ಶನಿವಾರ, ಫೆಬ್ರವರಿ 18, 2012

ಅಸಹಾಯಕ-1


ಮಂತ್ರಿಯ ಮಾತಲ್ಲೇ ಗೊತ್ತಾಯ್ತು…..

ಮೊನ್ನೆ ತುಂಬಾ ದಿನಗಳಾದ ಮೇಲೆ, ರಾಂಬೋ ಸಿನೆಮಾ ಬರ್ತಿತ್ತು. ಸುಮ್ಮನೆ ನೋಡುತ್ತಾ ಕೂತಿದ್ದೆ. ಕೊನೆಯ ದೃಷ್ಯದಲ್ಲಿ ಸಿಲ್ವೆಸ್ಟರ್ ಸ್ಟಾಲೋನ್ ಹೇಳುವ ಪ್ರತಿಯೊಂದು ವಾಕ್ಯ ಗಮನವಿಟ್ಟು ಕೇಳುತ್ತಿದ್ದೆ.
`ನನಗೇನೂ ಬೇಕಿಲ್ಲ. ನಾವು ಈ ದೇಶವನ್ನು ಎಷ್ಟು ಪ್ರೀತಿಸುತ್ತೇವೋ, ಅಷ್ಟೇ ಪ್ರೀತಿಯನ್ನು ಈ ದೇಶ ನಮಗೆ ತೋರಿದರೆ ಸಾಕು,’ ಅಂತ ಮಾಜೀ ಸೈನಿಕನೊಬ್ಬ ಕಣ್ಣೀರಿಡುತ್ತಾನೆ. ಫಕ್ಕನೆ ನೆನಪಿಗೆ ಬಂದ ಹೆಸರು ಅರವಿಂದ ಹೆಗಡೆ.
ನಾನ್ಯಾವತ್ತೂ ನೋಡಿರದ ವ್ಯಕ್ತಿಯ ಫೋಟೋದಲ್ಲಿನ ಮುಖ ಅಸ್ಪಷ್ಟವಾಗಿ ಕಣ್ಣ ಮುಂದೆ ಹಾದು ಹೋಯಿತು. ಎಷ್ಟೇ ಕಷ್ಟಪಟ್ಟರೂ, ನನ್ನ ಮುಂದೆ ಒಂದು ಘಂಟೆ ಕೂತಿದ್ದ ಅವನ ತಂದೆಯ ಮುಖ ಮಾತ್ರ ನೆನಪಿಸಿಕೊಳ್ಳಲಾಗಲಿಲ್ಲ. ಆದರೆ, ಎರಡೇ ನಿಮಿಷದಲ್ಲಿ ಕಾಫಿ ಕೊಟ್ಟು ಒಳಗೆ ಹೋದ, ಭಾವನಾರಹಿತವಾಗಿದ್ದ ಅವನ ತಾಯಿಯ ಮುಖ ಮಾತ್ರ ಸ್ಪಷ್ಟವಾಗಿ ಹಾದುಹೋಯಿತು.
ಆಗಿನ್ನೂ ಕ್ರೈಂ ರಿಪೋರ್ಟಿಂಗ್ ಆರಂಭದ ದಿನಗಳು. ಯಾರೇ ನಕ್ಕು ಮಾತಾಡಿಸಿದ್ರೂ ತುಂಬಾನೇ ಖುಷಿಯಾಗುತ್ತಿತ್ತು. ಅಂಥಹ ದಿನಗಳಲ್ಲಿ ಪರಿಚಯವಾಗಿದ್ದೇ ಈ ನಾಗರಾಜ್. ಡಿ.ಸಿ.ಪಿ (ಇಂಟೆಲಿಜೆನ್ಸ್) ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದರು ಅನ್ನುವುದನ್ನು ಬಿಟ್ಟರೆ, ಜಾಸ್ತಿಯೇನೂ ವಿವರಗಳು ಗೊತ್ತಿರಲಿಲ್ಲ.
ಒಂದಿನ, ಯಾವುದಾದರೂ ಕಥೆ ಬರೆಯಲೇಬೇಕು ಅಂತ ಎಲ್ಲಾ ಹಿರಿಯ ಅಧಿಕಾರಿಗಳ ಕೊಣೆಗಳ ಮುಂದೆ ಶತಪತ ಹಾಕುತ್ತಿದ್ದೆ. `ವಿನಯ್ ಅವರೇ, ನಿಮ್ಮನ್ನೇ ಹುಡುಕ್ತಿದ್ದೆ ನೋಡಿ. ಸ್ವಲ್ಪ ಮಾತಾಡ್ಬೇಕಿತ್ತು,’ ಅಂತ ನಾಗರಾಜ್ ಬಂದರು.
`ಹೇಳಿ’ ಅಂದೆ.
`ಬನ್ನಿ, ಟೀ ಕುಡಿಯತ್ತಾ ಮಾತಾಡೋಣ. ಟೈಮ್ ಇದೆಯಲ್ಲ?’ ಅಂದರು.
`ಟೈಮ್ ಗೇನು ಬರ. ಬನ್ನಿ,’ ಅಂತ ಇಬ್ಬರೂ ಕಮೀಷನರ್ ಆಫೀಸಿನ ಹಿಂಬಾಗದಲ್ಲಿದ್ದ ಮೊಬೈಲ್ ಕ್ಯಾಂಟೀನ್ ಗೆ ಹೋದೆವು.
`ನೋಡಿ ವಿನಯ್ ಅವರೆ. ನನ್ನ ಸ್ನೇಹಿತನೊಬ್ಬ ಇದ್ದ, ಅರವಿಂದ್ ಅಂತ. ತುಂಬಾ ವರ್ಷದ ಹಿಂದೆ ಮರ್ಡರ್ ಮಾಡಿಬಿಟ್ಟರು. ಫಾರೆಸ್ಟ್ ಆಫೀಸರ್ ಆಗಿದ್ದ, ಕಾರವಾರದ ಕಡೆ. ಆ ಕೇಸ್ ಮುಚ್ಚಿಹಾಕ್ತಾ ಇದ್ದಾರೆ. ಅದನ್ನ ಹ್ಯಾಗಾದರೂ ಮಾಡಿ ಎತ್ತಬೇಕು,’ ಅಂದರು.
`ಫಾರೆಸ್ಟ್ ಆಫೀಸರ್ ಮರ್ಡರ್ ಆಗಿದ್ದು ಯಾರಿಗೂ ಗೊತ್ತಾಗಲಿಲ್ವಾ?’ ಅಂತ ಕೇಳ್ದೆ.
`ಮರ್ಡರ್ ಆದಾಗ ದೊಡ್ಡ ಗಲಾಟೆಯಾಗಿತ್ತು. ಸಿ.ಓ.ಡಿ. ತೆನಿಖೆನೂ ಆಯ್ತು. ಕೇಸ್ ನೆಡಿತಾ, ನೆಡಿತಾ, ಸರ್ಕಾರದವರೇ ವೀಕ್ ಮಾಡಿಬಿಟ್ರು,’ ಅಂದರು.
ಏನೋ ಹೊಳೆದಂತಾಗಿ ಕೇಳಿದೆ: `ಅರವಿಂದ್ ಅಂದ್ರೆ ಅರವಿಂದ್ ಹೆಗ್ಡೆನಾ? ಅದೇ ಸಿರ್ಸಿಯಲ್ಲೆಲ್ಲೋ ಟಿಂಬರ್ ಸ್ಮಗ್ಲರ್ ಗಳು ಮರ್ಡರ್ ಮಾಡಿದ್ರಲ್ಲಾ? ಅದರಲ್ಲಿ ಆರ್.ವಿ.ದೇಶಪಾಂಡೆ ಕೂಡ ಶಾಮೀಲಾಗಿದ್ದಾರೆ ಅಂತ ಜನ ಮಾತಾಡ್ಕೊತ್ತಿದ್ರಲ್ಲಾ? ಅದೇ ಕೇಸಾ?’ ಅಂತ ಕೇಳ್ದೆ.
`ಅದೇ ಕೇಸ್ ವಿನಯ್ ಅವರೇ. ನಾನೂ, ಅರವಿಂದ ಕ್ಲಾಸ್ ಮೇಟ್ಸ್. ಹ್ಯಾಗಿತ್ತು ಗೊತ್ತಾ ಅವನ ಪರ್ಸನಾಲಿಟಿ. ನಿಮ್ಮ ಹಾಗೇನೆ – ಎತ್ತರ, ಗಾತ್ರ ಎಲ್ಲಾದರಲ್ಲೂ. ಎಂಥಾ ಧೈರ್ಯ ವಿನಯ್, ಅವನದೂ. ಯಾವುದಕ್ಕೂ ಕೇರ್ ಮಾಡ್ತಿರಲಿಲ್ಲ. ಮರ್ಡರ್ ಆಗೋಕ್ಕೆ ಹದಿನೈದು ದಿನಕ್ಕೆ ಮುಂಚೆ ಬೆಂಗಳೂರಿಗೆ ಬಂದಿದ್ದ ಕಣ್ರಿ. ಹೇಳಿದ್ದ, ತುಂಬಾ ಜನಗಳನ್ನ ಎದುರು ಹಾಕಿಕೊಂಡಿದ್ದೀನಿ, ಅಂತ. ನಮಗೂ ವಯಸ್ಸು. ಇವ್ನು ಎಲ್ಲಾ ಗೆದ್ದುಕೊಂಡು ಬರ್ತಾನೆ, ಅಥವಾ ಟ್ರಾನ್ಸ್ಫರ್ ಆಗ್ತಾನೆ ಅಂತ ಅನ್ಕೊಂಡಿದ್ದೆ. ಬರ್ಲೇ ಇಲ್ಲ. ಎಂಥಾ ಅನ್ಯಾಯವಾಯ್ತು,’ ಅಂದರು.
`ಈಗ ಕೇಸ್ ಏನಾಯ್ತು? ಅದೇನೋ ಹನ್ನೊಂದು ಜನಗಳಿಗೆ ಕನ್ವಿಕ್ಷನ್ ಆಯ್ತು ಅಂತ ಪೇಪರ್ ಗಳಲ್ಲಿ ಓದಿದ್ದೆ,’ ಅಂದೆ.
`ಅದು, ಅಲ್ಲಿ ಕಾರವಾರದ ಕೋರ್ಟಲ್ಲಿ. ಹೈಕೋರ್ಟಲ್ಲಿ ಅರ್ಧ ಜನ ಬಿಡುಗಡೆಯಾದ್ರು. ಈಗ ನೋಡಿದ್ರೆ, ಸುಪ್ರೀಂ ಕೋರ್ಟಲ್ಲಿ, ಕೇಸೇ ಬಿದ್ದುಹೋಗಿದೆ. ಅದಕ್ಕಿಂತ ಬೇಜಾರು ಅಂದ್ರೆ, ಕೇಸು ಬಿದ್ಹೋಗಿ ಮೂರು ತಿಂಗಳಾದ್ರೂ, ಅವರ ಮನೆಯವರಿಗೆ ಸರ್ಕಾರದವರು ಏನೂ ಹೇಳಿಲ್ಲ. ಮೊನ್ನೆ ಯಾರೋ ಲಾಯರ್ ಹೇಳಿದಾಗಲೇ, ಮನೆಯವರಿಗೆ ವಿಷಯ ಗೊತ್ತಾಗಿದ್ದು,’ ಅಂದರು.
