡೋದು?’ ಅಂತ ಮಟ್ಟೂ ನನ್ನನ್ನೇ ಕೇಳಿದ್ರು
`ಎಲ್ಲಿ ಕಂಟ್ರೋಲ್ ಮಾಡ್ತಿದ್ದಾರೆ? ಅವ್ರಿಗೇ ಪೆಟ್ಟು ಬಿದ್ರೂ ಸುಮ್ಮನೇ ನೋಡ್ತಾ ಇದ್ದಾರಲ್ಲ... ಪೋಲಿಸರಿಗೆ ಈಗ ಫೋನ್ ಮಾಡಿದ್ರೂ ಏನಾದ್ರೂ ಆಗ್ಬೋದು ಅಂತ ನಂಗೆ ಅನ್ನಿಸ್ತಾ ಇಲ್ಲ. ನಾವೇ ಏನಾದ್ರೂ ಮಾಡ್ಬೇಕು ಅಷ್ಟೆ,’ ಅಂದೆ.
`ಈಗ ನಮ್ಮ ಹುಡುಗ್ರ ಕಥೆ ಏನು? ಯಾರಿಗೂ ಏನೂ ಆಗೋಲ್ಲ ತಾನೆ?’ ಅಂತ ಮಟ್ಟೂ ಕಳವಳದಿಂದ ಕೇಳಿದ್ರು.
`ಇಲ್ಲ ಅಂತ ಅನ್ನಿಸ್ತದೆ. ಟಿವಿಯವರ್ದಾದ್ರೆ, ಅವರ ಕೈಲಿ ಕ್ಯಾಮೆರಾ ಇರ್ತದೆ. ಈ ಹುಡುಗ್ರು ಯಾರು ಅಂತ ಯಾರಿಗೂ ಗೊತ್ತಾಗೋದಿಲ್ಲ. ಇವು ಬಾಯಿ ಬಿಡ್ದೇ ಹೋದ್ರೆ ಸಾಕು. ಆದ್ರೆ ನಮ್ಮ ಫೋಟೋಗ್ರಾಫರ್ಗಳದ್ದೇ ತೊಂದ್ರೆ,’ ಅಂದವನೇ, ಏನೋ ಯೋಚನೆ ಮಾಡ್ಕೊಂಡು ಎದ್ದೆ.
`ನೀನೆಲ್ಲಾದ್ರೂ ಆ ಕಡೆ ಹೋಗ್ಬೇಡ. ಇಲ್ಲಿಂದ್ಲೇ ಏನಾದ್ರೂ ಮಾಡೋಕೆ ಆಗುತ್ತಾ ನೋಡು,’ ಅಂತ ಮಟ್ಟೂ ಗಾಭರಿಯಿಂದ ಹೇಳಿದ್ರು.
`ಇಲ್ಲ ಛೀಫ್... ನಾ ಹೊರಟ್ರೂ, ಅಲ್ಲಿಗೆ ತಲುಪೋದಿಲ್ಲ. ಎರಡೂವರೆ ಆಗಿದೆ. ಕಮೀಷನರ್ ಆಫೀಸ್ ಗೆ ಹೋಗಿ ಏನಾದ್ರೂ ಮಾಡೋಕೆ ಆಗುತ್ತಾ ಅಂತ ನೋಡ್ತೀನಿ,’ ಅಂದವನೇ ಹೊರಕ್ಕೆ ನೆಡೆದೆ.
ಪೋಲಿಸ್ ಕಮೀಷನರ್ ಆಫೀಸ್ ತಲುಪುವ ಹೊತ್ತಿಗೆ, ಆಗಿನ ಕಮೀಷನರ್ ಡಾ ಅಜಯ್ ಕುಮಾರ್ ಸಿಂಗ್ ಯಾರನ್ನೂ ಒಳಗೆ ಬಿಡಬಾರದು ಅಂತ ಅಪ್ಪಣೆ ಕೊಟ್ಟಿದ್ದರಂತೆ. ನಾನು ಬಂದಿದ್ದೇನೆ ಅಂತ ಇಂಟರ್ ಕಾಮ್ ನಲ್ಲಿ ಹೇಳೋಕೆ ಹೇಳಿ ನಿಂತುಕೊಂಡೆ. `ಐದೇ ನಿಮಿಷ ಅಂತೆ ಸರ್.... ನಿಮ್ಮನ್ನ ಕರೀತಾರೆ,’ ಅಂತ ಅವರ ಪಿಎ ಹೇಳಿದರು. ಸುಮ್ಮನೆ ಕಾರಿಡಾರ್ ನಲ್ಲಿ ಕಾಯುತ್ತಾ ನಿಂತಾಗ, ಎಲ್ಲಾ ಕಡೆಯಿಂದ ಕಬ್ಬಿಣದ ಗ್ರಿಲ್ ಹಾಕಿದ್ದ ಜೀಪೊಂದು ಬಂದು ನಿಂತಿತು. ಅದರಿಂದ ಇಳಿದ ಸಬ್ ಇನ್ಸ್ ಪೆಕ್ಟರ್ ಲಗುಬಗೆಯಿಂದ ಕಮೀಷನರ್ ಕೊಠಡಿಯೊಳಗೆ ಹೋದವರೇ, ಹಾಗೇ ಹೊರಗೆ ಬಂದರು. ಜೀಪಿನಲ್ಲಿದ್ದವರೆಲ್ಲ ಲಘುಬಗೆಯಿಂದ ಇಳಿದು ನಿಂತರು. ಸಬ್ ಇನ್ಸ್ ಪೆಕ್ಟರ್ ಹಿಂದೆಯೇ ಅಜಯ್ ಕುಮಾರ್ ಸಿಂಗ್ ಸಹ ಬಂದರು. ಅವರ ಹಿಂದೆ ವಯಸ್ಸಾದವರೊಬ್ಬರು ನಿಧಾನವಾಗಿ ನೆಡೆದುಕೊಂಡು ಬಂದರು.
ನಾನು ನೋಡಿದ ಅತ್ಯುತ್ತಮ ವ್ಯಕ್ತಿತ್ವಗಳಲ್ಲಿ ಡಾ ಸಿಂಗ್ ಕೂಡ ಒಬ್ಬರು. ಆ ವಯಸ್ಸಾದ ವ್ಯಕ್ತಿಯನ್ನು ಎಲ್ಲೋ ನೋಡಿದ್ದೇನೆ ಅಂತ ಅನ್ನಿಸುತ್ತಿತ್ತು. ಯಾರೋ ಕನ್ನಡದ ಉನ್ನತ ಲೇಖಕರನ್ನು ಹೋಲುತ್ತಾರೆ ಅಂತ ಅನ್ನಿಸುತ್ತಿತ್ತು. ಅವರನ್ನು ತುಂಬಾ ಗೌರವಪೂರಕವಾಗಿ ಡಾ ಸಿಂಗ್ ಜೀಪಿಗೆ ಹತ್ತಿಸಿ, ತುಂಬಾ ಹುಶಾರಾಗಿ ಕರೆದುಕೊಂಡು ಹೋಗಿ ಬನ್ನಿ ಅಂತ ಪೋಲಿಸರಿಗೆ ತಿಳಿಸಿದರು. ಜೀಪು ಅವರನ್ನು ದಾಟುವ ಹೊತ್ತಿಗೆ, ನಾನು ಅವರ ಪಕ್ಕದಲ್ಲಿ ನಿಂತಿದ್ದೆ.
`ಗೊತ್ತಲ್ಲ ವಿನಯ್ ಅವರು? ಡಾ ಪಿ ಬಿ ಶ್ರೀನಿವಾಸ್ ಅಂತ ಹೆಸರು. ಪಾಪ... ಚೆನೈನಿಂದ ಬಂದಿದ್ದಾರೆ. ಅವರು ಡಾ ರಾಜ್ ಕುಮಾರ್ ರವರ ಸಿನಿಮಾಗಳಿಗೆ ಹಾಡಿದ್ದಾರಂತೆ ಮತ್ತೆ ತುಂಬಾ ಆತ್ಮೀಯರಂತೆ. ಬೆಳಗ್ಗೆ ರೈಲಿಗೇ ಬಂದಿದ್ದರಂತೆ. ಕಂಠೀರವ ಸ್ಟೇಡಿಯಂ ಹತ್ತಿರ ಹೋಗಲೂ ಆಗಲಿಲ್ಲವಂತೆ. ಯಾರೋ ಹೇಳಿದ್ರು ಅಂತ ಇಲ್ಲಿಗೆ ಬಂದಿದ್ದಾರೆ. ನಿಮಗೆ ಇವರ ಬಗ್ಗೆ ಗೊತ್ತಾ?’ ಅಂತ ಕೇಳಿದ್ರು.
`ಹೌದು ಸರ್... ತುಂಬಾ ಒಳ್ಳೇ ಹಾಡುಗಳನ್ನ ಹಾಡಿದ್ದಾರೆ. ಇತ್ತೀಚೆಗಷ್ಟೇ ರಾಜ್ ಕುಮಾರ್ ಅವರ ಸಿನೆಮಾಗಳಿಗೆ ಅವರೇ ಹಾಡೋಕೆ ಶುರುಮಾಡಿದ್ದು. ಹಳೇ ಸಿನೆಮಾಗಳಲ್ಲೆಲ್ಲ  ಹಾಡ್ತಿದ್ದಿದ್ದು,’ ಅಂದವನೇ, `ಈಗ ಎಲ್ಲಿಗೆ ಹೋದ್ರು?’ ಅಂತ ಕೇಳಿದೆ.
`ಇಲ್ಲೇ ಬಂದು ಕೂತಿದ್ದರಂತೆ. ನಮ್ಮ ಸೆಂಟ್ರಿ ಬಂದು ಹೇಳಿದ. ಒಳಗೆ ಕರೆದಾಗ, ಒಂದು ಸಲವಾದ್ರೂ ಅವರನ್ನ ನೋಡ್ಬೇಕು ಅಂತ ಕೇಳ್ಕೊಂಡ್ರು ಪಾಪ. ಅದಕ್ಕೆ, ಹ್ಯಾಗಾದ್ರೂ ಮಾಡಿ ಒಂದ್ಸಲ ಇವರಿಗೆ ದರ್ಶನ ಮಾಡ್ಸಿ ಅಂತ ಹೇಳಿ, ನಮ್ಮ ಜೀಪಿನಲ್ಲಿ ಕಳುಹಿಸಿದ್ದೇನೆ,’ ಅಂದ್ರು.
ನಂಗೇನೂ ಆಶ್ಚರ್ಯವಾಗಲಿಲ್ಲ. ಯಾಕೆಂದ್ರೆ, ಡಾ ಸಿಂಗ್ ವ್ಯಕ್ತಿತ್ವನೇ ಅಂಥದ್ದು. ಅವತ್ತು ಪೋಲಿಸರ ಎಲ್ಲಾ ವೈಫಲ್ಯಗಳ ಮಧ್ಯ, ಒಂದು ಒಳ್ಳೆ ಕೆಲಸ ಮಾಡಿರೋದನ್ನ ಬರೀಬಹುದು ಅಂದ್ಕೊಂಡೆ. ನಾವು ಮಾತಾಡ್ತಿದ್ದಾಗ ನನಗೆ ನೆನಪಾಯ್ತು. ಮೊದಲನೇ ಸಲ ಪಿ ಬಿ ಶ್ರೀನಿವಾಸ್ ರವರನ್ನ ನೋಡಿದಾಗ ನನಗೆ ನೆನಪಾದ ಕನ್ನಡ ಲೇಖಕ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅಂತ. ಯಾಕೋ ಇಬ್ಬರಿಗೂ ಹೋಲಿಕೆ ಇದೆ ಅಂತ ಅನ್ನಿಸ್ತು.
`ಏನು ಬಂದಿದ್ದು ವಿನಯ್? ಒಳಗೆ ಬನ್ನಿ ಮಾತಾಡೋಣ,’ ಅಂದ್ರು ಡಾ ಸಿಂಗ್.
`ಇಲ್ಲ ಸರ್... ಆಫೀಸಲ್ಲಿ ತುಂಬಾ ಕೆಲ್ಸ ಇದೆ,’ ಅಂದವನೇ, ನಮ್ಮ ಹುಡುಗರು ಗುಂಪಿನಲ್ಲಿ ಸಿಕ್ಕಿಹಾಕಿಕೊಂಡಿರುವುದನ್ನು ಸೂಕ್ಷ್ಮವಾಗಿ ಹೇಳಿದೆ. ಏನಾದ್ರೂ ಮಾಡಿ ಅಂತ ಹೇಳ್ಬೇಕು ಅನ್ನಿಸಿದರೂ, ಯಾಕೋ ಬಾಯಿಂದ ಹೊರಗೆ ಬರಲಿಲ್ಲ. `ಅಲ್ಲಾ ಸರ್... ಇಷ್ಟೊಂದು ಗಲಾಟೆಯಾದ್ರೂ ಪೋಲಿಸ್ ಯಾಕೆ ಏನೂ ಮಾಡ್ತಿಲ್ಲ?’ ಅಂತ ಕೇಳೇಬಿಟ್ಟೆ.
`ಇಲ್ಲ ವಿನಯ್.... ನೆನ್ನೆ ಮೀಟಿಂಗ್ ನಲ್ಲಿ ಸರ್ಕಾರದವರು ನೇರವಾಗಿ ಹೇಳಿದ್ದಾರೆ. ಏನೇ ಆದ್ರೂ ಗೋಲಿಬಾರ್ ಆಗಬಾರದು ಅಂತ. ನೆನ್ನೆ ಇಂಟೆಲಿಜೆನ್ಸ್ ಮಾಹಿತಿ ಇತ್ತು... ಇವತ್ತು ಗಲಾಟೆ ಆಗುತ್ತೆ ಅಂತ. ತುಂಬಾ ಪಾಲಿಟಿಕ್ಸ್ ನೆಡೀತ್ತಿದೆ. ಇಲ್ಲಿ ನಾನು ನಮ್ಮ ಪೋಲಿಸಿನವರ ಕೈಗಳನ್ನು ಹಿಂದಕ್ಕೆ ಕಟ್ಟಿ, ಹೊಡೆದಾಡೋಕೆ ಹೇಳಿದ ಹಾಗೆ ಇದೆ,’ ಅಂತ ವಿಷಾದದಿಂದ ನಕ್ಕರು.
`ಸರಿ ಸರ್,’ ಅಂತ ಹೇಳಿ ನಾನು ಆಫೀಸಿನ ಕಡೆ ಹೊರಟೆ. ಡಾ ಸಿಂಗ್ ಅವರ ಕೊಠಡಿಗೆ ಹೋದರು.
ಹೊಟ್ಟೆ ಹಸಿವಿನಿಂದ ತಲೆ ಸಿಡಿಯೋಕೆ ಶುರುವಾಗಿತ್ತು. ಹಾಗೇ ಆಫೀಸಿಗೆ ಬಂದಾಗ ಮೊದಲು ಸಿಕ್ಕವನೇ ವಿಶಾಲ್. `ಉಳಿದವರು ಎಲ್ಲಿ?’ ಅಂತ ಕೇಳಿದಾಗ, ಕ್ಯಾಂಟೀನಿನಲ್ಲಿ ಇದ್ದಾರೆ ಅಂದ. ಯಾಕೋ, ಏನೂ ತಿನ್ನೋಕೆ ಮನಸ್ಸಾಗಲಿಲ್ಲ. ಹಾಗೇ ಕಾಫಿ ಕುಡಿದವನೇ, ಮೇಲಕ್ಕೆ ಬಂದೆ. ಯಾಕೋ ಯಾಂತ್ರಿಕವಾಗಿ ಕೆಲಸ ಮಾಡುತ್ತಿದ್ದೆ. ಮಟ್ಟೂ ಯಾವುದು ಬೇಕು ಅಂದ್ರೆ, ಅದನ್ನ ಮಾತ್ರ ಮಾಡುತ್ತಿದ್ದೆ. ನನಗೇ ಆಶ್ಚರ್ಯವಾಗುವಷ್ಟು ನಿರ್ಲಿಪ್ತನಾಗಿದ್ದೆ. ಇಂತಹ ಸಂದರ್ಭದಲ್ಲಿ  ಯಾವಾಗಲೂ ಪ್ರಪಂಚ ನನ್ನ ತಲೆ ಮೇಲೆ ಬಿದ್ದಂತೆ ಆಡುತ್ತಿದ್ದ ನಾನು, ಅವತ್ತು ಮಾತ್ರ ಕೂತಲ್ಲಿಂದ ಏಳಲು ಸಹ ಒದ್ದಾಡುತ್ತಿದ್ದೆ.
ಸುಮಾರು ಎಂಟೂವರೆಯಾಗಿತ್ತೇನೋ.... ಮಟ್ಟು ನನಗೆ ನಾಲ್ಕೈದು ಕಾಪಿಗಳನ್ನು ನೋಡೋಕೆ ಹೇಳಿದ್ದರು. ಕಾಪಿಗಳನ್ನ ನೋಡ್ತಾ ಕೂತಿದ್ದಾಗ ಟೈಮ್ಸ್ ಆಫ್ ಇಂಡಿಯಾದಿಂದ ಅಜ್ಮತ್ ಫೋನ್ ಮಾಡಿದ. `ಅಣ್ಣಾ.... ಒಂದು ವಿಷಯ ಆಗಿದೆ, ಆದ್ರೆ ಯಾರಿಗೂ ಗೊತ್ತಿಲ್ಲ,’ ಅಂತ ಪೀಠಿಕೆ ಹಾಕಿದ.
`ಏನಾಯ್ತು?’ ಅಂತ ಅಸಡ್ಡೆಯಿಂದಲೇ ಕೇಳಿದೆ.
`ಅಣ್ಣ.... ನಿಂಗೆ ಪಿ ಬಿ ಶ್ರೀನಿವಾಸ್ ಗೊತ್ತಲ್ಲ... ಅವ್ರು ಅಣ್ಣಾವ್ರ ಕೊನೆ ದರ್ಶನಕ್ಕೆ ಅಂತ ಬೆಳಗ್ಗೆ ರೈಲಿಗೆ ಚೆನೈನಿಂದ ಬಂದಿದ್ದರು. ಈ ಗಲಾಟೆ ಮಧ್ಯದಲ್ಲಿ ಅವರಿಗೆ ಶವದ ಹತ್ತಿರ ಹೋಗೋಕೇ ಆಗಿಲ್ಲ. ಅದಕ್ಕೆ ಅವ್ರು ಕಮೀಶನರ್ ಹತ್ತಿರ ಬಂದಿದ್ದರು,’ ಅಂತ ಹೇಳೋ ಹೊತ್ತಿಗೆ ಮಧ್ಯ ಬಾಯಿ ಹಾಕಿದ ನಾನು, `ಅದೇ ಕಣೋ.... ಅಜಯ್ ಅವ್ರನ್ನ ಪೋಲಿಸ್ ಜೀಪಲ್ಲಿ ಕಳುಹಿಸಿದ್ರು. ನೋಡು ಬರೆಯೋಕೇ ಮರ್ತು ಹೋಗಿತ್ತು. ಸಧ್ಯ ನೀನು ನೆನಪಿಸಿದೆಯಲ್ಲ,’ ಅಂದೆ.
`ಇಲ್ಲಣ್ಣ..... ಪೋಲಿಸ್ ಜೀಪಿಗೆ ಸಮೇತ ಅಣ್ಣಾವ್ರ ಶವದ ಹತ್ರ ಅವ್ರನ್ನ ಕರ್ಕೊಂಡು ಹೋಗೋಕೆ ಆಗ್ಲಿಲ್ಲ. ಒಂದೆರೆಡು ಸಲ ಜಾಗ ಮಾಡ್ಕೊಂಡು ಹತ್ರ ಹೋದ್ರಂತೆ. ಜನ ಬಿಟ್ಟಿಲ್ಲಣ್ಣ. ಜೀಪಿಗೇ ಕಲ್ಲು ಹೊಡೆದ್ರಂತೆ. ಪೋಲಿಸ್ ನವರೂ ಇಳಿದು ಜನಗಳಿಗೆ ಕೇಳ್ಕೊಂಡ್ರಂತೆ.... ಶ್ರೀನಿವಾಸ್ ರವರನ್ನ ಶವದ ಹತ್ತಿರ ಹೋಗೋಕೆ ಬಿಡಿ ಅಂತ. ಒಂದು ಕಡೆ ಜೀಪಿಗೆ ಬೆಂಕಿ ಹಾಕೋಕೆ ಬಂದಿದ್ರಂತೆ. ಪಾಪ ಅಣ್ಣ.... ಕಣ್ಣೀರು ಹಾಕ್ಕೊಂಡು, ಸಾಯಂಕಾಲದ ರೈಲು ಹತ್ತಿ ಚೆನೈಗೆ ವಾಪಾಸ್ ಹೋದ್ರಂತೆ,’ ಅಂದ.
ತಲೆ ಧಿಮ್ಮೆಂದಿತು. ಒಂದೆರೆಡು ಕ್ಷಣ ಮಾತೇ ಹೊರಡಲಿಲ್ಲ. ಅಜ್ಮತ್ ಮುಂದುವರೆಸಿದೆ.... `ಅಣ್ಣ.... ನಾನು ಬರೀತ್ತಿದ್ದೀನಿ. ನೀನೂ ಒಂದು ಸಣ್ಣ ಸ್ಟೋರಿ ಹಾಕಣ್ಣ,’ ಅಂತ.
`ಮನುಷ್ಯರೇನೋ ಈ ಹಲ್ಕಾ ಸೂ.... ಮಕ್ಕಳು. ಒಬ್ಬೊಬ್ಬರನ್ನೂ ಸಾಲಾಗಿ ನಿಲ್ಸಿ ಶೂಟ್ ಮಾಡ್ಬೇಕು. ಬೇವರ್ಸಿಗಳು.... ಇವರ್ನೆಲ್ಲ ಅಭಿಮಾನಿಗಳು ಅಂತ ಹೇಳೋಕಾಗುತ್ತಾ?’ ಅಂತ ಕೂಗಾಡಿದೆ. ಇಡೀ ಆಫೀಸಿನಲ್ಲಿ ಎಲ್ಲರೂ ನನ್ನ ಕಡೆ ನೋಡೋಕೆ ಶುರುಮಾಡಿದ್ರು.
`ಏನ್ಮಾಡೋದಣ್ಣ.... ಪಾಪ ಕಮೀಷನರ್. ಸಿಎಂ ಹೇಳಿದ್ರಂತೆ.... ಫೈರ್ ಓಪನ್ ಮಾಡ್ಬಾರ್ದೂಂತ. ಗಲಾಟೆ ಮಾಡ್ದವ್ರೂ ಬೇರೆನೇ ಬಿಡು,’ ಅಂದ.
`ಗೊತ್ತು.... ಯಾರು, ಎಲ್ಲಿಂದ ಬಾಡಿಗೆಗೆ ಜನ ತಂದು ಗಲಾಟೆ ಮಾಡ್ಸಿದ್ರು ಅಂತ. ಪಾಪ ನೋಡು.... ಆ ಟ್ರೈನಿ ಕಾನ್ಸ್ಟೇಬಲ್ ನನ್ನ ಕೊಂದೇ ಹಾಕಿದ್ರಲ್ಲ ಮಾರಾಯ. ನಾವೆಲ್ಲ ಯಾವಾಗ ಮನುಷ್ಯರಾಗ್ತೀವೋ ಏನೋ.... ಯಾಕೋ ಈ ಪ್ರೊಫೆಷನ್ ಬೇಜಾರಾಗಿ ಹೋಗಿದೆ ಕಣೋ,’ ಅಂತ ಹೇಳಿ, ಫೋನ್ ಕೆಳಗಿಟ್ಟೆ.
ಮಟ್ಟು ಛೇಂಬರ್ ಗೆ ಹೋಗಿ, ಶ್ರೀನಿವಾಸ್ ರವರ ಕಥೆ ಹೇಳಿದೆ. `ನೈಸ್ ಸ್ಟೋರಿ ಪಾ.... ಗಿವ್ ಅ ಡೀಸೆಂಟ್ ಕಾಪಿ,’ ಅಂದ್ರು. ಮಾರನೇ ದಿನ, ಮುಖ ಪುಟದಲ್ಲಿ ಒಂದು ಬಾಕ್ಸ್ ಐಟಂ ಆಗಿ ಪ್ರಕಟನೂ ಆಯ್ತು.
ಇತ್ತೀಚೆಗೆ ಕಾರಿನಲ್ಲಿ ಎಫ್ ಎಂ ರೇಡಿಯೋ ಹಾಕಿಕೊಂಡು ಹೋಗುವಾಗ, ಪ್ರತೀ ಹಾಡಿನ ಮೊದಲು ಪಿ ಬಿ ಶ್ರೀನಿವಾಸ್ ಹಾಡಿದ ಕಸ್ತೂರಿ ನಿವಾಸದ ಹಾಡಿನ `ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ,’ ಸಾಲು ಹಾಕುತ್ತಿದ್ದರು. ಯಾಕೆ ಅಂತ ಯೋಚಿಸುವಾಗ ರೇಡಿಯೋದಲ್ಲಿ ಅವತ್ತು ದಿವಂಗತ ಪಿ ಬಿ ಶ್ರೀನಿವಾಸ್ ರವರ ಜನ್ಮದಿನ ಅಂತ ಹೇಳಿದರು.
ಯಾಕೋ ಅಣ್ಣಾವ್ರು ತೀರಿ ಹೋದ ದಿನದ ಘಟನೆ ಮತ್ತೆ ನೆನಪಿಗೆ ಬಂತು.... ಆ ಸಾಲು ಬಂದಾಗ ಅಪ್ರಯತ್ನವಾಗಿ ಅನ್ನಿಸ್ತು...... ಬೇಸರ ಮೂಡಿದ್ರೆ ಹೀಗಾ ಆಟ ಮುಗ್ಸೋದು?!!!!!