`ಅಲ್ರಿ, ಈ ಕರ್ಮಕ್ಕೆ ಅರವಿಂದ್ ಯಾಕೆ ಪ್ರಾಣ ಕೊಡ್ಬೇಕಿತ್ತು. ಅಲ್ಲಾ, ಮೂರು ತಿಂಗಳಾದ್ರೂ ಈ ಸರ್ಕಾರಕ್ಕೆ ಏನೂ ಮಾಡೋಕ್ಕೆ ಆಗ್ಲಿಲ್ವಾ? ಕಾಡು ಉಳಿಸೋಕ್ಕೆ ಹೋಗಿ ಪ್ರಾಣಾನೇ ಕಳ್ಕೊಂಡವನ ಮೇಲೆ ಇಷ್ಟೂ ಕಾಳಜಿ ಇಲ್ವಾ?’ ಅಂತ ರೇಗಿದೆ.
`ನೋಡಿ ವಿನಯ್ ಅವರೆ. ನಮ್ಮ ವ್ಯವಸ್ಥೆ ಎಷ್ಟು ಕೆಟ್ಟಿದೆ ಅಂತ. ಈಗಲೂ ಸರ್ಕಾರಕ್ಕೆ ಅಪೀಲು ಹೋಗೋಕೆ ಅವಕಾಶ ಇದೆ. ಆರು ತಿಂಗಳು ಕಳೆದು ಹೋದ್ರೆ, ಅದೂ ಇರೋಲ್ಲ. ಏನಾದ್ರೂ ಮಾಡ್ಬೇಕಲ್ಲಾ. ನಾನೂ, ಅರವಿಂದ್ ಚಿಕ್ಕಂದಿನಿಂದ ಒಟ್ಟಿಗೇ ಬೆಳೆದವರು. ಅವರ ಮನೆಯಲ್ಲೇ ಆಟ ಆಡ್ತಿದ್ದೆ. ಅವರ ತಂದೆ, ತಾಯಿಯನ್ನು ನೋಡಿದ್ರೆ ಹೊಟ್ಟೆ ಉರಿಯುತ್ತೆ. ಪಾಪ, ಈ ವಯಸ್ಸಲ್ಲಿ ಇದನ್ನೆಲ್ಲಾ ನೋಡಬೇಕಲ್ಲಾ?’ ಅಂದರು.
`ಈ ಕೋರ್ಟ್ ಆರ್ಡರ್ ಗಳೆಲ್ಲಾ ಎಲ್ಲಿ ಸಿಕ್ತಾವೆ? ಅರವಿಂದ್ ತಂದೆ, ತಾಯಿ ಎಲ್ಲಿದ್ದಾರೆ ಈಗ?’ ಅಂತ ಕೇಳ್ದೆ.
`ಅವ್ರು ಇಲ್ಲೇ ವಿಜಯನಗರದಲ್ಲಿದ್ದಾರೆ. ಅವರ ಹತ್ತಿರಾನೇ ಎಲ್ಲಾ ಪೇಪರ್ ಗಳಿದ್ದಾವೆ,’ ಅಂದ್ರು ನಾಗರಾಜ್.
`ಸರಿ ಹಾಗಾದ್ರೆ. ನಾಳೆ ಸಾಯಂಕಾಲ ಅವರ ಮನೆಗೆ ಹೋಗೋಣ್ವಾ?’ ಅಂತ ಕೇಳಿದೆ. `ಸರಿ, ಅವರಿಗೂ ಹೇಳಿ, ಆ ಪೇಪರ್ ಗಳನ್ನ ಕಾಪಿ ಮಾಡಿಸಿಟ್ಟಿರ್ತೀನಿ,’ ಅಂದ್ರು ನಾಗರಾಜ್.
ಮಾರನೇ ದಿನ ಸಾಯಂಕಾಲ, ನಾಗರಾಜ್ ಸ್ವಲ್ಪ ಬ್ಯುಸಿಯಾಗಿದ್ದರು, ಸರಿ, ಅಡ್ರಸ್ ತೆಗೆದುಕೊಂಡು ನಾನೇ ವಿಜಯನಗರಕ್ಕೆ ಹೋದೆ. ಮನೆ ಹುಡುಕೋದಿಕ್ಕೇನೂ ಅಷ್ಟು ಕಷ್ಟವಾಗಲಿಲ್ಲ. ನಾನು ಕಾಲಿಂಗ್ ಬೆಲ್ ಒತ್ತುವುದರೊಳಗೆ, ನನಗಾಗಿ ಕಾಯುತ್ತಿದ್ದಂತೆ ಬಾಗಿಲು ತೆಗೆಯಿತು. `ಬನ್ನಿ, ನೀವು ಬರ್ತೀರಿ ಅಂತ ನಾಗರಾಜ್ ಹೇಳಿದ್ದ,’ ಅಂತ ನಿಂತಿದ್ದರು – ಅರವಿಂದ್ ತಂದೆ.
ಅಲ್ಲಿಯವರೆಗಿದ್ದ ಆಕ್ರೋಶ ಒಂದೇ ಕ್ಷಣದಲ್ಲಿ ಕರಗಿಹೋಗಿತ್ತು. ನೋವಿನಲ್ಲೂ ನಗುಮುಖದಿಂದ ಒಳಗೆ ಕರೆದಿದ್ದರು. ಏನು ಮಾತಾಡಬೇಕು ಅಂತಾನೇ ಗೊತ್ತಾಗಲಿಲ್ಲ. ನಾನು ಸುಮ್ಮನೆ ಕೂತಿದ್ದನ್ನು ನೋಡಿ, ಅವರೇ ಹೇಳಿದರು: `ಏನೋ, ದೇಶಕ್ಕಾಗಿ ಒಳ್ಳೆ ಕೆಲಸ ಮಾಡ್ದ ಅಂತ ಸಮಾಧಾನ ಮಾಡಿಕೊಳ್ಳೋ ಹಾಗೂ ಇಲ್ಲ. ಹೀಗಾಗ್ಬಿಡ್ತು, ನೋಡಿ. ಮೂರು ತಿಂಗಳಾದ್ರೂ ನಮಗೆ ವಿಷಯ ಗೊತ್ತಿರಲಿಲ್ಲ. ನಮ್ಮ ಅಳಿಯ ಪೋಲಿಸ್ ಡಿಪಾರ್ಟ್ ಮೆಂಟಲ್ಲಿ ಇಲ್ಲದಿದ್ರೆ, ಇನ್ನೂ ಗೊತ್ತಾಗ್ತಿರಲಿಲ್ಲ,’ ಅಂದರು.
ಇವರಳಿಯ ಪೋಲಿಸ್ ಡಿಪಾರ್ಟ್ ಮೆಂಟಲ್ಲಿದ್ದಿದ್ದು ನಾಗರಾಜ್ ಹೇಳಲೇ ಇಲ್ಲವಲ್ಲ, ಅಂತ ಪೇಚಾಡಿಕೊಂಡೆ. ನಾಗರಾಜ್ ಇವರ ಅಳಿಯ ಇರ್ಬೋದಾ? ಅಂತಾನೂ ಮನಸ್ಸಲ್ಲಿ ಅನ್ಕೊಂಡೆ. ಅವರೇ ಮುಂದುವರೆಸಿದರು: `ನಮ್ಮಳಿಯ ಮತ್ತೆ ನಾಗರಾಜ್ ಸೇರಿ, ಸರ್ಕಾರದಿಂದ ಅಪೀಲ್ ಮಾಡಿಸ್ಬೋದಾ ಅಂತ ಪ್ರಯತ್ನ ಮಾಡ್ತಿದ್ದಾರೆ. ಏನಾಗುತ್ತೋ ಗೊತ್ತಿಲ್ಲ. ನಾಗರಾಜ್ ಎಲ್ಲಾ ಪೇಪರ್ ಗಳನ್ನ ಕಾಪಿ ಮಾಡಿಸಿ ಇಟ್ಟಿದ್ದಾನೆ. ಮನೆ ಹುಡುಗನೇ, ಅರವಿಂದನ ಜೊತೆ ಆಡ್ಕೊಂಡು ಬೆಳೆದವನು. ಪಾಪ, ಎಲ್ಲಾ ಅವನೇ ಮಾಡ್ತಾನೆ,’ ಅಂದರು.
ಅಷ್ಟರಲ್ಲಿ ಒಳಗಿನಿಂದ ಯಾರೋ ಬಂದಂತಾಯ್ತು. ತಲೆ ಎತ್ತಿ ನೋಡಿದರೆ, ಸುಮಾರು ಅರವತ್ತರ ಪ್ರಾಯದ ಹೆಂಗಸು, ಎರಡು ಲೋಟಗಳಲ್ಲಿ ಕಾಫಿ ತಗೊಂಡು ಬಂದರು. ಅಗಲವಾದ ಕುಂಕುಮ ಇಟ್ಟುಕೊಂಡು, ಸಂಪ್ರದಾಯಸ್ಥ ಮನೆತನದವರಂತೆ ಕಾಣುತ್ತಿದ್ದರು. ಅರವಿಂದ್ ತಾಯಿ ಇರಬೇಕು ಅನ್ಕೊಂಡೆ. `ಇವರು ಇಂಡಿಯನ್ ಎಕ್ಸ್ ಪ್ರೆಸ್ ರಿಪೋರ್ಟರ್’ ಅಂತ ಅರವಿಂದ್ ತಂದೆ ಪರಿಚಯ ಮಾಡಿಕೊಟ್ಟರು. ಏನೂ ಭಾವನೆಗಳಿಲ್ಲದೆ ತಲೆ ಅಲ್ಲಾಡಿಸಿದ ಅವರು, ಒಂದು ನಿಮಿಷ ನನ್ನ ಮುಖವನ್ನೇ ದಿಟ್ಟಿಸಿ ನೋಡಿ, ಒಳಗೆ ಹೋದರು.
ನನ್ನ ಪೂರ್ವಾಪರವನ್ನೆಲ್ಲಾ ವಿಚಾರಿಸಿದ ಅರವಿಂದ್ ತಂದೆ, ಮೂರು ಕೋರ್ಟ್ ಜಡ್ಜ್ ಮೆಂಟ್ ಗಳನ್ನು ನನ್ನ ಕೈಗಿಟ್ಟರು. ಅವರು ಮಾತಾಡಿದಾಗ ಅನ್ಕೊಂಡೆ: ಇವರು ನನಗೆ ಎಲ್ಲಾ ವಿಷಯ ಗೊತ್ತಿದೆ ಅನ್ಕೊಂಡಿದ್ದಾರೆ, ಅಂತ. ಆದರೆ, ಸುಮಾರು 1985ರ ಆಸುಪಾಸಿನಲ್ಲಿ, ಕಾಡುಕಳ್ಳರ ಜೊತೆ ಸಂಘರ್ಷಕ್ಕಿಳಿದ ಅಧಿಕಾರಿಯೊಬ್ಬ ಕೊಲೆಯಾಗಿದ್ದ ಅನ್ನುವುದು ಬಿಟ್ಟರೆ, ನನಗೇನೂ ಹೆಚ್ಚಿನ ವಿವರಗಳು ಗೊತ್ತಿರಲಿಲ್ಲ.
ಮರುದಿನ ಬೆಳಗ್ಗೆ ಬೇಗನೆ ಆಫೀಸಿಗೆ ಹೋದವನೇ, ಅರವಿಂದನ ಕೇಸ್ ಫೈಲ್ ಓದುವುದಕ್ಕೆ ಶುರು ಮಾಡಿದೆ. ಅರವಿಂದ, ತನ್ನ ಹಿರಿಯ ಅಧಿಕಾರಿಗಳ ಮಾತಾಗಲೀ, ಅಥವಾ ಎಲ್ಲಿಂದಲೋ ಬರುವ ವಶೀಲಿಗಳಿಗಾಗಲೀ, ಬೆಲೆಕೊಟ್ಟಿರಲಿಲ್ಲ. ನೀಲಕಂಠ ಹೆಗಡೆ ಅಂತ ಹೆಸರಿರಬೇಕು, ಅವನ ವಿರುದ್ದ ಹತ್ತಾರು ಕೇಸ್ ಜಡಿದು, ತುಂಬಾನೇ ಮರಗಳನ್ನು ವಶಪಡಿಸಿಕೊಂಡಿದ್ದ. ಬರಬರುತ್ತಾ, ಇಲಾಖೆಯಲ್ಲಿ ಒಬ್ಬೊಂಟಿಗನಾಗಿದ್ದ ಅಂತ ಕಾಣುತ್ತೆ.
ಕೊಲೆಯಾದ ರಾತ್ರಿ ಅರವಿಂದ ಒಬ್ಬನೇ ಹೆಗಡೆಯ ತೋಟದ ಮನೆಯ ಹತ್ತಿರ ಹೋಗಿದ್ದಾನೆ. ಅಲ್ಲಿ ಲಾರಿಗಳಲ್ಲಿ ಮರದ ದಿಮ್ಮಿಗಳನ್ನು ತುಂಬಿಟ್ಟಿದ್ದನ್ನು ನೋಡಿ, ಅದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ, ಹೆಗಡೆಯ ಕಡೆಯವರು ಅವನ ಮೇಲೆ ಹಲ್ಲೆ ಮಾಡಿ, ದೊಣ್ಣೆಗಳಿಂದ ಚೆನ್ನಾಗಿ ಹೊಡೆದಿದ್ದಾರೆ. ಲಾರಿ ಡ್ರೈವರ್, ಲಾರಿಯನ್ನು ತೆಗೆದುಕೊಂಡು ಪರಾರಿಯಾಗಲು ಪ್ರಯತ್ನಿಸಿದಾಗ, ಅರವಿಂದ ಲಾರಿಯ ಮುಂಬಾಗದಿಂದ ಅದರ ಮೇಲೆ ಹತ್ತಿ, ನಿಲ್ಲಿಸಲು ಪ್ರಯತ್ನಿಸಿದ್ದಾನೆ. ಆಗ ಅವನ ಮೇಲೆ ಮತ್ತೆ ಹಲ್ಲೆಯಾಗಿದೆ. ಹೊಡೆತ ತಡೆಯಲಾಗದೆ, ಲಾರಿಯಿಂದ ಬಿದ್ದು ಸತ್ತು ಹೋಗಿದ್ದಾನೆ.
ಕಾರವಾರದ ಕೋರ್ಟ್ ನಲ್ಲಿ ಆಗ ನ್ಯಾಯಾಧೀಶರಾಗಿದ್ದ ಮಳಿಮಠ್,  ಹನ್ನೊಂದು ಜನರಿಗೆ ಜೀವಾವಧಿ ಶಿಕ್ಷೆ ನೀಡಿದ್ದಾರೆ. ಹೈಕೋರ್ಟ್ ಗೆ ಬರುವ ಹೊತ್ತಿಗೆ ಆರು ಜನರನ್ನು ಆರೋಪ ಮುಕ್ತಗೊಳಿಸಲಾಯಿತು. ಸುಪ್ರೀಂ ಕೋರ್ಟ್ ಆದೇಶ ಓದುತ್ತಿದ್ದಂತೆ ನನ್ನ ರಕ್ತ ಕುದಿಯಲು ಆರಂಭಿಸಿತು. ಅದರಲ್ಲಿ ಬರೆದಿತ್ತು: `ಅರವಿಂದ ಹೆಗಡೆ ಒಬ್ಬ ಪ್ರಾಮಾಣಿಕ ಮತ್ತು ಸಾಹಸಿ ಅಧಿಕಾರಿ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಅಂದು ರಾತ್ರಿ, ಅರಣ್ಯ ಸಂಪತ್ತು ಉಳಿಸಲು, ತನ್ನ ಪ್ರಾಣವನ್ನೇ ಕೊಟ್ಟಿದ್ದಾನೆ. ಅವನ ಮೇಲೆ ಹಲ್ಲೆಯಾಗುತ್ತಿದ್ದಾಗಲೂ, ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಲಾರಿಯನ್ನು ತಡೆಯಲು ಪ್ರಯತ್ನಿಸಿದ್ದಾನೆ. ಆದರೆ, ವೈದ್ಯರ ವರದಿ ಪ್ರಕಾರ, ಅರವಿಂದ ಹೆಗಡೆಯ ಸಾವು ಏಟಿನಿಂದ ಆಗಿದ್ದಲ್ಲ. ಆತನು ಲಾರಿಯಿಂದ ಕೆಳಕ್ಕೆ ಬಿದ್ದಾಗ ಕಲ್ಲುಗಳ ಮೇಲೆ ಬಿದ್ದದ್ದರಿಂದ ಸತ್ತಿದ್ದಾನೆ. ಹಾಗಾಗಿ, ಇದು ಅಪಘಾತವೇ ಹೊರತು, ಕೊಲೆಯಲ್ಲ, ಎಂದು ಹೇಳಿ, ಅಪರಾಧಿಗಳನ್ನು ಬಿಡುಗಡೆ ಮಾಡಿತ್ತು.
ಸುಮ್ಮನೇ ಸ್ವಲ್ಪ ಹೊತ್ತು ಕೂತವನು, ಹಾಗೇನೆ ಒಂದು ವರದಿ ತಯಾರು ಮಾಡಿದೆ. `ಪ್ರಾಮಾಣಿಕ ಅಧಿಕಾರಿಯ ಕೊಲೆ ಪ್ರಕರಣಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ’ ಅಂತ. ನನಗೇನೋ ಒಳ್ಳೆ ಕಥೆ ಎನ್ನಿಸಿತು. ಆದರೂ ಐದನೇ ಪುಟದಲ್ಲಿ ಅಚ್ಚಾಯಿತು. ಅದರಲ್ಲಿ ನನ್ನ ಹೆಸರೂ ಇರಲಿಲ್ಲ. ನನ್ನ ಸುತ್ತಮುತ್ತ ಇದ್ದವರೆಲ್ಲ ವರದಿಯ ಬಗ್ಗೆ ಮೆಚ್ಚುಗೆ ಸೂಚಿಸದರು.  ಕನ್ನಡ ಪ್ರಭದ ಆಂಶಿ ಪ್ರಸನ್ನ ಕುಮಾರ್: `ಅಲ್ರಿ, ಇಂಥಾ ಸ್ಟೋರಿಗೆ ಬೈಲೈನ್ ತಗೊಳ್ದೆ, ಎಂಥೆಂಥದಕ್ಕೋ ತಗೊಳ್ತಿರಲ್ರಿ,’ ಅಂದರು.
ಸಿರ್ಸಿ ಕಡೆಯವರಾದ ಶಶಿಧರ್ ಭಟ್ಟರು, `ಚೆನ್ನಾಗಿದೆ ಕಣ್ರಿ. ಆ ಹೆಗಡೆ ದೊಡ್ಡ ಕ್ರಿಮಿನಲ್. ಅರವಿಂದ್ ಕೊಲೆ ಆಗಿಲ್ಲದಿದ್ದರೆ, ಇನ್ನೆಷ್ಟೋ ಕೊಲೆಗಳನ್ನು ಮಾಡಿಸಿರುತ್ತಿದ್ದ. ನೀವು ಹೇಳಿದ್ದೂ ಸರೀನೆ. ಅವನಿಗೆ ದೇಶಪಾಂಡೆ ಸಪೋರ್ಟ್ ಇದೆ,’ ಅಂದರು.
ವರದಿಯೇನೋ ಬರೆದಾಗಿತ್ತು. ಮುಂದೇನು ಅಂತ ಗೊತ್ತಿರಲಿಲ್ಲ. ವರದಿ ಅಚ್ಚಾದ ಮರುದಿನ, ನಾಗರಾಜ್ ಸಿಕ್ಕಿದ್ದರು. `ವಿನಯ್ ಅವರೆ, ಇವರೇ ಗಣಪತಿ ಭಟ್. ನಮ್ಮ ಅರವಿಂದನ ಭಾವ. ಸಿ.ಎ.ಆರ್. ನಲ್ಲಿ ಎ.ಸಿ.ಪಿ. ಆಗಿದ್ದಾರೆ. ನಿಮ್ಮನ್ನ ನೋಡ್ಬೇಕೂ ಅಂತ ಕಾಯ್ತಾ ಇದ್ದರು. ತುಂಬಾ ಚೆನ್ನಾಗಿ ಬಂದಿದೆ ಆರ್ಟಿಕಲ್,’ ಅಂತ ಒಂದೇ ಉಸಿರಿಗೆ ಹೇಳಿದರು.
ಭಟ್ ಅವರು ಅವರ ಮಾವನಂತೆಯೇ ಶಾಂತ ಸ್ವಭಾವದವರು. ಗಂಭೀರವಾಗಿ ಹೇಳಿದರು : `ಈ ಸರ್ಕಾರದವರು ಅಪೀಲ್ ಹೋಗ್ತಾರೋ ಇಲ್ಲವೋ ಗೊತ್ತಿಲ್ಲ. ಅವನು ಸತ್ತು ಹದಿನೈದು ವರ್ಷಗಳಾದ ಮೇಲೆ, ಜನಗಳಿಗೆ ನೀವು ಇಷ್ಟು ಚೆನ್ನಾಗಿ ನೆನಪಿಸಿದಿರಲ್ಲ, ಅದೇ ಸಂತೋಷ.’
ಎರಡು, ಮೂರು ದಿನಗಳಾದ ಮೇಲೆ, ನಾನು ಮತ್ತು ನಾಗರಾಜ್ ಬಿಟ್ಟು ಎಲ್ಲರೂ ಅರವಿಂದ ಹೆಗಡೆ ಕೇಸ್ ಮರೆತಂತೆ ಅನ್ನಿಸತೊಡಗಿತು. ಏನಾದರೂ ಮಾಡಿ ಸರ್ಕಾರ ಅಪೀಲು ಹೋಗುವಂತೆ ಮಾಡಬೇಕು ಅನ್ನಿಸಿತು. ಕೋರ್ಟ್ ರಿಪೋರ್ಟರ್ ಆಗಿದ್ದ ಗೋವಿಂದರಾಜನ್ ಅವರ ಹತ್ತಿರ ಹೋಗಿ, ಅಡ್ವೊಕೇಟ್ ಜನರಲ್ ಹತ್ತಿರ ಮಾತಾಡ್ಬಹುದಾ? ಅಂತ ಕೇಳಿದೆ. ಅದಕ್ಕವರು, ಇಂಥಹ ವಿಷಯಗಳು ಕ್ಯಾಬಿನೆಟ್ ನಲ್ಲಿ ನಿರ್ಧಾರ ತೆಗೆದುಕೊಳ್ಳಬೇಕೆಂದೂ, ಹಾಗಾಗಿ ನಾನು ಕಾನೂನು ಮಂತ್ರಿಗಳ ಜೊತೆ ಮಾತಾಡಿದರೆ ಗೊತ್ತಾಗಬಹುದು, ಅಂತ ಹೇಳಿದರು.