ಮಾಕೋನಹಳ್ಳಿ ವಿನಯ್ ಮಾಧವ್

ಶನಿವಾರ, ಜನವರಿ 17, 2015

ಆಮ್ ಆದ್ಮಿಗಳು


ಕೇಜ್ರಿ ಥರ ಮಾತಾಡೋರಿಗೆ ಜಾರ್ಜ್ ಥರ ಬದುಕೋಕೆ ಬರ್ಬೇಕು



ಮತ್ತೆ ಶುರುವಾಗಿದೆ ಟೆಲಿವಿಷನ್ ಗಳಲ್ಲಿ ಕೂಗಾಟ. ದೇಶದ ಆಶಾಕಿರಣ ಯಾರು? ಅರವಿಂದ ಕೇಜ್ರಿವಾಲ್ ಅಥವಾ ನರೇಂದ್ರ ಮೋದಿ?

ಎಷ್ಟೊಂದು ಮಾತಾಡಿದ್ದಾರೆ ಇವರಿಬ್ಬರೂ ದೇಶದ ಬಗ್ಗೆ. ಒಬ್ಬರು ಪ್ರಧಾನ ಮಂತ್ರಿಯಾಗಿದ್ದಾರೆ. ಇನ್ನೊಬ್ಬರು ದಿಲ್ಲಿ ಮುಖ್ಯಮಂತ್ರಿಯಾಗಿ ಕೆಳಗಿಳಿದಿದ್ದಾರೆ. ನರೇಂದ್ರ ಮೋದಿ ಬಗ್ಗೆ ಟೀಕೆ ಮಾಡಲು ಬೇಕಾದಷ್ಟು ಸರಕುಗಳಿವೆ. ಅದಾನಿ, ಅಂಬಾನಿ ಮತ್ತು ಬಿ.ಜೆ.ಪಿ ಸಂಬಂಧ, ಗೋದ್ರಾ ನಂತರದ ಕೋಮು ಗಲಭೆ, ಮದುವೆಯಾದರೂ ಪತಿ ಧರ್ಮ ಪಾಲಿಸದಿದ್ದದ್ದು…. ಆದರೆ ಕೇಜ್ರಿವಾಲ್ ಬಗ್ಗೆ ಸ್ವಲ್ಪ ಕಷ್ಟನೇ.

ಮಫ್ಲರ್ ಸುತ್ತಿಕೊಂಡು, ದಿಲ್ಲಿಯ ಮೂಲೆ ಮೂಲೆಯಲ್ಲೂ ಸುತ್ತುತ್ತಿರುತ್ತಾರೆ. ಮುಖ್ಯಮಂತ್ರಿ ಆಗಿದ್ದಾಗಂತೂ, ವಿರೋಧ ಪಕ್ಷದ ನಾಯಕ ಯಾರು ಮತ್ತು ಆಡಳಿತ ಯಾರು ನೆಡೆಸುತ್ತಿದ್ದಾರೆ ಎನ್ನುವುದರ ಬಗ್ಗೆ ನನಗಂತೂ ಒಂದೆರೆಡು ಸಲ ಅನುಮಾನವೇ ಬಂದಿತ್ತು. ರಾಜಕಾರಣಿಗಳ ಮತ್ತು ರಾಜಕೀಯ ಪಕ್ಷಗಳ ದುಂದುವೆಚ್ಚದ ಬಗ್ಗೆ ಕೇಜ್ರಿವಾಲ್ ಮಾತನಾಡುತ್ತಲೇ, ದಿಲ್ಲಿಯಲ್ಲಿ ಐದು ಬೆಡ್ ರೂಂಗಳ ಬಂಗಲೆಯನ್ನು ಮುಖ್ಯಮಂತ್ರಿ ನಿವಾಸವಾಗಿ ಕೇಳಿದಾಗ, ನನಗೆಲ್ಲೋ ನೆನಪಾಗಿದ್ದು `ಆ ಮುಗ್ದ ನಗೆ’.

ಆಗ ದೇಶದಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿಯಾಗಿದ್ದರು. ಏನೋ ಕೆಲಸದ ಮೇಲೆ ಅರಣ್ಯ ಭವನಕ್ಕೆ ಹೋಗಿದ್ದ ನಾನು, ವಾಪಾಸ್ ಇಂಡಿಯನ್ ಎಕ್ಸ್ ಪ್ರೆಸ್ ಆಫೀಸಿನ ಕಡೆ ಹೊರಟಿದ್ದೆ. ವಿಂಡ್ಸರ್ ಮ್ಯಾನರ್ ಹೋಟೇಲಿನ ಹತ್ತಿರ ಬಂದಾಗ, ಪಕ್ಕದಲ್ಲಿದ್ದ ಮುಖ್ಯಮಂತ್ರಿ ಕಛೇರಿಗೆ ಹೋಗಿ ಏನಾದರೂ ಸುದ್ದಿ ಸಿಗುತ್ತಾ ಅಂತ ನೋಡೋಣ ಅನ್ನಿಸಿ, ನನ್ನ ಮೋಟಾರ್ ಸೈಕಲ್ ಸಿಗ್ನಲ್ ನಲ್ಲಿ ನಿಲ್ಲಿಸಿಕೊಂಡೆ. ನನ್ನ ಪಕ್ಕದಲ್ಲೊಂದು ಬಿಳಿ ಅಂಬಾಸಿಡರ್ ಕಾರು, ಸಿಗ್ನಲ್ ಗಾಗಿ ಕಾದು ನಿಂತಿತ್ತು.

ಕಾರನ್ನೊಮ್ಮೆ ಹಾಗೇ ನೋಡಿ, ಒಳಗೊಮ್ಮೆ ಕಣ್ಣು ಹಾಯಿಸಿದೆ. ಕಾರಿನಲ್ಲಿದ್ದದ್ದು ಇಬ್ಬರೆ. ಒಬ್ಬ ಡ್ರೈವರ್, ಮತ್ತೊಬ್ಬ ಆಗಿನ ರಕ್ಷಣಾ ಮಂತ್ರಿ ಜಾರ್ಜ್ ಫರ್ನಾಂಡಿಸ್.

ಗಲಿಬಿಲಿಗೊಂಡು ಮತ್ತೊಮ್ಮೆ ಕಾರಿನೊಳಗೆ ಸರಿಯಾಗಿ ನೋಡಿದೆ. ಸಾಧಾರಣವಾದ ಹಳೇ ಅಂಬಾಸಡರ್ ಕಾರು. ಕಿಟಕಿ ಗಾಜುಗಳನ್ನು ಇಳಿಸಲಾಗಿತ್ತು. ಮುಂದೆ, ಹಿಂದೆ ಯಾವುದೇ ಪೋಲಿಸ ಬಂದೋಬಸ್ತು ಇಲ್ಲದೆ, ಟ್ರಾಫೀಕ್ ಬಿಡಲು ಸಾಮಾನ್ಯ ಜನರ ಕಾರಿನಂತೆ ನಿಂತಿತ್ತು.

ಏನನ್ನಿಸಿತೋ ಏನೋ. ಪರಿಚಯವಿಲ್ಲದಿದ್ದರೂ ಕಾರಿನ ಪಕ್ಕಕ್ಕೇ ಹೋಗಿ ``ಸರ್’’ ಎಂದೆ.

ಮುಂದುಗಡೆ ಕಿಟಕಿ ಪಕ್ಕ ಕುಳಿತು ಏನೋ ಯೋಚಿಸುತ್ತಿದ್ದ ರಕ್ಷಣಾಮಂತ್ರಿಗಳು ನನ್ನತ್ತ ತಿರುಗಿ, ಒಂದು ಮುಗ್ದ ಮುಗುಳ್ನಗೆ ಚೆಲ್ಲಿದ್ದರು.

ನನಗಿನ್ನೂ ಗಲಿಬಿಲಿಯಾಯಿತು. ``ಸರ್, ಯು ಆರ್ ಮೂವಿಂಗ್ ವಿತೌಟ್ ಸೆಕ್ಯುರಿಟಿ,’’ ಅಂದೆ.

``ವೈ ಐ ನೀಡ್ ಸೆಕ್ಯುರಿಟಿ? ಐ ಡೋಂಟ್ ಹ್ಯಾವ್ ಎನಿ ತ್ರೆಟ್ಸ್,’’ ಅಂದರು.

``ಐ ಡು ಅಗ್ರೀ ಇಟ್ ಫಾರ್ ಮಿಸ್ಟರ್ ಜಾರ್ಜ್ ಫರ್ನಾಂಡಿಸ್ ಸರ್, ಬಟ್ ಯು ಆರ್ ನೌ ಅವರ್ ಡಿಫೆನ್ಸ್ ಮಿನಿಸ್ಟರ್. ಐ ಫೀಲ್ ಯು ಶುಡ್ ಗೋ ವಿಥ್ ಸೆಕ್ಯುರಿಟಿ,’’ ಎಂದೆ.

ಕಾರಿಂದ ಕೈ ಹೊರಗಡೆ ಹಾಕಿ, ನನ್ನ ಕೈಯನ್ನೊಮ್ಮೆ ಮೆಲ್ಲಗೆ ತಟ್ಟಿ, ``ಡೋಂಟ್ ವರಿ. ನತಿಂಗ್ ವಿಲ್ ಹ್ಯಾಪೆನ್ ಟು ಯುವರ್ ಡಿಫೆನ್ಸ್ ಮಿನಿಸ್ಟರ್… ಹಿ ಇಸ್ ಸೇಫ್,’’ ಅಂತ ಅವರು ಹೇಳುವಾಗಲೇ, ಸಿಗ್ನಲ್ ಬಿಟ್ಟು, ಅವರ ಕಾರು ಮುಂದೆ ಹೋಯ್ತು.

ಮುಖ್ಯಮಂತ್ರಿಗಳ ಕಛೇರಿಗೆ ಹೋಗುವ ವಿಚಾರ ಕೈಬಿಟ್ಟು, ಸೀದ ಪೋಲಿಸ್ ಇಂಟೆಲಿಜೆನ್ಸ್ ಐಜಿಪಿ ಯಾಗಿದ್ದ ಟಿ ಜಯಪ್ರಕಾಶ್ ಆಫೀಸಿಗೆ ನುಗ್ಗಿದೆ. ಚಿಕ್ಕಮಗಳೂರಿನವರಾಗಿದ್ದರಿಂದ, ಅವರ ಜೊತೆ ತುಂಬಾ ಸಲುಗೆಯಿಂದ ಇದ್ದೆ. ``ಅಣ್ಣ, ಈಗ ಜಾರ್ಜ್ ಫರ್ನಾಂಡಿಸ್ ಸಿಕ್ಕಿದ್ದರು. ಆ ಸಿಗ್ನಲ್ ನಲ್ಲಿ, ಯಾವುದೇ ಸೆಕ್ಯುರಿಟಿ ಇಲ್ದೆ ನಿಂತಿದ್ರು. ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಏನಣ್ಣಾ ಕಥೆ?’’ ಅಂದೆ.

ನೆಡೆದ ವಿಷಯವನ್ನೆಲ್ಲ ಕೇಳಿಸಿಕೊಂಡ ಜಯಪ್ರಕಾಶ್, ``ಅವರು ಹಾಗೇ ಕಣ್ರಿ…. ಸೆಕ್ಯುರಿಟಿ ತಗೊಳ್ಳೋಕೆ ಒಪ್ಪೋದಿಲ್ಲ,’’ ಅಂದ್ರು.

``ಅಲ್ಲ ಅಣ್ಣ… ಏನೂ ಬೇಡ, ಯಾರಾದ್ರು ಕಲ್ಲು ಹೊಡೆದ್ರೆ ಸಾಕಲ್ವಾ? ಯಾರ್ಯಾರೋ ಕೆಲಸಕ್ ಬಾರ್ದವ್ರಿಗೆಲ್ಲ ಗನ್ ಮ್ಯಾನ್, ಸೆಕ್ಯುರಿಟಿ ಅಂತ ಕೊಡ್ತೀರ. ಇವ್ರಿಗೆ ಒಂದು ಎಸ್ಕಾರ್ಟ್ ಆದ್ರೂ ಹಾಕ್ಬೇಕಲ್ಲಣ್ಣ?’’ ಅಂತ ಕೇಳಿದೆ.

``ನೋಡಿ ವಿನಯ್, ನಂಗೆ ಜಾರ್ಜ್ ಮೊದಲಿಂದ್ಲೂ ಗೊತ್ತು. ಅವ್ರು ಹಾಗೇನೇ. ಹಿ ಇಸ್ ಎಬೌ ಎವೆರಿತಿಂಗ್. ನಾನ್ ಏನಾದ್ರೂ ಫೋರ್ಸ್ ಮಾಡಿ ಹಾಕಿದ್ರೆ, ನಂಗೆ ಫೋನ್ ಮಾಡಿ ಜಗಳ ಆಡ್ತಾರೆ. ನಂಗೂ ಕೆಲವು ಸಲ, ಇವ್ರು ಯಾಕೆ ಬೆಂಗಳೂರಿಗೆ ಬರ್ತಾರೆ ಅಂತ ಅನ್ನಿಸುತ್ತೆ. ಕೆಲವು ಮಿನಿಸ್ಟರ್ ಗಳು ಯಾಕೆ, ಎಂಪಿ, ಎಮ್ಮೆಲ್ಲೆ ಗಳನ್ನ ನೋಡಬೇಕು, ಸೆಕ್ಯುರಿಟಿ ಕೊಟ್ರೂ ಕಮ್ಮಿಯಾಯ್ತು ಅಂತಾರೆ. ಈ ಮನುಷ್ಯ ನೋಡಿದ್ರೆ ಹೀಗೆ. ನಾನೇನ್ಮಾಡ್ಲಿ ನೀವೇ ಹೇಳಿ,’’ ಅಂದ್ರು.