ಸರಿ, ನಮ್ಮ ಪೊಲಿಟಿಕಲ್ ರಿಪೋರ್ಟರ್ ಆಗಿದ್ದ ನಚ್ಚಿಯ ಹತ್ತಿರ ಹೋಗಿ ವಿಷಯ ಹೇಳಿ, ಕಾನೂನು ಮಂತ್ರಿ ಎಂ.ಸಿ.ನಾಣಯ್ಯರವರನ್ನು ಮೀಟ್ ಮಾಡಿಸ್ತೀರಾ? ಅಂತ ಕೇಳಿದೆ. ಯಾವಾಗಲೂ ನಾನು ಮಾತಾಡಿದಕ್ಕೊಂದು ತಮಾಷೆ ಮಾಡುವ ನಚ್ಚಿ, `ಅವರ ನಂಬರ್ ಕೊಡ್ತೀನಿ, ಮಾತಾಡು. ಆಮೇಲೆ ನೋಡೋಣ,’ ಅಂದರು.
ನಾಣಯ್ಯರವರಿಗೆ ಫೋನ್ ಹಚ್ಚಿ ನನ್ನ ಪರಿಚಯ ಮಾಡಿಕೊಂಡ ತಕ್ಷಣ, ಆ ಕಡೆಯಿಂದ, `ಹೇಳಿ ವಿನಯ್, ಏನಾಗಬೇಕಿತ್ತು?’ ಅಂತ ಉತ್ತರ ಬಂತು. ಇದು ನಾಣಯ್ಯನವರೋ ಅಥವಾ ಬೇರೆಯವರೋ ಅಂಥ ಅನುಮಾನ ಬಂತು. ಯಾಕೆಂದ್ರೆ, ಅಲ್ಲಿಯವರೆಗೆ ನಾನು, ನಾಣಯ್ಯನವರನ್ನಾಗಲೀ, ಅಥವಾ ಬೇರೆ ಮಂತ್ರಿಗಳಿಗಾಗಲೀ, ಫೋನ್ ಮಾಡಿ ಮಾತಾಡಿರಲಿಲ್ಲ. ಇವರು ನೋಡಿದರೆ, ನನ್ನನ್ನು ಹಳೆಯ ಪರಿಚಯದಂತೆ ಫೋನ್ ನಲ್ಲಿ ಮಾತಾಡಿಸ್ತಾ ಇದ್ದರು.
`ಸರ್, ಅರವಿಂದ ಹೆಗಡೆ ಮರ್ಡರ್ ಆಗಿತ್ತಲ್ಲಾ, ಈಗ ಸುಪ್ರೀಂ ಕೋರ್ಟ್ ಎಲ್ಲರನ್ನೂ ಬಿಡುಗಡೆ ಮಾಡಿದ್ಯಲ್ಲಾ, ಸರ್ಕಾರ ಅಪೀಲ್ ಹೋಗುತ್ತಾ?’ ಅಂತ ಕೇಳಿದೆ.
`ಯಾವ ಅರವಿಂದ ಹೆಗಡೆ?’ ಅಂತ ತಿರುಗಿ ಕೇಳಿದ್ರು.
ನಾನು ಅದರ ಹಿನ್ನಲೆಯನ್ನು ಸ್ವಲ್ಪ ವಿವರಿಸಿ, ನಾನು ಅದರ ಬಗ್ಗೆ ಲೇಖನ ಬರೆದದ್ದನ್ನು ಹೇಳಿ, ಮತ್ತೆ ಅದೇ ಪ್ರಶ್ನೆ ಕೇಳಿದೆ. `ನೀವು ಬರೆದಿದ್ರಾ? ಯಾವ ತಾರೀಖು ಬಂದಿತ್ತು? ನಾನು ನೋಡಿಲ್ಲ. ಅದನ್ನು ನೋಡಿ, ಆಮೇಲೆ ಏನಾದ್ರು ಇದ್ರೆ ಹೇಳ್ತೀನಿ,’ ಅಂದರು.
ನಾಣಯ್ಯ ಮಾತಾಡುತ್ತಿರುವಾಗಲೇ ಮುಂದಿನದೇನು ಅಂತ ಅರ್ಥವಾಯ್ತು. ಇಲ್ಲಿಗೆ ಅರವಿಂದ ಹೆಗಡೆಯ ಮರ್ಡರ್ ಕಥೆಯದೂ ಮರ್ಡರ್ ಆಯ್ತು ಅನ್ಕೊಂಡೆ. ಪೆಚ್ಚು ಮುಖ ಹಾಕಿಕೊಂಡು ನಚ್ಚಿಯ ಮುಂದೆ ನಿಂತೆ. `ಏನಂತೆ? ಅವನು ಆ ಸ್ಟೋರಿ ನೋಡೇ ಇಲ್ವಂತಾ?’ ಅಂದರು. ನಾನೇನೂ ಉತ್ತರ ಹೇಳಲಿಲ್ಲ.
`ಅಲ್ವೋ, ನೀನೇ ಹೇಳೋ ಪ್ರಕಾರ, ಆ ಆಫೀಸರ್ ಮರ್ಡರ್ ಮಾಡಿದ್ದೋರು ದೇಶಪಾಂಡೆಗೆ ಹತ್ತಿರದವರು. ದೇಶಪಾಂಡೆ, ಆಗಲೂ ಸರ್ಕಾರದಲ್ಲಿ ಇದ್ದ, ಈಗಲೂ ಇದ್ದಾನೆ. ಹಾಗಿದ್ದಾಗ, ಅವನ ಕಡೆಯವರನ್ನ ಉಳಿಸಿಕೊಳ್ತಾನೆ ಅಂತ ನಿನ್ನ ತಲೆಗೆ ಹೋಗ್ಲಿಲ್ವಾ? ಅವನು ನಾಣಯ್ಯಂಗೂ ಮಾತಾಡಿರ್ತಾನೆ. ಅದಕ್ಕೇ ನಾನು ಹೇಳಿದ್ದು, ಮೊದಲು ಫೋನ್ ಮಾಡು ಅಂತ,’ ಅಂದರು.
ಸಾಯಂಕಾಲ, ನಮ್ಮ ಬ್ಯುರೋ ಛೀಫ್ ಮಟ್ಟೂ ಹತ್ತಿರ ಹೋಗಿ, ಅರವಿಂದ ಹೆಗಡೆಯ ವಿಷಯ ಪ್ರಸ್ತಾವಿಸಿ, `ಸರ್, ಸರ್ಕಾರ ಅಪೀಲ್ ಹೋಗೋದಿಲ್ವಂತೆ. ಒಂದು ಫಾಲೋ ಅಪ್ ಕೊಡ್ಲಾ?’ ಅಂತ ಕೇಳಿದೆ.
`ಅಪೀಲು ಹೋಗಲೇ ಬೇಕು ಅಂತ ಕಾನೂನಿಲ್ವಲ್ಲಾ? ಬೇರೆ ಯಾವುದಾದರೂ ಸ್ಟೋರಿ ಹುಡುಕು,’ ಎಂದರು. ಸುಮ್ಮನೆ ನನ್ನ ಸೀಟಿನ ಕಡೆಗೆ ಹೋದೆ.
ಅದಾದ ಮೇಲೆ ಗಣಪತಿ ಭಟ್ಟರು ಆಗಾಗ ಸಿಗುತ್ತಿದ್ದರು. ತುಂಬಾನೇ ಪ್ರೀತಿಯಿಂದ ಮಾತಾಡುತ್ತಿದ್ದರು. ಯಾವತ್ತೂ ಅರವಿಂದನ ವಿಷಯ ಮಾತಾಡಲೇ ಇಲ್ಲ. ಆದರೆ, ಅವರನ್ನು ಕಂಡಾಗಲೆಲ್ಲಾ ನನಗೆ ಅರವಿಂದನ ಕೇಸ್ ನೆನಪಾಗಿ, ಒಂಥರಾ ಅಸಹಾಯಕತೆ ಕಾಡುತ್ತಿತ್ತು.
ಇದನ್ನು ಬರೆಯುವ ಮುಂಚೆ, ನಾಗರಾಜ್ ಗೆ ಫೋನ್ ಮಾಡಿದೆ. ಅರವಿಂದನ ಮನೆಯವರ ಬಗ್ಗೆ ಹಾಗೇ ವಿಚಾರಿಸಿದೆ. `ಭಟ್ಟರು ರಿಟೈರ್ ಆದರು. ಇನ್ನೂ ದುರಂತ ನೋಡಿ, ಅರವಿಂದನ ಅಣ್ಣ ವಿವೇಕಾನಂದ ಇದ್ದನಲ್ಲ, ಅವನು ಕೇಸ್ ಬಿದ್ದುಹೋದ ಒಂದು ವರ್ಷದಲ್ಲಿ ಹಾರ್ಟ್ ಅಟ್ಯಾಕ್ ಆಗಿ ತೀರಿ ಹೋದ. ಅವರ ತಂದೆ, ತಾಯಿ ಇದ್ದಾರೆ. ವಿವೇಕಾನಂದನ ಮಗಳು ಇಂಜೀನಿಯರ್ ಆಗಿದ್ದಾಳೆ. ಈಗಲೂ ಅಷ್ಟೆ, ನಾನು ವಾರದಲ್ಲಿ ಮೂರು ದಿನ ಅವರ ಮನೆಗೆ ಹೋಗದಿದ್ದರೆ, ವಾರಂಟ್ ಇಷ್ಯೂ ಮಾಡಿಬಿಡ್ತಾರೆ,’ ಅಂತ ನಕ್ಕರು.
`ಈಗೆಷ್ಟು ವಯಸ್ಸು ಅವರಿಗೆ?’ ಅಂದೆ.
`ತಂದೆಗೆ 85, ಮತ್ತೆ ತಾಯಿಗೆ 80 ಆಗಿದೆ,’ ಅಂದ್ರು ನಾಗರಾಜ್. ಯಾಕೋ ನಾಗರಾಜ್ ಬಗ್ಗೆ ಹೆಮ್ಮೆ  ಎನಿಸಿತು.

ಮಾಕೋನಹಳ್ಳಿ ವಿನಯ್ ಮಾಧವ್

ಶುಕ್ರವಾರ, ಫೆಬ್ರವರಿ 3, 2012

ಗಂಧದ ಗುಡಿ


ಗುಜ್ರಾಲ್ ಸರ್ಕಾರ ಮತ್ತು ಗಂಧದ ಮರ

`ರೀ ಸಮಿ, ಈ ಥರದ ಏನಾದ್ರು ದೊಡ್ಡ ಸುದ್ದಿಯಾಗಿದ್ದಾಗ, ಒಂದು ಪೇಜ್ ವನ್ ಸ್ಟೋರಿ ಹೊಡಿಬೇಕು ಕಣ್ರಿ,’ ಅಂತ ಹೇಳಿದೆ.
`ಅದು ಯಾವುದೇ ಜರ್ನಲಿಸ್ಟ್ ತೆಗೆದುಕೊಳ್ಳೋ ಅತಿ ದೊಡ್ಡ ಚಾಲೆಂಜ್,’ ಅಂದ್ರು ಸಮಿ.
ಅವತ್ತು ದೆಹಲಿಯಲ್ಲಿ ದೇವೇಗೌಡರು ಪ್ರಧಾನಿ ಪಟ್ಟ ಕಳೆದುಕೊಂಡಿದ್ದರು. ಇಂಡಿಯನ್ ಎಕ್ಸ್ ಪ್ರೆಸ್ ಆಫೀಸಿಗೆ ಬೆಲಗೂರು ಸಮೀವುಲ್ಲಾ ಎಂದಿನಂತೆ ಅಫ್ ಶಾನ್ ಳನ್ನು ಕರೆದುಕೊಂಡು ಹೋಗಲು ಬಂದಿದ್ದರು. ಎಂದಿನಂತೆ ಅದೂ ಇದೂ ಮಾತಾಡ್ತಾ ಈ ವಿಷಯ ಹೇಳಿದ್ದೆ.
ಸಮಿಗೆ ಈ ವಿಷಯ ಎಷ್ಟು ದಿನ ನೆನಪಿತ್ತು ಅಂತ ಗೊತ್ತಿಲ್ಲ. ಯಾವಾಗಲೂ ಏನಾದರೊಂದು ತರಲೆ ಕೆಲಸಕ್ಕೆ ಕೈ ಹಾಕುವ ನನ್ನ ತಲೆಯಲ್ಲಂತೂ ಈ ಹುಳ ನಿಂತುಬಿಟ್ಟಿತ್ತು. ಆಗಿನ್ನೂ ಕ್ರೈಂ ರಿಪೋರ್ಟಿಂಗ್ ಶುರು ಮಾಡಿ ಒಂದು ವರ್ಷ ಕೂಡ ಆಗಿರಲಿಲ್ಲ. ಎಗ್ಗಿಲ್ಲದೆ ಎಲ್ಲರ ಜೊತೆ ಜಗಳಕ್ಕೆ ನಿಲ್ಲುತ್ತಿದ್ದೆ.
ಅದಕ್ಕೇನು ಬಹಳ ದಿನ ಕಾಯಬೇಕಾಗಿರಲಿಲ್ಲ. ದೇವೇಗೌಡರ ನಂತರ ಬಂದ ಇಂದ್ರ ಕುಮಾರ್ ಗುಜ್ರಾಲ್ ಸರ್ಕಾರವೇನೂ ಬಹಳ ದಿನ ಉಳಿಯಲಿಲ್ಲ. ಅದರ ಕೊನೆಯ ದಿನವೂ ಬಂದಿತ್ತು. ಬೆಳಗ್ಗೆ ಆಫೀಸಿನಿಂದ ಪೋಲಿಸ್ ಕಮೀಷನರ್ ಆಫೀಸಿಗೆ ಹೋಗುವಾಗ, ಸಾಯಂಕಾಲದೊಳಗೆ ಗುಜ್ರಾಲ್ ಸರ್ಕಾರ ಕೊನೆಯಾಗುತ್ತೆ ಅಂತ ಗೊತ್ತಾಗಿತ್ತು.
ಅವತ್ತು ಏನೇನು ಸ್ಟೋರಿಗಳನ್ನು ಹೊಡೆಯಬಹುದು ಅಂತ ಯೋಚನೆ ಮಾಡುತ್ತಲೇ ನೆಡೆದೆ. ಯಾವುದೂ ಮುಖಪುಟಕ್ಕೆ ಬರುವಂತಿರಲಿಲ್ಲ. ಯಾರನ್ನು ಕೇಳುವುದು? ಅಂತ ಯೋಚನೆ ಮಾಡುತ್ತಾ, ಕಾಫಿ ಬೋರ್ಡ್ ಎದುರಿಗಿದ್ದ ಶ್ಯಾಮ್ ಪ್ರಕಾಶ್ ಹೋಟೆಲ್ ದಾಟಿದೆ. ಈಗ ಆ ಜಾಗದಲ್ಲಿ ದೊಡ್ಡದೊಂದು ಐಟಿ ಕಂಪನಿ ಆಫೀಸಿದೆ. ಶ್ಯಾಮ್ ಪ್ರಕಾಶ್ ಮತ್ತು ಕಮೀಷನರ್ ಆಫೀಸ್ ಮಧ್ಯದಲ್ಲಿ ಆದಾಯ ತೆರಿಗೆ ಇಲಾಖೆಯವರ ವಸತಿ ಗೃಹವಿದೆ.
ಕಮೀಶನರ್ ಆಫೀಸಿನ ಗೋಡೆಗೆ ಹೊಂದಿಕೊಂಡಂತೆ, ವಸತಿ ಗೃಹದ ಆವರಣದಲ್ಲಿ ಮತ ಬಿದ್ದಂತೆ ಕಂಡಿತು. ನಿಂತು ಸರಿಯಾಗಿ ನೋಡಿದರೆ, ಯಾರೋ ಮರ ಕಡಿದು, ಸೊಪ್ಪನ್ನೆಲ್ಲ ಅಲ್ಲೇ ಬಿಟ್ಟು ಹೋಗಿದ್ದು ಗೊತ್ತಾಯ್ತು. ಸರಿಯಾಗಿ ನೋಡಿದೆ—ಗಂಧದ ಮರ! ಪೋಲಿಸ್ ಕಮೀಷನರ್ ಕಛೇರಿಯ ಆವರಣದ ಪಕ್ಕದಲ್ಲೇ ಯಾರೋ ಕದ್ದಿದ್ದಾರೆ… ಎಂಥಾ ಸ್ಟೋರಿ ಅನ್ಕೊಂಡೆ.
ಈಗಿನಂತೆ ಟೆಲಿವಿಷನ್ ಚಾನಲ್ ಗಳ ಹಾವಳಿಯಾಗಲಿ, ಮೊಬೈಲ್ ಫೋನ್ ಗಳಾಗಲಿ ಇರಲಿಲ್ಲ. ಹಾಗಾಗಿ ಸುದ್ದಿ ಕಾಳ್ಗಿಚ್ಚಿನಂತೆ ಹರಡಲು ಸಾಧ್ಯವಿರಲಿಲ್ಲ. ಮತ್ತೆ, ಅವರದೇ ಆವರಣದ ಪಕ್ಕದಲ್ಲಿ ಆದ ಪ್ರಕರಣವನ್ನು ಆದಷ್ಟೂ ಮುಚ್ಚಿಡಲು ಪೋಲಿಸರು ಪ್ರಯತ್ನಿಸುತ್ತಾರೆ ಅಂತ ನನಗೆ ಗೊತ್ತಿತ್ತು. ಆದರೂ, ಬೇರೆ ಪತ್ರಿಕೆಯವರಿಗೆ ಗೊತ್ತಾಗದಂತೆ ಇಡುವುದು ಹೇಗೆ? ಅನ್ನೋದು ಕೊರೆಯಲು ಶುರುವಾಯ್ತು.
ಮೊದಲನೆಯದಾಗಿ, ಫೋಟೋಗ್ರಾಫರ್ ಗೆ ಸಾಯಂಕಾಲದ ಮೇಲೆ ಹೇಳುವುದು ಅನ್ಕೊಂಡೆ. ಆದರೆ, ಈ ಸುದ್ದಿಯ ವಿವರಗಳನ್ನು ಯಾರಬಳಿ ತೆಗೆದುಕೊಳ್ಳುವುದು ಎನ್ನುವುದು ದೊಡ್ಡ ಸಮಸ್ಯೆಯಾಗಿತ್ತು.
ಮೊದಲನೆಯದಾಗಿ, ಆಗಿನ ಪೋಲಿಸ್ ಕಮೀಷನರ್ ರೇವಣ್ಣಸಿದ್ದಯ್ಯ ಮತ್ತು ನನ್ನ ಜಾತಕ ಹೊಂದಿಬರುತ್ತಿರಲಿಲ್ಲ. ಅವರು ಏತಿ ಅಂದರೆ ನಾನು ಪ್ರೇತಿ ಅನ್ನುತ್ತಿದ್ದೆ. ನಮ್ಮಿಬ್ಬರ ಸಂಬಂಧ ಇಡೀ ಪೋಲಿಸ್ ಕಮೀಷನರ್ ಆಫೀಸಿನಲ್ಲಿ ಕೆಲಸ ಮಾಡುವ ಎಲ್ಲರಿಗೂ ಗೊತ್ತಿದ್ದ ವಿಷಯ. ಹಾಗಾಗಿ, ಈ ವಿಷಯದ ವಿವರಗಳು ನೇರವಾಗಿ ಸಿಗುವುದು ಕಷ್ಟ ಅಂತ ಗೊತ್ತಿತ್ತು. ಇಂಥ ಸಂದರ್ಭಗಳಿಗಾಗಿ ನಾನು ಕಮೀಷನರ್ ಕಛೇರಿಯಲ್ಲಿ ಕೆಲವು ಅತೃಪ್ತಾತ್ಮಗಳನ್ನು ಹುಡುಕ್ಕಿಟ್ಟಿದ್ದೆ. ಇವರುಗಲೆಲ್ಲಾ ಕಮೀಷನರ್ ಆಫೀಸ್ ಆವರಣದೊಳಗೆ ಎಷ್ಟೊ ವರ್ಷಗಳಿಂದ ಇದ್ದು, ಆ ಆವರಣದ ಬಗ್ಗೆ ವಿಶೇಷವಾದ ದ್ವೇಶ ಬೆಳಸಿಕೊಂಡಿದ್ದವರು. ಅದರಲ್ಲೂ ಚಂದ್ರಪ್ಪನಂತೂ ಪೂರ್ತಿ ಸಿನಿಕತನವನ್ನು ಬೆಳೆಸಿಕೊಂಡಿದ್ದ.
ಈ ಚಂದ್ರಪ್ಪ ಯಾಕೆ ಹೀಗೆ ಅಂತ ನೂರಾರು ಸಲ ಯೋಚಿಸಿದ್ದೇನೆ. ಯಾವುದರ ಬಗ್ಗೆಯೂ ಒಳ್ಳೆಯದಾಗಿ ಮಾತಾಡುತ್ತಿರಲಿಲ್ಲ. ಯಾರಾದರೂ ಒಳ್ಳೆಯ ಸಿಹಿತಿಂಡಿ ಕೊಟ್ಟರೆ ತಿಂದು: `ಈ ಬೋಳಿ ಮಗಂದು ತಿಂದು ಸಕ್ಕರೆ ಕಾಯಿಲೆ ಬರಿಸ್ಕೊಳ್ತಿವಲ್ಲಾ, ನಮಗೆ ನಾವೇ ಚಪ್ಪಲಿಯಲ್ಲಿ ಹೊಡ್ಕೋಬೇಕು, ಅಷ್ಟೆ,’ ಅಂತಿದ್ದ. ಆದರೆ, ಯಾಕೋ ಏನೋ, ನನ್ನ ಜೊತೆ ಮಾತ್ರ ವಿಶ್ವಾಸದಿಂದ ಇದ್ದ. ಇದಕ್ಕೆಲ್ಲಾ ಅವನೇ ಸರಿ ಅಂದ್ಕೊಂಡು, ಅವನನ್ನು ಕರೆದುಕೊಂಡು ಮೊಬೈಲ್ ಕ್ಯಾಂಟೀನ್ ಗೆ ಹೋಗಿ, ಟೀ ಕುಡಿಯತ್ತಾ ಮೆತ್ತಗೆ ಪೀಠಿಕೆ ಹಾಕಿದೆ: `ಚಂದ್ರಪ್ಪ, ಆಫೀಸ್ ಪಕ್ಕದಲ್ಲಿ ರಾತ್ರಿ ಯಾರೋ ಗಂಧದ ಮರ ಕಡಿದಿದ್ದಾರೆ.’