ಅಲ್ಲಿವರೆಗೆ ಜಾರ್ಜ್ ಫರ್ನಾಂಡಿಸ್ ಬಗ್ಗೆ ನನಗೆ ಗೌರವ ಇತ್ತು. ಅವತ್ತಿನಿಂದ ಇನ್ನೂ ಜಾಸ್ತಿಯಾಯ್ತು. ಆ ಮುಗ್ದ ನಗು ನನ್ನ ಮನಸ್ಸಲ್ಲೇ ಉಳಿದು ಹೋಯಿತು.

ಇದಕ್ಕಿಂತ ಒಂದೆರೆಡು ವರ್ಷಗಳ ಮುಂಚೆ ಇನ್ನೊಂದು ಘಟನೆ ನೆಡೆದಿತ್ತು. ಆಗಿನ್ನೂ ನಾನು ಪತ್ರಿಕೋದ್ಯಮಕ್ಕೆ 
ಕಾಲಿಟ್ಟು ಎರಡು-ಮೂರು ವರ್ಷಗಳಾಗಿದ್ದವಷ್ಟೆ. ದೀಪಾವಳಿ ಹಬ್ಬದ ಸಮಯವಾದ್ದರಿಂದ, ಆಫೀಸಿನಲ್ಲಿ ಹೆಚ್ಚಿನ ಜನ ರಜಾ ತೆಗೆದುಕೊಂಡಿದ್ದರು. ರಜಾ ಶುರುವಾಗುವಾಗಲೇ ನನ್ನ ಛೀಫ್  ರಿಪೋರ್ಟರ್ ನಚ್ಚಿ ನನಗೆ ಎಚ್ಚರಿಸಿದ್ದರು. ``ನೋಡೋ ಮಾಕೋನಹಳ್ಳಿ, ಮುಂದಿನ ವಾರ ಯಾರೂ ಕೆಲಸ ಮಾಡೋಲ್ಲ. ಎಷ್ಟಾಗುತ್ತೆ ಅಷ್ಟು ಸ್ಟೋರಿ ರೆಡಿ ಮಾಡಿಕೋ. ನಿನ್ನ ತಲೇ ಮೇಲೇ ಪೇಜ್ ತುಂಬೋ ಕೆಲಸ ಬೀಳುತ್ತೆ,’’ ಅಂತ.

ದೀಪಾವಳಿ ಹಿಂದಿನ ದಿನ ಆಫೀಸಿನಲ್ಲಿ ಒಬ್ಬನೇ ಕೂತಿದ್ದೆ. ಕ್ರೈಂ ರಿಪೋರ್ಟ್ ಗಳು ಕಡಿಮೆ ಇದ್ದಿದ್ದರಿಂದ, ಮೊದಲೇ ಬರೆದಿಟ್ಟಿದ್ದ ಕೆಲವು ಸ್ಟೋರಿಗಳನ್ನು ರಿಲೀಸ್ ಮಾಡೋಕೆ ಅಂತ ಇಟ್ಟು, ಬಂದ ಪ್ರೆಸ್ ನೋಟ್ ಗಳಲ್ಲಿ ಏನಾದ್ರೂ ಸಿಗುತ್ತಾ ಅಂತ ಕಣ್ಣಾಡಿಸುತ್ತಾ ಇದ್ದೆ. ನಾಲ್ಕು ಘಂಟೆ ಸುಮಾರಿಗೆ ನಚ್ಚಿ ಕಾಲೆಳೆದುಕೊಂಡು ಒಳಗೆ ಬಂದವರೇ, ``ಹ್ಯಾಗಿದೆಯೋ ಮಾಕೋನಹಳ್ಳೀ ಸ್ಟೋರಿ ಪೊಸಿಷನ್? ಪೇಜ್ ತುಂಬಿಸ್ಬೋದೇನೋ?’’ ಅಂತ ಕೇಳಿದ್ರು.

``ತೊಂದ್ರೆ ಇಲ್ಲ ಅಂತ ಅನ್ನಿಸ್ತದೆ ನಚ್ಚಿ. ಪ್ರೆಸ್ ನೋಟ್ ಗಳನ್ನ ನೋಡ್ತಿದ್ದೀನಿ. ಇನ್ಯಾರು ಬರ್ತಾರೆ ಇವತ್ತು?’’ ಅಂತ ಕೇಳಿದೆ.

``ಯಾರೂ ಇಲ್ಲ ಅಂತ ಕಾಣುತ್ತೆ. ಆದಿ ಬರ್ತೀನಿ ಅಂದಿದ್ದ. ನೋಡ್ಬೇಕು ಗುರೂ. ಇರೋ ಸ್ಟೋರಿನೆಲ್ಲ 
ರಿಲೀಸ್ ಮಾಡಮ್ಮಾ,’’ ಅಂದವರೇ, ``ಏನಾದ್ರೂ ಸ್ಟೋರಿ ಸಿಕ್ಕುತ್ತಾ ಅಂತ ಪಟೇಲನ ಹತ್ರ ಹೋಗಿದ್ದೆ ಕಣೋ…. ಪಾಲಿಟಿಕ್ಸ್ ಬಿಟ್ಟು ಎಲ್ಲಾ ಮಾತಾಡಿದ್ವಿ ನೋಡು,’’ ಅಂದ್ರು.

ಆಗಿನ ಮುಖ್ಯಮಂತ್ರಿಯಾಗಿದ್ದ ಜೆ ಎಚ್ ಪಟೇಲರ ಬಗ್ಗೆ ಬಹಳಷ್ಟು ಕಥೆಗಳನ್ನು ಕೇಳಿದ್ದ ನಾನು, ``ಏನಂದ್ರು ಪಟೇಲರು? ಏನು ಮಾತಾಡಿದ್ರಿ ನಚ್ಚಿ?’’ ಅಂದೆ.

``ಆಮೇಲೆ ಹೇಳ್ತೀನಿ. ಮೊದ್ಲು ಸ್ಟೋರಿ ರಿಲೀಸ್ ಮಾಡಿ, ಪ್ರೆಸ್ ನೋಟ್ ನಲ್ಲಿ ಏನಾದ್ರೂ ಸಿಗುತ್ತಾ ನೋಡು. ನೀ ಕಳ್ಸಿದ ಸ್ಟೋರಿಗಳಲ್ಲೇ ಪೇಜ್ ತುಂಬಿಸೋಕೆ ಆಗುತ್ತಾ ನೋಡ್ತೀನಿ. ಬಾಲು ಮತ್ತೆ ಅಫ್ಶಾನ್ ಕೂಡ ಸ್ಟೋರಿ ಬರೆದಿಟ್ಟು ಹೋಗಿದ್ದಾರೆ,’’ ಅಂದ್ರು.

ಎಷ್ಟೇ ಬೇಗ ಅಂದ್ರೂ, ಕೆಲಸ ಮುಗಿಯೋ ಹೊತ್ತಿಗೆ ಏಳು ಘಂಟೆ ದಾಟಿತ್ತು. ಹಬ್ಬದ ದಿನವಾದ್ದರಿಂದ, ನಚ್ಚಿ ಮನೆ ಕಡೆಗೆ ಹೊರಡೋಕೆ ರೆಡಿಯಾಗಿದ್ದರು. ``ಅಲ್ಲ ನಚ್ಚಿ, ಪಟೇಲ್ರು ಏನಂದ್ರು?’’ ಅಂದೆ.

``ಓ ನೆನಪಾಯ್ತು ನೋಡು…. ಬ್ಲೂ ಲೇಬಲ್ ಟೇಸ್ಟ್ ಮಾಡಿದ್ದೀಯೇನೋ ಮಾಕೋನಹಳ್ಳಿ. ಪಟೇಲನ ಮನೆಯಿಂದ ಫ್ಲಾಸ್ಕ್ ನಲ್ಲಿ ಹಾಕ್ಕೊಂಡು ಬಂದೆ. ಟೇಸ್ಟ್ ಮಾಡ್ತೀಯಾ?’’ ಅಂತ ಕೇಳಿದ್ರು.

``ನಚ್ಚಿ…. ಪಟೇಲ್ರು ಏನಂದ್ರು?’’ ಅಂತ ಅದೇ ಪ್ಲೇಟ್ ಹಾಕಿದೆ.

``ಏನೂ ಇಲ್ಲ ಕಣೋ…. ಪಟೇಲನ ಮನೆಗೆ ಹೋದ್ನಾ? ಗೇಟಲ್ಲಿ ಸೆಕ್ಯುರಿಟಿ ಸಮೇತ ಇರ್ಲಿಲ್ಲ. ಯಾರೂ ಇಲ್ಲ ಅಂತ ಅಂದ್ಕೊಂಡೆ. ಒಳಗೆ ಹೋದ್ರೆ, ಪೋರ್ಟಿಕೋದಲ್ಲಿ ಪುಸ್ತಕ ಓದ್ತಾ ಕೂತಿದ್ದ. ನನ್ನ ನೋಡಿದ ತಕ್ಷಣ, ಬಾರೋ ನಚ್ಚಿ ಅಂದ. ಏನೋ ಸಿಗುತ್ತೆ ಅಂತ ಖುಶಿಯಲ್ಲಿ ಕೂತ್ರೆ, ನೋಡೋ ನಚ್ಚಿ, ಈ ದರಿದ್ರ ಪಾಲಿಟಿಕ್ಸ್ ಇದ್ದಿದ್ದೆ. ನೀನೂ ತುಂಬಾ ಪುಸ್ತಕಗಳನ್ನ ಓದ್ಕೊಂಡಿದ್ದೀಯಾ. ಯಾವುದಾದ್ರೂ ಒಳ್ಳೆ ಪುಸ್ತಕದ ವಿಷಯ ಮಾತಾಡೋಣ, ಅಂತ ಹೇಳಿ, ಬ್ಲೂ ಲೇಬಲ್ ತರಿಸ್ದ. ಸ್ಟೋರಿ ಸಿಗಲೇ ಇಲ್ಲ ಗುರೂ,’’ ಅಂದ್ರು.

``ಸೆಕ್ಯುರಿಟಿ ಇರಲಿಲ್ಲ ಅಂದ್ರಿ?’’ ಅಂತ ಕೇಳಿದೆ.

``ಓ ಅದಾ? ಕೇಳ್ದೆ ಕಣೋ. ಮನೆಯವರೆಲ್ಲ ಹಬ್ಬಕ್ಕೆ ಊರಿಗೆ ಹೋಗಿದ್ದಾರೆ. ನನಗ್ಯಾವ ಹಬ್ಬ ನಚ್ಚಿ? ಮೂರು ದಿನ ಹಾಯಾಗಿರೋಣ ಅಂತ ಇಲ್ಲೇ ಉಳ್ಕೊಂಡೆ. ಅಡುಗೆ ಮಾಡೋಕೆ ಒಬ್ಬ ಇದ್ದಾನೆ. ಅವನ ಮನೆ ಇಲ್ಲೇ ಹಿಂದೆ. ಇನ್ನು ನನ್ನ ಹೆಣ ಕಾಯೋಕೆ ಪಾಪ ಆ ಪೋಲಿಸರನ್ನ ಹಾಕಿದ್ರು. ನಂಗೆ ಹಬ್ಬ ಇಲ್ಲ ಅಂದ್ರೆ ಅವ್ರಿಗೇನೂ ಇರಲ್ವಾ? ಅವ್ರಲ್ಲಿದ್ರೆ, ನಾನಿಲ್ಲಿರೋದು ಎಲ್ಲರ್ಗೂ ಗೊತ್ತಾಗುತ್ತೆ. ನಾಡಿದ್ದು ಬೆಳಗ್ಗೆವರೆಗೆ ಬರ್ಬೇಡಿ, ಬರ್ದೇ ಇರೋದನ್ನ ನಿಮ್ಮ ಸೀನಿಯರ್ ಆಫೀಸರ್ ಗಳಿಗೆ ಹೇಳ್ಬೇಡಿ ಅಂತ ಹೇಳಿ, ಮನೆಗೆ ಕಳುಹಿಸ್ದೆ ಅಂದ,’’ ಅಂದ್ರು ನಚ್ಚಿ.

ನಚ್ಚಿ ಹೋದ ದಾರಿಯನ್ನೇ ನೋಡ್ತಾ ಕೂತೆ. ಪಟೇಲ್ರು ಏನಂದ್ರು ಅಂತ ಮತ್ತೆ ಕೇಳೋಕೆ ಮರೆತು ಹೋಯಿತು. ಪಟೇಲರು ಇನ್ನೇನೂ ಹೇಳೋ ಅವಶ್ಯಕತೆಯೂ ಇರಲಿಲ್ಲ ಅಂತ ಕಾಣುತ್ತೆ.

ಕಳೆದೆರೆಡು ವರ್ಷಗಳಿಂದ ರಾಜಕೀಯದ ಬದಲಾವಣೆಯ ಗಾಳಿ ಬೀಸುತ್ತಿರುವುದೇನೋ ನಿಜ. ತಾವು ಬೇರೆಯವರಿಗಿಂತ ಭಿನ್ನ ಎಂದು ಟೆಲಿವಿಷನ್ ಗಳಲ್ಲಿ ಬಿಂಬಿಸುತ್ತಾ, ತಮ್ಮ ಪಾರದರ್ಶಕತೆಯ ಕುರುಹಾಗಿ, ಸಾವಿರ ರೂಪಾಯಿಗೆ ಜೊತೆಯಲ್ಲಿ ಸೆಲ್ಫಿ, ಇಪ್ಪತ್ತು ಸಾವಿರ ರೂಪಾಯಿಗೆ ಜೊತೆಯಲ್ಲಿ ಊಟ ಮಾಡಿ ಚುನಾವಣೆ ದೇಣಿಗೆ ಸಂಗ್ರಹಿಸುವಾಗ, ನಮ್ಮ ಮಧ್ಯದಲ್ಲಿದ್ದ ಜಾರ್ಜ್, ಪಟೇಲರು, ಭೈರೇಗೌಡ, ಕೆ.ಎಚ್. ರಂಗನಾಥ್ ಥರದ `ಆಮ್ ಆದ್ಮಿಗಳು’ ನೆನಪಾಗುತ್ತಾರೆ…..



ಮಾಕೋನಹಳ್ಳಿ ವಿನಯ್ ಮಾಧವ.

ಮಂಗಳವಾರ, ಫೆಬ್ರವರಿ 19, 2013


ಮತ್ತೇನೋ ಬರೆಯಬೇಕು ಅನ್ನಿಸ್ತಿದೆ.... ತಿರುಗಾಟದಲ್ಲಿ. ಅದಕ್ಕಿಂತ ಮುಂಚೆ, ಸ್ವಲ್ಪ ತಿರುಗಾಡಬೇಕಿದೆ 

ಶುಕ್ರವಾರ, ಅಕ್ಟೋಬರ್ 5, 2012

ರೈ





ಡಾನ್ ಒಬ್ಬನ `ಚಿನ್ನ ಚಿನ್ನ ಆಸೈ.....'

ಲಿಫ್ಟ್ ಒಳಗೆ ಹೋದಾಗಲೇ ಗೊತ್ತಾಗಿದ್ದು... ಐದನೇ ಮಹಡಿಯ ಬಟನ್ ತೆಗೆದು ಹಾಕಿದ್ದಾರೆ ಅಂತ. ನಾಲ್ಕನೇ ಮಹಡಿಗೆ ಹೋಗಿ, ಅಲ್ಲಿಂದ ಒಂದು ಮಹಡಿ ಹತ್ತಬೇಕು ಅಂತ ಗೊತ್ತಾಯ್ತು. ಸರಿ... ನಾಲ್ಕನೇ ಮಹಡಿಗೆ ಬಟನ್ ಒತ್ತಿ ಸುಮ್ಮನೆ ನಿಂತೆ.
ನಾಲ್ಕನೇ ಮಹಡಿಯಲ್ಲಿ ಲಿಫ್ಟ್ ನಿಲ್ಲುತ್ತಲೇ ನನ್ನನ್ನು ಸ್ವಾಗತಿಸಿದ್ದು ಶಾಟ್ ಗನ್ ಗಳನ್ನು ಹಿಡಿದುಕೊಂಡಿದ್ದ ಮೂರು ಜನ. ಬೇಡದವರು ಬಂದರೆ ಲಿಫ್ಟ್ ನಿಂದ ಹೊರಗೆ ಹೆಣ ಮಾತ್ರ ಹೊರಗೆ ಬರಲು ಸಾಧ್ಯಅಂತ ಅನ್ಕೊಂಡೆ. ಅವರೇ ಲಿಫ್ಟ್ ನ ಗೇಟ್ ತೆಗೆದು, `ವಿನಯ್?’ ಅಂತ ಕೇಳಿದ್ರು. ಸುಮ್ಮನೆ ತಲೆ ಅಲ್ಲಾಡಿಸಿದೆ.
ಒಂದು ಸಲ ಮೇಲಿಂದ ಕೆಳಗೆ ತಡಕಾಡಿ, ಪಕ್ಕದಲ್ಲಿದ್ದ ಮೆಟ್ಟಿಲ ಕಡೆ ಕೈ ತೋರಿಸಿದರು. ಅಲ್ಲೊಂದು ಮೇಜಿನ ಮೇಲೆ ಇನ್ನಿಬ್ಬರು ಪಿಸ್ತೂಲ್ ಹಿಡಿದುಕೊಂಡು, ಒರಗಿ ನಿಂತಿದ್ದರು. ಐದನೇ ಮಹಡಿಯಲ್ಲಿ ಇವರನ್ನು ಬಿಟ್ಟರೆ ಇನ್ಯಾರೂ ಇರೋದಿಲ್ಲ ಅನ್ನೋದಂತೂ ಖಚಿತವಾಗಿ ಹೋಯ್ತು.
`ಬನ್ನಿ ಮಾರಾಯರೆ... ಮುಂಚೆ ಎಲ್ಲೋ ಮೀಟ್ ಮಾಡಿದ್ದೆವು ಅಲ್ಲವಾ?’ ಅಂತ ಮಂಗಳೂರು ಶೈಲಿಯಲ್ಲಿ ಪ್ರಶ್ನೆ ಬಂತು.
`ನಿಮ್ಮನ್ನು ಇಂಡಿಯಾಕ್ಕೆ ಕರೆದುಕೊಂಡು ಬಂದ ಶುರುವಿನಲ್ಲಿ ಜೈಲಲ್ಲಿ ಸಿಕ್ಕಿದ್ದೆ,’ ಅಂತ ನಗುತ್ತಾ ಮಂಗಳೂರು ಶೈಲಿಯಲ್ಲೇ ಹೇಳಿದೆ. ನಾನು ಜೈಲಿನಲ್ಲಿ ನೋಡಿದಾಗ `ಫಿಟ್ ಆಗಿದ್ದವರಿಗೆ, ಈಗ ಸ್ವಲ್ಪ ಹೊಟ್ಟೆ ಬಂದಿದೆ ಅಂದುಕೊಂಡೆ.
`ನಿಮ್ಮದು ಯಾವ ಊರು?’ ಅಂತ ಕೇಳಿದರು.
`ಮೂಡಿಗೆರೆ... ಆದರೆ ಕಾರ್ಕಾಳ ಮತ್ತು ಉಡುಪಿಯಲ್ಲಿ ಓದಿದ್ದೆ. ಪುತ್ತೂರಿನ ಹತ್ತಿರ ಚಾರ್ವಕ ಇದೆಯಲ್ಲ, ಅಲ್ಲಿ ಸಿ.ಪಿ.ಜಯರಾಂ ನನಗೆ ಭಾವನಾಗಬೇಕು,’ ಅಂದೆ.
`ಹೌದಾ ಮಾರಾಯರೆ... ಹಾಗಾದರೆ ನೀವು ನಮಗೆ ತುಂಬಾ ಹತ್ತಿರದವರಾದಿರಲ್ಲ?’ ಅಂತ ಉತ್ತರ ಬಂತು.
ಮುತ್ತಪ್ಪ ರೈ ಭೇಟಿಯಾಗಲು ನನಗೆ ದೊಡ್ಡ ಕಾರಣಗಳೇನೂ ಇರಲಿಲ್ಲ. ನನ್ನ ಕ್ರೈಂ ರಿಪೋರ್ಟಿಂಗ್ ಸಮಯದಲ್ಲೂ ಅಷ್ಟೆ, ಭೂಗತ ಪ್ರಪಂಚ ಅಂತ ಪಟ್ಟಿ ಕಟ್ಟಿಕೊಂಡವರನ್ನು ಭೇಟಿಯಾಗುವಾಗ ಯಾವುದಾದರೂ ಹೋಟೆಲ್ ಗಳಲ್ಲೇ ಭೇಟಿ ಮಾಡುತ್ತಿದ್ದೆನೇ ಹೊರತು, ಅವರಿರುವ ಜಾಗಕ್ಕೆ ಅಥವಾ ಅಡ್ಡೆಗಳಿಗೆ ಹೋಗದಂತೆ ಎಚ್ಚರ ವಹಿಸುತ್ತಿದ್ದೆ. ಆದರೆ, ಮುತ್ತಪ್ಪ ರೈ ದುಬೈನಿಂದ ವಾಪಾಸ್ ಬಂದು, ಕೇಸ್ ಗಳಿಂದ ಖುಲಾಸೆಯಾಗಿ, ಭೂಗತ ಪ್ರಪಂಚದ ಚಟುವಟಿಕೆಗಳಿಂದ ದೂರವಾಗಿದ್ದೇನೆ, ಅನ್ನೋ ಹೇಳಿಕೆಗಳು ಬಂದಿದ್ದವು.
ಅದರ ಮಧ್ಯ, ವಿದೇಶಿ ಪತ್ರಕರ್ತನೊಬ್ಬ ಬಂದು, ಬೆಂಗಳೂರಿನ `ಲ್ಯಾಂಡ್ ಮಾಫಿಯಾದ ದೊರೆ ಮುತ್ತಪ್ಪ ರೈ,’ ಅನ್ನೋ ಬರವಣಿಗೆಯನ್ನು ಇಂಟರ್ನೆಟ್ ನಲ್ಲಿ ಹಾಕಿದ್ದ. ಅದನ್ನು ನಮ್ಮ ಎಡಿಟರ್ ಬಲರಾಂಗೆ ತೋರಿಸಿದಾಗ, `ನೀನ್ಯಾಕೆ ಮುತ್ತಪ್ಪ ರೈ ಜೊತೆ ಮಾತಾಡಬಾರದು?’ ಅಂತ ಹೇಳಿದರು.
ಹಾಗೂ ಹೀಗೂ ರೈ ನಂಬರ್ ಸಂಪಾದಿಸಿ ಫೋನ್ ಹಚ್ಚಿ, ಸದಾಶಿವನಗರದ ಫ್ಲ್ಯಾಟ್ ನಲ್ಲಿ ಭೇಟಿ ನಿಶ್ಚಯವಾಗಿತ್ತು. ಆ ಸೆಕ್ಯುರಿಟಿ ದಾಟಿಕೊಂಡು ಹೋದ ನನಗೆ, ಮೊದಲು ವಾತಾವರಣ ತಿಳಿಗೊಳಿಸಬೇಕಿತ್ತು. ಬಾದರಾಯಣ ಸಂಬಂಧ ಮಾತಾಡುತ್ತಾ, ರೈ ಜೊತೆ ವಿಜಯ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಮಡಿಕೇರಿಯ ರಾಧಾಂಟಿ ಬಗ್ಗೆ ಹೇಳಿದೆ. `ರಾಧಾ ಮ್ಯಾಡಂ ನಿಮಗೆ ಗೊತ್ತಾ? ಅವರ ಮಗಳು ಸಂಗೀತ ದುಬೈನಲ್ಲಿದ್ದಾಳಲ್ಲ. ತುಂಬಾ ಒಳ್ಳೆಯ ಜನ,’ ಅಂತ  ಹಳೇ ನೆನಪುಗಳಿಗೆ ಹೋಗುತ್ತಿದ್ದಾಗಲೇ, ಎತ್ತರದ ವ್ಯಕ್ತಿಯೊಬ್ಬರು ಒಳಗೆ ಬಂದರು.
`ಇವರು ಗೊತ್ತಾ... ನಿಮ್ಮ ಊರಿನವರೇ... ಚಂದ್ರು ಅಂತ,’ ರೈ ಹೇಳುವಾಗಲೇ ನಾನು ಮಧ್ಯ ಬಾಯಿ ಹಾಕಿ, `ಬೈರಮುಡಿ ಚಂದ್ರು,’ ಅಂದೆ.
`ನೀವು ಗೊತ್ತಾಗಲಿಲ್ಲ,’ ಅಂತ ಚಂದ್ರು ಹೇಳಿದಾಗ, `ನಾನು ಮಾಕೋನಹಳ್ಳಿ ಡಾ. ಮಾಧವ ಗೌಡರ ಮಗ, ವಿನಯ್,’ ಅಂತ ಪರಿಚಯ ಮಾಡಿಕೊಂಡೆ.
`ಹೌದಾ? ಇಲ್ಲೇನು ಮಾಡ್ತಿದ್ದೀಯಾ? ಅಣ್ಣ... ಈ ಹುಡುಗ ನನಗೆ ಸಂಬಂಧಿಯಾಗಬೇಕು,’ ಅಂತ ಉದ್ವೇಗದಿಂದ ಚಂದ್ರು ಮಾತಾಡೋಕೆ ಶುರು ಮಾಡಿದ್ರು. ಚಂದ್ರು ಮತ್ತು ರೈ ಒಡನಾಟ ನನಗೆ ಬಹಳ ಸಮಯದಿಂದ ಗೊತ್ತಿತ್ತು. `ಯಾಕೋ ನಮ್ಮ ಈ ಭೇಟಿ ಟ್ರ್ಯಾಕ್ ತಪ್ತಾ ಇದೆ,’ ಅಂತ ಅನ್ನಿಸೋಕೆ ಶುರುವಾಯ್ತು.
ಅಷ್ಟರಲ್ಲೇ ಚಂದ್ರು ಜೇಬಿನಿಂದ ಒಂದು ಪ್ಯಾಕ್ ಎಲೆಕ್ಟ್ರಾನಿಕ್ ಸಿಗರೇಟ್ ತೆಗೆದು, `ಅಣ್ಣ ಸಿಕ್ತು ನೋಡಿ. ಇನ್ನು ಇದನ್ನು ಸೇದೋಕೆ ಶುರು ಮಾಡಿ,’ ಅಂತ ಕೊಟ್ಟವರೇ, ಅದನ್ನು ಉಪಯೋಗಿಸುವುದು ಹೇಗೆ ಅಂತ ಹೇಳಿಕೊಡೋಕೆ ಶುರುಮಾಡಿದ್ರು. ಅದನ್ನು ಒಂದು ದಂ ಎಳೆದ ರೈ, ಮುಂದೆ ಬೆಂಕಿಯಂತೆ ಕಾಣುವ ಕೆಂಪು ಬಣ್ಣವನ್ನು ಮುಟ್ಟಿ ನೋಡಿ, `ಇದು ಸುಡೋಲ್ಲ, ಅಲ್ಲವಾ?’ ಅಂತ ಕೇಳಿದ್ರು.
ಏನೋ ಹೊಳೆದಂತೆ, `ಒಂದು ನಿಮಿಷ... ಅಮ್ಮನಿಗೆ ತೋರಿಸಿ ಬರುತ್ತೇನೆ,’ ಅಂತ ಹೇಳಿ, ಎದುರುಗಡೆ ಇದ್ದ ಫ್ಲ್ಯಾಟ್ ಕಡೆಗೆ ಹೋದರು. ಎರಡೇ ನಿಮಿಷದಲ್ಲಿ ಹ್ಹಿ..ಹ್ಹಿ...ಹ್ಹಿ ಅಂತ ನಗುತ್ತಾ ವಾಪಾಸ್ ಬಂದು ನಮ್ಮ ಎದುರು ಬಂದು ಕುಳಿತರು. `ಅಮ್ಮನಿಗೆ ಒಂದು ಸೆಕೆಂಡ್ ಬಿ.ಪಿ ರೈಸ್ ಆದದ್ದಲ್ಲ ಮಾರಾಯರೆ. ನಾನು ಏನು ಮಾಡಿದೆ ಗೊತ್ತಾ? ಅಮ್ಮನ ಹತ್ತಿರ ಏನೋ ಮಾತಾಡುತ್ತಾ, ಒಂದು ದಂ ಎಳೆದು, ಸಿಗರೇಟನ್ನು ಕಿಸೆಯ ಒಳಗೆ ಹಾಕಿದೆ. ಅಮ್ಮ ಒಂದೇ ಸಲ, ಮುತ್ತಪ್ಪ, ಶರ್ಟ್ ಸುಡುತ್ತೆ ಅಂತ ಕೂಗಿದ್ದಲ್ಲ....ಅಂತ ಇನ್ನೂ ಜೋರಾಗಿ ನಗಲು ಆರಂಭಿಸಿದರು.
ಒಂದು ಕ್ಷಣ ರೈ ಮುಖವನ್ನೇ ನೋಡಿದೆ. ಕಾಲೇಜು ಹುಡುಗರ ಮುಖದಲ್ಲಿದ್ದ ತುಂಟತನವಿತ್ತು. ಅಲ್ಲಿಂದ ಮುಂದಿನ ಮಾತುಕತೆ ತುಂಬಾ ಸರಾಗವಾಗಿ ನೆಡೆದುಕೊಂಡು ಹೋಯಿತು. ಲ್ಯಾಂಡ್ ಮಾಫಿಯಾದ ವಿಷಯವನ್ನು ನಿರಾಕರಿಸಿದ ರೈ, ಅವರ ಕನಸುಗಳ ಬಗ್ಗೆ ಮಾತಾಡಲು ಶುರುಮಾಡಿದರು. ಉಡುಪಿಯ ಹತ್ತಿರವಿರು ಹತ್ತೊಂಬತ್ತು ಎಕರೆ ಜಾಗವನ್ನು ಪಕ್ಷಿಧಾಮದ ರೀತಿ ಬೆಳೆಸುವ ಬಗ್ಗೆ ಮತ್ತು ಎಚ್ ಡಿ ಕೋಟೆಯ ಹತ್ತಿರವಿರುವ ಜಾಗವನ್ನು ವನ್ಯಜೀವಿಗಳ ಸಂರಕ್ಷಣೆಗೆ ಮೀಸಲಿಡುವ ಬಗ್ಗೆ ಮಾತಾಡಿದಾಗ, ನನಗೆ ಆಶ್ಚರ್ಯವಾಯಿತು. ಇಷ್ಟೆಲ್ಲಾ ತುಂಟತನ ಮತ್ತು ಕನಸುಗಳನ್ನು ಹೊತ್ತವರು, ಇಪ್ಪತ್ನಾಲ್ಕು ಘಂಟೆ ಸೆಕ್ಯುರಿಟಿ ಮಧ್ಯದಲ್ಲಿ ಬದುಕಬೇಕಾದ ಪರಿಸ್ಥಿತಿ ನೋಡಿ, ಅಯ್ಯೋ ಅನಿಸಿತು.