`ಬೆಳಗ್ಗೆನೇ ಗೊತ್ತಾಯ್ತು. ನೋಡಿದಾಗ ಒಂಬತ್ತು ಘಂಟೆಯಾಗಿತ್ತಂತೆ. ಹೈ ಗ್ರೌಂಡ್ ಪೋಲಿಸ್ ಗೆ ಕಂಪ್ಲೇಂಟ್ ಕೊಡುವ ಹೊತ್ತಿಗೆ ಹತ್ತು ಘಂಟೆಯಾಗಿತ್ತಂತೆ. ಈಗ ಕ್ಲೀನ್ ಮಾಡೋಕೆ ಹೋದರೆ ಪ್ರೆಸ್ ನವರ ಗಮನಕ್ಕೆ ಹೋಗುತ್ತೆ ಅಂತ ಹಾಗೇ ಬಿಟ್ಟಿದ್ದಾರೆ. ಆ ಕಂಟ್ರೋಲ್ ರೂಮ್ ನಾಯಕ ಇದ್ದಾನಲ್ಲ, ಅವನು ಯಾರೂ ಬಾಯಿ ಬಿಡಬಾರದು ಅಂತ ಫರ್ಮಾನು ಬೇರೆ ಹೊರಡಿಸಿದ್ದಾನೆ. ಎಲ್ಲಾ ಕಳ್ಳ ನನ್ಮಕ್ಕಳು,’ ಅಂದ.
`ಅಲ್ರಿ, ಕಮೀಷನರ್ ಆಫೀಸ್ ಪಕ್ಕದಲ್ಲೇ ಕದ್ದಿದ್ದಾರಲ್ಲ, ಏನ್ರಿ ಧೈರ್ಯ ಅವರಿಗೆ?’ ಅಂದೆ.
`ನೈಟ್ ಡ್ಯೂಟಿ ಗೂಬೆ ನನ್ಮಕ್ಕಳು ಒಂಬತ್ತು ಘಂಟೆಗೇ ಕುಡಿದು ಹೊದ್ಕೊಂಡು ಮಲಗಿರ್ತಾರೆ. ಹೀಗಾದ್ರೆ ಇನ್ನೇನಾಗುತ್ತೆ? ಇದೇನು ಮೊದಲ ಸಲನಾ ಆಗಿರೋದು? ಈ ತಿಂಗಳೇ ಎಂಟೋ, ಹತ್ತೊ ಹೋಗಿವೆ. ಶ್ಯಾಮ್ ಪ್ರಕಾಶ್ ಹೋಟೆಲಿನೊಳಗಿಂದಾನೇ ಎರಡು ಹೋಗಿವೆ,’ ಅಂದ.
`ಅಷ್ಟೊಂದು ಹೋಗಿದ್ದಾವಾ? ಎಲ್ಲೆಲ್ರೀ?’ ಅಂತ ಕೇಳದೆ.
ಶ್ಯಾಮ್ ಪ್ರಕಾಶ್ ಹೋಟೆಲ್ ನ ಎರಡು ಮರ ಸೇರಿದಂತೆ, ಆರು ಮರಗಳ ಲೆಖ್ಖ ಕೊಟ್ಟು, ಜಾಗಗಳನ್ನು ತೋರಿಸಿದ. `ಬಡ್ಡೀಮಗಂದು ಸಿಕ್ತು,’ ಅನ್ಕೋಂಡು ಸುಮ್ಮನೆ ಕಾದೆ. ಮಧ್ಯಾಹ್ನ, ಎಲ್ಲಾ ಕ್ರೈಂ ರಿಪೋರ್ಟರ್ ಗಳು ಸೇರಿದಾಗ ಈ ವಿಷಯ ಬರಲೇ ಇಲ್ಲ. `ಸರಿ, ಇನ್ನೂ ಯಾರ ಗಮನಕ್ಕೂ ಬಂದಿಲ್ಲ,’ ಅಂತ ಸುಮ್ಮನಿದ್ದೆ. ಸಾಯಂಕಾಲದ ಹೊತ್ತಿಗೆ ಗೊತ್ತಾದರೂ, ಒಂದು ಗೊತ್ತಾಗುತ್ತೆ ಅಷ್ಟೆ. ಇನ್ನುಳಿದ ಐದರ ಸುದ್ದಿ ನನಗೆ ಮಾತ್ರ ಅಂತ ಗ್ಯಾರಂಟಿಯಾಯ್ತು. ಸಾಯಂಕಾಲದ ಹೊತ್ತಿಗೆ ಫೋಟೋಗ್ರಾಫರ್ ಕರೆದುಕೊಂಡು ಬಂದು, ಯಾರ ಗಮನಕ್ಕೂ ಬಾರದಂತೆ ಒಂದೆರೆಡು ಫೋಟೊ ಕೂಡ ತೆಗೆಸಿದೆ.
ಆಗೆಲ್ಲ, ಹೊಸಕೋಟೆಯ ಹತ್ತಿರದ ಮೇಡಿ ಮಲ್ಲಸಂದ್ರ, ಕಟ್ಟಿಗಾನಹಳ್ಳಿ, ಬೈಲನರಸಾಪುರ ಗ್ರಾಮಗಳು ಕಳ್ಳಭಟ್ಟಿ ಶರಾಬು ಮತ್ತು ಗಂಧ ಕಳ್ಳಸಾಗಾಣಿಕೆಗೆ ಹೆಸರುವಾಸಿಯಾಗಿದ್ದವು. ಎಕ್ಷೈಸ್ ಅಧಿಕಾರಿಗಳಾಗಲೀ, ಪೋಲಿಸರಾಗಲಿ ಆ ಊರಿಗೆ ಕಾಲಿಟ್ಟದ್ದೇ ಆದರೆ, ಗಂಡಸರು ಮತ್ತು ಹೆಂಗಸರು ಸೇರಿಕೊಂಡೇ ಬಾರಿಸುತ್ತಿದ್ದರು. ಹಾಗಾಗಿ, ಅಲ್ಲಿಗೆ ಯಾರೂ ಕಾಲಿಡದೆ, ಕಾನೂನು ಮತ್ತು ಸುವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಂಡಿದ್ದರು. ಹೊಸಕೋಟೆಯ ಸುತ್ತಮುತ್ತ ಇದ್ದ ಗಂಧದ ಮರಗಳನ್ನು ಬೇರು ಸಹಿತ ಮಾರಿಕೊಂಡ ಮೇಲೆ, ಈ ಊರಿನವರ ಕಣ್ಣು, ಬೆಂಗಳೂರಿನಲ್ಲಿದ್ದ ಗಂಧದ ಮರಗಳ ಮೇಲೆ ಬಿದ್ದಿತ್ತು. ಇವೆಲ್ಲವನ್ನು ಸೇರಿಸಿ, ಒಂದು ದೊಡ್ಡ ವರದಿ ಬರೆದೆ: `ಪೋಲಿಸ್ ಕಮೀಷನರ ಮೂಗಿನಡಿಯಲ್ಲಿಯೇ ಗಂಧದ ಕಳ್ಳರು.’
ಆಫೀಸಿನಲ್ಲಿ ಸಾಯಂಕಾಲದ ಮೀಟಿಂಗ್ ಮುಗಿದ ಸ್ವಲ್ಪ ಹೊತ್ತಿನಲ್ಲಿ ಸಂಪಾದಕರಾಗಿದ್ದ ಕೆ.ವಿ.ರಮೇಶ್ ರಿಂದ ಕರೆ ಬಂತು. ಗಂಧದ ಮರದ ಕಥೆ ಬಗ್ಗೆ ಅಂತ ಗೊತ್ತಿತ್ತು. ಅಲ್ಲಿ ಕೂತಿದ್ದ ಉತ್ತರಾ ಕೇಳಿದರು: `ಈ ಸ್ಟೋರಿ ಒಂದು ದಿನ ತಡೆಯಬಹುದಾ? ಇವತ್ತು ಡೆಲ್ಲಿಯಿಂದ ತುಂಬಾ ಸ್ಟೋರಿಗಳು ಇವೆ. ಈ ಸ್ಟೋರಿ ಪೇಜ್ ವನ್ ಗೇ ಹೋಗಬೇಕು,’ ಅಂದರು.
`ಇಲ್ಲ ಮ್ಯಾಡಂ. ಒಂದು ಗಂಧದ ಮರ ಹೋಗಿರೋದು ನೆನ್ನೆ ರಾತ್ರಿ. ಇನ್ನುಳಿದ ಮರಗಳ ಬಗ್ಗೆ ವಿವರ ಯಾರಿಗೂ ಸಿಗದಿದ್ದರೂ, ಆ ಒಂದು ಮರದ ವಿಷಯ ಬೇರೆಯವರಿಗೆ ಸ್ವಲ್ಪವಾದರೂ ಗೊತ್ತಾಗಬಹುದು,’ ಅಂದೆ. ರಮೇಶ್ ಕೂಡ: `ಉತ್ತರಾ, ಏನಾದ್ರು ಮಾಡಬಹುದಾ ನೋಡು,’ ಅಂದರು.
`ನನ್ನ ಕೈಲೆಷ್ಟು ಆಗತ್ತೆ ನೋಡ್ತೀನಿ. ಗುಡ್ ಸ್ಟೋರಿ ಕಣೋ,’ ಅಂತ ತಲೆ ಆಡಿಸುತ್ತಾ ಉತ್ತರಾ ಹೇಳಿದರು.
ತುಂಬಾನೇ ಖುಶಿಯಾಗಿ ಹೊರಗೆ ಬಂದೆ. ಆದರೆ ಬೆಳಗ್ಗೆ ಎದ್ದು ನೋಡಿದಾಗ, ನನ್ನ ಲೇಖನ ಮೂರನೇ ಪುಟಕ್ಕೆ ಹೋಗಿತ್ತು. ಸಿಕ್ಕಾಬಟ್ಟೆ ಬೇಜಾರಾಗಿ, ಇನ್ನೊಂದು ಸುತ್ತು ಹೊದ್ದುಕೊಂಡು ಮಲಗಿದೆ. ಎಂಟೂವರೆ ಸುಮಾರಿಗೆ ಪೇಜರ್ ಗೆ ಒಂದು ಮೆಸೇಜ್ ಬಂತು:
`ಬೇಗನೆ ಕಮೀಷನರ್ ಆಫೀಸ್ ಗೆ ಬಂದು ನನ್ನನ್ನು ಕಾಣು. ಸುರೇಶ್ ಬಾಬು ನಿನ್ನನ್ನು ಕಾಣಬೇಕಂತೆ,’ ಅಂತ. ಕಂಟ್ರೋಲ್ ರೂಂ ಎ.ಸಿ.ಪಿಯಾಗಿದ್ದ ಟಿ.ಆರ್.ನಾಯಕ್ ಕಳುಹಿಸಿದ್ದರು. ಏನಪ್ಪಾ ಇಷ್ಟು ಬೆಳಗ್ಗೆ ನಾಯಕರು ಕಳುಹಿಸಿದ್ದಾರೆ? ಏನೋ ದೊಡ್ಡ ಬೆಳವಣಿಗೆ ಆಗಿರಬೇಕು, ಅನ್ಕೊಂಡು ಬೇಗನೆ ತಯಾರಾಗಿ, ಕಮೀಷನರ್ ಆಫೀಸ್ ಗೆ ಹೋದೆ. ಯಾವಾಗಲೂ ನಗುಮುಖದಿಂದ ಇರುತ್ತಿದ್ದ ನಾಯಕರು ಯಾಕೋ ತುಂಬಾನೆ ಗಂಭೀರವಾಗಿದ್ದರು. ನನ್ನ ಮುಖ ನೋಡಿದ ತಕ್ಷಣ: `ಏನಪ್ಪಾ ನಿನ್ನ ಕಾಟ. ದಿನಾ ಏನಾದ್ರೊಂದು ಮಾಡ್ತಾ ಇರ್ತಿಯಲ್ಲ. ಹೋಗು, ಸುರೇಶ್ ಬಾಬು ಸಾಹೇಬ್ರನ್ನ ನೋಡು. ನಿನಗೆ ಕಾಯ್ತಾ ಇದ್ದಾರೆ,’ ಅಂದ್ರು.