ಅಲ್ಲಿನ ಇಂಟರ್ ವ್ಯೂ ಮುಗಿಸಿ ಆಫೀಸಿಗೆ ಬಂದವನೇ, ಬಲರಾಂ ಹತ್ತಿರ ನೆಡೆದ ವಿಷಯವನ್ನೆಲ್ಲ ಹೇಳಿದೆ. `ತುಂಬಾ ಇಂಟರೆಸ್ಟಿಂಗ್ ಆಗಿದೆ ವಿನಯ್. ಲ್ಯಾಂಡ್ ಮಾಫಿಯಾ ಬಿಟ್ಟು, ಅಲ್ಲಿ ನೆಡೆದ ವಿಷಯದ ಬಗ್ಗೆ ಒಂದು ಲೇಖನ ಬರಿ. ಅದು ಹೇಗೆ ಬರುತ್ತೆ ಅಂತ ನೋಡಿ, ಏನು ಮಾಡೋದು ಅಂತ ಯೋಚನೆ ಮಾಡೋಣ, ಅಂದರು.
ನನಗೇನೂ ಈ ಕಥೆ ಪ್ರಕಟವಾಗೋ ಗ್ಯಾರಂಟಿ ಇರಲಿಲ್ಲ. ಸರಿ, ಎಡಿಟರ್ ಹೇಳಿದ ಮೇಲೆ ನಂದೇನು ಅಂತ, ರೈ ಅಮ್ಮನನ್ನು ಹೆದರಿಸಿದರಿಂದ ಶುರು ಮಾಡಿಕೊಂಡು, ಒಂದು ಲೇಖನ ಬರೆದೆ. ಅದನ್ನು ಬಲರಾಂ ರಿಗೆ ಕಳುಹಿಸಿದ ಮೇಲೆ, ಅವರ ಕೋಣೆಗೆ ಹೋದೆ. ನನ್ನನ್ನು ನೋಡಿದವರೆ ನಗುತ್ತಾ, `ಬಾ, ಅದನ್ನೇ ಓದುತ್ತಿದ್ದೆ. ವಿನಯ್, ಇದು ತುಂಬಾ ಇಂಟರೆಸ್ಟಿಂಗ್ ಆಗಿದೆ. ಭಾನುವಾರಕ್ಕೆ ತಗೋಳ್ತೀನಿ. ಮುತ್ತಪ್ಪ ರೈ ಫೋಟೋ ಏನಾದ್ರೂ ತೆಗೆದಿದ್ದೀಯಾ? ಅಂತ ಕೇಳಿದರು.
`ಇಲ್ಲ ಸರ್.... ಹಳೇ ಫೋಟೋ ಯಾವುದಾದರೂ ಉಪಯೋಗಿಸಬೇಕಷ್ಟೆ, ಅಂದೆ.
`ಭಾನುವಾರಕ್ಕೆ ಇನ್ನೂ ಮೂರು ದಿನ ಇದೆ. ಅಷ್ಟರೊಳಗೆ ಹೊಸದೇ ತೆಗೆಸು. ಹಳೇ ಫೋಟೋ ಯಾಕೆ? ಅಂತ ಹೇಳಿದರು.
`ಸರಿ ಸರ್, ಅಂತ ಹೇಳಿ, ರೈಗೆ ಫೋನ್ ಹಚ್ಚಿದೆ.
`ನಾನು ಇನ್ನೂ ಮೂರು ದಿನ ಸಿಟಿಗೆ ಬರುವುದಿಲ್ಲ ವಿನಯ್... ಏನು ಮಾಡುವುದು? ಅಂತ ಕೇಳಿದರು.
`ಸರ್, ನಾನೇ ಬಿಡದಿಗೆ ಬರುತ್ತೇನೆ ಬಿಡಿ. ಆ ಮನೆ ನೋಡ್ಬೇಕು ಅಂತ ಮೈಸೂರಿಗೆ ಹೋಗುವಾಲೆಲ್ಲ ಅಂದುಕೊಳ್ಳುತ್ತಿದ್ದೆ. ನೋಡಿದ ಹಾಗೆ ಆಗುತ್ತೆ, ಅಂತ ಹೇಳಿದೆ.
`ಆಗಲಿ... ಹನ್ನೊಂದು ಘಂಟೆಗೆ ಬಂದುಬಿಡಿ. ಮನೆಯಲ್ಲೇ ಇರುತ್ತೇನೆ, ಅಂದರು.
ರೈ ಬಿಡದಿ ಮನೆ ಬಗ್ಗೆ ತುಂಬಾ ಕೇಳಿದ್ದೆ. ಎಲ್ಲಾ ರಿಪೋರ್ಟರ್ ಗಳ ಬಾಯಲ್ಲಿ ಮತ್ತು ಬರವಣಿಗೆಯಲ್ಲಿ. ಅದರ ಸೆಕ್ಯುರಿಟಿ ಬಗ್ಗೆಯಂತೂ, ದಾರಿಯುದ್ದಕ್ಕೂ ನೆಲದಲ್ಲಿ ಕ್ಯಾಮೆರಾ ಅಡಗಿಸಿ ಇಟ್ಟಿದ್ದಾರೆ ಅಂತ ಬೇರೆ ಹೇಳಿದ್ರು.
ಬಿಡದಿ ಮನೆಯ ಮೊದಲನೇ ಗೇಟು ದಾಟಿದಾಗ, ಅಂತಾ ಸೆಕ್ಯುರಿಟಿ ಇಲ್ಲ ಅನ್ನಿಸ್ತು.  ಗ್ಸನಾಡು ಅನ್ನೋ ಪಾಳು ಬಿದ್ದ ಆ ಹೌಸಿಂಗ್ ಲೇಔಟ್ ನಲ್ಲಿ, ಇಬ್ಬರು ಗನ್ ಮ್ಯಾನ್ ಗಳನ್ನು ಬಿಟ್ಟರೆ ಯಾರೂ ಇರಲಿಲ್ಲ. ಅಲ್ಲಿಂದ ಮುಂದೆ ಹೋದಾಗ ಎದುರಾಗಿದ್ದೇ ದೊಡ್ಡ ಗೋಡೆ ಮತ್ತು ಅದರ ಮಧ್ಯ ಒಂದು ಕಿಂಡಿಯಂತಹ ಬಾಗಿಲು. ಅಲ್ಲಿನ ಸೆಕ್ಯುರಿಟಿ ನೋಡಿದಾಗ ಅನ್ನಿಸಿತು: `ಇಲ್ಲೂ ಹಾಗೇನೇ, ಅಂತ.
ಒಳಗೆ ಹೋಗುತ್ತಲೇ ನಾನು ನೆಲದೊಳಗೆ ಇಟ್ಟ ಕ್ಯಾಮೆರಾಗಳಿಗಾಗಿ ಕಣ್ಣಾಡಿಸತೊಡಗಿದೆ. ಆ ಕಿಂಡಿಯಂತ ಬಾಗಿಲಿನಿಂದ ಮನೆಗೆ ಸಾಧಾರಣ ನೂರೈವತ್ತು ಅಡಿಗಳಾದರೂ ಇದೆ. ನೆಲದಲ್ಲೆಲ್ಲೂ ಕಾಣದಿದ್ದಾಗ, ಅಲ್ಲಿ ಬೆಳೆದಿದ್ದ ಹೂಗಿಡಗಳ ಮಧ್ಯ ಏನಾದರೂ ಇದೆಯಾ ಅಂತ ಕಣ್ಣಾಡಿಸುತ್ತಾ ಮುಂದೆ ಹೋದೆ. ನಾನು ನೆಡೆದುಕೊಂಡು ಬರುವುದನ್ನು ಬಾಗಿಲಲ್ಲಿ ನಿಂತಿದ್ದ ಮುತ್ತಪ್ಪ ರೈ ನೋಡುತ್ತಿದ್ದರು. ಹತ್ತಿರ ಹೋದ ತಕ್ಷಣ ಕೇಳಿದರು: `ಆ ಗಿಡಗಳ ಮಧ್ಯ ಏನು ಕ್ಯಾಮೆರಾ ಹುಡುಕುತ್ತಿದ್ದಿರಾ? ಅಂತ. ಪೆಚ್ಚಾಗಿ ನಕ್ಕೆ.
`ಅಲ್ಲ ಮಾರಾಯರೆ... ನನ್ನನ್ನು ಕೊಲ್ಲಲು ಕೋಟಿಗಟ್ಟಲೆ ಸುಪಾರಿ ಕೊಡಬೇಕು. ಒಂದು ಹೆಲಿಕಾಪ್ಟರ್ ತೆಗೆದುಕೊಂಡು ಬಂದು ಕಾರ್ಪೆಟ್ ಬಾಂಬಿಂಗ್ ಮಾಡಿದರೆ, ಈ ಕ್ಯಾಮೆರಾ ಇಟ್ಟುಕೊಂಡು ನಾನು ಏನು ಮಾಡಬೇಕು. ನೀವು ರಿಪೋರ್ಟರ್ ಗಳು ಅಷ್ಟೂ ಯೋಚನೆ ಮಾಡದೆ ಬರೀತೀರಲ್ಲಾ? ಅಂದರು. ನಾನೇನೂ ಮಾತಾಡಲಿಲ್ಲ.
ಅಷ್ಟರಲ್ಲಿ ಅವರೇ ತಿರುಗಿ, `ವಿನಯ್, ನೋಡಿ ಅಲ್ಲಿ ನನ್ನ ನವಿಲು ಮರಿಗಳು, ಅಂದರು. ತಿರುಗಿ ನೋಡಿದರೆ, ಅವರ ವಿಶಾಲವಾದ ಹೂತೋಟದಲ್ಲಿ ಐದು ಚಿಕ್ಕ ಚಿಕ್ಕ ನವಿಲು ಮರಿಗಳು, ಕೋಳಿಗಳ ಜೊತೆ ಮೇಯುತ್ತಿದ್ದವು.
`ಇವೆಲ್ಲಿ ಸಿಕ್ಕಿದವು? ಅಂತ ಕೇಳಿದೆ.
`ಇವುಗಳ ಮೊಟ್ಟೆಗಳನ್ನು ಯಾರೋ ತಂದು ಕೊಟ್ಟರು. ಯಾವ ಮೊಟ್ಟೆ ಅಂತ ಗೊತ್ತಾಗದೆ, ಕೋಳಿ ಮೊಟ್ಟೆಗಳ ಜೊತೆ ಮರಿ ಮಾಡಲು ಇಟ್ಟೆವು. ನೋಡಿದರೆ ನವಿಲು ಮರಿಗಳು. ಇರಲಿ ಅಲ್ಲವಾ? ಅಂತ ನಕ್ಕರು.
ಹಾಗೇ, ಅವರ ನಾಯಿಗಳನ್ನು ತೋರಿಸಲು ಆರಂಭಿಸಿದರು. ಎಲ್ಲಾ ನಾಯಿಗಳನ್ನು ನೋಡಿದ ಮೇಲೆ, ಅವರದೊಂದು ಹೊಸ ಪಗ್ ಮರಿಯನ್ನು ತೋರಿಸಿದರು. ಅವರು ಮುಟ್ಟಿದ ಕೂಡಲೇ, ಆ ನಾಯಿ ಮರಿ ಉಚ್ಚೆ ಹೊಯ್ದುಕೊಂಡಿತು. `ಇದೊಂದು ಹೆದರು ಪುಕ್ಕಲು ನಾಯಿ ಮಾರಾಯರೆ. ನನ್ನ ರೆಪ್ಯುಟೇಶನ್ ಗೆ, ಇದು ಇಲ್ಲಿ ಹೇಗೆ ಬಂದು ಸೇರಿತು ಅನ್ನೋದೇ ಆಶ್ಚರ್ಯ, ಅಂತ ನಗೋಕೆ ಶುರು ಮಾಡಿದ್ರು. ಮನೆ ಸುತ್ತಲೂ ಸುತ್ತಾಡಿದ ಮೇಲೆ ಊಟಕ್ಕೆ ಕುಳಿತೆವು. ಫಿಶ್ ಕರಿ ಮತ್ತು ನನಗೆ ಇಷ್ಟವಾದ ಚಿಕ್ಕನ್ ಸುಕ್ಕ ಮಾಡಿದ್ದರು. ನಾನು ಕುಸಲಕ್ಕಿ ಅನ್ನ ಊಟ ಮಾಡುತ್ತೇನೆ ಎಂದಾಗ, ರೈ ಅವರ ತಾಯಿಗೆ ಆಶ್ಚರ್ಯವಾಯಿತು. ನಾನು ಮತ್ತೆ ಮಂಗಳೂರು ಕಡೆಯ ನನ್ನ ಬಾದರಾಯಣ ಸಂಬಂಧಗಳನ್ನು ಹೇಳಬೇಕಾಯಿತು.
ಸಾಕಷ್ಟು ಫೋಟೋಗಳನ್ನು ತೆಗೆದಮೇಲೆ ನಾನು ಅಲ್ಲಿಂದ ಹೊರಟೆ. ನನ್ನನ್ನು ಬಿಳ್ಕೊಳ್ಳಲು ಮನೆಯ ಬಾಗಿಲವರೆಗೆ ಬಂದ ರೈ, `ವಿನಯ್ ಅವರೆ, ಒಂದು ವಿಷಯ.... ನಿಮಗೆ ಈ ಕಾಡು ಪ್ರಾಣಿಗಳ ಸಂರಕ್ಷಣೆ ಬಗ್ಗೆ ಬಹಳ ವಿಷಯ ಗೊತ್ತಿದೆ. ಈಗ ನಾನು ನನ್ನ ಉಡುಪಿ ಮತ್ತು ಎಚ್ ಡಿ ಕೋಟೆಯ ಜಾಗದಲ್ಲಿ ಏನಾದರೂ ಮಾಡಬೇಕು ಅಂತ ಇದ್ದೇನೆ. ಆದರೆ, ಅಲ್ಲಿರುವ ಪ್ರಾಣಿಗಳಿಗೆ ಏನೂ ತೊಂದರೆ ಆಗಬಾರದು ಮತ್ತು ಅಲ್ಲಿ ಸುತ್ತಮುತ್ತ ಇರುವ ಪ್ರಾಣಿಗಳಿಗೆ ಅದರಿಂದ ಸಹಾಯವಾಗಬೇಕು. ನೀವೊಂದು ಸಲ ನನ್ನ ಜೊತೆ ಅವೆರೆಡು ಜಾಗಗಳಿಗೆ ಬಂದರೆ, ನಾನು ತೋರಿಸುತ್ತೇನೆ. ನೀವು ನನಗೆ ಸಲಹೆಗಳನ್ನು ಕೊಡಬಹುದು, ಅಂದರು.
ನಾನು ನಗುತ್ತಾ `ಆಗಲಿ... ಸಿಕ್ಕೋಣ ಮತ್ತೆ, ಅಂದೆ.
ಆ ಕಿಂಡಿಯಂತ ಬಾಗಿಲನ್ನು ದಾಟುವಾಗ ಮನೆ ಕಡೆಗೆ ತಿರುಗಿ ನೋಡಿದೆ. ರೈ ಬಾಗಿಲಲ್ಲಿ ಇರಲಿಲ್ಲ. ಬಾಗಿಲು ದಾಟಿ ಕಾರಿಗೆ ಹತ್ತುವಾಗ ಯಾಕೋ ರೋಜಾ ಸಿನೆಮಾದ ಹಾಡು ನೆನಪಾಯಿತು: `ಚಿನ್ನ ಚಿನ್ನ ಆಸೈ.......