`ನಾನೇನ್ರಿ ಮಾಡ್ದೆ ಈಗ?’ ಅಂತ ಕೇಳ್ದೆ.
`ಅಲ್ಲಪ್ಪ, ಇವತ್ತು ಬರ್ದಿದ್ದೀಯಲ್ಲ ಗಂಧದ ಮರ….’ ಅಂದ್ರು.
`ಓ ಅದಾ, ಅಲ್ರಿ, ಅದ್ರಲ್ಲಿ ನಾನೇನಾದರೂ ಸುಳ್ಳು ಬರ್ದಿದ್ದೀನಾ?’ ಅಂತ ಕೇಳಿದೆ.
`ಸುಳ್ಳು ಬರ್ದಿದ್ದೀಯ ಅಂತ ಹೇಳ್ತಿಲ್ಲಪ್ಪಾ. ಅದು ನಮಗೂ ಗೊತ್ತಿತ್ತು. ಬೆಳಗ್ಗೆ ಇಲ್ಲಿ ಸುಪ್ರಭಾತ ಆಗಿದೆ. ನೀನು ಹೋಗಿ ಸುರೇಶ್ ಬಾಬು ಸಾಹೇಬರನ್ನ ನೋಡು. ಅವರು ಮಾತಾಡ್ತಾರೆ,’ ಅಂದರು.
`ಏನಾಯ್ತ್ರೀ ಬೆಳಗ್ಗೆ?’ ಅಂತ ಗಾಭರಿಯಿಂದ ಕೇಳಿದೆ.
ರೇವಣ್ಣಸಿದ್ದಯ್ಯನವರು ಹೇಳಿ ಕೇಳಿ ಗತ್ತಿನ ಪೋಲಿಸ್ ಅಧಿಕಾರಿ. ಯಾವುದೇ ಕೇಸಿನ ಹಿಂದ ಹೋದರೆ, ಸೀಳುನಾಯಿಯಂತೆ ಬೆನ್ನಟ್ಟುತ್ತಿದ್ದರು. ನಾಲ್ಕು ಸರಣಿ ಸರಗಳ್ಳತನವಾದರೆ, ಬೆಂಗಳೂರು ಪೋಲಿಸ್ ಇರಲಿ, ಅವರೇ ಬಂದು ಬೀದಿಯಲ್ಲಿ ನಿಲ್ಲುತ್ತಿದ್ದರು. ಯಾವುದೋ ಮನೆಯಲ್ಲಿ ದೊಡ್ಡ ಕಳ್ಳತನವಾದರೆ, ತಮ್ಮ ಮನೆಯಲ್ಲೇ ಆದಂತೆ ಚಡಪಡಿಸಿ, ಅಲ್ಲಿನ ಪೋಲಿಸ್ ಗಳಿಗೆ ಶನಿ ಬಿಡಿಸುತ್ತಿದ್ದರು. ಪತ್ರಿಕೆಗಳಲ್ಲಿ ಬರುವ ವರದಿಗಳನ್ನು ತುಂಬಾನೇ ತಲೆಗೆ ಹಚ್ಚಿಕೊಂಡು, ಅದನ್ನು ಸರಿಪಡಿಸುವವರೆಗೆ ಬಿಡುತ್ತಿರಲಿಲ್ಲ.
 ಅಂಥವರಿಗೆ, ಅಕ್ಕಪಕ್ಕದಲ್ಲಿರುವ ತಮ್ಮ ಮನೆ ಮತ್ತು ಕಛೇರಿಯ ಸುತ್ತ ಮುತ್ತ ಆರು ಗಂಧದ ಮರಗಳು, ಒಂದೇ ತಿಂಗಳಲ್ಲಿ ಕದ್ದಿದ್ದಾರೆಂದು ಪತ್ರಿಕೆಯಲ್ಲಿ ಓದಿದಾಗ ಹೇಗಾಗಿರಬೇಡ? ಆರೂಮುಕ್ಕಾಲಿಗೇ ವೈರ್ ಲೆಸ್ ಮೆಸೆಜ್ ಕೊಟ್ಟಿದ್ದಾರೆ: `ಪೋಲಿಸ್ ಕಮೀಷನರ್ ಕಛೇರಿಯಲ್ಲಿ ಕೆಲಸ ಮಾಡುವ ಎಲ್ಲಾ ಪೋಲಿಸ್ ಗಳೂ ಮತ್ತು ಅಧಿಕಾರಿಗಳೂ ಎಂಟು ಘಂಟೆಯ ಒಳಗೆ ಕಛೇರಿಗೆ ಬರಬೇಕು. ನೈಟ್ ಡ್ಯೂಟಿ ಮಾಡಿದವರೂ ಸಹ ಇರಬೇಕು,’ ಅಂತ.
ಎಂಟು ಘಂಟೆಗೆ ಸರಿಯಾಗಿ ಕಛೇರಿ ಆವರಣದೊಳಗೆ ಧೂರ್ವಾಸ ಮುನಿಯಂತೆ ನುಗ್ಗಿದ ರೇವಣ್ಣಸಿದ್ದಯ್ಯನವರು ಎಲ್ಲಾರಿಗೂ ವಾಚಾಮಗೋಚರವಾಗಿ ಬೈದಿದ್ದಾರೆ. ಸಂಸ್ಕೃತವಂತೂ ನಿರರ್ಗಳವಾಗಿ ಹರಿದಿದೆ. ಯಾರನ್ನೂ ಬಿಟ್ಟಿಲ್ಲ. ಹೋಗುವಾಗ: `ಇನ್ನೊಂದು ಗಂಧದ ಮರ ಹೋಗಿದ್ದು ಗೊತ್ತಾಗಬೇಕು. ಎಲ್ಲಾರಿಗೂ ಶನಿ ಬಿಡಿಸ್ತೀನಿ ಅಷ್ಟೆ. ಕತ್ತೆ ಕಾಯಲು ಕೂಡ ಲಾಯಕ್ಕಿಲ್ಲದವರು, ಪೋಲಿಸ್ ಕೆಲಸಕ್ಕೆ ಬರ್ತಾರೆ,’ ಅಂತ ಬೈದಿದ್ದರಂತೆ.
ಇದೊಳ್ಳೆ ಕಥೆಯಾಯ್ತಲ್ಲಾ ಅಂತ ತಲೆ ಕೆರೆದುಕೊಂಡು ಸುರೇಶ್ ಬಾಬುರವರ ಕಛೇರಿಗ ಹೋದೆ. ನನ್ನನ್ನು ನೋಡಿದವರೇ: `ಬಾರಪ್ಪಾ… ಬಾ. ಏನು ಇಷ್ಟು ಬೆಳಗ್ಗೆ ಬಂದ್ಬಿಟ್ಟೆ?’ ಅಂತ ನಗೋಕೆ ಶುರು ಮಾಡಿದ್ರು. `ಸರ್, ನಾಯಕ್ ಹೇಳಿದ್ರು, ನೀವು ನೋಡ್ಬೇಕು ಅಂದ್ರಂತೆ?’ ಅಂದೆ.
`ಅದಾ.. ನೀನು ಇಲ್ಲಿಗೆ ಬಂದಾಗ ನನಗೆ ಸಿಗೊಕ್ಕೆ ಹೇಳು ಅಂತ ನಾಯಕ್ ಗೆ ಹೇಳಿದ್ದೆ. ನೀನು ಬೆಳಗ್ಗೆನೆ ನಮ್ಮೆಲ್ಲರ ನಿದ್ರೆ ಹಾಳುಮಾಡಿದ್ಯಲ್ಲಾ, ನಾಯಕ್ ನಿನ್ನ ನಿದ್ರೆ ಹಾಳುಮಾಡಿದ್ದಾರೆ, ಅಷ್ಟೆ. ಮತ್ತಿನ್ನೇನು ವಿಷಯ?’ ಅಂತ ನನ್ನನ್ನೇ ಕೇಳಿದರು. ನಾನು ಸುಮ್ಮನೆ ಅವರ ಮುಖ ನೋಡುತ್ತಾ ಕೂತಾಗ, ಅವರೇ ಮುಂದುವರೆಸಿದರು: `ಇದು ನಮಗೂ ಗೊತ್ತಿತ್ತು. ನಾನೂ ಒಂದು ಟೀಮ್ ಮಾಡಿ, ಈ ಗಂಧದವರ ಹಿಂದೆ ಬಿಟ್ಟಿದ್ದೀನಿ. ಇನ್ಫರ್ ಮೇಷನ್ ಇದೆ. ಇನ್ನು ಸ್ವಲ್ಪದಿನದಲ್ಲಿ ಸಿಕ್ತಾರೆ. ಎಲ್ಲಿಗೆ ಹೋಗ್ತಾರೆ ಹೇಳು,’ ಅಂದರು.
ಒಂದೆರೆಡು ದಿನ ಬಿಟ್ಟು, ಎಲ್ಲಾ ವಿಷಯಗಳಂತೆ ಇದನ್ನೂ ಮರೆತೆ.
ಒಂದು ತಿಂಗಳ ಮೇಲಾಗಿರಬಹುದು. ಒಂದಿನ ಒಂಬತ್ತು ಘಂಟೆ ಹೊತ್ತಿಗೆ ಆಫೀಸ್ ತಲುಪುದಿದ್ದ ನಾನು, ಆಫೀಸಿಗೆ ಹೋಗದೆ ಕಮೀಷನರ್ ಆಫೀಸಿಗೆ ನುಗ್ಗಿದೆ. ಯಾಕೋ ಏನೋ, ಸ್ವಲ್ಪ ಗಡಿಬಿಡಿಯ ವಾತಾವರಣವಿತ್ತು. ಏನೋ ಆಗಿರಬೇಕು ಅಂತ ಕಂಟ್ರೋಲ್ ರೂಂ ಕಡೆ ಹೋದೆ. ನಾಯಕ್ ಹೊರಗಡೆ ಬರುತ್ತಿದ್ದವರು, ನನ್ನನ್ನು ನೋಡಿದ ತಕ್ಷಣ ಹೇಳಿದರು: `ಮಲ್ಲೇಶ್ವರಂನಲ್ಲಿ ಎನ್ ಕೌಂಟರ್. ಇಬ್ಬರು ಸತ್ತಿದ್ದಾರೆ.’