ಮಾಕೋನಹಳ್ಳಿ ವಿನಯ್ ಮಾದವ




ಶುಕ್ರವಾರ, ಸೆಪ್ಟೆಂಬರ್ 28, 2012

ಡ್ರಗ್ಸ್


ಮಡುಗಟ್ಟಿದ ಆಕ್ರೋಶ ಅಂದ್ರೆ ಇದೇನಾ?

`ವಿನಯ್, ಕೊನೆಗೂ ಸಿಕ್ಕಿಬಿಟ್ಟರು ಕಣ್ರೀ…. ನೆನ್ನೆ ಇಡೀ ದಿನ ಸುಸ್ತಾಗಿ ಹೋದ್ವಿರೀ,’ ಅಂತ ಬೆಳಗ್ಗೆ ಆರೂವರೆ ಘಂಟೆಗೆ ಫೋನ್ ಬಂದಾಗ ನನಗೂ ಸರಿಯಾಗಿ ಅರ್ಥವಾಗಲಿಲ್ಲ.
`ಯಾರು ವಿಜಯ್? ಡ್ರಗ್ಸ್ ಗ್ಯಾಂಗಾ?’ ಅಂದೆ.
`ಹೌದು ರೀ… ನಾ ಹೇಳ್ತಿದ್ದೆನಲ್ಲ… ಕೊರಿಯರ್ ನಲ್ಲಿ ಕಳಿಸೋ ಇನ್ನೊಂದು ಪಾರ್ಟಿ ಇದೆ ಅಂತ. ತುಂಬಾನೇ ವರ್ಕ್ ಮಾಡ್ತಿದ್ವಿ. ಈ ಸಲ ಇಬ್ಬರು ಸಿಕ್ಕಿದ್ದಾರೆ….ಒಬ್ಬಳು ಹುಡುಗಿನೂ ಇದ್ದಾಳೆ,’ ಅಂದ್ರು.
`ಹೌದಾ? ಇಬ್ರೂ ನೈಜೀರಿಯಾದವರಾ?’ ಅಂತ ಕೇಳಿದೆ.
`ಇಲ್ಲರೀ.. ಹುಡುಗಿ ನಾರ್ಥ್ ಈಸ್ಟ್ ನವಳು. ಅವಳ ಅಡ್ರೆಸ್ ಕನ್ಫರ್ಮ್ ಮಾಡ್ತಿದ್ದೀವಿ. ಹುಡುಗ ಮಾತ್ರ ನೈಜೀರಿಯಾದವನು. ಇಬ್ಬರೂ ಡೆಲ್ಲಿಯಲ್ಲಿ ಓದ್ತಾ ಇದ್ದಾರೆ. ಡೆಲ್ಲಿಯಿಂದ ಇಲ್ಲಿಗೆ ಬಂದು, ಕೊರಿಯರ್ ನಲ್ಲಿ ಡ್ರಗ್ಸ್ ಬೇರೆ ದೇಶಕ್ಕೆ ಕೊರಿಯರ್ ಮಾಡಿ, ವಾಪಾಸ್ ಹೋಗುತ್ತಿದ್ದರು. ಹನ್ನೊಂದು ಘಂಟೆಯೊಳಗೆ ಬಂದು ಬಿಡಿ. ಹನ್ನೊಂದು ಘಂಟೆಗೆ ಅವರನ್ನು ಕೋರ್ಟ್ ಗೆ ಪ್ರೊಡ್ಯೂಸ್ ಮಾಡೋಕೆ ಕಮೀಷನರ್ ಹೇಳಿದ್ದಾರೆ,’ ಅಂದ್ರು.
ಅವರಿಬ್ಬರ ಹೆಸರು ಕೇಳಿದಾಗ, ಹುಡುಗನ ಹೆಸರು ಬರ್ಟ್ರಾಂಡ್ ತೊಚೇಕ್ವ ಇಕ್ವಾಕ ಅಂತನೂ, ಹುಡುಗಿಯ ಹೆಸರು ಡಫೀರ ವಾಲಂಗ್ ಅಂತಾನೂ ಹೇಳಿ, ಫೋನ್ ಇಟ್ಟರು.
ಸರಿ, ಒಂದಿಬ್ಬರು ಟೆಲಿವಿಷನ್ ಫ್ರೆಂಡ್ಸ್ ಗಳಿಗೆ ಸಂಕ್ಷಿಪ್ತವಾಗಿ ವಿವರ ಕೊಟ್ಟೆ. ಅವರಿಬ್ಬರನ್ನು ಎಲ್ಲಿ ಇಟ್ಟಿದ್ದಾರೆ ಅಂತ ವಿಷಯನೂ ಹೇಳಿ, ನಾನು ಬೇಗನೆ ತಯಾರಾಗೋಕೆ ಶುರುಮಾಡಿದೆ.
ವಿಜಯ್ ಕಸ್ಟಮ್ಸ್ ನಲ್ಲಿ ಇದ್ದ ನನ್ನ ಸ್ನೇಹಿತ. ಅವರು ಮತ್ತು ಅವರ ಒಂದು ತಂಡ, ಮೈಮೇಲೆ ದೆವ್ವ ಬಂದಂತೆ ಕೆಲಸ ಮಾಡುತ್ತಿದ್ದರು. ಯಾವ ಸಮಯದಲ್ಲಿ ಫೋನ್ ಮಾಡಿದರೂ ತಲೆ ಕೆಡಿಸಿಕೊಳ್ಳದೆ ಮಾತಾಡುತ್ತಿದ್ದರು. ಇಡೀ ತಂಡವೇ ಡ್ರಗ್ಸ್ ಹಿಂದೆ ಬಿದ್ದಿತ್ತು. ಬೆಂಗಳೂರಿನಿಂದ ಬೇರೆ ದೇಶಗಳಿಗೆ ಕಳುಹಿಸುವ ಮತ್ತು ಬೇರೆ ದೇಶಗಳಿಂದ ಇಲ್ಲಿಗೆ ತರಿಸುವ ಮಾಫಿಯಾವನ್ನು ಅವರು ಬೆನ್ನು ಹತ್ತಿದ್ದರು. ಯಾವುದೇ ಒಂದು ಪಾರ್ಟಿಯನ್ನು ಹಿಡದರೂ, ತಕ್ಷಣ ನನಗೆ ಫೋನ್ ಮಾಡಿ ಹೇಳುತ್ತಿದ್ದರು.
ನಾನು ವಿಜಯ್ ಆಫೀಸ್ ತಲುಪುವಾಗ ಹತ್ತು ಘಂಟೆ ದಾಟಿತ್ತು. ಆಗಲೇ ಒಂದಿಬ್ಬರು ಟೆಲಿವಿಷನ್ ಗೆಳೆಯರು ಫೋನ್ ಮಾಡಿ, ಆ ಇಬ್ಬರನ್ನು ವಿಡಿಯೋ ತೆಗೆಯೋಕೆ ಅಧಿಕಾರಿಗಳು ಬಿಡ್ತಾ ಇಲ್ಲ ಅಂತ ನನಗೆ ಹೇಳಿದರು. ಅಲ್ಲಿಗೆ ನಾನು ತಲುಪಿದ ಮೇಲೆ ಏನಾದರೂ ಮಾಡ್ತೀನಿ ಅಂತ ಹೇಳಿ, ನಾನು ವಿಜಯ್ ಆಫೀಸಿಗೆ ಹೋದೆ.
ಆ ಆಫೀಸಿನಲ್ಲಿ ನನ್ನನ್ನು ಯಾರೂ ತಡೆಯುತ್ತಿರಲಿಲ್ಲ. ವಾರಕ್ಕೆ ಎರಡು ಸಲವಾದರೂ ಹೋಗುತ್ತಿದ್ದದ್ದರಿಂದ, ಎಲ್ಲರೂ ಪರಿಚಯವಾಗಿದ್ದರು. ವಿಜಯ್ ಕೋರ್ಟ್ ಗೆ ಹೊರಡುವ ತರಾತುರಿಯಲ್ಲಿ ಕಾಗದಗಳನ್ನು ಸಿದ್ದಪಡಿಸುತ್ತಿದ್ದರು. ನನ್ನನ್ನು ನೋಡಿದವರೇ, `ಇದು ತುಂಬಾ ಇಂಟರೆಸ್ಟಿಂಗ್ ಕೇಸ್. ನೀವೇ ಮಾತಾಡಿ. ಆ ಹುಡುಗಿ ಇನ್ನೋಸೆಂಟ್ ಅಂತ ಆ ಹುಡುಗನೇ ಹೇಳ್ತಾನೆ. ಆದ್ರೆ, ಈ ಕೇಸಿಂದ ಅವಳು ತಪ್ಪಿಸಿಕೊಳ್ಳೋಕೆ ಆಗೋಲ್ಲ. ಯಾಕೆಂದ್ರೆ, ಎಲ್ಲಾ ಕನ್ಸೈನ್ ಮೆಂಟ್ ಗಳೂ ಅವಳ ಹೆಸರಲ್ಲೇ ಬುಕ್ ಆಗಿರೋದು,’ ಅಂತ ಹೇಳಿದರು.
ಈ ಇಬ್ಬರು ಬಹಳ ಸಮಯದಿಂದ ಹೆರಾಯಿನ್ ಮತ್ತು ಬ್ರೌನ್ ಶುಗರ್ ಗಳನ್ನು ಡೆಲ್ಲಿಯಿಂದ ತೆಗೆದುಕೊಂಡು ಬಂದು, ಬೆಂಗಳೂರಿನ ವಿವಿಧ ಕೊರಿಯರ್ ಆಫೀಸ್ ಗಳಿಂದ, ಸ್ಪೇನ್, ಕೆನಡಾ, ದಕ್ಷಿಣ ಆಫ್ರಿಕಾ ಮುಂತಾದ ದೇಶಗಳಿಗೆ ಕಳುಹಿಸುತ್ತಿದ್ದರು. ಕೆಲವು ಸಲ ಅವರ ಮಾಲುಗಳು ಸಿಕ್ಕಿಬಿದ್ದರೂ, ಅದನ್ನು ಯಾರು ಬುಕ್ ಮಾಡಿದರು ಅನ್ನೋದು ಗೊತ್ತಾಗುತ್ತಿರಲಿಲ್ಲ. ಯಾಕೆಂದ್ರೆ, ಡಫೀರಾ ಹೆಸರಿನಲ್ಲಿ ಕೊಲ್ಕತ್ತಾ, ಮುಂಬೈ ಮುಂತಾದ ಸ್ಥಳಗಳ ನಕಲಿ ಗುರುತು ಚೀಟಿಗಳನ್ನು ತಯಾರಿಸಿ, ಆ ವಿಳಾಸಗಳನ್ನು ಕೊಟ್ಟಿರುತ್ತಿದ್ದರು. ಬೆಳಗ್ಗಿನ ವಿಮಾನದಲ್ಲಿ ಬಂದಿಳಿದು, ಮೂರು ನಾಲ್ಕು ಪಾರ್ಸೆಲ್ ಗಳನ್ನು ಕೊರಿಯರ್ ಗೆ ಹಾಕಿ, ಸಾಯಂಕಾಲದ ವಿಮಾನದಲ್ಲಿ ವಾಪಾಸ್ ಹೋಗಿಬಿಡುತ್ತಿದ್ದರು.
ಆದರೆ, ಈ ಸಲ ಮಾತ್ರ ಇವರಿಬ್ಬರೂ ಬಂದ ತಕ್ಷಣವೇ ವಿಜಯ್ ತಂಡಕ್ಕೆ ವಿಷಯ ಗೊತ್ತಾಯಿತು. ನಾಲ್ಕು ತಂಡಗಳಲ್ಲಿ ಹುಡುಕೋಕೆ ಶುರುಮಾಡಿದವರಿಗೆ, ಸಾಯಂಕಾಲದ ಹೊತ್ತಿಗೆ ಕೋರಮಂಗಲದ ಕೊರಿಯರ್ ಆಫೀಸಿನಲ್ಲಿ ಸಿಕ್ಕಿದರು. ವಿಜಯ್ ತಂಡ ಇವರನ್ನು ಪಾರ್ಸೆಲ್ ಬಗ್ಗೆ ಕೇಳಿದ ತಕ್ಷಣ, ಹುಡುಗ ಮೊದಲನೇ ಮಹಡಿಯಿಂದ ಹಾರಿ ಓಡಿ ಹೋಗೋಕೆ ನೋಡಿದ್ದಾನೆ. ಆದರೆ, ಇವರ ಹುಡುಗರು ಅವನನ್ನು ಹಿಡಿದುಕೊಂಡಿದ್ದಾರೆ.
ಇಷ್ಟು ಹೇಳಿದ ವಿಜಯ್, ಪಕ್ಕದ ರೂಮಿಗೆ ಕರೆದುಕೊಂಡು ಹೋಗಿ, ಅಲ್ಲಿ ಕುಳಿತಿದ್ದ ಇಬ್ಬರಿಗೆ, `ಇವರು ಕೇಳಿದ್ದಕ್ಕೆಲ್ಲ ಉತ್ತರ ಹೇಳಿ,’ ಅಂತ ನನ್ನನ್ನು ಬಿಟ್ಟು ಹೋದರು.
ನೈಜೀರಿಯನ್ ಹುಡುಗ ಕಟ್ಟು ಮಸ್ತಾಗಿದ್ದ. ಹಾಗೆಯೇ, ಆ ಹುಡುಗಿ ಕೂಡ ಮುದ್ದಾಗಿದ್ದಳು. ಯಾಕೋ, ಅವರಿಬ್ಬರನ್ನು ನೋಡಿದ ತಕ್ಷಣ `ಪಾಪ’ ಅನ್ನಿಸಿತು.
ನಿಧಾನವಾಗಿ ಹುಡುಗನ ಜೊತೆ ಮಾತಾಡೋಕೆ ಶುರು ಮಾಡಿದೆ. ನಾನು ಕೇಳಿದ್ದಕ್ಕೆಲ್ಲ ಸ್ಪಷ್ಟವಾಗಿ ಉತ್ತರ ಕೊಡುತ್ತಾ ಹೋದ. ನನ್ನನ್ನು ಪೋಲಿಸ್ ಅಂತ ತಪ್ಪಾಗಿ ತಿಳಿದ್ದಿದ್ದಾರೆ ಅಂತ ನನಗೆ ಅನ್ನಿಸಿತು.
`ಸರ್, ನನ್ನ ತಂದೆ ನೈಜೀರಿಯಾದಲ್ಲಿ ಪಾದ್ರಿ. ನಾನು ಐದು ವರ್ಷದ ಕೆಳಗೆ ಡೆಲ್ಲಿಗೆ ಮ್ಯಾನೆಜ್ ಮೆಂಟ್ ಓದೋಕೆ ಅಂತ ಬಂದೆ. ಮೊದಲ ಎರಡು ವರ್ಷ, ಕಷ್ಟ ಪಟ್ಟು ಓದಿದೆ. ಆದರೆ ಇಲ್ಲಿನ ಬದುಕು ದುಬಾರಿ. ಆಗ ನನ್ನ ಸ್ನೇಹಿತರು ಈ ಡ್ರಗ್ ವ್ಯವಹಾರದ ಬಗ್ಗೆ ನನಗೆ ಹೇಳಿಕೊಟ್ಟರು.
ಅದೇ ಸಮಯದಲ್ಲಿ ನನಗೆ ಡಫೀರ ಪರಿಚಯವಾಯಿತು. ನನಗೂ ಈ ಬ್ಯುಸಿನೆಸ್ ಮಾಡಲು ಇಲ್ಲಿಯವರೊಬ್ಬರ ಅವಶ್ಯಕತೆಯಿತ್ತು. ಡಫೀರಾಗೆ ನಾನು ಬಟ್ಟೆಗಳ ರಫ್ತು ಮಾಡುವುದಾಗಿಯೂ, ನಾನು ಈ ದೇಶದ ಪ್ರಜೆಯಲ್ಲವಾದ್ದರಿಂದ, ನನ್ನ ಹೆಸರಿನಲ್ಲಿ ಡಾಕ್ಯುಮೆಂಟ್ ಕಳುಹಿಸಲು ಕಷ್ಟವಾಗುತ್ತಿರುವುದಾಗಿಯೂ ಹೇಳಿದೆ. ಪಾಪ ಅವಳು, ನನಗೆ ಸಹಾಯ ಮಾಡಲು ಒಪ್ಪಿಕೊಂಡಳು. ನಾನೇ ನಕಲಿ ಗುರುತು ಪತ್ರಗಳನ್ನು ತಯಾರಿಸಿ, ಅವುಗಳಿಗೆ ಡಫೀರಾಳ ಫೋಟೋ ಅಂಟಿಸಿ, ಅವಳನ್ನು ಕೊರಿಯರ್ ಆಫೀಸ್ ಗಳಿಗೆ ಕರೆದುಕೊಂಡು ಹೋಗಿ, ಪಾರ್ಸೆಲ್ ಕಳುಹಿಸುತ್ತಿದ್ದೆ’.
`ಅವಳಿಗೆ ನಾನು ಡ್ರಗ್ ವ್ಯವಹಾರ ಮಾಡುವುದು ಗೊತ್ತಾಗದಂತೆ ತುಂಬಾ ಎಚ್ಚರ ವಹಿಸಿದ್ದೆ. ಅವಳು ತುಂಬಾ ಒಳ್ಳೆ ಹುಡುಗಿ. ಬರುಬರುತ್ತಾ, ನನಗೆ ಅವಳು ತುಂಬಾ ಇಷ್ಟವಾಗತೊಡಗಿದಳು. ಅವಳನ್ನು ಮದುವೆಯಾಗಬೇಕು ಅಂತ ಯೋಚನೆ ಮಾಡಿ, ನಾವಿಬ್ಬರೂ ಒಟ್ಟಿಗೆ ಇರೋಕೆ ಶುರುಮಾಡಿದೆವು. ಇತ್ತೀಚೆಗೆ ನಾನು ಈ ಡ್ರಗ್ಸ್ ಬ್ಯುಸಿನೆಸ್ ಬಿಡಬೇಕು ಮತ್ತು ಬೇರೆ ಯಾವುದಾದರೂ `ಲೀಗಲ್’ ಬ್ಯುಸಿನೆಸ್ ಶುರು ಮಾಡಬೇಕು ಅಂತ ಯೋಚನೆ ಮಾಡ್ತಿದ್ದೆ. ಅದಕ್ಕೆ ಬಂಡವಾಳ ಬೇಕಿತ್ತು ಮತ್ತೆ ನಾನು ಡಫೀರಾಳ ಜೊತೆ ಡೆಲ್ಲಿಯಲ್ಲಿರೋಕೆ ಒಂದು ಫ್ಲ್ಯಾಟ್ ತಗೋಬೇಕಿತ್ತು. ಅದಕ್ಕೆ ಅಂತ ನಾನು ಇನ್ನೊಂದೆರೆಡು ಸಲ `ಕನ್ಸೈನ್ ಮೆಂಟ್’ ಕಳುಹಿಸಿ, ಸೆಟಲ್ ಆಗಿಬಿಡೋಕೆ ಯೋಚನೆ ಮಾಡಿದ್ದೆ’, ಅಂದ.
`ನಿನಗೆ ಈ ಡ್ರಗ್ಸ್ ಯಾರು ಸಪ್ಲೈ ಮಾಡುತ್ತಿದ್ದರು?’ ಅಂತ ಕೇಳಿದೆ.
`ಇದು ಎಲ್ಲಿಂದ ಬರುತ್ತೆ ಅಂತ ನನಗೂ ಗೊತ್ತಿಲ್ಲ. ಈ ಪಾರ್ಸೆಲ್ ಗಳನ್ನು ನನಗೆ ಕೊಡುವವರು ಮಾತ್ರ ಗೊತ್ತು. ಅವರ ವಿವರಗಳನ್ನು ಬೇಕಾದರೆ ನಾನು ಕೊಡುತ್ತೇನೆ. ಸರ್, ಇದರಲ್ಲಿ ಡಫೀರಾದೇನೂ ತಪ್ಪಿಲ್ಲ. ಅವಳನ್ನು ಬಿಟ್ಟುಬಿಡಿ ಸರ್. ಎಲ್ಲಾ ತಪ್ಪುಗಳನ್ನೂ ನಾನು ಒಪ್ಪಿಕೊಳ್ಳುತ್ತೇನೆ. ಅವಳು ತುಂಬಾ ಒಳ್ಳೆಯ ಹುಡುಗಿ ಸರ್,’ ಅಂದ.
ನಾನು ನಿಧಾನವಾಗಿ ಹುಡುಗಿಯ ಕಡೆಗೆ ತಿರುಗಿ, `ಯಾವೂರು?’ ಅಂತ ಕೇಳಿದೆ.
`ಶಿಲ್ಲಾಂಗ್…. ಮೇಘಾಲಯ,’ ಅಂದಳು.
`ಅಲ್ಲಿ ನಿಮ್ಮ ಕುಟುಂಬದ ಬ್ಯುಸಿನೆಸ್ ಇದೆಯಾ?’ ಅಂತ ಕೇಳಿದೆ.
ಸುಮ್ಮನೆ ತಲೆ ಆಡಿಸಿದಳು.
`ನೀನು ಇದರಲ್ಲಿ ಹೇಗೆ ಬಿದ್ದೆ?’ ಅಂತ ಕೇಳಿದೆ.
ತನ್ನ ಎರಡೂ ಕೈಗಳಿಂದ, ಮೂಗು ಮತ್ತು ಗಲ್ಲವನ್ನು ಮುಚ್ಚಿಕೊಂಡು ಶೂನ್ಯವನ್ನು ದಿಟ್ಟಿಸತೊಡಗಿದಳು. ರಾತ್ರೆಯೆಲ್ಲ ನಿದ್ರೆ ಮಾಡಿಲ್ಲ ಅನ್ನೋದು ಸ್ಪಷ್ಟವಾಗಿ ಕೆಂಪಾದ ಕಣ್ಣುಗಳಿಂದ ಗೊತ್ತಾಗತೊಡಗಿತು. ಆಕೆ ಏನೂ ಉತ್ತರಿಸಲಿಲ್ಲ.
ಸರಿ, ಇವಳಿಂದ ಇನ್ನೇನೂ ಸಿಗೋದಿಲ್ಲ ಅಂದ್ಕೊಂಡು ಹೊರಡಲು ಎದ್ದೆ. ತಕ್ಷಣವೇ ಡಫೀರಾ ಮಾತಾಡಿದಳು: `ಸರ್, ನನ್ನ ಕುಟುಂಬಕ್ಕೆ ನಾನು ಅರೆಸ್ಟ್ ಆಗಿರೋದು ಗೊತ್ತಾಗಬಾರದು. ಅವರಿಗೆ ತಡೆದುಕೊಳ್ಳಲು ಆಗೋದಿಲ್ಲ,’ ಅಂದಳು.
ನಾನು ತಲೆ ಅಲ್ಲಾಡಿಸುತ್ತಾ ತಿರುಗಿದಾಗ, ಆ ಹುಡುಗ ನನ್ನ ಎಡದ ಕೈ ಹಿಡಿದುಕೊಂಡು: `ಸರ್, ಡಫೀರಾಳನ್ನು ಬಿಟ್ಟು ಬಿಡಿ ಸರ್. ಅವಳು ತುಂಬಾ ಮುಗ್ದೆ. ಅವಳಿಗೆ ಏನು ಶಿಕ್ಷೆ ಇದೆಯೋ, ಅದನ್ನು ಸಹ ನಾನೇ ಅನುಭವಿಸುತ್ತೇನೆ. ನನ್ನನ್ನು ನೇಣಿಗೇರಿಸಿದರೂ ಪರವಾಗಿಲ್ಲ. ಅವಳಿಗೆ ಸಹಾಯ ಮಾಡಿ ಸರ್,’ ಅಂತ ಅಂಗಲಾಚಿದೆ.
ಅವನ ಮುಖವನ್ನೇ ನೋಡಿದೆ. ಅವನ ಕಣ್ಣಲ್ಲಿ ನೀರು ಹನಿಗೂಡಿತ್ತು. ಹಾಗೇ ಡಫೀರಾಳ ಮುಖ ನೋಡಿದೆ. ಅವಳು ಎವೆಯಿಕ್ಕದೆ  ಅವನನ್ನೇ ನೋಡುತ್ತಿದ್ದಳು. ಅವಳ ಕಣ್ಣಲ್ಲಿ ಒಂದು ಹನಿ ನೀರು ಕೂಡ ಇರಲಿಲ್ಲ. ಅದು ಸಿಟ್ಟೋ, ದುಃಖವೋ ಅನ್ನೋದು ಗೊತ್ತಾಗಲಿಲ್ಲ. ಇದೇನಾ `ಮಡುಗಟ್ಟಿದ ಆಕ್ರೋಶ’ ಅಂದರೆ ಅಂದ್ಕೊಂಡೆ.
ಹೊರಗಡೆ ಬಂದವನು ವಿಜಯ್ ಹತ್ತಿರ ಹೋಗಿ, `ಟೀವಿಯವರಿರೆ ವಿಡಿಯೋ ತೆಗೆಯೋಕೆ ಬಿಡಲಿಲ್ಲವಂತೆ? ಒಂದಿಬ್ಬರು ಕೇಳಿದರು, ಅಂದೆ.
`ಇಲ್ಲ ವಿನಯ್. ತುಂಬಾ ಪ್ರೆಶರ್ ಇದೆ. ಕೋರ್ಟ್ ಹತ್ತಿರ ತಗೊಳ್ಳೋಕೆ ಹೇಳಿ,’ ಅಂದರು.
`ಸರಿ,’ ಅಂತ ಹೇಳಿ, ಅಲ್ಲಿಂದ ಹೊರಟೆ.
ಆಫೀಸಿಗೆ ಬಂದವನೇ, ನನ್ನ ಜೊತೆ ಕೆಲಸ ಮಾಡುತ್ತಿದ್ದ ಶಿಲ್ಲಾಂಗ್ ಹುಡುಗಿ ಧರಿಣ್ಯಳಿಗೆ ವಿಷಯ ಹೇಳಿದೆ. ಡಫೀರಾ ವಾಲಂಗ್ ಎಂದ ತಕ್ಷಣವೇ, `ವಾಲಂಗ್ ಶಿಲ್ಲಾಂಗ್ ನಲ್ಲೇ ದೊಡ್ಡ ಕುಟುಂಬ. ಆ ಕುಟುಂಬದ ಹುಡುಗಿ ಯಾಕೆ ಹೀಗೆ ಮಾಡಿದಳು? ಅವಳನ್ನು ನಾನು ನೋಡಬಹುದಾ?’ ಅಂತ ಕೇಳಿದಳು.
`ಈಗ ಅವಳನ್ನು ಜೈಲಿಗೆ ಕಳುಹಿಸಿದ್ದಾರೆ. ಬೇಕಾದರೆ ಹೇಳು… ನಾಳೆ ನಾಡಿದ್ದರಲ್ಲಿ ವ್ಯವಸ್ಥೆ ಮಾಡ್ತೀನಿ,’ ಅಂದೆ.
ಎರಡು ದಿನ ಬಿಟ್ಟು ವಿಜಯ್ ಗೆ ಫೋನ್ ಮಾಡಿ, `ಡಫೀರಾ ಕುಟುಂಬ ಶಿಲ್ಲಾಂಗ್ ನಲ್ಲೇ ದೊಡ್ಡ ಕುಟುಂಬ ಅಂತೆ. ನನ್ನ ಜೊತೆ ಕೆಲಸ ಮಾಡುವ ಹುಡುಗಿ ಶಿಲ್ಲಾಂಗ್ ನವಳು. ಅವಳು ಹೇಳಿದಳು,’ ಅಂದೆ.
`ಹೌದು ವಿನಯ್. ಅದಕ್ಕೇ ನಾವು ವಿಡಿಯೋ ತೆಗೆಯೋಕೆ ಬಿಡಲಿಲ್ಲ. ಅವಳು ಅರೆಸ್ಟ್ ಆದ ವಿಷಯ ಗೊತ್ತಾದ ತಕ್ಷಣ ನಮಗೆ ಶಿಲ್ಲಾಂಗ್ ಮತ್ತು ಡೆಲ್ಲಿಯಿಂದ ಫೋನ್ ಗಳು ಬರಲಾರಂಬಿಸಿದವು. ವಿ ವರ್ ಅಂಡರ್ ಟ್ರೆಮೆಂಡಸ್ ಪ್ರೆಶರ್. ಮೀಡಿಯಾಗೆ ಹೇಳಬಾರದು ಅಂತ ಇದ್ದೆವು……,’ ಅಂತ ಹೇಳುತ್ತಾ ಹೋದಾಗ, ಶೂನ್ಯವನ್ನೇ ದಿಟ್ಟಿಸುತ್ತಿದ್ದ ಡಫೀರಾಳ ಮುಖ ಒಮ್ಮೆ ಕಣ್ಣ ಮುಂದೆ ಬಂತು…….


ಮಾಕೋನಹಳ್ಳಿ ವಿನಯ್ ಮಾದವ್



ಶುಕ್ರವಾರ, ಸೆಪ್ಟೆಂಬರ್ 21, 2012

ಪಂಚಾಯ್ತಿ ಪಾಲಿಟಿಕ್ಸ್




ಡಾ! ಪಂಚಾಯ್ತಿ ಪ್ರೆಸಿಡೆಂಟ್

ಅಮ್ಮ ಯಾಕೋ `ಓವರ್ ರಿಯಾಕ್ಟ್’ ಮಾಡ್ತಾ ಇದೆ ಅಂತ ಅನ್ನಿಸ್ತು. ಯಾರು ಬಂದು ಅಣ್ಣನ ರಿಟೈರ್ ಮೆಂಟ್ ಲೈಫ್ ಬಗ್ಗೆ ಕೇಳಿದ್ರೂ: `ಯಾರಿಗೆ ರಿಟೈರ್ ಮೆಂಟ್ ಕೊಟ್ಟರೂ, ಡಾಕ್ಟರ್ ಗಳಿಗೆ ಮಾತ್ರ ರಿಟೈರ್ ಮೆಂಟ್ ಕೊಡಬಾರ್ದು. ರಿಟೈರ್ ಆದಮೇಲೆ ನೋಡೋಕೆ ಪೇಶೆಂಟ್ಸ್ ಇರೋದಿಲ್ಲವಲ್ಲ, ಅವರಿಗೆ ಎಲ್ಲಾರಲ್ಲೂ ಖಾಯಿಲೆ ಕಾಣಿಸುತ್ತೆ,’ ಅಂತ ಗೊಣಗಾಡ್ತಿದ್ರು.
ಅಣ್ಣನ ಜೀವನವೇ ಒಂಥರಾ ವಿಚಿತ್ರ. ಅದನ್ನು ಅರ್ಥ ಮಾಡಿಕೊಳ್ಳೋಕೆ ಕಷ್ಟ ಆಗ್ತಿತ್ತು. ನಾನು ನೋಡಿದ ಹಾಗೆ, ಸಕಲೇಶಪುರ ಬಿಟ್ಟರೆ, ಅಣ್ಣ ಕೆಲಸ ಮಾಡಿದ್ದೆಲ್ಲಾ ಹಳ್ಳಿಗಳ ಆಸ್ಪತ್ರೆಗಳಲ್ಲಿ. ಜೀವನದಲ್ಲಿ ಒಂದು ಸಲನೂ ಪ್ರಮೋಶನ್ ತಗೊಳ್ಳಲಿಲ್ಲ. ಹೆಚ್ಚಿಗೆ ಮಾತನಾಡದ ಅಣ್ಣನನ್ನು ನೋಡಿ ಇವರಿಗೆ ಯಾರೂ ಸ್ನೇಹಿತರಿಲ್ಲ ಅಂದುಕೊಂಡಿದ್ದೆ. ಅಮ್ಮ, ಅಣ್ಣನ ಯಾವುದಾದರೂ ಸ್ನೇಹಿತರ ಹೆಸರು ಹೇಳಿದರೆ ನನಗೆ ಆಶ್ಚರ್ಯವಾಗುತ್ತಿತ್ತು. ಇವರೆಲ್ಲ ಅಣ್ಣನ ಜೀವನದ ಯಾವ ಭಾಗದಲ್ಲಿ ಬಂದಿದ್ದರು ಅಂತ ಅರ್ಥವಾಗುತ್ತಿರಲಿಲ್ಲ.
ಅಣ್ಣನಿಗೆ ರಿಟೈರ್ ಆಗಲು ಎರಡು ವರ್ಷವಿದ್ದಾಗ ಅವರ ಗೆಳೆಯರಲ್ಲೊಬ್ಬರಾದ ಡಾ! ಎಚ್ ಎಲ್ ತಿಮ್ಮೇಗೌಡರು ಆರೋಗ್ಯ ಮಂತ್ರಿಯಾಗಿದ್ದರು. ಒಂದೆರೆಡು ಸಲ ಅಣ್ಣನನ್ನು ಬೆಂಗಳೂರಿಗೆ ವರ್ಗ ಮಾಡಿಸಿದ್ದರೂ, ಅಣ್ಣ ಬರಲು ಒಪ್ಪಿರಲಿಲ್ಲ. ಕೊನೆ ಮೂರು ವರ್ಷಗಳು ಇದ್ದಾಗ ಅವರನ್ನು ಸಹಾಯಕ ಸರ್ಜನ್ ಅಂತ ಪ್ರಮೋಶನ್ ಕೊಟ್ಟು, ಮೂಡಿಗೆರೆಗೆ ಹಾಕಿದ್ದರು. ಆಗಲೂ ಅಷ್ಟೆ, ಊರಿನ ಹತ್ತಿರ ಹೋಗೋದಾದ್ರೆ ತೋಟಕ್ಕೆ ಹೋಗೋಣ ಅಂತ ಅಮ್ಮ ಹೇಳಿದರಿಂದ, ಯಾರೂ ಬರದ ನಂದೀಪುರದ ಆಸ್ಪತ್ರೆಗೆ ವರ್ಗ ಮಾಡಿಸಿಕೊಂಡರು. ನಂದೀಪುರ ಆಸ್ಪತ್ರೆ ನಮ್ಮ ತೋಟದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿದೆ.
ಅಲ್ಲಿಂದ ಮುಂದೆ ಪೂರ್ತಿ ಬ್ಯುಸಿ ಆಗಿದ್ದು ಅಮ್ಮ. ಹನ್ನೆರೆಡು ಕಿಲೋಮೀಟರ್ ದೂರದ ರೈಸ್ ಮಿಲ್ಲಿನಲ್ಲಿ ಕುಳಿತ ಅಜ್ಜನ ಉಸ್ತುವಾರಿಯಲ್ಲಿ, ಕಾಡು ಹತ್ತಿದ ತೋಟದ ಮಧ್ಯ ಕಾಫಿ ಗಿಡಗಳನ್ನು ಟಾರ್ಚ್ ಬಿಟ್ಟು ಹುಡುಕಬೇಕಿತ್ತು. ಅಣ್ಣ ನಾಲ್ಕು ಕಿಲೋಮೀಟರ್ ದೂರದ ಆಸ್ಪತ್ರೆ ಯಾತ್ರೆ ಶುರು ಮಾಡಿದರೆ, ಅಮ್ಮ ಕಾಡು ಕಡಿದು ತೋಟ ಮಾಡುವ ಕೆಲಸಕ್ಕೆ ನಿಂತರು. ಸರ್ಕಾರವು ನೌಕರರ ನಿವೃತ್ತಿ ವಯಸ್ಸನ್ನು ಐವತೈದರಿಂದ, ಐವತ್ತೆಂಟಕ್ಕೆ ಏರಿಸಿದ ಪರಿಣಾಮವಾಗಿ, ಅಣ್ಣ ಮೂರು ವರ್ಷದ ಬದಲು, ನಂದೀಪುರ ಆಸ್ಪತ್ರೆಯಲ್ಲಿ ಆರು ವರ್ಷ ಕೆಲಸ ಮಾಡಬೇಕಾಯಿತು. ಯಾರೂ ಬರಲು ಇಷ್ಟ ಪಡದ ನಂದೀಪುರ ಆಸ್ಪತ್ರೆಗೆ ಇದು ವರದಾನವಾಯ್ತು ಅಂತಲೇ ಹೇಳಬಹುದು.
ಆರು ವರ್ಷವೂ ಮುಗಿದ ಮೇಲಂತೂ ಅಣ್ಣ ನಿವೃತ್ತಿಯಾಗಲೇ ಬೇಕಾಯಿತು. ಅಷ್ಟರೊಳಗೆ ನಾನೂ ಮತ್ತು ವೆಂಕಟೇಶಣ್ಣ, ನಮ್ಮ ದಾರಿಗಳನ್ನು ನೋಡಿಕೊಳ್ಳಲು ಬೆಂಗಳೂರು ದಾರಿ ಹಿಡಿದಾಗಿತ್ತು. ಅಣ್ಣ ನಿವೃತ್ತಿಯಾದಮೇಲೆ ಅಮ್ಮನಿಗೆ ಸ್ವಲ್ಪ ಕೆಲಸ ಹಗುರವಾಗಬಹುದು ಅಂದುಕೊಂಡಿದ್ದೆ. ಅದು ತಪ್ಪು ಅಂತ ಗೊತ್ತಾಗಿದ್ದೇ ಊರಿಗೆ ಹೋದಾಗ.
ಜೀವನವಿಡೀ ರೋಗಿಗಳೊಡನೆ ಆಸ್ಪತ್ರೆಯಲ್ಲಿ ಕಳೆದ ಅಣ್ಣನಿಗೆ, ಮನೆಯಲ್ಲಿ ಏನು ಮಾಡಬೇಕು ಅಂತ ಗೊತ್ತಿರಲಿಲ್ಲ. ಬ್ಯಾಂಕ್ ವ್ಯವಹಾರ ನೋಡಿಕೊಳ್ಳುತ್ತಿದ್ದರು ಮತ್ತು ಆಗಾಗ ತೋಟಕ್ಕೆ ಹೋಗಿ ಬರುತ್ತಿದ್ದರು. ಏನನ್ನಿಸಿತೋ ಏನೋ, ಅಮ್ಮ ಬೆಳಗ್ಗೆ ಆಳುಗಳಿಗೆ ಕೆಲಸ ಹೇಳುವ ಸಮಯದಲ್ಲಿ ಅಣ್ಣನೂ ಹೋಗಿ ನಿಲ್ಲಲು ಶುರುಮಾಡಿದರಂತೆ.
ಸುಮ್ಮನಿದ್ದರಾಗುತ್ತಿತ್ತೇನೋ… ಕೆಲಸದವರನ್ನು ನೋಡಿ, `ವಿಜು… ಆ ಹುಡುಗಿಯನ್ನು ನೋಡು, ಎಷ್ಟು ತೆಳ್ಳಗಿದ್ದಾಳೆ. ಅನೀಮಿಕ್ ಅವಳಿಗೆ. ವಿಟಮಿನ್ ಟ್ಯಾಬ್ಲೆಟ್ ಕೊಡಬೇಕು. ಅವನಿದ್ದಾನಲ್ಲ… ಅವನು ಇರೋ ರೀತಿಯಲ್ಲಿ ಮರ ಹತ್ತೋದು ಡೇಂಜರ್….’ ಅಂತೆಲ್ಲ ಮಾತಾಡಲು ಶುರು ಮಾಡಿದರು.
ಅಮ್ಮನ ಪಿತ್ತ ನೆತ್ತಿಗೇರಿ, ಅಣ್ಣನನ್ನು ಬೆಳಗ್ಗಿನ ಹೊತ್ತು ಆಳುಗಳು ಮನೆಯ ಸುತ್ತ ಇರುವಾಗ ಹೊರಗೆ ಬರುವುದನ್ನೇ ನಿಷೇಧಿದರು. ಪಾಪ ಅಣ್ಣ, ಅವರ ಪಾಡಿಗೆ ಯಾವುದಾದರೂ ಪುಸ್ತಕ ಹಿಡ್ಕೊಂಡು ಒಳಗೆ ಕೂತಿರುತ್ತಿದ್ದರು. ಅದರ ಜೊತೆ, ಬಂದವರ ಹತ್ತಿರವೆಲ್ಲ ಅಮ್ಮ ಈ ಘಟನೆಗಳನ್ನು ಹೇಳಿ, `ಕೆಲಸ ಮಾಡಿ ಆಳುಗಳು ಇರೋದೇ ತೆಳ್ಳಗೆ. ಗಂಡಾಳುಗಳು ಕುಡಿದೂ ಕುಡಿದೂ ಯಾವಾಗ ಬೀಳ್ತಾರೆ ಅಂತ ಹೇಳೋಕಾಗಲ್ಲ. ಇವರು ಹೀಗೆ ಅವರುಗಳ ಮುಂದೆ ಮಾತಾಡಿದ್ರೆ, ನಾನು ಈ ಆಳುಗಳನ್ನು ಇಟ್ಕೊಂಡು ಕೆಲಸ ತೆಗೆಯೋದು ಹ್ಯಾಗೆ? ರಿಟೈರ್ ಆದ ಡಾಕ್ಟರ್ ಗಳಿಗೆ ಯಾವುದಾದರೂ ಕೆಲಸ ಹಚ್ಚಬೇಕು. ಇಲ್ದೇ ಹೋದ್ರೆ, ನಮ್ಮನ್ನೇ ಪೇಶೆಂಟ್ ಮಾಡ್ತಾರೆ, ಅಷ್ಟೆ,’ ಅಂತ ತಮಾಷೆ ಕೂಡ ಮಾಡ್ತಿದ್ರು.
ನನಗೆ ಅಣ್ಣನನ್ನು ನೋಡಿ ಪಾಪ ಅನ್ನಿಸ್ತು. `ಹೋಗ್ಲಿ ಬಿಡಮ್ಮ. ಅಣ್ಣ ಏನು ಮಾಡೋಕಾಗುತ್ತೆ. ತೋಟದ ಬಗ್ಗೆ ಅಣ್ಣಂಗೆ ಎಷ್ಟು ಗೊತ್ತು? ನಿಧಾನಕ್ಕೆ ಗೊತ್ತಾಗುತ್ತೆ, ಬಿಡು,’ ಅಂತ ಹೇಳೋಕೆ ಹೋಗಿ, ಅಮ್ಮನ ಕೈಲಿ ಚೆನ್ನಾಗಿ ಬೈಸಿಕೊಂಡೆ. `ಹೋಗೋ.. ನಿನಗೇನು ಗೊತ್ತು ತೋಟದ ಬಗ್ಗೆ. ಸುಮ್ಮನೆ ನಿನ್ನ ಕೆಲಸ ನೋಡ್ಕೋ,’ ಅಂದ್ರು. ನಾನು ತೆಪ್ಪಗಾದೆ.
ಇದೆಲ್ಲಾ ಆಗಿ ಒಂದು ವರ್ಷ ಆಗ್ತಾ ಬಂದಿತ್ತು. ನಮ್ಮ ಸಂಬಂಧಿಯೊಬ್ಬರ ಮದುವೆಗೆ ಅಂತ ಊರವರೆಲ್ಲ ಬೆಂಗಳೂರಿಗೆ ಬಂದಿದ್ದರು. ಅಮ್ಮ, ಅಣ್ಣನೂ ಬಂದಿದ್ದರು. ಬಸವೇಶ್ವರನಗರದ ದೊಡ್ಡಮ್ಮನ ಮನೆಯಲ್ಲಿ ಊರವರೆಲ್ಲ ಸೇರಿದಾಗ ನನಗೆ ಒಂದು ವಿಷಯ ಕಿವಿಗೆ ಬಿತ್ತು: `ಅಣ್ಣ ಪಂಚಾಯ್ತಿ ಎಲೆಕ್ಷನ್ ನಿಲ್ತಾರೆ,’ ಅಂತ.
ಸಿಕ್ಕಾಬಟ್ಟೆ ನಗು ಬಂತು. ಅಣ್ಣಂಗೆ ಈ ಹುಚ್ಚು ಯಾವಾಗ ಹಿಡೀತು? ನಮ್ಮ ಕುಟುಂಬ ರಾಜಕಾರಣದಲ್ಲಿ ಸಕ್ರಿಯವಾಗಿರೋದೇನೋ ನಿಜ. ಇಬ್ಬರು ಪಾರ್ಲಿಮೆಂಟ್ ಮೆಟ್ಟಲು ಸಹ ಹತ್ತಿದ್ದಾರೆ. ಆದರೆ, ಅಣ್ಣ ಮತ್ತು ರಾಜಕಾರಣ? ಅರ್ಥವಾಗಲಿಲ್ಲ.
ಸುಂದರೇಶ ಚಿಕ್ಕಪ್ಪನನ್ನು ಕೇಳಿದೆ. `ಅದಾ… ದೊಡ್ಡ ವಿಷಯ ಅಲ್ಲ ಬಿಡು ಮಗಾ. ಈಗ ನಮ್ಮೂರಲ್ಲಿ ಎಲ್ಲಾ ಪಾರ್ಟಿ ಸದಸ್ಯರಿದ್ದಾರೆ. ಯಾವುದಾದರೂ ಪಾರ್ಟಿಯವರು ನಿಂತರೆ ಮುಂದೆ ಸಣ್ಣ, ಪುಟ್ಟ ಸಮಸ್ಯೆಗಳು ಬರಬಹುದು. ಜೊತೆಗೆ, ಪ್ರೆಸಿಡೆಂಟ್ ಜನರಲ್ ಕ್ಯಾಟೆಗರಿಗೆ ಬಂದಿದೆ. ಅದಕ್ಕೆ ನಾವು ಊರವರೆಲ್ಲ ಸೇರಿ, ಯಾರು ರಾಜಕೀಯದಲ್ಲಿ ಇಲ್ಲವೋ, ಅವರನ್ನ ಎಲೆಕ್ಷನ್ ಗೆ ನಿಲ್ಸೋದು ಅಂತ ತೀರ್ಮಾನಿಸಿದ್ವಿ. ಮಾಧವಣ್ಣನೂ ರಿಟೈರ್ ಆದಮೇಲೆ ಏನು ಮಾಡಬೇಕೂಂತ ಗೊತ್ತಿಲ್ಲದೆ ಕೂತಿದ್ದ. ಅವನಾದ್ರೆ ಏನೂ ಸಮಸ್ಯೆ ಬರೋದಿಲ್ಲ ಅಂತ ಅಷ್ಟೆ,’ ಅಂದ್ರು.
`ಅಲ್ಲಾ, ನಾಡಿದ್ದೇ ಎಲೆಕ್ಷನ್. ಅಣ್ಣನ ಎದುರು ಇಬ್ಬರು ನಿಂತಿದ್ದಾರಂತೆ. ನೀವೆಲ್ಲ ಇಲ್ಲಿದ್ದೀರ?’ ಅಂತ ರಾಗ ಎಳೆದೆ.
`ಅಯ್ಯೋ ಬಿಡು. ಅವರಿಬ್ಬರಿಗೆ ಸೇರಿ ಇಪ್ಪತೈದು ಓಟು ಬರೋಲ್ಲ. ಜಯಕ್ಕನನ್ನೂ ನಿಲ್ಸಿದ್ದೀವಿ. ಅವ್ರೂ ಇಲ್ಲೇ ಇಲ್ಲವಾ? ಅವರು ವೈಸ್ ಪ್ರೆಸಿಡೆಂಟ್ ಆಗ್ತಾರೆ ಬಿಡು. ತಲೆ ಕೆಡೆಸಿಕೊಳ್ಳಬೇಡ,’ ಅಂದ್ರು.
ಇದೊಳ್ಳೆ ಎಲೆಕ್ಷನ್ ಅಂದುಕೊಂಡು, ನಕ್ಕುಬಿಟ್ಟೆ. ಅಮ್ಮನ ಹತ್ತಿರ ಹೋಗಿ, `ಏನಮ್ಮಾ? ಗಂಡನ್ನ ಪಾಲಿಟಿಕ್ಸ್ ಗೆ ಇಳಿಸಿದ್ದೀಯಂತೆ?’ ಅಂತ ತಮಾಷೆ ಮಾಡಿದೆ.
`ನನ್ನ ಮಾತು ಯಾರು ಕೇಳ್ತಾರೆ. ಇದೊಂದು ಕಮ್ಮಿ ಇತ್ತು, ಮನೆ ಹಾಳಾಗೋಕೆ,’ ಅಂತ ಅಮ್ಮ ಸಿಡುಕಿದರು. ಅಷ್ಟರಲ್ಲೇ ಹಿಂದುಗಡೆಯಿಂದ ಬಂದ ಸುಂದರೇಶ್ ಚಿಕ್ಕಪ್ಪ: `ಇವತ್ತು ಎಷ್ಟೋ ಪರವಾಗಿಲ್ಲ ಕಣೋ. ಅವತ್ತು ನಿಮ್ಮಮ್ಮ ಗೊಳೋ ಅಂತ ಅಳೋಕೆ ಶುರುಮಾಡಿದ್ರು. ಎಲೆಕ್ಷನ್ ಗೆ ನಿಂತು ಮಾಧವಣ್ಣ ಮನೆ ಹಾಳು ಮಾಡ್ತಾನೆ ಅಂತ. ತುಂಬಾ ಹೊತ್ತು ಸಮಾಧಾನ ಮಾಡಿ, ಎಲೆಕ್ಷನ್ ಖರ್ಚು ಊರವರೇ ನೋಡ್ಕೋತ್ತೀವಿ, ಮಾಧವಣ್ಣ ಓಡಾಡೋದೂ ಬೇಡ, ಅಂದ್ಮೇಲೆ ಸುಮ್ಮನಾದ್ರು,’ ಅಂತ ನಕ್ಕರು.
ನಾನೂ ನಗುತ್ತಾ ಅಮ್ಮನ ಮುಖ ನೋಡಿದೆ. `ನಾನು ಇಷ್ಟು ವರ್ಷ ಕಷ್ಟ ಪಟ್ಟು ತೋಟ ಮಾಡಿದೆ. ಇವ್ರು ಎಲೆಕ್ಷನ್ ನಿಂತು ಯಾರನ್ನ ಉದ್ದಾರ ಮಾಡಬೇಕು? ಈ ವಯಸ್ಸಲ್ಲಿ ರಾಜಕೀಯ ಅಂತ ಮನೆ ಹಾಳು ಮಾಡಿಕೊಳ್ಳೋದೊಂದು ಬಾಕಿ ಇದೆ,’ ಅಂತ ಅಮ್ಮ ಗೊಣಗಿದರು.