`ಹೌದಾ? ಯಾರು ಹೊಡೆದಿದ್ದು?’ ಅಂತ ಕೇಳಿದೆ.
`ಮಲ್ಲೇಶ್ವರಂ ಇನ್ಸ್ ಪೆಕ್ಟರ್,’ ಅಂದರು ನಾಯಕ್.
`ಜಯಪ್ರಕಾಶಾ?... ರೀ, ಅವರೊಂದು ಸೊಳ್ಳೆ ಕೂಡ ಹೊಡೆಯೋಲ್ಲ. ಅವರಿಗೆ ಯಾರಿಗಾದ್ರು ಬೈದು ಕೂಡ ಗೊತ್ತಿಲ್ಲ. ಅಷ್ಟು ಪಾಪದ ಮನುಷ್ಯ ಅವರು ಹ್ಯಾಗ್ರಿ ಎನ್ ಕೌಂಟರ್ ಮಾಡ್ತಾರೆ? ಅದೂ ಇಬ್ಬರನ್ನ?’ ಅಂದೆ.
`ನಂಗೊತ್ತಿಲ್ಲ. ಯಾರೋ ಗಂಧದ ಕಳ್ಳರ ಗ್ಯಾಂಗ್ ಅಂತೆ. ಅಲ್ನೋಡು, ಸುರೇಶ್ ಬಾಬು ಸಾಹೇಬ್ರು ಬರ್ತಾ ಇದ್ದಾರೆ. ಅವರೂ ಹೋಗಿದ್ರು. ಅವರನ್ನೇ ಕೇಳು,’ ಅಂತ ನಗುತ್ತಾ ಹೇಳಿದರು
ತಿರುಗಿ ನೋಡಿದಾಗ ಸುರೇಶ್ ಬಾಬುರವರ ಕಾರು ಒಳಗ್ಗೆ ಬರುವುದು ಕಂಡಿತು. ಒಂದೇ ನೆಗೆತದಲ್ಲಿ, ಅವರು ಕಾರಿನಿಂದ ಇಳಿಯುವ ಮೊದಲೇ ಹೋಗಿ ಅವರ ಕೋಣೆಯ ಹತ್ತಿರ ನಿಂತೆ. ನನ್ನನ್ನು ನೋಡಿದ ತಕ್ಷಣ: `ಏನಪ್ಪಾ? ಇಷ್ಟು ಬೇಗ ಬಂದಿದ್ದೀಯ? ಎನ್ ಕೌಂಟರ್ ಆದ ತಕ್ಷಣ ನಿನಗೇ ಮೊದಲ ಮೆಸೆಜ್ ಕೊಟ್ಟಹಾಗಿದೆ? ಅಥವಾ ಎನ್ ಕೌಂಟರ್ ಆಗ್ತಾ ಇದೆ ಅಂತ ಮೆಸೆಜ್ ಬಂತಾ?’ ಅಂತ ನಗುತ್ತಾ ಹೇಳಿದರು. ಯಾಕೋ ಕೀಟಲೆ ಮಾಡ್ತಾ ಇದ್ದಾರೆ ಅನ್ನಿಸಿತು.
`ಅಲ್ಲಾ ಸರ್, ಜಯಪ್ರಕಾಶ್ ಅಷ್ಟೋಂದು ಪಾಪದ ಮನುಷ್ಯ. ಅವರು ಸೊಳ್ಳೆ ಕೂಡ ಹೊಡಿತಾರೋ ಇಲ್ವೋ. ಇಬ್ಬರನ್ನ ಹ್ಯಾಗೆ ಎನ್ ಕೌಂಟರ್ ಮಾಡ್ತಾರೆ ಸರ್?’ ಅಂದೆ.
`ಈ ಸೊಳ್ಳೆ, ನೊಣಗಳ ವಿಷಯ ನಂಗೊತ್ತಿಲ್ಲಪ್ಪ. ನಂಗೊತ್ತಿರೋದು ಇಷ್ಟೆ. ರಾತ್ರಿ ಗಂಧದ ಕಳ್ಳರನ್ನ ಬೆರೆಸಿದ್ದಾರೆ. ಅವರು ಓಡುವಾಗ ಒಂದು ದೊಡ್ಡ ಗೋಡೆ ಅಡ್ಡ ಬಂದಿದೆ. ಇಬ್ಬರು ಗೋಡೆ ಹಾರಿ ಓಡಿಹೋಗಿದ್ದಾರೆ. ಇನ್ನಿಬ್ಬರು ಮಚ್ಚು ತೆಗೆದುಕೊಂಡು ಪೋಲೀಸರನ್ನು ಅಟ್ಯಾಕ್ ಮಾಡಿದ್ದಾರೆ. ಪ್ರಾಣ ರಕ್ಷಣೆಗಾಗಿ ಪೋಲೀಸರು ಗುಂಡು ಹಾರಿಸಿದಾಗ, ಅವರಿಬ್ಬರು ಸತ್ತಿದ್ದಾರೆ,’ ಅಂತ ನಾಟಕೀಯವಾಗಿ ಹೇಳಿದರು.
ನಂಗ್ಯಾಕೋ ಸಮಾಧಾನವಾಗಲಿಲ್ಲ. ಇನ್ನೇನೋ ಕೇಳುವುದರೊಳಗೆ, ಕಮೀಷನ್ ರಿಂದ ಫೋನ್ ಬಂದು, ಸುರೇಶ್ ಬಾಬು ಅವರ ಕೋಣೆಗೆ ಹೊರಟರು. ನಾನು ಅವರ ಕೋಣೆಯಿಂದ ಹೊರಬಂದಾಗ, ನಾಯಕ್ ಕಂಟ್ರೋಲ್ ರೂಂ ಕಡೆ ಹೋಗುತ್ತಿರುವುದು ಕಂಡಿತು. ಸೀದ ಅವರ ಹತ್ತಿರ ಹೋದವನೆ ಕೇಳಿದೆ: `ರೀ ನಾಯಕ್, ಏನಾಗ್ತಾ ಇದೆ? ನಿಮ್ಮನ್ನ ಕೇಳಿದ್ರೆ, ಸುರೇಶ್ ಬಾಬು ಕೇಳಿ ಅಂತೀರಿ. ಅವರು ನೋಡಿದ್ರೆ ನನ್ನನ್ನೇ ತಮಾಶೆ ಮಾಡ್ತಾರೆ. ಏನಾಯ್ತ್ರೀ?’ ಅಂತ ಗೋಗರೆದೆ.
`ನೋಡು. ಈ ಗಂಧದವರ ಹಾವಳಿ ಜಾಸ್ತಿ ಆದ ಮೇಲೆ, ಕಮೀಷನರ್ ಆಯಾ ಸ್ಟೇಶನ್ ಇನ್ಸ್ ಪೆಕ್ಟರ್ ಗಳೇ ಹೊಣೆ ಅಂತ ಹೇಳಿದ್ರು. ಅದ್ರೂ ಒಂದೈದಾರು ಕಡೆ ಮತ್ತೆ ಗಂಧದ ಮರಗಳನ್ನ ಕಡಿದ್ರು. ಆಚೆ ಸಲ ರಿವ್ಯೂ ಮೀಟಿಂಗ್ ನಲ್ಲಿ ಕಮೀಷನರ್ ತುಂಬಾ ಕೂಗಾಡಿದರು. ಮತ್ತೇನಾದ್ರು ಗಂಧದ ಮರ ಹೋದ್ರೆ, ಆ ಸ್ಟೇಶನ್ ನಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಸಿಬ್ಬಂಧಿಗಳ ಹಳೇ ವಿಚಾರಣೆಗಳೇನಾದ್ರು ಇದ್ರೆ, ಅದನ್ನೂ ತೆಗೆಸಿ ಕ್ರಮ ಕೈಗೊಳ್ಳುತ್ತೇನೆ ಅಂದಿದ್ದರು. ಅಲ್ಲಿಂದ ಎಲ್ಲಾ ಇನ್ಸ್ ಪೆಕ್ಟರ್ ಗಳೂ ತುಂಬಾನೆ ಅಲರ್ಟ್ ಆಗಿದ್ದರು. ನೆನ್ನೆದೇ ನೋಡು, ನಾಲ್ಕು ಜನ ಬಂದಿದ್ದರು. ಇಬ್ಬರು ತಪ್ಪಿಸಿಕೊಂಡು ಹೋದರು. ಇನ್ನಿಬ್ಬರೂ ತಪ್ಪಿಸಿಕೊಂಡು ಹೋಗಿದ್ದರೆ, ಇಡೀ ಸ್ಟೇಶನ್ ಗೆ ಗ್ರಹಚಾರ ಕಾಡಿತ್ತು,’ ಅಂದರು.
`ಅದೂ ಜಯಪ್ರಕಾಶ್ ಎನ್ ಕೌಂಟರ್ ಮಾಡುವವರೆಗೂ ಹೋಯ್ತು,’ ಅಂತ ನಕ್ಕೆ.
`ಜಯಪ್ರಕಾಶ್ ಸಿಕ್ಕಿದ್ದರು. ನೋಡಿ ನಾಯಕ್, ಯಾರನ್ನೋ ಕೊಲ್ಲೋ ಪೋಲಿಸ್ ಕೆಲಸ ನನಗೆ ಬೇಕಿತ್ತಾ? ಅಂತ ಬೇಜಾರು ಮಾಡಿಕೊಂಡರು,’ ಅಂದರು ನಾಯಕ್.
ಬೇರೆ ಸಂಧರ್ಭದಲ್ಲಾಗಿದ್ದರೆ, ಎನ್ ಕೌಂಟರ್ ಆದ ಜಾಗಕ್ಕೆ ಹೋಗಿ, ಸರ್ವೆ ಮಾಡಿ, ಇನ್ಸ್ ಪೆಕ್ಟರ್ ಗೆ ತಲೆ ಚಿಟ್ಟು ಹಿಡಿಯುವಷ್ಟು ಪ್ರಶ್ನೆ ಕೇಳಿ ಬರುತ್ತಿದ್ದೆ. ಅಂಥ ಸಂದರ್ಭಗಳಲ್ಲಿ ಪ್ರೆಸ್ ಕಾನ್ಪರೆನ್ಸ್ ಗೆ ಹೋಗುತ್ತಿದ್ದದ್ದೇ ಅಪರೂಪ. ಅವತ್ತು ಮಾತ್ರ ನೇರವಾಗಿ ಪ್ರೆಸ್ ಕ್ಲಬ್ ಗೆ ಹೋಗಿ, ಪ್ರೆಸ್ ಕಾನ್ಪರೆನ್ಸ್ ಸಮಯಕ್ಕೆ ಸರಿಯಾಗಿ ವಾಪಾಸ್ ಬಂದೆ. ವರದಿ ಬರೆಯುವಾಗ ಕೂಡ, ಕಮೀಷನರ್ ಎಷ್ಟು ಹೇಳಿದರೋ, ಅಷ್ಟನ್ನು ಮಾತ್ರ ಬರೆದು ಕೈ ತೊಳೆದುಕೊಂಡೆ.

ಮಾಕೋನಹಳ್ಳಿ ವಿನಯ್ ಮಾಧವ್