`ಹೋಗ್ಲಿ ಬಿಡಮ್ಮ. ಯಾಕ್ಹಿಂಗಾಡ್ತೀಯ? ಅಣ್ಣಂಗೆ ಮನೇಲಿ ಇದ್ದು ಅಭ್ಯಾಸ ಇಲ್ಲ. ಈ ಥರ ಸೋಶಿಯಲ್ ಸರ್ವಿಸ್ ಮಾಡ್ಲಿ ಬಿಡು,’ ಅಂದೆ. `ನಿಂಗೊತ್ತಾಗಲ್ಲ ಬಿಡು. ನಮಗ್ಯಾಕೆ ಬೇಕು ಈ ಪಾಲಿಟಿಕ್ಸ್,’ ಅಂತ ಅಮ್ಮ ಬೈದ್ರು.
ನಮ್ಮ ಕುಟುಂಬ ರಾಜಕೀಯದಲ್ಲಿದ್ರೂ, ನಮ್ಮ ಮನೆಯಲ್ಲಿ ನಾವ್ಯಾರೂ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಮೊದಲ ಸಲ ರಾಜ್ಯದಲ್ಲಿ ಜಿಲ್ಲಾ ಪರಿಷತ್ ಚುನಾವಣೆಯಾದಾಗ ನಾನಿನ್ನೂ ಪಿಯುಸಿ ಓದುತ್ತಿದ್ದೆ. ಆ ಚುನಾವಣೆಯಲ್ಲಿ ಓಡಾಡಿದ್ದು ಅಮ್ಮನಿಗಾಗಲಿ, ಅಣ್ಣನಿಗಾಗಲಿ ಇಷ್ಟವಾಗಿರಲಿಲ್ಲ. ಅದಾದ ಮೇಲೆ ನಾನೂ ಊರಿಗೆ ಪುರುಸೋತ್ತಾಗಿ ಹೋಗಿದ್ದು, ಊರಿನ ರಾಜಕೀಯದಲ್ಲಿ ತಲೆ ಹಾಕಿದ್ದು ಕಡಿಮೆಯಾಗಿತ್ತು.
ಸುಂದರೇಶ್ ಚಿಕ್ಕಪ್ಪ ಹೇಳಿದ್ದು ನಿಜವಾಗಿತ್ತು. ಅಣ್ಣನ ಎದುರು ನಿಂತವರಿಬ್ಬರೂ ಅಷ್ಟೋ ಇಷ್ಟೋ ಓಟುಗಳನ್ನು ತೆಗೆದುಕೊಂಡಿದ್ದರು. ಇನ್ನುಳಿದ ಓಟುಗಳೆಲ್ಲಾ ಅಣ್ಣನಿಗೇ ಬಂದಿತ್ತು. ಅದು ಗೊತ್ತಾಗಿದ್ದು ಮುಂದಿನ ಸಲ ಊರಿಗೆ ಹೋದಾಗ.
ಅಣ್ಣನ ಚಿಕ್ಕಪ್ಪನ ಮಗ ಶಶಿಧರಣ್ಣನ ಜೊತೆ ಮಾತಾಡ್ತಾ, `ಹ್ಯಾಗಿತ್ರಿ ನಿಮ್ಮಣ್ಣನ ಎಲೆಕ್ಷನ್?’ ಅಂತ ತಮಾಷೆ ಮಾಡಿದೆ.
`ಅದೇನು ಬಿಡು ಮಾರಾಯ. ಇಬ್ಬರೂ ಠೇವಣಿ ಕಳ್ಕೊಂಡ್ರು ಅಷ್ಟೆ. ನಮ್ಮದೇ ಓಟುಗಳಲ್ವಾ? ನಮ್ಮ ಕೇಶವ ಮೂರ್ತಿಯಂತೂ ಒಂದು ಬೂತನ್ನೇ ಕಂಟ್ರಾಕ್ಟ್ ತಗೊಂಡಿದ್ದ. ಅವನೊಬ್ಬನೇ ಆರೋ, ಏಳೋ ಓಟು ಹಾಕಿದ್ನಂತೆ,’ ಅಂತ ನಕ್ಕರು.
ಕೇಶವ ಮೂರ್ತಿ ಅಂದ ತಕ್ಷಣ ಕಿವಿ ನೆಟ್ಟಗಾಯ್ತು. ಅವನು ನಮ್ಮೂರಿನ ಹಳೇ ತಲೆಮಾರಿನವರ ಕ್ಷೌರಿಕ. ಅಣ್ಣನಿಗೆ ಹೇರ್ ಕಟ್ ಮಾಡಲು ತಿಂಗಳಿಗೆ ಒಂದು  ದಿನ ಮನೆಗೆ ಬರ್ತಿದ್ದ. ಮನೆಯಲ್ಲೇ ನೆಡೆಯುವ ಈ ಹೇರ್ ಕಟ್ ನೆಡೆಯುವಾಗ ಇಬ್ಬರ ಮಧ್ಯ ಕೆಲವು ಸಂಭಾಷಣೆಗಳೂ ನೆಡೆಯುತ್ತಿದ್ದವು.
ಒಂದು ಸಲ ಅಣ್ಣನಿಗೆ ಯಾಕೋ ರೇಗಿತ್ತು ಅಂತ ಕಾಣುತ್ತೆ. `ಮತ್ತೆ ನೀನು ಪಂಚಾಯ್ತಿ ಮೆಂಬರ್ ಆಗಿರೋದು ಕತ್ತೆ ಕಾಯೋಕಾ. ಅಲ್ಲಿ ಮೀಟಿಂಗಲ್ಲಿ ಹೇಳೋಕೆ ಏನಾಗಿತ್ತು?’ ಅಂತ ಬೈದರು.
`ನನ್ನ ಮೆಂಬರ್ ಮಾಡಿರೋದೇ ನೀವೆಲ್ಲ ಸೇರಿಕೊಂಡು. ಇನ್ನು ನನ್ನ ಮಾತು ಯಾರು ಕೇಳ್ತಾರೆ. ತೆಪ್ಪಗೆ ಕೂತು ಬಂದರೆ ಸರಿ. ಇಲ್ಲದೆ ಹೋದರೆ, ಹೊರಗೆ ಬಂದ ಮೇಲೆ ಚಂದ್ರೇಗೌಡರು ನನ್ನ ಚಮಡಾ ಸುಲೀತಾರೆ, ಅಷ್ಟೆ,’ ಅಂದ.
ಎರಡು ಚಂದ್ರೇಗೌಡರು, ಎರಡು ರಾಮೇಗೌಡರು, ಎರಡು ಲಕ್ಷ್ಮಣಗೌಡರು ಇರುವ ನಮ್ಮ ಕುಟುಂಬದಲ್ಲಿ, ಯಾವ ಚಂದ್ರೇಗೌಡರು ಅಂತ ಗೊತ್ತಾಗದೆ ಸುಮ್ಮನಾಗಿದ್ದೆ. ಆ ವಿಷಯಗಳಲ್ಲಿ ನಾವು ತಲೆ ಹಾಕೋದು ಅಣ್ಣನಿಗೆ ಇಷ್ಟವಾಗುತ್ತಿರಲಿಲ್ಲ.
ಆದರೆ, ಒಂದಂತೂ ಗೊತ್ತಾಗಿತ್ತು – ಕೇಶವ ಮೂರ್ತಿ ಪಂಚಾಯ್ತಿ ಸದಸ್ಯನಾದರೂ, ಅದು ನಾಮ ನಿಮಿತ್ತ ಮಾತ್ರ. ತನ್ನ ಕುಲ ಕಸುಬನ್ನು ಬಿಟ್ಟು ಇನ್ನೇನೂ ಮಾಡೋಕಾಗೋಲ್ಲ, ಅಂತ. ಈ ಸಲದ ಎಲೆಕ್ಷನ್ ನಲ್ಲಿ, ಮಾಜೀ ಪಂಚಾಯ್ತಿ ಸದಸ್ಯನೊಬ್ಬ, ಆರರಿಂದ ಏಳು ನಕಲಿ ಮತದಾನ ಮಾಡಿದ್ದ.
ಅಣ್ಣನನ್ನು ಪ್ರೆಸಿಡೆಂಟ್ ಮತ್ತು ಅಣ್ಣನಿಗೆ ವರಸೆಯಲ್ಲಿ ಚಿಕ್ಕಮ್ಮನಾಗಬೇಕಾದ ಜಯ ದೊಡ್ಡಮ್ಮನನ್ನು ವೈಸ್ ಪ್ರೆಸಿಡೆಂಟ್ ಮಾಡಲಾಯಿತು.. ಸ್ವಲ್ಪ ದಿನದ ನಂತರ ನೆಡೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ, ನಮ್ಮ ಕುಟುಂಬದವರೇ ಆದ ಜಗನ್ನಾಥ ಚಿಕ್ಕಪ್ಪ ಗೆದ್ದು, ಅಧ್ಯಕ್ಷರು ಕೂಡ ಆದರು.
ಪ್ರೆಸಿಡೆಂಟ್ ಆದಮೇಲೆ ಅಣ್ಣ ಲವಲವಿಕೆಯಿಂದ ಓಡಾಡಲು ಶುರುಮಾಡಿದರು. ಅಮ್ಮನಿಗೆ ಈ ಓಡಾಟ ಇಷ್ಟವಿಲ್ಲ ಅಂತ ಗೊತ್ತಿದ್ದರಿಂದ, ಕಾರನ್ನು ಬಿಟ್ಟು, ಅವರ ಸ್ಕೂಟರ್ ನಲ್ಲೇ ಓಡಾಡುತ್ತಿದ್ದರು. ನಾವಂತೂ ಪಂಚಾಯ್ತಿಯಲ್ಲಿ ಏನು ನೆಡೆಯುತ್ತಿದೆ ಅಂತ ಅಪ್ಪಿ ತಪ್ಪಿಯೂ
ಕೇಳುತ್ತಿರಲಿಲ್ಲ. ಮೈಸೂರಿನಲ್ಲಿರುವ ನಮ್ಮ ಸರೋಜಿನಿ ಚಿಕ್ಕಮ್ಮ ತಮಾಷೆ ಮಾಡ್ತಿದ್ರು: `ಏನು ಪಂಚಾಯಿತಿ ಪ್ರೆಸಿಡೆಂಟ್ ಮಕ್ಕಳೋ ನೀವು? ನಮ್ಮ ಮಂಡ್ಯ ಕಡೆ ಬಂದು ನೋಡಬೇಕು, ಪ್ರೆಸಿಡೆಂಟ್ ಮಕ್ಕಳ ಗತ್ತು ಹ್ಯಾಗಿರಬೇಕು, ಅಂತ.’
ಊರಿಗೆ ಹೋದಾಗಲೂ ಅಷ್ಟೆ, ಅಣ್ಣನ ಜೊತೆ ಹೋದಾಗ ಏನಾದರೂ ಪಂಚಾಯ್ತಿ ಕೆಲಸಗಳಿದ್ದರೆ, ನಾವು ಹೊರಗಡೆ ಕಾರಿನಲ್ಲೇ ಕೂತಿರುತ್ತಿದ್ದೆವು. ಒಂದು ಸಲ ಮೂಡಿಗೆರೆಯ ಎಂ.ಎಲ್.ಎ ಆಗಿದ್ದ ಮೋಟಮ್ಮನ ಮನೆಗೆ ಹೋಗಿದ್ದೆವು. ಅಣ್ಣನನ್ನು ಕಳುಹಿಸಲು ಬಾಗಿಲವರೆಗೆ ಬಂದ ಮೋಟಮ್ಮ, `ಮಾಧು ಗೌಡರೆ, ನೀವೇನೋ ಬಂದು ನಿಮ್ಮ ಪಂಚಾಯ್ತಿಗೆ ಅಂತ ಕೆಲಸ ಮಾಡಿಸಿಕೊಂಡು ಹೋಗ್ತೀರಾ… ಗೌತಳ್ಳಿಯಿಂದ, ಘಟ್ಟದಳ್ಳಿವರೆಗಿನ ಹುಡುಗರು ಬಿಜೆಪಿಗೆ ಓಟು ಒತ್ತಿದರೆ, ನಾನು ಮನೆಗೆ ಹೋಗ್ತೀನಿ, ಅಷ್ಟೆ,’ ಅಂದರು. ಅಣ್ಣ ಪೆಚ್ಚಾಗಿ ನಕ್ಕಿದನ್ನು ಬಿಟ್ಟರೆ ಇನ್ನೇನೂ ಮಾಡಲಿಲ್ಲ. ಮುಂದಿನ ಚುನಾವಣೆಯಲ್ಲಿ ಮೋಟಮ್ಮ ಹೇಳಿದ್ದು ನಿಜವಾಗಿತ್ತು.
ಇನ್ನೊಂದು ಸಲ ಅಣ್ಣನ ಜೊತೆ ಮೂಡಿಗೆರೆಗೆ ಹೊರಟಾಗ, ಪಂಚಾಯ್ತಿ ಆಫೀಸಿನ ಎದುರು ಕಾರಿನಲ್ಲಿ ಕೂತಿದ್ದೆ. ಅಣ್ಣ ಹೋಗಿ ಹತ್ತು ನಿಮಿಷಗಳಿಗಿಂತ ಜಾಸ್ತಿಯಾಗಿತ್ತು. ಪಂಚಾಯ್ತಿ ಆಫೀಸಿನೊಳಗಿಂದ ಜೋರಾಗಿ ಧ್ವನಿ ಕೇಳಿಸಲು ಶುರುವಾಯ್ತು. ನಮ್ಮೂರಲ್ಲಿ ಇಷ್ಟೊಂದು ಜೋರಾಗಿ ಯಾರಪ್ಪಾ ಗಲಾಟೆ ಮಾಡುವವರು ಅಂದ್ಕೊಂಡು ಸುಮ್ಮನೆ ಹತ್ತಿರ ಹೋಗಿ ಬಗ್ಗಿ ನೋಡಿದೆ. ಅಪ್ಪನಿಗೆ  ವರಸೆಯಲ್ಲಿ ಚಿಕ್ಕಪ್ಪನಾಗುವ ಚಂದ್ರೇಗೌಡರು ಮೇಜು ಕುಟ್ಟಿ ಕೂಗಾಡುತ್ತಿದ್ದರು. ಪಂಚಾಯ್ತಿ ಸೆಕ್ರಟರಿ ತಲೆ ಅಲ್ಲಾಡಿಸುತ್ತಾ ನಿಂತಿದ್ದರೆ, ಅಣ್ಣ, `ಚಿಕ್ಕಯ್ಯ, ಇರ್ಲಿ ಬಿಡಿ. ನೋಡೋಣ, ಏನು ಮಾಡೋಕೆ ಆಗುತ್ತೆ ಅಂತ. ಹೀಗೆ ಕೂಗಾಡಿದ್ರೆ ಬಿ.ಪಿ ರೈಸ್ ಆಗುತ್ತೆ ಅಷ್ಟೆ,’ ಅಂತ ಸಮಾಧಾನ ಮಾಡ್ತಿದ್ದರು.
ಅಲ್ಲೀವರೆಗೆ ಚಂದ್ರ ಚಿಕ್ಕಯ್ಯ ಸಿಟ್ಟುಮಾಡಿಕೊಂಡಿದ್ದನ್ನು ನಾನು ನೋಡಿರಲಿಲ್ಲ. ಮೂಡಿಗೆರೆ ಕಡೆ ಹೋಗುತ್ತ, ಮೊದಲ ಸಲ ಧೈರ್ಯ ಮಾಡಿ, ಪಂಚಾಯ್ತಿ ವಿಷಯ ಮಾತಾಡಿದೆ:
 `ಅಣ್ಣ, ಚಂದ್ರ ಚಿಕ್ಕಯ್ಯ ಪಂಚಾಯ್ತಿ ಮೆಂಬರಾ?’
`ಈಗಿಲ್ಲ. ಮುಂಚೆ ಪಂಚಾಯ್ತಿ ಛೇರ್ಮನ್ ಅಂತ ಇತ್ತಲ್ಲ, ಆಗ ಸುಮಾರು ವರ್ಷ ಅವರು ಛೇರ್ಮನ್ ಆಗಿದ್ದರು. ಈಗಿನ ಥರ ಎಲೆಕ್ಷನ್ ಇರಲಿಲ್ಲವಲ್ಲ. ಊರವರೇ ಸೇರಿ ನಿರ್ಣಯ ಮಾಡ್ತಿದ್ರು,’ ಅಂತ ಹೇಳಿದ್ರು.
`ಮತ್ತೆ ಪಂಚಾಯ್ತಿ ಆಫೀಸಲ್ಲಿ ಬಂದು ಕೂಗಾಡ್ತಿದ್ರೂ?’ ಅಂದೆ.
`ಅದಾ? ಅದು ನೆಡೀತಿರ್ತದೆ. ಅವರಿಗೂ ಇಷ್ಟು ವರ್ಷ ಪಂಚಾಯ್ತಿಯಲ್ಲಿ ಇದ್ದೂ ಇದ್ದೂ, ಪಂಚಾಯ್ತಿ ಕೆಲಸ ಹೇಗೆ ನೆಡೀಬೇಕೂ ಅಂತ ಒಂದು ಕಾನ್ಸೆಪ್ಟ್ ಇರುತ್ತೆ. ಈಗ ಸುಮಾರು ಬದಲಾವಣೆ ಆಗಿ, ಕಾನೂನುಗಳೆಲ್ಲ ಬಂದಿವೆ. ವ್ಯತ್ಯಾಸ ಆದಾಗ ಅವರಿಗೆ ಸಿಟ್ಟು ಬರುತ್ತೆ, ಅಷ್ಟೆ,’ ಅಂದರು.
ಕೇಶವ ಮೂರ್ತಿ ಹೇಳಿದ್ದ ಚಮಡಾ ಸುಲಿಯೋ ಚಂದ್ರೇಗೌಡರು ಯಾರು ಅಂತ ಆಗ ಅರ್ಥವಾಯಿತು. ನಾನು ಮುಂದೇನೂ ಮಾತಾಡಲಿಲ್ಲ.
ಅಣ್ಣನಂತೂ ಪಂಚಾಯ್ತಿ ಕೆಲಸವನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಅಂತ ಅನ್ನಿಸಿತ್ತು. ಹೆಚ್ಚೇನೂ ಅನುದಾನ ಸಿಗದ ಕಾಲವದು. ಆದರೆ, ಅಣ್ಣ ಏನೇ ಕೆಲಸ ತೆಗೆದುಕೊಂಡು ಹೋದರೆ, ಪಕ್ಷ ಭೇದ ಮರೆತು ಮೋಟಮ್ಮ ಮತ್ತು ಜಗನ್ನಾಥ ಚಿಕ್ಕಪ್ಪ, ಎಲ್ಲಿಂದಾದರೂ ಅನುದಾನ ಒದಗಿಸುತ್ತಿದ್ದರಂತೆ. ಪಂಚಾಯ್ತಿ ಕೆಲಸದ ಜೊತೆ, ಊರಲ್ಲಿ ಯಾರಿಗಾದರೂ ಹುಶಾರಿಲ್ಲದಿದ್ದರೆ, ಅಣ್ಣನಿಗೇ ಕರೆ ಬರುತ್ತಿತ್ತು. ಅಣ್ಣ ಮತ್ತೆ ಖುಶಿಯಾಗಿದ್ದಾರೆ ಅಂತ ಅನ್ನಿಸ್ತಿತ್ತು.
ಮುಂದಿನ ಚುನಾವಣೆಗೆ ಅಣ್ಣ ನಿಲ್ಲಲಿಲ್ಲ. ಒಂದಾರು ತಿಂಗಳು ಬಿಟ್ಟು, ಊರಿಗೆ ಹೋದಾಗ ನಾನೇ ಕೇಳಿದೆ: `ಅಣ್ಣ, ಮತ್ತೆ ಯಾಕೆ ಪಂಚಾಯ್ತಿ ಎಲೆಕ್ಷನ್ ಗೆ ನಿಲ್ಲಲಿಲ್ಲ?’ ಅಂತ.
`ಸುಂದರ ಮತ್ತೆ ಸೋಮ ಬಂದು ಹೇಳಿದ್ರು. ನಾನೇ ಬೇಡ ಅಂದೆ,’ ಅಂದ್ರು.
`ಯಾಕಣ್ಣಾ? ಒಂದೇ ಟರ್ಮ್ ಗೆ ಸಾಕಾಗಿ ಹೋಯ್ತಾ?’ ಅಂತ ನಕ್ಕೆ
`ಇಲ್ಲಿ ಫಂಡ್ಸ್ ಕಮ್ಮಿ ಇದ್ರೂ ಒಳ್ಳೇ ಕೆಲಸ ಮಾಡಬಹುದು. ಆದ್ರೆ ಕೆಲವು ವಿಷಯಗಳು ನಮಗೆ ಸರಿ ಹೊಂದೋದಿಲ್ಲ. ಅದೂ ಅಲ್ದೆ, ನಮಗ್ಯಾಕೆ ಬೇಕು ಈ ಪಾಲಿಟಿಕ್ಸ್? ಅಂತ’ ಅಂದ್ರು.
`ಅದೂ ಸರಿ,’ ಅಂತ ಹೇಳಿ ಸುಮ್ಮನಾದೆ.


ಮಾಕೋನಹಳ್ಳಿ ವಿನಯ್ ಮಾಧವ